ಗೌರ್ಮೆಂಟ್ ಬ್ರಾಹ್ಮಣ
by ಅರವಿಂದ ಮಾಲಗತ್ತಿ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!



ಗೌರ್ಮೆಂಟ್ ಬ್ರಾಹ್ಮಣ
(ಆತ್ಮ ಕಥನ)







ಅರವಿಂದ ಮಾಲಗತ್ತಿ








ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಭವನ, ಜೆ.ಸಿ. ರಸ್ತೆ

ಬೆಂಗಳೂರು - ೫೬೦೦೦೨

ಪರಿವಿಡಿ

ಶುಭ ಸಂದೇಶ
iii
ಚೆನ್ನುಡಿ
iv
ಎರಡು ನುಡಿ
v
ಅಧ್ಯಕ್ಷರ ಮಾತು
vi
ಪ್ರಕಾಶಕರ ಮಾತು
vii
ಆಯ್ಕೆ ಸಮಿತಿ
ix
ಮೊದಲ ಮುದ್ರಣ ಮಾತು
xiii







ಗೌರ್ಮೆಂಟ್ ಬ್ರಾಹ್ಮಣ

ಓದುವ ಮುನ್ನ ಓದುಗರೊಂದಿಗೆ

ನಾನು ಮೊದಲೇ ಸ್ಪಷ್ಟ ಮಾಡ ಬಯಸುವ ವಿಷಯವೆಂದರೆ ನನ್ನ ಆತ್ಮ ಕಥೆಯ ಕೆಲವು ಪುಟಗಳನ್ನು ನಿಮ್ಮ ಮುಂದಿಟ್ಟು ನಾನೊಬ್ಬ ಮಹಾತ್ಮ ಎಂದು ಕರೆಯಿಸಿಕೊಳ್ಳುವ ಭ್ರಮೆ ನನಗಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಹೀಗೆಂದ ಮಾತ್ರಕ್ಕೆ ಇಲ್ಲಿಯ ಅನುಭವಗಳೂ ಒಬ್ಬ ಸಾಮಾನ್ಯ ಮನುಷ್ಯನ ಅನುಭವಗಳೇ ಆಗಿವೆ ಎನ್ನುವ ಮಾತನ್ನು ಹೇಳಲಾರೆ. ಆದರೆ ಸಾಮಾನ್ಯ ದಲಿತನೊಬ್ಬನ ಅನುಭವಗಳಾಗಿವೆ ಎನ್ನುವುದನ್ನು ಹೇಳದಿರಲಾರ. ಒಬ್ಬ ದಲಿತನಿಗೆ ಇರಬಹುದಾದ ಎಲ್ಲ ಆಸೆ ಆಕಾಂಕ್ಷೆಗಳು, ಅರೆಕೊರೆಗಳು ನನ್ನಲ್ಲಿವೆ. ಹಾಗೆಯೇ ಒಬ್ಬ ಸಾಮಾನ್ಯ ಮನುಷ್ಯನಿಗೆ ಇರಬಹುದಾದವೂ ಕೂಡ ನನ್ನಲ್ಲಿವೆ. ಆದರೆ ಅಳೆದು ಹೇಳಲು ಯಾವ ಮಾನದಂಡವೂ ಸಾಲದು. ಹೀಗೇಂದು ಕೈ ಚೆಲ್ಲಿ ಕೂಡುವುದು ನನ್ನ ಉದ್ದೇಶವಲ್ಲ. ಆದ್ದರಿಂದ ನನ್ನ ಬದುಕನ್ನು ನಾನೇ ಓದಬಯಸುತ್ತೇನೆ ಮತ್ತು ಮೊದಲ ಓದುಗನೂ ನಾನೇ ಆಗಬಯಸುತ್ತೇನೆ.

ಬಿಳಿ ಬಟ್ಟೆಯನ್ನು ಹಾಕಿರುವ ಅರವಿಂದ ಮಾಲಗತ್ತಿಯನ್ನು ನೀವು ನೋಡಿರಬಹುದು. ಹೀಗೆ ನೋಡಿದವರಿಗೆ ಮತ್ತು ನೋಡುವವರಿಗೆ ಇಲ್ಲಿಯ ಬರವಣಿಗೆ ಆಶ್ಚರ್ಯ ಹುಟ್ಟಿಸಿದರೆ ತಪ್ಪೇನಿಲ್ಲ. ಕೆಲವರು ಹುಬ್ಬೇರಿಸಬಹುದು, ಹುಬ್ಬು, ಗಂಟಿಕ್ಕಬಹುದು. ಕೆಲವರು ಸಂದೇಹದ ಸುಳಿಯಲ್ಲೂ ಇರಬಹುದು. ಅದಕ್ಕೆ ನಿಮ್ಮೆದುರಿಗಿರುವ ಅರವಿಂದ ಮಾಲಗತ್ತಿಯೇ ಕಾರಣ ಎನ್ನುವುದನ್ನೂ ನಾನು ಬಲ್ಲೆ. ಆದರೆ ಆ ಬಾಲ್ಯದ "ಮಾಳಿ" (ನನ್ನ ಮನೆಯವರು ಮತ್ತು ನನ್ನ ಪಕ್ಕದ ಮನೆಯವರು ನನ್ನನ್ನು ರೇಗಿಸಲು ಬಳಸುವ ಹೆಸರು)ಯನ್ನು ನೀವು ನೋಡಿಲ್ಲ. ಮಾಳಿಯೊಂದಿಗೆ ಕಲಿತ ಕೆಲವು ಸ್ನೇಹಿತರೇ, ಈಗ ಅವನಿಂದ ದೂರ ನಿಂತು "ರೀ" ಎಂದು ಸಂಭೋದಿಸುತ್ತಾರೆ. ಅವನೆಷ್ಟೇ ಹತ್ತಿರ ಹೋಗಲು ಪ್ರಯತ್ನಿಸಿದರೂ, ಅವರು ಅವನನ್ನು ದೂರವಿಡುತ್ತಾರೆ. ಮೊದಲಿನ ಮಾಳಿಯನ್ನು ಮಾತನಾಡಿಸಿದಂತೆ ಅವರು ಮಾತನಾಡಿಸುವುದಿಲ್ಲ, ಛೇಡಿಸುವುದಿಲ್ಲ, ದೂರ ದೂರಕ್ಕೆ ಸರಿದು ನಿಲ್ಲುತ್ತಾರೆ. ಕಾರಣ, ಅವನೀಗ "ದೊಡ್ಡ ಮನುಷ್ಯ" ಎನ್ನುವ ಭ್ರಮೆ ಅವರಿಗೆ.

ನನ್ನೂರಿನಲ್ಲಿ, ನನ್ನ ಕೇರಿಯಲ್ಲಿ ಈಗ ನಾನೇ ಪರಕೀಯನಾಗಿ ಬಿಟ್ಟಿದ್ದೇನೆ. ಹಾಗೆಯೇ ನಗರದ ನಡುವೆ ಬದುಕುವ ಸ್ನೇಹಿತರ ಸಂಬಂಧ ಇದಕ್ಕಿಂತಲೂ ಭಿನ್ನವಾಗೇನಿಲ್ಲ, ಆಗ ಗ್ರಾಮೀಣ ವ್ಯವಸ್ಥೆಯ ಸ್ನೇಹಿತರ ಮತ್ತೊಂದು ಮುಖ. ಈ ನಗರದ ಪ್ರಜ್ಞಾವಂತ ಸ್ನೇಹಿತರ ನಡುವೆಯೂ ಅನಾಮಿಕನಾಗಿ ಬದುಕುವ ಬಗೆ ಬರುತ್ತದೆಂದು ನಾನಂದುಕೊಂಡಿರಲಿಲ್ಲ. ಈ ಮಾತುಗಳನ್ನು ಇಲ್ಲಿ ಹೇಳಿಕೊಳ್ಳಲು ಕಾರಣವಿಷ್ಟೇ: ಈ ಕೃತಿಯ ಕೆಲವು ಬಿಡಿ ಭಾಗಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ, ಓದಿ ಆಶ್ಚರ್ಯ ವ್ಯಕ್ತಪಡಿಸಿದವರೂ ಇದ್ದಾರೆ. ಕೆಲವು ಸ್ನೇಹಿತರು ಇದು ಸಾಧ್ಯವೇ? ಎಂದು ತಮ್ಮ ತಮಲ್ಲಿಯೇ ಚರ್ಚಿಸಿದ್ದಾರೆ! ಇಂಥ ವಿಚಾರಗಳು ಬಾಯಿಂದ ಬಾಯಿಗೆ ಹರಿದು ಬಂದು ನನ್ನ ಕಿವಿಗೆ ಬಿದ್ದಾಗ ಉತ್ತರವಾಗಿ ಮಂದಹಾಸದ ನಗೆಯನ್ನು ನಕ್ಕಿದ್ದೇನೆ, ಜೊತೆಗೆ ಆಶ್ಚರ್ಯವೂ ಪಟ್ಟಿದ್ದೇನೆ. ಏಕೆಂದರೆ, ಬಿಳಿ ಬಟ್ಟೆಯವನಾಗಿ ಹಳೆಯ ಸ್ನೇಹಿತರಲ್ಲಿ ಹೋದರೆ ಅವರು ಮೊದಲಿನಂತೆ ಯಥಾವತ್ತಾಗಿ ಸ್ವೀಕರಿಸುವುದಿಲ್ಲ. ಬಿಳಿ ಬಟ್ಟೆಯ ಸ್ನೇಹಿತರಲ್ಲಿ ನನ್ನ "ಮಾಳಿತನ"ದ ಬಗ್ಗೆ ಪ್ರಸ್ತಾಪ ಮಾಡಿದರೆ ಅವರೇನೋ ಅಚ್ಚರಿಯ ಸಂಗತಿಯಂತೆ ನೋಡುತ್ತಾರೆ. ಈ ವೈಪರೀತ್ಯ ನನ್ನನ್ನೇ ಅಣಕಿಸುತ್ತದೆ. ಇಂಥ ವಿಚಾರಗಳ ಅಲೆ ಎದ್ದಾಗ ನೋವಿನಲ್ಲಿಯೂ ಫಕ್ಕನೆ ನಕ್ಕು ಬಿಡುತ್ತೇನೆ.

"ಈ ಅಸಲಿ ಅನುಭವಗಳನ್ನು ದಯಮಾಡಿ ನಂಬಿ" ಎಂದು ಹೇಳಿಕೊಂಡು, ಯಾರನ್ನೂ ನಾನು ನಂಬಿಸಲು ಹೊರಟಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. "ದಲಿತರ ಬರವಣಿಗೆಯಲ್ಲಿ ದಲಿತ ಕಾಣೆಯಾಗಿದ್ದಾನೆ' ಎಂದು ಹೇಳಲಾಗುತ್ತಿದೆ. ಯಾವುದೇ ವಿಷಯಕ್ಕಾಗಲಿ, ಚಿಂತನದ ಅಥವಾ ಸಂಪೂರ್ಣ ಸಾಹಿತ್ಯಿಕ ಲೇಪನ ದೊರೆತಾಗ, ಅನುಭವ ತನ್ನ ಮೂಲದ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಆಶಯದಲ್ಲಿಯೂ ಬದಲಾವಣೆಗಳು ಬಂದು ಬಿಡುತ್ತವೆ. ಅನುಭವಗಳನ್ನು ನೇರವಾಗಿ ಹೇಳಿಕೊಳ್ಳುವುದರಿಂದ ದಲಿತ "ದಲಿತತನ"ವನ್ನು ಸರಳವಾಗಿ ಹಿಡಿದಿಡಬಹುದು ಎನ್ನುವ ಅರಿವು ಖಚಿತತೆಗೆ ತಂದಾಗ, ಈ ಮಾರ್ಗವನ್ನು ಹಿಡಿದಿದ್ದೇನೆ. ಈ ಶೈಲಿಯಲ್ಲಿ ನಾನು ಬರವಣಿಗೆ ಆರಂಭಿಸುತ್ತಿದ್ದಂತೆ ಎದುರಿಸಿದ ಪ್ರಶ್ನೆಗಳು ಹಲವು.

ಆತ್ಮ ಕಥೆ ಬರೆಯುವುದು ನನ್ನ ಚಿಕ್ಕ ವಯಸ್ಸಿಗೆ ಬೇಕೇ? ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ. ಏಕೆಂದರೆ, ಕನ್ನಡ ಸಾಹಿತ್ಯದಲ್ಲಿ ಆತ್ಮಕಥೆಯನ್ನು ಬರೆಯುವುದು ಸಾಮಾನ್ಯವಾಗಿ, ಕೂದಲು ನೆರೆತು ತಲೆ ಅಲುಗಾಡುವಾಗ. ಅನುಭವಗಳನ್ನು ಹೇಳಿಕೊಳ್ಳಬೇಕಾದರೆ ಕೂದಲು ನೆರೆಯುವವರೆಗೆ ಕಾಯಬೇಕೆ? ಕಾಯುವುದಾದರೆ ಯಾವ ಕಾರಣಕ್ಕಾಗಿ? ಇನ್ನಷ್ಟು ಅನುಭವಗಳು ಸಂಗ್ರಹವಾಗಲಿ ಎಂದೆ? ಅಥವಾ ಅಪಕ್ವ ವಯಸ್ಸು ಎಂದು ನಿರಾಕರಿಸುವುದೇ? ಇಲ್ಲವೇ ಎಲ್ಲವೂ ಏಕಕಾಲಕ್ಕೆ ಬರೆಯಬಹುದು ಎನ್ನುವ ವಿಚಾರವೇ? ಇಂಥ ಹಲವಾರು ಪ್ರಶ್ನೆಗಳು ನನ್ನೆದುರು ಕುಣಿದಿವೆ. ಅನುಭವಗಳನ್ನು ಹೇಳಿಕೊಳ್ಳಲು ಕೂದಲು ನೆರಯಬೇಕಾಗಿಲ್ಲ, ಮುಖದ ಮೇಲೆ ಎಷ್ಟು ಗೆರೆಗಳು ಮೂಡಿರುತ್ತವೆಯೋ ಅಷ್ಟು ಅನುಭವಗಳು ಮಾಗಿರುತ್ತವೆ ಎನ್ನುವುದೇನೋ ನಿಜ. ಹೀಗೆಂದ ಮಾತ್ರಕ್ಕೆ ಜವ್ವನಿಗರ ಮುಖದ ಮೇಲೆ ಗೆರೆಗಳೇ ಇಲ್ಲ, ಅವರ ಅನುಭವಗಳು ಅನುಭವಗಳೇ ಅಲ್ಲ ಎನ್ನುವ ವಿಚಾರವೂ ಸಲ್ಲ. ನಾವು ಇಂಥ ಮನೋಭಾವನೆಯಿಂದ ಹೊರಬರುವ ಆವಶ್ಯಕತೆಯೂ ಇದೆ. ಹೀಗಾಗಿಯೇ ಅನುಭವಗಳನ್ನು ಹೇಳಿಕೊಳ್ಳಲು ಕೂದಲು ನೆರೆಯಬೇಕಾಗಿಲ್ಲ, ಬಾಯೊಳಗಿನ ಹಲ್ಲುಗಳು ಉದುರಬೇಕಾಗಿಲ್ಲ. ಬದುಕಿನ ವಾಸ್ತವದ ಸಂಗತಿಗಳನ್ನು ಯಥಾವತ್ತಾಗಿ ಕೊಡುವುದೆಂದರೆ, ಬದುಕಿರುವಾಗಲೇ ಜನತೆಯ ಬಾಯಿಗೆ ಎಲೆ- ಅಡಿಕೆಯಾಗುವುದು ಎಂದರ್ಥ. ಆದರೆ ಹಿರಿಯರು ತಮ್ಮ ಆತ್ಮಕಥೆಯನ್ನು ತಮ್ಮ ಆತ್ಮತೃಪ್ತಿಗಾಗಿ ಬರೆದುಕೊಂಡದ್ದೇ ಹೆಚ್ಚು. ಆದರೆ, ಇಲ್ಲಿಯ ಆಶಯ ಅದನ್ನು ಹೊರತುಪಡಿಸಿ ಬಂದಿದೆ ಎನ್ನುವುದನ್ನು ಓದಿದವರಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುವೆ.

ನಮ್ಮದು ಅವಿಭಕ್ತ ಕುಟುಂಬ. ನಾಲ್ಕು ತಲೆಮಾರಿನವರು ಈಗಲೂ ಒಟ್ಟಿಗೆ ಬದುಕುತ್ತಿದ್ದೇವೆ! ಭೂಮಿ ಇದೆ. ಮನೆ ಇದೆ. ನಾನೇನು ತೀರ ನಿಕೃಷ್ಟ ಮಟ್ಟದ, ಹೇಳಿಕೊಳ್ಳಲಿಕ್ಕೂ ಆಗದ ರೀತಿಯಲ್ಲಿ ಜೀವನವನ್ನು ಕಳೆದಿದ್ದೇನೆ ಎಂದು ಹೇಳಲಾರೆ. "ಹೊಟ್ಟೆ ಬಟ್ಟೆ ಕಟ್ಟಿದರ ಏನರ ಗಳಸಾಕ ಆಕೃತಿ ಇಲ್ಲಾಂದ್ರ ತಲಿಮ್ಯಾಲಿ ಚಾಪಿ ಹಾಕ್ಕೊಂಡು ಹೋಗುದ" ಎನ್ನುವ ನನ್ನಜ್ಜಿಯ ತಾತ್ವಿಕ ಧೋರಣೆಯಂತೆ ಮನೆಯವರು ಹೊಲ- ಮನೆ ಮಾಡಿದ್ದಾರೆ. ನಮ್ಮ ಅವಿಭಕ್ತ ಕುಟುಂಬದ ಈ ಆಸ್ತಿಯನ್ನು ಒಡೆದು ಹಂಚಿದರೆ ಒಬ್ಬೊಬ್ಬರಿಗೆ ಅಂಗೈ ಊರುವಷ್ಟು ನೆಲ ಸಿಕ್ಕುವುದಿಲ್ಲ! "ನಿನಗೆ ಇಂತಹದೆಲ್ಲ ಹೇಳಿಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೆ?" ಎಂದು ಪ್ರಶ್ನಿಸಿದವರೂ ಇದ್ದಾರೆ. ಅಷ್ಟೇ ಏಕೆ ಸ್ವತಃ ನಮ್ಮ ತಂದೆ (ಚಿಕ್ಕಪ್ಪ), ನಾನು ಬರೆದ 'ಕಾರ್ಯ' ಕಾದಂಬರಿ ವಸ್ತು ವಿಸ್ತಾರ ತಿಳಿದ ನಂತರ "ನೀನು ನಮ್ಮ ಹೆಂಗೃರು ಕುಡಿತಾರ, ನಮ್ಮಲ್ಲಿ ಹಂಗ ಮಾಡ್ತಾರ, ಹೀಂಗ ಮಾಡ್ತಾರಂತ ಯಾಕ ಬರೀಬೇಕು? ಹಂಗ ಬರೊದರಿಂದ ನಮ್ಮ ಮಾನ ಮರ್ಯಾದಿ ನಾವ ಕಳಕೊಂಡಂಗ ಆಗಂಗಿಲ್ಲೇನು? ನಾವು ಎಂಥ ದೊಡ್ಡ ಮನಸೇ ಜೋಡಿ ಕುಂದ್ರತೀವಿ, ನಿಂದ್ರತೀವಿ, ನಮ್ಮ ಕೀರ್ತಿ ಎಂಥಾದ್ದು? ಅನ್ನೋದು ಬರೀಬೇಕು. ಎಲ್ಲಾ ಬಿಟ್ಟು ಕೆಲ್ಸಕ್ಕೆ ಬಾರ ಬರೀತಿ" ಎಂದು ಪ್ರಶ್ನಿಸಿ "ಕ್ಲಾಸ್ ತೆಗೆದುಕೊಂಡದ್ದು ಇದೆ. ಆ ಸಂದರ್ಭದಲ್ಲಿ ನಾನು ಯಾವುದನ್ನೂ ಮಾತನಾಡಲಿಲ್ಲ, ಮೌನವಾಗಿದ್ದೆ. ಆದರೆ ಅವರು ಹೇಳುವ ಮಾತಿನಲ್ಲಿ ಅರ್ಥವಿತ್ತು. ಹೀಗಾಗಿ ಅದನ್ನು ತೆಗೆದು ಹಾಕುವ ಮನಸೂ ಇರಲಿಲ್ಲ. ಅವರ ವಿಚಾರಗಳು ಸಾಂಪ್ರದಾಯಿಕ ಎನಿಸಿದರೂ ಸಾಂಪ್ರದಾಯಿಕವಾದ ಎಲ್ಲ ವಿಚಾರಗಳನ್ನೂ ದೂರಲಾಗುವುದಿಲ್ಲ. ನಾಲ್ಕು ತಲೆಮಾರಿನ ಅವಿಭಕ್ತ ಕುಟುಂಬ ಅಖಂಡವಾಗಿ ಈವರೆಗೆ ನಡೆದುಬರಬೇಕಾಗಿದ್ದರೆ ನಮ್ಮ ಚಿಕ್ಕಪ್ಪನೇ ಕಾರಣ. ಅವಿಭಕ್ತ ಕುಟುಂಬಕ್ಕಾಗಿ ತನ್ನನ್ನು ತಾನು ಸವೆಸಿಕೊಂಡ ವ್ಯಕ್ತಿ, ಚೇಳು ಕಡಿಸಿಕೊಂಡು ನನ್ನ ತಂದೆ ಮರಣ ಹೊಂದಿದ ನಂತರ ನಮ್ಮನ್ನೆಲ್ಲ ಓದಿಸಿ ನೆಲೆ ನಿಲ್ಲುವಂತೆ ಮಾಡಿದವರು ಚಿಕ್ಕಪ್ಪನಾದರೂ, ನಾವು "ಅಪ್ಪಾ" ಎಂದೇ ಕರೆಯುತ್ತಿದ್ದೇವೆ. ನಾವು ಅಣ್ಣನ ಮಕ್ಕಳಾಗಿದ್ದಾಗಲೂ ಭಾವನಾತ್ಮಕ ಕರುಳ ಸಂಬಂಧದಿಂದ ನಾವು ತಂದೆಯನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನೇ ಮರೆಸಿದವರು. ಇಂಥ ವಲಯದಲ್ಲಿರುವ ಅವರು, ಅಂದು ಹೇಳಿದ ಮಾತುಗಳು ಕಾದಂಬರಿಯ ಕುರಿತಾದವು. ಈಗ ನೇರವಾಗಿ ಈ ಕೃತಿಯಲ್ಲಿ ಅನುಭವಗಳನ್ನೇ ತೋಡಿಕೊಳ್ಳುತ್ತಿದ್ದೇನೆ. ಆಡಿಕೊಳ್ಳುವವರ ಬಾಯಿಗೆ ಎಲೆ- ಅಡಿಕೆಯಾಗುತ್ತೇನೆ ಎನ್ನುವ ಅರಿವಿದ್ದು ಬರೆದಿರುವುದರಿಂದ, ಸ್ನೇಹಿತರು ಇಂಥ ವಿಷಯದ ಬಗ್ಗೆ ಕೇಳಿದಾಗೆಲ್ಲಾ "ಇಂಥದ್ದನ್ನು ಹೇಳಿಕೊಳ್ಳುವುದಕ್ಕೂ ಗಂಡೆದೆ ಬೇಕು" ಎಂದು ಉತ್ತರಿಸಿದ್ದೇನೆ.

"ಡಾ. ಮಾಲಗತ್ತಿಯವರಿಗೆ ಈಗ ಯಾರು ದಲಿತ ಅಂತ ಕರೀಬೇಕು? "ಎಂದು ನೆರೆದ ಸಭೆಯಲ್ಲಿಯೇ ಪ್ರಶ್ನೆ ಎತ್ತಿ ಚರ್ಚಿಸಿದವರೂ ಇದ್ದಾರೆ. ಅವರ ಚರ್ಚೆಯನ್ನು ಕೇಳಿ ನಾನು ಒಳಗೊಳಗೆ ಸಂತೋಷಪಟ್ಟಿದ್ದೇನೆ. ಏಕೆಂದರೆ, ಇಂಥಾ ಪ್ರಶ್ನೆಗಳು ಏಳಬೇಕು ಎನ್ನುವಂತೆ ನನ್ನ ಇರುವಿಕೆಯನ್ನು ನಾನು ರೂಢಿಸಿಕೊಂಡಿದ್ದೇನೆ. ಒಂದು ಕಾಲ ಘಟ್ಟದಲ್ಲಿ "ನಾನು ಮಾರ್ಕ್ಸ್‌ವಾದ ಓದಿದ್ದೇನೆ" ಎಂದು ತಿಳಿಸಲು ಕೊರಚಲು ಗಡ್ಡ, ಖಾದಿ ಜುಬ್ಬ ಹಾಕಿಕೊಂಡು ಸದಾ ಮಾರ್ಕ್ಸ್‌ವಾದದ ಪುಸ್ತಕಗಳನ್ನು ಬ್ಯಾಗಿನಲ್ಲಿ ಸೇರಿಸಿಕೊಂಡು ಬಗಲಿಗೆ ಚೀಲ ಜೋತಾಡಿಸುತ್ತ ತಿರುಗುತ್ತಿದ್ದೆ. ಇಂಥ ಸಂದರ್ಭದಲ್ಲಿ "ಸೊಂಟದ ಕೆಳಗಿನ ಜನಕ್ಕೆ ಏನು ಸೌಲತ್ತು ಕೊಟ್ಟೂ ಏನಿದೆ? ತಮ್ಮದನ್ನ ಬಿಡೋದಿಲ್ಲ" ಎಂದು ಹಂಗಿಸಿದ ಮಾತುಗಳು ನನ್ನ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದಂತೆ ಗಡಚಿಕ್ಕಿವೆ. ಎದೆಯಲ್ಲಿ ಮುಳ್ಳು ಮುರಿದಂತೆ ಉಳಿದುಬಿಟ್ಟಿವೆ. ಕಾಲೇಜಿನ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ "ಕಾಲಾಗ ಹಾಕ್ಕೊಳ್ಳಾಕ ಸರಿಯಾಗಿ ಚಪ್ಪಲಿ ಇಲ್ಲ ಜನರಲ್ ಸೆಕ್ರೇಟ್ರಿ ಆಗ್ತಾನಂತೆ" ಎಂದು ಅವಮಾನಿಸಿದ ಪ್ರಸಂಗಗಳು ಸ್ವಾಭಿಮಾನವನ್ನು ಕೆದಕಿವೆ. ಇಂಥ ಹಲವಾರು ಸಂದರ್ಭಗಳು, ಈಗ ನಾನೇನಿದ್ದರೂ ಅವು ನನ್ನ ಇರುವಿಕೆಯನ್ನು ರೂಪಿಸಿವೆ. ಅವಕಾಶ ಸಿಕ್ಕರೆ "ಒಬ್ಬ ದಲಿತನೂ ಹಂಗಿಸುವವರ ಎದೆಯ ಮೇಲೆ ಮೆಟ್ಟಿದಂತೆ ಬದುಕಬಲ್ಲ" ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿ ನನ್ನ ಹಲವಾರು ವೈಯಕ್ತಿಕ ಆಸೆಗಳನ್ನು ಹತ್ತಿಕ್ಕಿ ನನ್ನ ಇರುವಿಕೆಯನ್ನು ಕರಗತ ಮಾಡಿಕೊಂಡಿದ್ದೇನೆ. ವಿಚಾರ ಸಂಕಿರಣದಲ್ಲಿ ಇಂಥ ಪ್ರಶ್ನೆಗಳು ಎದ್ದಾಗ ನಾನು "ಗೆದ್ದ ನಗೆ"ಯನ್ನು ನಕ್ಕಿದ್ದೇನೆ.

ದೇವನೂರು ಮಹಾದೇವ, ಸಿದ್ಧಲಿಂಗಯ್ಯನವರ ಕಡೆಗೆ ಬೆರಳು ಮಾಡಿ ತೋರಿಸುತ್ತ- ನಿಮ್ಮಾಕೆ ಅವರ ಹಾಗೆ ಇರಬಾರದು? ಎಂದು ತೊಡುವ ಬಟ್ಟೆಗಳನ್ನ ಗಮನದಲ್ಲಿಟ್ಟುಕೊಂಡು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೂ ಮೇಲೆ ಹೇಳಿದ ಉತ್ತರವೇ ಅನ್ವಯವಾಗುತ್ತದೆ. ಒಬ್ಬೊಬ್ಬರ ಅನುಭವಗಳೂ ವಿಶಿಷ್ಟವಾದವು. ತಮ್ಮ ತಮ್ಮ ಅನುಭವಗಳ ಹಿನ್ನಲೆಯಲ್ಲಿ ಬದುಕಿನ ಮಾರ್ಗವನ್ನು ರೂಪಿಸಿಕೊಳ್ಳುತ್ತಾರೆ. ಹಾಗೆಯೇ ನನ್ನದೂ ಕೂಡ ಅವರ ಪ್ರಶ್ನೆ ಕೇವಲ ಪ್ರಶ್ನೆಯಾಗಿ ಹೊರಬಂದಿದ್ದರೆ ದುಡುಕಿನ ಮಾತಿಗೆ ಅವಕಾಶವೇ ಇರುವುದಿಲ್ಲ. ಆದರೆ ವ್ಯಂಗ್ಯ ನಗೆ ಮತ್ತು ವಕ್ರ ನೋಟದೊಂದಿಗೆ ಪ್ರಶ್ನೆ ಎದುರಾದಾಗ ನಾನೂ ಅಷ್ಟೇ ನಿಷ್ಟುರವಾಗಿ ಅವರಿಗೆ ಮರುಪ್ರಶ್ನೆ ಹಾಕಿದ್ದೇನೆ. "ನಿವ್ಯಾಕ್ರಿ ಹಾಗಿಲ್ಲ? ಅವರ ಹಾಗೆ ನೀವೂ ಇರಬಹುದಲ್ಲ..... ಇವತ್ತು ಹೀಂಗ ಕೇಳ್ಳಿರಿ, ನಾಳೆ ಗಾಂಧೀಜಿಯ್ಯಂಗ ನೀವು ಯಾಕ ಒಂದು ಲಂಗಟಾ ಹಾಕ್ಕೊಂಡು ಇರಬಾರದು? ಅಂಥ ಕೇಳವ್ರು ನೀವು. ನನಗ ಲಂಗಟಾ ಹಾಕ್ಕೊಂಡು 'ಮಹಾತ್ಮ' ಅನಿಸಿಕೊಳ್ಳೋ ಹಂಬಲ ಇಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಇರಬೇಕಾದ ಗುಣಾಯಲ್ಲಾ ನನ್ನಲದಾವು ಅಂತ ತಿಳಕೊಳ್ಳಿ. ಆದರೆ ಉಪದೇಶ ಮಾಡೋದು ಬೇಡ' ಎಂದಾಗ, ಉಗುಳು ನುಂಗಿದವರು ಮತ್ತೆ ಕೆದಕುವ ಗೊಡವೆಗೆ ಬಂದಿಲ್ಲ. ಬೆನ್ನ ಹಿಂದೆ ಧಾರಾಳವಾಗಿ ಮಾತನಾಡಿಕೊಳ್ಳುತ್ತಿರಬಹುದು.

ಬಾಲ್ಯದಲ್ಲಿ ಒಡನಾಡಿಯಾಗಿ ಮಾಗದರ್ಶಕಿಯಾಗಿ, ರಕ್ಷಕಳಾಗಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ, ನಮ್ಮ ಸಹೋದರರೊಂದಿಗೆ "ಆಯಿ" (ಅಜ್ಜಿ)ಯೇ ಬಂದಿದ್ದಾಳೆ. "ಅವಳಿಲ್ಲದಿದ್ದರೆ ನಮ್ಮ ಬಾಲ್ಯದ ದಿನಗಳಿಗೆ ಅಸ್ತಿತ್ವವೇ ಇಲ್ಲ' ಎನ್ನುವಂತೆ ಬಾಲ್ಯದ ಬದುಕಿನಲ್ಲಿ ಹಾಸು ಹೊಕ್ಕಿದ್ದಾಳೆ ನಮಗೆ ಉಣಿಸುವ ತಿನಿಸುವ ಬೆಳೆಸುವ ಎಲ್ಲ ಹೊಣೆಗಾರಿಕೆಯಲ್ಲೂ, ತಂದೆ ತಾಯಿಗಳಿಗಿಂತ ಅಯಿಯ ಸ್ಥಾನ ಹಿರಿದು. ನಾನು ಉದ್ಯೋಗಕ್ಕೆ ಸೇರಿದಾಗಲೂ ಅವಳ ತೊಡೆಗಳನ್ನು ತಲೆದಿಂಬಾಗಿಸಿಕೊಂಡು ಮಲಗಿ, ಅವಳ ಅನುಭವಗಳನ್ನು ಕೆದಕಿ ಕೆದಕಿ ಕೇಳಿದ್ದೇನೆ. ಮುದುಕಿಯಾದರೂ ಹೆಣ್ಣನದ ಸಹಜ ಸ್ವಭಾವ ಮರೆಯದೆ ಒಮ್ಮೆ ನಾಚುತ್ತ, ಮತ್ತೊಮ್ಮೆ ಸಿಡುಕಿನಿಂದ, ಇನ್ನೊಮ್ಮೆ ಅಷ್ಟೇ ಸಿಟ್ಟಿನಿಂದ ಅನುಭವದ ಸವಿಯೊಂದಿಗೆ ಬೆರೆತು ಹೇಳುತ್ತ, ನನ್ನನ್ನೂ ಮೂಗನಾಗಿಸಿ ಬಿಡುತ್ತಿದ್ದಳು. ಅವಳ ಬಹುಮುಖ ವ್ಯಕ್ತಿತ್ವ, ನನ್ನನ್ನು ಚಿಂದಿಯಾಗಿಸಿದೆ. ಅವಳನ್ನು ಕಂಡಾಗಲೆಲ್ಲ ಅವಳ ಮೇಲಿದ್ದ ಗೌರವ ಇಮ್ಮಡಿಯಾಗುತ್ತಿತ್ತು. ಅವಳನ್ನು ನಾನು ಕಳೆದುಕೊಳ್ಳುತ್ತೇನೆ" ಎನ್ನುವ ದಿನಗಳು ಬರುವ ಮುನ್ನವೇ ಅವಳನ್ನು ಕಳೆದುಕೊಂಡಿದ್ದು ನನಗೆ ತುಂಬಲಾರದ ನಷ್ಟವೆನಿಸಿತು. ಏನೆಲ್ಲ ಕೇಳಬೇಕೆಂದಿದ್ದೆ, ಹೇಳಬೇಕೆಂದಿದ್ದೆ, ಅವೆಲ್ಲ ಒಗಟಾಗಿಯೇ, ನನ್ನ ಮತ್ತು ಅವಳ ಎದೆಯಲ್ಲಿಯೇ ಉಳಿದುಬಿಟ್ಟವು. ಅವಳ ಕಠೋರವಾದ ಅನುಭವಗಳ ಎದುರಿಗೆ ನಾನು ಹೇಳ ಹೆಸರಿಲ್ಲದ ತರಗಲೆಯಾಗಿ ಹಾರಿ ಹೋಗುವವ. "ನನಗೆ ನಾಚಿಪ್ಪತ್ತ ವರ ಆಯ್ತು, ಇನ್ನಾ ಇಪ್ಪತ್ತ ವರ ಬದರೀನಿ' ಎಂದು ಹೇಳುತ್ತಿದ್ದಳು. ಆದರೆ ಗಕ್ಕನೆ ಮಾಯವಾದಳು. ಅವಳ ಆತ್ಮಕತೆಯಲ್ಲಿ ನಾನೊಂದು ಪಾತ್ರವಾಗಿದ್ದುಕೊಂಡು ಬರೆಯಬೇಕೆಂದಿದ್ದೆ. ಆದರೆ ಈಗ ನನ್ನ ಅನುಭವದ ಕಥನದಲ್ಲಿ ಅವಳೊಂದು ಪಾತ್ರವಾಗಿ ಬಂದಿದ್ದಾಳೆ ಎಂದು ಹೇಳಲು ಸಂಕಟವೆನಿಸುತ್ತದೆ.

ಹೆಣದ ಮೇಲಿನ ದುಡ್ಡು ಮತ್ತು ಮದುವೆಯ ಊಟ

ನಮ್ಮೂರಲ್ಲಿ ಶ್ರೀಮಂತಿಕೆಗೆ ಹೆಸರಾದ ಮನೆತನಗಳೆಂದರೆ ಒಂದು ಶೇಠಜಿ, ಎರಡು ಮರಾಠಿಗರದು, ಮೂರನೆಯದು ವೀರಶೈವರ ಮನೆತನ. ಶೇಠಜಿಯವರ ಮನೆಗಳ ಕೆಲಸದಲ್ಲೆಲ್ಲ ಸಾಮಾನ್ಯ ವೀರಶೈವರದೇ ಕಾರುಬಾರು. ಮರಾಠಿಗರ ಮನೆಗಳಲ್ಲಿ ಇಸ್ಸಾಮಿಯರದೇ ಕಾರುಬಾರು. ಈ ಮೂರು ಮನೆತನಗಳಲ್ಲಿ, ಅವರವರ ನಡುವೆಯೇ ಸ್ಪರ್ಧೆ ಇತ್ತೆಂದು ತೋರುತ್ತದೆ. ದೇಣಿಗೆ ಕೊಡುವಲ್ಲಿ, ಮನೆ ಕಟ್ಟಿಸುವಲ್ಲಿ ಇದು ನಮಗೆ ಎದ್ದು ಕಾಣುತ್ತಿತ್ತು. ಇದಕ್ಕಿಂತ ಅವರು ನಮಗೆ ಶ್ರೀಮಂತರಾಗಿ ಕಾಣುವುದು ಅವರ ಮನೆಯಲ್ಲಿ ಯಾರಾದರೂ ಸತ್ತರೆ ಇಲ್ಲವೇ ಯಾರಾದರೂ ಹುಟ್ಟಿದರೆ, ಬೇರೆ ಮನೆತನಗಳೂ ಇವರಂತೆ ಸಂಪ್ರದಾಯ ಉಳ್ಳವರಾಗಿದ್ದರೂ ಅವರ ಹಾಗೆ ಎದ್ದು ಕಾಣುತ್ತಿರಲಿಲ್ಲ. ಹೀಗಿದ್ದಾಗ ಊರಲ್ಲಿ ಯಾರು ಸತ್ತರೂ ನಮಗೆ ಸಂತೋಷವೇ ಆಗುತ್ತಿತ್ತು.

ಆವತ್ತು ವೀರಶೈವರ ಮನೆಯಲ್ಲಿ ಯಾರೋ ಸತ್ತಿದ್ದರು. ಹೆಣ ಬ್ಯಾಂಡ್ ಬಾಜಾದೊಂದಿಗೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಹಣದ ಮೇಲೆ ಹಣ ತೂರುವುದೊಂದು ಸಂಪ್ರದಾಯ. ಅದು ಅವರಿಗೆ ಪ್ರತಿಷ್ಠೆಯ ಹೆಗ್ಗುರುತು ಆಗಿರಬೇಕು. ಯಾರ ಮನೆಯಲ್ಲಿ ಸತ್ತಿದ್ದಾರೆ, ಯಾರು ಸಂಪ್ರದಾಯವನ್ನು ಪಾಲಿಸುತ್ತಾರೆ ಎನ್ನುವುದನ್ನು ನನ್ನಜ್ಜಿ ಯಾವ ಮೂಲಗಳಿಂದ ತಿಳಿದುಕೊಳ್ಳುತ್ತಿದ್ದಳೋ ನಾನರಿಯೆ. ಇಂಥ ಆದಾಯ ಬರುವ ಮೂಲಗಳನ್ನು ನಮಗೆ ಹುಡುಕಿಕೊಡುತ್ತಿದ್ದಳು. ಹಣ ತೆಗೆದುಕೊಂಡು ಹೋಗುವಾಗ ಅವರು ನಮ್ಮನ್ನು ಅಷ್ಟೇ ಜಾಗರೂಕತೆಯಿಂದ ಗಮನಿಸುತ್ತಿದ್ದರೆಂದು ತೋರುತ್ತದೆ. ನಾವು ಬಂದಿರುವುದನ್ನು ಖಚಿತ ಪಡಿಸಿಕೊಂಡೇ ಹೆಣವನ್ನು ಮೇಲಕ್ಕೆ ಎತ್ತುತ್ತಿದ್ದರು. ಹೆಣದ ಮೇಲೆ ಅವರು ತೂರಿರುವ ಹಣ ನೆಲಕ್ಕೆ ಬಿದ್ದ ಮೇಲೆ ಕಚ್ಚಾಡಿ ಎತ್ತಿಕೊಳ್ಳುವುದು ದಲಿತರ ಕೆಲಸ. ದಲಿತರು ಇರದೆ ಹೋದರೆ ಅವರು ತೂರುವ ಹಣಕ್ಕೆ ಬೆಲೆಯಾದರೂ ಏನು? ಅವರು ಹಣ ತೂರಬೇಕು, ತೂರಿದ ಹಣ ಉರುಳುತ್ತ (ಹಾಸುಗಲ್ಲಿನ ರಸ್ತೆ ಇದ್ದಾಗ), ಹೆಣ ಹೊತ್ತವರ ಕಾಲಲ್ಲಿ, ಹಿಂದೆ ಅಳುತ್ತ ಬರುವವರ ಕಾಲಲ್ಲಿ ಹೋಗಬೇಕು. ಅವರು ಅದನ್ನು ದಾಟಿ ಪಾಪ ಕಳೆದುಕೊಳ್ಳಬೇಕು. ಅವರೆಲ್ಲ ತುಳಿದು ಹೋದ ಮೇಲೆ ನಾವು ಅದನ್ನು ಎತ್ತಿಕೊಳ್ಳಬೇಕು.

ವಯಸ್ಸಾದ ನಮ್ಮ ಜನ ಅವರಲ್ಲ ದಾಟಿ ಹೋಗುವುದೇ ತಡ, ಸ್ಪರ್ಧೆಗಿಳಿದು ಆ ಪುಡಿಗಾಸನ್ನು ಆಯ್ದು ಕೊಳ್ಳುತ್ತಿದ್ದರು. ಚಿಕ್ಕವರಾದ ನಾವು ಅವರ ನಿಯಮಗಳನ್ನು ಮುರಿದು, ನಮ್ಮ ಹಿರಿಯರಿಗಿಂತ ಮುಂದೆ ಹೋಗಿ ತೂರಿದ ಹಣ ನೆಲಕ್ಕೆ ಬೀಳುವುದಕ್ಕಿಂತ ಮುಂಚಿತವಾಗಿಯೇ ಹಿಡಿಯಲು ಪ್ರಯತ್ನಿಸಿ ಸೋಲುತ್ತಿದ್ದೆವು. ಕಾಸು ನೆಲಕ್ಕೆ ಬಿದ್ದಾಗ ಅವರು ದಾಟುವ ಮುನ್ನವೇ ಅವರ ಕಾಲಲ್ಲಿ ಹೋಗಿ ಆ ನಾಣ್ಯವನ್ನು ಎತ್ತಿಕೊಳ್ಳುತ್ತಿದ್ದೆವು.

ಸತ್ತವರ ಮನೆಗೆ ಸಂಬಂಧಪಟ್ಟವರಲ್ಲವೇ ಅವರು? ಅವರ ಮುಖ ತುಂಬ ಗಂಭೀರವಾಗಿರುತ್ತಿತ್ತು. ಅವರಿಗೆ ನಮ್ಮನ್ನು ಬೆದರಿಸಲು ಸ್ವಾತಂತ್ರ್ಯವಿರಲಿಲ್ಲವೆಂದು ತೋರುತ್ತದೆ. ಹಾಗಾಗಿ ನಾವೇ ಎಷ್ಟೋ ಬಾರಿ ಅವರ ಗಂಟು ಮುಖಕ್ಕೆ ಹೆದರಿ ಹಿಂದಕ್ಕೆ ಸರಿಯುತ್ತಿದ್ದೆವು. ಸಿಗದ ನಾಣ್ಯಕ್ಕೆ ಕೈ ಮುಗುಚುತ್ತಿದ್ದೆವು. ಅವರ ಕೆಂಗಣ್ಣು ಕಂಡಾಗ ದೇಶಾವರಿ ನಗೆ ಬೀರಿ, ಲಜ್ಜೆ ತುಂಬಿ ನೀರಾಗುತ್ತಿದ್ದೆವು. ಅವರ ಕಾಲಡಿಯಲ್ಲಿ ಹೋಗಿ ಅವರಿಗೆ ತೊಡಕಾಲು ಬಿದ್ದಾಗ ಅವರು ನೆಲಕ್ಕೆ ಬೀಳುವ ಸಂದರ್ಭ. ಆಗ ಅವರ ಗಾಂಭೀರ್ಯ ಅಲ್ಲಿಂದ ಓಡಿ ಹೋಗುತ್ತಿತ್ತು. ಕೆಲ ಸಲ ನಮ್ಮನ್ನು ಕಾಯುವುದಕ್ಕಾಗಿಯೇ ಕೋಲು ಹಿಡಿದ ಆಳುಗಳನ್ನು ನಿಲ್ಲಿಸುತ್ತಿದ್ದರು. ನಮಗೆ ಅದು ಸ್ಪರ್ಧೆಯ ಕ್ರೀಡಾಂಗಣವಾಗಿತ್ತು. ಆ ನಾಣ್ಯಕ್ಕಾಗಿ ನಮ್ಮ ನಮ್ಮಲ್ಲಿಯೇ ಕಚ್ಚಾಟಗಳಾಗುತ್ತಿದ್ದವು. ಈ ಕಚ್ಚಾಟ ಮೂಗು, ಕಣ್ಣು, ಬಾಯಿ, ಹಲ್ಲುಗಳಲ್ಲಿಯೇ ಸೀಮಿತವಾಗಿರುತ್ತಿತ್ತು. ಕೆಲವು ಬಾರಿ ಹೋರಿ ಕಾಲಿನಿಂದ ನೆಲ ಕೆದರಿದ ಹಾಗೆ ಹೆಣದ ಸವಾರಿಯೊಂದಿಗೆ ಮುಂದುವರೆಯುತ್ತ ಸಂಗ್ರಹವಾಗುತ್ತ ಹೋಗುತ್ತಿತ್ತು. ಸವಾರಿದಾರರೆಲ್ಲ ಮುಂದಕ್ಕೆ ಹೋದಾಗ ಹಿಂದೆ ಉಳಿದ ನಾವು ನಮ್ಮಲ್ಲಿಯೇ ಜಗಳ ಕುಸ್ತಿಗೆ ನಿಲ್ಲುತ್ತಿದ್ದೇವು. ನಮ್ಮ ಹಿಂದಿನಿಂದ ಹಣ ಆಯ್ದುಕೊಂಡು ಬರುವ ನಮ್ಮ ಹಿರಿಯರು ನಮ್ಮನ್ನು ದೂರೀಕರಿಸುತ್ತಿದ್ದರು. ಆಯ್ದ ಹಣದಲ್ಲಿ ಕೆಲವಷ್ಟು ಕದ್ದು ಚೊಣ್ಣದ ಕಳ್ಳ ಜೇಬಿನಲ್ಲಿ ಎಂದರೆ ಮಡಿಸಿ ಹೊಲಿದ ಚೊಣ್ಣದ ನಡಪಟ್ಟಿ ಅಥವಾ ಕೆಳಗಿನ ಭಾಗದಲ್ಲಿ ಮಡಿಸಿ ಹೊಲಿದ ಅರಿವೆಗೆ ನಾಣ್ಯ ಹೋಗುವಷ್ಟೇ ಚಿಕ್ಕದೊಂದು ರಂಧ್ರ ಮಾಡಿ ಅದರಲ್ಲಿ ತುರುಕಿಬಿಡುತ್ತಿದ್ದೆವು ಮತ್ತು ಸಿಕ್ಕಿದ್ದು ಇಷ್ಟೇ ಎಂದು ಸುಳ್ಳು ಹೇಳಿ ಅಜ್ಜಿಯ ಎದುರು ಖಾಲಿ ಕೈ ಅಲ್ಲಾಡಿಸುತ್ತಿದ್ದೆವು. ಕದ್ದ ಹಣದಿಂದ ಸಂತೆಯಲ್ಲಿ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಿದ್ದವು.

ಹೆಣದ ಮೇಲೆ ಅವರು ಹಾರಿಸುವ ಪುಡಿಕಾಸೆಂದರೆ, ಐದು ಪೈಸೆಯ ನಾಣ್ಯವೇ ಕೊನೆಯದ್ದಾಗಿರುತ್ತಿತ್ತು, ತೂತಿನ ದುಡ್ಡು, ಒಂದು ಪೈಸೆ, ಎರಡು ಪೈಸೆ ಹೆಚ್ಚಿರುತ್ತಿದ್ದವು. ಹೆಚ್ಚು ಶ್ರೀಮಂತರಿದ್ದರೆ ಹತ್ತು ಪೈಸೆಯ ನಾಣ್ಯ ಕೊನೆಯದಾಗಿರುತ್ತಿತ್ತು. ನಾಣ್ಯದ ಮೌಲ್ಯ ಹೆಚ್ಚಿದ ಹಾಗೆ ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರು. ಹೆಚ್ಚಿನ ಮೌಲ್ಯದ ನಾಣ್ಯ ಸಿಕ್ಕಾಗ ನಮಗಾಗುವ ಸಂತೋಷಕ್ಕೆ ಎಣೆಯೇ ಇರುತ್ತಿರಲಿಲ್ಲ. ಅದಕ್ಕಾಗಿಯೇ ಹೆಚ್ಚಿನ ಜಗಳಗಳೂ ಕೂಡ.
ಸತ್ತವರ ತಿಥಿಯ ಊಟ ಬಿಟ್ಟು, ಜಾತ್ರೆ ಮದುವ ಈ ಸಂದರ್ಭಗಳಲ್ಲಿ ಸಿಗುವ ಊಟಕ್ಕೆ ಹಾಜರಿ ಹಾಕುವುದು ಮತ್ತೊಂದು ಕೆಲಸ. ಮದುವೆಯ ಊಟವೇ ಆಗಲಿ, ಜಾತ್ರೆಯ ಊಟವೇ ಆಗಲಿ, ಎರಡು ಮೂರು ವಾರಗಳ ಮುಂಚಿತವಾಗಿಯೇ ಜನಜನಿತವಾಗುತ್ತಿತ್ತು. ಅಂತಹದೇ ಒಂದು ಸಂದರ್ಭ, ಅದು ಶೇಠಜಿಯವರ ಏಕೈಕ ಪುತ್ರಿಯ ಮದುವೆ.

"ಇಡೀ ಊರಿಗೆ ಊಟ ಹಾಕ್ತಾರಂತೆ!"
"ಬೂಂದೆ ಊಟ"
'ಮೈಸೂರು ಪಾಕ್, ಅನ್ನ ಸಾರು!

ನುಚ್ಚು ರೊಟ್ಟಿ ನಮಗೆ (ನಮ್ಮ ಕೇರಿಯಲ್ಲಿ ನಮ್ಮ ಮನೆಯೇ ದೊಡ್ಡದು. ಸ್ವಲ್ಪ ಘನತೆ ಗೌರವಕ್ಕಾಗಿ ಹಾತೊರೆಯುವವರೆಂದರೆ ನಮ್ಮ ಮನೆಯವರೇ ಆಗಿದ್ದರು) ಅನ್ನ ಸಾರು ಎಂದರೂ ಅದು ನಮಗೆ ಆಗ ಹಬ್ಬದ ಊಟವೇ ಆಗಿತ್ತು. ನಮ್ಮ ಮನೆಯಲ್ಲಿ ಅದು ದೀಪಾವಳಿಗೋ, ನಾಗರಪಂಚಮಿಗೋ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಸಿಗುತ್ತಿತ್ತು.

ಶೇಠಜಿಯವರ ಮಗಳ ಮದುವೆಗೆ ಊರಿನ ಸುತ್ತಮುತ್ತಲಿನ ದಲಿತರೂ ಬಂದಿದ್ದರು. ಅಂದ್ರೆ ಊಟಕ್ಕೆ. ಹೀಗಾಗಿ ದಲಿತರ ಸಂಖ್ಯೆ ಅಂದು ಹೆಚ್ಚೇ ಹಾಗಿ ಬಿಟ್ಟಿತ್ತು. ಶೇಠಜಿಯವರ ಅಡ್ಡೆ (ವಠಾರ) ತುಂಬಾ ದೊಡ್ಡದು. ಅದಕ್ಕೆ ಎರಡು ಗೇಟು, ಒಂದು ಹಿಂದಿದ್ದರೆ ಮತ್ತೊಂದು ಮುಂದಿತ್ತು. ಮುಂದಿನ ಗೇಟಿನಲ್ಲಿ ನಮಗೆ ಪ್ರವೇಶವಿರಲಿಲ್ಲ. ನನ್ನಜ್ಜಿ ಸ್ವಲ್ಪ ಬಾಯಿಬಡಕಿ. ಶಕ್ತಿವಾನಳು ಕೂಡ, ಮೊಮ್ಮಕ್ಕಳನ್ನೆಲ್ಲ ಕೋಳಿಯಂತ ಕರೆಯುತ್ತ, ಎಳೆದೆಳೆದು ರೆಕ್ಕೆಯೊಳಗಿಟ್ಟುಕೊಂಡಂತೆ ನಮ್ಮನ್ನು ಪಕ್ಕದಲ್ಲಿಯೇ ಇಟ್ಟುಕೊಳ್ಳುತ್ತಿದ್ದಳು.

ಶೇಠಜಿಯವರ ದರ್ಶನವೆಂದರೆ ನಮಗೆ ದೇವರ ದರ್ಶನವಿದ್ದಂತೆ. ಅಲ್ಲಿ ವೀರಶೈವರದೇ ದರ್ಬಾರು ಎಂದು ಹೇಳಿದನ್ನಲ್ಲವೇ? ಅವರ ಮನೆಯಲ್ಲಿ ದುಡಿಯುವ ಇವರು ಕೈಯಲ್ಲಿ ಕೋಲು ಹಿಡಿದು ನಿಂತಿರುತ್ತಿದ್ದರು. ನಾಯಿ ಹಂದಿಗಳಿಗೆ ಹೊಡೆಯಲು ಬಳಸುವುದೂ ಅದೇ ಕೋಲು, ನಮಗೆ ಹೊಡೆಯಲು ಬಳಸುವುದೂ ಅದೇ ಕೋಲು. ಊರ ಜನರೆಲ್ಲರ ಊಟ ಮುಗಿದ ಮೇಲೆ ಕೊನೆಯಲ್ಲಿ ದಲಿತರನ್ನು ಬಿಡಲಾಗುತ್ತಿತ್ತು. ಎಷ್ಟು ದಲಿತರು ಅಲ್ಲಿ ಸೇರಿದ್ದರೆಂದರೆ ಅಜ್ಜಿ ಹೇಳುತ್ತಿದ್ದಳು:

"ಇವತ್ತು ಕಂಡಾಪಟಿ ಮಂದಿ
ಏನಿಲ್ಲಂದ್ರ, ಮೂರ ಪಂಕ್ತರ ಅಕ್ಕದ......."

ಎನ್ನುತ್ತಿದ್ದಳು. ನಮಗಿಂತಲೂ ಕೆಳದರ್ಜೆಯವರೆಂದು ಭಾವಿಸಲಾಗುವ ಇನ್ನೊಂದು ತಂಡವೂ ಅಲ್ಲಿತ್ತು. ಅವರು ಈ ಮೂರು ಪಂಕ್ತಿಗೆ ಸಂಬಂಧಪಟ್ಟವರಲ್ಲ. ಹೀಗಾಗಿ ಅವರಿಗೆ ನಮಗಿಂತಲೂ ಕೊನೆಗೆ ಊಟ. ಅವರಲ್ಲಿ ಅಡ್ಡಿ, ಚೊಂಚರು, ಲೋಲ್ಯಾರು, ಕುಂಚಿಕೊರವರು ಇರುತ್ತಿದ್ದರು. ಇವರನ್ನು ಕಂಡು ನಾವು ಹೇಸುತ್ತಿದ್ದೆವು. ಇವರು ಬೇಡಿ ತಿನ್ನುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು. ಈ ಬಗೆಯ ಊಟದ ವ್ಯವಸ್ಥೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಈ ನಿಯಮಗಳನ್ನು ಗೇಟು ಕಾಯುವ ದಂಡನಾಯಕ ನಮಗೆ ಹೇಳಿ ಒಳಗೆ ಬಿಡುತ್ತಿದ್ದ.

* ತಟ್ಟೆಗೆ ಹೆಚ್ಚಿಗೆ ಹಾಕಿಸಿಕೊಳ್ಳಬಾರದು
* ನಿಮಗೆ ತಿನ್ನಲು ಎಷ್ಟು ಸಾಧ್ಯವೋ ಅಷ್ಟನ್ನೇ ನೀಡಿಸಿಕೊಳ್ಳಬೇಕು.
* ಮನೆಗೆ ಕಟ್ಟಿಕೊಂಡು ಹೋಗಬಾರದು.
* ಊಟ ಮುಗಿಸಿ ಹೋಗುವಾಗ ಪಾತ್ರೆಯಲ್ಲಿಟ್ಟ ಬಣ್ಣದಲ್ಲಿ ಕೈ ಅದ್ದಿ ಹೋಗಬೇಕು.

ಈ ನಿಯಮಗಳು ಊರ ಜನಗಳಿಗೆ ಅನ್ವಯಿಸದು. ಅವರಿಗೆ ಬಾಳೆಲೆಯಲ್ಲಿ ಬಡಿಸಿ ಊಟ ಮಾಡಿಸುತ್ತಿದ್ದರು. ಒಮ್ಮೆ ಊಟ ಮಾಡಿ ಹೋದ ದಲಿತರು ಮತ್ತೊಮ್ಮೆ ಬಾರದಿರಲಿ ಎನ್ನುವ ವಿಚಾರದ ತಂತ್ರಕ್ಕೆ ಬಣ್ಣದಲ್ಲಿ ಕೈ ಅದ್ದಿಸಿ ಕಳುಹಿಸುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಓಟು ಹಾಕಿದ ವ್ಯಕ್ತಿಯ ಬೆರಳಿಗೆ ಗುರುತು ಬೊಟ್ಟು, ಹಾಕಿದಂತೆ.

ಇಂಥ ನಿಯಮಗಳನ್ನು ಮುರಿಯುವುದರಲ್ಲಿ ದಲಿತರು ನಿಸ್ಸಿಮರು. ಬಣ್ಣದಲ್ಲಿ ಕೈ ಅದ್ದುವ ಸಂದರ್ಭ ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಅಜ್ಜಿ ಬೇರೆ ಬೇರೆ ತಂತ್ರಗಳನ್ನು ಹುಡುಕಿದ್ದಳು. ಎಂದೋ ಒಮ್ಮೆ ಎಣ್ಣೆ ಕಾಣುವ ತಲೆ ಅಂದು ಅವಶ್ಯವಾಗಿ ಎಣ್ಣೆ ಕಾಣುತ್ತಿತ್ತು. ಊಟ ಮುಗಿದಾದ ಮೇಲೆ ಬಣ್ಣದಲ್ಲಿ ಕೈ ಆದ್ದು ಸಮಯ ಬಂದಾಗ ಕೈ, ಎಣ್ಣೆ ಹತ್ತಿದ ತಲೆಗೆ ತಿಕ್ಕಿ ಬಣ್ಣದ ಪಾತ್ರೆಯಲ್ಲಿ ಅದ್ದುವಂತೆ ಅಜ್ಜಿ ಮೊದಲೇ ಹೇಳಿರುತ್ತಿದ್ದಳು. ಮೊದಲು ಹಾಗೆಯೇ ತಪ್ಪಿಸಿಕೊಂಡು ಹೊರಬರಲು ಪ್ರಯತ್ನಿಸುವುದು, ಯಾರಾದರೂ ಹಿಡಿದರೆ ಆ ತಂತ್ರವನ್ನು ಬಳಸುತ್ತಿದ್ದೆವು. ಹೊರಗೆ ಬಂದಾಕ್ಷಣ ಕೈ ಚೊಣ್ಣಕ್ಕೆ ಒರೆಸಿಕೊಂಡಾಗ ಬಣ್ಣ ಹೊರಟು ಹೋಗುತ್ತಿತ್ತು. ಅನಂತರ ಕೊನೆಯ ಪಂಕ್ತಿಯ ಊಟಕ್ಕೆ ಹಾಜರಾಗುತ್ತಿದ್ದೆವು. ಕೆಲ ಬಾರಿ ಸಿಕ್ಕಿ ಬಿದ್ದಾಗ ಕತ್ತು ಹಿಡಿದು ಹೊರಕ್ಕೆ ದಬ್ಬುತ್ತಿದ್ದರು. ಆಗ ದೇಶಾವರಿ ನಗೆ ಬೀರುತ್ತ, ಕೆಲಬಾರಿ ಅಳುತ್ತ ಹೊರಗೆ ಬರುತ್ತಿದ್ದೆವು. ಸರತಿಯಲ್ಲಿ ಊಟಕ್ಕೆ ಕುಳಿತಾಗ ನೀಡುವವನಿಗೆ ಅಜ್ಜಿ:

"ಅಯ್ಯ....ಪ್ಪ
ನನ್ನ ಮೊಮ್ಮಕ್ಕಳು ಸಣ್ಣು ಆದಾವು
ಸವುಕಾಸ ತಿಂತಾವು ಇನ್ನ ಸ್ವಲ್ಪ ಹಾಕ್ಕಪ್ಪ..." ಎಂದು ಹೇಳಿ ಹಾಕಿಸಿಕೊಳ್ಳುತ್ತಿದ್ದಳು. ಊಟ ಮುಗಿಸಿ ಗೇಟು ದಾಟುತ್ತಿರಬೇಕಾದರೆ

ಅನ್ನ ಕದ್ದು ವಯ್ಯುವ ಕಳ್ಳರನ್ನು ಹಿಡಿಯಲು ನಿಂತ ದಂಡನಾಯಕ ಬಂದ. ಬಂದವನೇ ನಮ್ಮನ್ನೆಲ್ಲ ತಡೆದ. ಅಜ್ಜಿಯ ಹೊಟ್ಟೆಯ ಭಾಗದಲ್ಲಿ ಸೀರೆ ಉಬ್ಬಿತ್ತು. ಅದನ್ನು ನೋಡಿದ ಆತ:

"ಏ ಮುದುಕಿ, ಏನದು ಕಟಗೊಂಡ ಹೊಂಟಿ ಏನ?" ಎಂದ
"ಐಯ್ಯ ಇಲ್ಲ ಬಿಡಪ್ಪ....." ಎಂದು ಅಜ್ಜಿ ನಗುತ್ತಲೇ ಹೇಳಿದಳು.

ನಮ್ಮನ್ನೆಲ್ಲ ಮುಂದಕ್ಕೆ ಹೋಗಲು ಹೇಳಿದಳು. ಅವನು ಸೀರೆ ಮುಟ್ಟಲು ಬಂದಾಗ ಸ್ವಲ್ಪು ಧ್ವನಿ ಏರಿಸಿ-

"ಏ ನಿಂದೇನು?
ಏನಿಲ್ಲಂತ ಹೇಳತೀನಿ ಅಲ್ಲೇನು?
ಬಾಳಿ ಗಂಟ ಹಾಕಿ ಸೀರಿ ಉಟೀನಿ ಹಂಗ ಕಾಣದ........" ಎಂದಳು.
"ತಗಿ ನೋಡೋನ"

ಎಂದು ಆತ ಅಜ್ಜಿಯ ಸೀರೆಯ ನೆರಿಗೆಗೆ ಕೈ ಹಾಕುವ ಮುನ್ನವೇ ಸರಗು ಸರಿಸಿ ತೋರಿಸಿದಳು. ಅಷ್ಟರಲ್ಲಿಯೇ ಊಟ ಮುಗಿಸಿದವರು ಗೇಟಿನ ಬಳಿ ಸೇರತೊಡಗಿದರು. ಆಗ ಅಜ್ಜಿ ಬಾಳೆಗಂಟಿನಿಂದ ಒಂದು ಸಣ್ಣ ಗಂಟನ್ನು ತಗೆದೊಗೆದಳೇ -

"ಲಟ್ಟು ಏನು ತಾನs ಸೌಕಾರಾಗ್ಯಾನ
ಊಟಾ ಹಾಕದವ್ರು ದೌಳವರು ಎಲ್ಲಿದಾರೋ, ಏನೋ
ಇವನದೇಷ್ಟು ನೋಡು....."

ಎಂದು ಬೈಯುತ್ತ ಬಂದಳು. ಗೇಟು ದಾಟಿ ಹೊರಗೆ ಬಂದಾಗ ಅಜ್ಜಿಯ ಮುಖ ನಗು ಮುಖವಾಗಿತ್ತು. 'ನಾನು ಗೆದ್ದೆ' ಎನ್ನುವ ಗೆಲುವಿತ್ತು ಅವಳ ಮುಖದಲ್ಲಿ. ಅಜ್ಜಿ ತಾನಷ್ಟೇ ತೆಗೆದಿಟ್ಟುಕೊಳ್ಳದೆ, ನಮ್ಮ ತಲೆಯ ಮೇಲಿರುವ ಟೋಪಿಯ ಅಡಿಯಲ್ಲೂ ಅಡಗಿಸಿಟ್ಟಿದ್ದಳು. ಅದನ್ನೆಲ್ಲ ಒಟ್ಟುಗೂಡಿಸುತ್ತ:

"ಹುಡುಕಾಕ ಬರಾನ ಐನೋರಾ
ತಿನ್ನನ್ನು ಚಳ್ಳ ಹಣ್ಣು" - ಎಂದು ಒಟಗುಡುತ್ತಿದ್ದಳು.

ನುಣುಪಾಗಿ ಬೋಳಿಸಿಕೊಳ್ಳುವ ನಮ್ಮ ತಲೆ, ಎಣ್ಣೆ ಮತ್ತು ಟೋಪಿ ಎಂದೂ

ಮರೆಯುತ್ತಿರಲಿಲ್ಲ......

ನಾಳಿನ ಕಸದ ಪಾಳಿ : ಮಾಲಕತ್ತಿ

ನಮಸ್ಕರಿಸಿದಂತೆ ನಿಮ್ಮ ಹಿಂಗೈಗಳನ್ನು ಪರಸ್ಪರ ಒಂದಕ್ಕೊಂದು ಮುಟ್ಟಿಸಿ, ಆಮೇಲೆ ಒಂದರಿನ್ನೊಂದರ ಮಧ್ಯೆ ಬೆರಳುಗಳನ್ನು ಸೇರಿಸಿ. ಆಯಿತೆ? ಈಗ ನಿಮ್ಮ ಬಲಗೈ ಬೆರಳುಗಳು ಎಡಗೈ ಅಂಗೈಯಲ್ಲಿ. ಎಡಗೈ ಬೆರಳುಗಳು ಬಲಗೈ ಅಂಗೈಯಲ್ಲಿ ಬಂದಿವೆ ತಾನೇ? ಸರಿ. ಈಗ ಭೂಮಿಗೂ ನಿಮ್ಮ ಕಾಲುಗಳಿಗೂ ಸಾಕಷ್ಟು ಅಂತರವಿರುವಂತೆ ಎತ್ತರದ ಗೋಡೆಯ ಗೂಟಕ್ಕೆ ತೂಗು ಹಾಕಿಸಿಕೊಳ್ಳಿ. ಹಾಕಿಸಿಕೊಂಡಿರಾ? ಊ ಹು, ಹಾಗಲ್ಲ, ನಿಮ್ಮ ಬಿಡಿಸದ ಕೈಗಳ ಬೆರಳಿನ ಮಧ್ಯ ಗೂಟ ಬರಬೇಕು. ಹುಂ ಹಾಗೆ, ಸರಿ. ಹೀಗೆ ತೂಗಿದರೆ ಎಷ್ಟು ಕಾಲ ನೀವು ಕಣ್ಣುಗಳಲ್ಲಿ ನೀರು ತಾರದೆ ತೂಗಬಹುದು?

ಪ್ರಾಥಮಿಕ ಶಾಲೆ ಓದುವಾಗ ನನಗೆ ಸಿಕ್ಕ ಶಿಕ್ಷೆ ಇದು. ಅಲ್ಲಲ್ಲ..... ನನ್ನಂತೆ ನನ್ನ ಕೇರಿಯ ಸ್ನೇಹಿತರೂ ಉಂಡಿದ್ದಾರೆ. ಹೀಗೆ ತೂಗು ಹಾಕಿದಾಗ ಕೈಗಳನ್ನು ಜಾರಿಸಿ ನೆಲಕ್ಕೆ ಬೀಳಲೂ ಬರುತ್ತಿರಲಿಲ್ಲ. ಅಳಬೇಕು, ಗೋಗರೆಯಬೇಕು. ಕಾಡಿ ಬೇಡಿದರೂ ಪ್ರಯೋಜನವಿರುತ್ತಿರಲಿಲ್ಲ. ನಾವು ಗೋಗರೆದಷ್ಟು ನಮ್ಮ ಗುರೂತ್ತಮರಿಗೆ ಹಲ್ಲು ಕಡಿಯುವಷ್ಟು ಕೋಪ ಬರುತ್ತಿತ್ತು. ಕೈಯಲ್ಲಿ ನುಣುಪಿಲ್ಲದ ಉದ್ದನೆಯ ಬಡಿಗೆ, ಗೋಡೆಗೆ ಮುಖ ಮಾಡಿ ಗೂಟಕ್ಕೆ ತೂಗು ಹಾಕಿದ ಮೇಲೆ ಅವರಿಗೆ ಹೊಡೆಯಲು ಸಿಕ್ಕುವುದು ಉಬ್ಬಿನಿಂತ ನಮ್ಮ ಕುಂಡೆಯ ದಡಗಳು.

"ಸೂಳೆ ಮಗನ ಕುಂಡೆಂದರ ತಬಲಾ ಆಗ್ಯಾವ ನೋಡ ಸಾಲಿ ಉಪ್ಪಿಟ್ಟು ತಿಂದು ತಿಂದು........" ಎನ್ನುವುದು, ಬಾರಿಸುವುದು

ಕೆಲವೊಮ್ಮೆ ಕುಂಡೆಯ ದಡಗಳನ್ನು ಬಿಜಾಪುರದ ಜೋಡು ಗುಮ್ಮಟಕ್ಕೆ ಹೋಲಿಸುತ್ತಿದ್ದರು. ಅವರು ನಮಗೆ ತಿನ್ನಲು ಹಾಕುವ ಉಪ್ಪಿಟ್ಟಿಗಿಂತ ಮನೆಗೊಯ್ಯುವುದೇ ಹೆಚ್ಚಿರುತ್ತಿತ್ತು.

ನಾವು ತೊಡುವ ಚೊಣ್ಣಗಳಿಗೆ ಗುಂಡಿಯೇ ಇರುತ್ತಿರಲಿಲ್ಲ. ಇದ್ದರೂ ಪ್ರಯೊಜನವಿರುತ್ತಿರಲಿಲ್ಲ. ಒಂದು ಚೊಣ್ಣದ ನಡದ ಸುತ್ತಳತೆಯಲ್ಲಿ, ನನ್ನಂಥ ನಾಯಿ ಸೊಂಟದವರು ಸಲೀಸಾಗಿ ನಾಲ್ಕು ಜನ ಇಳಿಯಬಹುದಿತ್ತು. ಅವು ಪೊಲೀಸರ ಅರ್ಧ ತೊಡೆ ಕಾಣುವ ಚೊಣ್ಣಗಳು. ಅದಕ್ಕಾಗಿ ಆ ಚೊಣ್ಣ ಉಡುದಾರದ (ನಡುದಾರದ) ಆಸರೆಯನ್ನು ಪಡೆಯುತ್ತಿತ್ತು. ಇಲ್ಲವೇ ಸಣಬಿನಿಂದಲೋ, ಸೀರೆಯ ದಡಿಯಿಂದಲೋ ಬಿಗಿಯಲಾಗಿರುತ್ತಿತ್ತು. ಗುರೂತ್ತಮರು ಜೋಡು ಗುಮ್ಮಟದ ನಗಾರಿಯನ್ನು ಬಾರಿಸುತ್ತಿರಬೇಕಾದರೆ ವಿಲವಿಲನೆ ಒದ್ದಾಡುತ್ತಿದ್ದೆ. ಗೋಡೆಯ ಗೂಟಕ್ಕೆ ತೂಗು ಹಾಕಿದ್ದರಿಂದ ಮೂಗು, ತರಕು ಬರಕಾದ ಗೋಡೆಗೆ ಉಜ್ಜಿ ಉರಿಯುತ್ತಿತ್ತು. ಗೂಟಕ್ಕೆ ಜೋತು ಬಿದ್ದಿರುವುದರಿಂದ ಹೊಟ್ಟೆ ತೆಳ್ಳಗಾಗಿ ನಡಕ್ಕೆ ಕಟ್ಟಿದ ಆ ದಗಲಂ ಬೊಗಲಂ ಪೊಲೀಸ್ ಚೊಣ್ಣ ಹೊಡೆತ ಬಿದ್ದಂತೆ ನಿಧಾನವಾಗಿ ಕೆಳಗಿಳಿಯುತ್ತಿತ್ತು. ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ನೋಡಲು ಅದೊಂದು ಸಿನಿಮಾ ಆಗಿತ್ತು. ಅವರು ಬಿದ್ದು ಬಿದ್ದು ನಕ್ಕಂತೆ, ನನ್ನ ಅಳುವು ಹೆಚ್ಚಿದಂತೆ ಹೊಡೆತ ಇನ್ನೂ ಜೋರಾಗುತ್ತಿದ್ದವು. ಕುಂಡೆ ತುಂಬಾ ಬಾಸುಂಡೆ, ಕೊನೆಗೆ ಕರಿಕುಂಡೆ ನೋಡಲಾಗದೆ "ಥೂ" ಎಂದು ನೆಲಕ್ಕುಗಿದು ದೂರ ಸರಿದಾಗ ಅವರ ದೃಷ್ಟಿ ಹೊರಳುವುದು ನನ್ನ ಕೇರಿಯ ಸ್ನೇಹಿತರ ಮೇಲೆ. ಅದರ ಅರ್ಥ ಅವರಿಗೆ ತಕ್ಷಣವೇ ಆಗುತ್ತಿತ್ತು. ಓಡಿ ಬಂದವರೇ ಗೂಟದಿಂದ ನನ್ನನ್ನು ಕೆಳಗಿಳಿಸುತ್ತಿದ್ದರು. ಆಗ ನೆಲದ ಮೇಲೆ ಕುಳಿತುಕೊಳ್ಳುವುದೂ ದುಸ್ತರವಾಗುತ್ತಿತ್ತು. ಹೀಗೆ ನಾನೂ ನನ್ನ ಕೇರಿಯ ಸ್ನೇಹಿತರನ್ನು ಕೆಳಗಿಳಿಸಿದ ಸಂದರ್ಭಗಳಿವೆ.

ಇದಕ್ಕಿಂತ ಕಠಿಣ ಶಿಕ್ಷೆ ಮತ್ತೊಂದು:

ಅದು, ಕುರ್ಚಿಯ ಹಾಗೆ ಮೊಣಕಾಲು ಅರ್ಧ ಮಡಿಸಿ ನಿಂತುಕೊಳ್ಳಬೇಕು. ಹೀಗೆ ಬಹಳ ಹೊತ್ತು ನಿಲ್ಲಲಾಗದು. ಸ್ವಲ್ಪ ಸಮಯದ ನಂತರ ಮೊಣಕಾಲು ಮಡಿಸಿ ಕುಳಿತು ಬಿಡಬೇಕಾಗುತ್ತದೆ. ಹೀಗೆ ಕುಳಿತುಕೊಳ್ಳಬಾರದೆಂದು ಮೊಣಕಾಲ ಭಾಗದ ಹಿಂದಿನ ಸಂದಿಯಲ್ಲಿ ದಪ್ಪಾದ ಮತ್ತು ಸ್ವಲ್ಪು ಚೂಪಾದ ಕಟ್ಟಿಗೆಯ ತುಂಡನ್ನು ಇಡಲಾಗುತ್ತಿತ್ತು. ಅವರು ತಿಳಿಸಿದ ಪ್ರಮಾಣಕ್ಕಿಂತ ಹೆಚ್ಚಿಗೆ ಕಾಲು ಮಡಿಸಿದರೆ ಕಟ್ಟಿಗೆ ನಟ್ಟು ರಕ್ತವೇ ಬರುತ್ತಿತ್ತು.

ಪಟ್ಟಿಕೊಡುತ್ತ ಹೋದರೆ ಇನ್ನೂ ಇವೆ. ಈ ಪರಿಯ ಶಿಕ್ಷೆಯುಂಡ ನಮ್ಮ ದೇಹ ಕೊರಡಾಗಿ ಹೋಗಿತ್ತು. ಶಿಕ್ಷೆಯ ಕಾಲ ಬಂದಾಗ ಅವರು ಹೇಳುವುದಕ್ಕಿಂತ ಮುಂಚಿತವಾಗಿಯೇ ನಾವು ಆಸನ ಹಾಕುತ್ತಿದ್ದವು. ಆಸನ ಹಾಕುವುದರಲ್ಲಿ ತಡವಾದರೂ ಹೊಡೆತ, ಬೇಗನೆ ಹಾಕಿದರೆ "ಎಷ್ಟು ಹುರುಪು ನೋಡು ಮಗನಿಗೆ' ಎನ್ನುವುದು, ಹೊಡೆತ. ಆದರೆ ಆ ಗುರೂತ್ತಮರ ಕೈ ಹೊಡೆತ ತಿನ್ನುವ ಭಾಗ್ಯ ನಮಗೆ ಬರಲೇ ಇಲ್ಲ.

ಇವಲ್ಲ ಶಿಕ್ಷೆಗಳು ಯಾವ ಕಾರಣಕ್ಕಾಗಿ ಗೊತ್ತೇ? ನಾವು ಮನೆಯಲ್ಲಿ, ಹೇಳಿದ ಪಾಠ ಓದಿಕೊಂಡು ಬರಲಿಲ್ಲ ಎಂದಲ್ಲ. ನಮ್ಮ ಕೊಳಕುತನಕ್ಕಾಗಿಯಲ್ಲ. ಶಾಲೆಯಲ್ಲಿ ಪ್ರಾರ್ಥನೆಯಾಗುವುದಕ್ಕಿಂತ ಮುಂಚೆಯೇ, ನಾವು ಬಂದು ತರಗತಿಯ ಕಸ ಗುಡಿಸಬೇಕು. ಬೇಗನೆ ಬಂದು ಕಸ ಗುಡಿಸದಿದ್ದರೆ ಈ ಪರಿಯ ಶಿಕ್ಷೆ.

ನಮ್ಮ ಕೇರಿಯವರು ಒಟ್ಟು ತರಗತಿಯಲ್ಲಿ ನಾಲ್ಕು ಜನ. ದೇವಪ್ಪ, ಮಲ್ಲಪ್ಪ, ಬಸವಂತಪ್ಪ ಮತ್ತು ನಾನು. ನಾಳೆ ಕಸದ ಪಾಳಿ ಯಾರದಿದೆ ಎನ್ನುವುದನ್ನು ಕರಿಹಲಗೆಯ ಮೇಲೆ ಬರೆಯಲಾಗುತ್ತಿತ್ತು. ನಮ್ಮ ಹೆಸರುಗಳನ್ನು ಕರಿಹಲಗೆಯ ಮೇಲೆ ಯಥಾ ಸ್ಥಿತಿಯಲ್ಲಿ ಬರೆಯಲು ಅವರು ಹೇಸುತ್ತಿದ್ದರೆಂದು ತೋರುತ್ತದೆ. ಹೀಗಾಗಿ ದೇವ್ಯಾ, ಮಲ್ಯಾ, ಬಸ್ಯಾ ಎಂದು ಹೆಸರನ್ನು ಮುಗುಚಿ ಬರೆಯುತ್ತಿದ್ದರು. ಹೆಸರು ಬರೆಯುವ ಕೆಲಸ ಮೊದಲು ಗುರೂತ್ತಮರೇ ಮಾಡುತ್ತಿದ್ದರು. ಆನಂತರ ಆ ಕೆಲಸ ತರಗತಿಯ ಮಂತ್ರಿವರ್ಯರಿಗೆ ವರ್ಗಾವಣೆ ಮಾಡಲಾಯಿತು. ಕಸಗುಡಿಸುವ ಕೆಲಸ ದಲಿತರಾದ ನಮ್ಮ ನಾಲ್ಕು ಜನಗಳಿಗೆ ಮಾತ್ರ ಸೀಮಿತವಾಗಿತ್ತು.
ನಾಲ್ಕು ಐದು ಜನ ಒಟ್ಟಿಗೆ ಕುಳಿತುಕೊಳ್ಳಬಹುದಾದ ಉದ್ದನೆಯ ಕಟ್ಟಿಗೆಯ ಹಾಸುಮಣೆಗಳಿದ್ದವು. ಇವುಗಳನ್ನು ಎತ್ತಿ ಕಸಗುಡಿಸುವುದೆಂದರೆ ತೊಂದರೆಯಾಗುತ್ತಿತ್ತು. ಜೊತೆಗೆ ಸಿಟ್ಟೂ ಬರುತ್ತಿತ್ತು. ಯಾಕೆಂದರೆ, ಈ ಮಣೆಗಳು ಕುಳಿತುಕೊಳ್ಳಲು ನಮಗಿರಲಿಲ್ಲ. ನಾವು ನಾಲ್ಕು ಜನ ಕೊನೆಯಲ್ಲಿ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದವು. ಹೀಗಾಗಿ ಕುಳಿತುಕೊಳ್ಳಲು ನಮಗಿಲ್ಲದ ಆ ಮಣೆಗಳನ್ನು ಕಸ ಗುಡಿಸುವಾಗ ಎತ್ತಿ ನೆಲಕ್ಕೆ ಕುಕ್ಕುತ್ತಿದ್ದೆವು. ಯಾರಾದರೂ ನೋಡಿದರೆ, ಕೈ ಜಾರಿದವರಂತೆ ನಟಿಸುತ್ತಿದ್ದೆವು.
ಒಂದು ಬಾರಿ ನಾನು ಶಾಲೆಗೆ ಹೋಗಲಾರ ಎಂದು ಹಟ ಮಾಡಿದೆ. ಯಾಕೆ?ಎಂದು ಅಜ್ಜಿ ಪ್ರಶ್ನಿಸಿದಾಗ, ನಾ ಕೊಟ್ಟ ಕಾರಣ:

ಅವೆಲ್ಲ ಮಣಿಮ್ಯಾಗ ಕುಂದ್ರಸಾರ
ನಮಗ ನೆಲದ ಮ್ಯಾಲಿ ಕುಂದ್ರಸ್ತಾರ
ನಾ ವಲ್ಲ್ಯಾ ಹೋಗುದಿಲ್ಲ.... ಎಂದಿದ್ದೆ
ಅದಕ್ಕೆ ನನ್ನ ಅಜ್ಜಿ
ಕಟಗಿ ಮಣಿ ಏನ ಮಾಡುದು?
ಕುಂತ್ರ ಅದು ನಡತೈತಿ, ನಿನಗೆ ಸಣ್ಣ ಕೌದಿ ಹೊಲ್ದ ಕೊಡ್ತಿನಿ, ಎಂದಳು
ಅದು ನನಗೆ ಕೀಳಾಗಿ ಕಂಡದ್ದರಿಂದ ನಿರಾಕರಿಸಿದೆ.
ಹೊಸಾ ತಟ್ಟ ಕೊಡ್ತೀನಿ ತಗೊಂಡ ಹೋಗು, ಎಂದಳು
(ತಟ್ಟು = ಕತ್ತರಿಸಿದ ಸೆಣಬಿನ ಚೀಲ)

ಒಪ್ಪಿಕೊಂಡು, ಮರುದಿನ ತಟ್ಟು ತೆಗೆದುಕೊಂಡು ಠೀವಿಯಿಂದ ಹೋಗಿ ಹಾಸಿಕೊಂಡು ಗೆಲುವಿನ ಮುಖದಲ್ಲಿ ಕುಳಿತಿದ್ದೆ. ಹಾಸುಮಣೆಯ ಮೇಲೆ ಕುಳಿತುಕೊಳ್ಳುವ ಜನ ಇದನ್ನು ನೋಡಿ ಅವಕ್ಕಾಗುತ್ತಾರೆಂದು ಭಾವಿಸಿದ್ದೆ. ಆದರೆ ಆದದ್ದು ತದ್ವಿರುದ್ದ. ಅವರೆಲ್ಲ ನನ್ನನ್ನು ನೋಡಿ ಅಪಹಾಸ್ಯ ಮಾಡಿ ಚಪ್ಪಾಳೆ ತಟ್ಟಿ ನಗತೊಡಗಿದರು.
ಅವ್ನ ಚೊಣ್ಣ ಹೊಲ್ಸ ಆಗತದಂತಲೇ, ಭಾರಿ ಚೊಣ್ಣ! ಎಂದು ಹೇಳುತ್ತಿದ್ದರು. ಆಗ ನನ್ನ "ದೊಗಲಂ ಬೊಗಲ ಕೊಳಕು ಚೊಣ್ಣ", ತಟ್ಟು ಎಲ್ಲದರ ಮೇಲೂ ಸಿಟ್ಟು ಬಂತು. ಏನೂ ಮಾಡಲಾಗದೆ ಕಣ್ಣಲ್ಲಿ ನೀರು ತರಿಸಿತಷ್ಟೆ.
ಕರಿಹಲಗೆಯ ಮೇಲೆ ನನ್ನ ಹೆಸರನ್ನು ಮುಗುಚಿ ಬರೆಯುತ್ತಿರಲಿಲ್ಲ. ಹೆಸರು ಅರವಿಂದ ಎಂದಿರುವುದರಿಂದ ಅದು ಹೇಗೆ ಮುಗುಚಿ ಹೇಳಿದರೂ ಅವರಿಗೆ ತೃಪ್ತಿಯಾಗಿ ಕಂಡಿರಲಿಕ್ಕಿಲ್ಲ. ಅದಕ್ಕಾಗಿ ಅವರು ನನ್ನ ಅಡ್ಡ ಹೆಸರನ್ನು ಬಳಸಿಕೊಳ್ಳುತ್ತಿದ್ದರು.

"ನಾಳಿನ ಕಸದ ಪಾಳಿ - ಮಾಲಕತ್ತಿ'
ಎಂದು ಬರೆಯುತ್ತಿದ್ದರು. ಕೆಲವೊಮ್ಮೆ "ಕತ್ತಿ" ಎಂದಷ್ಟೇ ಬರೆಯುವ ಮನಸ್ಸು

ಮಾಡುತ್ತಿದ್ದರು.
ಹಾಗೆ ಬರೆದ ಹೆಸರನ್ನು ಒಮ್ಮೆ ತಿದ್ದುವ ಸಾಹಸವೂ ಮಾಡಿದ್ದೆ. ಆದರೆ ಅಂದಿನ ಅವತಾರವೇ ಬೇರೆಯಾಗಿತ್ತು. ನಮ್ಮೂರ ಪಕ್ಕದಲ್ಲಿಯೇ ಬಸರಕೊಡ ಜಾತ್ರೆ ಹೆಸರುವಾಸಿ. ನಮ್ಮ ಮನೆಯವರು ಅಲ್ಲಿಗೆ ಹೋಗುತ್ತಿದ್ದರು. ಅಂದು ನಾನು ಹೋಗಬೇಕಾಗಿತ್ತು. ಅದಕ್ಕಾಗಿ ಮಂತ್ರಿವರ್ಯರಿಗೆ ಹೇಳಿದ್ದೆ - "ನಾಳೆ ನಾನು ಜಾತ್ರೆಗೆ ಹೋಗ್ತಿನಿ, ಅದ್ಕ ಇವತ್ತೊಂದು ದಿನ ಸಾಲಿ ಬಿಡಣ ಕಸಾ ಹೊಡಿತೀನಿ" ಎಂದೆ.
ಮುಂಚಿತವಾಗಿ ಕಸಗುಡಿಸುವ ವ್ಯವಸ್ಥೆ ಹೊದರೂ ಅಂದು ಗುರುಗಳ ಅನುಮತಿ ಪಡೆದು ಮಂತ್ರಿವರ್ಯ ಅವಕಾಶ ಕೊಟ್ಟಿದ್ದ. ಶಾಲೆ ಬಿಟ್ಟಿದ್ದರಿಂದ ತರಗತಿಯಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಆಗ ಕರಿಹಲಗೆಯ ಮೇಲೆ ಹೆಸರು ಕಂಡದ್ದು. ಎದೆ ಹೊಡೆದುಕೊಳ್ಳುತ್ತಿದ್ದರೂ, ಗುರುಗಳ ಕುರ್ಚಿಯನ್ನು ಸರಿಸಿ, ಅದರ ಮೇಲೆ ನಿಂತು "ಮಾಲಕತ್ತಿ" ಎಂದು ಬರೆದುದನ್ನು ಅಲ್ಲಿಯ "ಕ" ಕಾರ ತೆಗೆದು "ಗ"ಕಾರ ಬರೆಯಲು ಹವಣಿಸುತ್ತಿದ್ದೆ. ಎಲ್ಲಿದ್ದರೋ, ಗುರೂತ್ತಮರು ತರಗತಿಯ ಒಳಗೆ ಬಂದರು ನೋಡಿದವರೇ ಗೂಟದ ಮೇಲಿರುವ ಕಟ್ಟಿಗೆಯನ್ನು ಹಿರಿದರು. ಅವರನ್ನು ನೋಡಿದಾಕ್ಷಣವೇ ನನ್ನ ಜಂಘಾಬಲವೇ ಅಡಗಿದಂತಾಗಿ ನಡುಕ ಪ್ರಾರಂಭವಾಯಿತು. ಕೆಳಗಿಳಿದು "ಕ" ಎಂದುಬರೆದಿದ್ದಾರೆ ಎಂದು ವಿವರಣೆಯನ್ನು ಕೊಡುವುದರಲ್ಲಿಯೇ ಥಳಿಸುವುದಕ್ಕೆ ಪ್ರಾರಂಭಿಸಿದರು.
"ಕತ್ತಿ ಅಂತ ಬರದ್ರ ಏನಾಯ್ತು? ಗತ್ತಿ ಅಂತ ಮಾಡಾಕ ಹೋಗಿದ್ಯಾ? ಮಗಾ ಬರ್‍ಯಾಕ ಬಂತು ಅಂತ ತಿದ್ದಾಕ ಹೋಗ್ಯಾನ ಕತ್ತಿ ಕತ್ತಿನೇ....... ಕತ್ತೆಲ್ಲರ ಕುದುರ್‍ಯಾಕ್ಕದೇನ? ಕತ್ತಿಗೆಲ್ಲ ಯಾಕ ಬೇಕು ಹತ್ತಿಕಾಳ ನೀರ?............" ಎಂದು ಮನ ತುಂಬುವವರೆಗೆ ಹೊಡೆದರು. ಅನಂತರ ಆಳುತ್ತ ನನ್ನ ಅಂಗಿ ಕಳೆದು ಅವರ ಕುರ್ಚಿಯನ್ನು ಒರೆಸಿದ್ದು ಅಚ್ಚಳಿಯದ ನೆನಪು.

ಬೆದೆಗೆ ಬಿದ್ದ ಎಮ್ಮೆ ಮತ್ತು ಓಡಿ ಬಂದ ಕೋಣ

ಕಾಗೆ ಗೂಬೆ ನಾಯಿ ಕತ್ತೆ ಕುರಿ ಕೋಣ ಇವೆಲ್ಲ ವಿಶ್ವಾಮಿತ್ರನ ಸೃಷ್ಟಿಯಾದರೆ, ಪಾರಿವಾಳ ಕುದುರೆ ಗೊವು ಇಂಥವೆಲ್ಲ ವಸಿಷ್ಠರ ಸೃಷ್ಟಿ ಎಂದು ಹೇಳುವುದಿದೆಯಲ್ಲವೇ? ಈ ಪುರಾಣ ಕಲ್ಪನೆಗಳು ಜನರಲ್ಲಿ ಎಷ್ಟೊಂದು ಬೇರು ಬಿಟ್ಟಿವೆ ಎಂದರೆ, ಬೇರು ಸಹಿತ ಕಿತ್ತು ಹಾಕಿದ್ದೇವೆ ಎಂದರೂ, ಕರಿಕಿಯಂತೆ ಮತ್ತೆ "ಪುದುಕ್ಕನೆ” ಎದ್ದು ನಿಲ್ಲುವಂಥ ಪ್ರವೃತ್ತಿಉಳ್ಳಂಥವು.

 
       ಕೆಲವರು ಹೀಗೂ ಹೇಳುವುದಿದೆ:
       ಪ್ರಾಣಿ ಪಕ್ಷಿ ಸಸ್ಯಗಳಲ್ಲಿ
       ಎಷ್ಟೊಂದು ಜಾತಿಗಳಿಲ್ಲ ನೋಡಿ
       ಮನುಷ್ಯರಲ್ಲಿ ಮಾತ್ರ ಜಾತಿ ಇಲ್ಲ ಎಂದರೆ ಹೇಗೆ?
       ಸ್ವಲ್ಪ ಆಲೋಚನೆ ಮಾಡಿ
       ದನ ನಾಯಿ ಕತ್ತೆ ಹುಲಿಗಳಲ್ಲಿ
       ಬೆಕ್ಕು ಹಂದಿ ನರಿ ಇಲಿಗಳಲ್ಲಿ
       ಜಿಂಕೆ ಮಂಗ ಮೀನುಗಳಲ್ಲಿ
       ಎಷ್ಟೊಂದು ಜಾತಿಗಳಿವೆ ಅಂತೆಯೇ ಮನುಷ್ಯನಲ್ಲಿ -
         ಬಿಳಿ ಜನರು, ಕರಿಜನರು, ಗಿರಿಜನರು, ಹರಿಜನರು, ಚೀನಿ, ಜಪಾನಿ, ತಿರುಕ
         ಮಂಗೋಲಿ, ಆರ್ಯ, ದ್ರಾವಿಡ, ಬ್ರಾಹ್ಮಣ, ಶೂದ್ರ

[ಬ್ರಾಹ್ಮಣ ಬಂಡಾಯ]

ಹೌದು, ಸೂಕ್ಷ್ಮವಾಗಿ ವಿಚಾರ ಮಾಡಿ ನೋಡಿದರೆ ಪಕ್ಷಿ, ಮೀನುಗಳಲ್ಲಿಯೇ ಸಾಕಷ್ಟು ವಿಧಗಳಿವೆ. ಒಂದೇ ತರಹದ ಮೀನು, ಪಕ್ಷಿಗಳೆಲ್ಲ ಒಂದೇ ಕಡೆಗೆ ವಾಸಿಸುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಮೀನಿನಂತಹ ಒಂದು ಪ್ರಾಣಿಯಲ್ಲಿಯೇ ಹಲವಾರು ಜಾತಿಗಳಿದ್ದು, ಅವು ಜಾತಿಯನ್ನು ಆಯ್ದುಕೊಂಡು ಹೋದಂತೆ, ಮನುಷ್ಯನೂ ಕಾಯ್ದುಕೊಂಡು ಹೋಗಬೇಕು ಎನ್ನುವುದಾದರೆ, ಆತನಿಗೆ ಬುದ್ದಿವಂತ ಪ್ರಾಣಿ ಎಂದು ಕರೆಯುವುದಾದರೂ ಏತಕ್ಕೆ? ಈ ರೀತಿ ಮನುಷ್ಯನಲ್ಲಿ ಮೇಲು ಕೀಳು ಎಂದು ಭೇದ ಮಾಡಿ ಬದುಕುವುದೇ ಬುದ್ಧಿವಂತಿಕೆಯೆ? ಇಪ್ಪತ್ತನೆಯ ಶತಮಾನದಲ್ಲಿಯೂ ಈ ರೀತಿ ವಾದ ಹಾಕುವುದು, ಪುರಾಣದ ಚೌಕಟ್ಟಿನಲ್ಲಿಯೇ ಹೊಸತನವನ್ನು ಬಿತ್ತಿ ಬೆಳೆಯುತ್ತೇವೆ ಎನ್ನುವ ನೆಪದಲ್ಲಿ ಮತ್ತಷ್ಟು ವಿಷದ ಬೀಜವನ್ನು ಬಿತ್ತಿ ಕೊಳೆಯುವಂತೆ ಮಾಡುವುದೂ ಒಂದೇ ಎನಿಸುತ್ತದೆ.

ಮನುಷ್ಯ ಮತ್ತು ಪ್ರಾಣಿವರ್ಗಕ್ಕೆ ಎಷ್ಟೊಂದು ನಿಕಟವಾದ ಸಂಬಂಧವಿದೆ. ಈ ಸಂಬಂಧದ ಹಿನ್ನೆಲೆಯಲ್ಲಿ ನಂಬಿಕೆ, ಆಚರಣೆ ಸಂಪ್ರದಾಯ ಮತ್ತು ಪುರಾಣಗಳು ಎಷ್ಟೊಂದು ಪ್ರಭಾವ ಬೀರಿವೆ! ಇಂತಹದನ್ನು ಸ್ಮರಿಸಿಕೊಂಡಾಗ ಮೈ ಎಲ್ಲ "ಜುಂ" ಎಂದು, ಮೈ ಮೇಲಿನ ಕೂದಲುಗಳೆಲ್ಲ, ಸೆಟೆದು ನಿಲ್ಲಲು ಪ್ರಾರಂಭಿಸುತ್ತವೆ!

ನಾನು ಆವಾಗ, ಒಂಬತ್ತು ಹತ್ತು ವರ್ಷದ ಹುಡುಗನಿರಬೇಕು. ನಮ್ಮ ಕೇರಿಯಲ್ಲಿ, ಮೊದಮೊದಲು ನಮ್ಮ ಮನೆಯಲ್ಲಿ ಮಾತ್ರವೇ ಎಮ್ಮೆ ಇತ್ತು ಎಂದು ಅಜ್ಜಿ ಹೇಳುತ್ತಿದ್ದಳು. ಜೊತೆಗೆ-

     "ಏಳ ಮಂದಿ ಅಣ್ಣಾ ತಮ್ಮರ ಮ್ಯಾಲಿ ನಾ ಹುಟ್ಟಿದ್ದು,
     ನನಗೂ ಗಂಡ ಮಗಾ ಸಾಕದ್ಹಂಗ ಸಾಕಿದ್ರು
     ನಮ್ಮ ಅಪ್ಪ - ಅವ್ವ,
     ನಿಮ್ಮ ಮುತ್ಯಾ ಏನ ಎತ್ತಲಿದ್ದ?
     ಒಂದು ಕೊಡ ನೀರು ಊರ ಹೊರಗಿಂದ ತರ್ಬೇಕಾದ್ರ ತೇಕತಿದ್ದ.
     ನಾನು ತೊಂಡಿ ಕೊಡ ತಲಿ ಮ್ಯಾಲಿ ಹೊತ್ತಗೊಂಡ
     ದೀಡಿ ಕೊಡ ಬಗಲಾಗ ಹಿಡಕೊಂಡ ನೀರತರತ್ತಿದ್ಯಾ.
     ಅದ್ನ ನೋಡಿದವ್ರು -
     "ಏ ಎಲ್ಲವ್ವ, ಹಡದ್ರ ನಿನ್ನ್ಹಂಥ ಮಗಳಿಗೆ ಹಡಿಬೇಕು ನೋಡು ಅಂತಿದ್ರು"
     ಎಂದು ಹೇಳಿಕೊಳ್ಳುವುದರ ಜೊತೆಗೆ -
     "ನೀ ಹೀಂಗ ಇರ್ಬೇಕಾದ್ರೆ, ನನ್ನ ಮನ್ಯಾಗ
     ಏನೆಲ್ಲಾ ತಿಂದುಂಡ ಬೆಳೆದವಳು ನಾನು.
     ಅದರ ಸಲ್ಯಾಗ, ನಮ್ಮವ್ವ ನನ್ಹಿಂದ ಎಮ್ಮಿ ಹೊಡ್ಡ ಕಳಸ್ಯಾಳ.
     ಮಗಳು ತಿಂದುಂಡು ಸುಖದಾಗ ಇರಲೆಂತ.
     ಆದರ ನಾ ಬಂದಾಗ, ಈ ಮನ್ಯಾಗ ಏನಿತ್ತು?
     ಎಮ್ಮಿ ಕೊಳ್ಳಗಿನ ಗಂಟಿ ಜೋತ್ಯಾಡದ್ಹಂಗ
     ಜೋತ್ಯಾಡತ್ತಿದ್ದು ಎಲ್ಲಾ."

ಮಾತು ಎತ್ತಿದರೆ ಸಾಕು, ಹೀಗೆ ನನ್ನ ಅಜ್ಜಿ ಹಳೆಯ ಚಿಂದಿಯ ಗಂಟನ್ನೇ ಬಿಚ್ಚುತ್ತಿದ್ದಳು. ಅಂತೆಯೇ ತಾನು ತಂದ ಬಳುವಳಿಯ ಎಮ್ಮೆಯ ಕಥೆಯನ್ನೂ ಹೇಳಿದ್ದಳು. ಎಮ್ಮೆಗೆ ಏನಾಗಿತ್ತೋ ಏನೋ ಆವತ್ತು ಬೆಳಿಗ್ಗೆಯಿಂದ ಒಂದೇ ಸಮನ ನರಹರಿದುಕೊಳ್ಳುವಂತೆ ವದರುತ್ತಿತ್ತು. ನನ್ನ ತಾಯಿ ಹಾಗೆ ಹೊಡೆದುಕೊಂಡು ಹೋಗಿದ್ದಳು.

"ಅಲ್ಲೆಲ್ಲ ಓಡ್ಯಾಡಿ ಬಿಟ್ತು, ನನಗೂ ಒಡ್ಯಾಸ್ತು

ಅದರ ಹಿಂದ ಹಿಂದ ಓಡ್ಯಾಡಿ

ನನ್ನ ಕಾಲೆಲ್ಲ ಹ್ವಾದು........

ಇದರ ಬಾಯಾಗ ಮಣ್ಣ ಹಾಕಲಿ......."

ಎಂದು ಅಜ್ಜಿಗೆ ಕೇಳುವ ಹಾಗೆ ಗೊಣಗುತ್ತಿದ್ದಳು ನಮ್ಮವ್ವ. ಜೊತೆಗೆ ಇದು "ಬೆದೆಗೆ ಬಿದ್ದಿದೆ" (ಗರ್ಭಧಾರಣೆಗೆ ಬಂದಿದೆ) ಎಂದು ಗುರುತಿಸದೇ ಇರಲಿಲ್ಲ.

ಬೆದೆಗೆ ಬಿದ್ದ ಎಮ್ಮೆಯ ಮೇಲೆ ಹಾರಿಸಲು ನಮ್ಮೂರಲ್ಲಿ ಕೋಣವಿರಲಿಲ್ಲ. ನಮ್ಮೂರಿನ ಪಕ್ಕದ ಎರಡು ಹಳ್ಳಿಗಳಲ್ಲಿ, ಅಂದರೆ ಕೊಂಟೋಜಿ ಮತ್ತು ಬಸರಕೋಡ ಎಂಬ ಹಳ್ಳಿಗಳಲ್ಲಿ ಎರಡು ಕೋಣಗಳಿದ್ದವು. ಈ ಕೋಣಗಳನ್ನು ಊರ ಪ್ರಮುಖರೇ ಸಾಕಿದ್ದರು. ಬಯಲು ಸೀಮೆಯಲ್ಲಿ ಕೋಣ ಸಾಕುವುದು ಎಂದರೆ ವ್ಯರ್ಥ. ಹೊಲಗಳಲ್ಲಿ ಹೂಡಲೂ ಬಾರದು. ಏಕೆಂದರೆ, ಬಿಸಿಲು ಸಹಿಸುವ ಸಾಮರ್ಥ್ಯ ಕೋಣಗಳಿಗೆ ಇರುತ್ತಿರಲಿಲ್ಲ. ಹೀಗಾಗಿ ಸಾಮಾನ್ಯ ಜನ ಕೋಣ ಸಾಕುತ್ತಿರಲಿಲ್ಲ. ಊರ ಗೌಡರು, ದೇಸಾಯಿಯವರಿಗೆ ಕೋಣ ಸಾಕುವುದು ಎಂದರೆ ಪ್ರತಿಷ್ಠೆಯೇ ಆಗಿತ್ತು. (ಇದಕ್ಕೆ ಅನುಗುಣವಾಗಿ ಒಂದು ಗಾದೆ ಮಾತು ಇದೆ : ಗೌಡರ ಕ್ವಾಣ ತಾನು ಹಾರಲಿಲ್ಲಂತ ಮಂದಿಗೂ ಹಾರಿಸಿಗೊಡಲಿಲ್ಲಂತ!) ಇವರುಸಾಕಿದ ಕೋಣಗಳ ಕೆಲಸವೆಂದರೆ, ಬೆದೆಗೆ ಬಿದ್ದ ಎಮ್ಮೆಯ ಮೇಲೆ ಹಾರುವುದು. ಕಾಲು ಕೆದರಿ "ಬುಸ್ಸು"ಗುಟ್ಟುವುದು. ಆ ಊರ ಎಮ್ಮೆಗಳ ರಾಜನಷ್ಟೇ ಆಗಿರದೇ ಆತ ಸುತ್ತಲೂರಿನ ಎಮ್ಮೆವ್ವಗಳ ಅರಸನೂ ಆಗಿರುತ್ತಿದ್ದ.

ಸಾಮಾನ್ಯವಾಗಿ ಊರಲ್ಲಿ ಹುಟ್ಟುವ ಕೋಣಗಳನ್ನೆಲ್ಲ ದ್ಯಾಮವ್ವ, ದುರುಗವ್ವ, ಮರಗವ್ವನಂತಹ ದೇವತೆಗಳೇ ನುಂಗುತ್ತಿದ್ದವು. ಇಲ್ಲವೇ ಕಸಾಯಿಖಾನೆಯ ಬಾಗಿಲಲ್ಲಿ "ಚರಮ ಗೀತೆ"ಯನ್ನು ಹಾಡುತ್ತಿದ್ದವು. ಹೀಗಾಗಿ ಎಮ್ಮೆಯ ಗಂಡು ಸಂತತಿಗೆ ಉಳಿಗಾಲವೇ ಇರಲಿಲ್ಲ. ಆದ್ದರಿಂದ ಗೌಡರ, ದೇಸಾಯಿಯರ ಕೋಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಬಸರಕೋಡಕ್ಕಿಂತ ಕೊಂಟೋಜಿ ನಮ್ಮೂರಿಗೆ ಹತ್ತಿರ. ಹೀಗಾಗಿ ಎಮ್ಮೆಯನ್ನು ಕೊಂಟೋಜಿಗೆ ಹೊಡೆದುಕೊಂಡು ಹೋಗುವುದು ಎಂದು ತೀರ್ಮಾನವಾಗಿತ್ತು. ಆದರೆ ಆಗಲೇ ಸಂಜೆಯಾಗಿತ್ತು. ಕೊಂಟೋಜಿ ತಲುಪುವುದರಲ್ಲಿಯೇ ರಾತ್ರಿಯಾಗುತ್ತದೆ, ರಾತ್ರಿ ಎಮ್ಮೆಯ ಮೇಲೆ ಕೋಣ ಬಿಡುವುದಿಲ್ಲ. ಆದ್ದರಿಂದ ಬೆಳಿಗ್ಗೆ ಹೋಗುವುದು ಎಂದು ತೀರ್ಮಾನವಾಯಿತು. ಈ ನಿರ್ಧಾರಗಳನ್ನೆಲ್ಲ ಆಸಕ್ತಿಯಿದ ಆಲಿಸುತ್ತಿದ್ದ ನಾನು, ಕೊಂಟೋಜಿಗೆ ಹೋಗುವ ಮನಸ್ಸು ಮಾಡಿದೆ. ಆದ್ದರಿಂದ ಅಜ್ಜಿ ಎಲ್ಲೆಲ್ಲಿ ಹೋಗುತ್ತಾಳೆಯೋ, ಅಲ್ಲೆಲ್ಲ ಬೆನ್ನು ಬಿಡದೆ ತಿರುಗತೊಡಗಿದೆ.
ನನ್ನದೊಂದು ಬಗೆಯ ಚಿಂತೆಯಾದರೆ, ಅಜ್ಜಿಯದು ಇನ್ನೊಂದು ಬಗೆಯ ಚಿಂತೆ. ಎಂದರೆ ಎಮ್ಮೆ ರಾತ್ರಿ ಮಲಗಿಕೊಂಡರೆ ಬೆದೆ ಹೊರಟು ಹೋಗುತ್ತದೆಯಲ್ಲಾ, ಅದಕ್ಕಾಗಿ ರಾತ್ರಿಯೆಲ್ಲಾ ಜಾಗರಣೆ ಮಾಡಬೇಕು ಎಂಬ ಚಿಂತೆ ಅಜ್ಜಿಗೆ ಅಡಸೋಗಿನ ಹಾಗೆ ನಾನು ಮಧ್ಯ ಪ್ರವೇಶಿಸಿ ಅಜ್ಜಿಗೆ ಸಹಾಯ ಮಾಡಲು ಹವಣಿಸುತ್ತಿದ್ದೆ.

"ಆಯಿ (ಅಜ್ಜಿ) ನೀ ಎಲ್ಲೆರ ಹೋಗಿ ಬರಂಗಿತ್ತಂದ್ರ
ಹೋಗಿ ಬಾ, ನಾನು ನೋಡತಿರ್ತಿನಿ"

ಎಂದು ಹೇಳುತ್ತಿದ್ದೆ.

"ಹಂಗಾರ ಎಮ್ಮಿ ಮಲಗಿದ್ರೆ ಹೊಡ್ಡ ಎಬ್ಬು"

ಎಂದು ಹೇಳಿ ಹೋಗುತ್ತಿದ್ದಳು. ಎಮ್ಮೆ ಮಲಗಿದಾಗ ನಾನು ಎಷ್ಟು ಹೊಡೆದರೂ ಏಳುತ್ತಲೇ ಇರಲಿಲ್ಲ. ಆ ಕಾರಣಕ್ಕಾಗಿ ಆ ಎಮ್ಮೆ ಮಲಗುವ ಮುನ್ನವೇ

"ಆಯಿ...... ಬೇss....... ಆಯಿs ಬಾರಬೇ......."

ಎಂದು ಗಟ್ಟಿಯಾಗಿ ಕಿರುಚುತ್ತಿದ್ದೆವು. (ಜೊತೆಗೆ ನನ್ನ ಸಹೋದರರೂ ಇರುತ್ತಿದ್ದರು). ನಮ್ಮ ಗಲಾಟೆಗೆ ಹೆದರಿ ಎಮ್ಮೆ ನೆಲಕ್ಕೆ ಮೈ ತಾಗಿಸುತ್ತಿರಲಿಲ್ಲ. ರಾತ್ರಿಯೆಲ್ಲಾ ಅಜ್ಜಿ ದನದ ಹಟ್ಟಿಯ ಕಂಬಕ್ಕೆ ಕುಳಿತು ಕಾಯುತ್ತಿದ್ದಳು. ನಾನು ಅಜ್ಜಿಯ ಸುತ್ತಲೂ ತಿರುಗಿ ಅಲ್ಲಿಯೇ ಅಜ್ಜಿಯ ಶರಗು ಹಿಡಿದುಕೊಂಡು ಮಲಗುತ್ತಿದೆ. ಏಕೆಂದರೆ ನಸುಕಿನಲ್ಲಿಯೇ ನನ್ನನ್ನು ಬಿಟ್ಟು ಹೊರಟು ಹೋದರೆ ಎಂಬ ಚಿಂತೆ.
ನಸುಕಿನಲ್ಲಿಯೇ ಪಯಣ ಆರಂಭವಾಯಿತು. ಅಜ್ಜಿ ಬೇಡವೆಂದು ಹೇಳಿದರೂ ಹಟಮಾಡಿ ಮನವೊಲಿಸಿದ್ದೆ. ಕೊಂಟೋಜಿ, ಬಸರಗೋಡ ಹಳ್ಳಿಗಳು ಸ್ವಲ್ಕು ದೂರವಿದ್ದರೂ, ಆ ಊರುಗಳು ನಮಗೇನು ಹೊಸವಲ್ಲ. ಅಲ್ಲಿಯ "ಜಾತ್ರೆ", "ಓಕುಳಿ" ಅತ್ಯಂತ ಹೆಸರಾದವು. ಜಾತ್ರೆಯ ಸಮಯದಲ್ಲಿ ಊಟ ಹಾಕುತ್ತಿದ್ದರು. ಆ ಊಟಗಳಿಗೆ ತಪ್ಪಿಸಿಕೊಳ್ಳದೆ ಅಜ್ಜಿಯೊಂದಿಗೆ ಹಾಜರಾಗುತ್ತಿದ್ದವು. ಹೀಗಾಗಿ ನಾನು ಆ ಹಳ್ಳಿಗಳವರೆಗೆ ನಡೆಯಬಲ್ಲೆ ಎಂದು, ಹಿಂದೆ ನಡೆದು ಹೋದ ಸಂದರ್ಭಗಳನೆಲ್ಲ ನೆನಪಿಸಿ ಒಪ್ಪಿಸಿದ್ದೆ.
ಕೊಂಟೋಜಿಗೆ ಹೋಗಲು ಡಾಂಬರು ರಸ್ತೆ ಇತ್ತು. ಬಸರಗೋಡಕ್ಕೆ ಅಂತಹ ರಸ್ತೆ ಇರಲಿಲ್ಲ. ಅದೊಂದು ಅದ್ಭುತ ರಸ್ತೆ ಚಕ್ಕಡಿಗಳು ಹೋಗಿ ಹೋಗಿ ಈ ಕಗ್ಗ ರಸ್ತೆಯಲ್ಲಿ ರೈಲು ಹಳಿ ಹಾಕಿದಂತೆ "ಕಾಚಾ" ಬಿದ್ದು ಹೋಗಿದ್ದವು. ಆ ತಗ್ಗಿನ ರೈಲು ರಸ್ತೆಯಲ್ಲಿ "ಪೌಡರ್" ನಂತಹ ಮಣ್ಣು. ಆ ಪೌಡರ್‌ನಲ್ಲಿ ಕಾಲಿಟ್ಟು ನಡೆಯುವುದು ಎಂದರೆ ಹಿಮದಲ್ಲಿ ನಡೆದಷ್ಟು ಸಂತೋಷ ಹೆಜ್ಜೆ ಹಾಕಿದಾಗ ಕಾಲ ಬೆರಳುಗಳ ಸಂದಿಯಿಂದ "ಪುತ್ತುಕ್ಕ್"ನೇ ಮಣ್ಣು ಹೊರಬರುತ್ತಿತ್ತು. ಬೆಳಗಿನ ಜಾವದಲ್ಲಿ ನಡೆದರಂತೂ ತಂಪಾಗಿ ಇನ್ನೂ ಹಿತವೆನಿಸುತ್ತಿತ್ತು. ಅಂತಹ ಬಸರಕೋಡ ರಸ್ತೆಯನ್ನು ಬಿಟ್ಟು ಡಾಂಬರ್ ರಸ್ತೆಯ ಮೇಲೆ ನಡೆಯುವುದೆಂದರೆ ನನಗೆ ಬೇಸರ. ಈ ಕಾರಣಕ್ಕೆ ನಾನು "ಬಸರಕೋಡಕ್ಕೆ ಹೋಗೋಣ" ಎಂದಾಗ, ಅಜ್ಜಿಗೂ ಅದು ದೂರಾದರೂ ಪರವಾಗಿಲ್ಲ ಬಸರಕೋಡಕ್ಕೆ ಹೋಗುವುದೇ ಒಳ್ಳೆಯದೆನಿಸಿತ್ತೋ ಏನೋ.

ಹೌದು ಅಲ್ಲಿ ಹೋಗುದು ಚಲೋ ಅನ್ಸತ್ತದ
ಆದ್ರ ಏನು ಮಾಡುದು.....
ಆ ಕುರಸಾಲ್ಯ ಏನು ಮಾಡ್ತಾನೋ ಏನೋ......

ಎಂದು ತನ್ನೊಳಗೆ ಒಟಗುಟ್ಟುತ್ತ ಕೊಂಟೋಜಿಯ ದಾರಿಯನ್ನೇ ತುಳಿಯತೊಡಗಿದಳು. ಊರು ದಾಟಿ ಡಾಂಬರ್ ರಸ್ತೆ ಸೇರಿದಾಗ, ಕೊಂಟೋಜಿಗೆ ಒಂದು ಚಕ್ಕಡಿ ಹೊರಟಿತ್ತು.

ಯಪ್ಪಾ, ಏ ಯಪ್ಪಾss..
ಸಣ್ಣ ಹುಡುಗೈತ್ಯ, ನಡ್ಯಾಕ ಆಗಂಗಿಲ್ಲ.
ಬ್ಯಾಡಂದ್ರು ಬೆನ್ನ ಹತ್ತಿ ಬಂದೈತಿ...... ಕೇಳಂಗಿಲ್ಲಿದು......
ಸ್ವಲ್ಪ ಹತ್ಸಗೊರ್ರಿಯಪ್ಪಾss.........

ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಳು. ಅಜ್ಜಿಯ ಜೊತೆಗೆ, ತಾಯಿಯ ಜೊತೆಗೆ ಹೊರಟರೆ, ಅಜ್ಜಿಯಾಗಲಿ, ತಾಯಿಯಾಗಲಿ ಈ ರೀತಿ ಕೇಳುವುದು ಮಾಮೂಲಿ ಮಾತುಗಳು. ಈ ಮಾತುಗಳು ಪ್ರಾರಂಭವಾದರೆ ಸಾಕು. ಆಗ ನಾನು ನಡೆದು ಸೋತು ಬಳಲಿ ಬೆಂಡಾದವನಂತೆ ಇಲ್ಲವೆ ಸುಟ್ಟ ಬದನೆಕಾಯಿಯಂತೆ ಮುಖ ಬಾಡಿಸುತ್ತಿದ್ದೆ. ಕೆಲವರು ಮನಕರಗಿ ಚಕ್ಕಡಿಯಲ್ಲಿ ಹತ್ತಿಸಿಕೊಂಡರೆ ಇನ್ನೂ ಕೆಲವರು (ನಾವು ಹರಿಜನರೆಂದು ಗೊತ್ತಿದ್ದವರು) ಇನ್ನೂ ಹೆಚ್ಚಿನ ರಭಸದಲ್ಲಿ ಚಕ್ಕಡಿಯನ್ನು ಓಡಿಸಿಕೊಂಡು ಹೋಗುತ್ತಿದ್ದರು. ಆದರೆ ಇಲ್ಲಿ ಹಾಗೇನಾಗಲಿಲ್ಲ. ಅಜ್ಜಿ ಕೇಳಿದಾಕ್ಷಣ ಆ ವ್ಯಕ್ತಿ ಕೂಡ್ರಿಸಲು ಹೇಳಿದ. ಮಾತು-ಕತೆಯೊಂದಿಗೆ ಕೊಂಟೋಜಿ ತಲುಪಿದೆವು.

ನಿನಗೆ ಪುಣ್ಯ ಬರಪ್ಪ/
ನನ್ನಂಗ ಗಸಾನs ಮೊಮ್ಮಕ್ಕಳ ಕಾಣ್ಹಾಂಗ
ಆ ದೇವರು ಮಾಡ್ಲಿ.......

ಎಂದು ಬ್ರಾಹ್ಮಣರಂತ ಹರಕೆ ಕೊಟ್ಟು ನನ್ನನ್ನು ಚಕ್ಕಡಿಯಿಂದ ಇಳಿಸಿಕೊಂಡಳು. ಆಗಲೇ ಬಿಸಿಲೇರಿತ್ತು. ಕೋಣದ ಮನೆಯವರ ಹಿತ್ತಲ ಬಾಗಿಲಿಗೆ ತಲುಪಿದೆವು. ನಾನು ಎಮ್ಮ ನೋಡುತ್ತ ನಿಂತೆ. ಅಜ್ಜಿ ಇನ್ನೊಂದು ಹೆಂಗಸಿನ ಜೊತೆಗೆ ಮಾತನಾಡುತ್ತಿದ್ದಳು.

"ಹಿಂಡಿ ಹತ್ತಿಕಾಳು ತಂದಿಯೇನಬೇ ಮುದಕಿ"
"ತಂದಿನ್ರಿಯವ್ವಾ"
"ಏಟ ತಂದೀ, ಉಡೇದಾಗ ಸ್ವಲ್ಪ ಕಾಣಾವಲ್ಲಾ?"
"ಇಲ್ಲಿಯವ್ವ, ಯಾಡ ಕಿಲೋ ಅದಾವರಿ"
"ಯಾರಗೆರ ಗಡ್ಕರಿ ಕರಕೊಂಡು ಬಂದಿ ಇಲ್ಲ?
ಇದೇನು ಇಟss ಹುಡುಗ್ಗ ಕರಕೊಂಡು ಬಂದಿಯಲ್ಲ
ಇವನ ಏನು ಎಮ್ಮಿ ಹಿಡಿ ಸೂರ!"
"ಇಲ್ಲರ್‍ರಿಯವ್ವಾ........ಅದೇನ ಹಿಡಿತದ
ನಾ ಅದಿನಲ್ಲ ರಿ ಹಿಡಿತೀನಿ...........
ನೀವೇನು ಬರೂದು ಬ್ಯಾಡ್ರಿ.......... ಕ್ವಾಣ ಬಿಡ್ರಿ......

ಅಷ್ಟರಲ್ಲಿಯೇ ಒಂದು ಗಂಡಸಿನ ಧ್ವನಿ ಹೊರಬಂತು, ಅಜ್ಜಿ ತನ್ನೊಳಗೇ ವಟಗುಟ್ಟತೊಡಗಿದಳು. ಬಂದವ, ಅಜ್ಜಿಯೊನ್ನೊಮ್ಮೆ ಎಮ್ಮೆಯನ್ನೊಮ್ಮೆ ನೋಡಿ ಆ ಹೆಂಗಸಿನೊಂದಿಗೆ ಏನೋ ಹೇಳುತ್ತ ಒಳಗೆ ಹೋದ. ಆಕೆಯೂ ಒಳಗೆ ಹೋದಳು. ಸ್ವಲ್ಪ ಸಮಯದ ನಂತರ ಆತ ಹೊರಬಂದ.

"ನಮಸಗಾರ್‍ರಿಯಪ್ಪಾ -ಎಂದಳು ಅಜ್ಜಿ.

ಅಲ್ಲವ್ವಾ ಮುದುಕಿ ನಿನಗ ಈ ಮೊದಲೊಮ್ಮೆ ಬಂದಾಗ ಹೇಳಿದ್ದಿಲ್ಲ ಕ್ಯಾಣದ ಬೀಜಾ ಒಡಸಿವಿ,

ಅದು ಎಮ್ಮಿ ಮ್ಯಾಲಿ ಬಿಡುದಿಲ್ಲ, ಮಟ್ಟಿಗಿ ಹಚ್ಚಿವಿ ಅಂತ ಹೇಳಿಲ್ಲಾ"

ಎಂದ. ಅಜ್ಜಿ ಯಾವ ಪರಿಯಲ್ಲಿ ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಅಜ್ಜಿಯ ಬಾಯಿ ಬೊಂಬಾಯಿ ಆಯಿತು. ಎಮ್ಮೆಯ ಹಗ್ಗವನ್ನೂ ನನ್ನಿಂದ ಕಸಿದು ಕೊಂಡವಳೇ, ಬಡಿಗೆಯಿಂದ ಎಮ್ಮೆಯ ಡುಬ್ಬಕ್ಕೆ ಹೇರಿದಳು. ಬೆದರಿದ ಎಮ್ಮೆ ಜಗ್ಗಾಡತೊಡಗಿತು. "ಹ್ವಾ...... ಹ್ವಾಂ............ ಎಂದು ಧ್ವನಿ ಮಾಡತೊಡಗಿತು ಎಮ್ಮೆ, ಅದಕ್ಕೆ ಪ್ರತ್ಯುತ್ತರವಾಗಿ ಒಳಗಿನ ಕೋಣವು "ಆ೦...... ಅಂ......" ಎಂದು ಸಂಭಾಷಣೆ ಆರಂಭಿಸಿತು ! ಆತ ಬಾಗಿಲು ಮುಚ್ಚಿಕೊಂಡು ಆಗಲೇ ಹೊರಟು ಹೋಗಿದ್ದ. ಎಮ್ಮೆ ಜಗ್ಗಾಡಿದರೂ, ಮಿಸುಕದ ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಮತ್ತೊಂದು ಹೇರಿದಳು ಎಮ್ಮೆಗೆ, ಎಮ್ಮೆ ಓಡತೊಡಗಿತು. ಅದರ ರಭಸಕ್ಕೆ ಅಜ್ಜಿಯೂ ಓಡತೊಡಗಿದಳು. ತಲೆ ಬಾಗಿಲಿಗೆ ಬಂದ ಕೋಣ ಸಾಕಿದ ಆ ಮನೆಯ ಜನ, ಅಜ್ಜಿ ಓಡುವುದನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದರು. ಅಜ್ಜಿಯ ಬಾಯಿ ಎಮ್ಮೆಯ ಬಾಯಿ ಒಂದೇ ಆಗಿತ್ತು. ನನ್ನನ್ನೂ ಬಿಟ್ಟು ಓಡಿ ಹೊರಟಿದ್ದರಿಂದ, ನಾನು ಹೆದರಿ ಅಳತೊಡಗಿದೆ. ಅಜ್ಜಿ ನನಗೆ "ಬಾ" ಎಂದು ಕೈ ಮಾಡಿ ಕರೆಯುತ್ತ ಎಮ್ಮಯ ಹಿಂದೆ ಓಡುತ್ತಲೇ ಇದ್ದಳು. ನಾನು ಡಾಂಬರ್ ರಸ್ತೆ ಬಂದು ತಲುಪಿದಾಗ, ಅಜ್ಜಿಯ ಬಾಯಿ, ಎಮ್ಮೆಯ ಓಟ ಎರಡೂ ನಿಧಾನವಾಗಿದ್ದವು. ನನ್ನನ್ನ ಕಂಡಾಕ್ಷಣವೇ ರೇಗ ತೊಡಗಿದಳು:

"ಬರಬ್ಯಾಡ ಅಂತ ಹೇಳದ್ಯಾ....... ಕೇಳದ್ಯಾ?
ಎಲ್ಲ ಬಿಟ್ಟು ಉಂಡಿ ತಿನ್ಯಾಕ ಹೊಕ್ಕಾಳೋ ಅನ್ನಂಗ
ಓಡೋಡಿ ಬೆನ್ನತ್ತಿ ಬರ್ತಿ.
ಬಾ ಓಡಿ ಬಾ... ಯಾಕ ಅಳತಿ ಸುಮಕss......."
ನಂತರದಲ್ಲಿ ಅಜ್ಜಿಯೇ ತನ್ನ ಧ್ವನಿಯನ್ನು ಬದಲಾಯಿಸಿಕೊಂಡು ರಮಿಸಿದಳು.

ಅಜ್ಜಿಯ ತಲೆಯಲ್ಲಿ ಈಗ ಬೇರೆಯದೇ ಚಿಂತೆ. ನೇರ ನಮ್ಮೂರಿಗೆ ಹೋಗಿ ಪುನಃ ಬಸರಕೋಡಕ್ಕೆ ಹೋಗುವುದಾದರೆ ಹೆಚ್ಚಿನ ತಿರುಗಾಟ, ಕುಂಟೋಜಿಯಿಂದಲೇ ಬಸರಕೋಡಕ್ಕೆ ಹೊರಟರೆ ಹೊಟ್ಟೆಯ ಪಾಡು? ಆಗಲೇ ಸೂರ್ಯ ನೆತ್ತಿಯ ಮೇಲೆ ಬರುವ ಸಮಯವಾಗಿತ್ತು. ಆದರೆ ಅಜ್ಜಿ ನೇರ ನನಗೆ ಮನೆಗೆ ಹೋಗಲು ಹೇಳಿದರೂ ನಾನು ಒಪ್ಪಲಿಲ್ಲ. ನನಗೆ ಹಸಿವೆ ಇಲ್ಲ. ನಿನ್ನೊಟ್ಟಿಗೆ ಬರುವೆ, ನಡೆಯುವೆ ಎಂದು ಭರವಸೆಯನ್ನೂ ಕೊಟ್ಟೆ.

ಪಯಣ ಸಾಗಿತು. ಬಿಸಿಲಿಗೆ ಕಾಲು ಸುಡಲು ಪ್ರಾರಂಭವಾದವು. ಅದರಲ್ಲೂ ಡಾಂಬರ್ ರಸ್ತೆ ಬೇರೆ. ಚಕ್ಕಡಿಯ ರಸ್ತೆಗೆ ಬಂದು ಸೇರಿದೆವು. ಅಜ್ಜಿ ತನ್ನ ಕಾಲಲ್ಲಿಯ ಚಪ್ಪಲಿಗಳನ್ನು ತೆಗೆದು ನನಗೆ ಕೊಟ್ಟಿದ್ದಳು. ಅಜ್ಜಿಯ ಕಾಲಲ್ಲಿ ಕೆಲವು ಬಾರಿ ಬೇರೆ ಬೇರೆ ಜಾತಿಯ ಚಪ್ಪಲಿಗಳು ಇರುತ್ತಿದ್ದವು. ಎಂದರೆ, ಎಡಗಾಲಲ್ಲಿ ಇರುವ ಚಪ್ಪಲಿಯೇ ಬೇರೆ, ಬಲಗಾಲಲ್ಲಿ ಇರುವ ಚಪ್ಪಲಿಯೇ ಬೇರೆ. ಆದರೆ ನಾನು ಕಾಲಲ್ಲಿ ತೊಡುವ ಆ ಸಂದರ್ಭದಲ್ಲಿ ಒಂದು ಹೆಚ್ಚು ದಪ್ಪನೆಯ, ಇನ್ನೊಂದು ತೆಳ್ಳನೆಯ ಚಪ್ಪಲಿಯಾಗಿತ್ತು. ಅಜ್ಜಿಯ ಕಾಲುಗಳು ಮೊದಲೆ ದೊಡ್ಡವು. ನನ್ನ ಕಾಲು ಅವಳ ಕಾಲಿನ ಅರ್ಧ ಕಾಲೂ ಆಗುತ್ತಿರಲಿಲ್ಲ. ಆ ಚಪ್ಪಲಿಗಳನ್ನು ಹಾಕಿಕೊಂಡು ಹೊರಟರೆ, "ಟರ್ ಬರ್ ...... ಟರ್ ಬರ್" ಎಂಬ ಸದ್ದು ಬರುವುದರ ಜೊತೆಗೆ ಉಗಿಬಂಡಿಯಂತೆ ಧೂಳೂ ಏಳುತ್ತಿತ್ತು. ನನಗೆ ಕುದುರೆಯ ಹಾಗೆ ಕುಂಟುತ್ತ ನಡೆದ ಹಾಗೆ ಆಗುತ್ತಿತ್ತು. ಆದರೆ ಬಹಳ ಹೊತ್ತು ಆ ಚಪ್ಪಲಿಗಳನ್ನು ಹಾಕಿಕೊಂಡು ನಡೆಯಲಾಗುತ್ತಿರಲಿಲ್ಲ. ಅಜ್ಜಿಯ ಚಪ್ಪಲಿಗಳನ್ನು ತೊಟ್ಟಿದ್ದು ಅದೇ ಮೊದಲ ಬಾರಿಯೂ ಆಗಿರಲಿಲ್ಲ. ಹೊಲದ ಬದುವು ದಾಟುವಾಗ, ಮುಳ್ಳಿರುವ ಸ್ಥಳ ಬಂದಾಗ ಮಾತ್ರ, ಈ ಚಪ್ಪಲಿಗಳು ಕಾಲಲ್ಲಿ ಬರುತ್ತಿದ್ದವು. ಇನ್ನುಳಿದ ಸಮಯದಲ್ಲಿ ಕೈಯಲ್ಲಿಯೇ ಹಿಡಿದುಕೊಂಡು ನಡೆಯುವುದು ರೂಢಿಯಾಗಿತ್ತು.

ಬಸರಕೋಡ ಸಮೀಪಿಸುತ್ತಿದ್ದಂತೆ, ಊರ ದನಗಳು ಹಾಳು ಹೊಲದಲ್ಲಿ ಗುಡ್ಡದಲ್ಲಿ ಮೇಯುತ್ತಿದ್ದವು. ಈ ದನಗಳಲ್ಲಿ ಒಂದು ಎಮ್ಮ ಏನೆಂದು ಕರೆಯಿತೋ ಯಾರಿಗೆ ಗೊತ್ತು? ಅದರ ಧ್ವನಿ ಕೇಳಿದಾಕ್ಷಣ ನಮ್ಮ ಎಮ್ಮೆ ಕೊಸರಿಕೊಂಡು ಓಡಿದ್ದೇ ಓಡಿದ್ದು; ಅಜ್ಜಿ ಅದರ ಹಿಂದೆಯೇ ಇದ್ದಳು. ಅಜ್ಜಿಯಿಂದ ಸುಮಾರು ದೂರ ನಾನು.

ಅಜ್ಜಿ ನನ್ನಿಂದ ದೂರವಾದಂತೆ, ನನ್ನ ದುಃಖ ಏರುತ್ತ, ಧ್ವನಿ ಸಹಿತವಾಗಿ ಅಳುವು ಹೊರಬರುತ್ತಿತ್ತು. ಅಜ್ಜಿಯನ್ನು ಕಳೆದುಕೊಳ್ಳುತ್ತೇನೆ ಎನ್ನುವ ಸಂಕಟದಲ್ಲಿ ಮುಳ್ಳಿನ ಸ್ಥಳವಿದ್ದರೂ, ಕೈಯಲ್ಲಿಯ ಚಪ್ಪಲಿಗಳು ಕಾಲಿಗೆ ಬರುತ್ತಿರಲಿಲ್ಲ. ಮುಳ್ಳು ನೆಟ್ಟಾಗ ಅಳುವು ಇಮ್ಮಡಿಯಾಗುತ್ತಿತ್ತು. ಅಜ್ಜಿ ಬಯಸಿದ್ದೇ ಒಂದು, ಆದದ್ದು ಇನ್ನೊಂದು. ಎಮ್ಮೆ ಓಡಿ ಹೋದದ್ದು ಅವಳಿಗೇನು ಬೇಸರವಿರಲಿಲ್ಲ. ಆ ದನಗಳ ಹಿಂಡಲ್ಲಿ ಕೋಣವಿರಬಹುದೆಂದು ಅವಳ ನಂಬಿಕೆ. ಆದರೆ ಅವಳ ನಂಬಿಕೆ ಸುಳ್ಳಾದಾಗ ನಿರಾಶೆಯಾಯಿತು.

ದೇಸಾಯಿಯರ ಮನೆಯ ಹಿತ್ತಲ ಬಾಗಿಲಿಗೆ ಎಮ್ಮೆಯೊಂದಿಗೆ ನಾವು ಬಂದು ನಿಂತೆವು. ಆದರೆ ಅಲ್ಲಿಯೂ ಆಳರಸರ ರಾಜಕೀಯವೇ ಅಧಿಕವಾಗಿತ್ತೆಂದು ತೋರುತ್ತದೆ. ಹೀಗಾಗಿ ಕುಂಟೋಜಿಯಲ್ಲಾದ ಹಾಗೇ ಇಲ್ಲಿಯೂ ಆಯಿತು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಎಮ್ಮೆಯೊಂದಿಗೆ ನಮ್ಮೂರಿಗೆ ಹೊರಡಲು ಪಯಾಣ ಪ್ರಾರಂಭವಾಯತು. ಅಲ್ಲಿ ಅಜ್ಜಿಗೆ ಯಾರೋ ಒಬ್ಬರು, ಏನೋ ಹೇಳಿದರೆಂದು ತೋರುತ್ತದೆ. ಅಲ್ಲಿಂದ ನಾವು ಹೊರಡುವ ದಾರಿಯ ದಿಕ್ಕೇ ಬದಲಾಯಿತು. ಅದು ದೇಸಾಯಿಯವರ ತೋಟದ ದಾರಿ. ಸ್ವಲ್ಪು ನಡೆದು ಒಂದೆಡೆ ಕಾಯುತ್ತ ಕುಳಿತೆವು. ನಮ್ಮಲ್ಲಿಯೇ ಪ್ರಶ್ನೊತ್ತರಗಳು ನಡೆದಿದ್ದವು. ಬೆಳಕು ನಂದುತ್ತಿತ್ತು. ಕತ್ತಲೆ ಆವರಿಸುತ್ತಿತ್ತು. ಊರ ದನಗಳೆಲ್ಲ ಮನೆಗೆ ಹೋಗುತ್ತಿದ್ದವು. ಆಗ ದೇಸಾಯಿಯವರ ದನಗಳೆಲ್ಲ ಮನೆಯಿಂದ ತೋಟಕ್ಕೆ ಹೊರಟಿರಬೇಕು. ದನಗಳೆಲ್ಲ ನಾವು ಕುಳಿತ ಸ್ಥಳವನ್ನೂ ಮೀರಿ ಮುಂದಕ್ಕೆ ಹೋದವು. ಆಗಲೇ ಎಮ್ಮೆವ್ವಳ ತಳಮಳ, ಎಳೆದಾಟ ಪ್ರಾರಂಭವಾಗಿದ್ದವು. ಆ ದನಗಳಲ್ಲಿ ಇದ್ದ ಕೋಣ ಸಂಭಾಷಣೆಗೆ ಇಳಿಯಿತು. ಕೋಣವು ಹಗ್ಗ ಕಟ್ಟಿ ಹಿಡಿದುಕೊಂಡು ಹೋಗುವವನಿಂದ ಬಿಡಿಸಿಕೊಳ್ಳಲು ಹವಣಿಸುತ್ತಿತ್ತು. ಅಜ್ಜಿ ನಿಂತಲ್ಲಿಯೇ ಬಾಯಿ ಬಡಿಯತೊಡಗಿದಳು. ನಮ್ಮ ಎಮ್ಮೆ ಇದ್ದಕ್ಕಿದ್ದಂತೆ ಓಟಕೊಟ್ಟಿತು. ಆಗ ಅಜ್ಜಿಯ ಬಾಯಿ ಇನ್ನೂ ಜೋರಾಯಿತು. ಆತ ಅಜ್ಜಿಯನ್ನೊಮ್ಮೆ ತಮ್ಮ ದನಗಳನ್ನೊಮ್ಮೆ ನೋಡುತ್ತಿದ್ದ. ಆಗಲೇ ಆ ಯುವಕನ ಕೈಯಿಂದ ಕೋಣ ಜಾರಿಕೊಂಡಿತ್ತು.

ಮತ್ತೆ ನನ್ನ ಅಳುವಿನ ಧ್ವನಿಯನ್ನು ಗ್ರಹಿಸಿದ ಅಜ್ಜಿ, ಹಿಂದಿನ ಧ್ವನಿಗಿಂತ ತೀರ ಭಿನ್ನವಾಗಿಯೇ ರಮಿಸಿದಳು. ಬಹುಶಃ ಅಜ್ಜಿ ಬೇಕೆಂದೇ ಎಮ್ಮೆಯನ್ನೂ ಬಿಟ್ಟಿದ್ದಿರಲೂ ಸಾಕು, ಎಮ್ಮೆ ಮುಂದೆ ಮುಂದೆ ಓಡುತ್ತಿತ್ತು. ಯುವಕನ ಕೈಯಿಂದ ತಪ್ಪಿಸಿಕೊಂಡ ಕೋಣ ಅದೇ ವೇಗದಲ್ಲಿಯೇ ಪಲಾಯನ ಮಾಡುತ್ತಿತ್ತು. ಎತ್ತಿನ ಹಿಂದೆ ಇದ್ದ ಯುವಕನಿಗೆ ಇನ್ನುಳಿದ ದನಗಳನ್ನು ಬಿಟ್ಟು ಕೋಣದ ಬೆನ್ನಟ್ಟಿಕೊಂಡು ಓಡುವ ಮನಸ್ಸಾಗಿರಲಿಕ್ಕಿಲ್ಲ. ನಂತರದಲ್ಲಿ ಬಂದ ವ್ಯಕ್ತಿ ಕೆಲ ಸಮಯ ಹಿಂಬಾಲಿಸಿದ, ಪ್ರಯೋಜನವಾಗದೆ ಹೋದಾಗ ಅಜ್ಜಿಯನ್ನು ದುರುಗುಟ್ಟಿಕೊಂಡು ನೋಡತೊಡಗಿದನು.

ಕತ್ತಲಾಗುತ್ತಿದ್ದರೂ ಎಮ್ಮೆಯ ಹುಡುಕಾಟಕ್ಕೆಂದು, ದೇಸಾಯಿಯವರ ತೋಟಕ್ಕೆ ಮತ್ತು ಮನೆಗೆ ಪ್ರದಕ್ಷಿಣೆಯನ್ನು ಹಾಕಿದೆವು. ಎಮ್ಮೆ ಸಿಗಲಿಲ್ಲ. ಎಲ್ಲಿ ಹೋಯಿತು ಎನ್ನುವುದೂ ಗೊತ್ತಾಗಲಿಲ್ಲ. ಸಿಗುವ ಲಕ್ಷಣಗಳೂ ಕಾಣದೇ ಹೋದಾಗ, ಕಾಲೆಳೆಯುತ್ತ, ನಿರಾಶೆಯ ಉಸಿರಿನ ಭಾರ ಹೊತ್ತು ಮನೆಗೆ ತಲುಪಿದೆವು. ಬೆಳಿಗ್ಗೆ ಎದ್ದು ನೋಡಿದರೆ ನಮ್ಮ ಮನೆಯ ಹಿತ್ತಲಲ್ಲಿ ದೇಸಾಯಿಯವರ ಕೋಣ ಮತ್ತು ನಮ್ಮ ಎಮ್ಮೆ ಎರಡೂ ಬಂದು ನಿಂತಿವೆ!

ವಿಶ್ವಾಮಿತ್ರ ಸೃಷ್ಟಿಯ ಈ ಜೀವಿಗಳಿಗೂ ಸಹಜವಾಗಿ ಸೇರಲು ಅವಕಾಶ ಕೊಡದ ಈ ಸಮಾಜ, ಪರಸ್ಪರ ಜನರನ್ನೂ, ಪ್ರೇಮಿಗಳನ್ನೂ ಸೇರಲು ಹೇಗೆ ತಾನೇ ಅವಕಾಶ ಕೊಟ್ಟಿತು? ಆದ್ದರಿಂದಲೇ, ಮಾರಮ್ಮದೇವಿ ಮತ್ತು ಕೋಣನಂತಹ ಕಥೆ ಬೆಳೆದು ನಿಂತಿವೆ.

ಕರಿಯ ಬೆಕ್ಕು ಬೆಳ್ಳಗಾಗಲಿಲ್ಲ


ಕರಿಯ ಬೆಕ್ಕನ್ನು ಬಿಳಿಯದಾಗಿಸುವ ಬೀರಬಲ್ಲನ ಕಥೆ ಗೊತ್ತಿರಬೇಕಲ್ಲವೇ? ಅಂತಹದೇ ಒಂದು ಸಂದರ್ಭ. ಅದು, ನನ್ನ ತಾಯಿಯ ಸಾಹಸವೋ, ಹುಚ್ಚುತನವೋ, ಪ್ರೀತಿಯೋ ಏನೆಂದು ಕರೆಯಬೇಕು, ಸ್ಪಷ್ಟವಾಗುತ್ತಿಲ್ಲ.

ಈಗಲೂ ನನ್ನ ಮನೆಗೆ ಬಂದವರೆಲ್ಲ, ಒಮ್ಮೆ ನನ್ನ ಮುಖ ಮತ್ತೊಮ್ಮೆ ನನ್ನವ್ವನ ಮುಖ ನೋಡಿ ಅವಕ್ಕಾಗಿ ಪಿಳಿ ಪಿಳಿ ಕಣ್ಣು ಬಿಡುತ್ತಾರೆ. ಅಂತಹ ಹಾಲುಗೆನ್ನೆಯ ಬಣ್ಣ ನನ್ನ ತಾಯಿಯದು. ಆ ರೂಪ, ಬಣ್ಣದ ಶ್ರೀಮಂತಿಕೆ ನನ್ನಲ್ಲಿ ಏಕಿಲ್ಲ? ಎನ್ನುವುದು ಅವರ ಅಂತರಂಗದ ಪ್ರಶ್ನೆ. ಕೆಲವರು ಮನ ಬಿಚ್ಚಿ ಕೇಳಿ ತೃಪ್ತಿಪಟ್ಟರೆ, ಇನ್ನೂ ಕೆಲವರು ಕೇಳಲಾಗದೆ ಉಗುಳು ನುಂಗಿಕೊಂಡು ಹಾಗೆಯೇ ಹೋಗಿದ್ದಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

ನನಗಿಲ್ಲಿ ಅಡಿಗರ ಕವನದ ಸಾಲುಗಳು ನೆನಪಾಗುತ್ತಿವೆ.

ಕರೆಯುತ್ತಿವೆ ಹಿಮಗಿರಿಯ ಕಂದರ
ಬಂದೆಯಾ ಮಗು ಬಂದೆಯಾ.....
..............
ಗಿರಿಯ ಕಂದರ
ಕಂ....... ದ....... .......
ದ........ ರ........
ರ.........

ಅದೊಂದು ಕಂದರ, ಒಣಕಲ್ಲು ಬೆಟ್ಟ ಗುಡ್ಡಗಳಿಂದ ಕೂಡಿದ ಭಂವಾರಗಳ ಕಣಿವೆ. ಭಂವಾರದ ಬೀಡು, ಕಣಿವೆಯ ಕಾಡು, ಕಾಲಿಟ್ಟರೆ ಜೀನಿ ಜಾಲಿಗಳ ಮುಳ್ಳು, ಹಕ್ಕಿ, ಹಾವು, ಹುಳು ಕೀಟಗಳಿಂದ ಆವರಿಸಿದ ಭೀಕರ ಆದರೂ ಸೌಂದರ್ಯದ ಸೊಬಗಿನ ಸ್ಥಳ. ಇದರ ಬದಿಗೆ ಪ್ರದರ್ಶನಕ್ಕೆಂದು ಮಾಡಿಟ್ಟ ಹಾಗೆ ಕಾಣುವ ಕಂದಕ. ಆ ಕಂದಕದಿಂದ ಕಲರವ ಹರಿವ ನೀರಿನ ನಾದದೊಂದಿಗೆ ಚಿಲಿಪಿಲಿ ಹಕ್ಕಿಗಳ ಹಾಡು. ಹರಿವ ನೀರು ಎಂದೆನಲ್ಲವೇ? ಅದೇನು ದಬದಬನೆ ಬೀಳುವ ಜಲಪಾತದ ನೀರಲ್ಲ. ಎಲ್ಲಿಂದಲೋ ಹರಿದು ಬರುವ ನೀರದು. ಒಡೆದ ಒಗಟಂತೆ ಇದ್ದುದು. ಆ ಕಂದಕಕ್ಕೆ ನೀರು ಹರಿದು ಹೋಗಲು ಐದು ಕಮಾನುಗಳು, ಕಮಾನಿನ ಹಾಸುಬಂಡೆಗಳೆಲ್ಲ ಹಸಿರು ಪಾಚಿಗಳಿಂದ ಜೊಂಡುಗಟ್ಟಿದ್ದವು. ಹಾಸು ಬಂಡೆಗಳ ಮೇಲೆ ಕಾಲಿಡಬೇಕಾದರೆ ಮೈ ತುಂಬ ಕಣ್ಣಿರಬೇಕು. ದೇಹ ಕಡ್ಡಿಯಂತೆ ಸೆಟೆದು ಸಮತೋಲನದಲ್ಲಿರಬೇಕು, ಆಯ ತಪ್ಪಿದರೆ ಸಾಕು ಹಲ್ಲುಗಳೆಲ್ಲ ಕೈಯಲ್ಲಿಯೇ. ಅನಂತರ ನಡು ಕೈ ಕಾಲುಗಳಿಗೆ ಮೂರು ದಿನಗಳ ತನಕ ಉಸುಕಿನಿಂದ ಕಾವು ಕೊಡಬೇಕು.

ಕಂದಕದ ಒಳಗೆ, ಕಮಾನಿನ ಮುಂದೆ ಸ್ವಲ್ಪ ಬಯಲಾದ ಹಾಸು ಬಂಡೆಗಳ ಸ್ಥಳ. ಅಲ್ಲಿ ನಮ್ಮ ಜನತೆ ಬಟ್ಟೆ ತೊಳೆಯುವುದಕ್ಕಾಗಿ ಹೋಗುತ್ತಿದ್ದರು. ಅಂತೆಯೇ ನನ್ನ ತಾಯಿಯೂ ಕೂಡಾ. ಆಗ ಹೋಗುವವರ ಬೆನ್ನು ಹತ್ತಿ ತಿರುಗುವುದೊಂದು ಚಟ ನನಗೆ. ಬೇಡವೆಂದರೂ ಹಟ ಮಾಡಿ ಪೆಟ್ಟು ತಿಂದರೂ ಸರಿ, ಸಿಟ್ಟೂ ಮಾಡಿದರೂ ಸರಿ ಬಾಲ ಮಾತ್ರ ಬಿಡುತ್ತಿರಲಿಲ್ಲ.

ನನ್ನ ದಲಿತ ಕೇರಿಯ ಜನ ಬಟ್ಟೆ ತೊಳೆಯುವುದಕ್ಕಾಗಿ ಹೋಗುವ ಸ್ಥಳಗಳು ಮೂರು. ಒಂದು ನಮ್ಮೂರ ಕೆರೆ, ಈ ಕೆರೆಗೆ ಐದು ಕಡೆಗಳಲ್ಲಿ ಬಟ್ಟೆ ತೊಳೆಯುವ ಕಲ್ಲುಗಳನ್ನು ಹಾಕಲಾಗಿದೆ. ಒಂದೊಂದು ಭಾಗದ ಒಗೆಕಲ್ಲುಗಳಿಗೆ ಒಂದೊಂದು ಸಮಾಜದ ಜನಗುತ್ತಿಗೆ ಹಿಡಿದಂತೆ ಪದ್ಧತಿ. ನಮ್ಮ ಕೇರಿಯ ಜನರಲ್ಲಿ ನಮ್ಮ ಮನೆಯವರೇ ಮೊದಲ ಬಾರಿಗೆ ಊರ ಕೆರೆಯಲ್ಲಿ ಬಟ್ಟೆಯನ್ನು ತೊಳೆಯುವ ಸಾಹಸ ಮಾಡಿದವರು. ಈಗಲೂ ಕೆಲ ಜಾತಿಯ ಜನ ಅಲ್ಲಿಗೆ ಬಟ್ಟೆ ತೊಳೆಯಲು ಹೋಗುವುದಿಲ್ಲವೆಂದರೆ ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ವಸ್ತು ಸ್ಥಿತಿ ಹಾಗೇ ಇದೆ. ನಜೀರ ಸಾಬರು ಹಾಕಿಸಿದ ಕೊಳವೆ ಬಾವಿಗಳು ಈ ಸ್ಥಿತಿಗೆ ಸಹಕರಿಸಿವೆ.

ನನ್ನವ್ವೆಯರು ಕೆರೆಗೆ ಬಟ್ಟೆ ತೊಳೆಯಲು ಒಟ್ಟಾಗಿಯೇ ಹೋಗುತ್ತಿದ್ದರು. ಜೊತೆಗೆ ಪಕ್ಕದ ಎರಡು ಮೂರು ಮನೆಯ ಹೆಂಗಸರನ್ನೂಕರೆದುಕೊಂಡು ಹೋಗುತ್ತಿದ್ದರು. ಒಂದು ರೀತಿಯಲ್ಲಿ ಇದು ಸೈನ್ಶ ಕಟ್ಟುವ ಪದ್ಧತಿ. ಯಾರಾದರೂ ಮೇಲು ಜಾತಿಯ ಜನ ಒಬ್ಬರು. ಕದನಕ್ಕೆ ಬಂದರೆ ಸಾಕು, ಕೇರಿಯ ಎಲ್ಲಾ ಬಾಯಿಗಳೂ ಒಂದುಗೂಡಿಬಿಡುತ್ತಿದ್ದವು. ಮೇಲು ಜಾತಿಯವರೋ ಜಾತಿಯ ಹೆಸರು ಹೇಳಿ ಗುರುತಿಸಿ ಹಾವು ಕಂಡಂತೆ ಹೆದರಿ ಮುಖ ಕಿವುಚಿ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು.

"ಊರ ಹೊರಾಗ ಕೊಳ್ಳಾದ, ಗರಸಿನ ತಗ್ಗದ
ಅಲ್ಲಗಿ ಹೋಗಬಾಡ್ದ? ಇಲ್ಲ್ಯಾಕ ಬರಬೇಕು?
ಏನು ದೊಡ್ಡ ಜಾತಿಯವರಂಗ ಕೆರಿಗಿ ಬರ್ತಾವು......."

ಹೀಗೆ ಮಾತನಾಡಿಕೊಳ್ಳುವವರೇನು ತೀರ ಮೇಲು ಜಾತಿಯವರೇನಲ್ಲ. ಇವರೂ ಮಾಂಸಾಹಾರಿಗಳೇ.

ಮೇ. ಜಾ.: ನಿಮ್ಮದರ ಏನು ದೊಡ್ಡ ಜಾತಿ? ದನ ತಿನ್ನು ಜಾತಿ!
ಕೆ. ಜಾ. : ನಿಮ್ಮದರ ಏನು? ದೊಡ್ಡ ಜಾತಿ? ಸತ್ತಿದ್ದ ತಿನ್ನು ಜಾತಿ?

ಇಂಥ ಮಾತಿನ ನಡುವೆ ಅವರವರ ಗೌಪ್ಯದ ರಾಸಲೀಲೆಯ ಕಥೆಗಳು ಹೊರಬಂದು, ಅವರ ಕೂದಲು ಇವರ ಕೈಗೆ ಇವರ ಕೂದಲು ಅವರ ಕೈಗೆ. ಕೊನೆಯಲ್ಲಿ ಗಂಗಾನದಿಯಲ್ಲಿ ಮಿಂದು ಪಾವನವಾದವರಂತೆ ಕೆರೆಯಲ್ಲಿ ಮುಳುಗಿ ಹೊರಬರುತ್ತಿದ್ದರು.

ಇಷ್ಟೆಲ್ಲ ಕದನವಾದಾಗಲೂ ಒಗೆ ಗಲ್ಲು ಬಿಡುವುದಾದರೂ ಎಂತಹದ್ದು! ಕೊನೆಯ ಭಾಗದ ಕಲ್ಲು ಮಾತ್ರ. ಒಂದು ವೇಳೆ ಇಬ್ಬರು ಬಟ್ಟೆ ತೊಳೆಯುವ ಕೆಲಸ ಮುಗಿದು ಹೊರಬಂದರೆ ಕೊನೆಯಲ್ಲಿದ್ದ ಮಹಾನುಭಾವರು ಮಧ್ಯದ ಕಲ್ಲುಗಳಿಗೆ ಬಂದು ಕೊನೆಯ ಕಲ್ಲು ಬಿಟ್ಟಿಕೊಡುವ ವಾಡಿಕೆ. ಒಗೆಕಲ್ಲು ಬಿಟ್ಟು ಬರುವಾಗ ಅದನ್ನು ಆಲುಗಾಡುವಂತೆ, ಒಗೆಯಲು ಬಾರದಂತೆ ಅಭದ್ರಮಾಡಿ ಬಿಟ್ಟುಕೊಡುವ ಕೃಪೆಯೂ ತೋರುತ್ತಿದ್ದರು. ಬಟ್ಟೆ ತೊಳೆಯುವಾಗ ಸ್ವಲ್ಪ ನೀರು ಸಿಡಿದರೆ ಸಾಕು ಬಾಯಿ ಬೊಂಬಾಯಿಯಾಗುತ್ತಿತ್ತು. ನನ್ನವ್ವಯರೇನು (ನನ ತಾಯಿ, ಚಿಕ್ಕಮ್ಮ, ದೊಡ್ಡಮ್ಮ) ಮೌನ ಸಂಪನ್ನೆಯರಲ್ಲ. ಅವರು ಕಡ್ಡಿ ಗೀರುವುದನ್ನೇ ಕಾಯುವ ಸ್ವಾಭಿಮಾನಿ ಕದನಗಾತಿಯರು. ಕೆರೆಗೆ ಹೋದರೆ ಕದನವಿಲ್ಲದೆ ಮರಳುವ ಹಾಗೆಯೇ ಇರಲಿಲ್ಲ. ಅದಕ್ಕಾಗಿ ಅಜ್ಜಿ ಕೆರೆಗೆ ಬಟ್ಟೆ ತೊಳೆಯಲು ಹೋಗುವುದು ಬೇಡ ಎನ್ನುವವಳು. ಊರವರ ಕೆಟ್ಟ ಕಣ್ಣುಗಳು ಬೀಳದಿರಲೆಂದು ಹೆಚ್ಚಿಗೆ ಕೆಲಸವಿಲ್ಲದಾಗ, ಹೊಸಬಟ್ಟೆಗಳು ತೊಳೆಯುವ ದಿನವಿದ್ದಾಗ, ಮನೆಯಲ್ಲಿ ಗಂಡಸರೂ ಇಲ್ಲದ ಸಂದರ್ಭ ನೋಡಿ ಕೆರೆಗೆ ಕಾಲಿಡುತ್ತಿದ್ದರು.

ನನಗೆ ಕೆಲವೊಮ್ಮೆ ಇವರ ಕದನ ಮೋಚೆನಿಸುತ್ತಿತ್ತು. ಇನ್ನೂ ಕೆಲವೊಮ್ಮೆ ವಿಕೋಪಕ್ಕೆ ಹೋದಾಗ ಕೆರೆಯ ದಡದ ಮೇಲೆ ಕುಳಿತವ ಎದ್ದು ನಿಂತು ತತ್ತಳಂದುಳಿವ ಕುದುರೆಯ ಹಾಗೆ ಕುಣಿದಾಡುತ್ತಾ ಗೋಗರೆಯುತ್ತಿದ್ದೆ. ಕೆಲವೊಮ್ಮೆ ಅಮ್ಮನವರ ಆಜ್ಞೆ ಬರುವುದೊಂದೇ ತಡ ಅಜ್ಜಿಯನ್ನು ಕರೆತರಲು ಅಲ್ಲಿಂದ ಮನೆಗೆ ಓಡುವುದು, ಅಜ್ಜಿ ಎಷ್ಟು ಹೆಸರುವಾಸಿ ಎಂದು ಈಗಾಗಲೇ ಒಂದು ಸಂದರ್ಭದಲ್ಲಿ ಹೇಳಿದ್ದು ನೆನವಿರಬಹುದಲ್ಲವೇ?

ಬಟ್ಟೆ ತೊಳೆಯುವ ಎರಡನೆಯ ಸ್ಥಳ ಗರಸಿನ ತಗ್ಗುಗಳು. ಇವು ಮಳೆಗಾಲದಲ್ಲಿ ಮಾತ್ರ ಮೈದೆರೆದು ನಿಲ್ಲುವಂಥವು. ಬೇಸಿಗೆಯಲ್ಲಿ ಹೇಳ ಹೆಸರಿಲ್ಲದಂತೆ ಮಟಾಮಾಯವಾಗುತ್ತಿದ್ದವು. ಇವು ಊರ ಹೊರಗಿದ್ದು, ಇಲ್ಲಿ ಊರವರ ಕಾಟವಿರುತ್ತಿರಲಿಲ್ಲ. ಹೀಗಾಗಿ ಇಲ್ಲಿ ಕದನಕ್ಕೆ ಅವಕಾಶಗಳಿರುತ್ತಿರಲಿಲ್ಲ. ಅವ್ವಯವರು ಇಲ್ಲಿ ಬಟ್ಟೆ ತೊಳೆಯುವಾಗ ನಾವು ಇದೇ ನೀರಲ್ಲಿ ಈಜುತ್ತಿದ್ದೆವು. ಚಡ್ಡಿ ಇಲ್ಲದೆ ನೀರಲ್ಲಿ ಬೀಳುವ ನಮಗೆ ಜಿಗಣೆಗಳ (ಇವು ಮಳೆಯ ಹುಳದ ಹಾಗೆ ಉದ್ದವಾಗಿದ್ದು ಮೈಗೆ ಹತ್ತಿಕೊಂಡು ರಕ್ತ ಹೀರುವುದು, ಸಂದು ಕಂಡಲ್ಲಿ ಒಳಸೇರುವುದು ಇವುಗಳ ಕೆಲಸ) ಕಾಟ ತುಂಬ ಜೋರು. ಗುದದಲ್ಲಿ ಹೊಕ್ಕರೆ ಹೇಗೆಂಬ ಭಯವಿದ್ದರೂ ಪರಿವೇ ಇರುತ್ತಿರಲಿಲ್ಲ. ಆದರೆ ಹೆಚ್ಚು ಹೊತ್ತು ನೀರಲ್ಲಿ ಒಂದೆಡೆ ನಿಲ್ಲುತ್ತಿರಲಿಲ್ಲ. ಅವ್ವೆಯರು ನೀರಿಂದ ಬೇಗನೆ ಹೊರಕ್ಕೆ ಎಬ್ಬಿಸುತ್ತಿದ್ದರು. ಕೆಲವೊಮ್ಮೆ ಮನೆಯವರನ್ನು ತಪ್ಪಿಸಿಯೂ ಇಲ್ಲಿಗೆ ಬರುವ ವಾಡಿಕೆ ಇತ್ತು. ಹೆಚ್ಚು ಆಳವಿಲ್ಲದ ಈ ನೀರಲ್ಲಿ ಈಜುವುದೆಂದರೆ ಮೋಜು, ದನಕರುಗಳು ನಮ್ಮೊಂದಿಗೆ ಸಲೀಸಾಗಿ ಈಜುತ್ತಿದ್ದವು. ನೀರಿನಲ್ಲಿದ್ದೇ ಅವುಗಳ ಸವಾರಿ ಮಾಡುವುದೆಂದರೆ ಇನ್ನೂ ಮೋಜು.

ಇಲ್ಲಿಂದ ಸ್ವಲ್ಪು ಮುಂದೆ ಎರಡು ಬಾವಿಗಳಿದ್ದವು. ಒಂದು ಚೌಕಬಾವಿ, ಎಡನೆಯದು ಗುಂಡಪ್ಪನ ಬಾವಿ. ನನ್ನ ಸಹೋದರರೊಂದಿಗೆ ಈಜುವುದಕ್ಕೆ ಇಲ್ಲಿಗೆ ಬರುವುದು ವಾಡಿಕೆ. ಅದು ಸಾರ್ವತ್ರಿಕವಾದ ಬಾವಿಯಲ್ಲದಿದ್ದರೂ ಊರಿನ ಎಲ್ಲ ಜನ ಅಲ್ಲಿ ಈಜಲು ಬರುತ್ತಿದ್ದರು. ಆ ಬಾವಿಯನ್ನು ಕಾಯುವುದಕ್ಕೆ ಒಬ್ಬ ವ್ಯಕ್ತಿ ಇದ್ದ. ಈತ ಊರವರನ್ನು ಈಜಲು ಬಿಡುತ್ತಿದ್ದ. ಆದರೆ ನಾವು ಬಂದರೆ ಮುಳ್ಳಾಗುತ್ತಿದ್ದ, ಹುಲಿಯಾಗುತ್ತಿದ್ದ. ಆತನನ್ನು ಕಂಡರೆ ನಮಗೆ ಭಯವೂ ಆಗುತ್ತಿತ್ತು. ಕೆಲವೊಮ್ಮೆ ಮೋಜು ಎನಿಸುತ್ತಿತ್ತು. ಮುಖಕ್ಕೆ ಮೈಗೆ ಖಾದಿ ಗ್ರಾಮೋದ್ಕೋಗದ ಬೇವಿನೆಣ್ಣೆಯ ಸಾಬೂನು ಹಚ್ಚಿಕೊಂಡು ನೀರಿಗೆ ಇಳಿಯಬೇಕು ಎನ್ನುವಾಗಲೇ ಆತ ಪ್ರತ್ಯಕ್ಷನಾಗುತ್ತಿದ್ದ. ಆಗ ನಮ್ಮ ಸ್ಥಿತಿ ಹೇಳತೀರದು. ಬಟ್ಟೆ ಬಿಚ್ಚಿ ಬಾಹುಬಲಿಗಳಾಗಿ ಈಜುವುದು ವಾಡಿಕೆ. ಆತ ಬಂದ ನಂತರ ಕೈಗೆ ಸಿಕ್ಕಷ್ಟು ಬಟ್ಟೆಗಳನ್ನು ಹಿಡಿದುಕೊಂಡು ಓಡುತ್ತಿದ್ದೆವು. ಆ ಬೆತ್ತಲೆಯ ಓಡಾಟ, ಸಾಬೂನು ಹಚ್ಚಿದ್ದರಿಂದ ಕಣ್ಣಿನ ಉರಿತ. ಬಾವಿಯ ಬದುವು ದಾಟಿದರೆ ಊರಿನ ಜನ. ಬೆತ್ತಲೆ ಊರಲ್ಲಿ ಹೋಗುವ ಹಾಗಿಲ್ಲ. ಸಾಬೂನಿನ ಮೈಯಲ್ಲಿ ಬಟ್ಟೆ ತೊಟ್ಟುಕೊಳ್ಳುವ ಹಾಗಿಲ್ಲ. ಒಟ್ಟು ಎಡೆಬಿಡಂಗಿಯ ಪ್ರಸಂಗ. ಅರ್ಧ ಗಂಟೆ, ಕೆಲವೊಮ್ಮೆ ಗಂಟೆಗಟ್ಟಲೆ ಗಿಡದ ಮರೆಗೂ ಹಾಳುಬಿದ್ದ ಗೋಡೆಯ ಮರೆಗೂ ನಿಂತು ಆ ಬಾವಿ ಕಾಯುವಾತ ಮರೆಯಾದರೆ ಸಾಕು ಕಳ್ಳ ಹೆಜ್ಜೆ ಹಾಕಿ ಕಾಗೆ ಸ್ನಾನ ಮಾಡಲು ಹಾತೊರೆಯುತ್ತಿದ್ದೆವು. ಆತನೂ ಜಾಣ, ಅವಿತು ಹಿಡಿಯಲು ಪ್ರಯತ್ನಿಸುತ್ತಿದ್ದ. ಜಾತಿಯ ಹೆಸರೆತ್ತಿ ಬಯ್ಕುತ್ತಿದ್ದ. ಆದರೆ ಒಮ್ಮೆಯೂ ಅವನ ಕೈಗೆ ಸಿಕ್ಕಿಹಾಕಿಕೊಳ್ಳಲಿಲ್ಲ. ಆದರೆ ಬೆತ್ತಲೆಯಾಗಿದ್ದು ಗಂಟೆ ಹೊಡೆಯುತ್ತಾ ಊರಲ್ಲಿಯೂ ಅರೆಮರೆಯಾಗಿ ದರ್ಶನ ಕೊಟ್ಟದ್ದೂ ಇದೆ.

ಮೂರನೆಯ, ಬಟ್ಟೆ ತೊಳೆಯುವ ಸ್ಥಳವೇ ಭಯಾನಕವಾದ ಕೊಳ್ಳ. ಭಗ್ನವಾದ ಮಣ್ಣು, ತಾಯಿಗೆ ಸಿಟ್ಟು ತರಿಸುತ್ತಿತ್ತು. ಕಲ್ಲಿನಿಂದ ತಿಕ್ಕುವಾಗ ನನ್ನ ಮೈ ಉರಿದು ರೋದನೆ
ಹೆಚ್ಚಿದಾಗ ಸಿಟ್ಟು ಹೆಚ್ಚಿ ಕೈಯಲ್ಲಿರುವ ಕಲ್ಲಿಂದಲೇ ಪೂಜೆಯಾಗುತ್ತಿತ್ತು. ನನ್ನ ಕಪ್ಪನೆಯ
ಬಣ್ಣ ಬೆಳ್ಳಗಾಗಿಸಲು ಪ್ರಯತ್ನಿಸಿ ನನ್ನವ್ವ ಸೋಲುತ್ತಿದ್ದಳು. ಮೈ ತೊಳೆದಾಗ ಸ್ವಲ್ಪು
ಬೆಳ್ಳಗೆ ಕಾಣುತ್ತಿದ್ದೆ. ನಂತರ ಮೂಲ ಬಣ್ಣ ಪ್ರತ್ಯಕ್ಷವಾಗುತ್ತಿತ್ತು. ಕೊನೆಗೂ ನಾನು
ಬೆಳ್ಳಗಾಗಲಿಲ್ಲ. ಆ ಕಲ್ಲಿನ ತಿಕ್ಕುವಿಕೆಯ ಪರಿಣಾಮವಾಗಿ ಕೈ ಕಾಲು ಮೈ ಮೇಲೆಲ್ಲ
ಕಪ್ಪನೆಯ ಬಿರುಸಾದ ಉದ್ದ ಕೂದಲುಗಳು ಬೆಳೆದುವೇ ವಿನಃ ನಾನೇನೂ ಬೆಳ್ಳಗಾಗಲಿಲ್ಲ.

ಆ ಕೊಳ್ಳದ ನೀರು ಎಲ್ಲೆಲ್ಲಿಂದ ಸಂಗ್ರಹಿಸಿಕೊಂಡು ಹರಿಯುತ್ತಿತ್ತು ಎನ್ನುವುದು

ಸತ್ತ ಕುರಿಗಳು ಮತ್ತು ಮಾಂಸದ ಮಾರಾಟ

ಹತ್ತಾರು ಮಾಂಸದ ಗುಪ್ಪೆಗಳು. ಈ ಗುಪ್ಪೆಗಳನ್ನು ಈಚಲದ ಪೊರಕೆಯಿಂದ
ಹೆಣೆದ ಚಾಪೆಯ ಮೇಲೆ ಹಾಕಲಾಗಿತ್ತು. ನನ್ನ ಮಾವ ಕೆಲಸದಿಂದ ಸ್ವಲ್ಪ ಬಿಡುವಿಗಾಗಿ
ಹೊರಗೆ ಹೋದಾಗ ಅಲ್ಲಿ ನನ್ನದೇ ದರ್ಬಾರು. ಹೊರಗೆಂದರೆಲ್ಲಿ ಗೊತ್ತೆ? ಪೂರ್ತಿಯಾಗಿ
ಊರ ಹೊರಗೆ, "ಕಂಟ್ರಿ ದಾರು" ತಯಾರು ಮಾಡಿ ಮಾರುವ ಸ್ಥಳಕ್ಕೆ.

ಕುರಿ ಕಾಯುವ ಕುರುಬರು, ಸತ್ತ ಕುರಿಯನ್ನು ಎಸೆಯದೆ ಭದ್ರವಾಗಿ ಮಾವನಿಗೆ
ತಂದೊಪ್ಪಿಸಿ ಎಷ್ಟು ಸಾಧ್ಯವೋ ಅಷ್ಟು ಹಣ ವಸೂಲು ಮಾಡಿಕೊಂಡು ಹೋಗುತ್ತಿದ್ದರು.
ಮೊದಮೊದಲು ಸತ್ತ ಕುರಿಯನ್ನು ಬಿಟ್ಟಿಯಾಗಿಯೇ ಕೊಟ್ಟು, ಅದರ ಚರ್ಮದ ಹಣವಷ್ಟೇ
ತೆಗೆದುಕೊಂಡು ಹೋಗುತ್ತಿದ್ದರು. ಸತ್ತ ಕುರಿಯ ಮಾಂಸ ಮಾರಿ ಹಣ ಸಂಪಾದನೆ
ಮಾಡುತ್ತಿದ್ದಾನೆ ಎನ್ನುವುದನ್ನು ಅರಿತ ಅವರು, ಸತ್ತ ಕುರಿಯನ್ನು ಹಣಕ್ಕೆ ಮಾರಲು
ಪ್ರಾರಂಭಿಸಿದರು. ಮಾವ ಹಣ ಕೊಡುವುದಿಲ್ಲ ಎಂದರೆ ಮಾವನಿಗೆ ಪ್ರತಿಸ್ಪರ್ಧಿಯಾಗಿ
ವೆಂಕಪ್ಪನೂ ಇದೇ ಕೆಲಸ ಮಾಡುತ್ತಿದ್ದ.

ಚಿಕ್ಕವನಾಗಿದ್ದಾಗ ಮಾಂಸ ಮಾರಾಟದ ಸಂದರ್ಭದಲ್ಲಿ ನನ್ನ ಕೆಲಸಗಳೆಂದರೆ
ಮಾವ ಕುರಿಯ ಚರ್ಮವನ್ನು ಸುಲಿಯುವಾಗ ಚರ್ಮಕ್ಕೆ ನೀರು ಹಾಕುವುದು. ಆನಂತರ
ಕುರಿಯ ದೇಹದಲ್ಲಿ ಇರುವ ಕರಳು, ಪಚ್ಚೆ, ಕರ್ಚಿನ ಚೀಲ, ಕಲೆಜಾ, ಗುರದಾ
ಇವುಗಳನ್ನೆಲ್ಲಾ ತೊಳೆದು ಸ್ವಚ್ಛವಾಗಿಸುವುದು. ಇದರಲ್ಲಿ ನನ್ನಣ್ಣನದು ಪಳಗಿದ ಕೈ.
ಕುರಿಗಳು ದೊಡ್ಡವಾಗಿದ್ದರೆ ತೊಳೆಯುವುದೇನು ತೊಂದರೆಯಾಗುತ್ತಿರಲಿಲ್ಲ. ಸಣ್ಣ ಮರಿಗಳ
ಕೆಲಸ ಬಂದರೆ ತೊಂದರೆಯಾಗುತ್ತಿತ್ತು. ಅತೀ ಚಿಕ್ಕದಾಗಿರುವ ಕರಳುಗಳ ಒಳಗೆ ನೀರು
ಹಾಕಿ ಗೀರಿ ಗೀರಿ ಆ ಕರುಳಿನಲ್ಲಿರುವ ಮಲ ಹೊರಕ್ಕೆ ತೆಗೆಯುವುದೆಂದರೆ ತಾಳ್ಮೆಗೊಂದು
ಸವಾಲಿನ ಕೆಲಸ. ಅದು ಈಗ ನೆನೆಸಿಕೊಂಡರೆ ಅಯ್ಯೋ ಎಂದು ಹೇಸಿಕೆ ಎನಿಸುತ್ತದೆ.
ಇಬ್ಬರಿದ್ದರೆ ಕೆಲಸ ಸ್ವಲ್ಪ ಸರಳವಾಗುತ್ತಿತ್ತು. ಒಬ್ಬಾತ ಹಾಕಿದರೆ ಇನ್ನೊಬ್ಬ ಸಲೀಸಾಗಿ
ಕರುಳಲ್ಲಿರುವ ಮಲ ಹೊರಕ್ಕೆ ತೆಗೆಯಬಹುದು.

ಈ ಕೆಲಸ ಕುಳಿತಲ್ಲಿಯೇ ನಡೆಯುತ್ತಿತ್ತು. ಕರುಳುಗಳಲ್ಲಿಯ ಮಲ ಬೆರಳಿಂದವ
ಗೀರಿದ ಹಾಗೆ ಮುಂದಿನ ಕರುಳಲ್ಲಿ ಸಂಗ್ರಹಿಸಿ ಊದಿಕೊಳ್ಳುತ್ತ ಹೋಗುತ್ತಿತ್ತು. ಕರುಳು
ಕೈಯಲ್ಲಿ ಉದ್ದಾದ ಹಾಗೆ ಹಿಡಿದುಕೊಂಡು ಎದ್ದು ನಿಲ್ಲಬೇಕು. ಎಲ್ಲಲೊ ನೋಡುತ್ತ ಕರುಳು ಒತ್ತುತ್ತಿರುವಾಗ ಕೊನೆಗೆ ತುದಿಗೆ ಬಂದದ್ದು ಗೊತ್ತೇ ಆಗದ ಕರುಳ ಒಳಗಿರುವ
ಮಲ "ಭುದುಗ್ಗ್‌ನೇ"ಜಿಗಿದು ಹೊರಕ್ಕೆ ಬರುತ್ತಿತ್ತು. ಆಗ ನೀರು ಹಾಕಲು ಕೆಳಗೆ ಕುಳಿತವನ
ತಲೆ, ಮುಖ, ಮೈಯೆಲ್ಲಾ ಅಭಿಷೇಕವೇ! ನಿಂತು ಒತ್ತುವವ ಕೆಲವೊಮ್ಮೆ ಕರುಳಿಗೆ ಮುಳ್ಳೋ
ಕಡ್ಡಿಯೋ ಚುಚ್ಚಿ ರಂಧ್ರ ಮಾಡಿದಾಗ ಮಲ ಚಿಲ್ಲನೇ ಚಿಮ್ಮುತ್ತಿತ್ತು. ಆಗ ಮುಂದೆ
ಕುಳಿತವನ ಬಾಯಿ, ಮುಖ ಎಲ್ಲವೂ ತುಂಬುತ್ತಿತ್ತು.

ಹೀಗೆ ಕೆಲಸದಲ್ಲಿಯೇ ಆಟವು ನಡೆಯುತ್ತಿತ್ತು. ಆ ಮಲದ ದಡ್ಡಿಯ ವಾಸನೆ
ಸಹಿಸಿ ಸಹಿಸಿ ಮೂಗು ಹೊಸ ಗಾಳಿಯ ವಾತಾವರಣವನ್ನೇ ಮರೆತಿತ್ತು. ಎಷ್ಟೋ ಬಾರಿ
ನೀರು ಹಾಕುವವನೇ ಮುಳ್ಳಿನಿಂದ ತೂತು ಮಾಡಿ ಕರುಳಿಂದ ಮಲ ಒತ್ತುವಾಗ
ಜಾಗೃತನಾಗಿರುತ್ತಿದ್ದ. ಅವನು ತಪ್ಪಿಸಿಕೊಂಡರೂ ಗೀರುವಾಗ ಕೈ ಬಿಡುವದಾದರೂ ಹೇಗೆ?
ಆಗ ಆ ಕರುಳನ್ನೇ ಹಿಡಿದುಕೊಂಡು ದಡ್ಡಿಯ ತುಂಬೆಲ್ಲಾ ಓಡಾಡಿ, ಅವನ ಮೈಮೇಲೆ
ಎರಚುವಂತಹ ಕೆಲಸ ನಡೆಯುತ್ತಿತ್ತು. ಹೀಗೆ ಆ ಕುರಿಯ ಮಲ, ಕರುಳುಗಳೊಂದಿಗೆ
ನಡೆದ ಚೆಲ್ಲಾಟ, ಮಾವ ನೋಡಿದರೆ ಬೈದು ಬಿಡಿಸಿ ಬಿಡುತ್ತಿದ್ದ.

ದಡ್ಡಿಯಲ್ಲಿ ಹೆಚ್ಚು ಜನಗಳಿಗೆ ಬಿಡುತ್ತಿರಲಿಲ್ಲ. ಕುರಿಯ ಗುದದ್ವಾರದ ಕರುಳಿನ
ಭಾಗ (ಪೇರುಗಳು) ಸ್ವಲ್ಪ ಅಗಲವಾಗಿರುತ್ತಿತ್ತು. ಅದನ್ನು ಎರಡೂ ಕೈಯಿಂದ ಹಿಗ್ಗಿಸಿ,
ಬಾಯಿ ತುಂಬಾ ನೀರು ತುಂಬಿಕೊಂಡು, ಕರುಳಿನ ಗುದದ್ವಾರಕ್ಕೆ ಹಿಡಿದು ಪಿರ್‌ ರ್‌......
ಎಂದು ಬಾಯಿಯಲ್ಲಿಯ ನೀರನ್ನು ಅದರಲ್ಲಿರುವ
ಬಿಟ್ಟು, ಕರಳು ಹೀರಿ ಹೀರಿ ಅದರಲ್ಲಿರುವ
ಮಲ ಹೊರಕ್ಕೆ ತೆಗೆಯುವ ಕೆಲಸವೂ ನಡೆಯುತ್ತಿತ್ತು.

ಮಾಂಸದ ಗುಪ್ಪೆಗಳು ಕೈ ತೂಕದಲ್ಲಿ ಹಾಕಲಾಗುತ್ತಿತ್ತು. ಮಾವ ಎಲ್ಲಾದರೂ
ಹೋದರೆ ನಾನೇ ಅಲ್ಲಿಯ ಮಾಲೀಕ. ಗುಪ್ಪೆ ದೊಡ್ಡದಿದ್ದರೆ ಎಂಟು ಆಣೆ. ಚಿಕ್ಕದಿದ್ದರೆ
ನಾಲ್ಕು ಆಣೆಗೆ ಮಾರಲಾಗುತ್ತಿತ್ತು. ತೆಗೆದುಕೊಂಡು ಹೋಗುವವರೆಂದರೆ ನಮ್ಮ ಕೇರಿಯಲ್ಲಿ
ಇರುವ ಜನಗಳೇ. ಮಾದಿಗರು ಮಾಚಗಾರರು ಸಮಗಾರರು, ಹೆಚ್ಚೆಂದರೆ ಲಂಬಾಣಿಗರು.
ಮಾರಾಟ ಮಾಡುವಾಗ ಹೆಚ್ಚಿನ ಶ್ರಮವೆಲ್ಲಾ ನೊಣ ಓಡಿಸುವುದಕ್ಕೇ ಹೋಗುತ್ತಿತ್ತು.
ನೊಣವೆಂದರೆ ಒಂದೇ ಎರಡೇ? ನೊಣದಲ್ಲಿಯೇ ಎಷ್ಟು ಜಾತಿ ನೊಣಗಳವು! ಸದಾ
ನಮ್ಮ ಕಣ್ಣೆದುರಿಗಿದ್ದ ನೊಣಗಳು, ಕುಡ್ಡು ನೊಣಗಳು, ಹಸಿರು ನೊಣಗಳು, ದೊಣ್ಣೆ
ನೊಣಗಳು..... ಇವು ಓಡಿಸುವಾಗ ಬೇಸರವಾಗಿ, ಸಿಟ್ಟು ಬಂದು ಅಂಗೈಯಿಂದಲೇ
"ಪಿಚಕ್‌" ಎಂದು ಹೊಡೆದು ಆ ಮಾಸಂದ ಗುಪ್ಪೆಗಳ ಮಧ್ಯದಲ್ಲಿಯೇ ಕೊಂದು ಬಿಡುತ್ತಿದ್ದೆ.
ಚಾಪೆಗೆ ಅಂಟಿದ ಕುರಿಯ ರಕ್ತ, ಜೊತೆಗೆ ಈ ನೊಣದ ರಸಿಕೆ ಸೇರಿ ಹೋಗುತ್ತಿತ್ತು.

ನಾನೇ ಮಾಲೀಕನಾಗಿ ಕುಳಿತಾಗ ಸ್ವಾರಸ್ಯಕರವಾದ ಘಟನೆಗಳು ನಡೆಯುತ್ತಿದ್ದವು.
ಮಾಂಸದ ಗುಪ್ಪೆ ತೆಗೆದುಕೊಂಡು ಹೋಗಲು ಬಂದವರು ಇವನೇನು ಚಿಕ್ಕವನೆಂದು ಹಾಗೆ ಹೀಗೆ ಎಂದು ಮಾತನಾಡಿಸುತ್ತ, ಒಂದರೊಳಗೆ ಇನ್ನೊಂದು ಗುಪ್ಪೆ ಸೇರಿಸಿ
ಎತ್ತಿಕೊಳ್ಳುತ್ತಿದ್ದರು. ಅದು ನನ್ನ ಕಣ್ಣಿಗೆ ಬಿದ್ದರೆ ಕೋಲಾಹಲವೇ ಆರಂಭ. ನನ್ನ ಮಾತಿಗೆ
ಅವರು ಬೆಲೆ ಕೊಡದಿದ್ದರೆ ಅತ್ತು ಬಿಡುತ್ತಿದ್ದೆ. ನಾನು ಅಳುವುದೆಂದರೆ ಅವರಿಗೆ ಚೆಲ್ಲಾಟ.
ಕೆಲವೊಮ್ಮೆ ಅವರು ಮೊದಲು ನನಗೆ ಬೆದರಿಸುತ್ತಿದ್ದರು. ನಾನು ಇನ್ನೂ ಗಟ್ಟಿಯಾಗಿ
ನಾಗಸ್ವರದ ದನಿ ತೆಗೆದಾಗ, ಅಯ್ಯೋ ಸುಮ್ನೆ ಮಾಡಿದೆ ಎಂದು ದನಿ ಬದಲಾಯಿಸುತ್ತಿದ್ದರು.
ಇನ್ನೂ ಕೆಲವರು ಹಣ ಕೊಡದೇ ಓಡಿಹೋಗುವುದಕ್ಕೆ ಹವಣಿಸುತ್ತಿದ್ದರು. ಹಣ
ಕೊಟ್ಟಿರುವುದಾಗಿ ವಾದ ಹಾಕುತ್ತಿದ್ದರು. ಮಾಂಸ ಕೊಳ್ಳುವ ಮನುಷ್ಯರ ಕಾಟ ಹೀಗಾದರೆ,
ಮನುಷ್ಯರನ್ನು ಕಾಯುತ್ತ ಅಲ್ಲಿರುವ ನಾಯಿ, ಬೆಕ್ಕು, ನೊಣಗಳನ್ನು ಕಾಯುವುದು
ಮತ್ತೊಂದು ಕಲಸ. ಕೈಗಳೊ ಎರಡೇ, ಕಣ್ಣುಗಳೂ ಎರಡೇ, ಎಷ್ಟು ಜಾಗರೂಕತೆಯಿಂದ
ಕಾರ್ಯ ನಿರ್ವಹಿಸಿದರೂ ಒಂದು ಗುಪ್ಫೆಯಾದರೂ ಮಂಗಮಾಯವಾಗಿರುತ್ತಿತ್ತು. ಮಾವ
ಹೋಗುವಾಗಲೇ ಇಷ್ಟು ಗುಪ್ಪೆ ಇವೆ ಎಂದು ಎಚ್ಚರಿಕ ಕೊಟ್ಟು, ಹಿಂದೆ ಆಗಿ ಹೋದ
ಘಟನೆಯನ್ನೂ ನೆನಪಿಸಿ ಜಾಗೃತವಾಗಿರಲು ಹೇಳಿ ಹೋಗುತ್ತಿದ್ದ. ಹಣ ಕೊಡದೆ
ಯಾರಾದರೂ ಹಾಗೆಯೇ ಗುಪ್ಪೆಯನ್ನು ತೆಗೆದುಕೊಂಡು ಹೋಗಿದ್ದರೆ "ನೆಪ್ಪ
ಮಾಡಕೊರೋ" ಎಂದು ನೆನಪಿಸಲು ಕಾಲಾವಕಾಶ ಕೊಡುತ್ತಿದ್ದ.

ನನ್ನ ದೊಗಲಂ ಪೊಗಲಂ ಪೊಲೀಸ್‌ ಚೊಣ್ಣ. ಆ ಚೊಣ್ಣದ ಕಂಬರ್‌ನಲ್ಲಿ
ನನ್ನಂಥವರು ಸಲೀಸಾಗಿ ಮೂರು ಜನ ಸೇರಬಹುದಿತ್ತು. ಸಣಬು ಹಾಕಿ ಇಲ್ಲವೇ ಸೀರೆಯ
ದಡಿ ಹಾಕಿ ನಡಕ್ಕೆ ಬಿಗಿದು ಕಟ್ಟುವ ವಾಡಿಕೆ. ಮಾಂಸದ ಗುಪ್ಪೆಯನ್ನು ಮಾರಲು ತುದಿಗಾಲ
ಮೇಲೆ ಕುಳಿತಾಗ ಈ "ದೊಗಲಂ ಪೊಗಲಂ" ಚೊಣ್ಣ ಇಳಿದು ಬೀಳುತ್ತಿತ್ತು. ಮಾಂಸವನ್ನು
ತೆಗೆದುಕೊಳ್ಳಲು ಬಂದವರ ದೃಷ್ಟಿ ನನ್ನ ಚೊಣ್ಣದ ಮೇಲೇಕೆ ಹೋಗುತ್ತಿತ್ತೋ!

"ಲೇ ತಮ್ಮ ಗುಂಪಿ ಏನ ಕಾಯತಿಲೇ?
ಮೊದಲು ನಿನ್ನ ಚೊಣ್ಣದಾಗಿನ ಕಪ್ಪಿ ಕಾಯಿ" ಎನ್ನುತ್ತಿದ್ದರು.
ಅವರು ಹೀಗೆಂದಾಗ ನಾನು ನಾಚಿ ನೀರಾಗುತ್ತಿದ್ದೆ.

ಇಷ್ಟು ಕೆಲಸ ಮಾಡಿದ್ದಕ್ಕೆ ಮಾವ ನನಗೆ ಕೊಡುವುದೇನು ಗೊತ್ತೆ? ಕರುಳಿನ ಕೆಲ
ಭಾಗ ಹಾಗೂ ಜಠರದ ಕೆಲಭಾಗ. ಕರುಳಿಗೆ ಉಪ್ಪು ಅರಿಸಿಣ ಹಚ್ಚಿ ತಂತಿಗೆ ಹಾಕಿ ಸುಟ್ಟು
ತಿನ್ನುವುದೆಂದರೆ ನನಗೆ ಹೆಚ್ಚು ಇಷ್ಟ. ನನ್ನ ಅಜ್ಜಿಗೂ ಅಷ್ಟೇ ಇಷ್ಟ. ಅದನ್ನು ಕಲಿಸಿದವಳೂ
ನನ್ನಜ್ಜಿಯೇ. ನನ್ನ ಅಣ್ಣ ಕೋಳಿಯ ಕರಳನ್ನು ಶುದ್ಧಗೊಳಿಸಿ ಸುಟ್ಟು ತಿನ್ನುವುದರಲ್ಲಿ
ಚತುರ. ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ, ರುಚಿಯಲ್ಲಿ ಚತುರತೆಯನ್ನು
ಪಡೆದುಕೊಂಡಿದ್ದೆವು. ಮನೆಯವರಿಗೆಲ್ಲಾ ಬೇಯಿಸಿ ಸಾರು ಮಾಡಿ ತಿನ್ನುವುದೆಂದರೆ ಇಷ್ಟ.
ಆದರೆ ತಂದೆಯವರಿಗೆ ಇದು ಆಗುತ್ತಿರಲಿಲ್ಲ. ಅವರು ವಾರಕ್ಕೊಮ್ಮೆ ಊರಿಂದ ಬರುವುದರಿಂದ ಆಗ ತಂದೆಯವರ ದರ್ಬಾರಿನಲ್ಲಿ ಅಂಗಡಿಯಿಂದ 2-3 ಕೆ.ಜಿ. ಹೊತ್ತು
ತರುತ್ತಿದ್ದರು. ಆಗ ನಾನೂ ಆ ಮಾವನ ಮನೆಗೆ ಇಣುಕಿ ಕೂಡ ನೋಡುತ್ತಿರಲಿಲ್ಲ! ಆದರೆ
ಈಗ ಮಾಂಸದ ಮೇಲಿನ ಹಂಬಲ ಇಳಿದು ಹೋಗಿದೆ ಯಾಕೆ ಎಂದು ಚಿಂತಿಸಲು ಅವಕಾಶ
ಸಿಕ್ಕಿಲ್ಲ.

ಈ ಮಾವನ ಅಂಗಡಿ ದಿನವೂ ತೆರೆಯುವಂತಹದ್ದಲ್ಲ. ವಾರಕ್ಕೆ ಒಮ್ಮೆ ಅಥವಾ
ತಿಂಗಳಿಗೆ ಒಮ್ಮೆ ಇಲ್ಲವೇ ಒಂದೇ ವಾರದಲ್ಲಿ ಒಮ್ಮೊಮ್ಮೆ ಎರಡು ಮೂರು ಬಾರಿ
ತೆರೆಯುವ ಭಾಗ್ಯ ಬರುತ್ತಿತ್ತು. ಈ ಭಾಗ್ಯ ಕುರುಬರೇ ಕಲ್ಪಿಸಿಕೊಡಬೇಕು. ಇಲ್ಲವೇ
ತಿಂಗಳಿಗೆ ಒಮ್ಮೆ ಅಲ್ಲವೇ ಒಂದೇ ವಾರದಲ್ಲಿ ಒಮ್ಮೊಮ್ಮೆ ಎರಡು ಮುರು ಬಾರಿ
ಊರಲ್ಲಿ ಇನ್ಯಾರಾದರೂ ಪ್ರಾಣಿ ಸತ್ತಿರಬೇಕು. ಅಂದಾಗ ಮಾತ್ರ ಈ ಚಾಪೆಯ ಅಂಗಡಿ
ತೆರೆಯುತ್ತಿತ್ತು.

ಅದೊಂದು ವಿಶೇಷವಾದ ದಿನವೇ ಎನ್ನಬೇಕು. ಅಂದು ಎಲ್ಲ
ಬೇಗನೆ ಮಾರಾಟವಾಗಿದ್ದವು. ಮಾವ ಎ ಬತಾ ಹೋಗಿದ್ದ. ಒಬ್ಬ ಠಾಕು
ಟೀಕಾಗಿರುವ ವ್ಯಕ್ತಿ ಮನೆಯ ಹತ್ತಿರಕ್ಕೆ ಜಡೆ.
"ಏ ಹುಡುಗಾ ಕುರಿ ಬಂದಿತ್ತೇನೋ? ಇವತ್ತ" ಎಂದ
"ಏ ಪಾಲಾ ಮುಗದಾವ್ರುರ‍್ರಿ" ಎಂದೆ ಅನುಮಾನದಿಂದ.

ಏಕೆಂದರೆ ಇಂಥವರು ಸತ್ತ ಕುರಿಯ ಪಾಲು ತಿನ್ನುತ್ತಾರೆಯೇ! ಎನ್ನುವ ಆಶ್ಚರ್ಯ
ನನಗೆ. ಈ ವೀರಶೈವದವರ ಮನೆಯ ಆಳು ಊರ ವಾಲಿಕಾರನೊಂದಿಗೆ ಬಂದಿದ್ದ.

ನಿಮ್ಮ ಮಾವ ಎಲ್ಲಿ? ಆತನ ಮುಂದಿನ ಪ್ರಶ್ನೆ
"ಹೊರಗೆ ಹೋಗ್ಯಾರ‍್ರಿ, ಬರ್‍ತಾರೆ" ಎಂದೆ.

ಸ್ವಲ್ಪ ಹೊತ್ತು ಕಳೆದಾದ ಮೇಲೆ ಕೈಯಲ್ಲಿ ಎರಡು ದುಡ್ಡು (ಮೂರು ಪೈಸೆ)
ಕೊಟ್ಟು "ಚಕಲಿ” (ಚಕ್ಕುಲಿ) ತಗೊಂಡ ಬಾ ಎಂದ. ಚಕ್ಕುಲಿ ಎಂದರೆ ಯಾರ ಬಾಯಿಯಲ್ಲಿ
ನೀರು ಬರುವುದಿಲ್ಲ? ಹಣ ಕೊಟ್ಟದ್ದೇ ತಡ, ನನ್ನ ಬಾಯಿಯ ಮೋಟಾರ್‌ ಸ್ಟಾರ್ಟ್‌
ಮಾಡಿ ಓಡಿದೆ. ಚಕ್ಕುಲಿ ತಂದು ಅವರ ಕೈಗೆ ಕೊಡ ಹೋದರೆ "ಅವೆಲ್ಲಾ ಚಕಲಿಯ
ಕಡಗಗಳು ನನಗೆ" ಎಂದು ಹೇಳಬೇಕೆ ಆತ! ತರುವಾಗ ನಾನಂದುಕೊಂಡದ್ದು ಅದರಲ್ಲಿ
ನನಗೊಂದು ಇಲ್ಲವೇ, ಕೊನೆ ಪಕ್ಷ ಅರ್ಧವಾದರೂ ಸಿಗಬಹುದು ಎಂದು ಊಹಿಸಿದ್ದೆ.
ಈಗ ನೋಡಿದರೆ ಇವರು ಎಲ್ಲ ನನಗೇ ಎನ್ನುತ್ತಿದ್ದಾರೆ! ಹಿಡಿಸಲಾಗದ ಆನಂದ -
ಮುಜುಗರ, ಎರಡೂ ಸೇರಿ ಹೋದವು. ಆತ ಮತ್ತೆ ಪ್ರಶ್ನಿಸಿದ.

"ತೊಗಲು ಯಾವ ಮಂಡ್ಯಾಗ ಕೊಟ್ಟಿದ್ದಿ?"
(ಆಡಿನ ತೊಗಲು, ಯಾವ ಅಂಗಡಿಯಲ್ಲಿ ಮಾರಾಟ ಮಾಡಿದೆ) ಎಂದ.
"ಮುಲ್ಲಾ ಸಾಬರ ಮಂಡ್ಕಾಗ" "ಮಂಡಿ ಎಲ್ಲಿದೆ ತೋರ್ಸೃತೀಯಾ?"
"ಹೂಂ" ಎಂದು ನಾನು ತೋರಿಸಲು ಹೊರಟೆ.
ಮುಲ್ಲಾ ಸಾಹೇಬರು ಮಹಾ ವ್ಯಾಪಾರಸ್ಥ ಮನುಷ್ಯ. ಸುಲಿದ ತೊಗಲು ಕೊಡುವುದಕ್ಕೆ
ಹೋದರೆ, ಬಂದವರಿಂದಲೇ ಆ ತೊಗಲು ಹೊರಳಿಸಿ ಹೊರಳಿಸಿ ತೋರಿಸಲು ಹಚ್ಚುತ್ತಿದ್ದು.
ಈ ಅಂಗಡಿ ಸ್ವಲ್ಪ ದೂರಿತ್ತು. ಅದಕ್ಕೆ ಅರಿವೆಯಲ್ಲಿ ತೊಗಲನ್ನು ಕಟ್ಟಿ ತಲೆ ಮೇಲೆ
ಹೊತ್ತು ಹೋಗಬೇಕಾಗುತ್ತಿತ್ತು. ಅದರಿಂದ ರಕ್ತದ ನೀರು ನಿಧಾನವಾಗಿ ಬಸಿದು, ತಲೆ
ಮೇಲಿಂದ ಸೋರಿ ಕೆಳಕ್ಕೂ ಇಳಿಯುತ್ತಿತ್ತು. ಬಿಸಿಲಿದ್ದರೆ ಬೆವರು ಬೇರೆ ಸೇರಿ ಇಳಿದು
ಬಂದ ಬೆವರು ನಾಲಿಗೆಗೆ ರುಚಿ ತೋರಿಸುತ್ತಿತ್ತು. ಒಂದು ತೊಗಲಿಗೆ ಮೂರು ರೂಪಾಯಿಂದ
ಎಂಟು ರೂಪಾಯಿಯವರೆಗೆ ಆಗ ಬೆಲೆ ಇತ್ತು ಎಂದು ತೋರುತ್ತದೆ. ತೊಗಲಿಗೆ ಸ್ವಲ್ಪ
ಮಧ್ಯದಲ್ಲಿ ರಂಧ್ರ ಬಿದ್ದಿದ್ದರೆ ಅದಕ್ಕೆ ಅರ್ಧಕ್ಕರ್ಥ ಬೆಲೆ ಕಡಿಮೆ ಮಾಡುತ್ತಿದ್ದ! ಅದಕ್ಕಾಗಿ
ತೊಗಲು ಅವನಿಗೆ ಬಿಚ್ಚಿ ತೋರಿಸಬೇಕು. ಮತ್ತೆ ಕೊನೆಗೆ ಮೂಲೆಯಲ್ಲಿ ಇದ್ದ ಉಪ್ಪಿನ
ಡಬ್ಬಿ ಎತ್ತಿ ತೊಗಲಿಗೆ ಉಪ್ಪು ಸವರಿ ಮಡಚಿ ಬೇರೆಡೆಗೆ ಇಟ್ಟು ಹೋಗಬೇಕು.

"ಮಂಡಿಗೆ ತೊಗಲು ಯಾರು, ನೀನೇ ಕೊಟ್ಟು ಬಂದಿಯಾ?
ಎಂದ ಬಂದವರಲ್ಹೊಬ್ಬ.
ಇಲ್ಲ. ಹನುಮಂತ (ಮಾವನ ಮಗ)
"ಆ ತೊಗರ ಗುರ ಹಿಡಿತಿಯಾ?"
"ಹೋ" ಎಂದೆ

ಅಂಗಡಿಯಲ್ಲಿ ಮುಲ್ಲಾ ಸಾಹೇಬರೂ ಇರಲಿಲ್ಲ. ಅಲ್ಲಿಯೂ ನನ್ನದೇ ದರ್ಬಾರು
ನಡೆಯಿತೆನ್ನಿ. ಐದಾರು ತೊಗಲುಗಳ ಮಧ್ಯದಲ್ಲಿ ಇದ್ದ, ತೊಗಲು ಗುರುತಿಸಿ ಹೊರ
ತೆಗೆದು ತೋರಿಸಿದೆ. ಏಕೆಂದರೇ ಈ ಶೀಲವಂತರು ಒಳಗೆ ಬಂದಿರಲಿಲ್ಲ.

"ಹಾಂ ಹೌದು ಇದೆ" ಎನ್ನುತ್ತ

ಬಗ್ಗಿದವರು ತಕ್ಷಣವೇ ಸೆಟೆದು ನಿಂತರು. ಅವರ ಮುಖದ ಛಾಯೆಯೇ
ಬದಲಾಯಿತು. ನನಗೆ ಏನೂ ಅರಿಯದಾಯಿತು. ನೇರವಾಗಿ ಅವರು ಏನೇನೂ ಹೇಳುತ್ತಾ,
ಮಾತನಾಡಿಕೊಳ್ಳುತ್ತ ಮಾವನ ಮನೆಗೆ ಬಂದರು.

ನಮ್ಮ ಅತ್ತೆ (ಶರಣವ್ವ) ಗೋಡೆಗೆ ಮೇಲೆ ಕೌದಿಯನ್ನು ತಿರುವಿ ಹಾಕುವ ಕೆಲಸ
(ಉಚ್ಚಿ ಹೊಯಿದಿದ್ದರಿಂದ ಕೌದಿ ಒದ್ದೆಯಾಗಿರುತ್ತಿದ್ದವು)ಮಾಡುತ್ತಿದ್ದಳು."ಯಾರು?
ಅಪ್ಪೋರೇನು?..... ಯಾರ ಬೇಕಾಗತ್ರಿ? ಅಂವಾ ಆ ಕಡಿ ಕೆಳಾಗ ಹೋಗಿರಬೇಕು......"

ಏನು ನಿಮ್ಮ ಮನ್ಯಾಗ ಕುರಿಗಿರಿ ಸತ್ತದೇನ್ರೀ? ಎಂದಳು.
"ಯಾವುದು ಸತ್ತಿದ್ದ ಕುರಿ, ಯಾವುದು ಸಾಯಲಾರದ ಕುರಿ ಅಂತ ತಿಳ್ಯೆಂಗಿಲ್ಲೇನು?" "ಯಾಕ್ರಿಯಪ್ಪಾ ಏನಾಯಿತು?" ಅತ್ತಿಯ ಮಾತು.

ಏನಾಯಿತಾ? ಎಲೈದಾನು ಅವನು? ಬಂದ ಮ್ಯಾಲ ಕೇಳು ಹೇಳುತಾನ ಎಂದರು.
ಅತ್ತೆ ನನ್ನ ಮುಖ ನೋಡಿದಳು, ನಾನು ಮುಖ ಕೆಳಕ್ಕೆ ಹಾಕಿ ಮನೆಗೆ ಓಡಿದೆ. ಅಷ್ಟರಲ್ಲಿಯೇ
ಹೊರಗಡೆ ಹೋದ ಮಾವ ಬಂದ. ಗಲಾಟೆ ಹೆಚ್ಚಾಯಿತು. ಅವರೆಲ್ಲ ಅಲ್ಲಿಂದ ಹೊರಟು
ಹೋಗುವವರೆಗೆ ನಾನೇನು ಹೊರಕ್ಕೆ ಬರಲಿಲ್ಲ.

ಚಕ್ಕುಲಿ ಕೊಡಿಸಿದ ವ್ಯಕ್ತಿಯ ಆಡು ಕಳೆದು ಹೋಗಿದೆ. ಆತ ಸಂದೇಹ ಬಂದು
ಇಲ್ಲಿಗೆ ಬಂದ. ಮನೆಯಲ್ಲಿ ಅಂದು ಪಾಲು ಹಾಕಿದ ಆಡು ಅವರದೇ ಎನ್ನುವದರಲ್ಲಿ
ಸಂದೇಹವೇ ಇರಲಿಲ್ಲ. ಕದ್ದು ತಂದವರು ಯಾರು? ನಮ್ಮ ಮಾವ? ಅಲ್ಲಾ ಆತ ಕೇವಲ
ಸತ್ತ ಕುರಿಗಳನ್ನು ಕೊಂಡು ಮಾರುವವ. ಮನೆಗೆ ಒಬ್ಬಾತ ಬಂದಿದ್ದ. ಆತ ಗುಡ್ಡದಲ್ಲಿ "ಈ ಆಡಿನ ಕುತ್ತಿಗೆಗೆ ತೋಳ ಹಿಡಿದು ಸತ್ತು ಹೋಗಿದೆ" ಎಂದು ಹೇಳಿ ಹಣಕ್ಕೆ ಮಾರಾಟ
ಮಾಡಿ ಹೋಗಿದ್ದ.

"ನೋಡ್ರಿ, ತಂದವ್ರು ಯಾರು ಅನ್ನೋ ಹೆಸರು ನನಗೆ ಗೊತ್ತಿಲ್ಲ" ಎಂದ ಮಾವ.

ಊರ ವಾಲೀಕಾರನೇ ಅಲ್ಲಿ ಬಂದಿರುವುದರಿಂದ ಅಂದು ನಮ್ಮ ಚಂದಪ್ಪ ಮಾವನ
ಚಿಂದಾಬಂಧಿ ಹೇಳಲಸದಳವಾದುದು. ಗರುಡನ ಕಾಲಿಗೆ ಸಿಕ್ಕ ಇಲಿಯಂತಾಗಿದ್ದ. ಇಲಿಯ
ಕಾಲಿಗೆ ಕಟ್ಟಿಕೊಂಡ ಕಪ್ಪೆಯಂತೆ ಕುರಿ ತಂದು ಕೊಟ್ಟ ವ್ಯಕ್ತಿಯ ರೀತಿಯಾಗಿದ್ದರೂ ಮಾವ

ಕೊನೆಯವರೆಗೆ ಬಾಯಿ ಬಿಡಲಿಲ್ಲ. ಆದರೆ ಅವರಿಗೆ ದಂಡ ತೆತ್ತನೆಂದು ತೋರುತ್ತದೆ.
೩೬

ಗಾರ್ಮೆಂಟ್ ಬ್ರಾಹ್ಮಣ

ಹತ್ತಿ ಕದ್ದದ್ದು ಲಾಡು ತಿಂದದ್ದು

"ರಕ್ಕಸ ತಂಗಡಿಗಿಯ ಕಾಳಗ" ಇತಿಹಾಸ ಪ್ರಸಿದ್ಧವಾದ ಸ್ಥಳ ತಂಗಡಿಗಿ ಯಾರಿಗೆ
ಗೊತ್ತಿಲ್ಲ? ತಂಗಡಿಗಿಯ ಆ ಟಾರ್ ರೋಡ್ ಮೇಲುಗಡೆ ಬಿದ್ದು ನಾನು ಒದ್ದಾಡುತ್ತಿದ್ದೆ.


ಆತ ಒಂದೇ ಸಮನೆ ಬಾರುಕೋಲಿನಿಂದ ಸೆಳೆಯುತ್ತಲಿದ್ದ.

"ನಿನ್ನೆ ತಪ್ಪಿಸಿಕೊಂಡು ಓಡಿಹೋಗಿದ್ದೆ.
ಇವತ್ತು ಸಿಕ್ಕ..
ನಿಮ್ಮ ಹುಟ್ಟು ಗುಣ ಹ್ಯಾಂಗೆ ಬಿಟ್ಟಿರಿ?
ದನದ ಚರ್ಮಾ ಸುಲ್ಲು ತಗೊಂಗ
ನಿಮ್ಮಾ ಚರ್ಮ ಸುಲ್ಲು ತಗೀಬೇಕು, ಅಂದ್ರೆ ಬಿಡ್ತೀರಿ........"

ಹೀಗೆ ದವಡೆ ಕಚ್ಚಿ ನಿಟ್ಟುಸಿರು ಬಿಡುತ್ತ ನಿನ್ನೆಯ ಸಿಟ್ಟನ್ನೂ ಆವತ್ತಿನ ಸಿಟ್ಟನ್ನೂ
ಎರಡೂ ಸೇರಿಸಿ ಬಡ್ಡಿ ಸಮೇತವಾಗಿ ಚುಕ್ತಾ ಮಾಡುತ್ತಿದ್ದ.

ನನ್ನ ಆ ರೋದನದ ದನಿಗೆ ಹತ್ತಿಯ ಎಂಟು ದಿಂಡುಗಳನ್ನು ಹೇರಿಕೊಂಡು ನನ್ನ
ಮುಂದೆ ನಿಂತಿದ್ದ ಚಕ್ಕಡಿಯ ಎತ್ತುಗಳು ಬೆದರಿ ಚಕ್ಕಡಿ ಎಳೆದುಕೊಂಡು ಮುಂದೆ ನಡೆದವು.
ರಸ್ತೆ ಪಕ್ಕದ ಹೊಲದ ಗಿಡಗಳಲ್ಲಿ ಹತ್ತಿಯನ್ನು ಬಿಡಿಸುತ್ತಿದ್ದ ಹೆಂಗಸರು ಬಂದು

"ಅಯ್ಯಾ ಬಿಡ್ರಿ ಯಪ್ಪಾ ಬಿಡ್ರಿ, ಎಷ್ಟ ಹೊಡಿತೀರಿ
ಸತ್ತು ಗಿತ್ತಿತು.......
ಮೊದಲ ಸಣ್ಣ ಪಾರೈತಿ.........."

ನೀ ಏನ ಹೇಳಿ ಬೇ..... ನಿಂದೇನ ಗಂಟು ಹೋಕ್ಕದ? ಹೋಗೋದು ನಮ್ಮದು?
ಎಂದು ಉತ್ತರ ಕೊಡುತ್ತ ನನ್ನ ಹೊಟ್ಟೆಯ ಅಂಗಿಯ ಒಳಗಡೆ ಬಚ್ಚಿಟ್ಟುಕೊಂಡಿದ್ದ
ಹತ್ತಿಯನ್ನು ಹಿಡಿದು ಹೊರಕ್ಕೆ ತೆಗೆದು.

ನೋಡಿದ್ಯಾ, ಅರ್ಧಾ ಕಿಲೋ ಹತ್ತಿ ಆಕೈತಿ

ಎಂದು ಹಲ್ಲು ಕಡಿಯುತ್ತಾ, ಆಗಲೇ ಸುಮಾರು ದೂರ ಹೋಗಿರುವ ಚಕ್ಕಡಿಯ
ಕಡೆಗೆ ನಡೆದ. ಆದರೆ ಆತನ ಮಾತು ನನ್ನ ಅಳುವು ಎರಡು ನಿಂತಿರಲಿಲ್ಲ.

ನಾನು ಸಾವರಿಸಿಕೊಂಡು ಏಳುತ್ತಿದ್ದೆ. ಕಣ್ಣೀರಿನಷ್ಟೇ ಸಿಂಬಳವೂ ವೇಗವಾಗಿ
ಹರಿಯುತ್ತಿತ್ತು. ಪಕ್ಕದಲ್ಲಿದ್ದ ಹೆಂಗಸರು ಸಾಂತ್ವನ ಜೊತೆಗೆ ಬುದ್ದಿಯ ಮಾತು ಹೇಳುತ್ತಿದ್ದರು. ನನ್ನೆಡೆಗೆ ಯಾರೋ ಓಡಿ ಬರುತ್ತಿದ್ದಂತೆ ಎನಿಸಿತು. ಕಣ್ಮರೆಸಿಕೊಂಡು,
ನೋಡಿದರೆ ಅದೇ ಆ ಚಕ್ಕಡಿಯ ಮನುಷ್ಯ! ನನ್ನ ಅಳುವು ಮತ್ತಷ್ಟು ಹೆಚ್ಚಾಯಿತು.
ಎದ್ದು ನಿಂತವನು, ಅಲ್ಲಿ ನೆಲಕ್ಕೆ ಹಿಡಿದುಕೊಳ್ಳುವಂತೆ ಗಪ್ಪನೇ ನೆಲ ಹಿಡಿದು ಕುಳಿತು
ಬಿಟ್ಟೆ. ಆತ ಬಂದವನ್ನೇ ನನ್ನ ಮುಂಗೈಯನ್ನು ಹಿಡಿದು ದರದರನೇ ಎಳೆದೊಯ್ಯ ತೊಡಗಿದ.

"ಯ್ಯೋ ಬಿಡ್ರಿ, ಹೊಡಿತನ ಹೊಡ್ದ ಮತ್ತ
ಎಳ್ದ ಒಯಿತ್ತೀರೆಲ್ಲಾ"

ಎಂದು ಆ ಹೆಂಗಸರು ಇನ್ನೊಂದೆಡೆಗೆ ಜಗ್ಗುತ್ತಿದ್ದರು. ಆತ ಎಳೆದೊಯ್ದು ಏನು
ಮಾಡುತ್ತಾನೆ ಎನ್ನುವುದಕ್ಕಿಂತ ಮತ್ತು ಈ ಹೆಂಗಸರು ನನ್ನನ್ನು ಬಿಡಿಸಿಕೊಳ್ಳಬಹುದೋ
ಇಲ್ಲವೋ ಎಂಬ ವಿಚಾರಕ್ಕಿಂತ-

"ನನ್ನ ಪಾಟಿ ಚೀಲ, ನನ್ನ ಅಳುವ ಧ್ವನಿಯ ಚೀರಾಟಕ್ಕೂ, ಆ ಹೆಂಗಸರ
ಬೇಡಿಕೆಗಾಗಿಯೊ ಕೊನೆಗೆ ಆತ ನನ್ನನ್ನು ಬಿಟ್ಟು ಹೋದ. ಅಲ್ಲಿಂದೆದ್ದವನೇ ನಾನು
ಗಿಡದ ಮರೆಯಲ್ಲಿ ಅಡಗಿಸಿಟ್ಟ ಚೀಲವನ್ನು ತೆಗೆದು ನೋಡಿದೆ. ಕಟ್ಟಿಗೆಯ ಕಟ್ಟೆ ಇಲ್ಲದ
ಮಣ್ಣಿನ ಪಾಟಿ ಭದ್ರವಾಗಿತ್ತು. ಅದನ್ನು ಹೆಗಲಿಗೆ ಹಾಕಿದವನೇ ಓಡಲು ಆರಂಭಿಸಿದೆ.
ಆತ ಮತ್ತೆ ಮರಳಿ ಬಂದು ನನ್ನನ್ನು ಎಳೆದೊಯ್ಯಬಹುದೆಂಬ ಭಯ ಆವರಿಸಿತ್ತು.

ಹೀಗಾಗುವುದಕ್ಕೆ ಕಾರಣವಿಷ್ಟೇ.

ಬೆಳಗು ಹೊಟ್ಟೆಗಿಲ್ಲದೆ ಶಾಲೆಗೆ ಹೋಗುವುದು (ಮನೆಯಲ್ಲಿ ತಿನ್ನಲು ಇದ್ದಾಗಲೂ).
ಎಷ್ಟೋ ಬಾರಿ ಕಣ್ಣಿಗೆ ಬವಳಿ ಬಂದು ರಸ್ತೆಯಲ್ಲಿಯೇ ಬಿದ್ದದ್ದೂ ಇದೆ. ಹೊಲದ
ಕೆಲಸಕ್ಕೆ ಹೋಗಿರುವ ನನ್ನ ತಾಯಿಗೆ ಈ ವಿಷಯ ತಿಳಿದಾಗ ಅವಳು ನನ್ನನ್ನು ಎದೆಗವಚಿ
ಅತ್ತದ್ದು ಬೇರೆ ಮಾತುಗಳು.

ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಒಂದು ಮಿಠಾಯಿಯ ಅಂಗಡಿ ಇತ್ತು. ಅದಕ್ಕೆ
ನಾವು 'ಉಂಡಿ ಮುತ್ಯಾನಂಗಡಿ' ಎಂದು ಕರೆಯುವುದು ವಾಡಿಕೆ. ಹತ್ತಿಯನ್ನು ತಂದು ಕೊಟ್ಟರೆ
ಈತ ಒಂದು ಚಿಕ್ಕ ಬೆಲ್ಲದುಂಡೆಯನ್ನು ಕೊಡುತ್ತಿದ್ದ. ಈ ಉಂಡಿಗಳು ಆಗ ದುಡ್ಡಿಗೆ
ಮೂರು. ಬೊಗಸೆ ತುಂಬಾ ಕೊಟ್ಟ ಹತ್ತಿಗೆ ಈತ ಕೊಡುವುದು ಒಂದೋ ಅಥವಾ ಎರಡೋ
ಉಂಡಿಗಳು.

"ನನಗೆ ಕರಿ ಉಂಡಿ ಬೇಡಾ
ಬಿಳಿ ಉಂಡಿ ಕೊಡ್ರಿ"

ಎಂದು ಅಂಗಲಾಚುತ್ತಿದ್ದೆ. ಆ ಅಂಗಡಿ ಸ್ವಲ್ಪ ಎತ್ತರದ ಕಟ್ಟೆಯ ಮೇಲಿತ್ತು.
ಅದಕ್ಕೆ ಮೂರು ಮೆಟ್ಟಿಲುಗಳಿದ್ದವು. ಆ ಮೆಟ್ಟಿಲುಗಳು ನಮಗೇರುವುದಕ್ಕೆ ಅವಕಾಶ
ಇರುತ್ತಿರಲಿಲ್ಲ. ನಾನು ಮೊದಲೆ ಆ ಅಂಗಡಿಯ ಕಟ್ಟೆಗಿಂತ ಚಿಕ್ಕವ. ಆತ ಹತ್ತಿಯನ್ನು ತೆಗೆದುಕೊಳ್ಳಬೇಕಾದರೆ, ಅಂಗಡಿಯವ ಟೀಕಾ ಆಸನದ ಮೇಲೆ ಕೂತವನೆ ಚುರುಮುರಿ
ಸೋಸುವ ಛಾಣಿಯ ಹಿಡಿಯನ್ನು ಹಿಡಿದು ಮುಂದಕ್ಕೆ ಚಾಚುತ್ತಿದ್ದ. ನಾನು ಅದರಲ್ಲಿ
ಹತ್ತಿಯನ್ನು ಹಾಕಬೇಕು. ಅವನು ಛಾಣಿಯಿಂದಲೇ ಒಂದೆರಡು ಬಾರಿ ತೂಗಿ ನೋಡಿದವನಂತೆ
ನಟಿಸಿ, ತನ್ನ ಅಂಗಡಿಯ ಮೂಲೆಯ ಹತ್ತಿಯ ರಾಶಿಗೆ ಎಸೆದು ಬಿಡುತ್ತಿದ್ದ. ಅಂದು
ನಾನು ಮೆಟ್ಟಿಲುಗಳನ್ನೇರಿ ಬಿಳಿ ಉಂಡಿ ಎಂದು "ಬೋಂದೆ ಲಾಡುಗೆ ಕೈ ಮಾಡಿ ತೋರಿಸಿ
ಕೇಳಿದ್ದರಿಂದ

"ಏ ಮೊದಲು ಪಾವಟಿಗಿ ಮ್ಯಾಲಿಂದ ಕೆಳಗಿಳಿಯ"- ಎಂದು ಬೆದರಿಸಿದ ಕೆಳಗಿಳಿದು
ಬೊಗಸೆ ಅಥವಾ ಅಂಗಿ ಉಡಿಯೊಡ್ಡಿದಾಗ ಅದರಲ್ಲಿ ಎಸೆಯುತ್ತಿದ್ದ. ಬೊಗಸೆಯೊಡ್ಡಿದಾಗ
ನೆಲಕ್ಕೆ ಬಿದ್ದ ಉಂಡೆಗಳು ಗುಂಡು ಉರುಳಿದಂತೆ ಉರುಳಿ ಹೋಗುತ್ತಿದ್ದವು. ಅಷ್ಟೇ
ಮೋಜಿನೊಂದಿಗೆ ಅದನ್ನೆತ್ತಿಕೊಂಡು ಬಾಯಿಂದ ಊದಿ, ಆಗಲೂ ಮಣ್ಣು ಹೋಗದಿದ್ದರೆ
ಅಂಗಿಗೆ ಒರೆಸಿಕೊಂಡು ತಿನ್ನುವ ಪದ್ಧತಿ.

ಬಿಳಿ ಉಂಡಿ ಕೇಳಿದ್ದರಿಂದ ಉಂಡಿ ಮುತ್ಯಾ ತನ್ನ ಬಲಗೈಯನ್ನು ಮುಂದೆ ಮಾಡಿ
"ತರೂದೇ ಈಟ ತರಿ, ಬೋಂದೆ ಲಾಡು ಹ್ಯಾಂಗ ಕೊಡ್ತಾರೋ"
ಈಗ ತಂದೆಯಲ್ಲಾ ಅದರ ಯಾಡ ಪಟ್ಟ ತೊಂಬಾ ಕೊಡ್ತಿನಿ ಎಂದ. ತನ್ನ
ಅಂಗಡಿಯಲ್ಲಿ ಕುಳಿತಿದ್ದ ಮತ್ತೊಬ್ಬನಿಗೆ ನೋಡಿ ಮುಸಿಮುಸಿ ನಕ್ಕ. ನಾನು ನಾಚಿ ನೀರಾದೆ.

"ನೀ ಏನು ಹುಡುಗೋ,
ತರೊದೇ ತರಿಯಾ ಒಮ್ಮೆ ಬಾಳೋಟ ತರಬೇಕು, ಅದ್ರ ಹೌದ್ ಅಂತಾರ
ಹೋಗ ಬಾಳೋಟು ತೊಂಬಾ ಎರಡು ಉಂಡಿ ಕೊಡ್ತಾರ"
ಎಂದು ಮತ್ತೊಬ್ಬ ವ್ಯಕ್ತಿ ಹುರಿದುಂಬಿಸಿದ.

ನಾಳೆ ಹೇಗಾದರೂ ಮಾಡಿ ಎರಡು ಪಟ್ಟು ಹತ್ತಿ ಇರಿದು ಸಂಗ್ರಹ ಮಾಡಲೇಬೇಕು
ಎಂದು ನಿರ್ಧರಿಸಿದೆ. ಹತ್ತಿಯನ್ನು ಕದಿಯಲು ಹೋಗುವಾಗ ಎರಡು ಮೂರು ಜನ
ಸೇರಿಯೇ ಹೋಗುವುದು ಹೆಚ್ಚು. ಆಗ ನನ್ನ ತಲೆಯಲ್ಲಿ ಬಂದ ವಿಚಾರ ಇಷ್ಟು.
ಈ ಇಬ್ಬರು ಸ್ನೇಹಿತರು ಇರೋದರಿಂದ ದಿಂಡಿನಿಂದ ಹತ್ತಿ ಬೇಗ ಬೇಗನೆ ಇರಿಯುವುದಕ್ಕೆ
ಆಗೋದಿಲ್ಲ. ಅದರಲ್ಲಿ ಮೂರು ನಾಲ್ಕು ಜನ ಆಗೋದರಿಂದ ಗಲಾಟೆ ಆಗಿ ಚಕ್ಕಡಿ
ನಡೆಸುವವನಿಗೆ ಗೊತ್ತಾಗುತ್ತದೆ. ಆದ್ದರಿಂದ ನಾನೊಬ್ಬನೇ ಹೋದರೆ ಹೆಚ್ಚು ಹತ್ತಿ ಇರಿದು
ತರಬಹುದೆನಿಸಿತು. ಆದ್ದರಿಂದ ನಾನೊಬ್ಬನೇ ಆ ಕೆಲಸದ ಸಾಹಸಕ್ಕೆ ಇಳಿದಿದ್ದೆ. ಚಕ್ಕಡಿ
ಹತ್ತಿರ ಬರುವವರೆಗೆ ಮರದಡಿಯಲ್ಲಿ ಅಡಗಿಕೊಂಡಿದ್ದೆ. ಚಕ್ಕಡಿ ನಾ ಅಡಗಿ ನಿಂತ ಮರ
ದಾಟಿ ಮುಂದಕ್ಕೆ ಹೋದಾಗ ಕಳ್ಳ ಹೆಜ್ಜೆ ಹಾಕುತ್ತ ಚಕ್ಕಡಿಯನ್ನು ಹಿಂಬಾಲಿಸಿದೆ. ಹತ್ತಿಯ
ದಿಂಡಿನ ಮೇಲೆ ಕುಳಿತು ಚಕ್ಕಡಿ ನಡೆಸುವ ಚಾಲಕನಿಗೆ ನಾನು ಗಾಡಿ ಅಡಿಯಲ್ಲಿ ಬಾಗಿ ಹತ್ತಿ ಇರಿಯುವುದು ಕಾಣುತ್ತಿರಲಿಲ್ಲ. ಹೀಗಾಗಿ ಹತ್ತಿ ಇರಿಯುತ್ತಲೇ ಹೋದೆ. ಹತ್ತಿ
ಹೆಚ್ಚು ಸಂಗ್ರವಾದಂತೆ ನನಗೆ ಒಂದರ ಬದಲಾಗಿ ಎರಡು ಉಂಡೆ ಸಿಕ್ಕ ಅನುಭವವಾಗಿ
ಮುಖ ಅರಳಿತು. ಇನ್ನೇನು ಸಾಕು ಕೈ ಬಿಡೋಣ, ಬಿಟ್ಟು ನೆಲಕ್ಕೆ ಕೂಡುವ ಮುನ್ನವೇ
"ಚಟಲ್" ಎಂದು ಬಾರುಕೋಲಿನ ಹೊಡೆತ ತಿಂದಾಗ ಗಣಪನಂತೆ ಹೊಟ್ಟೆ ಮೇಲೆ
ಮಾಡಿಕೊಂಡು ಬಿದ್ದೆ.

ನನ್ನಜ್ಜಿ ನನ್ನ ಅವತಾರವನ್ನು ನೋಡಲಾಗದೆ ದುಃಖದಿಂದ ರೋದಿಸಿದಳು. ಮಣ್ಣಿನ
ಹೊಸ ಮಡಕೆ ತಂದು ಹಾಳೆ ಹಾಗೂ ಗರಟೆಯ ಕೆಲ ಚದುರುಗಳನ್ನು ಹಾಕಿ ಬೆಂಕಿ
ಮಾಡಿದಳು. ಅದರಲ್ಲಿ ನೀರು ತುಂಬಿ, ಅರಿಶಿಣ, ಕುಂಕುಮ ಹಾಕಿ ನದರು ಮಾಡಿದಳು.
ಲಿಂಬೆ ಹಣ್ಣು ಕೊಯ್ದು, ಮೂರು ತುಂಡು ಮಾಡಿ ಸೂಜಿ ಚುಚ್ಚಿ ಗಡಿಗೆಗೆ ಹಾಕಿದಳು.
ಜೋಗಪ್ಪನ ಹತ್ತಿರ ಹೋಗಿ ಅಲ್ಲಿಂದ ಏನೋ ತಂದು ಆ ಮಡಕೆಗೆ ಹಾಕಿ, ನನ್ನ ತಲೆ
ಸ್ವಲ್ಪ ಕೂದಲು ಕತ್ತರಿಸಿಕೊಂಡಳು. ನಾನೆಷ್ಟು ಮಾತನಾಡಿದರೂ ಮಾತನಾಡದೆ ಮೂಕಿಯ
ಹಾಗೆ ವರ್ತನೆ ಮಾಡುತ್ತ ಮತ್ತೆ ಪುನಃ ಆ ಮಡಕೆಯನ್ನು ಒಯ್ದು ಜೋಗಪ್ಪನಿಗೆ ಕೊಟ್ಟು
ಬಂದು ನನಗೆ ಧೈರ್ಯ ಹೇಳಿದಳು.

"ಈಗ ಆ ಗಡಗಿ ಹೋಗಿ ಅವ್ರ ಹಿತ್ತಲದಾಗ ಬೀಳತೈತಿ -
ನಿನಗ ಆಗಿದ್ದರ ಎರಡಪಟ್ಟ ಅವ ಆಕೃತಿ, ಸುಮ್ಮನಿರು"

ಎಂದು ನನ್ನನ್ನು ಎದೆಗವಚಿಕೊಂಡಳು. ಇದಕ್ಕಿಂತ ಹೆಚ್ಚಿನ ಬಲ ನನ್ನಜ್ಜಿಯಲ್ಲಿ
ಇರಲಿಲ್ಲ. ಏಕೆಂದರೆ, ನನಗೆ ಹೊಡೆದವ ನಮ್ಮೂರ ಗೌಡರ ಸಂಬಂಧಿಕನಾಗಿದ್ದ.

ಆ ಬೆಳ್ಳನೆಯ ಲಾಡು ಕೈ ಸಿಕ್ಕಾಗ ಈಗಲೂ ನನಗೆ ಆ ಬಾರುಕೋಲಿನ
ನೆನಪಾಗುತ್ತದೆ.

ಆ ಗಡಿಗೆಯ ನೆನಪಾಗುತ್ತದೆ.

ಇಂಥ ಶಿಕ್ಷೆ, ಈ ರೀತಿಯ ಕೆಲಸಕ್ಕೆ ಪ್ರೇರೇಪಿಸಿದ ಅಂಗಡಿಯ ತಾತ ಹಾಗೂ
ಆತನ ಅಂಗಡಿಯಲ್ಲಿದ್ದ ಮತ್ತೊಬ್ಬ ಮನುಷ್ಯನಿಗೂ ಸಂದಬೇಕಾಗಿತ್ತಲ್ಲವೇ?

“ಓಕುಳಿ” ಎಂಬ ಈಸ್ಟಮನ್ ಕಲರ್ ಚಿತ್ರ

ದಲಿತ ಕೇರಿಗೂ ಊರ ಸಂಪ್ರದಾಯಗಳಿಗೂ ಆಶ್ಚರ್ಯಕರವಾದ ರೀತಿಯಲ್ಲಿ
ಸಂಬಂಧಗಳಿವೆ. ಈ ಸಂಬಂಧಗಳು ದಲಿತರಿಗೆ ಮಾರಕವಾಗಿಯೂ ದಲಿತೇತರಿಗೆ
ಪೂರಕವಾಗಿಯೂ ಕೆಲಸ ಮಾಡುತ್ತವೆ. ಊರಿನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ
ದಲಿತರಿಗೆ ಅವಕಾಶ ಕೊಡಲಾಗಿದೆ ಎನ್ನುವ ನೆಪದಲ್ಲಿ ಅವರ ಬದುಕನ್ನು ಅಡಕೊತ್ತಿನಲ್ಲಿಟ್ಟು,
ಅಡಕೆಯಂತೆ ಕತ್ತರಿಸುತ್ತಾರೆ. ಈಗ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಳ ದರ್ಜೆಯ
ನೌಕರರಾಗಿ ಭರತಿಯಾದಂತೆ ಹಿಂದೆ ಸಾಂಪ್ರಾದಾಯಿಕ ಚಾಕರಿ ಕೆಲಸಗಳಿಗೆ
ಭರ್ತಿಯಾಗುತ್ತಿದ್ದರು. ಅಂತಹ ಮನ ಕೆದಕುವ ಸಂಪ್ರದಾಯವೊಂದನ್ನು ಇಲ್ಲಿ
ನಿವೇದಿಸಬಯಸುವೆ.

ನಮ್ಮ ಕೇರಿಯ ಹೆಂಗಸರಿಗೆ ಶ್ರಾವಣ ಮಾಸದ ಓಕುಳಿ ಎಂದರೆ ಕೆಲವರಿಗೆ ಬಲು
ಹಿಗ್ಗು-ಕುಗ್ಗು- ಸುತ್ತಮುತ್ತಲಿನ ಊರುಗಳಲ್ಲಿ ಬಿದರು ಕುಂದಿಯ ಓಕುಳಿ ಎಂದರೆ
ಪ್ರಸಿದ್ಧವಾದದ್ದು. ಈ ಸಂಪ್ರದಾಯದಲ್ಲಿ ಪಾಲುಗೊಳ್ಳುವವರು ನಮ್ಮ ಕೇರಿಯ ಹೆಂಗಸರೇ
ಆಗಿದ್ದರು.

ಸಂಪ್ರದಾಯದ ನಡಾವಳಿ ಹೀಗಿದೆ. ದಲಿತ ಹೆಂಗಸರು ಕುಪ್ಪಸವನ್ನು ಕಳೆದು,
ಅಂಡುಗಚ್ಚೆ ಹಾಕಿದ ಸೀರೆಯನ್ನು ಉಟ್ಟಿರಬೇಕು. ಅಂದರೆ ನಡು ಭಾಗಕ್ಕೆ ಮಾತ್ರ ಸೀರೆ
ಸುತ್ತಿದ್ದು ಸೆರಗು ತಲೆ ಮೇಲೆ ಬಂದಿರುತ್ತದೆ. ಇವರ ಕೈಯಲ್ಲಿ ನೀಳವಾದ ಮಾರುದ್ದದ
ಲಕ್ಕಿಯ ಹತ್ತಾರು ಜಬರಿಗಳಿರುತ್ತವೆ. ಇವರ ವಿರುದ್ಧ ಇನ್ನೊಂದು ಬಣ, ಇದರಲ್ಲಿ
ದಲೀತೇತರ ಹಾಗೂ ಬ್ರಾಹ್ಮಣೇತರರಿಂದ ಕೂಡಿದ ಗಂಡಸರು ಮಾತ್ರ ಇರುತ್ತಿದ್ದು,
ಅಂಡಗಚ್ಚೆ ಹಾಕಿದ ಧೋತಿಯನ್ನು ಉಟ್ಟಿರುತ್ತಾರೆ. ಕೈಯಲ್ಲಿ ರ್‍ಯಾಳದಿಂದ ಅಥವಾ
ಸೆರೆಯಿಂದ ಲೇಪಿತವಾದ ಜೋಳಿಗೆ ಇರುತ್ತದೆ. ಈ ಗಂಡಸರಲ್ಲಿ ಸಾಮಾನ್ಯವಾಗಿ ಊರ
ಪ್ರಮುಖ, ಪುಂಡರೇ ಹೆಚ್ಚು. ದೇವಾಲಯದ ಎದುರು ಸಾಮಾನ್ಯವಾಗಿ ಈಗಲೂ ಕೆಲವೆಡೆ
ಹಾಳುಬಿದ್ದ ಹೊಂಡಗಳನ್ನು ಗಮನಿಸಬಹುದು. ಈ ಹೊಂಡಗಳ ಸುತ್ತಮುತ್ತಲೂ
ಕ್ರೀಡೆಯಾಗಿ ನಡೆಯುವುದು ಓಕುಳಿ, ಗಂಡಸರು ಅರಿಶಿಣ ಕುಂಕುಮಗಳಿಂದ ಕೂಡಿದ
ಹೊಂಡದ ನೀರು ಜೋಳಿಗೆಯಲ್ಲಿ ತಂದು ಹೆಂಗಸರಿಗೆ ಹೊಡೆಯುತ್ತಾರೆ. ಕೈಯಲ್ಲಿ ನೀಳವಾದ
ಜಬರಿಯನ್ನು ಹಿಡಿದು ನಿಂತ ಹೆಂಗಸರು ಈ ನೀರಿನ ಹೊಡೆತದಿಂದ ತಪ್ಪಿಸಿಕೊಂಡು ಜಬರಿಯಿಂದ ಗಂಡುಗಳಿಗೆ ಹೊಡೆಯಬೇಕು. ಇದೊಂದು ಬಗೆಯ ಸಾಂಪ್ರದಾಯಿಕವಾದ
ಕ್ರೀಡೆ.

ಗಂಡಸರು ಈ ಹೆಂಗಸರಿಗೆ ಜೋಳಿಗೆಯಲ್ಲಿ ನೀರು ತಂದು ಪದೇ ಪದೇಯಾಗಿ
ಹೊಡೆದಾಗ ಮೈಯೆಲ್ಲಾ ಒದ್ದೆಯಾಗಿ ತಲೆಯ ಸೆರಗು ಜಾರಿ ನೆಲಕ್ಕೆ ಬಿದ್ದರೂ
ಈ ಹೆಂಗಸರು ಅದರ ಪರಿವಿಲ್ಲದೆ ತಾವು ತಿಂದ ಪೆಟ್ಟಿಗೆ ಪ್ರತಿಯಾಗಿ ಅವರ ಬೆನ್ನು
ಬಾರೆತ್ತಲು ಓಡುತ್ತಾರೆ. ಒದ್ದೆಯಾದ ಮೈ ತುಂಬಿದೆದೆ ತೊಡೆಗಳು ಎಲ್ಲವೂ ಬಿಚ್ಚಿಟ್ಟ
ಗಂಟುಗಳು. ಉಗುಳು ನುಂಗುವ ಪ್ರೇಕ್ಷಕ ಮಹಾಶಯರಿಗೆ ಹಾಗೂ ಆಟಗಾರರ ಚಪಲಕ್ಕೆ
ಇದೊಂದು ಪುಕ್ಕಟೆ ಮನರಂಜನೆ. ಈ ಹೆಂಗಸರ ಮೈ ಮೇಲೆ ಆಗಾಗ ಬಂದು ಬೀಳುವ
ಕೆಂಪು ಹಳದಿ ಬಣ್ಣದ ನೀರುಗಳು ಈಸ್ಟ್‌ಮನ್ ಕಲರ್‌ನಲ್ಲಿ ಇಟ್ಟು ನೋಡುವಂತೆ
ಮಾಡಿದ್ದಾರೆ.

ಪ್ರತಿವರ್ಷ ಈ ಕ್ರೀಡೆ ನಡೆಯಲೇಬೇಕು ಎನ್ನುವ ನಿಯಮ. ನಡೆಸದಿದ್ದರೆ ಊರಿಗೆ
ಮಳೆ ಬರಲಾರದು. ಬೆಳೆಗೆ ರೋಗ ಬೀಳುತ್ತದೆ. ಊರಿಗೆ ಮಾರಿ (ರೋಗ) ಬರುತ್ತದೆ.
ಶನಿಯ ಕಾಟ ಹೆಚ್ಚುತ್ತದೆ ಎನ್ನುವ ನಂಬಿಕೆಗಳಿವೆ. ಈ ನಂಬಿಕೆಗಳಿಗೆ ಹೆದರುವ ದಲಿತ
ಹೆಂಗಸರು - ಗಂಡಸರು ಹೀಗೆ ಮನರಂಜನೆಯ ರೀತಿಯಲ್ಲಿ ಬಲಿಯಾಗುತ್ತಾರೆ.

ದೃಢಕಾಯಿಯಾದ ನನ್ನಜ್ಜಿ ನಮ್ಮ ಸಹೋದರರನ್ನೆಲ್ಲಾ ಕರೆದುಕೊಂಡು ಅಲ್ಲಿಯ
ಹತ್ತಿರದ ಜಾತ್ರೆಗೆ ಕರೆದೊಯ್ಯುತ್ತಿದ್ದಳು. ಜಾತ್ರೆಯ ನೋಟಕ್ಕಲ್ಲ, ಅಲ್ಲಿ ಸಿಗುವ ಊಟಕ್ಕೆ.
ಆಗ ಈ ಮನರಂಜನೆಯನ್ನೂ ಕೂಡ ತಪ್ಪದೇ ತೋರಿಸುತ್ತಿದ್ದಳು. ನಮಗೆ ಕಾಣದೆ
ಹೋದಾಗ ನಮ್ಮನ್ನು ತನ್ನ ಹೆಗಲ ಮೇಲೆ ಅಥವಾ ಗೋಡೆಯ ಮೇಲೆ ನಿಲ್ಲಿಸಿ
ತೋರಿಸುತ್ತಿದ್ದಳು.

ಹೆಚ್ಚಿನ ವ್ಯಾಸಂಗಕ್ಕೆ ಧಾರವಾಡಕ್ಕೆ ಬಂದಾಗ ಪಿಎಚ್.ಡಿ. ಮಾಡುವ ಸ್ನೇಹಿತ
ಸಿಕ್ಕ. ಆತನ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಅವನೊಂದಿಗೆ ನಾನೂ ಹೋಗುತ್ತಿದ್ದೆ.
ಸಂದರ್ಭ ಬಂದಾಗ ಈ ಮೇಲಿನ ಸಂಪ್ರದಾಯ ಪ್ರಸ್ತಾಪ ಮಾಡಿದೆ. ಆಗ ಆತ ತನ್ನ
ಪಕ್ಕದ ಊರಿನಲ್ಲಿ ಇದಕ್ಕಿಂತಲೂ ಭೀಕರವಾಗಿ ನಡೆಯುವ ಘಟನೆ ಹೇಳಿದಾಗ ಅದನ್ನು
ನೋಡಲೇಬೇಕು ಎಂಬ ಹಟ ಬಂತು. ಓಕುಳಿಯಂತೆ ಇದೂ ಶ್ರಾವಣಮಾಸದಲ್ಲಿಯೇ
ಹನುಮಂತನ ಎದುರೇ ನಡೆಯುವ ಕ್ರೀಡೆ ಇಲ್ಲಿಯೂ ದಲಿತ ಹೆಂಗಸರೇ ಬೇಕು.

ಗಂಡಾಗಲಿ-ಹೆಣ್ಣಾಗಲಿ ಅವರ ಮೈಮೇಲೆ ಬಟ್ಟೆ ಇರುವುದಿಲ್ಲ. ಗಂಡು ಹೆಣ್ಣು
ಸೇರಿ ನೃತ್ಯ ಮಾಡುತ್ತವೆ. ಅನಂತರದಲ್ಲಿ ಪ್ರಮುಖವಾದ ಅಂಶವೆಂದರೆ, ಗಂಡುಗಳ ಹೆಗಲ
ಮೇಲೆ ಹೆಣ್ಣುಗಳು ಕುಳಿತುಕೊಂಡು, ಹೆಣ್ಣು ಬಾಳೆಹಣ್ಣನ್ನು ಸುಲಿದು ಗಂಡಿನ ಬಾಯಲ್ಲಿ
ಇಡುವುದಕ್ಕಾಗಿ ಹೋಗುತ್ತದೆ. ಗಂಡು ಬಾಯಿ ಮುಂದಕ್ಕೆ ತಂದಾಗ ತಕ್ಷಣ ಅದನ್ನು ಅಲ್ಲಿಂದ ಸರಿಸಿಬಿಡುತ್ತದೆ. ನಂತರ ತಾನೂ ಆ ಬಾಳೆಹಣ್ಣನ್ನು ತಿನ್ನದೆ ನೆಕ್ಕುತ್ತದೆ. ಹೆಣ್ಣು
ನೆಕ್ಕಿದ ಬಾಳೆಹಣ್ಣನ್ನು, ಈ ಮೇಲು ಜಾತಿಯ ಗಂಡು ಕಚ್ಚಿ ತಿನ್ನುತ್ತದೆ. ಇದು
ಸಂಪ್ರದಾಯದಲ್ಲಿ ಪ್ರಧಾನವಾದದ್ದು.

ಇಷ್ಟು ವಿಚಾರ ಸ್ನೇಹಿತ ನನಗೆ ಹೇಳಿದಾಗ, ಇಂಥ ಸಂಪ್ರದಾಯ ಒಟ್ಟುಗೂಡಿಸಿ
ಒಂದು ಪ್ರಬಂಧ ಬರೆಯಬೇಕು ಎನ್ನುವ ವಿಚಾರ ತಿಳಿಸಿದೆ. ಅದರಲ್ಲಿ ಆತನೂ ಅಷ್ಟೇ
ಆಸಕ್ತಿ ತೋರಿಸಿ ವಿಷಯ ಸಂಗ್ರಹಿಸಿ ಕೊಟ್ಟ. ಊರಿನವರು ಸಂಪ್ರದಾಯ ಇರುವ ದಿನವನ್ನು
ಹೇಳಿದರು. ಮಾರನೇ ದಿನ ಹೊರಡಲು ಸಿದ್ಧವಾದಾಗ ಅದು ನಿನ್ನೆಯ ದಿನದ ರಾತ್ರಿಯೇ
ಮುಗಿದುಹೋಗಿದೆ. ಈಗ ಜನಕ್ಕೆ ಅದರ ಬಗ್ಗೆ ಹೆಚ್ಚಿನ ಕಣ್ಣು ಇರುವುದರಿಂದ ಯಾರಿಗೂ
ಅರಿಯದ ಹಾಗೆ ಮಾಡಿ ಮುಗಿಸಿ ಬಿಡುವುದಾಗಿ ಹೇಳಿದರು. ಆದರೆ ಈ ಸಂಪ್ರದಾಯ
ಧಾರವಾಡ ಜಿಲ್ಲೆಯಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಹಳ್ಳಿಗೆ ಮೊದಲು
"ತುಣ್ಣಗನೂರು" ಎಂದು ಹೆಸರಿತ್ತಂತೆ. ಜಾನಪದ ಅಧ್ಯಯನಕಾರನಾದ ನಾನು ಈ ವಿಚಾರದ
ಕುರಿತು ಪ್ರಬಂಧ ಬರೆಯಲಾಗಲಿಲ್ಲ. ಏಕೆಂದರೆ, ಅಧ್ಯಯನಕಾರರಲ್ಲಿ ಇಂಥ ವಿಷಯಗಳು
ಪಾಂಡಿತ್ಯ ಪ್ರದರ್ಶನಕ್ಕೆ ವಸ್ತುಗಳಾಗಿವೆ ಎನಿಸಿತು. ಆ ರೀತಿ ಬಾಳೆಹಣ್ಣು ತಿನ್ನಿಸುವುದು
"ಪ್ರಜನನದ ಸಂಕೇತ", ಓಕುಳಿ ವಿಚಾರಕ್ಕೆ "ಸಮೃದ್ಧಿಯ" ಅರ್ಥ ಕೊಡುವುದು, ಅರಿಶಿಣ
ಕುಂಕುಮಕ್ಕೆ ಇನ್ನೊಂದು ಬಗೆಯ ಅರ್ಥ. ಇಂಥವೆಲ್ಲಾ ಅರಿತ ಮೇಲೆ ಈ ಪಾಂಡಿತ್ಯದ
ಬಗ್ಗೆ ಹೇಸಿಕೆಯೂ ಎನಿಸಿ ಬರೆಯುವುದನ್ನು ನಿಲ್ಲಿಸಿಬಿಟ್ಟೆ.

ಇದೆಲ್ಲವೂ ಇಲ್ಲಿ ಯಾಕಾಗಿ ಕಥೆ ಮಾಡಿ ಹೇಳುತ್ತಿರುವನೆಂದರೆ ಮೇಲು
ಜಾತಿಯವರು ವರ್ಷಕ್ಕೊಮ್ಮೆ ಕೊಡುವ ಸೀರೆ-ಕುಪ್ಪಸ ದಲಿತ ಸ್ತ್ರೀಯರಲ್ಲಿ ಆಸೆ ಹುಟ್ಟಿಸಿವೆ.
ನನ್ನೂರಿನ ಸುತ್ತಮುತ್ತ ಇಂಥ ಸಂಪ್ರದಾಯ ಇನ್ನೂ ಜೀವಂತವಾಗಿವೆ. ಬದಲಾವಣೆ
ಬಹಳೆಂದರೆ ಎದೆಗೆ ಕುಪ್ಪಸ ತೊಡಿಸಿದ್ದಾರೆ ಎಂದು ಕೇಳಿದ್ದೇನೆ. ಮೊದಲ ಭಾಗದಲ್ಲಿ
ಹೇಳಲಾದ ನನ್ನ ಓದಿನ ಹಿಂದಿರುವ ಸ್ಥಿತಿಯನ್ನೇ ಗಮನಿಸಿ. ಬೆಳೆಯಬೇಕು ಎಂಬ ಜೀವಿಗೆ
ಸಣ್ಣ ಸಣ್ಣ ವಿಚಾರಗಳು ಹೇಗೆ ಅಡೆತಡೆ ತರುತ್ತವೆ ಎನ್ನುವುದು ಒಂದಾದರೆ, ಹೆಣ್ಣಿನ
ಶೀಲ ಹರಣ ಮಾಡಿ ವೇಶ್ಯೆಯಾಗಿಸಿ ಅವಳಲ್ಲಿಗೆ ಬರುವ ಗಂಡಸರು ತಮ್ಮ
ಮರ್ಯಾದೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೂಡುವ ತಂತ್ರಗಳನ್ನು ಗಮನಿಸಿದರೆ
ಆ ಹೆಣ್ಣುಗಳಿಗೆ ಮರ್ಯಾದೆ ಇಲ್ಲವೇ? ಎಂಬುದು ಎರಡನೆಯದು. ಸಂಪ್ರದಾಯದ
ಸೋಗಿನಲ್ಲಿ ಇಂದಿಗೂ "ಓಕುಳಿಯ ಈಸ್ಟ್‌ಮನ್ ಕಲರ್ ಚಿತ್ರ" ನೋಡುವ ಈ ಗಂಡಸರು
ತಮ್ಮ ಮಡದಿಯರನ್ನು ಈ ರೀತಿ ನಿಲ್ಲಿಸಿ ಬಹಿರಂಗವಾಗಿ ಆಡುತ್ತೀರಿಯೇ ಎಂದು
ಪ್ರಶ್ನಿಸಿದರೆ ಕಣ್ಣು ಕೆಕ್ಕರಿಸುತ್ತಾರೆ. ತಮ್ಮ ಮಡದಿಯಂತೆ ಇವರೂ ಮಾನವುಳ್ಳ ಹೆಂಗಸರು
ಎಂಬ ಭಾವನೆ ಇವರಿಗೆ ಬರುವುದಾದರೂ ಯಾವಾಗ? ಅಧ್ಯಯನಕಾರರ ಪಾಂಡಿತ್ಯ
ಪ್ರದರ್ಶನಕ್ಕೆ ವಸ್ತುವಾಗಿ ಅವುಗಳಿಗೆ ಎತ್ತಲಾಗದಂತಹ ಪದಗಳನ್ನು ಹಚ್ಚಿ ಅದನ್ನು ಗೌರವದ ಸ್ಥಾನಕ್ಕೆ ನಿಲ್ಲಿಸುವ ಬಗ್ಗೆ ಏನೆನ್ನಬೇಕು?

ಸವದತ್ತಿಯಲ್ಲಿಯೂ ಇಂಥ ಹೇಯವಾದ ಬೇವಿನುಡುಗೆ, ಗಂಧದ ಉಡುಗೆ ಎಂದು
ನಡೆಸುವ ಹರಕೆಗಳು ಇವೆ. ಈ ಬಗೆಯ ಮೂಢನಂಬಿಕೆಗಳು ಕಾಲಕ್ಕೆ ತಕ್ಕಂತೆ
ಅಳಿದುಹೋಗದೆ ಬೇರೊಂದು ಸ್ವರೂಪದಲ್ಲಿ ಬದಲಾವಣೆಯಾಗಿ ಬರುತ್ತಿರುವುದೇ
ಹಾಸ್ಯಾಸ್ಪದ ಸಂಗತಿ. ಇದಲ್ಲದೇ ಇತ್ತಿತ್ತಲಾಗಿ "ಮಲ ತಿನ್ನಿಸುವ ಕಾರ್ಯಕ್ರಮಗಳನ್ನು "
ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥವನ್ನು ಗಮನಿಸಿದಾಗ
ಮನುಷ್ಯನ ಕ್ರೌರ್ಯಕ್ಕೆ ಹೊಸ ಗಿನ್ನೆಸ್ ದಾಖಲೆಗಳಾಗಿ ನಿಲ್ಲುತ್ತವೆಯಲ್ಲವೇ? ನಾವು
ಎಷ್ಟೊಂದು ಸೂಕ್ಷ್ಮ ಜೀವಿಗಳು ಎಂದರೆ ಇಂಥ ಘಟನೆಗಳನ್ನು ನೇರವಾದ ಶಬ್ದಗಳಲ್ಲಿ
ಹೇಳುವುದಕ್ಕೆ ನಾಚುತ್ತೇವೆ. ಮಲತಿನ್ನಿಸುವುದು ಅದೊಂದು ಪೂಜಾ ವಿಧಾನವೇನೋ
ಎನ್ನುವ ಹಾಗೆ (ಅಮೇಧ್ಯ ಪ್ರಾಶನ - ಮಲಪ್ರಾಶನ) ಹೇಳುತ್ತೇವೆ. ಇನ್ನು ತಿಂದವರಿಗೆ
ಏನನಿಸಲಿಕ್ಕಿಲ್ಲ?

1
1

ಜನಿವಾರ ಶಿವದಾರಗಳ ಮಹಾತ್ಮ

ಒಂದು ಧರ್ಮದ ಬಂಧ, ಬದುಕಿಗೆ ಬಂಧನವಾದಾಗ ಅದು ಭಯಾನಕವೆನಿಸುತ್ತದೆ.
ಅಲ್ಲದೆ ಅದೇ ಮತ್ತೊಂದು ಧರ್ಮಕ್ಕೆ ಬೆಳೆಯಲು ಅಪ್ರತ್ಯಕ್ಷವಾಗಿ ಅವಕಾಶವನ್ನೂ
ಮಾಡಿಕೊಡುತ್ತದೆ. ಹೀಗೆ ಒಂದು ಧರ್ಮದ ಅವನತಿ ಅಥವಾ ಪರಿಷ್ಕರಣದ ಜೊತೆಗೆ
ಮತ್ತೊಂದು ಧರ್ಮದ ಏಳೆಯೂ ಇರುವುದು ಕಂಡುಬರುತ್ತದೆ. ಈ ಧರ್ಮಗಳೆಂಬ
ಹಿಮಬಂಡೆಗಳ ಜೊತೆಗೆ ಆಯಾ ಧರ್ಮದ ಒಳಮತಗಳೂ ನಾಯಿಕೊಡೆಯಂತೆ ಎದ್ದು
ನಿಲ್ಲುತ್ತವೆ ಮತ್ತು ಅದೇ ಧರ್ಮದ ಒಳಮತಗಳೊಂದಿಗೆ ಸ್ಪರ್ಧೆ ಮಾಡುತ್ತವೆ.
ಈ ಎರಡೂ ಬಗೆಯ ಮತಾಂತರಗಳು ಬದುಕಿನಲ್ಲಿ ಹೊಸ ಹೆಸರು ತಂದರೂ, ಬದುಕಿನ
ಚಲನಶೀಲತೆಯಲ್ಲಾಗಲಿ ಅಥವಾ ಮೂಲಭೂತ ಸಂಸ್ಕೃತಿಯಲ್ಲಾಗಲಿ ಬದಲಾವಣೆ ತರಲು
ಸಾಧ್ಯವಾಗಿಲ್ಲ. ಬಸವಣ್ಣನವರ ಕಾಲದಲ್ಲಿ ಮತಾಂತರ ಹೊಂದಿದ ಎಷ್ಟೋ ಕೆಳಜಾತಿಯ
ಜನತೆ ಆಯಾ ಜಾತಿಗಳ ಒಳಪಂಗಡದವರಾಗಿ ನಿಂತು ಬಿಟ್ಟಿದ್ದಾರೆ. ಹಾಗೆಯೇ ಸ್ವಾತಂತ್ರ್ಯ
ಸಂಗ್ರಾಮದ ಕಾಲದಲ್ಲಿ ಅಂಬೇಡ್ಕರ್ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರೂ, ಅವರು
ಬೌದ್ಧಧರ್ಮೀಯರಾಗದೆ ನವಬೌದ್ಧರಾದರು. ಆದರೆ ಈಗ ನಾವು ವೀರಶೈವ ಹರಿಜನರು!
ಅವರ ಗತಿ ಸ್ಥಿತಿಯ ಒಂದೆರಡು ಪಳೆಯುಳಿಕೆ ಇಲ್ಲಿ ಬಿಚ್ಚಿಡಬಯಸುವೆ.

ಪ್ರಾಥಮಿಕ ಶಾಲೆಗೆ ಹೋಗುವಾಗಿನಿಂದ ಹಿಡಿದು ಹೈಸ್ಕೂಲು ಅಭ್ಯಾಸದವರೆಗೆ
ನನಗೆ ಹೆಚ್ಚು ಕಾಡಿದವುಗಳೆಂದರೆ ಜನಿವಾರಗಳು ಮತ್ತು ಶಿವದಾರಗಳು; ಅನಂತರದಲ್ಲಿ
ಮೋಜಾಗಿ ಕಂಡದ್ದು ಶಿವದಾರದಲ್ಲಿಯ ರಂಗುಗಳು.

ಸೇಂದಿ ಮತ್ತು ದಾರು (ಶರಾಯಿ)ಗಳ ಅಂಗಡಿ ಆಗ ಊರಲ್ಲಿ ಇರಲಿಲ್ಲವೆಂದು
ತೋರುತ್ತದೆ. ಇವು ನಮ್ಮ ಕೇರಿಯಲ್ಲಿಯೇ ಬತ್ತದ ಬಾವಿಗಳಾಗಿ ನಿಂತಿದ್ದವು ಎನ್ನುವುದರಲ್ಲಿ
ಸಂದೇಹವೇ ಇಲ್ಲ. ಇವು ಹಗಲಿರುಳೆನ್ನದೆ ನಮ್ಮ ಸೇವೆಯನ್ನು ಅಷ್ಟೇ ನಿಷ್ಠೆಯಿಂದ
ಸಲ್ಲಿಸುತ್ತಿದ್ದವು. ಅದರಲ್ಲೂ ಕಂಟ್ರಿದಾರುಗಳ (ದೇಶೀಯ ದಾರು) ಸೇವೆ ನಡೆದರೂ ಅದು
ನಿಗದಿತ ಸಮಯದಲ್ಲಿ ಮಾತ್ರ. ಪೊಲೀಸರ ಹೊಡೆತ ಬಡೆತಗಳ ನಡುವೆಯೂ ಈ ತೊರೆ
ಬತ್ತದೆ ಹರಿದು ಬರುತ್ತಿತ್ತು. ಈ ಬಾವಿ ಹಾಗೂ ತೊರೆಗಳ ಭಕ್ತರು ಕೇವಲ ನಮ್ಮ
ಕೇರಿಯವರೇ ಆಗಿರಲಿಲ್ಲ. ಊರಿನ ಮೇಲು ಜಾತಿಯವರು ಭಕ್ತರಾಗಿದ್ದಾಗಲೂ
ಅಂತರಂಗದಲ್ಲಿ ಮಾತ್ರ ನಿಷ್ಠೆಯಿಂದ ಭಕ್ತಿಯನ್ನು ತೋರುತ್ತಿದ್ದರು. ಬಹಿರಂಗದಲ್ಲಿ ಅದು
ಗೋಚರವಾಗುತ್ತಿರಲಿಲ್ಲ. ಕಂಟ್ರಿತೊರೆಯನ್ನು ಹೀರಲು ಬರುವ ಮೇಲುಜಾತಿಯ ಗುಪ್ತ ಭಕ್ತರ ಜನಿವಾರ
ಮತ್ತು ಶಿವದಾರಗಳೇ ನನಗೆ ಹೆಚ್ಚು ಕಾಡಿದ್ದು. ಇವರು ಎಂದೂ ತಮ್ಮ ಭಕ್ತಿಯನ್ನು
ಬಹಿರಂಗಪಡಿಸದಿದ್ದರೂ ಅದು ನಮ್ಮ ಕೇರಿಯವರಿಗೆ ಬಹಿರಂಗದ ಗುಟ್ಟೇ ಆಗಿತ್ತು.
ಇವರು ಎರಡಕ್ಕೆ ಅಥವಾ ಬಯಲುಕಡೆಗೆ ಹೋಗುವ ನೆಪದಲ್ಲಿ, ನೀರು ತುಂಬಿದ
ತಂಬಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ಕಡೆಗೆ ಹೋಗುತ್ತಿದ್ದರು. ನೋಡುವವರ
ಕಣ್ಣಿಗೆ ಈತ ಎರಡಕ್ಕೆ ಹೋಗುತ್ತಿದ್ದಾನೆ ಎನ್ನುವ ಭ್ರಮೆ. ಆದರೆ ಇವರು ಹೋಗುವುದು
ಶರಾಯಿ ಭಟ್ಟಿ ಇಳಿಸುವ ಸ್ಥಾನಕ್ಕೆ. ಹೋಗುವಾಗ ತಂಬಿಗೆಯಲ್ಲಿ ನೀರಿದ್ದರೆ, ಬರುವಾಗ
ಅದೇ ತಂಬಿಗೆಯಲ್ಲಿ ದಾರು! ನನಗೆ ಕಾಡಿದ್ದು ಇವರ ನಡವಳಿಕೆಯಲ್ಲ ಅಥವಾ ದಾರು
ಅಲ್ಲ. ಅವರಲ್ಲಿರುವ ಶಿವದಾರ, ಜನಿವಾರಗಳು. ಅವರು ಬಯಲು ಕಡೆಗೆ ಹೋಗುವಾಗ
ಬಗಲ-ಕೊರಳ ಈ "ದಾರ" ಕಿವಿಗೆ ತಳುಕು ಹಾಕಿಕೊಳ್ಳುತ್ತಿತ್ತು. ಇದು ಗುಡ್ಡಕ್ಕೆ ಹೋಗುವಾಗ
ಮಾತ್ರ. ಊರಲ್ಲಿ ಹೋಗುವಾಗ ಹೀಗಿರುವುದು ನಾನೆಂದೂ ಕಾಣಲಿಲ್ಲ.

ಮೇಲುಜಾತಿಯವರಲ್ಲಿ ಕೆಲವರು ಶರಾಯಿ ಅಂಗಡಿಯನ್ನು ಪ್ರವೇಶ
ಮಾಡುವವರೂ ಇದ್ದರು. ನಿಜವಾಗಿಯೂ ಇವರು ಬಂಡಾಯಗಾರರು! ಎಲ್ಲರ ಕಣ್ಣಿಗೆ
ಕಾಣುವಂತೆ ಕುಡಿದು ಬದುಕುವ, ಬಿಂಕಬಿಗುಮಾನ ಬಿಟ್ಟ ಭಕ್ತರು. ಇವರು ಕುಡಿಯುವಾಗ
ಮಾತ್ರ "ದಾರ"ವನ್ನು ಕಿವಿಗೆ ಸುತ್ತು ಹಾಕಿಕೊಂಡು, ಕಣ್ಣು-ಮೂಗು ಮುಚ್ಚಿಕೊಂಡು "ಗಟಕ್"
ಎಂದು ಕುಡಿದು ಮುಗಿಸುವವರು. ಊರವರ ಪಾಲಿಗೆ ಭಂಡರು.

ಸ್ವಾತಂತ್ರ್ಯದ ಸಂದರ್ಭದಲ್ಲಿಯೇ ನಮ್ಮ ಮನೆಯವರು ವೀರಶೈವ ಮತಕ್ಕೆ
ಮತಾಂತರ ಹೊಂದಿದವರು (ಇಲ್ಲಿ ನನಗೆ ಕ್ರೈಸ್ತ ಧರ್ಮ, ಹಿಂದೂ ಧರ್ಮ, ಪಾದ್ರಿಗಳು,
ಗಾಂಧಿ, ಅಂಬೇಡ್ಕರ್‌ ಮುಂತಾದವರು ನೆನಪಾಗುತ್ತಾರೆ. ಇವರಿಗೂ ಮೇಲು
ಜಾತಿಯವರೆನಿಸಿಕೊಳ್ಳುವ ಬಯಕೆ. ಹೀಗಾಗಿ ದೀಕ್ಷೆಯನ್ನು ಪಡೆದುಕೊಂಡರು. ಶಿವದಾರದ
ಜೊತೆಗೆ ಬಗಲಲ್ಲಿ ಲಿಂಗವೂ ಜೋತಾಡತೊಡಗಿತು.

ನಾನು ಕಾಲೇಜು ಕಟ್ಟೆ ಏರಿದ ದಿನಗಳವು. ನನಗೆ ಚೆನ್ನಾಗಿ ನೆನಪಿದೆ. ನಮ್ಮ
ಮನೆಗಳಲ್ಲೊಂದು ದೇವರ ಕೋಣೆ, ನೆಲದಿಂದ ಒಂದು ಅಡಿ ಎತ್ತರದ ಗೋಡೆಯಲ್ಲೊಂದು
ಮಾಡು, ಆ ಮಾಡಿನಲ್ಲೊಂದು ಡಬ್ಬಿ, ಆ ಡಬ್ಬಿಯೊಳಗಡೆ ಈ ಲಿಂಗಗಳು! ನೆಲಕ್ಕೆ
ಸುರುವಿದರೆ ರಾಶಿಯಾಗಿ ಬಿದ್ದು ಬಿಡುತ್ತಿದ್ದವು. ಅವುಗಳೊಂದಿಗೆ ಒಂದೆರಡು ವಂಕಿ,
ಉಡುದಾರ, ಕಾಲಲ್ಲಿ ಹಾಕಿಕೊಳ್ಳುವ ಚೈನು, ತಾಯಿತಗಳು ಇರುತ್ತಿದ್ದವು. ಇವೆಲ್ಲ
ಬೆಳ್ಳಿಯಿಂದ ಮಾಡಿದ್ದವು. ಅದರಲ್ಲೂ ಅವು ಶುದ್ಧ ಬೆಳ್ಳಿಯ ಆಭರಣಗಳೂ ಅಲ್ಲ!
ಆದರೆ ಆಗ ಅವೇ ನಮ್ಮ ಮನೆಯವರಿಗೆ ದೊಡ್ಡ ಆಸ್ತಿ! ಈ ಎಲ್ಲಾ ವಸ್ತುಗಳನ್ನು
ಡಬ್ಬಿಯಲ್ಲಿ ಹಾಕಿ ಡಬ್ಬಿಗೆ ಕೀಲಿ ಹಾಕುತ್ತಿದ್ದರು. ಗೋಡೆಯ ಮಾಡಿನಲ್ಲಿಟ್ಟು ಮಾಡಿಗೊಂದು
ತೆಳ್ಳನೆಯ ಕಲ್ಲಿಟ್ಟು ಮುಚ್ಚಿ ಬಿಡುತ್ತಿದ್ದರು. ಮೇಲೆ ಕೆಸರು ಮೆತ್ತಿ ಹೆಂಡಿಯನ್ನು ಸಾರಿಸಿದರೆ
ಮುಗಿಯಿತು ಅಲ್ಲೊಂದು "ಮಾಡು" ಇತ್ತು ಎನ್ನುವುದೂ ಗೊತ್ತಾಗುತ್ತಿರಲಿಲ್ಲ.
ಈ ಅಮೂಲ್ಯವಾದ ವಸ್ತುಗಳನ್ನು ಕಳ್ಳರು ಕದ್ದಾರೆಂಬ ಭಯದಿಂದ ಈ ಭದ್ರತೆ!
ಗೋಡೆಯೇ ಒದ್ದರೆ ಬೀಳುವಂತಹದ್ದು. ಡಬ್ಬಿಯೋ ಗುದ್ದಿದರೆ ಸಾಕು ಒಡೆದು
ಹೋಗುವಂತಹದು! ಆದರೆ ಈ ಡಬ್ಬಿ ವರ್ಷಕ್ಕೊಮ್ಮೆ ಹಿರಿಯರ ಪೂಜೆ ಮಾಡುವಾಗ
ಮಾತ್ರ ಹೊರಬರುತ್ತಿತ್ತು.

ಇಂದು ಮನೆಯಲ್ಲಿರುವುದು ಒಂದೇ ಒಂದು ಲಿಂಗು. ಅದು ಈಗ ನನ್ನ ತಾಯಿಯ
ಕೊರಳಲ್ಲಿದೆ. ಅದರಲ್ಲಿ "ಕಾಂತಿ"ಯೂ ಇಲ್ಲ. ಖಾಲಿ ಡಬ್ಬಿ ಮಾತ್ರ ಜೋತಾಡುತ್ತಿದೆ.
ಅಂದು ಬೆಲೆಯುಳ್ಳ ವಸ್ತುಗಳಾಗಿದ್ದ ಆ ಲಿಂಗುಗಳು, ನಾನು ಕಾಲೇಜು ಕಟ್ಟೆಯನ್ನು
ಇಳಿಯುವಾಗಲೇ ಕಾಲಲ್ಲಿಯ ಕಸವಾಗಿದ್ದವು! ಹಳೆಯ ಆ ಮಾಡು ಈಗ ಕಬ್ಬಿಣದ
ವಸ್ತುಗಳನ್ನು ಇಡಲು ಬಳಸಲಾಗುತ್ತಿದೆ. ಅದರಲ್ಲಿ ಹುಡುಕಿದರೆ ಲಿಂಗುಗಳು ಸಿಗುವುದಿಲ್ಲ.
ಮಾರಾಟ ಮಾಡಿದರೆ ಹಣ ಬಾರದ ಲಿಂಗುಗಳು, ತಂಗಡಗಿಯ ಕೂಡಲ ಸಂಗಮ
ಹೊಳೆಯಲ್ಲಿ ಬಸವಣ್ಣನಂತೆ ಅವೂ ಐಕ್ಯವಾಗಿವೆ!

ನಮ್ಮದು ಅವಿಭಕ್ತ ಕುಟುಂಬ. ನನಗೆ ನೆನಪಿದ್ದಂತೆ ಮನೆಯವರೆಲ್ಲಾ ಆಗ
ಲಿಂಗುವನ್ನು ಧರಿಸುತ್ತಿರಲಿಲ್ಲ. ಕೆಲವೇ ಕೆಲವರು ಧರಿಸುತ್ತಿದ್ದರು. ಅವುಗಳಲ್ಲಿ ನನಗೆ
ಕಾಡಿದ ಲಿಂಗುಗಳು ಮೂರು. ಒಂದು, ನನ್ನ ಚಿಕ್ಕಜ್ಜಿ ಚೆನ್ನಮಲ್ಲವ್ವ ಅಜ್ಜಿಯ ಕೊರಳಲ್ಲಿಯ
ಲಿಂಗು. ಎರಡು, ಚಿಕ್ಕಪ್ಪ ಬಳಸುವ ಲಿಂಗು. ಮೂರು, ನನ್ನ ತಾಯಿಯ ಕೊರಳಲ್ಲಿಯ
ಲಿಂಗು.

ನನ್ನಜ್ಜಿ ಮತ್ತು ನನ್ನ ತಾಯಿ ಲಿಂಗುವಿನ ಸುತ್ತ ಎದ್ದು ನಿಂತ ಸಂದರ್ಭಗಳನ್ನು
ಕತೆ ಮಾಡಿ ಹೇಳುತ್ತಾರೆ! ಲಿಂಗ ದೀಕ್ಷೆಯನ್ನು ಕೊಡುವಾಗ, ಸೇಂದಿ, ದಾರು
ಕುಡಿಯಬಾರದು. ಮಾಂಸ ತಿನ್ನಬಾರದೆಂದು ಮುಂತಾಗಿ ಭಾಷೆ ತೆಗೆದುಕೊಂಡಿದ್ದರಂತೆ.
ಇದನ್ನು ನಿಭಾಯಿಸಲಾಗದೆ ಕೆಲವರು ಲಿಂಗು ತೆಗೆದುಬಿಟ್ಟರಂತೆ. ನನ್ನ ತಂದೆ ಕೆಲಕಾಲ
ಲಿಂಗುವಿನ ಕಟ್ಟಾ ಅಭಿಮಾನಿಯಾಗಿದ್ದರಂತೆ. (ಶಾಲೆಯಲ್ಲಿ ಮಾಸ್ತರ ಕೆಲಸ ಮಾಡುತ್ತಿದ್ದರು)
ಅವರ ಸ್ನೇಹಿತರೆಲ್ಲ ಸೇರಿ ಮೇಲು ಜಾತಿಯ ಬಂಡಾಯಗಾರರ ಮಾದರಿಯನ್ನು ಮುಂದಿಟ್ಟು
ಬಲವಂತದಿಂದ ಕುಡಿಸಿ ತಿನಿಸಿದರಂತೆ. ಅಂದಿನಿಂದ ನಮ್ಮ ತಂದೆ ಆ ಲಿಂಗುವಿನ ಭಕ್ತಿಯಿಂದ
ಹೊರಬಂದರು.

ನನ್ನ ತಾಯಿ ಮೊದಲ ಹೆರಿಗೆಯ ಸಂದರ್ಭದವರೆಗೆ ಅಷ್ಟೇ ಕಟ್ಟುನಿಟ್ಟಾದ ಶರಣೆ.
ಹೆರಿಗೆಯಾದಾಗ ಪೌಷ್ಠಿಕ ಆಹಾರದ ಕೊರತೆ. ಕೇವಲ ರೊಟ್ಟಿ-ಬೇಳೆ ತಿಂದು ಮರುಶಕ್ತಿ
ಸಂಪಾದಿಸುವುದು ಕಷ್ಟವೆನಿಸತೊಡಗಿತು. ಮಗುವಿನ ಆರೋಗ್ಯಕ್ಕಾಗಿ ಮತ್ತು ಇನ್ನುಳಿದವರ
ಒತ್ತಾಯ, ಸಲಹೆಗೆ ಮಣಿದು ಮಾಂಸ ತಿಂದಳು. ಆಗ ಹೆರಿಗೆಯಾಗಿ ಇಪ್ಪತ್ತು ದಿನ.
ಮರುದಿನವೇ ಮೊಲೆ ಹಾಲು ನಿಂತುಹೋದವು. ಮಾಂಸ ತಿನ್ನುವಾಗಲೇ ತಾಯಿಯ ಮನದಲ್ಲಿ
ಅಪರಾಧಿ ಪ್ರಜ್ಞೆ. ಮೊಲೆಹಾಲು ನಿಂತ ಮೇಲೆ ಅದು ಇನ್ನೂ ಹೆಚ್ಚಾಯಿತು. ಮಾಂಸ
ತಿಂದದ್ದೇ ಘೋರ ಅಪರಾಧವೆನಿಸಿತು. ಮತ್ತೆ ಅಯ್ಯನವರಿಗೆ ಕೇಳಿದಾಗ, ಕನಿಷ್ಟ ಪಕ್ಷ
ಸೋಮವಾರ ದಿನವಾದರೂ ಮಾಂಸ ತಿನ್ನದೇ ಶುಚಿಯಾಗಿದ್ದು ಪೂಜೆ ಮಾಡಬೇಕೆಂದು
ಹೇಳಿದರಂತೆ. ಈ ರಿಯಾಯ್ತಿ ನಡವಳಿಕೆಯಿಂದಲೇ ಎರಡನೇ ಮಗುವಿಗೆ ಸಂಪೂರ್ಣ
ಮೊಲೆ ಹಾಲು ಕೊಡಲು ಸಾಧ್ಯವಾಯಿತು ಎನ್ನುವುದು ನನ್ನ ತಾಯಿಯ ನಂಬಿಕೆ. ಹೀಗಾಗಿ
ನನ್ನ ತಾಯಿಯ ತಲೆಗೂದಲು ಬೆಳ್ಳಗಾಗಿ ಮೊಮ್ಮಕ್ಕಳನ್ನು ಕಂಡರೂ ಸೋಮವಾರ ದಿನದ
ಉಪವಾಸ ವ್ರತ ಇನ್ನೂ ಬಿಟ್ಟಿಲ್ಲ!

ಲಿಂಗುವಿನ ವಿಚಾರದಲ್ಲಿ ಸಾಯುವವರೆಗೆ ಚಾಚೂ ತಪ್ಪದೆ ನಡೆದುಕೊಂಡವಳು
ನನ್ನ ಚಿಕ್ಕಜ್ಜಿ. ಎಲ್ಲವನ್ನೂ ತ್ಯಜಿಸಿ ಸಾತ್ವಿಕಳಂತೆ ಬದುಕಿ ತೋರಿಸಿದಳು. ಅಷ್ಟೊಂದು
ಭಯ ಭಕ್ತಿ ಆ ಲೋಹದ ಲಿಂಗುವಿನ ಮೇಲೆ.

"ನೀನು ನಮ್ಮ ಜಾತ್ಯಾಗ ತಪ್ಪಿ ಹುಟ್ಟಿದಿ
ನೀನು ಬ್ರಾಹ್ಮಣರ ಮನ್ಯಾಗ ಹುಟ್ಟಬೇಕಾಗಿತ್ತು"

ಎಂದು ನೆರಮನೆಯವರು ಹೇಳಿದ್ದರಂತೆ. "ಬದುಕಿದರೆ ಬದುಕಬೇಕು
ಚೆನ್ನಮಲ್ಲವನಾಂಗ' ಎಂದು ಅಯ್ಯನವರು ಮಾತಿನಲ್ಲಿಯೇ ಪ್ರಶಸ್ತಿಯನ್ನು ಕೊಟ್ಟಿದ್ದರಂತೆ.

ಮೂರು ತಲೆಮಾರುಗಳಲ್ಲಿ ಈ ಲಿಂಗುವಿನ ಬಗ್ಗೆ ವ್ಯಕ್ತವಾದ ವಿಚಾರಗಳು
ಎಷ್ಟೊಂದು ಭಿನ್ನವೆನಿಸುತ್ತವೆ. ನಮ್ಮ ತಾತ ಭಯ ಭಕ್ತಿಯಿಂದ ಇದನ್ನು ಗ್ರಹಿಸಿದರೆ
ಇನ್ನೊಬ್ಬ ತಾತ ಮಾಂಸ-ಮದ್ಯ ತ್ಯಜಿಸಿಲಾಗದೆ ಲಿಂಗುವಿಗೆ ನಮಸ್ಕಾರ ಮಾಡಿದ. ತಾತ
ಹೇಳುತ್ತಿದ್ದರಂತೆ, "ನಾವು ಮುಚ್ಚುಗರು (ಜಾತಿಯ ಹೆಸರು). ನಾವು ಮುಚ್ಚು ಪಾವಡದಲ್ಲಿ
ನೀರು ತರುವವರು. ನಮಗೂ ಲಿಂಗು ಇದೆ. ನಾವು ವೀರಶೈವರೇ, ಇದೆಲ್ಲ ಹರಳಯ್ಯನ
ಕಾಲದಿಂದಲೂ ನಡೆದುಬಂದಿದೆ. ಮುಚ್ಚು ಪಾವಡದಲ್ಲಿ ನೀರು ತರುವುದೆಂದರೆ ಹೊಳೆ
ಹಳ್ಳಗಳಲ್ಲಿ ಹೊಸತಾಗಿಯೇ ಹೊಂಡ ತೆಗೆದು, ಅದರಲ್ಲಿ ಬಂದ ಹೊಸ ತಿಳಿನೀರು
ತುಂಬಿಕೊಂಡು ಪುನಃ ಆ ಹೊಂಡದ ನೀರು ಯಾರೂ ತೆಗೆದುಕೊಳ್ಳದಿರಲೆಂದು ಮುಚ್ಚಿ
ಬಿಡುತ್ತಿದ್ದರು. ನೀರು ತರುವ ಕೊಡದ ಮೇಲೆ ಬಿಳಿ ಪಾವಡವನ್ನು ಮುಚ್ಚಿ ಕೊಡ ಮನೆಗೆ
ತರುತ್ತಿದ್ದರು. ಅಂತಹದೂ ನಮ್ಮ ಜಾತಿ" ಎಂದು ಹೇಳಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರಂತೆ.
ಅನಂತರ ಅವರ ಮಕ್ಕಳು ಈ ಲಿಂಗುವನ್ನು ಅಷ್ಟೇ ವ್ಯವಹಾರಿಕವಾಗಿ ಬಳಸಿಕೊಂಡದ್ದು!

ನನ್ನ (ಚಿಕ್ಕಪ್ಪ) ತಂದೆ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ರೈಟರ್ ಆಗಿ ಕೆಲಸ
ಮಾಡುತ್ತಿದ್ದರು. ಅವರಿಗೆ ಹುನಗುಂದಕ್ಕೆ ವರ್ಗವಾದಾಗ ಬಾಡಿಗೆಗೆ ಮನೆ ಸಿಗಲಿಲ್ಲ.
48 UËaÉÄðAmï ̈ÁæoÀät ! JgÀqÀ£ÉAiÀÄ ! - ! uÁå

d¤aÁgÀ 2aÀzÁgÀUÀ1⁄4À aÀÄ oÁvÉä

49 " " l l 50 UËaÉÄðAmï ̈ÁæoÀät " " ? " " ; ? " ? ? " " " oÀAqÁå£À ̄Á1⁄2 PÀvÀÛj1zÀ ¥Àæ ̧ÀAUÀ 51 " " " " " " " " " " " " MqÀÄ ØwÛvÀÄÛ. " " ! " " ! 52 UËaÉÄðAmï ̈ÁæoÀät

? ? ? ( ) " " ?

" " !

̧ÀvÀÛ £Á¬Ä aÀi ÁrzÀ ¥Á¥ÀaÁzÀgÀÆ K£ÀÄ ?

l l 54 UËaÉÄðAmï ̈ÁæoÀät

- - " " " " " " " " ( ) £À£Àß PÉÃj £À£Àß NzÀÄ 55 " " " "

! " ?" " " ೫೬ ಗೌರ್ಮೆಂಟ್ ಬ್ರಾಹ್ಮಣ


ಕಾಲೇಜಿನ ಪರೀಕ್ಷೆಯ ಓದು ಗಂಬೀರವಾಗಿ ಪ್ರಾರಂಭವಾಗುವುದು ಪರೀಕ್ಷೆ. ಒಂದು ಎರಡು ತಿಂಗಳು ಇದೆ ಎನ್ನುವಾಗ ವಿದ್ಯುತ್ದೀಪ ಕೇರಿಗೆ ಪ್ರವೇಶವಾಗಿತ್ತು. ಆದರೆ ಇನ್ನೂ ಯಾರ ಮನೆಯೊಳಗೆ ಪ್ರವೇಶವಾಗಿರಲಿಲ್ಲಿ. ಹೀಗಾಗಿ ನಾನು ರಸ್ತೆಯ ವಿದ್ಯುತ್ ದೀಪದ ಬೆಳಕಿನಲ್ಲಿ ಕುಳಿತು ಓದುವ ರೂಢಿ ಮಾಡಿಕೊಂಡೆ.ಕೆಲವೊಮ್ಮೆ ವಿದ್ಯುತ್ ಚ್ಛಕ್ತಿ ಹೊರಟುಹೋದಾಗಲೂ ಬುಡ್ಡಿ ಲ್ಯಾಂಪನ್ನು ಹಚ್ಚಿ ಅದೇ ವಿದ್ಯುತ್ ಕಂಬದ ಅಡಿಯಲ್ಲಿಯೇ ಕುಳಿತು ವಿದ್ಯುತ್ತಿನ ನಿರೀಕ್ಷೆಯಲ್ಲಿ ಓದುವ ವಾಡಿಕೆ ಇತ್ತು. ಇದ್ದಕ್ಕಿದ್ದಂತೆ ಒಂದು ದಿನ ನಾನು ಓದುವ ಕಂಬದ ದೀಪ ಹತ್ತಲೇ ಇಲ್ಲ. ಆ ಕಂಬ ಅಲುಗಾಡಿಸಿದರೆ ಸಾಕು, ದೀಪ ಹತ್ತುವ ಸಾಧ್ಯತೆ ಮತ್ತು ನಂದುವ ಸಾಧ್ಯತೆಗಳೂ ಇದ್ದವು. ಏನೆಲ್ಲಾ ಮಾಡಿದರೂ ದೀಪ ಹತ್ತಲೇ ಇಲ್ಲ. ಬಲ್ಬು ಹೋಗದೆ ಎಂದು ಪಂಚಾಯಿತಿಗೆ ಹೋಗಿ ದೂರು ಸಲ್ಲಿಸಿದೆ. ಮಾರನೆ ದಿನ ದೀಪ ಹತ್ತಿತು. ರಾತ್ರಿ ಒಂದು ಗಂಟೆಯ ಸಮಯಕ್ಕೆ ನಿದ್ದೆ ಕಳೆಯಲೆಂದು ಹೀಗೆ ಸುತ್ತುತ್ತಾ ಹರಕು ಪರದೆಯ ಟೂರಿಂಗ್ ಟಾಕೀಸಿನ ಎಡೆಗೆ ಸುತ್ತಿ ಬಂದು ನಾಲ್ಕು ಐದು ಗಂಟೆಯವರೆಗೆ ಓದುವ ಅಭ್ಯಾಸವಿತ್ತು. ಮತ್ತೆರಡು ದಿನಗಳಲ್ಲಿಯೇ ಮತ್ತೆ ಬಲ್ಬು ನಂದಿಹೋಯಿತು. ಹೀಗಾದಾಗ ಬುಡ್ಡಿ ಲ್ಯಾಂಪಿನ ಅಡಿಯಲ್ಲಿ ಓದುವುದೂ ಬೇಸರವಾಗುತ್ತಿತ್ತು.ಆಗ ಹದಿನ್ಯೆದು ದಿನಗಳಲ್ಲಿಯೇ ಹೀಗೆ ಮೂರು ಬಲ್ಬುಗಳು ಹೋದವು. ಪಂಚಾಯತಿಯ ಬಲ್ಬಿಗೆ ಸಂಬಧಿಸಿದ ಅಧಿಕಾರಿಗಳಿಗೆಲ್ಲಾ ಸಲಾಮು ಹೊಡೆದು ಅಂಗಲಾಚಿ ಇನ್ನೊಮ್ಮೆ ಹಾಗೆ ಆಗದ ಹಾಗೆ ನೋಡುವೆ ಇದೊಂದು ಬಾರಿ ಬಲ್ಬು ಹಾಕಿ ಎಂದು ಬೇಡಿಕೊಂಡೆ. ಏನೋ ಹೀಂಗ ಹೇಳಾಕತ್ತ ಎಷ್ಷು ಸಾರಿ ಆಯ್ತು ನೀ ? ಓದ್ತಿಯೋ? ಕಂಬದ ಜೋಡಿ ಆಟಾ ಆಡ್ತೀಯಾ? ಎಂದರು ಚೇರಮನ್ನರು. "ಇಲ್ಲ ಸರ್, ಆ ಕಂಬದಲ್ಲಿ ಲೈಟಿನ ವಾಟರ್ ಲೂಸ್ ಆಗಿದೆ ಅಂತಾ ಕಾಣ್ತದೆ. ಆ ವಾಯರ್ ಬಿಗಿ ಮಾಡಿಸಿ ಬಲ್ಬು ಹಾಕಿದರೆ ಸರಿಯಾಗಬಹುದು ಸರ್" ಎಂದೆ. "ಕೆ.ಇ.ಬಿ.ಯವರ ಹತ್ತಿರ ಹೇಳು"ಎಂದರು. ಕೆ.ಇ.ಬಿ.ಆಫೀಸ್ ಇನ್ನೂ ಬಂದಿರಲಿಲ್ಲ.ಅದರ ಕುರಿತು ಕೆದಕಿ ಬರಬೇಕಾದ ಒಂದು ಬಲ್ಬು.ಕಳೆದುಕೊಳ್ಳುವುದಕ್ಕೆ ಮನಸ್ಸು ಒಪ್ಪದೆ ಮೌನವಾಗಿದ್ದೆ.ಕೊನೆಗೆ ಅಧಿಕಾರವಾಣಿಯಿಂದ ಬಂದದ್ದು "ಏ ಇದೊಂದು ಸರೆ ಹಾಕಂತ ಹೇಳೋ" ಎಂದು ಹೇಳಿದಾಗ ಅಲ್ಲಿಂದ ಬೆನ್ನು ತೋರಿದೆ. ಮರುದಿನ ಕಂಬದ ದೀಪ ಹತ್ತಿತು ಎಂದು ಸಂತಸಪಟ್ಟರೆ ಮತ್ತೊಂದು ದಿನ ಮತ್ತೊಂದು ಘಟನೆ! £À£Àß PÉÃj £À£Àß NzÀÄ 57 ! "JÊ JÊ " ? - ! ! " " ! 60 UËaÉÄðAmï ̈ÁæoÀät " (government) " ( ) " ?" ( ) ! ಗೌಮೆಂಟ್ ಬ್ರಾಹ್ಮಣನ ರಾಘವೇಂದ್ರ ಭಕ್ತ ಭಾವಚಿತ್ರವನ್ನು ಮಠಕ್ಕೆ ತಂದಾಗ ಅರ್ಚಕರು ಸಂತೋಷದ ಹಿಗ್ಗಿನಲ್ಲಿಯೇ ಇದ್ದರು. ಮಠದ ಪ್ರಾಕಾರದಲ್ಲಿಯೇ ಭಾವಚಿತ್ರದ ಮೇಲೆ ತೀರ್ಥದ ತುಂತುರು ಅಭಿಷೇಕ (ಶುದ್ದೀಕರಣ?) ಮಾಡಿ ಪೂಜೆ ನಡೆಸಿದರು. ನನಗಿದಾವುದರ ಪರಿವೇ ಇರಲಿಲ್ಲ. ಆದರೆ ತುಂತುರು ಹನಿಯ ನೀರು ಗಾಜಿನಿಂದ ಕಟ್ಟಿನಲ್ಲಿ ಇಳಿದು ಒಳಗಿರುವ ಭಾವಚಿತ್ರ ಒದ್ದೆಯಾಗುವುದೇನೋ ಎನ್ನುವ ಕೊರಗು ನನ್ನೊಳಗೆ ಕೊರೆಯುತ್ತಿತ್ತು. ಭಾವಚಿತ್ರ ನೋಡಿ ನೋಡಿ ಉಗುಳು ನುಂಗುತ್ತಿದ್ದೆ. ಭಾವಚಿತ್ರದ ಮೇಲೆ ಒಂದು ಇಂಚಿನ ಗಾತ್ರದ ಅಕ್ಷರಗಳಲ್ಲಿ ಶ್ರೀ ಎ. ವಾಯ್. ಮಾಲಗತ್ತಿ ಎಂದು ಬರೆದಿದ್ದೆ. ಅದು ಭಾವಚಿತ್ರದಲ್ಲಿಯೇ ಒಡೆದು ಕಾಣುತ್ತಿತ್ತು. ಮಠದ ಪ್ರಾಕಾರ ಸುತ್ತುವಾಗ ಮಠದಲ್ಲಿಯ ಭಾವಚಿತ್ರ, ಭಾವಚಿತ್ರದಲ್ಲಿಯ ನನ್ನ ಹೆಸರು ನೋಡಿ ನೋಡಿ ಹಿಗ್ಗುತ್ತಿದ್ದೆ. ಒಳಗೆ ಗರಿಕೆದರಿದ ನವಿಲು ಕುಣಿಯುತ್ತಿತ್ತು. ಆ ಕುಣಿತಕ್ಕೆ ಅನುಗುಣವಾಗಿ ತಲೆಯ ಮೇಲಿನ ತುರಾಯಿ ಸೆಟೆದು ನಿಲ್ಲುತ್ತಿತ್ತು. ಬ್ರಾಹ್ಮಣರ ಮಠದಲ್ಲಿ ಒಬ್ಬ ಹರಿಜನನ ಹೆಸರು ಮೆರೆಯುತ್ತಿದೆ ಎನ್ನುವ ಜಂಬ ನನ್ನಲ್ಲಿ ಮನೆ ಮಾಡಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆ ಮಠದಲ್ಲಿಯ ಭಾವಚಿತ್ರ ಮಾಯವಾಯಿತು! ಅರ್ಚಕರಿಗೆ ವಿಚಾರಿಸಿದರೆ ಇಂಗು ತಿಂದ ಮಂಗನ ಭಾವದಲ್ಲಿ ಖೇದವನ್ನು ವ್ಯಕ್ತಪಡಿಸುವಂತೆ "ಮೊಳೆ ಕಿತ್ತು ಬಿದ್ದು ಗಾಜು ಒಡೆದು ಹೋಯ್ತು ಅದಕ್ಕೆ ಅದನ್ನು ತೆಗ್ಗು ಒಳಗಿಟ್ಟಿದೆ" ಎಂದು ಉತ್ತರಿಸಿದರು. ಮೇಲೆ ಗೋಡೆ ನೋಡಿದರೆ, ಗೋಡೆಯಲ್ಲಿಯ ಮೊಳೆ ಭದ್ರವಾಗಿತ್ತು! ಆದರೆ ಭಾವಚಿತ್ರವಿರಲಿಲ್ಲ. "ನಾಳೆ ಮತ್ತೆ ಗೊಡೆಯ ಮೇಲೆ ಭಾವಚಿತ್ರ ಬರಬಹುದು" ಎನ್ನುತ್ತ ದಿನವೂ ಮಠಕ್ಕೆ ಹೋಗಿ ಗೋಡೆ ನೋಡುತ್ತಿದ್ದೆ. ಬರಿದಾದ ಗೋಡೆಯಲ್ಲಿ ಮೊಳೆ ಮಾತ್ರ ಕಾಣುತ್ತಿತ್ತು. ಅರ್ಚಕರು ನನ್ನನ್ನು ನೋಡಿದಾಗಲೆಲ್ಲ ನೋಡಿಯೂ ನೋಡದಂತೆ ಇದ್ದು ಕೆಲಸದಲ್ಲಿ ಸೇರಿಹೋಗಿದ್ದಾರೇನೋ ಎನ್ನುವಂತೆ ನಟಿಸುತ್ತಿದ್ದರು. ಮತ್ತೆ ಕೇಳುವ ಧೈರ್ಯವೂ ಮಾಡಲಿಲ್ಲ. "ನಾನು ಮತ್ತೊಮ್ಮೆ ಗಾಜಿನ ಹರಳು ಹಾಕಿಸಿ ಕೊಡುತ್ತೇನೆ ಕೊಡಿ' ಎಂದು ಕೇಳುವ ಧೈರ್ಯವೂ ನನಗೆ ಬರಲಿಲ್ಲ. ಊರಿಗೆ ಹೋದಾಗ, ಮಠದ ಹತ್ತಿರ ಸುಳಿದಾಗ ಆ ಭಾವಚಿತ್ರ ನೆನಪಾಗುತ್ತದೆ. "ನೀನು ಹೋಗಿ ನೋಡುವುದು ಬೇಡ, ಆ ಭಾವಚಿತ್ರ ಅಲ್ಲಿಲ್ಲ" ಎಂದು ಮನಸ್ಸು ಹೇಳಿದರೂ ಕಾಲುಗಳು ಮತ್ತೆ ಆ ಕಡೆಗೆ ಎಳೆದೊಯ್ಯುತ್ತವೆ. ಇನ್ನೊಂದು ಒಳಮನಸ್ಸು "ಅವರು ಮತ್ತೆ ಯಾಕೆ ಗೋಡೆಗೆ ಹಾಕಿರಬಾರದು ಎಂದು ಪ್ರಶ್ನಿಸಿ ನೋಡುವಂತೆ ಮಾಡುತ್ತದೆ. ಬೆಳ್ಳನೆಯ ಗೋಡೆಯಲ್ಲಿ ಆ ಕಪ್ಪು ಮೊಳೆ ಮಾತ್ರ ಕಂಡಂತಾಗುತ್ತದೆ. ಈಗ ಅರ್ಚಕರು ಬದಲಾಗಿದ್ದಾರೆ. ಬೇರೆ ಬೇರೆ ಭಾವಚಿತ್ರಗಳು ಬಂದಿವೆ. ನಾ ಬರೆದ ಭಾವಚಿತ್ರ ಮಾತ್ರ ಅಲ್ಲಿಲ್ಲ. ದಿನಗಳು ಉರುಳಿವೆ. ಗೋಡೆಗೆ ಬಡಿದ ಮೊಳೆ ಈಗಲೂ ೬೨ ಗೌರ್ಮೆಂಟ್ ಬ್ರಾಹ್ಮಣ


ನನ್ನ ಎದೆಯ ಬಡಿದಂತೆ ಉಳಿದುಕೊಂಡಿದೆ. ರಾಘವೇಂದ್ರನ ಭಕ್ತಿಗೀತೆ ಕೇಳಿದಾಗಲೊಮ್ಮೆ, ಆತನ ಭಾವ ಚಿತ್ರಗಳು ಕಂಡಾಗಲೊಮ್ಮೆ ಮತ್ತು ರಾಘವೇಂದ್ರನ ಮಠದ ಎದುರಿಗೆ ಹಾದು ಹೋಗುವಾಗ ಥಟ್ಟನೆ ನೆನಪಾಗಿ, ಎದೆಗೆ ಬಡಿದ ಆ ಮೊಳೆಯನ್ನೇ ಹಿಡಿದು ಅಲುಗಾಡಿಸಿದಂತಾಗುತ್ತದೆ. ಆದರೆ ಆ ಭಕ್ತಿಯ ಭಾವ ಈಗ ಶೂನ್ಯದಿಂದ ನಿಶೂನ್ಯವಾಗಿದೆ. 64 UËaÉÄðAmï ̈ÁæoÀät " ' ! " " " " ̈ÁrUÉ ̈ÁæoÀät£ÁzÀ ¥Àæ ̧ÀAUÀ 65 ' ' " " " " " " ' ? ' 66 UËaÉÄðAmï ̈ÁæoÀät - " " " ' ' " ! ! ? ? ' ? " " " ? " ̈ÁrUÉ ̈ÁæoÀät£ÁzÀ ¥Àæ ̧ÀAUÀ 67 " ?" " ?" ? " " " " " "

l l £À£Àß aÀi Áf ¥ÉæÃAiÀÄ 1 69 " ?" " 70 UËaÉÄðAmï ̈ÁæoÀät ?" ?............ " ." " ? ?" " " " oÀä zÉæ

̧ÉÆ Ã £À£Àß aÀi Áf ¥ÉæÃAiÀÄ 1

71 " " " " ? - 72 UËaÉÄðAmï ̈ÁæoÀät

̄Áè

qïÓ qïÓ zÀÄ Ý £Éßà £À£Àß aÀi Áf ¥ÉæÃAiÀÄ 1 73 " ̄ÁqïÓ£À°è " 74 UËaÉÄðAmï ̈ÁæoÀät C " ? "

"

." ? " " " !..........." " " " " " " £À£Àß aÀi Áf ¥ÉæÃAiÀÄ 1 75 " "

"

?" 76 UËaÉÄðAmï ̈ÁæoÀät " " " "

oÀl

" " " " £À£Àß aÀi Áf ¥ÉæÃAiÀÄ 1 77 " "

" "

" " " " ¢ - " " " " " 78 UËaÉÄðAmï ̈ÁæoÀät " ? " ?" " " " ?" " ?" " " " " " " " " " " ? ." " - ? " " £À£Àß aÀi Áf ¥ÉæÃAiÀÄ 1 79 ." " " " " " ."

"

" - " ; ?" - " " qïÓ qïÓ

" 80 UËaÉÄðAmï ̈ÁæoÀät

" " " " "

"

? UÀÄ ? " ? ? £À£Àß aÀi Áf ¥ÉæÃAiÀÄ 1 81 ? - " ?............." " ?" " " " " " ?" ನನ್ನ ಮಾಜಿ ಪ್ರೇಯಸಿ

ಟಿ ಣ್ಕ ಜಿ

(

ನೀನು ಹೇಳಿದ ಹಾಗೆ ನಾನು ಕೇಳ್ತೇನೆ" ಎಂದಳು.

ಆಗ ನನಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಮದುವೆಯ ಕಾರ್ಡನ್ನು ಹರಿದು ತುಂಡರಿಸುವಷ್ಟರ ಮಟ್ಟಿಗೆ ಅವಳ ವರ್ತನೆ ತಲುಪಿತ್ತು. ತಕ್ಷಣವೇ ಅದನ್ನು ತಡೆದು ನಿಲ್ಲಿಸಿದ್ದೆ. ಹಿಂದೆ ಆಡಿದ ಅವಳ ಎಷ್ಟೋ ಮಾತುಗಳನ್ನು ನಾನೇ ಪುನಃ ಹೇಳಬೇಕಾಗಿ ಬಂದೊದಗಿದ ಸಂದರ್ಭ ಅದು. ನನ್ನ ಅಂದಿನ ದಿನದ ಗೊಂದಲಮಯ ಸಂದರ್ಭದಲ್ಲಿ ಆಡಿದ ಮಾತುಗಳು ಮತ್ತೆ ಹೊರಬಂದವು. ನನ್ನ ಮಾತುಗಳು ಅವೇ ಆಗಿದ್ದರೂ ಅಂತರಂಗ ತಿಳಿಯಾಗಿತ್ತು. ಈಗ ನಾನು ನನ್ನ ಕೈಯಲ್ಲಿರುವ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಸಂಕಟದಲ್ಲೂ ಆ ತ್ಕಾಗದ ಮಾತುಗಳ ಹಿಂದೆ ಒಂದು ಬಗೆಯ ಸುಖವಿತ್ತು. ಆಗ ಅವಳು ತಾನು ಮಾಡಿದ ತಪ್ಪುಗಳನ್ನೆಲ್ಲ ಬಿಚ್ಚಿಡುತ್ತ ಬೆಣ್ಣೆಯಂತೆ ಮೆತ್ತಗಾಗಿದ್ದಳು. ಅವಳ ಕುರಿತಾಗಿ ನನ್ನ ಮನದ ಮೂಲೆಯಲ್ಲಿ ಚಿಗಿತಿದ್ದ ತಿರಸ್ಕಾರದ ಭಾವನೆ ದೂರ ಸರಿಯಿತು. ಅವಳ ಬಗ್ಗೆ ಎಲ್ಲಿಲ್ಲದ ಹೆಮ್ಮೆ ಎನಿಸಿತು. ಪರಸ್ಪರ ಸಮಾನ ದುಃಖಿಗಳ ನಡುವೆ ತ್ಕಾಗ ಎನ್ನುವ ಶಬ್ದಕ್ಕೆ ಅರ್ಥವಿತ್ತು.

"ನೀನು ಮದುವೆಗೆ ಬಾರದೆ ಹೋದರೆ ನಾನು ಮದುವೆಯಾಗಲಾರೆ" ಎಂದಾಗ, "ನೀನು ಹೇಳಿದ ಹಾಗೆ ಕೇಳುತ್ತೇನೆ ಅಂತ ನಾನು ಯಾವಾಗಲೋ ಹೇಳಿದ್ದೇನೆ. ಈಗ ನೀನು ಆರ್ಡರ್‌ ಮಾಡು" ಎಂದೆ. ಆದರೆ ಅವಳು ಪದೇ ಪದೇಯಾಗಿ ಮೇಲಿನ ಮಾತುಗಳನ್ನೇ ಹೇಳುತ್ತಿದ್ದಳು. ನನ್ನ ಮನಸ್ಸಿನಲ್ಲಿ ಮತ್ತೆ ಎದುರು ಅಲೆಗಳು ಏಳುತ್ತಿದ್ದವು. ಆದರೂ ಅದು ನನ್ನ ಮನಸ್ಸಿನ ಹೊಯ್ದಾಟದ ಗ್ರಹಿಕೆಯಾಗಿರಬೇಕು ಎನಿಸಿ ನನ್ನನ್ನೇ ನಾನು ಅದುಮಿಕೊಂಡೆ.

ವಿದಾಯದ ಕೊನೆಯ ಕ್ಷಣಗಳು ಅವು.


"ಅರವಿಂದ್‌........... ನನ್ನದೊಂದು ಕೊನೆಯ ಮಾತು ಕೇಳ್ತೀಯಾ?" "ಹೇಳು ಮುಜುಗರ ಯಾಕೆ?"

6 .. ನನ್ನ ಪತ್ರಗಳು ನಿನ್ನಲ್ಲಿ ಸುಮಾರು ಇರಬೇಕಲ್ಪಾ?" ಹೌದು, ಮುನ್ನೂರಕ್ಕೂ ಮೇಲ್ಪಟ್ಟಿವೆ............ "ಅವೆಲ್ಲ ನನಗೆ ತಂದು ಕೊಡು ಹಾಗೆನೆ ನನ್ನ ನಿನ್ನ ಫೋಟೋ ಇರೋ ಆ ಎರಡೂ ಆಲ್‌ಬಮ್‌ ತಂದು ಕೊಡ್ತಿಯಾ? ಗೆಟಿವ್‌ನೂ ಬೇಕು. (ಸ್‌ ನನ್ನದು ಇದು ಕೊನೆಯ ಕೋರಿಕೆ ಅರವಿಂದ್‌...... ನಾನು ನಿನ್ನಿಂದ ಬೇರೇನು ಕೇಳ್ಳಾರೆ.' ಎಂದು ಹೇಳುತ್ತ ಮುಖ ಕೆಳಕ್ಕೆ ಹಾಕಿದಳು. ಆಗ ನನ್ನ ತ್ಕಾಗದ ಬಲೂನಿಗೆ ಬೆಂಕಿ


1.1

ಜೆ 86 UËaÉÄðAmï ̈ÁæoÀät " " " "

̈ÉÆ mÁ¤PÀ ̄ï

" " ̈sÀ«μÀåwÛ£ÉÆ A¢UÉ ZÉ ̄Áèl aÁqÀÄaÀ PÉ® oÀÄqÀÄVAiÀÄgÀÄ 87 " " " " 88 UËaÉÄðAmï ̈ÁæoÀät ¥Á " " " " D " " - " C

"

£Á£ÀÆ " " " oÁUÉ ̈sÀ«μÀåwÛ£ÉÆ A¢UÉ ZÉ ̄Áèl aÁqÀÄaÀ PÉ® oÀÄqÀÄVAiÀÄgÀÄ 89 " ? " CμÉÖà ( ) ¥Á ¥Á " ? ( ) 90 UËaÉÄðAmï ̈ÁæoÀät " ? " ? ? ? " " ?" " ? " ?" ̈sÀ«μÀåwÛ£ÉÆ A¢UÉ ZÉ ̄Áèl aÁqÀÄaÀ PÉ® oÀÄqÀÄVAiÀÄgÀÄ 91 ? 92 UËaÉÄðAmï ̈ÁæoÀät " " - " " ! l l 94 UËaÉÄðAmï ̈ÁæoÀät - ! _ " " - " " " " " " " " " " " ©Ãgï PÀÄrzÀ aÉÆ zÀ® ¢£À aÀÄvÀÄÛ §AqÁAiÀÄ, ̈ÁæoÀätÂÃPÀgÀt EvÁå¢ 95 ( ) - - - " " " " M1⁄4Éî ? ¥À " " ? " "" "" " " ¦ü ? 96 UËaÉÄðAmï ̈ÁæoÀät ? " " ? " ( ° ) " " ? ? zÁÝ zÀÄ " " oÉÃ1⁄2 ©Ãgï PÀÄrzÀ aÉÆ zÀ® ¢£À aÀÄvÀÄÛ §AqÁAiÀÄ, ̈ÁæoÀätÂÃPÀgÀt EvÁå¢ 97 " " ? ? ? " ? oÉÆ qÉzÀ ? gÀ gÀ 100 UËaÉÄðAmï ̈ÁæoÀät

? ? ? ? ? " " ZÀoÁ ̧ÀAaÁzÀzÀ°è PÁ¦üAiÀiÁzÁUÀ 101 " " " " " " l l 102 UËaÉÄðAmï ̈ÁæoÀät

qÀÄ;

! ? ? ? aÀiÁPïìðaÁzÀ aÀÄ vÀÄ Û JAd®Ä vÀm ÉÖ 103 ( ) ¶Ö " " "

? AiÉÄÃ lÄÖ lÄÖ " mÉÃ " " 104 UËaÉÄðAmï ̈ÁæoÀät - " " " "

"

ss ss......." ? ( ?) ( )

aÀiÁPïìðaÁzÀ aÀÄ vÀÄ Û JAd®Ä vÀm ÉÖ

105 ! ? " " gÉ ! " " ? l l 106 UËaÉÄðAmï ̈ÁæoÀät zÀÝ

" ?"

aÀi Á ನನ್ನ ಜೀವ ತಿನ್ನುವ ಬಾಳೆ ಎಲೆ ೧೦೭

ತೊಳೆಯುವಿದಿಲ್ಲ. ಅತಿ ಸುಲಭದ ಕೆಲಸ. ಒಂದು ವೇಳೆ ತಟ್ಟೆಯಲ್ಲಿ ಊಟಕ್ಕೆಕುಳಿತರೆ, ನಾಲ್ಕು ಚಿಕ್ಕ ಬಟ್ಟಲು ಒಂದು ದೊಡ್ಡ ತಟ್ಟೆ ಬೇಕು . ಅಷ್ಷೆಲ್ಲಾ ತೊಳೆಯುವುದು, ಕೊಂಡು ತರುವುದು ಯಾರಿಗೆ ಬೇಕು ? ಎಂದಿರಬೇಕು ಎನ್ನುವ ಸಂದೇಹ ಈ ಸಂದೇಹ ಬಂದದ್ದು ನಾನು ಮಂಗಳೂರಿನಲ್ಲಿ ಬಾಳೆಲೆ ಬಿಟ್ಟು ಪುನಃ ತಟ್ಟೆಯ ಊಟಕ್ಕೆ ಕೈಹಾಕಿದಾಗಲೇ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಪಾಠ ಮಾಡುತ್ತಿದ್ದೆ ಅದರಲ್ಲಿ ಬಾಳೆಲೆಯಲ್ಲಿಯ ಊಟದ ಪ್ರಸಂಗವಿದೆ. ಕ್ರೈಸ್ತ ಪಾದ್ರಿ ಮನೆಗೆ ಊಟಕ್ಕೆ ಬಂದಿರುತ್ತಾರೆ.ಅವನು ಹೊಲೆಯರಿಗಿಂತ ಕೀಳು ಎಂದು ಅವನಿಗೆ ಜಗಲಿಯ ಮೇಲೆ ಊಟಕ್ಕೆ ಕೂಡ್ರಿಸುವುದೇ ? ಯಾವ ಎಲೆಯಲ್ಲಿ ಊಟಕ್ಕೆ ಕೊಡಬೇಕು? ಯಾರು ಊಟಕ್ಕೆ ನೀಡಬೇಕು ? ಈ ವಿಷಯಗಳ ಕುರಿತು ಆ ಮನೆಯ ಪಾತ್ರಗಳಲ್ಲಿಯೇ ಚರ್ಚೆನೆಡೆಯುತ್ತದೆ. ನನಗೆ ವಿಸ್ಮಯ ತಂದದ್ದು ಬಾಳೆಎಲೆಯಲ್ಲಿಯೂ ಮನುಷ್ಯ ಜೀವಿ ಹೇಗೆ ಹಾಯಗಾರಿಕೆಯನ್ನು ಕಾಯ್ದುಕೊಂಡು ಹೋಗುತ್ತಾನೆ ಎನ್ನುವುದು. ಆ ವಿಷಯ ತಂದು ತರಗತಿಯಲ್ಲಿ ಚರ್ಚೆಗೆ ಬಿಟ್ಟೆ ಅಲ್ಲಿ ಇನ್ನಷ್ಷು ಹೊಸ ಬಗೆಯ ಪ್ರಾದೇಶಿಕವಾದ ವಿಷಯಗಳು ಬೆಳಕಿಗೆ ಬಂದವು. ಅಡಿಕೆಯ ಹಾಳೆಯಲ್ಲಿಯ ಊಟದ ಬಗೆಯ ಕುರಿತು , ಅಡಿಕೆಯ ಕುರಿತು, ಸಿರಿಯ ಕುರಿತು ಮುಂತಾಗಿ ಒಂದು ಎಲೆಯಲ್ಲಿಯೇ ಹಲವು ಭಾಗ ಮಾಡಿ ತುದಿಯ ಭಾಗ ಎಲ್ಲರಿಗಿಂತ ಶ್ರೇಷ್ಠ, ಅದು ದೇವರಿಗೆ ಅಥವಾ ಬ್ರಾಹ್ಮಣರಿಗೆ ಸೇರುತ್ತದೆ ಎನ್ನುವುದು ಎಲ್ಲಕ್ಕಿಂತ ಕೊನೆಯ ಭಾಗ ಹೊಲೆಯರಿಗೆ ಮೀಸಲು ಎನ್ನುವುದು ಇದು ತಕ್ಷಣ ನನ್ನನ್ನು ಪುರಾಣದ ಕಲ್ಪನೆಗೆ ಕರೆತಂದಿತು.ವಿಷ್ಣುವಿನ ತಲೆಯಲ್ಲಿ ಬ್ರಾಹ್ಮಣರು ಹುಟ್ಟಿದರು ಅದೇ ರೀತಿ ತೋಳಲ್ಲಿ ಕ್ಷತ್ರಿಯರು, ಹೊಟ್ಟೆಯಲ್ಲಿ ವೈಶ್ಯರು, ಪಾದದಲ್ಲಿ ಶೂದ್ರರು ಎಂಬಂತೆ ಎಲೆಯಲ್ಲಿಯೂ ಒಡೆದು ಹಂಚಿರುವುದು ನೋಡಿದರೆ ಪುರಾಣ ಕಲ್ಲನೆ ಪ್ರತಿಯೊಂದರಲ್ಲಿಯೂ ಹೇಗೆ ಸೂಕ್ಷ್ಮವಾಗಿ ಕೆಲಸ ಮಾಡಿದೆ ಎನಿಸುತ್ತದೆ. ಬಾಳೆಲೆಯ ಕುರುತು ತರಗತಿಯಲ್ಲಿ ಚರ್ಚೆಯಾದ ನಂತರ, ಬಿದ್ದು ಮತೊಂದು ಹೊಸ ಗಾಯ ಮಾಡಿಕೊಂಡ ಅನುಭವವಾಯಿತು. ಅನಂತರ ಮೂರು ವರ್ಷಗಳವರೆಗೆ ನಾನು ಮಂಗಳೂರು ನಗರದಲ್ಲಿ ಇದ್ದು ಕಳೆದ ದಿನಗಳನ್ನು ,ಬಾಳೆಲೆಯ ಪ್ರಸಂಗಗಳನ್ನು ಮೆಲುಕು ಹಾಕತೊಡಗಿದೆ.ಯಾರ್ಯರ ಮನೆಗೆ ನಾನು ಊಟಕ್ಕೆ ಹೋಗಿದ್ದೆ? ಯಾರ ಮನೆಯಲ್ಲಿ ನನಗೆ ಬಾಳೆಲೆಯ ಕೊನೆಯ ಭಾಗವನ್ನು ಊಟಕ್ಕೆ ಕೊಟ್ಟಿದ್ದರು ? ಅವರೂ ಅಂತಹದರಲ್ಲಿಯೇ ಊಟ ಮಾಡುತ್ತಿದ್ದರೆ ಅಥವಾ ನನಗಷ್ಷೇ ಆ ಎಲೆಯಲ್ಲಿ ಊಟಕ್ಕೆ ಹಾಕಿಕೊಟ್ಟಿದ್ದರೋ ಹೀಗೆಲ್ಲ ಪ್ರಶ್ನೆಗಳು ತಲೆಯಲ್ಲಿ ನಾಟ್ಯ ವಾಡತೊಡಗಿದವು ಆತ್ಮೀಯರನ್ನುಸಂದೇಹದಲ್ಲಿ ನೋಡುವಂತೆ ಮಾಡಿದವು. ಅವರು ಇನ್ನೊಮ್ಮೆ ಊಟಕ್ಕೆ ಕರೆದರೆ ಪರೀಕ್ಷಿಸೋಣ ಎಂದು ಮನಸ್ಸಿಗೆ ಸಮಾಧಾನ ಹೇಳಿದರೂ ಎದೆಯ ತುಡಿತ ಮಾತ್ರ ಕಡಿಮೆಯಾಗಲಿಲ್ಲ. 108 UËaÉÄðAmï ̈ÁæoÀät " " ? ? ? ? ? ? ? " " £À£Àß fÃaÀ w£ÀÄ ßaÀ ̈Á1⁄4ÉAiÀÄ J ̄É 109 ? l l 110 UËaÉÄðAmï ̈ÁæoÀät ? " " ? " " ? " " ? ! E ! " " " " ? ನಾನೊಬ್ಬ ಉತ್ತಮ ಕ್ಷಾರಿಕನಾದೆ ಯಾವ 'ಶ್ಯಾಂಪೂ" ಹಚ್ಚಿ ತಲೆ ತೊಳೆಯುತ್ತೀರಿ? ತಲೆಗೆ ಹಚ್ಚಲು ಯಾವ ಎಣ್ಣೆಯನ್ನು ಬಳಸುತ್ತೀರಿ? ಎನ್ನುವ ಎಲ್ಲ ಪ್ರಶ್ನೆಗಳಿಗೂ ವಾಸನೆಯ ಮೇಲಿಂದಲೇ ದಡದಡನೇ ಹೇಳಿಬಿಡುತ್ತಿದ್ದ. ಆ ದಿನ ನಾನು ಅವನಿಗೆ ಪರೀಕ್ಷೆ ಮಾಡಲು ಪ್ರಶ್ನಿಸದಿದ್ದರೂ, ಆತನೇ ತನ್ನ ಚಾಣಾಕ್ಷತನವನ್ನು ತೋರಿಸಲು ಹೋಗಿ, ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದ. "ಗ್ರಾಮೋದ್ಯೋಗ ಸಾಬೂನು" ಎಂದರೆ ನಮ್ಮ ಗ್ರಾಮದಲ್ಲಿಯೇ ಬೇವಿನ ಎಣ್ಣೆಯಿಂದ ತಯಾರಿಸಿದ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಸಾಬೂನು ಅದು. ಅದನ್ನು ಊರ ಜನ ಬಟ್ಟೆ ತೊಳೆಯಲು ಮಾತ್ರ ಬಳಸುತ್ತಿದ್ದರೆ ವಿನಃ ಸ್ನಾನಕ್ಕಾಗಿ ಅಲ್ಲ. ಮೊದಲು ನಮ್ಮೂರ ನಾಯಿಂದರು ನಮ್ಮನ್ನು ಮುಟ್ಟುತ್ತಿರಲಿಲ್ಲ. ಹೀಗಿದ್ದಾಗ ಅವರು ನಮಗೆ ತಲೆ ಬೋಳಿಸುವುದಂತೂ ದೂರದ ಮಾತಾಗಿತ್ತು. ಈ ದೂರದ ಮಾತೇ ನಮ್ಮ ಮನೆತನದವರಿಗೆ ಆ ಕ್ಷೌರಿಕ ವಿದ್ಯೆಯನ್ನು ಕರಗತ ಮಾಡಿಕೊಳ್ಳುವಂತೆ ಮಾಡಿತ್ತು. ನಾನು ಆವಾಗ ಮೂರು ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಮ್ಮ ಮನೆಯಲ್ಲಿ ಒಂದು ಪುಟ್ಟ ಚರ್ಮದ ಚೀಲವಿತ್ತು. ಅದರಲ್ಲಿ ಎರಡು ಮೂರು ತಲೆ ಬೋಳಿಸುವ ಕತ್ತಿಗಳಿದ್ದವು. ಕೆಲವು ಹಿಡಿಮುರಿದ ಕತ್ತಿಗಳೂ ಇದ್ದವು. ಆ ಚರ್ಮದ ಚೀಲ ಯಾವಾಗಲೂ ನಮ್ಮ ಮನೆಯ ತಲಬಾಗಿಲದ ಒಂದು ಮೂಲೆಯಲ್ಲಿ ಜೋತು ಬಿದ್ದಿರುತ್ತಿತ್ತು. ನಮ್ಮ ಚಿಕ್ಕಪ್ಪ ಇಲ್ಲವೆ ಮಾವ, ನಮ್ಮ ತಲೆ ಬೋಳಿಸುವ ಕೆಲಸವನ್ನು ಮಾಡುತ್ತಿದ್ದರು. ಅವರೇನು ಈ ಕೆಲಸದಲ್ಲಿ ಅಷ್ಟು ನಿಪುಣತೆಯನ್ನು ಸಂಪಾದಿಸಿದವರಲ್ಲ. ನಮ್ಮ ಮನೆಯವರಿಗೆ ಮಾತ್ರ ಇವರು ತಲೆ ಬೋಳಿಸುವ ಕೆಲಸ ಮಾಡುತ್ತಿದ್ದರಿಂದ, ಸಾಮಾನ್ಯವಾಗಿ ತಿಂಗಳಿಗೊಮ್ಮೆ ತಲೆ ಬೋಳಿಸುವ ಅವಕಾಶ ಅವರಿಗೆ ಸಿಗುತ್ತಿತ್ತು. ಹೀಗಾಗಿ ಪರಿಣತಿಯನ್ನು ಸಾಧಿಸುವುದು ಕಷ್ಟದ ಕೆಲಸವೇ ಸರಿ. ಈ ಸ್ಥಿತಿ ನಮ್ಮ ಮನೆತನಕ್ಕೆ ಸಂಬಂಧಿಸಿದ್ದು ಎಂದಲ್ಲ. ನಮ್ಮ ಕೇರಿಯ ಪ್ರತಿಯೊಬ್ಬರ ಮನೆಯಲ್ಲೂ ಒಂದೊಂದು ಕತ್ತಿಯ ಚೀಲ ಇದ್ದೇ ಇರುತ್ತಿತ್ತು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು ನಮ್ಮ ಮಾವ ಅಥವಾ ಚಿಕ್ಕಪ್ಪನ ಕೈಯಲ್ಲಿ, ತಲೆಯನ್ನು ಬೋಳಿಸಲು ನಮ್ಮ ತಲೆಯನ್ನು ಕೊಡುವುದು ಎಂದರೆ, ನೆಲಕ್ಕೆ ಬಿದ್ದು ನಗ್ಗಿ ಹೋದ ಕಂಚಿನ ಕೊಡವನ್ನು ರಿಪೇರಿ ಮಾಡಲು ಕೊಟ್ಟಂತೆ! ಆ ಮೊಂಡಾದ ಕತ್ತಿಯನ್ನು ಕಲ್ಲಿಗೆ ತಿಕ್ಕಿ ತಿಕ್ಕಿ ಮಸೆದು ತಲೆ ಬೋಳಿಸುವಾಗ, ತಲೆ ಒಂದೇ ಸಮನೇ ಉರಿಯುತ್ತಿತ್ತು. ಹೊಸತಾಗಿ 'ಸಾಣಿ' ಹಿಡಿಸಿದ ಕತ್ತಿ ಇದ್ದರೆ "ಸಾಕಪ್ಪಾ ಸಾಕು!" ತಲೆ ತುಂಬ ಎಲ್ಲೆಂದರಲ್ಲಿ ಕತ್ತಿ "ಹತ್ತಿ" ರಕ್ತವೇ ರಕ್ತ! ನಮ್ಮ ತಲೆಯ ರಕ್ತ ಉಣ್ಣುವವರೆಗೂ ಆ ಕತ್ತಿಗೂ ತೃಪ್ತಿಯಾಗುತ್ತಿರಲಿಲ್ಲವೆಂದು ತೋರುತ್ತದೆ. ಕತ್ತಿ ತಲೆಗೆ ಹತ್ತಿದಾಗ ಅಥವಾ ತಲೆ ಉರಿಯುತ್ತಿದ್ದಾಗ ನಮ್ಮ ಅಳುವು ಇನ್ನಷ್ಟು ಹೆಚ್ಚಾಗುತ್ತಿತ್ತು. ದುಃಖಿಸುವುದು ಪ್ರಾರಂಭವಾದಾಗ ಕತ್ತಿ "ಕರ್ಕ್ಕ'ನೇ ತಲೆಯನ್ನು
ಕೊರದು ಬಿಡುತ್ತಿತ್ತು. ಅಳುವು ಇನ್ನಷ್ಟು ಹೆಚ್ಚಾದಾಗ "ಸುಮ್ಮನಾಗಲೆ" ಎನ್ನುತ್ತ
ತಲೆಯನ್ನು ಬೋಳಿಸಿದ ಭಾಗಕ್ಕೆ "ಟಂಣ್ಣ'ನೇ ಹೊಡೆತ ಬೀಳುತ್ತಿತ್ತು. ಮತ್ತೆ ದುಃಖ
ಶಿಖರಕ್ಕೆ ಏರುತ್ತಿತ್ತು. ಸಿಂಬಳ ಸೋರುತ್ತಿತ್ತು. ತಲೆ ಬೋಳಿಸುವುದು ಮುಗಿಯುವುದರೊಳಗೇ
ಸತ್ತು ಹುಟ್ಟಿದಂತಾಗುತ್ತಿತ್ತು. ತಲೆ ಬೋಳಿಸಿಕೊಳ್ಳುವುದು ಎಂದರೆ ಅಗ್ನಿ ಪರೀಕ್ಷೆಯೇ
ಸರಿ! ಸಮರದಲ್ಲಿ ಸೋತು ಗಾಯಗೊಂಡು ಬಂದ ಕೈದಿಯ ಸ್ಥಿತಿಯೇ ನಮ್ಮದಾಗಿರುತ್ತಿತ್ತು.
ಮಣ್ಣಿನೊಂದಿಗೆ ಆಡುವುದೆಂದರೆ ಚೆಲ್ಲಾಟ, ಅಲ್ಲಿಯ ಚೆಲ್ಲಾಟವೇ ಇಲ್ಲಿ ಪ್ರಾಣ ಸಂಕಟ
ತರುತ್ತಿತ್ತು. ಕತ್ತಿ ಎಷ್ಟೇ ಹರಿತವಾಗಿದ್ದರೂ, ತಲೆಯಲ್ಲಿ ಬಿದ್ದ ಮಣ್ಣಿಗೆ ಸಿಕ್ಕು
ಮೊಂಡಾಗುತ್ತಿತ್ತು.

ಒಂದು ದಿನ ಮುಂಚಿತವಾಗಿಯೇ "ನಾಳೆ ನಿಮ್ಮೆಲ್ಲರು ತಲೆ ಬೋಳ್ಳತೀನಿ"
ಎನ್ನುವ ಸೂಚನೆಯ ಮಾತು ಕೇಳಿದಾಕ್ಷಣವೇ ನಮ್ಮ ಜಂಘಾ ಬಲವೇ ಅಡಗಿ
ಹೋಗುತ್ತಿತ್ತು. "ಒಂದು" "ಎರಡಕ್ಕೆ' ಹೋದಂತೆ ಅನುಭವವಾಗುತ್ತಿತ್ತು. ಮುನ್ನವೇ
ಸಿಗುವ ಸೂಚನೆಯ ಈ ಸಂದರ್ಭವೇ ತುಂಬ ಭಯಾನಕ ಎನಿಸಿ ಬಿಡುತ್ತಿತ್ತು.
ಎಂದಾದರೊಮ್ಮೆ ನಮ್ಮ ಹಿರಿಯರು ಒಂದೆರಡು ಕಡೆಗಳಲ್ಲಿ ತಲೆ ಕಚ್ಚಾಗುವಂತೆ
ಬೋಳಿಸಿದರೆ ಅವರಿಗೆ ಹೆಮ್ಮೆಯೋ ಹೆಮ್ಮೆ!

ನನ್ನ ಅಣ್ಣಂದಿರಿಬ್ಬರೂ ಕಾಲೇಜಿಗೆ ಹೋಗುವ ದಿನಗಳು. ನಮ್ಮ ತಂದೆ (ಚಿಕ್ಕಪ್ಪ)
ಕೂದಲು ಕತ್ತರಿಸುವ ಒಂದು 'ಜೀರೋ ಮಶೀನ್" ತಂದರು ಆ ಮಶೀನ್ ಮೂಲಕ
ಕೂದಲು ಕತ್ತರಿಸಲು ನಮ್ಮ ಇಬ್ಬರೂ ಸಹೋದರರಲ್ಲಿಯೇ ಸ್ಪರ್ಧೆ. ಅವರಿಬ್ಬರ ಜಗಳವನ್ನು
ನೋಡಲು ನಮಗೆ ಮೋಜು ಎನಿಸುತ್ತಿತ್ತು. ತಂದೆಯವರು ಅದನ್ನು ತುಂಬ
ಜಾಗರೂಕತೆಯಿಂದ ಬಳಸಬೇಕು ಎಂದು ಎಚ್ಚರ ನೀಡಿದ್ದರು. ಆದರೆ ಇವರಿಬ್ಬರ ಜಗಳದಲ್ಲಿ
ಆ ಮಶೀನ್ ಒಬ್ಬನ ಕೈಯಿಂದ ಕಿತ್ತುಕೊಳ್ಳುವಾಗ ಅದು ಗೋಡೆಗೆ ತಾಗಿ ಅದರ
ಹಲ್ಲುಗಳೆಲ್ಲ ಉದುರಿದವು. ಮೊದಲ ಚುಂಬನದಲ್ಲಿಯೇ ಹಲ್ಲು ಕಳೆದುಕೊಂಡವರಂತೆ,
ಈ ಮಶೀನ್ ಮೊದಲ ಪ್ರಯೋಗಕ್ಕೆ ಬರುವ ಮುನ್ನವೇ ಹಲ್ಲುಗಳನ್ನು ಕಳೆದುಕೊಂಡಿತು.

ತಂದೆಯವರು ಬೈದು ಅದಕ್ಕೆ ಮತ್ತೊಂದು ಹೊಸ ಹಲ್ಲಿನ ಪ್ಲೇಟು ತಂದು ಹಾಕಿದರು.
ಅದರ ಪ್ರಯೋಗ ನಮ್ಮ ತಲೆಯ ಮೇಲೆ ನಡೆದಾಗ, ಆ ಮಾನವ ಮೊಂಡ ಕತ್ತಿಯ
ಸಹವಾಸ ಬೇಕಿತ್ತು. ಇದು ಅದಕ್ಕಿಂತಲೂ ಭಯಾನಕವಾಗಿತ್ತು. ನಮ್ಮ ಸಹೋದರರಿಗೆ
ಅದನ್ನು ಕೈಯಲ್ಲಿ ಸರಿಯಾಗಿ ಹಿಡಿದು ಒಂದೇ ಗತ್ತಿನಲ್ಲಿ ಅದುಮಿ ಹೊರ ತೆಗೆಯಲು
ಬರುತ್ತಿರಲಿಲ್ಲ. ಕತ್ತರಿಸುವುದಕ್ಕೆ ಪ್ರಾರಂಭಿಸಿ ಒಮ್ಮೆಲೇ ಮಶೀನ್ ಮೇಲಕ್ಕೆ ಎತ್ತಿ
ಬಿಡುತ್ತಿದ್ದರು. ಆಗ ಹುಲ್ಲು ಕಿತ್ತಿದಂತೆ ಒಮ್ಮೆಲೇ ತಲೆಯ ಕೂದಲು ಕಿತ್ತಲು ಪ್ರಯತ್ನಿಸುತ್ತಿದ್ದವು. ಮಶೀನ, ಕೂದಲನ್ನು ಬಿಟ್ಟು ಹೊರಗೆ ಬಾರದೆ ಇರುವುದರಿಂದ
ಹಿಡಿದು ಜಗ್ಗುತ್ತಿದ್ದರು. ಮಶೀನ್ ಬಾಯಿಗೆ ತಲೆಕೊಟ್ಟು ನಾವು, ಬೊಬ್ಬೆ ಹೊಡೆಯುತ್ತ
ಅದರೊಟ್ಟಿಗೆ ಜಾಲಾಡುತ್ತಿದ್ದೆವು.

ಆ ಮಶೀನ್ ತಂದೆಯ ಕೈಯಿಂದ ಅಣ್ಣಂದಿರ ಕೈಗೆ, ಅವರ ಕೈಯಿಂದ ನನ್ನ ಕೈಗೆ
ಸೇರಿದಾಗ, ನಾನು ಈ ಕೆಲಸದಲ್ಲಿ ಎಷ್ಟೊಂದು ಪಳಗಿದೆನೆಂದರೆ, ನಾನೂ ಒಬ್ಬ ಉತ್ತಮ
ಕ್ಷೌರಿಕನಾದೆ. ನಾನು ಎಂ. ಎ. ಓದುವಾಗ ನನ್ನ ಸ್ನೇಹಿತರು ಹೇಳುತ್ತಿದ್ದರು.

"ಈಗ ಸಂಪೂರ್ಣ ಕನ್ನಡ ಓದಿದವರಿಗೆ
ನೌಕರಿ ಸಿಗೋದಿಲ್ಲ. ಇನ್ನು ಜಾನಪದ ಕನ್ನಡ ಓದಿದ
ವರಿಗೆ ನೌಕರಿ ಸಿಗ್ತಾದ?ಜಾನಪದ ವಿಷಯ ಕಾಲೇಜಿನಲ್ಲಿ
ಇದ್ದರೆ ತಾನೇ ಅವು ನಮ್ಮನ್ನ ನೌಕರಿಗೆ ತಗೊಳ್ಳುದು............?"

ಎಂದು ಪ್ರಶ್ನಿಸುತ್ತಿದ್ದರು. ಅಂತೆಯೇ ಎಂ. ಎ. ಮುಗಿದಾಕ್ಷಣ ನನಗೆ ಕೆಲಸ
ಸಿಗಲಿಲ್ಲ. ಯು. ಜಿ. ಸಿ. ಯಿಂದ ಸಂಶೋಧನೆಯನ್ನು ಕೈಗೊಂಡೆ. ಆಮೇಲೆಯೂ ನನಗೆ
ಮೇಲಿನ ಪ್ರಶ್ನೆಯೇ ಕಾಡುತ್ತಿತ್ತು. ನನ್ನದು ಎಂ. ಎ. ಸಂಪೂರ್ಣ ಕನ್ನಡ ವಿಷಯ ಅಲ್ಲ.
ನಾನು ಜಾನಪದದ ವಿದ್ಯಾರ್ಥಿ. ನನಗೆ ನೌಕರಿ ಸಿಗದಿದ್ದರೆ?' ನನ್ನ ಮನಸ್ಸು ಆಗ ಎಷ್ಟರ
ಮಟ್ಟಿಗೆ ನಿರ್ಧಾರಕ್ಕೆ ಬಂದು ನಿಂತಿತ್ತು ಎಂದರೆ,

"PH.D.BARBERSIHIOP

ಎಂದು ದೊಡ್ಡದೊಂದು ಬೋರ್ಡು ಹಾಕಿ ಅಂಗಡಿಯನ್ನು ತೆರೆಯೋಣ ಎಂದು
ನಿರ್ಧರಿಸಿದ್ದೆ. ಅಷ್ಟರಮಟ್ಟಿಗೆ ನಾನು ಆ ಕೆಲಸದಲ್ಲಿ ಆತ್ಮವಿಶ್ವಾಸವನ್ನು
ಹೊಂದಿದವನಾಗಿದ್ದೆ.

ಅಷ್ಟೇ ಏಕೆ? ನಾನು ಎಂ. ಎ. ಓದಲು ಧಾರವಾಡಕ್ಕೆ ಬಂದಾಗ ನನ್ನ ಅಣ್ಣ
ಧಾರವಾಡದಲ್ಲಿ ಕ್ಷೌರಿಕರ ಅಂಗಡಿಗೆ ಹೋಗುತ್ತಿರಲಿಲ್ಲ. ನನ್ನಣ್ಣನಿಗೆ ಹಾಸ್ಟೇಲಿನ ಅವನ
ರೂಮಿನಲ್ಲಿ ನಾನೇ ಕಟಿಂಗ್ ಮಾಡುತ್ತಿದ್ದೆ. ವಿಷಯ ಯಾರಿಗೂ ಗೊತ್ತಾಗದಿರಲೆಂದು
ನನ್ನ ರೂಮಿನ ಕಿಟಕಿ ಬಾಗಿಲುಗಳನ್ನು ಭದ್ರಪಡಿಸುತ್ತಿದ್ದ. ಒಮ್ಮೆ ಹುಳುಕು
ಹೊರಬಿದ್ದಾಗ ಅವನ ಸ್ನೇಹಿತರಿಗೆ ಆಶ್ಚರ್ಯ! ಆಮೇಲೆ ಅವನ ಸ್ನೇಹಿತರೂ ಕಟಿಂಗ್
ಮಾಡಿಸಿಕೊಳ್ಳಲು ಹಂಬಲಿಸಿದರು. ಕತ್ತರಿ ಹಣಿಗೆ ಮತ್ತು ದಾಡಿ ಸೆಟ್ ಇದ್ದರೆ ಸಾಕು,
ಕಟಿಂಗ್ ಮುಗಿದು ಹೋಗುತ್ತಿತ್ತು.

ಎಂ. ಎ. ಮುಗಿಸಿ ಧಾರವಾಡದಿಂದ ಊರಿಗೆ ಬಂದಾಗ ನಾಯಿಂದರ ಮಲ್ಲನಲ್ಲಿ
ಕಟಿಂಗ್ ಮಾಡಿಸಿಕೊಳ್ಳಲು ಹೋದರೆ, ಆಗ ಆತ 'ರೀ' ಎಂದು ಸಂಬೋಧಿಸುತ್ತಾ ಕೇಳುತ್ತಿದ್ದ

ನೀವು ಮೊದ್ದು ಮನ್ಯಾಗ ಕಟಿಂಗ್ ಮಾಡ್ತಿದ್ರಂತ ಹೌದಾ? "ಹೌದು"
ಈಗ ಯಾರು ಮಾಡ್ತಾರೆ?
"ಯಾರೂ ಇಲ್ಲ"

ಹಂಗಿದ್ರ ಆ ಸಾಮಾನೆಲ್ಲ ಮನ್ಯಾಗ ಇರಬೇಕಲ್ಲಾ ನಮಗರ ತಂದು ಕೊಡ್ರಿ ನಾವಾರ
ಬಳ್ಳಕೊತೀವಿ, ಎಂದು ಹೋದಾಗಲೆಲ್ಲ ಕೇಳುತ್ತಿದ್ದ. ಮೊದಲು ನಮ್ಮನ್ನು
ಮುಟ್ಟದೇ ಸ್ಪೃಶ್ಯತನವನ್ನು ಕಾಪಾಡಿಕೊಳ್ಳುತ್ತಿದ್ದ ಅವರ ತಂದೆ ಗೂರು, ಅಲ್ಲಿಯೇ
ಕುಳಿತಿರುತ್ತಿದ್ದರು. ಈ ವ್ಯವಸ್ಥೆಯಲ್ಲಿ ಅವಶ್ಯಕ ಕೆಲಸಗಳಿಂದ ವಂಚಿತನಾದ ಮನುಷ್ಯ
ಆ ಅವಶ್ಯಕ ಕೆಲಸಗಳನ್ನು ತಾನಾಗಿಯೇ ಕಲಿತುಕೊಳ್ಳುತ್ತಾನೆ. ಕನ್ನಡಿಯ ಮುಂದೆ ನಿಂತಾಗ,
ಕಣ್ಣಿಗೆ ಕತ್ತರಿ ಕಂಡರೆ ನನ್ನ ಕೈ ಈಗಲೂ ಸುಮ್ಮನಿರುವುದಿಲ್ಲ.


೧೧೫

ನನ್ನಪ್ಪನ ಮಾಸ್ತರ ನೌಕರಿ ಮತ್ತು ಪಂದ್ರಾ ಆಗಸ್ಟ


ನನ್ನಪ್ಪನಿಗೆ ನಡುವಯಸ್ಸಿನಲ್ಲಿಯೇ ಮರ್ಮಾಂಗಕ್ಕೆ ಚೇಳು ಕಡಿದುದರಿಂದ ಮೈಯೆಲ್ಲ
ಹಸಿರೇರಿ ಸತ್ತ. ಅಜ್ಜ ಹೇಳುತ್ತಿದ್ದಳು, ಮಕ್ಕಳಾಗಲಿಲ್ಲವೆಂದು ಕಂಡ ಕಲ್ಲುಗಳಿಗೆಲ್ಲ ಸುತ್ತಿ
ಹರಕೆ ಹೊತ್ತು ಪ್ರಯೋಜನವಾಗದೆ ಹೋದಾಗ ಬೆಲ್ಲದ ಉಂಡಿಯಲ್ಲಿ ಚೇಳನಿಟ್ಟು,
ಚರ್ಮಿತುಪ್ಪ (ಆಡಿನ ಶರೀರದಲ್ಲಿಯ ಕೊಬ್ಬು ಪದಾರ್ಥ) ದಲ್ಲಿ ನುಂಗಿ ಹಡೆದಿದ್ದಳಂತೆ
ಆದ್ದರಿಂದ "ಚೇಳಿನಿಂದಲೇ ಹುಟ್ಟಿದ್ದ ಚೇಳಿನಿಂದಲೇ ಸತ್ತ" ಎಂದು ತನ್ನ ಬದುಕಿನ
ದಿನಗಳನ್ನು ನಿಟ್ಟುಸಿರಿನೊಂದಿಗೆ ಕಥೆ ಮಾಡಿ ಹೇಳುತ್ತಿದ್ದಳು.

ನನ್ನ ಮನೆಯವರೆಲ್ಲ ಹೇಳುವುದೆಂದರೆ ನಾನು ಹುಟ್ಟಿದಾಗ ಗುಂಗಿಯ ಹುಳು
"ಜೀಂ" ಗುಟ್ಟಿದಂತೆ ಸದಾಕಾಲ ಅಳುತ್ತಿದ್ದೆನಂತೆ! ಹಗಲು-ರಾಶ್ರಿಗಳ ವೃತ್ಯಾಸವಿರಲಿಲ್ಲ.
ಕಣ್ಣುಮುಚ್ಚುತ್ತಿರಲಿಲ್ಲ. ತುಟಿ ಸೇರುತ್ತಿರಲಿಲ್ಲ. ಅತ್ತು ಅತ್ತು ಬಾಯಿ ಬತ್ತಿ ಹೋದರೂ
ಅಳುವುದು ನಿಲ್ಲುತ್ತಿರಲಿಲ್ಲ. ಅದಕ್ಕೆ ಅವ್ವ "ಕುತ್ತಿಗಿ ಹಿಸುಕಿ ಕಂದಕದಾಗ ಒಗದ ಬರ್ರಿ"
ಎಂದು ಬೇಸತ್ತು ಹೇಳುತ್ತಿದ್ದಳಂತೆ! ನನ್ನನ್ನು ಸದಾಕಾಲ ರಮಿಸುವವರು ಅಜ್ಜ ಮತ್ತು
ಅಪ್ಪ ಇವರಿಬ್ಬರು. ನಾನು ಹತ್ತು ತಿಂಗಳ ಮಗುವಾಗಿರುವಾಗಲೇ ಅಪ್ಪ ಸತ್ತರು. ಅಪ್ಪ
ಸತ್ತಾಗ ಅರ್ಧ ಅಳುವು ನಿಂತದ್ದು. ಅಜ್ಜ ಸತ್ತಾಗ ಪೂರ್ತಿ ಅಳುವು ನಿಂತದ್ದು. ಇದನ್ನು
ನೆನೆನೆನಿಸಿ "ಇವರಿಬ್ಬರನ್ನು ನುಂಗಿ ಏನ ಸಾಧಸಾಕ ಹುಟ್ಕಾದೋ ಇದು ಎಂದು ನನ್ನ
ಗಲ್ಲಕ್ಕೆ ಹಲವಾರು ಬಾರಿ ನನ್ನವ್ವ ಸಣ್ಣವನಿದ್ದಾಗ ತಿವಿದಿದ್ದಳಂತೆ. ದೊಡ್ಡವನಾದಾಗಲೂ
ನಗುತ್ತಲೇ ಹಂಗಿಸಿದ್ದಾಳೆ.

ನನ್ನಪ್ಪ ಶಾಲೆ ಓದಿದ್ದೆಂದರೆ ಬೆಟ್ಟ ಕುಟ್ಟಿ ಪುಡಿ ಮಾಡಿದ ಸಾಹಸ. ಸಮುದ್ರದ
ನೀರು ಕುಡಿದು ನಡೆದ ಸಾಹಸ! ಓದುವಾಗ ಇದ್ದ ಉತ್ಸಾಹ ಹುರುಪು ಹುಮ್ಮಸ್ಸು ನೌಕರಿ
ಮಾಡುವಾಗ ಇರಲಿಲ್ಲವಂತೆ. ಅಜ್ಜಿ ಹೇಳುತ್ತಿದ್ದಳು: ಆಗ ಏಳು ರೂಪಾಯಿ
ಸಂಬಳವಿರುತ್ತಿತ್ತಂತೆ. ತಿಂಗಳಲ್ಲಿ ಮನೆಗೆ ಮೂರು ರೂಪಾಯಿ ಖರ್ಚುಮಾಡಿ ನಾಲ್ಕು
ರೂಪಾಯಿ ತೆಗದಿಡುತ್ತಿದ್ದರಂತೆ!

ನೌಕರಿಯ ನೇಮಕ ಪತ್ರ ಕೈಗೆ ಬಂದಾಗ ಕೇರಿಯೆಲ್ಲಾ ಸುತ್ತಾಡಿ ಹಿರಿಯರಿಗೆಲ್ಲ
ಕಾಲಿಗೆ ಬಿದ್ದು ನಮಸ್ಕರಿಸಿ, ನೌಕರಿ ಬಂದಿದೆ ಸೇರುವುದಕ್ಕಾಗಿ ಹೋಗುತ್ತಿದ್ದೇನೆಂದು
ಸಾರಿ, ಹಾಜರಾಗಲು ಹೋದನಂತೆ. ಸುಟ್ಟ ಬದನೆಕಾಯಿಯಂತೆ ಮುಖ ಒಣಗಿಸಿಕೊಂಡು
ಮನೆಗೆ ಬಂದದ್ದು ನೋಡಿ ಎಲ್ಲರಿಗೂ ಆಶ್ಚರ್ಯ. ಅಲ್ಲಿ ನಡೆದ ವಿಷಯ ಅಪ್ಪ, ಅಜ್ಜಿ, ಅಜ್ಜ, ಅವ್ವ ಅವರೆದುರು ಹೇಳಿದನಂತೆ.

ಹಾಜರಾಗಲು ಹೋದಾಗ ಮುಖ್ಯ ಗುಮಾಸ್ತರು
"ಇಲ್ಲ ನೀನು ಬೇರೆ ಊರಿಗೆ ಹಾಕ್ಸಕೋ
ಇಲ್ಯಾದ್ರ ನಿನಗೆ ಸರಿ ಆಗೋದಿಲ್ಲ"
"ಇಲ್ರೀ ನಾನು ಸರಿಯಾಗಿ ಹೊಂದಿಕೊಂಡ ಹೋಗ್ತೀನಿ"

ಆಮೇಲೆ ಶಾಲೆಯಲ್ಲಿರುವ ಮಾಸ್ತರರೆಲ್ಲ ಸಭೆ ಸೇರಿ ಠರಾವ್ ಮಾಡಿ ಹೇಳಿದರಂತ

"ಇಲ್ಲ ಈ ಸಾಲ್ಯಗ ನೀ ಸೇರುದು ಸಾಧ್ಯ ಇಲ್ಲ"

"ಸರಕಾರದ ಪತ್ರ ತಂದಿದ್ರ, ಆ ಪತ್ರ ತಗೊಂಡು ಸರಕಾರದವಿಗೆ ಹೇಳು, ನಾನು ಅಲ್ಲಿ ನೌಕ್ರಿ ಮಾಡೋದಿಲ್ಲ ಅಂತ ಹೇಳಿ, ಬ್ಯಾರೆ ಕಡೆ ಬದ್ಲ ಮಾಡ್ಸಿಕೋ, ಇಲ್ಲಂದ್ರ ಮುಂದ ನೀನೇ ಉಣಬೇಕಾಗತದ......." ಸಾಲಿ ಬಿಡುತನಾ ನಿಂತೆ, ಏನೂ ಪ್ರಯೋಜನಾ ಆಗಲಿಲ್ಲ. "ಕುಂದ್ರು" ಅನ್ನೋ ಕರುಣೆ ಕೂಡಾ ತೋರಲಿಲ್ಲ ಎಂದು ನಡೆದದ್ದನೆಲ್ಲ ವಿವರಿಸಿ ಹೇಳಿದನಂತ. ಮತ್ತೆ ಏನೆಲ್ಲ ಮಾಡಿ ಬೇರಿ ಊರಿನ ಶಾಲೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡಿಕೊಂಡು ಬಂದನಂತೆ.

ಅದೊಂದು ಹಳ್ಳಿ, ಊರಿಗೆ ಹತ್ತಿರವಾದುದೇ. ಅಲ್ಲಿ ಶಾಲೆ ಆರಂಭ ಆಗಿ, ಯಾವ ಮಾಸ್ತರೂ ಹೋಗಲಿಕ್ಕಾಗದೆ ಖಾಲಿ ಉಳಿದದ್ದು. ಆ ಶಾಲೆ ಹನುಮಂತ ದೇವರ ಗುಡಿಯಲ್ಲಿ ನಡೆಸುತ್ತಿದ್ದರಂತೆ! ಮಾಸ್ತರು ಇಲ್ಲದ ಗುಡಿ, ಗುಡಿಯೇ ಆಗಿತ್ತು. ಹೋಗಿ ಊರ ಗೌಡರಿಗೆ ಮನವಿ ಮಾಡಿಕೊಂಡಾಗ, ಸರಕಾರದ ಪತ್ರ ನೋಡಿ,

ನಿಮಗ್ಯಾಕ್ರಿ ಮಾಸ್ತರೇ ನೌಕ್ರಿ

ನಮ್ಮ ಹಳ್ಳಾಗ ಸಾಲಿನೇ ಇಲ್ಲ. ಮಕ್ಕಳೂ ಇಲ್ಲ ಅಂದಿದ್ದರಂತೆ! ಅಂತೂ ಹೇಗೋ ಪಾಠ ಮಾಡಲು ಅಲ್ಲಿ ಅನುಮತಿ ದೊರೆತರೂ ಕೆಲವೊಂದು ಕಡ್ಡಾಯದ ನಿಯಮಗಳನ್ನು ಹಾಕಿದ್ದರಂತೆ. (ಹೆಚ್ಚಿನ ವಿವರ ತಿಳಿಯದು)

ದೇವರ ಗುಡಿಯಲ್ಲಿ ಹೋಗುವ ಹಾಗಿಲ್ಲ
ಮರದ ಕೆಳಗೆ ಪಾಠಶಾಲೆ ಆರಂಭಿಸಬೇಕು
ಅಪ್ಪನ ನೌಕರಿ ಆರಂಭ ಆಯಿತು. ಶಾಲೆಗೆ ಮಕ್ಕಳೇ ಇಲ್ಲ! ಶಾಲೆಯಲ್ಲಿ ಮಾಸ್ತರನೂ ಅವನೇ, ಮುಖ್ಯೋಪಾಧ್ಯಾಯನೂ ಅವನೇ. ಕಸಗುಡಿಸುವ ಜವಾನನೂ ಅವನೇ, ಗಂಟೆ ಬಾರಿಸುವ ಸಿಪಾಯಿಯೂ ಅವನೇ, ಕೊನೆಗೆ ವಿದ್ಯಾರ್ಥಿಯೂ ಅವನೇ ಆಗಿದ್ದನಂತೆ! ಸುಮಾರು ಎರಡು ತಿಂಗಳ ಕಾಲ ಮಕ್ಕಳಿಲ್ಲದೆ, ಪಾಠವೂ ಇಲ್ಲದೆ ಹೋಯಿತಂತೆ. ಆದರೆ ಸಂಬಳ ಮಾತ್ರ ತಪ್ಪದೇ ಬರುತ್ತಿತ್ತಂತೆ.

"ಕೆಲಸ ಮಾಡದೇ ಏನು ಪಗಾರ ತಗೊಳುದು" ಎಂದು ಅಜ್ಜಿಯ ಎದುರು
ಗೊಣಗುತ್ತಿದ್ದನಂತೆ. ಬೇರೆ ಕೆಲಸ ಹುಡುಕುವ ಹವಣಿಕೆಯಲ್ಲಿಯೂ ಇದ್ದನಂತೆ. ಆದರೆ
ಮುಂದೆ ಒಬ್ಬೊಬ್ಬರೇ ಮಕ್ಕಳು ಬರೋದಕ್ಕೆ ಆರಂಭ ಆಗಿ ಶಾಲೆಯೂ ಆರಂಭ ಆಯಿತಂತೆ.
ಕೆಲವರು ಕನಿಕರದಿಂದ, ಕೆಲವರು ಮಾಸ್ತರನ ಗುಣಗಾನ ಮಾಡಿ ಮಕ್ಕಳನ್ನು ಕಳ್ಳತಿದ್ರಂತೆ.
ಮುಂದೆ ಹನುಮಂತ ದೇವರ ಗುಡಿಯಲ್ಲಿಯೇ ಪಾಠ ಆರಂಭ ಆಗಿ ಬೆಳೀತಾ ಹೋಯಿತಂತೆ.

ನಾನು ಚಿಕ್ಕವನಿದ್ದಾಗ ಸ್ನೇಹಿತರೊಂದಿಗೆ ಓತಿಕ್ಯಾತನ ಬೇಟೆಯಾಡುತ್ತಾ ನಂತರ
ಅದನ್ನೂ ಮರೆತು, ಹುಣಸೆ ಚಿಗುರು ಕಾಯಿಗಾಗಿ ಅಲೆಯುತ್ತಾ ಆ ಹಳ್ಳಿಗೆ ಹೋಗಿದ್ದೆ.
ಆ ಹಳ್ಳಿಯ ದೇವಸ್ಥಾನದಲ್ಲಿ ನನ್ನಪ್ಪನ ಭಾವಚಿತ್ರ ಇತ್ತು. ಅದೊಂದು ಸಮೂಹದ
ಭಾವಚಿತ್ರ, ಅದು ನನ್ನ ಕೈಗೆ ನಿಲುಕುತ್ತಿರಲಿಲ್ಲ. ಅದನ್ನು ಹಿಡಿಯೋದಕ್ಕೆ ಕೈ ಚಾಚಿ
ಸಿಕ್ಕದೆ ಹೋದಾಗ ಮೆಲ್ಲನೆ ಜರೆಯುತ್ತ ಅಳುತ್ತ ಅಲ್ಲೇ ಕುಳಿತಿದ್ದೆ. ಆಗ ಸ್ನೇಹಿತರು
ನನ್ನನ್ನು ರಮಿಸಲು ಹುಣಸೆ ಕಾಯಿಗಳನ್ನೆಲ್ಲ ನನ್ನ ಮುಂದೆ ಹಾಕಿ "ಅಳಬೇಡ, ಅಳಬೇಡ"
ಎಂದು ರಮಿಸುತ್ತಿದ್ದರು. ಆಗ ನನ್ನ ಸ್ನೇಹಿತನೊಬ್ಬ ಬಾಗಿ ತನ್ನ ಬೆನ್ನು ಕೊಟ್ಟಿದ್ದ. ಅವನ
ಬೆನ್ನ ಮೇಲೆ ನಿಂತು ನನ್ನಪ್ಪನ ಭಾವಚಿತ್ರದ ಭಾಗವನ್ನು ಸವರಿ ಸವರಿ ಎಂಥದೋ
ಆನಂದ ಅನುಭವಿಸುತ್ತಿದ್ದೆ. ಈ ಸಂದರ್ಭ ಈಗ ಬರೆಯುತ್ತಿದ್ದರೂ ಕಣ್ಣು ನೆನೆದು
ಮಂಜಾಗುತ್ತಿದೆ, ಕಂಠ ತುಂಬಿ ಬರುತ್ತಿದೆ. ಆ ನನ್ನ ಸ್ನೇಹಿತನ ಬೆನ್ನು ಈಗಲೂ ನನ್ನ
ಕಾಲಡಿಯಲ್ಲಿ ಇದ್ದಂತೆ ಭಾಸವಾಗುತ್ತಿದೆ.

ನನ್ನಪ್ಪ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ದಳದಲ್ಲಿ ಸೇರಿ ಹೋರಾಟ
ಮಾಡಿದವನು. ಆ ಖಾದಿ ಬಟ್ಟೆಯಲ್ಲಿಯೇ ಎದೆಯುಬ್ಬಿಸಿ ನಿಂತು ತೆಗೆಸಿಕೊಂಡ ಭಾವಚಿತ್ರ
ಇಂದಿಗೂ ನಮ್ಮ ಹಳೆಯ ಮನೆಯಲ್ಲಿ ಜೋತಾಡುತ್ತಿದೆ. ಇಲ್ಲಿ ಆತನ ಹೋರಾಟದ
ಗಾಥಾ ಬರಯಲು ಹೊರಟಿಲ್ಲ. ಅಥವಾ ತೀರಾ ಸ್ವಾರಸ್ಯಕರವಾದ ಮತ್ತು ಪೌರುಷ
ಭರಿತವಾದ ಸಂದರ್ಭಗಳನ್ನು ಹೇಳಬಹುದಾಗಿತ್ತಾದರೂ ಅಂಥವೂ ನನಗೆ ತೀರಾ
ಮುಖ್ಯವೆನಿಸುತ್ತಿಲ್ಲ. ನನಗನಿಸಿದ ಒಂದು ಮಹತ್ವದ ಸಂದರ್ಭವನ್ನು ಮುಂದಿಡುತ್ತಿರುವೆ.
ಒಂದು ದಿನ ನನ್ನಪ್ಪ ವಿಜಾಪುರದಿಂದ ನಸುಕಿನಲ್ಲಿಯೇ ಬಂದವನೇ "ಏ ನಮಗ
ಸ್ವಾತಂತ್ರ್ಯ ಬಂತು, ಹೋಳಿಗಿ ಮಾಡು ಹೋಳಿಗಿ ಮಾಡು" ಎಂದು ಅವ್ವಾಗೆ ಹೇಳಿ
ಹೋಳಿಗೆ ಮಾಡಿಸಿದನಂತೆ. ಅಜ್ಜಿ "ಅಷ್ಟಾಕ ಹೋಳ್ಗಿ ಮಾಡೋದು" ಎಂದು ಬೇಸೂರು
ಎತ್ತಿದರೂ ಲೆಕ್ಕಿಸದೇ ಹೆಚ್ಚಿಗೆನೇ ಮಾಡಿಸಿ ಕೇರಿಯ ಮನೆ ಮನೆಗೆ ಹೋಗಿ ಅವರ
ಬಾಯಿಯಲ್ಲಿ ಹೋಳಿಗೆ ಇಟ್ಟು ಆ ಸಂಭ್ರಮವನ್ನು ಹಂಚಿಕೊಂಡದ್ದು ಆ ದಿನದ
ಮೊದಲನೆಯ ಕಂತಿನ ಕೆಲಸವಾಗಿತ್ತಂತೆ.

ಎರಡನೆಯ ಕಂತಿನ ಕೆಲಸ, ಅದಕ್ಕಿಂತಲೂ ಹುರುಪು ಹುಮ್ಮಸ್ಸಿನಿಂದ ಕೂಡಿದ್ದು. ಕೇರಿಯ ಎಲ್ಲ ಯುವಕರನ್ನೂ ಕರೆದುಕೊಂಡು ಕೊಡ ಹಗ್ಗದೊಂದಿಗೆ ನೀರಿಗೆ ಹೊರಟರಂತೆ.
ಅದು ಮಧ್ಯಾಹ್ನದ ಉರಿ ಬಿಸಿಲು ಬೇರೆ! ಹೋದವರೇ ಮೊದಲು ಮಠದ ಬಾವಿಗೆ
ಹಗ್ಗವನ್ನು ಹಾಕಿ ನೀರು ಸೇದಿದರಂತೆ. ಎಲ್ಲ ಜನತೆ "ಅವಕ್ಕಾಗಿ" ಇವರನ್ನೇ
ನೋಡುತ್ತಿದ್ದರಂತೆ. ಇವರ ಕುಣಿದಾಟ, ಜಿಗಿದಾಟ ನಿಂತು ನೋಡುವ ಹಾಗೆ ಇರುತ್ತಿತ್ತಂತೆ!
ಮೇಲು ಜಾತಿಯ ಜನತೆಗೆ ಆಶ್ಚರ್ಯ, ದಿಗಿಲು ಎರಡೂ ಏಕಕಾಲಕ್ಕೆ ಉಂಟಾಗಿರಬೇಕು.
ಬಾವಿಯಿಂದ ನೀರು ಜಗ್ಗಿದ ಈ ಜನ ಮನೆಗೂ ತೆಗೆದುಕೊಂಡು ಹೋಗುತ್ತಿರಲಿಲ್ಲವಂತೆ.

ಬಾವಿಯಿಂದ ನೀರು ಜಗ್ಗುವುದು
ದಬದಬನೆ ನೆಲಕ್ಕೆ ಚೆಲ್ಲುವುದು
ಬಾವಿಯಿಂದ ನೀರು ಜಗ್ಗುವುದು
ದಬದಬನೆ ನೆಲ್ಲಕ್ಕೆ ಚೆಲ್ಲುವುದು

ಹೀಗೆ ಒಂದು ಬಾವಿಯಲ್ಲಿ. ಎರಡು ಬಾವಿಯಲ್ಲಿ ಊರಲ್ಲಿ ಇರುವ ಎಲ್ಲ
ಬಾವಿಗಳನ್ನೂ ಮುಟ್ಟಿ ಮುಟ್ಟಿ ಗಡಗಡಿಗೆ ಹಗ್ಗ ಹಾಕಿ ನೀರು ತೆಗೆಯುವುದು, ಚೆಲ್ಲುವುದು,
ಆ ಪಂದ್ರಾ ಆಗಸ್ಟದ ದಿನವೆಲ್ಲ ಇದೇ ಕೆಲಸವೇ ಆಗಿ ಹೋಗಿತ್ತಂತೆ ಊರ ಜನವೆಲ್ಲ ಮಿಕ
ಮಿಕನೇ ಬಾಯಿ ತೆಗೆದುಕೊಂಡು ಇವರ ಮುಖಗಳನ್ನೇ ನೋಡುತ್ತಿದ್ದರಂತೆ! ಜನರೆಲ್ಲ
ದಾರಿಯುದ್ದಕ್ಕೂ ನಿಂತು ನೋಡುತ್ತಿದ್ದರಂತೆ.

ಎಂತಹ ಸಂದರ್ಭವಲ್ಲವೇ ಇದು? ಸ್ವಾತಂತ್ರ್ಯವೆಂದರೆ ಒಬ್ಬೊಬ್ಬರಿಗೆ ಎಂತಹ
ಕಲ್ಪನೆ. ವಿವೇಕಾನಂದರಿಗೆ ತಮ್ಮದೇ ಆದ ಹೊಸನಾಡಿನ ಕಲ್ಪನೆ, ಸರದಾರ್‌ ವಲ್ಲಭಭಾಯಿ
ಪಟೇಲರಿಗೆ ಕ್ಷಾತ್ರ ತೇಜಸ್ಸಿನ ಕಲ್ಪನೆ, ನೆಹರೂಗೆ ಆಧುನೀಕರಣದ ನಾಡಿನ ಕಲ್ಪನೆ,
ಗಾಂಧೀಜಿಗೆ ರಾಮರಾಜ್ಯದ ಕಲ್ಪನೆ, ಅಂಬೇಡ್ಕರ್‌ಗೆ ಹಕ್ಕುಗಾರಿಕೆಯ ನಾಡಿನ ಕಲ್ಪನೆ,
ನನ್ನಪ್ಪನಂತಹ ಸಾಮಾನ್ಯ ಮನುಷ್ಯರಿಗೆ ಸ್ವಾತಂತ್ರ್ಯದ ನಾಡು ಎಂದರೆ ಕುಡಿಯುವ ನೀರು
ತರಲು ನಮಗೆ ಯಾರೂ ಅಡ್ಡಿ ಮಾಡಲಾರರು ಎನ್ನುವ ನಾಡಿನ ಕಲ್ಪನೆ!

ನನ್ನಪ್ಪನ ಎದೆಗೆ ಕುದಿವ ಬಿಸಿನೀರು ಎರಚಿದಂತಾದುದು ಪಂದ್ರಾ ಆಗಸ್ಟದ
ದಿನದಂದೆ! ಪಂದ್ರಾ ಆಗಸ್ಟದಂದು ನಡೆದ ಘಟನೆ ಅನಿಶ್ಚಿತತೆಯಿಂದ ಕೂಡಿದ್ದು.
ಹೀಗಾಗಿಯೇ ಜನ ಕೇವಲ ನಿಂತು ನೋಡುವಂತಾಗಿ ಹೋಯಿತೆಂದು ತೋರುತ್ತದೆ. ಆದರೆ
ಮರುದಿನ ಹಲ್ಲು ಮಸೆಯುವ ಸುದ್ದಿಗಳೇ ಕಿವಿತುಂಬ ಇದ್ದುವಂತೆ. ಕೆಲವರು ಬಾವಿಯ
ಗಡಗಡಿಗಳನ್ನೇ ತೆಗೆದಿದ್ದರಂತೆ ಇನ್ನೂ ಕೆಲವರು "ಅವರು ಬರಲಿ ಇವತ್ತು” ಎಂದು
ಕಾಯುತ್ತಾ ಕುಳಿತಿದ್ದರಂತೆ!

ಪಂದ್ರಾ ಆಗಸ್ಟದಂದು ಮಾಡಿಸಿ ತಿಂದದ್ದು ಹೊ!ದಿನವೂ ಹೋಳಿಗೆ
ತಿನ್ನಲು ಸಾಧ್ಯವೇ? ಮರುದಿನ ಅದೇ ಕಂಕು ರೊಟ್ಟಿಯೇ ಗತಿ ಎನ್ನುವಂತೆ ಹಳೆಯ ದಾರಿಯನ್ನೇ ತುಳಿದು ಬಾಯಿ ಮುಚ್ಚಿಕೊಂಡು ಊರ ಹೊರಗೆ ಇವರಿಗಾಗಿಯೇ ಕಟ್ಟಸಿದ
ಬಾವಿಯಿಂದ ನೀರನ್ನು ತಂದರಂತೆ! ಇದು ನಮ್ಮ ದೇಶದ ನಲ್ವತ್ತೇಳರ ಸ್ವಾತಂತ್ಯ್ರ!
ಇದು ನಮ್ಮಪ್ಪನ ನಾಡಿಗೆ ಸಿಕ್ಕ ಸ್ವಾತಂತ್ರ್ಯ!

ಮುಕ್ತಾಯದ ಮುನ್ನ..........

"ಗೌರ್ಮೆಂಟ್ ಬ್ರಾಹ್ಮಣ" ಎನ್ನುವ ಪದವನ್ನು ಯಾವ ಕಾರಣಕ್ಕಾಗಿ ಪ್ರಯೋಗಿಸುತ್ತಿದ್ದರು ಎನ್ನುವುದನ್ನು ಈ ಹಿಂದೆ ಒಂದೆಡೆ ಸಾಂದರ್ಭಿಕವಾಗಿ ಚರ್ಚಿಸಿದ್ದೇನೆ. ಗೌರ್ಮೆಂಟ್ ಬ್ರಾಹ್ಮಣ ಎಂದರೆ "ಅಸ್ಪ್ರಶ್ಯ" ಎಂದೇ ಅರ್ಥ. ಆದರೆ ಈ ಎರಡೂ ಶಬ್ದಗಳ ಹಿಂದಿರುವ ಧ್ವನಿ ಮಾತ್ರ ಬೇರೆ ಬೇರೆ. ಗೌರ್ಮೆಂಟ್ ಬ್ರಾಹ್ಮಣ ಎಂದು ಕೆಲವರು ವ್ಯಂಗ್ಯವಾಗಿ ಕರೆದಂತೆ "ದೇವರ ಮಕ್ಕಳು" ಎಂದು ಕರೆದದ್ದು ಇದೆ. ಜಾತಿ ಪತ್ರವನ್ನು ಕೊಡುವಾಗ ತಹಶಿಲ್ದಾರರ ಮುದ್ರೆ ಅದರ ಮೇಲೆ ಇರುತ್ತಿತ್ತು. ಅದು ವರ್ತುಳಾಕಾರ ಇರುವುದರಿಂದ "ಗುಂಡು ಸಿಕ್ಕಾ" ಎಂದೂ ಕರೆಯುತ್ತಿದ್ದರು. ಹರಿಜನ, ದಲಿತ, ಆದಿ ದ್ರಾವಿಡ ಹೀಗೆ ಒಂದೊಂದು ಶಬ್ದದ ಹಿಂದೆ ಒಂದೊಂದು ಬಗೆಯ ಧ್ವನಿಗಳಿವೆ. ಆ ಶಬ್ದಗಳಿಂದ ಕರೆದಾಗ ನಮ್ಮ ಎದೆಯಲ್ಲಿ ಒಂದೊಂದು ಬಗೆಯ ಆರೋಹಣ ಅವರೋಹಣದ ತಳಮಳ. ಮನುಷ್ಯನಿಗೆ ಸ್ವಾಭಿಮಾನ ಮೂಡಿದಾಗ ನಿಂದನೆಯ ಪದಗಳಿಗೂ ಎಂಥ ಬಲ ಬರುತ್ತದೆ ಎನ್ನುವುದಕ್ಕೆ "೭೦ರ" ದಶಕದಲ್ಲಿ ಆರಂಭವಾದ ಚಳವಳಿ ಸಾಕ್ಷಿಯಾಗುತ್ತದೆ.

ಈ ಸ್ವರೂಪದ ಬರವಣಿಗೆ ರೂಪುಗೊಳ್ಳಲು ಮುಖ್ಯವಾಗಿ ಎರಡು ಬಿಂದುಗಳು ಕಾರಣ. ಒಂದು ದಲಿತ ಸಂಘರ್ಷ ಸಮಿತಿ, ಎರಡು ನನ್ನಣ್ಣ. ನನ್ನಣ್ಣ ದಲಿತ ಸಂಘರ್ಷ ಸಮಿತಿ, ಸಮುದಾಯಗಳಲ್ಲಿ ಓಡಾಡಿದವ. ಅಲ್ಲಿಯ ಸಮೂಹ ಗೀತೆಯಲ್ಲಿ, ಬೀದಿನಾಟಕಗಳಲ್ಲಿ ಸಕ್ರಿಯವಾಗಿ ಸೇರಿದವ. ಕವನ, ಲೇಖನಗಳನ್ನು ಕದ್ದು ಓದುವ, ನೋಡುವ ಪ್ರವೃತ್ತಿಯಿಂದಲೇ ನಾನು ಆತನ ಕೆಲ ಗುಣಗಳನ್ನು ರೂಢಿಸಿಕೊಂಡೆ.

"ಕಾರ್ಯ" ಕಾದಂಬರಿ ಪ್ರಕಟವಾದಾಗ ಮನೆಯಲ್ಲಿ ಇಬ್ಬರು ಹಿರಿಯ ಸಹೋದರರನ್ನು (ರಾಮಸ್ವಾಮಿ, ಬಸವರಾಜ) ಹೊರತುಪಡಿಸಿ ಇನ್ನುಳಿದವರಲ್ಲ ತೆಗಳುವವರೇ. ಆದರೆ ಹಿರಿಯ ಸಹೋದರನ ಮಾತುಗಳು ನನ್ನ ಪಾಲಿಗೆ ಹೆಚ್ಚು ತೂಕ ಬದ್ಧ ಎಂದು ಭಾವಿಸುತ್ತಿದ್ದೆ. ಕಾರಣ, ಈತ ಸಾಮಾಜಿಕ ಪ್ರಜ್ಞೆ, ದಲಿತ ಪ್ರಜ್ಞೆ, ಚಾರಿತ್ರಿಕ ಪ್ರಜ್ಞೆ ಇಂಥ ಪ್ರಜ್ಞಾವಂತ ವಲಯದವನಾಗಿದ್ದ ಎನ್ನುವುದೇ ಆಗಿತ್ತು. ಈಗಿಷ್ಟು ಸ್ಪಷ್ಟವಾಗಿ ಬರೆದಂತೆ ಹಿಂದೆ ನನಗಾಗ ಈ ರೀತಿಯ ಸ್ಪಷ್ಟತೆ ಇರಲಿಲ್ಲ. ಆದರೆ ಆ ವಿಚಾರದ ಕಡೆಗೆ ವಿಶೇಷವಾದ ಆಸಕ್ತಿ ಇತ್ತು. ನನ್ನ ನಾಲ್ಕನೆಯ ಪುಸ್ತಕವಾಗಿ ಕಾರ್ಯ ಕಾದಂಬರಿ ಬರದಾಗ "ನಿಜವಾದ ಜೀವಂತಿಕೆ ಇದರಲ್ಲಿದೆ" ಎಂದು ಹೇಳಿ ಕೆಲವು ಲೋಪದೋಷಗಳನ್ನೂ ಎತ್ತಿ ತೋರಿಸಿದ. ಸೀಮಾತೀತವಾಗಿರುವ ದಲಿತ ಪ್ರಜ್ಞೆಯಿಂದ ಗುರುತಿಸುವ ನನ್ನ ವಿಚಾರ, ಅದನ್ನು ಕಾದಂಬರಿಯಲ್ಲಿ ಕಂಡು ಮೆಚ್ಚಿದ್ದ, ಈತನ ಈ ಬಗೆಯ ಪ್ರೋತ್ಸಾಹ ನಾನು ದಲಿತನಾಗಿದ್ದು, ಮತೀಯ ದಲಿತೀಯತೆಯನ್ನು ಮೀರಿ ನಿಲ್ಲಲು ಸಾಧ್ಯವಾದುದು, ಇಂಥ ವಿಚಾರಕ್ಕೆ ನನ್ನಣ್ಣ ಮೂಲಮಾತ್ರವಾದರೂ ನನಗೆ ನನ್ನತನವನ್ನು ಹಿಗ್ಗಿಸಿಕೊಳ್ಳಲು, ಬೆಳೆಯಲು ಸಹಕರಸಿದವುಗಳೆಂದರೆ ದಲಿತ ಸಂಘರ್ಷ ಸಮಿತಿ ಮತ್ತು ದಲಿತ-ಬಂಡಾಯ ಸಾಹಿತ್ಯ ಸಂಘಟನೆ.

"೭೦"ರ ದಶಕದಲ್ಲಿ ಬ್ರಾಹ್ಮಣ ಪ್ರಜ್ಞೆ, ಶೂದ್ರ ಪ್ರಜ್ಞೆ, ದಲಿತ ಪ್ರಜ್ಞೆ ಹೀಗೆ ಅದು ಪ್ರಜ್ಞೆಗಳ ಸಂತೆಯ ಕಾಲ. ಈ ಸಂತೆಯಲ್ಲಿ ಉಂಡವನೇ ಜಾಣ ಎನ್ನುವಂತೆಯೂ ಇತ್ತು. ಇಲ್ಲಿ ಪತ್ರಿಕೆಗಳೇ ಗಾಳಿಪಟಗಳಾಗಿದ್ದವು. ಎಲೆ ಅಡಿಕೆಯಾಗಿದ್ದವು. ಈ ಬಗೆಯ ಸಾಂಸ್ಕೃತಿಕ ಸಂಘರ್ಷದಲ್ಲಿ ಉಂಡ ಜಾಣರೂ ದಲಿತರೇ, ತಿಂದು ತೇಗಿಸಿಕೊಳ್ಳಲೂ ಆಗದೆ ಸೋತವರೂ ದಲಿತರೇ ಆಗಿದ್ದಾರೆ.

ಸಂಘರ್ಷ ಸಮಿತಿಯಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ ಸಾರಿಗೆ ವ್ಯವಸ್ಥೆಯೇ ಇಲ್ಲದ ಹಳ್ಳಿಯಲ್ಲಿ ದ.ಸಂ.ಸಮಿತಿ ಶಾಖೆಯ ರಿಬ್ಬನ್ ಕತ್ತರಿಸುವ ಕೆಲಸ, ಹರಿದದ್ದನ್ನು ಜೋಡಿಸುವ, ಬಣ್ಣ ಹೋಗಿದ್ದರೆ ಪುನಃ ಬಣ್ಣ ಕೊಡಲು ಪ್ರಯತ್ನಿಸುವ ಕೆಲಸ. ಇಂಥ ಕೆಲಸಗಳೆಲ್ಲ ಬದುಕಿಗೆ, ನನ್ನ ಅಧ್ಯಯನಕ್ಕೆ ಹೊಸ ತಿರುವನ್ನೇ ಕೊಟ್ಟು, ನನ್ನ ಆಲೋಚನಾ ಕ್ರಮವನ್ನೇ ಬದಲಾಯಿಸಿವೆ. ಇಲ್ಲಿಯ ಸ್ನೇಹಿತರಲ್ಲಿಯೂ ಅಷ್ಟೇ ಕಹಿಕಹಿಯಾದ ಕಾಫಿ ಕುಡಿಸಿದವರೂ ಇದ್ದಾರೆ, ಚಹ ಕುಡಿಸಿದವರೂ ಇದ್ದಾರೆ. ಸಂಘರ್ಷ ಸಮಿತಿ ಆರಂಭದಲ್ಲಿ ಇಟ್ಟುಕೊಂಡು ಬಂದ ಬಿಗುವು ಆನಂತರದಲ್ಲಿ ಉಳಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಜನಸಂಖ್ಯೆ ಆಧಾರಿತ ವಿಚಾರ, ರಾಜಕೀಯ ಪ್ರವೇಶ ವಿಚಾರ, ಎಡಗೈ-ಬಲಗ್ಯ ವಿಚಾರ ಇಂಥವು ಮುಖ್ಯವಾಗಿ, ಸೀಳಿಹೋದರೂ ಅದಕ್ಕೆ ತಾತ್ವಿಕ ಭಿನ್ನಾಭಿಪ್ರಾಯದ ಲೇಪ ಹೆಗಲೇರಿ ನಿಂತಿತ್ತು.

ಎಡಗೈ ಹಾಗೂ ಬಲಗೈ ಈ ಎರಡೂ ಪಂಗಡಕ್ಕೆ ಸೇರಿದ ನನ್ನಂತವರು ನಡುವೆಯೇ ಅಂತರ್ ಪಿಶಾಚಿಯಾಗಿಯೋ ತ್ರಿಶಂಕುವಾಗಿಯೋ ಜೋತಾಡಬೇಕಾಗಿ ಬಂದುದು ದುರದೃಷ್ಟಕರ ಸಂಗತಿ. ಇದು ಎಲ್ಲಿಯವರೆಗೆ ತಲುಪಿತು ಎಂದರೆ, ಒಮ್ಮೆ "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಪ್ರಸ್ತುತತೆ" ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದೆ. ಎಂದಿನಂತೆ ವಸ್ತುನಿಷ್ಟವಾಗಿಯೇ ಮಾತನಾಡುತ್ತ ಅಲ್ಲಿಯ ಅವಶ್ಯಕ, ಅನವಶ್ಯಕ, ವಿಚಾರಗಳನ್ನು ಚರ್ಚಿಸಿ ಪರಿಷ್ಕರಿಸಬೇಕಾದ ವಿಚಾರಗಳ ಬಗ್ಗೆಯೂ ಮಾತನಾಡಿದೆ. ಅದೊಂದು ಉಡಾಫೆಯ ಉಪನ್ಯಾಸವಾಗಿರಲಿಲ್ಲ. ಆದರೆ ಅಲ್ಲಿ ಪ್ರಬಂಧದ ವಿಚಾರ ಬದಿಗಿಟ್ಟು, ನನ್ನ ಜಾತಿಗೂ ಅಂಬೇಡ್ಕರ್‌ ಜಾತಿಗೂ ತಳಕು ಹಾಕಿ, ಇವನು ಜಗಜೀವನರಾಮ ಜಾತಿಯವನು ಅಂಬೇಡ್ಕರ್‌ ಜಾತಿಯವನಲ್ಲ, ಅದಕ್ಕೆ ಈತ ಹೀಗೆ ಹೇಳ್ತಾನೆ. ಹಿಂದೆ ಜಗಜೀವನರಾಮ ಕೂಡ ಅಂಬೇಡ್ಕರ್ ಹೀಗೆ ಮಾಡಿದ್ದಾನೆ! ಎಂದು ಎಲ್ಲೆಲ್ಲಿಯದೋ ವಿಷಯ ತಂದು ಇನ್ನೆಲ್ಲೋ ತಳಕು ಹಾಕಿ ವೇದಿಕೆಯ ಮೇಲಿದ್ದಾಗಿನಿಂದ ಹಿಡಿದು ವೇದಿಕೆ ಇಳಿದ ಮೇಲೂ ನನಗೆ ಹಾರ-ತುರಾಯಿಗಳ ಜೊತೆಗೆ ಪಂಗನಾಮವೂ ಹಾಕಿದರು. ಅಷ್ಟೇ ಅಲ್ಲ ಅಂದಿನಿಂದ ಸಮಿತಿಯ ಯಾವ ಕೆಲಸಕ್ಕೂ ನನಗೆ ಕರೆಯದೆ ಹೊರಗಿಟ್ಟರು.

ಸ್ವಾರಸ್ಯವೆಂದರೆ ದಲಿತ ಸಂಘರ್ಷ ಸಮಿತಿಯ ಕೆಲ ಸ್ನೇಹಿತರೇ ಮತ್ತೆ ನನ್ನನ್ನು ಕರೆಯಲು ಬಂದದ್ದು. "ದಲಿತ ಜಗತ್ತು" ಅದ್ಭುತವಾದುದು, ಭವ್ಯವಾದುದು, ದಿವ್ಯವಾದುದು ಎಂದು ಗಾಲಿ ಹಾಕಿ ದಲಿತ-ದಲಿತರಲ್ಲಿಯೇ ವಿಷದ ಬೀಜ ಬಿತ್ತಿ, ತೂರಿಕೊಳ್ಳುವವರನ್ನು ಅರಿಯಲು ದ.ಸಂ.ಸ ಸ್ನೇಹಿತರು ತಡಮಾಡಿದರೂ, ಅರಿತುಕೊಂಡದ್ದು ನನಗೆ ಮುಖ್ಯವಾಗಿತ್ತು. ಸಂಘರ್ಷ ಸಮಿತಿಯ ಬಲಕ್ಕಾಗಿಯೇ ತಮ್ಮ ಅಸ್ತಿತ್ವ, ಜೀವನ ಜೀವವನ್ನೂ ಕಳೆದುಕೊಂಡ ಸ್ನೇಹಿತರೂ ನನ್ನ ಕಣ್ಣಲ್ಲಿಯೇ ಇದ್ದಾರೆ. ಇಂಥವರ ಕುರಿತು ಬರೆಯುವ ಒತ್ತಾಸೆಯೂ ಇದೆ. ಇಂಥ ಬಲಾಬಲಗಳು ಏನೇ ಇದ್ದಾಗಲೂ ಎರಡೂ ಸಂಘಟನೆಗಳು ನೇರವಾಗಿ ಮಾತನಾಡುವ ಎದೆಗಾರಿಕೆ, ಸಂಯಮದ ಗೆಲುವು ಇದ್ದುದ್ದನ್ನು ಬಿಚ್ಚು ಮನಸ್ಸಿನಿಂದ ಹೇಳಿಬಿಡುವ, ಹೇಳುವವರ ವಿಷಯವನ್ನು ವ್ಯವಧಾನದಿಂದ ಕೇಳುವುದನ್ನು ಕಲಿಸಿಕೊಟ್ಟಿವೆ. ಈ ಬರವಣಿಗೆಯಲ್ಲಿ ಬಲವಿದೆ ಎಂದು ನಿಮಗನಿಸಿದಲ್ಲಿ ಅದರ ಹಿಂದಿನ ಬೆನ್ನೆಲುಬು ಈ ಮೇಲೆ ಸೂಚಿಸಿದ ಶಕ್ತಿಗಳೇ ಆಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ.

ಈ ಕೃತಿಯಲ್ಲಿಯ ಒಟ್ಟು ಬರವಣಿಗೆ ನಾನು ಉದ್ಯೋಗಾವಸ್ಥೆಗೆ ಕಾಲಿಡುವವರೆಗೆ ಮಾತ್ರ ಸಂಬಂಧಿಸಿದ್ದು. ಎಂದರೆ ಇದು ಮೊದಲ ಕಂತಿನ ಕೃತಿ. ನಾನು ಅಧ್ಯಾಪಕ ಹುದ್ದೆಗೆ ಸೇರಿದ ನಂತರ ದಲಿತನಾಗಿ ಅನುಭವಿಸಿದ ಅನುಭವಗಳು, ಒಗರಾದ, ಹಣ್ಣಾದ, ಹುಣ್ಣಾದ ಹಾಗೂ ಅಷ್ಟೇ ಆಕ್ರಮಣಕಾರಿ ಸ್ವರೂಪದವೂ ಇವೆ. ಒಂದು ಸಂದರ್ಭವಂತೂ ನನ್ನನ್ನು ಆತ್ಮಹತ್ಯೆಯ ಅಂಚಿನವರೆಗೂ ಕರೆದುಕೊಂಡು ಹೋಗಿತ್ತು. ಇಂಥ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಒಂದು ದೀರ್ಘವಾದ ಪತ್ರವನ್ನೂ ಬರೆದೆ. ಅದನ್ನು ಈ ಕೃತಿಯಲ್ಲಿ ಪ್ರಕಟಿಸುವ ವಿಚಾರ ಮಾಡಿ ಮತ್ತೆ ಹಿಂದೆ ಸರಿದಿದ್ದೇನೆ. ಏಕೆಂದರೆ, ಈ ಬರವಣಿಗೆಯನ್ನು ಪ್ರಕಟಿಸಲು ವೈಯಕ್ತಿಕವಾಗಿ ನನಗೇನೂ ಆತಂಕಗಳಿಲ್ಲ. ಆದರೆ ನನ್ನ ಈರೀತಿಯ ಬಿಚ್ಚು ಬರವಣಿಗೆ ಮತ್ತೊಬ್ಬರ ಬದುಕಿಗೆ ಕೊಡಲಿಯ ಪೆಟ್ಟಾಗಬಾರದೆನ್ನುವುದೇ ಆಗಿದೆ. ಕಹಿಯುಂಡು ಬೆಳೆದ ದೇಹಕ್ಕೆ ವಿಷಕುಡಿದರೂ ಅಮೃತವಾಗುತ್ತದೆ. ಅಂತೆಯೇ ಇಂಥ ಪ್ರಸಂಗಗಳು ನನಗೆ ಮತ್ತಷ್ಟು ಸಹನಾ ಶಕ್ತಿಯನ್ನು ತಂದು ಕೊಟ್ಟಿವೆ. ಮನೆಯಂಗಳದ ನೀರಿನಲ್ಲಿ ಕಲ್ಲೆಸೆದು ಪರಿಣಾಮ ನೋಡುವುದಕ್ಕಿಂತ, ನನ್ನ ಮನದಂಗಳದ ನೀರಿನಲ್ಲಿಯೇ ಕಲ್ಲೆಸೆದು ಪರೀಕ್ಷಿಸುವಾಸೆ.

"ಬದುಕು ತೆರೆದ ಪುಸ್ತಕದಂತಿರಬೇಕು" ಎಂದು ನನ್ನ ಆತ್ಮೀಯರಲ್ಲಿ ಹೇಳಿ
ಚರ್ಚಿಸಿದ್ದೆ. ಆದರೆ ಅದು ಸಾಧ್ಯವಿಲ್ಲ? ಎಂದು ವಾದಸಿದವರೇ ಹೆಚ್ಚು. ಅದು ಹೇಗೆ
ಸಾಧ್ಯವಿಲ್ಲ? ಹಾಗಿದ್ದರೆ "ಪ್ರಾಮಾಣಿಕತೆ"ಗೆ ಅರ್ಥವೇನು? ಇಂತ ಹಲವಾರು ಪ್ರಶ್ನೆಗಳು
ಕಾಡಿದರೂ ಇದನ್ನು ಸುಳ್ಳಾಗಿಸಬೇಕು ಎಂಬ ಛಲ ನನ್ನಲ್ಲಿ ಬೇರೂರಿ, ನನ್ನ ಬದುಕಿನ
ಚಿತ್ರವನ್ನೇ ಬೆತ್ತಲಾಗಿಸಿ ನನ್ನವರೆದುರು ಹರಡಿದ್ದೇನೆ. ಆದರೆ ಮೇಲಿನ ಪ್ರಸಂಗ "ಬದುಕು
ತೆರೆದಿಟ್ಟ ಪುಸ್ತಕವಲ್ಲ" ಎನ್ನುವ ಮಾತಿಗೆ ರುಜು ಹಾಕುವಂತೆ ಒತ್ತಾಯಿಸುತ್ತಿದೆ.ನಾನು
ಆತ್ಮೀಯವಅಗಿ ಬಿಚ್ಚಿಟ್ಟ ಪ್ರಸಂಗಗಳನ್ನು ಅಸ್ತ್ರವಾಗಿಸಿಕೊಂಡು "ಬ್ಲಾಕ್ ಮೇಲ್"
ಮಾಡುತ್ತಿರುವ ಸ್ನೇಹಿತರೂ ನನ್ನುಡಿಯಲ್ಲಿಯೇ ಇದ್ದಾರೆ. ಇಂತಹವರನ್ನು ಕಂಡಾಗ
'ಅಯ್ಯೇ' ಎನಿಸುತ್ತದೆ. ಉಗುಳಲೂ ಬಾರದ ನುಂಗಲೂ ಬಾರದ ಪ್ರಸಂಗಗಳು
ಇರುವುದರಿಂದಲೇ, ಕೂದಲು ನೆರೆತಾಗ ಸಾವು ಸನಿಹಕ್ಕೆ ಬಂದಾಗ ಆತ್ಮಕಥೆಯಂತಹ
ನರವಣಿಗೆಗೆ ಮುಂದಾಗುತ್ತಾರೆನಿಸುತ್ತದೆ.ಹೆಮ್ಮೆ ತರುವ ಪ್ರಸಂಗಗಳನ್ನು ಹೇಳಿಕೊಳ್ಲುವಂತೆ
ಹೇಸಿಕೆ ತರಿಸುವ ಪ್ರಸಂಗಗಳಿದ್ದರೂ ಬಿಚ್ಚಿ ಬರೆಯಬೇಕೆನ್ನುವವ ನಾನು.