ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಶ್ರೀ ರಾಮಕೃಷ್ಣ ಪರಮಹಂಸರ

ಜ್ಞಾನದಾಯಕವಾದ ಗುರುಭಾವವು ಎಂದಿಗೂ ಮಾನುಷಿಕವಲ್ಲ. ಅದು ದೈವಿಕ. ಆದ್ದರಿಂದ ಗುರುವು ಒಬ್ಬನೇ. ಆದರೆ ಆ ಗುರು ಭಾವವು ಮಾತ್ರ ಬೇರೆ ಬೇರೆ ದೇಹಗಳ ಮೂಲಕವಾಗಿ ಪ್ರಕಾಶಿತವಾಗಬಹುದು. ಆ ಗುರುಭಾವವು ಯಾವ ದೇಹದ ಮೂಲಕ ವ್ಯಕ್ತವಾಗುವುದೋ ಅದನ್ನು ಗುರುವೆಂದು ಕರೆಯುವುದು ವಾಡಿಕೆ. ಶರೀರವನ್ನು ಅವಲಂಬಿಸಿಕೊಂಡ ಗುರುಪೂಜೆಯನ್ನು ಮಾಡಬೇಕು. ಅದೇ ನಮಗೆ ಶ್ರೇಯಸ್ಕರ.

ರಾಮಕೃಷ್ಣ ಪರಮಹಂಸರು ಗುರುಗಳು ಬೋಧಿಸಿದುದರಲ್ಲಿ ಹೊಸವಿಷಯವೇನು? ಯಾರೂ ಹೇಳಿಲ್ಲದ ವಿಷಯವನ್ನು ಅವರೇನು ಹೇಳಿದರು ? ಎಂದು ಕೇಳಬಹುದು. ಧರ್ಮವಿಚಾರದಲ್ಲಿ ಹೊಸದಾಗಿ ಹೇಳುವುದೇನಿದೆ ? ಎಲ್ಲವೂ ಹಿಂದೆ ರಾಷ್ಟ್ರದಲ್ಲಿ ಉಕ್ತವಾಗಿರುವುದೇ : ಎಲ್ಲವೂ ಹಿಂದೆ ಅವತಾರ ಪುರುಷರು ಬೋಧಿಸಿರುವುದೇ ; “ನರಿಗಳು ಕೂಗುವುದೆಲ್ಲ ಒಂದೇ ವಿಧ” ವೆಂದು ಪರಮಹಂಸರು ಹೇಳುತ್ತಿದ್ದರು. ಮಹಾಪುರುಷರಾದವರು ಎಂದಿಗೂ ರಾಷ್ಟ್ರಕ್ಕೆ ವಿರುದ್ಧವಾದ ಅಥವಾ ಹೊರಗಾದ ವಿಷಯಗಳನ್ನು ಬೋಧಿಸುವದಿಲ್ಲ. ಶಾಸ್ತ್ರಸಂಪ್ರದಾಯವನ್ನು ರಕ್ಷಿಸುವುದು ಅವರ ಮುಖ್ಯ ಕರ್ತವ್ಯ. ಅದೇ ಅವರ ಲಕ್ಷಣ. [೧] ಮಹಾತ್ಮರು, ಅವತಾರಮಾಡುವುದು ಶಾಸ್ತ್ರದಲ್ಲಿಲ್ಲದ ಹೊಸ ವಿಷಯವನ್ನು ಹೇಳುವುದಕ್ಕಲ್ಲ. ಕಾಲಗುಣದಿಂದ ಧರ್ಮದ ಮೇಲೆ ಬಿದ್ದಿರುವ ದೂಳನ್ನು ತೊಡೆದು, ದೇಶಕಾಲ ಮುಂತಾದುವುಗಳಿ೦ದ ಬದಲಾಯಿಸಿರುವ ನಮ್ಮ ಮನೋಭಾವಗಳಿಗೆ ತಕ್ಕಂತೆ ಆ ಹಳೆಯ ವಿಷಯವನ್ನೇ ವಿವರಿಸಿ ಅದೇ ಸತ್ಯವೆಂದು ಸ್ಥಾಪಿಸುವುದಕ್ಕೆ; ಆ ಕಾಲದಲ್ಲಿ ಉಂಟಾದ ಧರ್ಮಗ್ಲಾನಿಯ ಮೂಲಕಾರಣವನ್ನು ಕಿತ್ತುಹಾಕಿ ಎಲ್ಲರಿಗೂ ದಾರಿಯನ್ನು ತೋರಿಸಿ ಮೇಲ್ಪಂಕ್ತಿಯಾಗಿರುವಂತೆ ತಾವು ಜೀವಿಸಿಕೊಂಡಿದ್ದು ತತ್ಕಾಲಕ್ಕೆ ಅನುಕೂಲವಾದ ರೀತಿಯಲ್ಲಿ ಬೋಧಿಸಿ ಹೋಗುವುದಕ್ಕೆ.


  1. Cf. I have come to fulfil and not to destroy.-Christ.