ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೧೦೫


ಪಾಶ್ಚಿಮಾತ್ಯರೂ, ಅವರ ರೀತಿ ನೀತಿಗಳನ್ನು ಮೆಚ್ಚತಕ್ಕ ನಮ್ಮ ದೇಶಿಯರೂ “ ನಮ್ಮದೇಶದ ಸ್ವಾಮಿಗಳೂ, ಸನ್ಯಾಸಿಗಳೂ, ಮಠಾಧಿಪತಿಗಳೂ, ಎಲ್ಲರೂ ಶುದ್ಧ Selfish (ಸ್ವಾರ್ಥಪರರು) : ತಮ್ಮ ಗತಿಯನ್ನು ತಾವು ನೋಡಿಕೊಂಡರೆ ಸರಿ; ಅವರು ನಿಜವಾಗಿಯೂ ಅಂಥ ಮೋಕ್ಷಸಾಧಕವಾದ ವಿಷಯಗಳನ್ನು ತಿಳಿದುಕೊಂಡಿದ್ದರೆ ಊರೂರಿಗೂ ಹೋಗಿ ಲೆಕ್ಟರುಗಳನ್ನು ಕೊಡಲಿ. ” ಎಂದು ಹೇಳಿರುವುದನ್ನು ಕೇಳಿರಬಹುದು. ಉಪನ್ಯಾಸಗಳನ್ನು ಕೊಡುವುದರಿಂದಲೇ ಪ್ರಪಂಚ ಉದ್ಧಾರವಾಗುವಂತೆ ಈಗಿನ ಕಾಲದಲ್ಲಿ ಜನರು ತಿಳಿದುಕೊಂಡಿರುವ ಹಾಗಿದೆ. ನಿಜವಾದ ಗುರುವು ಉಪನ್ಯಾಸಗಳನ್ನೇ ಕೊಡಬೇಕೆ ? ಅವನ ದರ್ಶನ ಮಾತ್ರದಿಂದ ಜನರು ಕೃತಾರ್ಥರಾಗರೆ? ಗುರುವಿನ ಮನಸ್ಸಿನಲ್ಲಿ ಭಕ್ತನಿಗೆ ಜ್ಞಾನೋದಯವಾಗಲಿ ಎಂಬ ಕೋರಿಕೆ ಅಂಕುರಿಸಿದರೆ ಸಾಲದೆ ? ಅವರು ಊರಿಂದೂರಿಗೆ ಅಲೆಯುತ್ತಾ ಹೋಗಬೇಕೆ? ಅವರಲ್ಲಿ ಮಹಿಮೆ ಇದ್ದರೆ ಶಿಷ್ಯರೇ ಹುಡುಕಿಕೊಂಡು ಬರುವುದಿಲ್ಲವೇ? ಪರಮಹಂಸರು “ ಹೂ ಅರಳಿ ಮಕರಂದದಿಂದ ತುಂಬಿದರೆ ದುಂಬಿಗಳು ತಾವಾಗಿಯೇ ಹುಡುಕಿಕೊಂಡು ಬರುವುವು. ಅವುಗಳಿಗೆ ಯಾರೂ ಮಂತ್ರಾಕ್ಷತೆ ಕೊಟ್ಟು ಕರೆಸಬೇಕಾಗಿಲ್ಲ.” ಎಂದು ಹೇಳುತ್ತಿದರು. ಹಾಗಲ್ಲದೆ ನಿಸ್ಸಾರವಾದ, ಒಣಗಿಹೋದ ನಿರ್ಗಂಧ ಕುಸುಮವು ದುಂಬಿಗಳ ಮೇಲೆ ಹೋಗಿಬಿದ್ದರೆ ತಾನೇ ಆ ದುಂಬಿಗಳಿಗೆ ಆನಂದವುಂಟಾಗುವುದೇ? ಮಧುವಿನಿಂದ ತುಂಬಿ ತುಳುಕುತ್ತಿರುವ ಹೂವಿನಿಂದ ಅದನ್ನು ಆಸ್ವಾದನೆ ಮಾಡಲು ಶಕ್ತಿಯಿಲ್ಲದ ಹುಳು ಹುಬಟೆಗಳಿಗೆ ತಾನೇ ಪ್ರಯೋಜನವಾಗುವುದೋ ? ಆದ್ದರಿಂದ ಒಂದುಕಡೆ ಗುರುವು ಜ್ಞಾನವನ್ನು ಪಡೆದು ಅದನ್ನು ಶೇಖರಿಸಿ ಇತರರಲ್ಲಿ ಧರ್ಮಶಕ್ತಿಯನ್ನು ಎಬ್ಬಿಸಲು ಸಮರ್ಥನಾಗಿರಬೇಕು. ಮತ್ತೊಂದು ಕಡೆ ಶಿಷ್ಯನು ನಿಜವಾದ ಶ್ರದ್ದೆ, ವೈರಾಗ್ಯ, ಪವಿತ್ರತೆ, ಮೋಕ್ಷ ಪಡೆಯುವುದಕ್ಕೆ ಆಶೆ, ಇವೆಲ್ಲವನ್ನೂ