ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ಅಭಯ

"ಸಾಕಣ್ಣ!ಸುಮ್ಸುಮ್ನೆ ಏನಾದರೂ ಅನ್ಬೇಡಿ!"

--ಎಂದು ತುಂಗಮ್ಮ ನುಡಿದಳು.ಸ್ವರ ಕರ್ಕಶವಾಗಿತ್ತು.

ಅಂತಹಸ್ಥಿತಿಯಲ್ಲೂ ವಿವೇಕ ಆಕೆಯ ಬಾಯಿಂದ ಒಂದು ಮಾತು ಹೊರಡಿಸಿತು:

"ನೀವೇ ಮೈಸೂರಿಗೆ ಕಾಗದ ಬರೀಬಾರ್ದೆ ಅಣ್ಣ?"

....ತುಂಗಮ್ಮನ ತಂದೆ ಮೈಸೂರಿಗೆ ಕಾಗದ ಬರೆದು,ಕನ್ಯಾ ಸೆರೆ ಬಿಡಿಸಿಕೊಳ್ಳ ಬೇಕೆಂದು ಪ್ರಾರ್ಥಿಸಿದರು.ನಾರಾಯಣ ಮೂರ್ತಿ ಈಗಾಗಲೇ ಸಮಾಚಾರವನ್ನೆಲ್ಲ ತಿಳಿಸಿರಬಹುದೆಂದು ಬರೆದರು.

ನಾರಾಯಣಮೂರ್ತಿ ಏನನ್ನೂ ತಿಳಿಸಿರಲಿಲಲ್ಲ.ಅವನ ಮನೆಯವರು ತುಂಗಮ್ಮನ ತಂದೆಯನ್ನು ಅವಮಾನಿಸಿ ಉತ್ತರ ಕೊಟ್ಟರು."ಅಯೋಗ್ಯ ಸಹವಾಸ!ಎಲ್ಲಿಯೋ ಒಮ್ಮೆ ಯಾರದೋ ನಿಮಿತ್ತದಿಂದ ಪರಿಚಯವಾದರೆ ಇಷ್ಟರವರೆಗೂ ಬಲೆ ಬೀಸಬೇಕೇನು?ನಮಗೂ ನಿಮಗೂ ಸಂಬಂಧ ಯಾವ ಕಾಲದಲ್ಲೂ ಸಾಧ್ಯವಿಲ್ಲ.ಮಗಳ ಮದುವೆಗೆ ಐದು-ಹತ್ತು ಸಾವಿರ ರೂಪಾಯಿ ಖರ್ಚುಮಾಡುವುದು ನಿಮ್ಮ ಹಣೆಯಲ್ಲಿ ಬರೆದೂ ಇಲ್ಲ. ಇಷ್ಟರ ಮೇಲೂ ನಮ್ಮ ಹುಡುಗನ ಮೇಲೇನಾದರೂ ಮಂಕುಬೂದಿ ಎರಚೋಕೆ ಪ್ರಯತ್ನಿಸಿದ್ದೇ ಆದರೆ, ನಾವು ಸಮ್ಮನಿರೋದಿಲ್ಲ.ಸೂಕ್ತ ಕ್ರಮ ಕೈಗೊಳ್ಳ ಬೇಕಾದೀತು!"

ಸರಿಯಾಗಿ ಪಾಟ ಹೇಳಿಕೊಡುವ ಸಾಮರ್ಥ್ಯ ನಿಮಗಿಲ್ಲವೆಂದು ಹಿಂದೆ ವಿದ್ಯಾಧಿಕಾರಿಗಳಿಂದೊಮ್ಮೆ ಎಚ್ಚರಿಕೆ ಬಂದಿದ್ದಾಗ ತುಂಗಮ್ಮನ ತಂದೆ, ಆ ಅವಮನವನ್ನು ಸಹಿಸಲಾರದೆ ತಮ್ಮ ವೃತ್ತಿಗೆ ರಾಜಿನಾಮೆ ಕೊಡುವ ಯೋಚನೆ ಮಾಡಿದ್ದರು.ಅದು,ತುಂಗಮ್ಮನನ್ನು ಅವರಾಕೆ ಗರ್ಭದಲ್ಲಿ ಹೊತ್ತಿದ್ದ ಸಮಯ.ತಾವು ದುಡುಕಿ ಸಂಸಾರ ಬೀದಿ ಪಾಲಾಗಬಾರದೆಂದು, ಸಿಟ್ಟನೆಲ್ಲ ನುಂಗಿ,ಅವರು ತೆಪ್ಪಗಾಗಿದ್ದರು.

ಈಗ,ಅದನ್ನು ಮೀರಿಸುವಂತಹ ಅವಮಾನ!

ಆ ಕಾಗದವನ್ನೋದಿದರೆ ಮುಗ್ಧೆಯಾದ ಮಗಳ ಮನಸ್ಸಿಗೆ ನೋವಾ ಗುವುದೆಂದು,ಅದನ್ನು ಮಗಳಿಂದ ಬಚ್ಚಿಡಲು ಅವರು ಯತ್ನಿಸಿದರು.ಆದರೆ ಆ ಯತ್ನ ಸಫಲವಾಗಲಿಲ್ಲ.