ಈ ಪುಟವನ್ನು ಪ್ರಕಟಿಸಲಾಗಿದೆ

"ನಿದ್ದೆ ಚೆನ್ನಾಗ ಬಂತಾ ತುಂಗಾ?"

"ಹೂಂ ದೊಡ್ಡಮ್ಮ.."

"ಹಸಿವಾಗುತ್ತಾ?"

ಆ ಪ್ರಶ್ನೆ ಕೇಳಿದಮೇಲೆ ಹೊಟ್ಟೆ ತಾಳ ಹಾಕತೊಡಗಿತೋ ಏನೋ! ಹೌದೆಂದು ಆಕೆ ತಲೆಯ ಚಲನೆಯಿಂದಲೆ ಸೂಚನೆ ಕೊಟ್ಟಳು

"ಮೊದಲು ಒಂದಿಷ್ಟು ಬಿಸೀ ಹಾಲು ಸಕ್ರೆಹಾಕಿ ತಂದ್ಕೊಡ್ತೀನಮ್ಮಾ

....ಅದಾದ್ಮೇಲೆ ಒಂದಿಷ್ಟು ಬಿಸಿ ಉಪ್ಪಿಟ್ಟು...."

ಆಗಬಹುದೆಂದು ತುಂಗಮ್ಮ ನಕ್ಕಳು.

ಉಳಿದವರ ಪಾಲಿಗೆ ಹಿಂದಿನಂತೆಯೆ ಒಂದಾಯಿತು ಆದಿನ.

ಆದರೆ ಮಧ್ಯಾಹ್ನ,ತುಂಗಮ್ಮನಿಗೆ ವಾಂತಿಯಾಯಿತು-ಕುಡಿದಿದ್ದ ಹಾಲು,ತಿಂದಿದ್ದ ಉಪ್ಪಿಟ್ಟು,ಎಲ್ಲವೂ.

ಆ ಬಳಿಕ ನೋವು ನರಳಾಟದ ಪುನರಾವೃತಿ."ಇವತ್ತು ಖಂಡಿತ" ಎಂದು ತೋರಿಸು ಸರಸಮ್ಮನಿಗೆ.

ಬಡಸಂಸಾರಗಳ ಡಾಕ್ಟರೊಬ್ಬರನ್ನು ಕರೆದು ತಂದುದಾಯಿತು.ಅವರ ವಿಸಿಟಿಂಗ್ ಫೀಸು ಸಾಮಾನ್ಯವಾಗಿ ಒಂದು ರೂಪಾಯಿ.ಆದರೆ ಅಭಯಧಾಮಾದಿಂದ ಅವರೆಂದೂ ಫೀಸು ತೆಗೆದುಕೊಳ್ಳುತ್ತಿರಲಿಲ್ಲ.

ತುಂಗಮ್ಮನ ನಾಡಿ ಮುಟ್ಟಿನೋಡಿ,ಶರೀರದ ಚಲನವಲನಗಳನ್ನು ನಿರೀಕ್ಷಿಸಿ,ಅವರೆಂದರು:

"ನಿಶ್ಚಿಂತೆಯಾಗಿರಿ,ವಿಶೇಷವೇನೂ ಇಲ್ಲ.ಬೇಕಿದ್ರೆ ಸಾಯಂಕಾಲ ಒಮ್ಮೆ ಲೇಡಿ ಡಾಕ್ಟ್ರು ಯಾರನ್ನಾದರೂ ಕರೆಸಿ"

ಅಂತಹ ಮಾತಿನಿಂದ ಅದೇನು ಸಮಾಧಾನವೊ!

ತುಂಗಮ್ಮನ ಪ್ರಾಣಸಂಕಟ ಹೆಚ್ಚಿತು.

ಅಭಯಧಾಮದ ಆಡಳಿತ ಸಮಿತಿಯ ಶ್ರೀಮಂತ ಸದಸ್ಯೆಯೊಬ್ಬರ ಸೋದರಿ ಪ್ರಖ್ಯಾತ ಲೇಡಿ ಡಾಕ್ಟರಾಗಿದ್ದರು.ಅವರನ್ನು ಕರೆಸುವುದು ಅವಶ್ಯವೆಂದು ಸರಸಮ್ಮನಿಗೆ ತೋರಿತು.ಹತ್ತಿರದ ಪೋಲೀಸು ಸ್ಟೇಷನಿಗೆ ಹೋಗಿ ಆಕೆ ಆ ಡಾಕ್ಟರಿಗೆ ಫೋನು ಮಾಡಿದರು.ಆಕೆ ಮನೆಯಲ್ಲೂ ಇರಲಿಲ್ಲ!ಔಷಧಾಲಯದಲ್ಲೂ ಇರಲಿಲ್ಲ..ರಾತ್ರೆ ಮತ್ತೆರಡು ಸಾರೆ ಫೋನ್ ಮಾಡಿ