ಎದುರು ಮನೆ ರುಕ್ಮಿಣಿಯಮ್ಮ ಕಿಟಕಿಯ ಸರಳುಗಳೆಡೆಯಿಂದಲೆ ಕೇಳಿದರು:
"ಯಾರೆ ಬಂದಿದ್ದು?"
"ಮೈಸೂರ್ನೋರು. ನಮ್ಮ ಭಾವನ ಕಡೆಯೋರು."
"ಭಾವನ ಕಡೆಯೋರು ಓ....!"
ತುಂಗಮ್ಮನಿಗೆ ಲಜ್ಜೆಯಾಯಿತು
"ಒಳ್ಳೇ ಹುಡುಗ ಪಾಪ ಹಾಗೇ ಹೊರಟೋದ್ನಲ್ಲೇ."
ಒಳ್ಳೆಯ ಹುಡುಗನಲ್ಲದೆ ಮತ್ತೆ!
ರುಕ್ಮಿಣಿಯಮ್ಮನ ಪ್ರಶ್ನೆಗೆ ಉತ್ತರವೆಂಬಂತೆ ತುಂಗಮ್ಮ ಹೇಳಿದಳು:"
ಆ ಮೇಲೆ ಬರ್ತೀನಿ ಅಂದ್ರು"
ರುಕ್ಮಿಣಿಯಮ್ಮ ನಕ್ಕಳು
ಆದರೆ, ಆ ಮೇಲೆ ಬರುವೆನೆಂಬ ಮಾತು, ತನಗೆ ತಾನೇ ಹೇಳಿಕೊಂಡ
ಸಮಾಧಾನದ ನುಡಿಯಾಗಿತ್ತಲ್ಲವೆ?
ತುಂಗಮ್ಮ ಬಾಗಿಲು ಮುಚ್ಚಿದಳು. "ಕಣ್ಣೀರು" ಕಾದಂಬರಿಯನ್ನು
ಮತ್ತೆ ಆಕೆ ಎತ್ತಿಕೊಳ್ಳಲಿಲ್ಲ ಮನಸ್ಸು ಹಗುರವಾಗಿತ್ತು. ಕನ್ನಡಿಯಲ್ಲೊಮ್ಮೆ ಮುಖನೋಡಿಕೊಂಡಳು ತುರುಬಿನ ಮೇಲೆ ಕೈಯಾಡಿಸಿದಳು. ಎದೆಯ ಮೇಲಿನಿಂದ ಹಾದು ಬೆನ್ನಿನುದ್ದಕ್ಕೂ ಹಾರಾಡುತಿದ್ದ ಸೀರೆಯ ಸೆರಗನ್ನು ಸರಿಪಡಿಸಿದಳು.
ಅಕ್ಕನ ಮದುವೆಯ ಆ ದಿನ.. ಮನೆಯೊಳಗೆ ತಾನೊಬ್ಬಳೇ
ಇದ್ದಾಗ...ಆಗ ತನಗೆ ಹೆಸರು ಕೂಡಾ ತಿಳಿಯದೇ ಇದ್ದ ಆತ ಬಂದು....ಥೂ....
ತನ್ನನ್ನು ನೋಡುತ್ತ, ಮನಸ್ಸಿನಲ್ಲಿರುವುದನ್ನೆಲ್ಲ ಯಾರಾದರೂ ತಿಳಿದು
ಕೊಳ್ಳುವರೇನೋ ಎಂದು ತುಂಗಮ್ಮ ಹೆದರಿದಳು....
ಹೃದಯ ಮಾತ್ರ ಗುಣುಗುಣಿಸಿ ನಾದ ಚಿಮ್ಮಿಸಿತು ತುಂಗಮ್ಮ
ಇಂಪಾದ ಇಳಿಸ್ವರದಲ್ಲಿ ಹಾಡಿದಳು:
"ತಾರಕ್ಕ ಬಿಂದೀಗೆ ನೀರಿಗೆ ಹೋಗುವಾಗ...."
....ಕತ್ತಲಾದಂತೆ ಸ್ವಪ್ನಲೋಕದಿಂದ ತುಂಗಮ್ಮ ಇಳಿದು ಬಂದಳು.