೫.ದೇವತೆಗಳ ಗುಟ್ಟು ಸಂಪಾದಿಸಿ

“ಧರ್ಮಾಚಾರ್ಯನನ್ನು ವರಿಸಿದುದು ತುಂಟ ಹಸುವನ್ನು ತಂದು ಕಟ್ಟಿ ಕೊಂಡಂತಾಯಿತಲ್ಲಾ !” ಎಂದು ದೇವರಾಜನು ಚಿಂತೆಮಾಡುತ್ತಿದ್ದನು. ವಿಶ್ವ ರೂಪಾಚಾರ್ಯನು ಸಮರಾತ್ರಿಯಲ್ಲಿ ತನ್ನ ಮಾತಾಮಹರಿಗೆ ಹವಿರ್ಭಾಗಗಳನ್ನು ಕೊಡುವುದೂ, ಅದರಿಂದ ಅವರ ತೇಜಸ್ಸು ವಿವರ್ಧಿತವಾಗುತ್ತಿರುವುದೂ ದೇವೇಂದ್ರನಿಗೆ ಗೊತ್ತು. ಏನು ಮಾಡಬೇಕು ? ತಮ್ಮ ಕುಲಶತ್ರುಗಳಾದ ದಾನವರ ವೃದ್ಧಿಯನ್ನು ಕಾರ್ಯತಃ ಸಂಪಾದಿಸುತ್ತಿರುವವನು ಇಂದು ದೇವತೆಗಳ ಧರ್ಮಾಚಾರ್ಯ. ಆದರೆ, ಆತನಿಂದ ಆಗಿರುವ ಉಪಕಾರವನ್ನು ಕಡೆಗಣಿಸುವಂತಿಲ್ಲ. ದೇವತೆಗಳು ಅಸ್ತತೇಜರಾಗಿ ದಾನವರ ಕೈಗೆ ಸಿಕ್ಕಿಹೋಗುವಂತಹ ದುಷ್ಕಾಲದಲ್ಲಿ ನಾರಾಯಣ ಕವಚವನ್ನು ಉಪದೇಶಮಾಡಿ ಆಪತ್ತನ್ನು ತಪ್ಪಿಸಿದ್ದಾನೆ. ಇಂಥವನನ್ನು ತಿರಸ್ಕರಿಸುವುದೆಂತು.

ಮಹೇಂದ್ರನು ಬಹುವಾಗಿ ಯೋಚಿಸಿದನು. ಬ್ರಹ್ಮದೇವನ ವಾಕ್ಯವು ನೆನಪಾಯಿತು. “ಹೌದು. ಇವನನ್ನು ತಿರಸ್ಕರಿಸಿದರೆ ಕೇಡು ಏನೋ ಇದ್ದೇ ಇದೆ. ಅದರಿಂದ ಇವನನ್ನು ತಿರಸ್ಕರಿಸಬಾರದು. ಏನಾದರೂ ಮಾಡಿ, ಈತನಿಗೆ ಇರುವ ಅಸುರವ್ಯಾಮೋಹವನ್ನು ತಪ್ಪಿಸಿದರೆ, ಈತನು ದೇವಕುಲದ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ. ದೇವತೆಯಾಗಿ ಹುಟ್ಟಿದವನಿಗಿಂತ ಕರ್ಮಜ ದೇವತೆಯು ಪ್ರಬಲವೆನ್ನುವಂತೆ ಬಿಟ್ಟರೆ, ಶುಕ್ರಶಿಷ್ಯರು ಬಿಡದೆ ಈತನನ್ನು ಕರೆದುಕೊಂಡು ಹೋಗಿ ತಮ್ಮಲ್ಲಿ ಇಟ್ಟುಕೊಳ್ಳುವರು. ಆದರೆ ಶುಕ್ರಾಚಾರ್ಯನು ಪರಮಗರ್ವಗಂಧಿ. ಈತನನ್ನು ದೈತ್ಯರು ಕರೆದುಕೊಂಡು ಹೋಗುತ್ತಲೂ ಆತನು ಅವರನ್ನು ಕೈಬಿಡುವನು. ಅದರಿಂದ ಅವರು ಈತನನ್ನು ಕರೆದುಕೊಂಡು ಹೋಗಲಾರರು. ಅಥವಾ ಆ ರಾಕ್ಷಸರು ಏನಾದರೂ ಮಾಡಿ ಇಬ್ಬರನ್ನೂ ದಕ್ಕಿಸಿಕೊಂಡರೆ ನಾವು ಕೆಟ್ಟೆವು. ಹಾಗಾಗದಂತೆ ನೊಡಿಕೊಳ್ಳಬೇಕು. ಅಂದು ಬೃಹಸ್ಪತ್ಯಾಚಾರ್ಯನು ಹೊರಟು ಹೋಗದಿದ್ದರೆ ಈ ಅನರ್ಥಗಳೆಂದೂ ಬರುತ್ತಿರಲಿಲ್ಲ. ಈಗ ಈತನ ಯೋಗ್ಯತೆ ಪ್ರಕಟವಾಯಿತು. ಇನ್ನು ಅದನ್ನು ಮುಚ್ಚಿಡುವಂತಿಲ್ಲ ಏನು ಮಾಡಬೇಕು?”

ಇಂದ್ರನಿಗೆ ಇದರ ಜೊತೆಯಲ್ಲಿಯೇ ಮತ್ತೊಂದು ಯೋಚನೆ ಬಂತು ; “ತನಗೆ ತಿಳಿಯದೇ ತನಗೆ ಬೃಹಸ್ಪತ್ಯಾಚಾರ್ಯನ ಮೇಲೆ ಏನಾದರೂ ಕೋಪ ಬಂದಿರಬಹುದೇ ? ಅದರಿಂದ ಆತನು ಮೈಗರೆದಿರುವನೋ ?” ಯೋಚನೆಯು ಸಂದೇಹವಾಗಿ, ಸಂದೇಹವು ಬಲವಾಗಿ ಸಿದ್ಧಾಂತವಾಗುವುದಕ್ಕೆ ಅಷ್ಟು ಹೊತ್ತು ಹಿಡಿಯಲಿಲ್ಲ. “ಇರಬೇಕು. ಅಜ್ಞಾತ ಕೋಪವೊಂದು ಮನಸ್ಸನ್ನು ಬಲವಾಗಿ ಒಳಗಿನಿಂದಲೇ ಹಿಡಿದಿರಬೇಕು. ಹೊರಗಿನ ಮನಸ್ಸು ಅದರ ಪ್ರತಿಕೃತಿಯನ್ನು ಭಾವಿಸುತ್ತಾ ‘ನಾನು ನಿರ್ದೋಷಿ ! ದೋಷವೆಲ್ಲ ದೇವಗುರುವಿನದು’ ಎಂದು ಆರೋಪಿಸುತ್ತಿರಬೇಕು. ಹಾಗಾದರೆ ಏನು ಮಾಡಬೇಕು ?”

ಆ ವೇಳೆಗೆ ಶಚೀದೇವಿಯು ಬಂದಳು. ದೇವೇಶ್ವರನು ತನ್ನ ಹೃದಯದೊಳಗಿದ್ದ ಚಿಂತೆಯನ್ನು ಆಕೆಗೆ ಹೇಳಿದನು. ಆಕೆಯು “ಹೌದು ದೇವ, ನಾನೂ ಈಗ ಅದೇ ಸಿದ್ಧಾಂತಕ್ಕೆ ಬಂದಿದ್ದೇನೆ. ನಾವು ದೇವಗುರುಗಳನ್ನು ತಿರಸ್ಕರಿಸಿದ್ದೇವೆ. ಅದರಿಂದ ಆತನಿಗೆ ಕೋಪ ಬಂದು ಆತನು ಮರೆಯಾಗಿದ್ದಾನೆ. ಆತನು ಮರೆಯಾದನೆಂದು ನಮಗೆ ಕೋಪವು ಬಂದಿದೆ. ಅಲ್ಲದೆ, ನಾವು ಹುಡುಕಿದುದೂ ಸಾಲದು ಎಂದು ನನ್ನ ಭಾವನೆ.”

ದೇವೇಂದ್ರನು ಅಡ್ಡ ಬಂದು “ ಇಲ್ಲ ಭಾಮಿನಿ, ದೇವತೆಗಳು ಬೇಕೆಂದಾಗ ತಮ್ಮ ಪ್ರಭಾವವನ್ನು ಆಶ್ರಯಿಸಿ ಇತರರಿಗೆ ಕಾಣದಂತೆ ತಮ್ಮನ್ನು ತಾವು ಮರೆಯಿಸಿಕೊಳ್ಳಬಲ್ಲರು. ಜೊತೆಗೆ ಅವರು ವ್ರತ, ತಪಸ್ಸು ಎಂದು ಕುಳಿತುಬಿಟ್ಟರೆ ಆಗ ಯಾರೂ ಅವರನ್ನು ಕಾಣುವಂತಿಲ್ಲ.

ಒಂದು ವೇಳೆ ಅಂತಹ ಸಮಯದಲ್ಲಿಯೂ ಅವರನ್ನು ಕಾಣಲೇಬೇಕಾಗಿ ಬಂದರೆ?”

ಇಂದ್ರನು ನಕ್ಕನು. ‘ಅದೂ ಕಷ್ಟವಿಲ್ಲ. ಉಪಶ್ರುತಿ ಭಗವತಿಯನ್ನು ಪ್ರಸನ್ನ ಮಾಡಿಕೊಂಡರೆ, ಆಕೆಯು ಆ ದೇವತೆಯಿರುವ ಸ್ಥಳವನ್ನು ತೋರಿಸಿಕೊಡುವಳು. ಅಷ್ಟೇ ಅಲ್ಲ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಡುವಳು.”

“ಹಾಗಾದರೆ, ರಹಸ್ಯವನ್ನು ಬಲ್ಲವರಿಗೆ ದೇವತೆಗಳು ಅಗೋಚರರಾಗುವಂತಿಲ್ಲ ?”

“ಹಾಗೇನಿಲ್ಲ. ದೇವತೆಗಳು ಮಿಕ್ಕ ವಿಚಾರದಲ್ಲಿ ಏನು ಬೇಕಾದರೂ ಮಾಡಬಲ್ಲರಾದರೂ ಮಂತ್ರಾಧೀನರು.”

“ಹಾಗಾದರೆ ನಾವು ಸರ್ವತಂತ್ರಸ್ವತಂತ್ರರಲ್ಲವೇನು ? ಬೇಕಾದುದನ್ನು ಮಾಡಲಾರೆವೇನು ?”

“ಅದೂ ಇಲ್ಲ. ಈ ನಿಯತಿಗೆ ನಿಯತಿಯೇ ಕಾಲದ ವಶವಾಗಿರುವುದು. ಅದರಿಂದ ದೇವತೆಗಳು ಕಾಲನು ಪ್ರೇರಿಸಿದಂತೆಯೇ ಮಾಡುವರು. ಆದರೆ, ಕರ್ತೃತ್ವವು ತಮ್ಮದಲ್ಲವೆಂದು ತಿಳಿದಿರುವುದರಿಂದ ಅವರು ಫಲದ ವಿಚಾರದಲ್ಲಿ ಉದಾಸೀನರು.”

“ಆದರೂ ನೀನಿಷ್ಟು ಚಿಂತಿಸುತ್ತಿರುವೆಯಲ್ಲ?”

“ಚಿಂತೆಯೂ ಜೀವನದ ವ್ಯಾಪಾರಗಳಲ್ಲೊಂದು, ಶಚಿ. ಆದರೆ ಮನಸ್ಸು ಚಿಂತೆಯನ್ನು ಚಿಕ್ಕದು ಮಾಡಲಾರದೆ ಅದಕ್ಕೆ ಹೆದರಿ, ಅದನ್ನು ದೊಡ್ಡದು ಮಾಡಿಸುವುದು. ಆಗ ಅದು ಶತ್ರುವಾಗಿ, ಬಲಿಷ್ಠನಾದ ಶತ್ರುವಿನಂತೆ, ಧಾಳಿಮಾಡಿ ಹೆದರಿಸುವುದು. ಸುಖವನ್ನು ತದ್ವಿರುದ್ಧವಾಗಿ ನೋಡಿ ಸ್ನೇಹಿತನಂತೆ ಭಾವಿಸುತ್ತ ಅದರಲ್ಲಿ ಕರಗುವುದು. ಮನಸ್ಸಿನ ರಾಗದ್ವೇಷಗಳಿಂದಲೇ ಸುಖದುಃಖಗಳು. ಅದಿರಲಿ, ಈಗ ಬೃಹಸ್ಪತ್ಯಾಚಾರ್ಯರ ವಿಷಯವಾಗಿ ಹೇಳು. ನೀನು ಬಂದು ಪ್ರಸಂಗ ವಶದಿಂದ ನನಗೆ ಮರೆತುಹೋಗಿದ್ದ ಒಂದು ಅಂಶವನ್ನು ನೆನಪಿಗೆ ತಂದೆ. ಈಗ ನೀನು ಉಪಶ್ರುತಿ ದೇವಿಯನ್ನು ಅನುಸಂಧಾನಮಾಡಿ ಬೃಹಸ್ಪತಿಯಿರುವೆಡೆಯನ್ನು ಕಂಡುಹಿಡಿ. ಆತನು ಈಚೆಗೆ ಬರಲು ಒಪ್ಪದಿದ್ದರೆ ಉಪಬೃಂಹಣಮಾಡು. ಆಗ ಆತನು ಪ್ರತ್ಯಕ್ಷನಾಗಿಯೇ ಆಗುವನು. ಆಗ ಆತನನ್ನು ಒಪ್ಪಿಸಿ ಮತ್ತೆ ದೇವಾಚಾರ್ಯನಾಗುವಂತೆ ನೀನು ಪ್ರೇರೇಪಿಸು.

ಶಚಿಯು ಗಂಭೀರಭಾವದಿಂದ ಕೇಳಿದಳು : “ಆಗ ವಿಶ್ವರೂಪಾಚಾರ್ಯನು ಏನಾಗುವನು ?”

ಇಂದ್ರನೂ ಗಂಭೀರವಾಗಿಯೇ ಹೇಳಿದನು : “ವಿಶ್ವರೂಪಾಚಾರ್ಯನಿಗೆ ಬೃಹಸ್ಪತ್ಯಾಚಾರ್ಯನಿಗಿರುವಂತೆ ದೆವತೆಗಳ ಮೇಲೆ ಸಹಜವಾದ ಅಭಿಮಾನವಿಲ್ಲ. ಆ ಸಹಜವಾದ ಅಭಿಮಾನವು ಆತನಿಗೆ ಬರುವಂತೆಯೂ ಇಲ್ಲ. ಪಿತೃವಂಶದಿಂದ ದೇವತೆಯಾಗಿ ಮಾತೃವಂಶದಿಂದ ದಾನವನಾದವನಿಗೆ ಪಿತಾಮಹ-ಮಾತಾಮಹರಿಬ್ಬರಲ್ಲಿಯೂ ಅಭಿಮಾನವಿರುವುದು ಏನು ವಿಶೇಷ ? ಅದರಿಂದ ಬೃಹಸ್ಪತಿಯು ದೊರೆತರೆ ಈತನನ್ನು ಬಿಡಲೇಬೇಕು.”

“ನೀನಾಗಿ ಆಚಾರ್ಯನೆಂದು ವರಿಸಿರುವವನನ್ನು ಅದೆಂತು ಬಿಡುವೆ ?”

“ಇದೇ ರಹಸ್ಯ. ವರಿಸುವಾಗ ಆತನನ್ನು ಆಜೀವವಾಗಿ ವರಿಸಿಲ್ಲ ಅಥವಾ ಕಾಲವನ್ನು ಗೊತ್ತುಮಾಡಿಲ್ಲ ಅದರಿಂದ ನಾನು ಆತನನ್ನು ಬೇಕಾದಾಗ ಬಿಡಬಹುದು”

“ಇದರಿಂದ ಪಾಪವಿಲ್ಲವೇ ?”

“ನನ್ನ ಅನುಕೂಲಕ್ಕೆಂದು ಸ್ವಕಾಮನೆಯಿಂದ ಮಾಡಿದರೆ ಫಲಾಫಲಗಳು ನನ್ನವು. ಹಾಗಿಲ್ಲದೆ ಕುಲಾರ್ಥವಾಗಿ, ನಿಷ್ಕಾಮನಾಗಿ, ಮಾಡುವಾಗ ನನಗೆ ಫಲಾಫಲಗಳು ಇಲ್ಲ ಭಾಮಿನಿ.”

“ದೇವ, ನೀನು ಸಾವಿರ ಹೇಳು. ನೀನು ಅಹಂಕಾರಸ್ವರೂಪ ನಾಗಿದ್ದುಕೊಂಡು ಅನಹಂಭಾವದಿಂದ ಕಾರ್ಯವನ್ನು ಮಾಡುವೆನೆನ್ನುವುದು ಅಸಂಭಾವ್ಯ. ಅದರಿಂದ, ಈ ಕಾರ್ಯಮಾಡುವಾಗ ಯೋಚಿಸಿ ಮಾಡು. ಪಾಪವು ಬಂದರೂ ಅದರಿಂದ ಅನರ್ಥವಾಗದಂತೆ ಮೊದಲೇ ನೀನು ಉಪಾಯವನ್ನು ಕಲ್ಪಿಸಿಕೊಂಡು, ಅನಂತರ ಈತನನ್ನು ವಿಸರ್ಜಿಸು.”

“ಬೃಹಸ್ಪತ್ಯಾಚಾರ್ಯನು ಮತ್ತೆ ಬರುವವರೆಗೂ ವಿಸರ್ಜನೆಯ ಯೋಚನೆಯಿಲ್ಲ ಅದರಿಂದ, ಆ ಆಚಾರ್ಯನನ್ನು ಹಲ್ಲು ಕಿತ್ತು ಹಾವನ್ನು ಆಡಿಸುವಂತೆ, ಆತನ ದಾನವಾಭಿಮಾನವು ನಿಷ್ಫಲವಾಗುವಂತೆ ಮಾಡಿ ಇಟ್ಟುಕೊಳ್ಳಬೇಕು.”

“ಅದು ಸಾಧ್ಯವೇ ? ನೀನೇ ಹೇಳಿದೆಯಲ್ಲ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂದು ?”

“ಸ್ವಭಾವವನ್ನು ತಡೆಗಟ್ಟುವುದು ಸಾಧ್ಯ, ತಪ್ಪಿಸಲು ಆಗುವುದಿಲ್ಲ ಹಾಗಾಗದಿದ್ದರೆ, ಆ ದುಃಸ್ವಭಾವವನ್ನು ನಿರೋಧಿಸಲು ವ್ಯಕ್ತಿಯನ್ನೇ ಸಂಹರಿಸಬೇಕಾಗುವುದು. ಆದರೆ ಈ ವಿಷಯದಲ್ಲಿ ಮೂಲಿಕೆಯನ್ನು ಮಾಡುವಂತೆ, ಇರುವ ಒಂದು ಗುಣವನ್ನು ವೃದ್ಧಿಪಡಿಸಿಕೊಂಡು, ಇತರ ಅವಗುಣಗಳನ್ನು ನಿರೋಧಿಸುವ ಸಂಸ್ಕಾರವನ್ನು ಮಾಡಿ, ಈ ವಿಷಯವನ್ನು ಅಮೃತಮಾಡಿಕೊಳ್ಳಬೇಕಾಗಿರುವುದು. ಈಗ ಆತನು ಸುರಾಪಾನವನ್ನು ಮಾಡುತ್ತ ತನ್ನ ಅಸುರಸ್ವಭಾವವನ್ನು ಉತ್ತೇಜಿತಗೊಳಿಸುತ್ತಿರುವನು. ಅದನ್ನು ತಡೆಗಟ್ಟಿ ಆತನು ಸುರಾಪಾನದ ಬದಲು ಸೋಮಪಾನ ಮಾಡುವಂತೆ ಮಾಡಿದರೆ ನಮ್ಮ ಕಾರ್ಯವು ಸಾಧ್ಯವಾಗುವುದು. ಚಿಂತಿಸಬೇಡ. ಅದಷ್ಟು ಅಸಾಧ್ಯದಂತೆ ಕಾಣುವುದಿಲ್ಲ.”

“ಆತನು ಆಚಾರ್ಯ. ನೀನು ಶಿಷ್ಯ. ಶಿಷ್ಯನಾಗಿ ಆಚಾರ್ಯನನ್ನು ಅದೆಂತÀÄ ವಿಧಾಯಕ ಮಾಡುವೆ ?”

ಇಂದ್ರನು ನಕ್ಕು ಹೇಳಿದನು : ‘ಮಹಾಸತಿ, ಅಲ್ಲಿಯೇ ದೇವರಹಸ್ಯವಿರುವುದು, ಶಿಷ್ಯನೆಂದು ತಲೆಬಾಗಿದ ಮಾತ್ರಕ್ಕೆ ನನ್ನ ದೇವರಾಜತ್ವಕ್ಕೆ ಕುಂದಿಲ್ಲ ಆತನು ಆಶೀರ್ವಾದ ಮಾಡುವನು. ನಾನು ಅದನ್ನು ತಲೆಬಾಗಿ ಸ್ವೀಕರಿಸುವೆನು. ಆದರೆ, ಆತನು ಆಶೀರ್ವಾದವನ್ನು ನನಗೆ ಫಲಮಂತ್ರಾಕ್ಷತೆಗಳೊಡನೆ ಸಮರ್ಪಿಸಬೇಕು. ಅಲ್ಲವೆ ? ಅದರಂತೆ ಆತನೂ ನನ್ನಾಜ್ಞೆಯನ್ನು ಪಾಲಿಸಬೇಕು. ಅದು ರಾಜಾಜ್ಞೆ ವಿಕೋಪಕ್ಕೆ ಏರಿದರೆ ರಾಜಾಜ್ಞೆಯನ್ನು ತಿರಸ್ಕರಿಸಿದ ದುಷ್ಫಲವನ್ನೂ ಅನುಭವಿಸಬೇಕಾದೀತು. ಆದರಷ್ಟಕ್ಕೇ ಬಿಡುವುದಿಲ್ಲವೆನ್ನು, ಆತನನ್ನು ಸಾಧುವಾದದಿಂದಲೇ ಗೆದ್ದುಕೊಳ್ಳುವೆನು. ಅದಿರಲಿ, ನೀನು ಬೃಹಸ್ಪತ್ಯಾಚಾರ್ಯವನ್ನು ಗೊತ್ತು ಮಾಡು. ಇದನ್ನು ನಾನು ಪಕ್ಕಮಾಡಿರುವೆನು.”

ಶಚಿಯು ಅಪ್ಪಣೆಯೆಂದಳು. ಇಂದ್ರನು ಮಗ್ಗುಲಲ್ಲಿ ಕುಳಿತಿದ್ದ ಆಕೆಯನ್ನು ಭುಜಗಳಿಂದ ಹಿಡಿದು ಅಲ್ಲಾಡಿಸುತ್ತಾ “ಉಪಬೃಂಹಣಮಾಡುವಾಗ, ನೀನು ಲೋಕಕ್ಕೆಲ್ಲ ಬೇಕಾದ ಸೌಭಾಗ್ಯ ನೀಡುವವಳು ಎಂಬುದನ್ನು ಮರೆಯದಿರು. ಎದುರಿಗೆ ಬಂದ ದೇವತೆಯು ಅರೆಮನಸ್ಸಿನಿಂದಿದ್ದರೆ ನಮ್ಮ ಪ್ರಾಣವನ್ನು ಅದಕ್ಕೆ ಹೊಯ್ದು ನಮ್ಮ ಇಂದ್ರಿಯಗಳನ್ನು ಅದಕ್ಕೆ ಕೊಟ್ಟು ಅದನ್ನು ದೊಡ್ಡದು ಮಾಡಬೇಕು. ಅದೇ ಉಪಬೃಂಹಣ. ಋಕ್ಕಿನಿಂದ ಬರಮಾಡಿಕೊಂಡು, ಸಾಮದಿಂದ ಉಪಬೃಂಹಣಮಾಡಿ, ನ್ಯೂನಾತಿರೇಕಗಳನ್ನು ಬ್ರಹ್ಮವೇದದಿಂದ ಸರಿಮಾಡಿಕೊಂಡು, ವಿಧಿನಿಯತವಾದ ಆಹುತಿಯನ್ನು ಕೊಟ್ಟರೆ, ಯಾವ ದೇವತೆಯೇ ಆಗಲಿ, ಪ್ರತ್ಯಕ್ಷವಾಗಿಯೇ ತೀರಬೇಕು. ಅದರಿಂದ, ನಿನ್ನ ಉಪಬೃಂಹಣಕ್ಕೆ ಉಪಶ್ರುತಿ ದೇವಿಯು ಬೇಕೇಬೇಕು. ಅರಿವಿರಲಿ” ಎಂದು ವಿಶ್ವಾಸದಿಂದ ಹೇಳಿ ಯಥೋಪಚಾರವಾಗಿ ಕಳುಹಿಸಿಕೊಟ್ಟನು.

ಇಂದ್ರನು ಅದೇ ಆಸನದಲ್ಲಿ ಇನ್ನೂ ಒಂದು ಗಳಿಗೆ ಕುಳಿತಿದ್ದನು. ಆಗಲೇ ವಿಶ್ವರೂಪಾಚಾರ್ಯನ ಬಳಿ ಹೋಗಬೇಕು ಎಂದು ಒಂದು ಮನಸ್ಸು, ದೇವಗುರುವಿನ ಸುದ್ದಿ ತಿಳಿದ ಮೇಲೆ ಹೋಗೋಣವೆಂದು ಒಂದು ಮನಸ್ಸು. ಅಷ್ಟು ಹೊತ್ತು ವಿಚಾರಮಾಡಿ, ಆಗಲೇ ಹೋಗಿ ಆತನ ಮನಸ್ಸು ತಿಳಿದು ಬರಬೇಕು ಎನಿಸಿತು. ಹೊರಟನು.

* * * *