ಹರಿದ್ವಾರ ಭಾರತದ ಉತ್ತರಾಂಚಲ್ ರಾಜ್ಯದ ಒಂದು ಜಿಲ್ಲೆ, ಜಿಲ್ಲೆಯ ಆಡಳಿತ ಕೇಂದ್ರ, ಪಟ್ಟಣ ಮತ್ತು ಪವಿತ್ರ ಯಾತ್ರಾಸ್ಥಳ. ವಿಸ್ತೀರ್ಣ: 1,994 ಚ.ಕಿಮೀ. ಜನಸಂಖ್ಯೆ: 14,44,213. ಹಿಮಾಲಯ ಪರ್ವತಶ್ರೇಣಿಯ ಶಿವಾಲಿಕ್ಪರ್ವತದಿಂದ ಗಂಗಾನದಿಯು ಪ್ರಸ್ಥಭೂಮಿಯನ್ನು ಮುಟ್ಟಿ ಮುಂದೆ ಹರಿಯುವ ಪವಿತ್ರಸ್ಥಳ. ಗಂಗೋತ್ರಿ, ಯಮುನೇತ್ರಿ-ಬದರಿನಾಥ ಮತ್ತು ಕೇದಾರನಾಥ ಕ್ಷೇತ್ರಗಳಿಗೆ ಹೋಗುವ ಹೆದ್ದಾರಿ ಹಾಗೂ ಮುಖ್ಯ ಪ್ರವಾಸಿಕೇಂದ್ರ. ಸಮುದ್ರಮಟ್ಟದಿಂದ 289 ಮೀ ಎತ್ತರದಲ್ಲಿದೆ.
ಗಂಗಾನದಿಯ ಬಲದಂಡೆಯ ಮೇಲಿರುವ ಈ ಸ್ಥಳದಲ್ಲಿ ಹಿಂದೆ ಕಪಿಲ ಮುನಿ ತಪಸ್ಸು ಮಾಡಿದ್ದರಿಂದ ಇದಕ್ಕೆ ಕಪಿಲಸ್ಥಾನವೆಂದೂ ಕರೆಯುತ್ತಾರೆ. ಹಿಂದೆ ಮಾಯಾಪುರಿ ಎಂದೂ ಇದನ್ನು ಕರೆಯುತ್ತಿದ್ದರಂತೆ. 17ನೆಯ ಶತಮಾನದಲ್ಲಿ ಈ ಸ್ಥಳವನ್ನು ಗಂಗಾದ್ವಾರ ಎಂದೂ ಕರೆಯುತ್ತಿದ್ದುದುಂಟು. ಕಲ್ಲಿನ ಮೇಲೆ ಶ್ರೀಹರಿಯ ಹೆಜ್ಜೆ ಗುರುತಿರುವ “ಹರ್-ಕಿ-ಪೈರಿ”ಯಲ್ಲಿರುವ ಬ್ರಹ್ಮಕುಂಡದಲ್ಲಿ ಗಂಗಾದೇವಿ ದೇವಾಲಯವಿದೆ. ಬೆಟ್ಟದ ಮೇಲೆ ಮಾನಸದೇವಿಯ ದೇವಾಲಯವಿದೆ. ಇಲ್ಲಿಗೆ ಹೋಗಲು ವಿದ್ಯುತ್ ಟ್ರಾಲಿಯಿದೆ. ಹರಿದ್ವಾರ ದಿನದ ಇಪ್ಪತ್ತ್ನಾಲ್ಕು ಗಂಟೆ ಚಟುವಟಿಕೆಯಿಂದ ಕೂಡಿರುತ್ತದೆ. ಜನಜಂಗುಳಿ ಎದ್ದು ಕಾಣುವ ಅಂಶ. ಗಂಗಾನದಿಗೆ ಪ್ರತೀಸಂಜೆ ಆರತಿ ಮಾಡಲಾಗುತ್ತದೆ ಹಾಗೂ ಎಲೆಗಳ ಮೇಲೆ ಕರ್ಪೂರವನ್ನು ಹಚ್ಚಿ, ದೀಪ ಬೆಳಗಿಸಿ ನದಿಯಲ್ಲಿ ತೇಲಿ ಬಿಡಲಾಗುತ್ತದೆ. ಇದೊಂದು ಸುಂದರ ದೃಶ್ಯ.
ಹರಿದ್ವಾರ ಪೂಜಾ ಸ್ಥಳಗಳ, ದೇವಮಂದಿರಗಳ ತಾಣ. ಇಲ್ಲಿ ಮಾನಸದೇವಿ, ಚಂದಾದೇವಿ, ಮಾಯಾದೇವಿ, ಅನಿಸಿದೇವಿ, ಶ್ರವಣನಾಥ, ನೀಲೇಶ್ವರ, ಶಂಕರಾಚಾರ್ಯ ಮತ್ತು ಭೋಲಗಿರಿ ದೇವಾಲಯಗಳೂ ದುರ್ಗಾ ಮಂದಿರ, ಮಹದೇವ ಮಂದಿರ, ಬ್ರಹ್ಮಕುಂಡಗಳೂ, ಬಿರ್ಲಾಗೋಪುರಗಳೂ ಯಾತ್ರಿಕರನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಹರಿದ್ವಾರಕ್ಕೆ ರೈಲು ಮತ್ತು ರಸ್ತೆ ಸಂಪರ್ಕಗಳಿದ್ದು ಸುತ್ತಲ ಗ್ರಾಮ ಮತ್ತು ಪಟ್ಟಣಗಳಿಗೆ ಒಂದು ವ್ಯಾಪಾರ ಕೇಂದ್ರವೂ ಆಗಿದೆ.
ಹರಿದ್ವಾರ ಪ್ರಾಚೀನ ಪರಂಪರೆಯನ್ನೂ ಆಚಾರವನ್ನೂ ಪ್ರತಿನಿಧಿಸುವ ಸ್ಥಳ. ಇದಕ್ಕೆ ಬಹಳ ಸಮೀಪವಾಗಿಯೇ ಇರುವ ಮತ್ತೊಂದು ಪ್ರಾಚೀನ ಸಂಸ್ಕøತಿಯ ಕೇಂದ್ರ ಹೃಷಿಕೇಶ. ಹರಿದ್ವಾರವನ್ನು ಹರದ್ವಾರವೆಂದೂ ಕರೆಯುವರು. (ವಿ.ಎನ್.ಎಸ್.)