ಹಾನಗಲ್ಲು ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಶಿಗ್ಗಾಂವಿ, ಪೂರ್ವದಲ್ಲಿ ಹಾವೇರಿ ಮತ್ತು ಬ್ಯಾಡಗಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಹಿರೇಕೆರೂರು ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕುಗಳೂ ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಮುಂಡಗೋಡ ತಾಲ್ಲೂಕುಗಳೂ ಸುತ್ತುವರಿದಿವೆ. ಜಿಲ್ಲೆಯ ನೈಋತ್ಯಕ್ಕಿರುವ ಈ ತಾಲ್ಲೂಕಿನಲ್ಲಿ ಒಟ್ಟು 143 ಗ್ರಾಮಗಳೂ ಒಂದು ಪಟ್ಟಣವೂ ಇವೆ. ವಿಸ್ತೀರ್ಣ 769.9 ಚ.ಕಿಮೀ. ಜನಸಂಖ್ಯೆ 2,30,310.

ಈ ತಾಲ್ಲೂಕು ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಸೇರಿದೆ. ಈ ಪ್ರದೇಶದಲ್ಲಿ ಚಿಕ್ಕ ಬೆಟ್ಟಗುಡ್ಡಗಳನ್ನು ಕಾಣಬಹುದು. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಗಂಧದ ಮರ ಬೆಳೆಯುತ್ತವೆ. ರಕ್ಷಿತ ಅರಣ್ಯ ಪ್ರದೇಶ ಮತ್ತು ಹುಲ್ಲುಗಾವಲುಗಳಿವೆ. ತಾಲ್ಲೂಕಿನ ಮುಖ್ಯನದಿ ವರದಾ. ಇದು ತಾಲ್ಲೂಕಿನ ದಕ್ಷಿಣದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ವಿಂಗಡಿಸುವ ಗಡಿಯಾಗಿ ಸ್ವಲ್ಪ ದೂರ ಹರಿದು ಹೊಂಕಣದ ಬಳಿ ತಾಲ್ಲೂಕನ್ನು ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ಉತ್ತರಾಭಿಮುಖವಾಗಿ ಹಾವೇರಿ ತಾಲ್ಲೂಕನ್ನು ವಿಂಗಡಿಸುವ ಗಡಿಯಾಗಿ ಹರಿಯುವುದು. ಮುಂದೆ ಹಾವೇರಿ ತಾಲ್ಲೂಕಿನ ಉತ್ತರದಲ್ಲಿ ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯನ್ನು ಸೇರಿಕೊಳ್ಳುವುದು. ಧರ್ಮಾ ಈ ತಾಲ್ಲೂಕಿನ ಮತ್ತೊಂದು ನದಿ. ಇದು ತಾಲ್ಲೂಕನ್ನು ಪಶ್ಚಿಮದಿಂದ ಪ್ರವೇಶಿಸಿ ಸ್ವಲ್ಪ ದೂರ ಪೂರ್ವಾಭಿಮುಖವಾಗಿ ಹರಿದು ಅನಂತರ ಈಶಾನ್ಯಾಭಿಮುಖವಾಗಿ ಹಾನಗಲ್ಲು ಮುಖಾಂತರ ಹರಿದು ನರೇಗಲ್ಲು ಬಳಿ ವರದಾನದಿಯನ್ನು ಸೇರಿಕೊಳ್ಳುವುದು. ಹಾನಗಲ್ಲು, ನರೇಗಲ್ಲು ಮುಂತಾದ ಕಡೆ ದೊಡ್ಡ ಕೆರೆಗಳಿವೆ. ಧರ್ಮಾ ನದಿಗೆ ಹಾನಗಲ್ಲಿನ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ಶೃಂಗೇರಿ ಗ್ರಾಮದ ಬಳಿ ಕವೆ ಕಟ್ಟಿ ಕಮನಹಳ್ಳಿ ಮತ್ತು ಧರ್ಮಾ ಎಂಬ ಎರಡು ನಾಲೆಗಳನ್ನು ತೆಗೆದಿದ್ದಾರೆ. ಈ ನಾಲೆ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಸುತ್ತಲ ಭೂಮಿಗೆ ಜಲಾಧಾರವಾಗಿದೆ. ಈ ಕಟ್ಟೆ ಮತ್ತು ನಾಲೆಗಳು ಸುಮಾರು 400 ವರ್ಷಗಳಷ್ಟು ಹಳೆಯವಾಗಿದ್ದು 1921-22ರಲ್ಲಿ ದುರಸ್ತಿಪಡಿಸಲಾಯಿತು. ಹಿಂದಿನಿಂದಲೂ ಈ ತಾಲ್ಲೂಕು ನೀರಾವರಿಯಲ್ಲಿ ಮುಂದುವರಿದ ಪ್ರದೇಶವಾಗಿದೆ. ಉತ್ತಮ ಹವಾಗುಣವಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 972.6 ಮಿಮೀ.

ಮಲೆನಾಡ ಪ್ರದೇಶಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಬತ್ತದ ಪ್ರದೇಶ ಹೆಚ್ಚು. ಕಂದು ಕೆಂಪು ಮಣ್ಣಿನ ಜಿಗಟು ಭೂಪ್ರದೇಶವಿದ್ದು ಧರ್ಮಾ ಮತ್ತು ವರದಾ ನದಿಯ ದಡಗಳುದ್ದಕ್ಕೂ ರೇವೆಮಣ್ಣಿನ ಫಲವತ್ತಾದ ಪ್ರದೇಶವಿದೆ. ಬತ್ತ, ಕಬ್ಬು, ರಾಗಿ, ದ್ವಿದಳಧಾನ್ಯಗಳು, ಜೋಳ, ಹತ್ತಿ ಮುಂತಾದವುಗಳನ್ನು ಬೆಳೆಯುತ್ತಾರೆ. ಎಣ್ಣೆಬೀಜಗಳಲ್ಲಿ ಸೇಂಗಾ, ಹರಳು, ಹುಚ್ಚೆಳ್ಳು ಮುಂತಾದವನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಅಕ್ಕಿ ಗಿರಣಿಗಳಿವೆ. ಸೇಂಗಾ ಎಣ್ಣೆ ತಯಾರಿಕೆಯುಂಟು. ಅಕ್ಕಿ, ಉರುವಲು ಕಟ್ಟಿಗೆ ಮತ್ತು ಗಂಧದ ಮರ ಇವು ತಾಲ್ಲೂಕಿನಿಂದ ಹೆಚ್ಚಾಗಿ ರಫ್ತಾಗುವುವು. ತಾಲ್ಲೂಕಿಗೆ ಹತ್ತಿರವಾಗಿ, ಹಾನಗಲ್ಲಿಗೆ ಪೂರ್ವದಲ್ಲಿ 35 ಕಿಮೀ ದೂರದಲ್ಲಿ ಹಾವೇರಿ ರೈಲುನಿಲ್ದಾಣವಿದೆ.

ಹಾನಗಲ್ಲಿನ ಈಶಾನ್ಯಕ್ಕೆ 10 ಕಿಮೀ ದೂರದಲ್ಲಿರುವ ಅರಳೇಶ್ವರ ಗ್ರಾಮದ ಬಳಿ ಚಾಳುಕ್ಯ ಶೈಲಿಯ ಕದಂಬೇಶ್ವರ ದೇವಾಲಯವಿದೆ. ಇಲ್ಲಿ ಕದಂಬ ದೊರೆ ಶಾಂತಿವರ್ಮ, ತೈಲಪ (1128) ಮತ್ತು ಸೇವುಣ ರಾಜ ಕನ್ನರ (1260) ಇವರಿಗೆ ಸೇರಿದ ಏಳು ಶಾಸನಗಳಿವೆ. ಹಾನಗಲ್ಲಿಗೆ ಪೂರ್ವದಲ್ಲಿರುವ ಆಡೂರಿನಲ್ಲಿ ಬಾದಾಮಿ ಚಳುಕ್ಯ ವಂಶಕ್ಕೆ ಸೇರಿದ ಎರಡನೆಯ ಕೀರ್ತಿವರ್ಮನ (745-57) ಶಾಸನವೂ ಸೇರಿದಂತೆ ಏಳು ಶಾಸನಗಳಿವೆ. ಹಾನಗಲ್ಲಿನ ಪೂರ್ವಕ್ಕಿರುವ ಬಾಳಂಬೀಡ ಗ್ರಾಮದಲ್ಲಿ ರಾಮೇಶ್ವರ ಮತ್ತು ಕಮಲೇಶ್ವರ ಎಂಬ ಎರಡು ಪುರಾತನ ದೇವಾಲಯಗಳಿವೆ. ಇಲ್ಲಿನ 1145ರ ಒಂದು ಶಾಸನದಲ್ಲಿ ಪಾಶ್ರ್ವನಾಥ ದೇವಾಲಯದ ರಚನೆ ಕುರಿತ ಮಾಹಿತಿ ಇದೆ. ಕೆಲವು ವೀರಗಲ್ಲುಗಳಿವೆ. ಹಾನಗಲ್ಲಿಗೆ ಈಶಾನ್ಯದಲ್ಲಿ 13 ಕಿಮೀ ದೂರದಲ್ಲಿರುವ ಬೆಳವತ್ತಿ ಗ್ರಾಮ ಹಿಂದಿನ ಲೀಲಾವತಿ ಪಟ್ಟಣವಾಗಿತ್ತೆಂದು ಹೇಳುವರು. ಇಲ್ಲಿ ಕರಿಕಲ್ಲಿನ ಗೋಕುಲೇಶ್ವರ ದೇವಾಲಯವಿದೆ. ಚಾಳುಕ್ಯರ ಕಾಲಕ್ಕೆ ಸೇರಿದ ಈ ದೇವಾಲಯದಲ್ಲಿ ಕೆತ್ತನೆ ಕೆಲಸದ ಗೋಡೆಗಳೂ ಶಾಸನಗಳೂ ಇವೆ. ರಾಷ್ಟ್ರಕೂಟ ಗೋವಿಂದನ (930) ಒಂದು ಶಾಸನವೂ ಇಲ್ಲಿದೆ. ಹಾನಗಲ್ಲಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಬೊಮ್ಮನಹಳ್ಳಿಯ ಈಶ್ವರ ದೇವಾಲಯ ಬಹು ಪ್ರಸಿದ್ಧ. ಹಾನಗಲ್ಲಿಗೆ ಆಗ್ನೇಯಕ್ಕೆ 26 ಕಿಮೀ ದೂರದಲ್ಲಿರುವ ಹಳ್ಳಿಬೈಲಿನಲ್ಲಿ ಸಿದ್ಧರಾಮೇಶ್ವರ ದೇವಾಲಯವಿದೆ. ಹಾನಗಲ್ಲಿನ ಆಗ್ನೇಯದಲ್ಲಿ ತಾಲ್ಲೂಕಿನ ಅಂಚಿನಲ್ಲಿರುವ ಹಿರೇಬಾಸೂರು ಹಿಂದೆ ವ್ಯಾಸಪುರವೆಂದು ಪ್ರಸಿದ್ಧವಾಗಿತ್ತೆಂದು ಪ್ರತೀತಿ. ಇಲ್ಲಿ ವಿಶ್ವೇಶ್ವರ ಮತ್ತು ಹನುಮಂತ ದೇವಾಲಯಗಳಿವೆ. ಕಳಚುರಿ ಎರಡನೆಯ ಬಿಜ್ಜಳ ಮತ್ತು ಅವನ ಮಗ ಆಹವಮಲ್ಲ ಮತ್ತು ಯಾದವ ಸಿಂಘಣ ಇವರ ಕಾಲದ ಶಾಸನಗಳಿವೆ. ಹಾನಗಲ್ಲಿನ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿರುವ ಹೊಂಕಣ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಮೂರ್ತಿ ಆಕರ್ಷಕವಾದದ್ದು. ಹಾನಗಲ್ಲಿನ ಈಶಾನ್ಯದಲ್ಲಿ 13 ಕಿಮೀ ದೂರದಲ್ಲಿ ರುವ ಜಕ್ಕನಾಯಕನ ಕೊಪ್ಪದಲ್ಲಿ ಸರ್ವೇಶ್ವರ ದೇವಾಲಯವಿದೆ. ಹಾನಗಲ್ಲಿನ ಈಶಾನ್ಯದಲ್ಲಿರುವ ಕೂಡಲ ಬಳಿ ಧರ್ಮಾನದಿ ವರದಾನದಿಯನ್ನು ಸೇರುವುದು. ಇಲ್ಲಿ ಸಂಗಮೇಶ್ವರ ದೇವಾಲಯ ಮತ್ತು ಇದರ ಹತ್ತಿರವೇ 12ನೆಯ ಶತಮಾನದ ಒಂದು ವೀರಗಲ್ಲು ಇದೆ. ಹಾನಗಲ್ಲಿನ ಈಶಾನ್ಯಕ್ಕಿರುವ ನರೇಗಲ್ಲಿನಲ್ಲಿ ಒಂದು ದೊಡ್ಡ ಕೆರೆ ಮತ್ತು ಬಸಪ್ಪ ದೇವಾಲಯವಿದೆ. ಪುರಾತನ ಸರ್ವೇಶ್ವರ ದೇವಾಲಯ ಮತ್ತು ರಾಷ್ಟ್ರಕೂಟ ಧ್ರುವನ (780-93) ಶಾಸನವಿದೆ. ಈ ಗ್ರಾಮ 11 ಮತ್ತು 12ನೆಯ ಶತಮಾನದಲ್ಲಿ ಅಗ್ರಹಾರವಾಗಿತ್ತೆಂದು ತಿಳಿದುಬರುವುದು. ಹಾನಗಲ್ಲಿನ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ಶೃಂಗೇರಿ ಬಳಿ ಧರ್ಮಾನದಿಗೆ ಅಡ್ಡಗಟ್ಟೆ ಕಟ್ಟಲಾಗಿದೆ. ಹಾನಗಲ್ಲಿನ ಉತ್ತರಕ್ಕೆ 15 ಕಿಮೀ ದೂರದಲ್ಲಿರುವ ಯಳವಟ್ಟಿಯಲ್ಲಿ ರಾಮಲಿಂಗೇಶ್ವರ ದೇವಾಲಯ ಮತ್ತು ಒಂದು ಜೈನ ಬಸದಿಯಿದೆ.

ಹಾನಗಲ್ಲು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡದ ದಕ್ಷಿಣಕ್ಕೆ 90 ಕಿಮೀ ದೂರದಲ್ಲಿದೆ. ಜನಸಂಖ್ಯೆ 25,011. ಈ ಪಟ್ಟಣ ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರ ಕೇಂದ್ರ. ಈ ಪಟ್ಟಣಕ್ಕೆ ಹಿಂದೆ ಪಾಂತಿಪುರ, ವೈರಾಟಪುರ, ವಿರಾಟಕೋಟೆ, ವಿರಾಟ ನಗರ, ಪಾನಂಗಲ್ಲ ಮತ್ತು ಹಾನಂಗಲ್ಲ ಎಂಬ ಹೆಸರುಗಳಿದ್ದವು. ಇಲ್ಲಿ ಒಂದು ಪಾಳುಬಿದ್ದ ಕೋಟೆ, ದೇವಸ್ಥಾನಗಳು ಮತ್ತು ಶಿಲಾಶಾಸನ ಗಳಿವೆ. ಹಿಂದೆ ಹಾನಗಲ್ಲು 500 ಹಳ್ಳಿಗಳಿಗೆ ಮುಖ್ಯಪಟ್ಟಣವಾಗಿತ್ತು. ಹಾನಗಲ್ಲು ಕದಂಬರು ಈ ಊರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು 11ನೆಯ ಶತಮಾನದಿಂದ 13ನೆಯ ಶತಮಾನದವರೆಗೂ ಆಳಿದರು.

ಇಲ್ಲಿರುವ ಕೋಟೆ ಮಣ್ಣಿನಿಂದ ಕಟ್ಟಿದ್ದು. ಈ ಕೋಟೆಗೆ 16 ಬುರುಜುಗಳಿದ್ದು ಮೂರು ಗೋಡೆಗಳಿವೆ. ಕೆಲವೆಡೆ ನಾಲ್ಕನೆಯ ಗೋಡೆಯಿದ್ದ ಕುರುಹುಗಳೂ ಕಾಣುತ್ತವೆ. ಕೋಟೆಯ ಸುತ್ತಲೂ ಕಂದಕವಿದೆ. ಕೋಟೆಯ ಮಧ್ಯದಲ್ಲಿ ಹಳೇ ಅರಮನೆ ಗೋಡೆಯ ಅವಶೇಷಗಳಿವೆ. ಧರ್ಮಾನದಿ ಈ ಅರಮನೆ ಗೋಡೆಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಹರಿಯುವುದು. ಕದಂಬ ಕಾಮದೇವ ಹೊಯ್ಸಳರ ದಾಳಿಯನ್ನೆದುರಿಸಲು ಭದ್ರವಾಗಿರಬೇಕೆಂದು ಈ ಕೋಟೆಯ ದಕ್ಷಿಣದ ಗೋಡೆಯನ್ನು ದುರಸ್ತಿ ಮಾಡಿಸಿದ. ಈ ಹಳೇಕೋಟೆಯ ಒಂದು ಭಾಗದಲ್ಲಿ ಉತ್ಖನನವನ್ನು ನಡೆಸಲಾಯಿತು. ಈ ಅಗೆತದಲ್ಲಿ ಕಾಲುಟೆಡ್ ಮಣ್ಣಿನ ಪಾತ್ರೆಗಳ ತುಂಡುಗಳು (ಕ್ರಿ.ಶ. 50), ಸಾತವಾಹನರ ಕಾಲದ ಬಿಳಿಗೆರೆಗಳ ಮೇಲೆ ಕಂದುಬಣ್ಣದ ಲೇಪಹಚ್ಚಿದ ಸುಟ್ಟ ಮಣ್ಣಿನ ಪಾತ್ರೆಗಳು, ಸುಟ್ಟ ಮಣ್ಣಿನ ಅಡಕೆಯಾಕಾರದ ಮಣಿಗಳು, ಬಾದಾಮಿ ಚಳುಕ್ಯ ಮೊದಲಾದ ರಾಜರ ಕಾಲದ ಅವಶೇಷಗಳು ದೊರೆತಿವೆ. ಈ ಕೋಟೆಯಲ್ಲಿ ಗಚ್ಚಿನ ಕೋಣೆಗಳು, ಕೀಚಕನ ಗರಡಿಯ ಮನೆ, ವಿರಾಟನಗರ ಅರಮನೆ ಮುಂತಾದವುಗಳು ಇರುವವೆಂದು ಪ್ರತೀತಿ. ಕೋಟೆಯ ಹೊರಗೆ ಬೆಣಚುಕಲ್ಲಿನ ಚಿಕ್ಕ ಆಯುಧಗಳು, ಅವುಗಳ ಮೂಲಕಲ್ಲುಗಳು ಸಿಕ್ಕಿವೆ. ಕೋಟೆಯ ಆಗ್ನೇಯಕ್ಕೆ ಆನೆಕೆರೆ ಎಂಬ ಕೆರೆ ಇದೆ. ರಾಜರು ಇಲ್ಲಿ ತಮ್ಮ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದು ದರಿಂದ ಈ ಕೆರೆಗೆ ಆನೆಕೆರೆಯೆಂಬ ಹೆಸರು ಬಂದಂತೆ ತೋರುವುದು. ಹಾನಗಲ್ಲು, ಹಾನಗಲ್ಲು ಕದಂಬರ ಮುಖ್ಯಪಟ್ಟಣವಾದುದರಿಂದ ಇದನ್ನು ಗೆದ್ದುಕೊಳ್ಳುವುದು ಹೊಯ್ಸಳ ವಿಷ್ಣುವರ್ಧನನಿಗೆ ಹೆಮ್ಮೆಯಾಗಿದ್ದು ತಾನು ಗೆದ್ದ ಪಟ್ಟಣಗಳನ್ನು ಉಲ್ಲೇಖಿಸುವ ಕಡತದಲ್ಲಿ ಈ ಊರನ್ನು ಬರೆದುಕೊಂಡನೆಂದು ಹೊಯ್ಸಳ ಶಾಸನದಿಂದ ತಿಳಿದುಬರುವುದು.

ಇಲ್ಲಿರುವ ತಾರಕೇಶ್ವರ ಗುಡಿ ದೊಡ್ಡದೂ ಕಲಾತ್ಮಕವಾದುದೂ ಆಗಿದೆ. ದೇವಾಲಯ ಕಪ್ಪು ಹಸುರು ಕಲ್ಲಿನಿಂದ ಕಟ್ಟಿದ್ದು ಪೂರ್ವಾಭಿ ಮುಖವಾಗಿದೆ. ಇದು ಕಲ್ಯಾಣದ ಚಾಳುಕ್ಯರ ಕಾಲದ ಉತ್ತಮ ಗುಡಿಗಳಲ್ಲಿ ಒಂದು. ಈ ಗುಡಿಯ ದಕ್ಷಿಣದ ಹೊರಗೋಡೆಯ ಮೇಲೆ ಶೂರ್ಪನಖಿಯ ಮೂಗು ಕೊಯ್ಯುತ್ತಿರುವುದು, ಮಾರೀಚ ವಧೆ ಮೊದಲಾದ ರಾಮಾಯಣದ ದೃಶ್ಯಗಳೂ ಶ್ರೀಕೃಷ್ಣಜನನ, ನಂದ ಅವನನ್ನು ಕರೆದುಕೊಂಡು ಯಮುನಾ ನದಿಯನ್ನು ದಾಟಿದ್ದು, ಶಕಟಾಸುರವಧೆ, ಕಾಳಿಮರ್ದನ ಇತ್ಯಾದಿ ಭಾಗವತದ ದೃಶ್ಯಗಳೂ ಮತ್ತೊಂದೆಡೆ ಪಾಂಡವರ ಶಿಲ್ಪಗಳೂ ಇವೆ. ಅಲ್ಲದೆ, ಹೊರಗೋಡೆಗಳ ಮೇಲೆ ಕೀರ್ತಿಮುಖಗಳನ್ನು, ಭೈರವ ಮತ್ತು ಬ್ರಹ್ಮ ಇವರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ಗುಡಿಯ ಮುಂದೆ ಇದ್ದ ಕೋಟೆಕಾಳಗವನ್ನು ತೋರಿಸುವ ವೀರಗಲ್ಲುಗಳನ್ನು ಈಗ ಮಂಟಪದಲ್ಲಿಟ್ಟಿದ್ದಾರೆ. ಇಲ್ಲಿ ಎರಡು ದೊಡ್ಡ ಶೈವ ದ್ವಾರಪಾಲಕರ ವಿಗ್ರಹಗಳನ್ನು ಇಡಲಾಗಿದೆ. 20ಕ್ಕೂ ಮೇಲ್ಪಟ್ಟು ಶಿಲಾಶಾಸನಗಳಿವೆ. ಇವುಗಳಲ್ಲಿ ಕೆಲವು 12 ಮತ್ತು 13ನೆಯ ಶತಮಾನದವು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ, ಕಳಚುರಿ ಬಿಜ್ಜಳ ಮತ್ತು ಕದಂಬ ಅರಸರಾದ ತೈಲಪ, ಕಾಮದೇವ, ಸೋವಿದೇವ ಮತ್ತು ಮಲ್ಲಿದೇವರ ಆಳಿಕೆಯವು. ಇಲ್ಲಿನ ತಾರಕೇಶ್ವರ ಗುಡಿಯ ಮುಂದಿನ ಒಂದು ಶಾಸನದಿಂದ ಎರಡನೆಯ ತೈಲಪ, ಮುಖ್ಯಮಂತ್ರಿಯೂ ದಂಡನಾಯಕನೂ ಆದ ಮಸಣ ಎಂಬುವವನು ಕಟ್ಟಿಸಿದ ತೈಲೇಶ್ವರ ದೇವರಿಗೆ ಭೂಮಿ ದಾನಕೊಟ್ಟ ವಿಚಾರ ತಿಳಿದುಬರುತ್ತದೆ. (ಎ.ಎಮ್.ಎ.)