|| ಶ್ರೀಃ ||

ಪರಂತಪ ವಿಜಯ
ಸಂಪಾದಿಸಿ

ಅಧ್ಯಾಯ . ೧.
ಸಂಪಾದಿಸಿ

ಈ ಭರತಖಂಡದ ಈಶಾನ್ಯ ಭಾಗದಲ್ಲಿ ಗಂಧರ್ವಪುರಿಯೆಂಬ ಒಂದು ಪಟ್ಟಣವಿರುವುದು. ಇದು, ದ್ಯೂತ ಪಾನ ವ್ಯಭಿಚಾರ ಮೊದಲಾದ ದುರ್ವೃತ್ತಿಗಳಿಗೆ ಮುಖ್ಯಸ್ಥಾನವಾಗಿದ್ದಿತು. ಇದರಲ್ಲಿ ಚೌರ್ಯ ಮೊದಲಾದ ದುರ್ವೃತ್ತಿಗಳಿಂದ ದ್ರವ್ಯವನ್ನಾರ್ಜಿಸಿ, ಅದನ್ನು ದ್ಯೂತ ವ್ಯಭಿಚಾರಗಳಲ್ಲಿ ಕಳೆಯತಕ್ಕವರು ಅನೇಕರಿದ್ದರು. ಇಲ್ಲಿನ ದ್ಯೂತಶಾಲೆಗಳು, ವಿಶಾಲವಾದ ಅರಮನೆಗಳಂತೆ ಕಾಣಿಸುತಿದ್ದುವು. ಈ ದ್ಯೂತಶಾಲೆಗಳಲ್ಲಿ, ಪ್ರತಿಕ್ಷಣದಲ್ಲಿಯೂ ಕೋಟ್ಯಂತರ ದ್ರವ್ಯಗಳು ಒಬ್ಬರಿಂದೊಬ್ಬರಿಗೆ ಸೇರುತಿದ್ದುವು. ಭಾಗ್ಯಲಕ್ಷ್ಮಿಯು ಅತಿ ಚಂಚಲೆ ಯೆಂಬುದಕ್ಕೆ ದೃಷ್ಟಾಂತಗಳು, ಈ ಪಟ್ಟಣದಲ್ಲಿ ವಿಶೇಷವಾಗಿ ಸಿಕ್ಕುತಿದ್ದುವು. ಈ ಪಟ್ಟಣದ ಮಧ್ಯ ಭಾಗದಲ್ಲಿ ಅತಿ ವಿಸ್ತಾರವಾಗಿಯೂ ಅತ್ಯುನ್ನತವಾದ ಉಪ್ಪರಿಗೆಗಳಿಂದ ಶೋಭಿತವಾಗಿಯೂ ಇದ್ದ ಒಂದಾ ನೊಂದು ಮನೆಯು, ಇಲ್ಲಿನ ದ್ಯೂತಶಾಲೆಗಳಲ್ಲೆಲ್ಲ ಪ್ರಧಾನವೆನ್ನಿಸಿಕೊಂಡಿದ್ದಿತು. ಈ ಗೃಹಕ್ಕೆ, ದುರ್ಲಲಿತನೆಂಬ ಒಬ್ಬ ಯಜಮಾನನಿದ್ದನು. ಇವನು, ತನ್ನ ಮನೆಯಲ್ಲಿ ದ್ಯೂತವಾಡಿ ಗೆದ್ದವರು ಗೆದ್ದ ಹಣದಲ್ಲಿ ತನಗೆ ಇಪ್ಪತ್ತರಲ್ಲೊಂದು ಪಾಲನ್ನು ಕೊಡಬೇಕೆಂದು ನಿರ್ಣಯಿಸಿದ್ದನು. ಈ ರೀತಿ ಯಲ್ಲಿ ತೆಗೆದುಕೊಳ್ಳಲ್ಪಡತಕ್ಕ ದ್ರವ್ಯವೇ, ತಿಂಗಳಿಗೆ ೨೫ ಲಕ್ಷ ರೂಪಾಯಿ ಗಳವರೆಗೆ ಆಗುತಿದ್ದಿತು. ಈ ದ್ರವ್ಯದಲ್ಲಿ ಇವನು ತನ್ನ ಸ್ವಂತಕ್ಕಾಗಿ ೫ ಲಕ್ಷ ರೂಪಾಯಿಗಳನ್ನು ತೆಗೆದಿಟ್ಟುಕೊಂಡು, ಉಳಿದ ೨೦ ಲಕ್ಷ ರೂಪಾಯಿ ಗಳನ್ನು ಆ ದ್ಯೂತಗೃಹಕ್ಕೆ ಬರತಕ್ಕವರ ಸಕಲ ಸೌಕರ್ಯಾರ್ಥವಾಗಿ ಉಪಯೋಗಿಸುತ್ತಿದ್ದನು. ಈ ಗೃಹದಲ್ಲಿ ಕ್ಷಣಮಾತ್ರ ವಾಸಮಾಡುವುದೂ ಅನೇಕ ವರ್ಷಗಳ ಸ್ವರ್ಗಸುಖಾನುಭವಕ್ಕೆ ಸಮಾನವಾದುದೆಂದು, ಅಲ್ಲಿಗೆ ಬರತಕ್ಕವರು ಭಾವಿಸುತಿದ್ದರು. ಈ ಮನೆಯ ಸುತ್ತಲೂ, ಫಲಪುಷ್ಪಭರಿತ ವಾಗಿ ಚಿತ್ರ ವಿಚಿತ್ರಗಳಾದ ಅನೇಕ ವೃಕ್ಷಗಳಿಂದ ರಮಣೀಯವಾಗಿರುವ ಉದ್ಯಾನವನವು ಪ್ರಕಾಶಿಸುತಿದ್ದಿತು. ಇದರೊಳಗೆ ಅಲ್ಲಲ್ಲಿಯೇ ಅಮೋದ ಭರಿತಗಳಾದ ಲತೆಗಳಿಂದ ಶೋಭಿತವಾಗಿರುವ ಲತಾಗೃಹಗಳೂ, ಅವುಗಳಲ್ಲಿ ವಿಶ್ರಮಿಸಿಕೊಳ್ಳುವುದಕ್ಕೆ ಅನುಕೂಲಗಳಾದ ಶಯನಾಸನಗಳೂ, ಅತಿ ಮನೋಹರಗಳಾಗಿ ಸಜ್ಜುಗೊಳಿಸಲ್ಪಟ್ಟಿದ್ದುವು. ಈ ಲತಾಗೃಹಗಳೊಳಗೊ೦ದರ ಬಳಿಯಲ್ಲಿ, ಒಂದುದಿನ ಸಂಧ್ಯಾಕಾಲದಲ್ಲಿ, ಮಾಧವನೆಂಬ ದೊಡ್ಡ ಮನುಷ್ಯನೊಬ್ಬನು ವಿಹಾರಾರ್ಥವಾಗಿ ಸಂಚರಿಸುತ್ತಿದ್ದನು. ಈತನ ಉಡುಗೆ ತೊಡುಗೆಗಳಿಂದಲೇ, ಇವನು ಕೋಟೀಶ್ವರನೆಂದು ತಿಳಿಯಬಹುದಾಗಿದ್ದಿತು. ಈತನ ಮುಖಭಾವವು, ಇವನು ವಿಚಾರಪರನೆಂಬುದನ್ನು ಪ್ರದರ್ಶನಮಾಡುತಿದ್ದಿತು. ಹೀಗಿರುವಲ್ಲಿ, ಅಲ್ಲಿಗೆ, ಸುಂದರಾಕಾರನಾಗಿಯ, ಯೌವನಸ್ಥನಾಗಿಯೂ, ಅಜಾನುಬಾಹುವಾಗಿಯೂ ಇದ್ದ, ಪರಂತಪನೆಂಬ ಮಹನೀಯನೊಬ್ಬನು ಬಂದನು. ಈತನಲ್ಲಿ, ಸತ್ಯ ಧರ್ಮ ಶಾಸ್ತಿಗಳೆಂಬ ಮೂರುಗುಣಗಳೂ ಮೂರ್ತಿಮತ್ತಾಗಿದ್ದಂತೆ ಕಾಣಬರುತಿದ್ದುವು. ಇವನು ಆ ಉಪವನದ ಸೊಬಗನ್ನು ನೋಡುತ ಆ ಲತಾಗೃಹದ ಬಳಿಗೆ ಬರಲು, ಅಲ್ಲಿ ಸಂಚರಿಸುತಿದ್ದ ಮಾಧವನು, ಇವನ ಸೌಂದರವನ್ನೂ ಇಂಗಿತಗಳನ್ನೂ ನೋಡಿ ವಿಸ್ಮಿತನಾಗಿ, ಈತನ ಗುಣಾತಿಶಯಗಳು ಇವನ ರೂಪ ಯೌವನಗಳಿಗೆ ಅನುರೂಪವಾಗಿರುವುವೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಪರಂತಪನನ್ನು ಕುರಿತು “ ಅಯ್ಯಾ ! ನೀನು ಯಾರು ? ನಿನ್ನನ್ನು ನೋಡಿದ ಮಾತ್ರದಿಂದಲೇ, ನನಗೆ ನಿನ್ನಲ್ಲಿ ಅನಿರ್ವಾಚ್ಯವಾದ ಒಂದುಬಗೆಯ ವಿಶ್ವಾಸವೂ, ಸಂತೋಷವೂ ಉಂಟಾಗಿರುವುವು.” ಎಂದು ಹೇಳಿದನು. 

ಅಧ್ಯಾಯ ೧



ಪರಂತಪ-ಅಯ್ಯಾ! ನಾನು ಪರದೇಸಿ. ದೇಶಾಟನಾರ್ಥವಾಗಿ ಬರು ತಿರುವಾಗ, ಈ ವುದ್ಯಾನದ ರಾಮಣೀಯಕವನ್ನು ನೋಡಿ, ನನ್ನ ಮನಸ್ಸು ನನ್ನನ್ನು ಇಲ್ಲಿಗೆ ಆಕರ್ಷಿಸಿತು. ಆದರೆ, ನಿನ್ನ ವಿಶ್ವಾಸೋಕ್ತಿಗಳಿಗೆ ನಾನು ಬಹಳ ಕೃತಜ್ಞನಾಗಿರುವೆನು. ನನ್ನ ಪೂರ್ವಾಪರಗಳನ್ನು ತಿಳಿದುಕೊಳ್ಳುವುದರಿಂದ, ನಿನಗೆ ಪ್ರಯೋಜನವೇನೂ ತೋರುವುದಿಲ್ಲ.

ಮಾಧವ-ಲೋಕದಲ್ಲಿ, ಯಾವ ಕಾರವನ್ನಾಗಲಿ, ಅಥವಾ ಯಾವ ಪದಾರ್ಥವನ್ನಾಗಲಿ ನಿಷ್ಪ್ರಯೋಜನವೆಂದು ಹೇಳುವುದಕ್ಕಾಗುವುದಿಲ್ಲ. ನಿನ್ನ ಆಕಾರ ಮಾತ್ರದಿಂದಲೆ, ನಿನ್ನ ಬುದ್ಧಿಯ ಚಾತುರ್ಯಾತಿಶಯವು ಪ್ರಕಟಿಸಲ್ಪಡುತಿರುವುದು. ಆದುದರಿಂದ, ನೀನು ಇಲ್ಲಿಗೆ ವೃಥಾ ಬಂದವನಂತೆ ತೋರುವುದಿಲ್ಲ. ನೀನು ಇಲ್ಲಿಗೆ ಬಂದುದಕ್ಕೆ ಉದ್ದೇಶವೇನು? -ಹೇಳು. ಇದೇ ನಮ್ಮಿಬ್ಬರಿಗೂ ಪ್ರಥಮ ಪರಿಚಯವಾದಾಗ್ಯೂ, ಯಾವುದೋ ಒಂದು ಅನಿರ್ವಚನೀಯವಾದ ಸಂದರ್ಭಸಂಯೋಗದಿಂದ, ನನ್ನ ಮನಸ್ಸು ನಿನ್ನಲ್ಲಿ ಪ್ರೇಮಾತಿಶಯವುಳ್ಳದಾಗಿರುವುದು.ನಾನು ನಿನ್ನನ್ನು ಹಿಂದೆ ಎಂದೂ ನೋಡಿದಂತೆ ತೋರುವುದಿಲ್ಲ; ಆದರೂ, ಈಗ ನಿನ್ನಲ್ಲಿ ನನಗೆ ಆಕಸ್ಮಿಕವಾಗಿ ಉಂಟಾಗಿರುವ ಪ್ರೇಮಾತಿಶಯವನ್ನು ನೋಡಿದರೆ, ನಮ್ಮಿಬ್ಬರಿಗೂ ಯಾವುದೋ ಒಂದು ಸಂಬಂಧವಿದ್ದರೂ ಇರಬಹುದೆಂಬ ಸಂಶಯವು ನನ್ನ ಮನಸ್ಸಿನಲ್ಲಿ ಅಂಕುರಿಸುತ್ತಿರುವುದು. ಆದುದರಿಂದ, ನನಗೆ ನಿನ್ನಲ್ಲಿ ಉಂಟಾಗುತಿರುವ ವಿಶ್ವಾಸಕ್ಕೆ ಕಾರಣವನ್ನು ತಿಳಿದುಕೊಳ್ಳುವುದಕ್ಕಾಗಿ, ನಾನು ನಿನ್ನ ಪೂರ್ವಾಪರಗಳನ್ನು ಕೇಳುತ್ತೇನೆ.-ಹೇಳು.

ಪರಂತಪ -ಹಾಗಾದರೆ, ನನ್ನ ವೃತ್ತಾಂತವನ್ನು ಹೇಳುವುದಕ್ಕೆ ಮೊದಲು ನಿನ್ನ ಪೂರ್ವೋತ್ತರಗಳನ್ನು ತಿಳಿಯಬೇಕೆಂಬ ಅಭಿಲಾಷೆ ನನಗುಂಟಾಗಿರುವುದರಿಂದ, ನೀನು ಮೊದಲು ನಿನ್ನ ವೃತ್ತಾಂತವನ್ನು ಹೇಳು.

ಮಾಧವ- ನಾನು ಕಲ್ಯಾಣಪುರ ನಿವಾಸಿ ; ನನ್ನ ತಂದೆ ಮಹೇಂದ್ರ ಪಾಲನೆಂಬವನು. ನನ್ನ ಒಡಹುಟ್ಟಿದವರಲ್ಲಿ ಒಬ್ಬನು ಸತ್ತನು. ಅವನಿಗೆ ಶಂಬರನೆಂಬ ಒಬ್ಬ ಮಗನಿರುವನು. ನನ್ನ ಹಿರಿಯಣ್ಣನು ಸುಮಿತ್ರನು. ನಾನೇ ಕಿರಿಯವನು. ರತ್ನಾಕರವೆಂಬ ದೇಶವು ನನ್ನ ಅಧೀನದಲ್ಲಿರುವುದು, 

ಪರಂತಪ ವಿಜಯ



ಪರಂತಪ-(ಆಶ್ಚರ್ಯದೊಡನೆ) ಅಹಹ ! ಹಾಗಾದರೆ, ನಿನ್ನ ವಿಶ್ವಾಸಕ್ಕೆ ಸಂಪೂರ್ಣವಾದ ಕಾರಣವುಂಟು. ನಾನು ನಿನ್ನ ಮಿತ್ರನಾದ ವೈರಿಸಿಂಹನ ಮಗನು. ಈಗ ನಿನ್ನಲ್ಲಿ ನನಗೆ ಪಿತೃಭಕ್ತಿ ನೆಲೆಗೊಂಡಿರುವುದು.

ಮಾಧವ- (ದುಃಖದಿಂದ ಕಣ್ಣೀರು ಸುರಿಸಿ) ಅಯ್ಯಾ ! ಪರಂತಪ ! ವೈರಿನಿಂಹನ ಅಕಾಲಮರಣದಿಂದುಂಟಾದ ಶೋಕಾಗ್ನಿಯು, ನನ್ನನ್ನು ಬಹಳವಾಗಿ ಬಾಧಿಸುತ್ತಿರುವುದು. ಆದರೆ, ನಿನ್ನನ್ನು ನೋಡಿದಕೂಡಲೆ, ನನಗೆ ನಷ್ಟನಾಗಿದ್ದ ಮಿತ್ರನು ಈಗ ಪುನಃ ಲಭಿಸಿದಷ್ಟು ಆನಂದವುಕ್ಕುತಿರುವುದು. ನೀನು ಆತನ ಮಗನೇದು ನನಗೆ ತಿಳಿಯದಿದ್ದ ಕಾರಣ, ನಿನ್ನೊಡನೆ ಈ ರೀತಿಯಾಗಿ ಮಾತನಾಡಿದೆನು. ನನ್ನ ಪ್ರಿಯಮಿತ್ರನಾದ ವೈರಿನಿಂಹನು, ತನ್ನ ಬುದ್ಧಿ ಬಲದಿಂದಲೂ, ದೇಹಶಕ್ತಿಯಿಂದಲೂ ಅತ್ಯದ್ಭುತವಾದ ಕಾರ್ಯಗಳನ್ನು ಮಾಡಿರುವನು. ನಿನ್ನನ್ನು ನೋಡಿದರೆ, ನೀನು ಆತನನ್ನು ಮರೆಯಿಸುವಂತೆ ತೋರುವೆ. (ಅವನನ್ನು ಗಾಢಾಲಿಂಗನ ಮಾಡಿಕೊಂಡು, ತನ್ನ ಬಿಡಾರಕ್ಕೆ ಕರೆದುಕೊಂಡು ಹೋಗಿ, ಅವನಿಗೆ ಅತ್ಯಾದರದಿಂದ ಭೋಜನಾದಿಗಳನ್ನು ಮಾಡಿಸಿ ಸತ್ಕರಿಸಿದನು.)

ಪರಂತಪ-ನಿನ್ನ ಪ್ರೀತಿಪೂರ್ವಕವಾದ ಆತಿಥ್ಯಕ್ಕೆ ಸಂತುಷ್ಟನಾದೆನು. ಆದರೆ, ನಾನು ಅತ್ಯವಶ್ಯವಾದ ಯಾವುದೋ ಒಂದು ಕಾರ್ಯಾಂತರದಿಂದ ಇಲ್ಲಿಗೆ ಬಂದಿರುವೆನು. ಅದಕ್ಕೆ ಕಾಲಾತಿಕ್ರಮವಾಗುವುದರಿಂದ, ನಿನ್ನ ಅಪ್ಪಣೆಯಾದರೆ ಹೋಗುವೆನು. ಆ ಕಾರ್ಯವನ್ನು ನಿರ್ವಹಿಸಿಕೊಂಡು ಹಿಂದಿರುಗಿ ಬರುವಾಗ, ಪುನಃ ನಿನ್ನ ದರ್ಶನವನ್ನು ತೆಗೆದುಕೊಳ್ಳುವೆನು.

ಮಾಧವ-ನಾನು ನಿನಗೆ ಅನ್ಯನೆಂದೆಣಿಸಬೇಡ. ನಿನ್ನ ಕಾರ್ಯವಾವುದು ? ಎಂತಹ ರಹಸ್ಯವಾಗಿದ್ದರೂ ನನ್ನೊಡನೆ ಹೇಳಬಹುದು. ಅದರಲ್ಲಿ ನನ್ನಿಂದಾಗತಕ್ಕುದೇನಾದರೂ ಇದ್ದರೆ, ನಿನಗೆ ಸಹಾಯನಾಗಿ ಅದನ್ನು ಮಾಡಿಕೊಡುವುದರಲ್ಲಿ ನಾನು ಸಿದ್ಧನಾಗಿರುವೆನು.

ಪರಂತಪ-ಅಯ್ಯಾ ! ಮಾಧವ ! ಈಗ ನಾನು ಮಾಡಬೇಕಾದ ಕಾರ್ಯವು ಅತಿರಹಸ್ಯವಾದುದು; ಅದನ್ನು ಪ್ರಕಟಿಸುವುದು, ಕಾರ್ಯಹಾನಿಗೆ ಹೇತುವಾಗುವುದೇ ಹೊರತು, ಮತ್ತೆ ಬೇರೆ ಇಲ್ಲ. ಆದರೂ, ನಿನಗೆ ನನ್ನಲ್ಲಿರುವ ವಿಶ್ವಾಸವನ್ನು ನೋಡಿದರೆ, ನಿನಗೆ ತಿಳಿಯಿಸುವುದರಿಂದ ಯಾವ

ಅಧ್ಯಾಯ ೧



ಬಾಧೆಯೂ ಇಲ್ಲವೆಂದು ತೋರುವುದು. ಹೇಳುತ್ತೇನೆ...ಕೇಳು. ಈ ಪಟ್ಟಣದಲ್ಲಿ, ರಾಜಶಾಸನಗಳನ್ನುಲ್ಲಂಘಿಸಿ ಉಚ್ಛೃಂಖಲಪ್ರವರ್ತನೆಯಿಂದ ಸಜ್ಜನರಿಗೆ ಕಂಟಕಭೂತರಾದವರು ಬಹುಮಂದಿಯಿರುವರೆಂದು, ರಾಜ್ಯಾಧಿಕಾರಿಗಳಿಗೆ ತಿಳಿಯಬಂದಿರುವುದು. ಇವನ ನಿಗ್ರಹಾರ್ಥವಾಗಿ, ಈ ದೇಶಾಧಿಪತಿಯು ನನಗೆ ಸರ್ವಾಧಿಕಾರವನ್ನು ಕೊಟ್ಟು ಇಲ್ಲಿಗೆ ಕಳುಹಿಸಿರುವನು. ಇದಲ್ಲದೆ, ಈ ಪಟ್ಟಣದಲ್ಲಿರುವ ದ್ಯೂತಶಾಲಾಧಿಕಾರಿಯೊಬ್ಬನು, ತನ್ನ ಕಡೆಯವರಾದ ಕೆಲವು ಜನಗಳೊಡನೆ ಅತಿ ಕ್ರೂರವಾದ ದುಷ್ಕೃತ್ಯಗಳನ್ನು ನಡೆಯಿಸುತ್ತಿರುವುದಾಗಿ ತಿಳಿಯಬಂದಿರುವುದು, ಅವನನ್ನು ಮೊದಲು ನಿಗ್ರಹಿಸಬೇಕಾಗಿರುವುದು.

ಮಾಧವ- ಭಾಪು! ಭಾಪು! ಪ್ರಿಯಮಿತ್ರನೆ ! ನಿನ್ನ ಕಾರ್ಯವು ನನ್ನ ಮನಸ್ಸಂಕಲ್ಪಕ್ಕೆ ಅನುಕೂಲವಾಯಿತು. ಈ ಕಾರ್ಯವನ್ನು ನೀನು ನಡೆಯಿಸಿದರೆ, ದುಷ್ಟನಿಗ್ರಹಾರ್ಥವಾಗಿ ನಿನ್ನ ತಂದೆ ಅನುಭವಿಸುತ್ತಿದ್ದ ಶ್ರಮ ಸಫಲವಾಗುವುದು. ಆದರೆ, ಆ ದ್ಯೂತಶಾಲಾಧಿಕಾರಿ ಬಹುದುಷ್ಟನು; ಅನೇಕ ಜನಗಳ ಸ್ವತ್ತನ್ನು ಅಪಹರಿಸಿರುವನು; ಇದಕ್ಕಾಗಿ ಅನೇಕ ಪಾಣಿಹತ್ಯೆಗಳನ್ನೂ ಮಾಡಿರುವನು. ಇವನ ದುಷ್ಕೃತ್ಯಗಳನ್ನು ಉದ್ಘಾಟಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿರುವೆನು. ಈ ನೀಚನು ನನ್ನ ಧನದಲ್ಲಿಯೂ ಕೂಡ ಅನೇಕ ಭಾಗವನ್ನು ಜೂಜಿನ ನೆಪದಿಂದ ವಂಚಿಸಿ ಗೆದ್ದುಕೊಂಡಿರುವನು. ಆದುದರಿಂದ, ಈ ದಿವಸರಾತ್ರಿ ನಾನು ಹಿಂದೆ ಕಳೆದುಕೊಂಡುದುದನ್ನೆಲ್ಲ ಗೆದ್ದು ಅವನ ಹೆಮ್ಮೆಯನ್ನು ಮುರಿಯಬೇಕೆಂದು ಶಪಥಮಾಡಿಕೊಂಡಿರುತ್ತೇನೆ.

ಪರಂತಪ - ಅಯ್ಯಾ ! ಮಾಧವನೇ ! ನೀನು ಶಪಥಮಾಡಿರುವಂತೆ ಅವನನ್ನು ಗೆಲ್ಲತಕ್ಕ ಉಪಾಯವೇನಾದರೂ ಉಂಟೋ?

ಮಾಧವ- ಈ ದಿವಸರಾತ್ರಿ ಆ ನೀಚನೊಡನೆ ನನ್ನ ಸರ್ವಸ್ವವನ್ನೂ ಪಣಮಾಡಿ ದ್ಯೂತವಾಡುತ್ತೇನೆ. ಬಹುಶಃ ಜಯಲಕ್ಷ್ಮಿಯು ನನಗೆ ಪ್ರಸನ್ನಳಾಗದಿರಲಾರಳೆಂದು ಭಾವಿಸಿದ್ದೇನೆ.

ಪರಂತಪ-ಅಯ್ಯಾ ! ಮಾಧವ! ನೀನು ಹೀಗೆ ಆಲೋಚಿಸಬೇಡ. ಸರ್ವಥಾ ಅದೃಷ್ಟವನ್ನು ಪರೀಕ್ಷಿಸಬಾರದು. ಲಕ್ಷ್ಮಿಯು ಬಹು ಚಂಚಲೆ. 

ಪರಂತಪ ವಿಜಯ



ಅವಳ ಪ್ರಸನ್ನತೆ ನಂಬತಕ್ಕುದಲ್ಲ. ಈ ದಿವಸವೆನಾದರೂ ಆ ದುಷ್ಟನೇ ಗೆದ್ದ ಪಕ್ಷದಲ್ಲಿ, ನೀನು ಬಹು ಶೋಚನಿಯವಾದ ಅವಸ್ಥೆಗೆ ಗುರಿಯಾಗುವೆ. ಆದುದರಿಂದ, ನೀನು ಮಾಡಿಕೊಂಡಿರುವ ಶಪಥವನ್ನು ಸರ್ವಥಾ ಬಿಟ್ಟು ಬಿಡುವುದೇ ಒಳ್ಳೆಯದು. ಇದಲ್ಲದೆ, ನಾನು ಇವನ ಸಿಗ್ರಹಾರ್ಥವಾಗಿಯೇ ಇಲ್ಲಿಗೆ ಬಂದಿರುವೆನಾದುದರಿಂದ, ಈ ಕಾಲದಲ್ಲಿ ನೀನು ಇವನೊಡನೆ ದ್ಯೂತವಾಡಿ ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕನಾಗಬೇಡ.

ಮಾಧವ-ಈ ದ್ಯೂತದಲ್ಲಿ ಸೋಲುವೆನೆಂಬ ಭಯವು ಲೇಶವಾದರೂ ನನಗಿಲ್ಲ. ನಾನು ಧರ್ಮದ್ಯೂತವಿಶಾರದನೆಂಬ ಬಿರುದನ್ನು ಪಡೆದವನು. ಆದರೆ, ನಾನು ಹಿಂದಿನ ಆಟದಲ್ಲಿ ಸ್ವಲ್ಪ ಔದಾಸೀನ್ಯದಿಂದ ಸೋತೆನೇ ಹೊರತು, ಅಜ್ಞತೆಯಿಂದ ಸೋತವನಲ್ಲ. ಈ ರಾತ್ರಿಯೆನೋ ನಾನು ಗೆಲ್ಲುವುದೇ ದಿಟ. ಅಥವಾ ಒಂದುವೇಳೆ ಸೋತು ನಿರ್ಗತಿಕನಾದರೂ, ಅದೂ ನನಗೆ ಅಭಿಮತವೇಸರಿ. ಏಕೆಂದರೆ, -ಇನ್ನು ಮುಂದೆ ಜೀವಿಸಬೇಕೆಂಬ ಕುತೂಹಲವು ನನಗೆ ಸ್ವಲ್ಪವೂ ಇಲ್ಲ. ಈ ಕ್ಷಣವೇ ಅತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನು ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವೆನು. ನನಗೆ ದುಸ್ಸಹವಾದ ಒಂದು ಕ್ಲೇಶವುಂಟಾಗಿದೆ. ಇದು ಯಾವಾಗ ತಪ್ಪುವುದೋ ಎಂದು ಪರಿತಪಿಸುತಿರುವ ನನಗೆ, ನನ್ನ ಮನಸ್ಸಿನಲ್ಲಿರುವ ಕ್ಲೇಶದ ನಿವಾರಣೆಗೆ ಮರಣವಿನಾ ಇನ್ಯಾವ ಉಪಾಯವೂ ತೋರದಿರುವುದರಿಂದ, ಆ ಮರಣವನ್ನೇ ಎದುರು ನೋಡುತ್ತಿರುವೆನು.

ಪರಂತಪ-ನಿನ್ನ ಈ ಶಪಥವು ನನಗೆ ಬಹಳ ಸಂಕಟಕರವಾಗಿರುವುದು. ನಿನಗೆ ಪ್ರಾಣದಲ್ಲಿಯೂ ಜುಗುಪ್ಸೆಯುಂಟಾಗುವಷ್ಟು ಕ್ಲೇಶವೆನೋ ಗೊತ್ತಾಗಲಿಲ್ಲ. ಏನು ಹೋದರೂ ಹೋಗಲಿ, "ಜೀವನ್ ಭದ್ರಾಣಿ ಪಶ್ಯತಿ" ಎಂಬಂತೆ ಪ್ರಾಣರಕ್ಷಣೆಯನ್ನು ಮಾಡಿಕೊಂಡಿದ್ದರೆ, ಕಾಲಾನು ಕಾಲದಲ್ಲಿ ಇಹಪರಗಳಲ್ಲಿ ಸಕಲವಾದ ಇಷ್ಟಾರ್ಥಗಳನ್ನೂ ಪಡೆಯಬಹುದೆಂದು ಹಿರಿಯರು ಹೇಳಿರುವರು. ಇದು ನಿನಗೆ ತಿಳಿಯದ ಅಂಶವಲ್ಲ. ನಿನಗೆ ಮರಣವನ್ನು ಎದುರುನೋಡುವಷ್ಟು ದುಃಖಾತಿಶಯವೇನು? ಹೇಳು. ಸಾಧ್ಯ ವಾದರೆ ಅದಕ್ಕೆ ತಕ್ಕ ಪ್ರತೀಕಾರವನ್ನು ಪರ್ಯಾಲೋಚಿಸೋಣ. 

ಅಧ್ಯಾಯ ೧



ಮಾಧವ- ನನ್ನ ದುಃಖವು ಅತಿದುಸ್ಸಹವಾದುದು ಆದರೂ, ನೀನು ಸ್ವಕೀಯನಾದುದರಿಂದ, ನಿನ್ನೊಡನೆ ಹೇಳುವೆನು,ಕೇಳು. ನನ್ನ ಹಿರಿಯಣ್ಣನು,

ಕಾಮಮೋಹಿಸಿಯೆಂಬ ಒಬ್ಬ ಅನಾಥೆಯಾದ ಹುಡುಗಿಯನ್ನು ತಂದು ಸಾಕುತಿರುವನು. ಇವಳು, ತನ್ನ ರೂಪ ಲಾವಣ್ಯ ಸಂಪತ್ತುಗಳಿಂದ ರತಿಯನ್ನೂ ಜರಿಯುವಂತೆ ತೋರುವಳು. ಇವಳ ಬುದ್ಧಿ ಚಾತುರ್ಯವನ್ನು ನೋಡಿದರೆ, ಸರಸ್ವತಿಯೇ ಈ ರೂಪದಿಂದ ಅವತರಿಸಿರುವಳೆಂಬ ಭಾವವು ನೆಲೆಗೊಳ್ಳುವುದು. ಬ್ರಹ್ಮನು ತನ್ನ ಕೌಶಲ್ಯವನ್ನೆಲ್ಲ ವ್ಯಯಮಾಡಿ ಈ ಸ್ತ್ರೀರತ್ನವನ್ನು ಸೃಷ್ಟಿಸಿರುವನೇ ಹೊರತು ಮತ್ತೆ ಬೇರೆಯಿಲ್ಲ. ನನ್ನಣ್ಣನು ಪೋಷಣಾರ್ಥವಾಗಿ ಇವಳನ್ನು ತಂದಾರಭ್ಯ, ನನ್ನ ಅನುರಾಗವು ಇವಳಲ್ಲಿಯೇ ನೆಲೆಗೊಂಡಿತು. ದೈವಗತಿಯಿಂದ ಇವಳಿಗೂ ನನ್ನಲ್ಲಿ ಅನುರಾಗವಂಕುರಿಸುತಿದ್ದಿತು. ಆದರೆ, ನಮ್ಮಿಬ್ಬರ ಪರಸ್ಪರಾನುರಾಗವು ಸಫಲವಾಗುವುದಕ್ಕೆ ಮುಂಚೆಯೇ, ನನ್ನ ಹಿರಿಯಣ್ಣನ ಮಗನಾದ ಶಂಬರನು ದುರ್ಭೋಧನೆ ಮಾಡಿ, ಇವಳಿಗೆ ನನ್ನಲ್ಲುಂಟಾಗಿದ್ದ ಅನುರಾಗವನ್ನು ನಿರ್ಮೂಲ ಮಾಡಿದನು. ಹಸ್ತಗತಳಾಗಿದ್ದ ಈ ಸ್ತ್ರೀಯು, ನನ್ನಲ್ಲಿ ಪರಾಙ್ಮುಖಳಾದಳು. ಇವಳಿಗೆ ನನ್ನಲ್ಲಿ ಅನುರಾಗವು ಕಡಮೆಯಾದಷ್ಟೂ, ನನಗೆ ಐಶ್ವರ್ಯದಲ್ಲಿಯೂ ಪ್ರಾಣದಲ್ಲಿಯೂ ಜುಗುಪ್ಸೆ ಹೆಚ್ಚಾಗುತ ಬಂದಿತು. ಇದಲ್ಲದೆ, ನನಗೆ ಮುಖ್ಯವಾದ ಮತ್ತೊಂದು ಸಂಕಲ್ಪವಿರುವುದು. ಏನೆಂದರೆ :-ಒಂದುವೇಳೆ ನಾನು ಸತ್ತರೂ, ನನ್ನ ಅಪರಿಮಿತವಾದ ಧನವೆಲ್ಲವೂ ನನ್ನ ಮನೋರಥಭಂಗವನ್ನು ಮಾಡಿದ ಆ ನೀಚನಾದ ಶಂಬರನಿಗೆ ಸೇರುವುದು. ನಮ್ಮ ಹಿರಿಯಣ್ಣನಾದ ಸುಮಿತ್ರನಿಗೂ ಬೇಕಾದಷ್ಟು ಧನವಿರುವುದು. ಆದರೆ, ಅವನಿಗೆ ಸಂತಾನವಿಲ್ಲದ ಕಾರಣ, ನನ್ನ ದ್ರವ್ಯದ ಮೇಲೆ ಅವನಿಗೆ ಆಸೆಯಿಲ್ಲ. ಆದುದರಿಂದ, ಈ ನನ್ನ ಐಶ್ವರ್ಯವನ್ನೆಲ್ಲ ತನ್ನ ಸ್ವಾಧೀನಪಡಿಸಿಕೊಳ್ಳಬೇಕೆಂದು, ಶಂಬರನು ಬಹು ಸಾಹಸಮಾಡುತಿರುವನು. ಅದುಕಾರಣ, ನನ್ನ ಆಸ್ತಿಯಲ್ಲಿ ಲೇಶಮಾತ್ರವಾದರೂ, ಆ ದುರಾತ್ಮನಿಗೆ ಸೇರದಂತೆ ಮಾಡುವುದೇ ನನ್ನ ಮುಖ್ಯೋದ್ದೇಶವಾಗಿರುವುದು. ಇದಲ್ಲದೆ, ನನಗೆ ಸೇರಿದ ರತ್ನಾಕರವೆಂಬ ದೇಶದಲ್ಲಿ ಚಿನ್ನದ ಗಣಿಗಳೂ ರತ್ನದ ಗಣಿಗಳೂ ಅನೇಕವಾಗಿದ್ದರೂ, ನನಗೆ ದ್ರವ್ಯಸಂಪಾದನೆ ೮

ಪರಂತಪ ವಿಜಯ



ಯಲ್ಲಿ ಆಶೆ ತೊಲಗಿದಕಾರಣ, ನಾನು ಅವುಗಳನ್ನು ರೂಢಿಸುವುದಕ್ಕೂ ಪ್ರಯತ್ನ ಮಾಡಲಿಲ್ಲ. ಆ ಕಾಮಮೋಹಿನಿಗೆ ನನ್ನಲ್ಲಿ ಉಂಟಾದ ಅನುರಾಗವೇ, ನನಗೆ ಈ ಪ್ರಕಾರವಾಗಿ ಪ್ರಾಣದಮೇಲೂ ಐಶ್ವರ್ಯದಮೇಲೂ ಜುಗುಪ್ಸೆಯನ್ನುಂಟುಮಾಡಿರುವುದು. ಹೀಗಿರುವಲ್ಲಿ, ಇನ್ನು ಹೇಗೆತಾನೆ ನಾನು ಬದುಕಿರಲಿ?-ಹೇಳು.
ಪರಂತಪ- ಅಯ್ಯಾ ! ನೀನು ಹೇಳುವುದು ಸರ್ವಥಾ ಯುಕ್ತ ವಲ್ಲ. ನೀನು ನನಗಿಂತಲೂ ಹಿರಿಯವನು ; ಮತ್ತು ಪಿತೃಪ್ರಾಯನು. ಆದರೂ “ಯುಕ್ತಿಯುಕ್ತಂ ವಟೋ ಗ್ರಾಹ್ಯಂ ಬಾಲಾದಪಿ ಶುಕಾರಪಿ ” ಎಂಬ ನೀತಿಯು ನಿನಗೆ ತಿಳಿಯದ ಅಂಶವಲ್ಲವಾದುದರಿಂದ, ನಾನು ಧೈಯ್ಯದಿಂದ ನಿನಗೆ ವಿಜ್ಞಾವಿಸಿಕೊಳ್ಳುತ್ತೇನೆ. ಸ್ತ್ರೀ ಮಾತ್ರಕ್ಕೋಸ್ಕರ, ಕುಬೇರನ ಐಶ್ವರ್ಯಕ್ಕೆ ಸಮಾನವಾದ ಐಶ್ವರ್ಯವನ್ನೂ, ಇಹಪರಗಳಿಗೆ ಸಾಧಕವಾದ ದೇಹವನ್ನೂ ಕಳೆದುಕೊಳ್ಳುತ್ತೇನೆಂದು ನಿಷ್ಕರ್ಷಿಸಿರುವುದು ಯುಕ್ತವಲ್ಲ. ಸಾಕು, ಬಿಡು. ದ್ರವ್ಯವುಳ್ಳವರಿಗೆ ಯಾವುದು ತಾನೆ ಅಸಾಧ್ಯ ? ನೀನು ಮೋಹಿಸಿರುವ ಸ್ತ್ರೀಗೆ ಸಮಾನರಾದ ಸ್ತ್ರೀಯರು ಲೋಕದಲ್ಲಿ ಯಾರೂ ಇಲ್ಲವೆಂದು ನೀನು ಎಣಿಸಿರುವುದು ನಿನ್ನ ಅಜ್ಞಾನದ ಫಲವೇ ಹೊರತು ಮತ್ತೆ ಬೇರೆಯಲ್ಲ. ಈ ಚಿಂತೆಯನ್ನು ಬಿಡು. ಸಾಧ್ಯವಾದರೆ ನನ್ನ ಶಕ್ತಿಯಿಂದ ಆ ಸ್ತ್ರೀಗೆ ಪುನ: ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡುವೆನು ; ತಪ್ಪಿದರೆ, ಅವಳಿಗಿಂತಲೂ ಉತ್ಕೃಷ್ಟರಾದ ಅನೇಕ ಸ್ತ್ರೀಯರುಗಳನ್ನು ಕರೆತರುವೆನು. ಅವರಲ್ಲಿ ನಿನಗೆ ಇಷ್ಟಳಾದವಳನ್ನು ವರಿಸಿ ಸುಖವಾಗಿ ಬದುಕಬಹುದು. ಇನ್ನು ಈ ವ್ಯಸನವನ್ನು ಬಿಡು.

ಮಾಧವ-ಅಯ್ಯಾ ! ಪರಂತಪ ! ನಿನ್ನೊಡನೆ ಸಂಭಾಷಣೆ ಮಾಡಿದ ಹಾಗೆಲ್ಲ ನಿನ್ನಲ್ಲಿ ನನಗೆ ವಿಶ್ವಾಸವು ಹೆಚ್ಚುತಿರುವುದು. ಆದರೆ, ಈ ಪ್ರಪಂಚದಲ್ಲಿ ನನ್ನ ಅನುರಾಗಕ್ಕೆ ಪೂರ್ಣಪಾತ್ರಳಾದವಳು ಆ ಕಾಮಮೋಹಿನಿಯೊಬ್ಬಳೇ. ಅವಳಿಗೆ ನನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿದರೆ, ಅದಕ್ಕಿಂತ ಹೆಚ್ಚಾದ ಉಪಕಾರವಾವುದೂ ಇಲ್ಲ. ಈ ವುಪಕಾರವನ್ನು ನೀನು ಮಾಡಿದರೆ, ನನ್ನನ್ನೂ ನನ್ನ ಸಂಪತ್ತನ್ನೂ ನಿನಗೆ ಅಧೀನವನ್ನಾಗಿ ಮಾಡುವೆನು. ಅದು ಹಾಗಿರಲಿ; ಸಾಯಂಕಾಲವಾಗುತ ಬಂದಿತು. ಈ ದಿನ 

ಅಧ್ಯಾಯ ೧


ರಾತ್ರಿ ನಾನು ಆ ನೀಚನಾದ ದುರ್ಬುದ್ಧಿಯೊಡನೆ ದ್ಯೂತವಾಡಬೇಕೆಂದು ಸಂಕಲ್ಪಿಸಿರುವೆನಷ್ಟೆ : ಇದರಲ್ಲಿ ನಾನೇ ಗೆಲ್ಲಬಹುದೆಂಬ ಭರವಸವು ನನಗೆ ಸಂಪೂರ್ಣವಾಗಿರುವುದು. ಆದರೂ, ಜಯಾಪಜಯಗಳು ಪುಣ್ಯವಶ ವಾದುದರಿಂದ, ಅದನ್ನು ನಿರ್ಧರಿಸುವುದಕ್ಕಾಗುವುದಿಲ್ಲ. ಇದಲ್ಲದೆ, ಈ ದುರ್ಬುದ್ಧಿಯು ಬಹಳ ಕೃತಿಮವಾಗಿ ಆಟವಾಡತಕ್ಕವನು. ಇವನ ಕೃತಿಮವನ್ನು ಹೊರಪಡಿಸುವುದೂ ಕೂಡ ನನಗೆ ಮುಖ್ಯ ಕರ್ತವ್ಯವಾಗಿದೆ. ಒಂದುವೇಳೆ ಇವನ ಮೋಸವನ್ನು ಉದ್ಘಾಟಿಸಿದ ಕೂಡಲೆ ನಮ್ಮಿಬ್ಬರಿಗೂ ಕಲಹವುಂಟಾಗಬಹುದು. ಇದರಲ್ಲಿ ಅವನಿಗಾಗಲೀ ನನಗಾಗಲೀ ಅಪಾಯವೂ ಉಂಟಾಗಬಹುದು. ಹಾಗೇನಾದರೂ ಆಗುವ ಸಂದರ್ಭದಲ್ಲಿ, ಅಗ ನಿನ್ನಿಂದ ಆಗತಕ್ಕುದೊಂದು ಉಪಕಾರವಿರುವುದು. ಅದನ್ನು - ನೀನು ಮಾಡಬೇಕು.
ಪರಂತಪ -ನನ್ನಿಂದ ಏನು ಆಗಬೇಕಾದಾಗ್ಗೂ ಅದನ್ನು ನಾನು ಶಿರಸಾವಹಿಸಿ ಮಾಡುವುದರಲ್ಲಿ ಸಿದ್ಧನಾಗಿರುವೆನು : ಹೇಳು.
ಮಾಧವ-ಆ ನೀಚನು ತನ್ನನ್ನು ಸೋಲಿಸಿದವರನ್ನು ಕಠಾರಿ ಯಿಂದ ತಿವಿದು ಕೊಲ್ಲುವುದುಂಟು. ಹಾಗೆ ಅವನೇನಾದರೂ ನನ್ನನ್ನು ಕೊಲ್ಲುವುದಕ್ಕೆ ಯತ್ನಿಸಿ ನನಗೆ ಅಪಾಯ ಸಂಭವಿಸಿದ ಪಕ್ಷದಲ್ಲಿ, ಒಡ ನೆಯೇ ನನ್ನನ್ನು ಈ ನನ್ನ ವಾಸಗೃಹಕ್ಕೆ ಕರೆದುಕೊಂಡು ಬರಬೇಕು.
ಪರಂತಪ-ಅವಶ್ಯವಾಗಿ ಈ ಕೆಲಸ ಮಾಡುತ್ತೇನೆ.

ಮಾಧವ-ಬಹುಶಃ ಇವನು ನನ್ನನ್ನು ಕೊಲ್ಲಲಾರನು, ಒಂದು ವೇಳೆ ನನಗೆ ಪ್ರಾಣಹಾನಿಯುಂಟಾಗುವ ಸಂದರ್ಭದಲ್ಲಿ, ನೀನು ಮಾಡ ತಕ್ಕ ಕ್ರಮಗಳನ್ನು ಹೇಳುತ್ತೇನೆ ; ಕೇಳು. ನನ್ನ ಕೈ ಪೆಟ್ಟಿಗೆಯಲ್ಲಿ ನನ್ನ ಆಸ್ತಿಯ ವಿನಿಯೋಗದ ವಿಷಯದಲ್ಲಿ ಒಂದು ಉಯಲನ್ನು ಬರೆದು ಇಟ್ಟಿರುತ್ತೇನೆ. ನಾನು ಸತ್ತಪಕ್ಷದಲ್ಲಿ, ನನ್ನ ಶವವನ್ನು ನಮ್ಮ ಅಣ್ಣನ ವಶ ಮಾಡಬೇಕಲ್ಲದೆ, ಈ ಉಯಿಲೂ ಜಾರಿಗೆ ಬರುವಂತೆ ಮಾಡಬೇಕು. ನನ್ನ ಉತ್ತರಕ್ರಿಯಾದಿಗಳಿಗಾಗಿ ನನ್ನ ಕೈಪೆಟ್ಟಿಗೆಯಲ್ಲಿ ಬೇಕಾದಷ್ಟು ದ್ರವ್ಯವನ್ನು ಇಟ್ಟಿರುತ್ತೇನೆ. ೧೦

ಪರಂತಪ ವಿಜಯ


ಪರಂತಪ-ಅಯ್ಯಾ ! ನಿನ್ನ ಆಜ್ಞೆಗನುಸಾರವಾಗಿ ನಡೆಯುವುದ ರಲ್ಲಿ ಯಾವ ಸಂಶಯವೂ ಇಲ್ಲ. ಈ ವಿಷಯದಲ್ಲಿ ನಾನು ನಿನ್ನ ಆಜ್ಞೆ ಯನ್ನು ಕೃತಜ್ಞನಾಗಿ ನೆರವೇರಿಸುವೆನು. ಆದರೆ, ನೀನು ಹೇಳುವುದು ಅತಿ ಪ್ರಮಾದಕರವಾಗಿರುವುದರಿಂದ, ನೀನು ಹೀಗೆ ದುಡುಕುವುದು ಸರ್ವಥಾ ಯುಕ್ತವಲ್ಲ. ಈ ರಾತ್ರಿಯ ಜೂಜಿನ ವಿಷಯದಲ್ಲಿ ನೀನು ಮಾಡಿರುವ ಸಂಕಲ್ಪವನ್ನು ಬಿಡು ದ್ಯೂತದಿಂದ ನಳ ಯುಧಿಷ್ಠಿರಾದಿಗಳೂ ಕೂಡ ಬಹಳ ಕಷ್ಟವನ್ನು ಅನುಭವಿಸಿದ ಸಂಗತಿಯೂ, ಇನ್ನೂ ಅನೇಕರು ದುರ್ವಿಕಾರವಾದ ಅತಿ ಸಂಕಟಗಳಿಗೆ ಭಾಗಿಗಳಾದರೆಂಬುದೂ, ನಿನಗೆ ತಿಳಿಯದ ಅಂಶವಲ್ಲ. ಈಗ ನಷ್ಟವಾದ ದ್ರವ್ಯವು ಹೋದರೂಹೋಗಲಿ ; ಅದನ್ನು ಬೇರೆಯಾದ ಮಾರ್ಗಗಳಿಂದ ಸಂಪಾದಿಸಬಹುದು ; ನೀನು ಖಂಡಿತವಾಗಿ ಈ ರಾತ್ರಿ, ಅವನೊಡನೆ ಜೂಜಾಡಬೇಡ.

ಮಾಧವ-ನನ್ನ ಸಂಕಲ್ಬವು ದುರ್ಸಿವಾರವಾದುದು. ಒಂದುವೇಳೆ ಸೂರ್ಯನಾದರೂ ತನ್ನ ಗತಿ ಯನ್ನು ಬದಲಾಯಿಸಬಹುದೇ ಹೊರತು, ನಾನೆಂದಿಗೂ ನನ್ನ ಸಂಕಲ್ಪವನ್ನು ವ್ಯತ್ಯಸ್ತವನ್ನಾಗಿ ಮಾಡುವನಲ್ಲ. ಪ್ರಿಯ ಮಿತ್ರನೇ ! ಕೇಳು:-ನಾನು ದ್ರವಾರ್ಜನೆಗೋಸ್ಕರ ಖಂಡಿತವಾಗಿ ಜೂಜಾಡತಕ್ಕವನಲ್ಲ. ಅನೇಕ ಜನಗಳನ್ನು ಮೋಸಪಡಿಸಿ ಕೆಡಿಸಿರುವ ಆ ದುರಾತ್ಮನಾದ ದುರ್ಬುದ್ಧಿಯ ಕೃತ್ರಿಮವನ್ನ ಉದ್ಘಾಟಿಸುವುದೇ ನನ್ನ ಮುಖ್ಯ ಸಂಕಲ್ಪವು. ಅವನ ಕೃತ್ರಿಮವನ್ನು ಬಹಿರಂಗಪಡಿಸಿ ಅವನಿಗೆ ತಕ್ಕೆ ಶಿಕ್ಷೆಯನ್ನು ಮಾಡಿಸಿದರೆ, ಈ ನಮ್ಮ ದೇಶವನ್ನು ನಿರ್ಮೂಲಮಾಡುವ ಒಂದು ಒಗೆಯ ಸಾಂಕ್ರಾಮಿಕ ರೋಗವನ್ನು ಅಡಗಿಸಿದಂತಾಗುವುದು. ಆದುದರಿಂದ, ಈ ದಿವಸರಾತ್ರಿ ನಾನು ಇವನ ಕಾಪಟ್ಯವನ್ನು ಹೊರಡಿಸಿ ಇವನನ್ನು ಯಮಾಲಯಕ್ಕೆ ಕಳುಹಿಸುವ ಪ್ರಯತ್ನವನ್ನೇ ಮಾಡುವೆನು. ಅಥವಾ, ಈ ಕಾರ್ಯಕ್ಕಾಗಿ ನನ್ನ ಪ್ರಾಣವನ್ನಾದರೂ ಒಪ್ಪಿಸುವೆನು. ಇದೂ ನನಗೆ ಅಭಿಮತವೇ ಸರಿ. ಈ ಪ್ರತಿಜ್ಞೆಯ ವಿಷಯದಲ್ಲಿ, ಆ ಕಾಮ ಮೋಹಿನಿಯೇ ಬಂದು ನನ್ನನ್ನು ತಾನಾಗಿ ವರಿಸುವುದಾಗಿ ಹೇಳಿ ಅಡ್ಡಿಮಾಡಿದರೂ, ನನ್ನ ಪ್ರತಿಜ್ಞಾಪರಿಪಾಲನಾರ್ಥವಾಗಿ ಅವಳ ಪ್ರಾರ್ಥನೆಯನ್ನೂ ನಿರಾಕರಿಸುವೆನು. ನೀನು ನನ್ನ ಈ ಸಂಕಲ್ಪಕ್ಕೆ ಅಡ್ಡಿಯಾಗಬೇಡ. ಲೋಕ 

ಅಧ್ಯಾಯ ೧

೧೧

ಕಂಟಕನಾದ ಆ ದುರಾತ್ಮನನ್ನು ನಿಗ್ರಹಿಸಬೇಕೆಂಬ ನನ್ನ ಪ್ರಯತ್ನವು ಸಫಲವಾದರೂ ಆಗಲಿ ; ಅಥವಾ, ಇವನನ್ನು ನಿಗ್ರಹಿಸುವುದರಲ್ಲಿ ನನಗೆ ಪಾಣಹಾನಿಯುಂಟಾದರೂ ಆಗಲಿ. ಇವೆರಡೂ ನನಗೆ ಕೀರ್ತಿಕರವಾಗಿಯೇ ಇರುವುವು. ಈ ವಿಷಯದಲ್ಲಿ ನೀನು ಸ್ವಲ್ಪವೂ ವ್ಯಸನಪಡಬೇಡ. "ಜಾತಸ್ಯ ಮರಣಂ ಧ್ರುವಂ" ಎಂಬಂತೆ ಹುಟ್ಟಿದವರಿಗೆ ಮರಣವು ಸಿದ್ಧವಾಗಿರುವುದು. ಇಂಥ ಕಾರ್ಯಕೊಸ್ಕರ ಪ್ರಾಣವನ್ನು ಕೊಡುವವನೇ ಧನ್ಯನೆನ್ನಿಸಿಕೊಳ್ಳುವನಲ್ಲವೆ!
ಪರಂತಪ -ಅಯ್ಯಾ ! ಪೂಜ್ಯನಾದ ಮಾಧವನೆ ! ಈಗಿಗ ನಿನ್ನ ಸಂಕಲ್ಪವು ಅತ್ಯತ್ತಮವೆಂಬ ಭಾವವು ನನ್ನಲ್ಲಿ ನೆಲೆಗೊಂಡಿತು. ಇತರರ ಕ್ಷೇಮಕ್ಕೋಸ್ಕರ ದ್ಯೂತಾಸಕನಾಗಿರುವ ಈ ನಿನ್ನ ಲೋಕವಿಲಕ್ಷಣವಾದ ಅಭಿಪ್ರಾಯವು ನನಗೆ ತಿಳಿಯದಿದ್ದ ಕಾರಣ, ಆ ಕಾರ್ಯದಲ್ಲಿ ನಿನ್ನನ್ನು ನಾನು ವಿರೋಧಿಸಿದೆನು. ಲೋಕದಲ್ಲಿ ಪ್ರತಿದಿವಸವೂ ಎಷ್ಟೋ ಜನರು ಸಾಯುವರು. ಆದರೆ, ಲೋಕಕಂಟಕ ನಿವಾರಣೆಗೋಸ್ಕರ ತನ್ನ ಪ್ರಾಣವನ್ನಾದರೂ ಒಪ್ಪಿಸುವುದರಲ್ಲಿ ಸಿದ್ಧನಾಗಿರುವ ನಿನ್ನಂಥ ದೃಢಸಂಕಲ್ಪರನ್ನು ನಾನು ನೋಡಿರಲಿಲ್ಲ. ನೀನು ಹೋಗು. ಆ ದುರಾತ್ಮನನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿಸು. ನಾನು ನಿನಗೆ ಬೆಂಬಲವಾಗಿ ಬರುವೆನು.
ಮಾಧವ-ಈ ನಿನ್ನಿಂದ ಹೇಳಲ್ಪಟ್ಟ ಮಾತುಗಳೇ ನಿನ್ನ ಧರ್ಮಾಸಕ್ತತೆಯನ್ನು ಪ್ರಕಟಿಸುವುವು. ಅದು ಹಾಗಿರಲಿ; ಇದೋ ಈ ವಜ್ರದ ಉಂಗುರವನ್ನು ತೆಗೆದುಕೊ, ಇದು ನಮಗೆ ವಂಶಪರಂಪರೆಯಾಗಿ ಬಂದಿರತಕ್ಕ ಅಭಿಜ್ಞಾನವಸ್ತು. ನಾನು ಒಂದುವೇಳೆ ಈ ದಿನ ರಾತ್ರಿ ಆ ದುರಾತ್ಮ ನಿಂದ ಸಂಹೃತನಾದ ಪಕ್ಷದಲ್ಲಿ, ಈ ಉಂಗುರವನ್ನು ನನ್ನ ಅಣ್ಣನಿಗೆ ತೋರಿಸು. ಆಗ ಅವನಿಗೆ ನಿನ್ನಲ್ಲಿ ಭಾತೃವಾತ್ಸಲ್ಯವುಂಟಾಗುವುದರಲ್ಲಿ ಸಂಶಯವಿಲ್ಲ: ಇದಲ್ಲದೆ, ನಿನಗೆ ಬೇಕಾದ ಇಷ್ಟಾರ್ಥಗಳನ್ನೆಲ್ಲ ಅವನಿಂದ ಪಡೆಯಬಹುದು. ಹೀಗಲ್ಲದೆ, ಈ ವುಂಗುರುವೇನಾದರೂ ನನ್ನಲ್ಲಿ ಜ್ಞಾತಿ ಮಾತ್ಸರ್ಯವನ್ನಿಟ್ಟಿರುವ ನನ್ನ ಅಣ್ಣನ ಮಗನಾದ ಶಂಬರನಿಗೆ ಸಿಕ್ಕಿದ ಪಕ್ಷದಲ್ಲಿ, ಆಗ ನೀನು ಮೃತ್ಯುವಶನಾಗುವೆ. ಆದುದರಿಂದ, ಈ ವಿಷಯದಲ್ಲಿ ನೀನು ಬಹು ಜಾಗರೂಕನಾಗಿರತಕ್ಕದು. ಈ ರಾತ್ರಿ ದ್ಯೂತಗೃಹಕ್ಕೆ ಬಾ;