ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಕರ್ನಾಟಕ ಗತವೈಭವ


ಗೊತ್ತುಹಿಡಿಯಬಹುದು, ಅಲ್ಲದೆ, ಅದು ರಾಜಕೀಯ ಇತಿಹಾಸ ಸಂಶೋಧನಕ್ಕೂ ನೆರವಾಗುವುದು. 'ಕವಿರಾಜಮಾರ್ಗ' 'ರಾಜಶೇಖರ' 'ಚೆನ್ನಬಸವ ಪುರಾಣ' ಮುಂತಾದ ಗ್ರಂಥಗಳನ್ನು ಇತಿಹಾಸ ದೃಷ್ಟಿಯಿಂದ ಓದಲಿಕ್ಕೆ ಕನ್ನಡಿಗರು ಮೊದಲು ಮಾಡಬೇಕು, ಆದರೆ ಆ ದೃಷ್ಟಿಯಿಂದ ಕನ್ನಡ ವಾಙ್ಮಯವನ್ನು ವ್ಯಾಸಂಗ ಮಾಡುವ ಇತಿಹಾಸ ಭಕ್ತರು ನಮ್ಮಲ್ಲಿ ಎಷ್ಟು ಜನರಿದ್ದಾರೆ? ನಮ್ಮ ಪರಮಮಿತ್ರರಾದ ರಾ|| ರಾಜಪುರೋಹಿತರವರು ಪಂಢರಪುರದ ಇತಿಹಾಸವನ್ನು ಈ ಕನ್ನಡ ವಾಙ್ಮಯದ ಆಧಾರದಿಂದಲೇ ತೆಗೆದಿರುವರು. ಬಿಲ್ಲಣನ 'ವಿಕ್ರಮಾ೦ಕದೇವ ಚರಿತ' ವೆಂಬ ಸಂಸ್ಕೃತ ಕಾವ್ಯವು ಕರ್ನಾಟಕ ಚಕ್ರವರ್ತಿಯಾದ ಚಾಲುಕ್ಯ ವಿಕ್ರಮನ ಜೀವನ ಚರಿತ್ರವೇ ಆಗಿರುವುದು. ಸಾರಾಂಶ:- ನಮ್ಮ ವಾಙ್ಮಯವು ಇತಿಹಾಸದ ಒಂದು ದೊಡ್ಡ ಬೊಕ್ಕಸವೇ ಆಗಿದೆ. ಆ ಬೊಕ್ಕಸದ ಮುದ್ರೆಯನ್ನು ತೆಗೆದು ಅದರೊಳಗಿರುವ ವಸ್ತುಗಳನ್ನು ಪರೀಕ್ಷಿಸದಿದ್ದರೆ ಅದಾರ ತಪ್ಪು!
ಳನೆಯ ಮಹತ್ವದ ಸಾಧನವಾವುವೆಂದರೆ - ಪರದೇಶೀಯ ಪ್ರವಾಸಿಕರು ಬರೆದಿಟ್ಟ ಬರಹಗಳು, ಟಾಲೇಮಿ, ಹುಯೆನ್ಸಾಂಗ, ಫಾಹೈನ್, ಅಲಬುರ್ನಿ, ಇಬ್ನಬತೂತ, ಮಾರ್ಕೊಪೋಲೋ, ಅಬ್ದುಲರಜಾಕ, ಮುಂತಾದವರ ಉಲ್ಲೇಖಗಳಿಂದ ನಮ್ಮ ಇತಿಹಾಸ ಜ್ಞಾನಕ್ಕೆ ಹೆಚ್ಚು ಬೆಳಕು ದೊರೆಯುವುದು. ಚೀನ ದೇಶದ ಪ್ರವಾಸಿಯಾದ ಹುಯೆನ್ಸಾಂಗನು ಬರೆದ ಬಾದಾಮಿಯ ೨ನೆಯ ಪುಲಕೇಶಿಯ ವರ್ಣನೆಯನ್ನೂ ಅಬ್ದುಲರಜಕರು ಬರೆದ ವಿಜಯನಗರದ ವರ್ಣನೆಯನ್ನೂ ಓದಿದರೆ, ನಾವು ಈ ಪುಸ್ತಕದಲ್ಲಿ ಅಡಿಗಡಿಗೆ ಹೇಳಿರುವ ನಮ್ಮ ವೈಭವದಲ್ಲಿ ಅತಿಶಯೋಕ್ತಿಯಿಲ್ಲೆ೦ಬುದೂ ನಮ್ಮ ಅಭಿಮಾನವು ಪಕ್ಷಪಾತ ಮೂಲಕ ವಾದುದಲ್ಲವೆಂಬುದೂ ಮನದಟ್ಟಾಗುವುದು.
ಡೆಯದಾದರೂ ಕಡಿಮೆಯಲ್ಲದ ಎಂಟನೆಯ ಸಾಧನವಾವುವೆಂದರೆ - ಪರಂಪರಾಗತವಾದ ಕಥೆಗಳು, ಸ್ಥಳಮಾಹಾತ್ಮ್ಯಗಳು, ಆಚಾರಗಳು ಮತ್ತು ಧಾರ್ಮಿಕ ವಿಚಾರಗಳು, ಇವುಗಳ ಮಹತ್ವವು ಅಷ್ಟಿಷ್ಟೆಂದು ಹೇಳಲಿಕ್ಕಾಗದು. ಪ್ರತಿಯೊಂದು ಪ್ರಸಿದ್ಧವಾದ ಸ್ಥಳಕ್ಕೆ 'ಸ್ಥಳ-ಪುರಾಣ' ವೊಂದು ಇದ್ದೇ ಇರುತ್ತದೆ. ಅದನ್ನು ಇತಿಹಾಸ ದೃಷ್ಟಿಯಿಂದ ಶೋಧಿಸಿದರೆ ಆ ಊರಿನ ಉತ್ಪತ್ತಿ, ಅದರ ಹಳೆಯ ಹೆಸರು ಮುಂತಾದವುಗಳು ಗೊತ್ತಾಗುವುವು, ಕಥೆಗಳನ್ನೂ ಆಚಾರ