ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


ಎನ್ನ ಬಿಟ್ಟು ನೀನು ಪೋಗೆ
ವಿಷವ ಕುಡಿದು ಸಾವೆನೊ
ವಿರಹದುರಿಯ ತಾಳದೀಗ
ಕಮರಿ ಬಿದ್ದು ಸಾವೆನೊ”

ಎಂದು ನುಡಿದು ದೇವಯಾನಿ
ಬಿಕ್ಕಿ ಅಳುತ ನಿಲ್ಲಲು
ದೈತ್ಯ ಗುರುವು ಎತ್ತಲಿಂದೊ
ಅಲ್ಲಿ ಬಂದು ನಿಲ್ಲಲು

ಕಚನು ನೋಡಿ ದೂರ ಸರಿದು
ಭಯದಿ ಕೈಯ ಮುಗಿದನು
ತಾನು ನಿರಪರಾಧಿಯೆಂದು
ದೃಷ್ಟಿಯಲ್ಲೆ ನುಡಿದನು.

ಒಮ್ಮೆ ಮಗಳ ಒಮ್ಮೆ ಕಚನ
ಗುರುವು ನೋಡಿ ನಿಂದನು,
ತಪದ ಬಲುಮೆ ಮನದ ಒಲುಮೆ
ತೂಗಿ ತೂಗಿ ಸುಯ್ದನು.

ದೇವ ಜಾತಿ ದೈತ್ಯ ಜಾತಿ
ಋಷಿಗಳೆಂಬುದಿಲ್ಲವು
ಹೆಣ್ಣು ಹಡೆದು ಕರಗದಿರುವ
ತಂದೆತಾಯಿಯಿಲ್ಲವು.

೩೧