ಈ ಪುಟವನ್ನು ಪ್ರಕಟಿಸಲಾಗಿದೆ

೧೮೨ / ಕುಕ್ಕಿಲ ಸಂಪುಟ

ಕಣ್ಣಪುರದ ಗೋಪಾಲಕೃಷ್ಣನ ಅಂಕಿತದಿಂದ ರಚಿಸಿರುವುದಲ್ಲದೆ ಕಾವ್ಯಾರಂಭಕ್ಕೆ ಮಧುಪುರದ ವಿಶ್ಲೇಶ್ವರನನ್ನೂ ಸ್ತುತಿಸಿದ್ದಾನೆ. ಅನ್ಯಾದೃಶವಾದ ಪ್ರತಿಭೆಯುಳ್ಳ ಈತನ ಕೃತಿಗಳು ಯಕ್ಷಗಾನ ಸಾಹಿತ್ಯದಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದಿವೆಯಷ್ಟೆ, ಸ್ವತಃ ಕೇರಳದ ಕಥಕಳಿಯನ್ನು ಬಲ್ಲವನಾಗಿ ಯಕ್ಷಗಾನ ದೃಶ್ಯಪ್ರಯೋಗಕ್ಕೆ ಸಂಬಂಧಿಸಿದ ಗಾನ, ನರ್ತನ, ವಾದ್ಯ, ವಾದನ, ವೇಷ, ಭೂಷಣ ಇತ್ಯಾದಿಗಳಲ್ಲಿ ಅಲ್ಲಿಯ ಸಂಸ್ಕಾರ ದಿಂದ ವಿಶೇಷ ಸುಧಾರಣೆಯನ್ನು ರೂಢಿಸಿದವನೆಂದು ಈತನ ಖ್ಯಾತಿಯಿದೆ. ಕವಿಶ್ರೇಷ್ಠ ನೆಂದು ಮಾತ್ರ ಅಲ್ಲ, ಯಕ್ಷಗಾನದ ಮೂಲಪುರುಷನೇ ಇವನು ಎಂಬಂತೆ ಅಂದಿನಿಂದ ಇಂದಿನ ವರೆಗೆ ಜನರು ಇವನನ್ನು ಗೌರವಿಸಿಕೊಂಡು ಬಂದಿದ್ದಾರೆ. ಜಾತಿಯಲ್ಲಿ ಸ್ಥಾನಿಕನಾಗಿ ಕುಂಬಳೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಾಟಾಳಿಯಾಗಿದ್ದನೆಂದೂ, ಕೇರಳದಲ್ಲಿ ವಿದ್ಯಾಭ್ಯಾಸ ಪಡೆದು ಬಹುಶ್ರುತನಾಗಿದ್ದನೆಂದೂ ಪರಂಪರೆಯ ಐತಿಹ್ಯವಿದೆ. ರಾಮಾಯಣದ ಪ್ರಸಂಗಗಳನ್ನು ಮೊತ್ತಮೊದಲಿಗೆ ಕನ್ನಡ ಯಕ್ಷಗಾನದಲ್ಲಿ ರಚಿಸಿ ಪ್ರಯೋಗರೂಢಿಯಲ್ಲಿ ತಂದವನಾದುದರಿಂದಲೂ, ಸಭಾಲಕ್ಷಣವೆಂಬ ಪೂರ್ವರಂಗ ಪ್ರಯೋಗವನ್ನು ನಿರ್ಮಿಸಿದವನಾದುದರಿಂದಲೂ 'ಯಕ್ಷಗಾನಾಚಾರ್ಯ'ನೆಂಬ ಇವನ ಬಿರುದು ಸಾರ್ಥಕವಾಗಿದೆ. ಈ ಸಭಾಲಕ್ಷಣಕ್ಕೂ ಕೇರಳದ ಕಥಕಳಿಯನ್ನೇ ಆದರ್ಶ ವನ್ನಾಗಿ ಇಟ್ಟುಕೊಂಡಿದ್ದನೆಂಬುದು ಅದರಿಂದಲೇ ಸ್ಪಷ್ಟವಾಗಿದೆ. ನಮ್ಮ ಕರ್ನಾಟಕದ ಹಲವೆಡೆಗಳಲ್ಲಿ ಇಂದಿಗೂ ಕೇವಲ ಗ್ರಾಮೀಣ ಜಾನಪದವೆಂಬ ರೀತಿಯಲ್ಲಿ ಅಶಾಸ್ತ್ರೀಯ ಅಥವಾ ಅಸಂಸ್ಕೃತವಾಗಿಯೇ ರೂಢಿಯಲ್ಲಿರುವಂತೆ ನಮ್ಮಲ್ಲಿಯೂ ಇದ್ದಿರಬಹುದಾದ ಯಕ್ಷಗಾನ ದೃಶ್ಯವನ್ನು ಕೇರಳದ ಕಥಕಳಿಯ ಆದರ್ಶದಿಂದ ಶಾಸ್ತ್ರೀಯವಾಗಿ ಪರಿಷ್ಕರಿಸಿ ದವನು ಪಾರ್ತಿಸುಬ್ಬನು ನಮ್ಮ ಜಿಲ್ಲೆಯ ದಕ್ಷಿಣ ಭಾಗದಲ್ಲಿ ರೂಢಿಗೆ ಬಂದ ಈ ಶಾಸ್ತ್ರೀಯ ಪದ್ಧತಿಯು 'ತಂಕಮಟ್ಟು' ಎಂದು ಪ್ರಸಿದ್ಧಿಯನ್ನು ಪಡೆದು ಅತ್ಯಂತ ಜನಪ್ರಿಯವಾಗಿ ನಮ್ಮ ದಕ್ಷಿಣ ಕನ್ನಡಕ್ಕೆ ಯಕ್ಷಗಾನ ಕಲಾಕ್ಷೇತ್ರದಲ್ಲಿ ಹೆಚ್ಚಿನ ಗೌರವ ಸ್ಥಾನವನ್ನು ತಂದುಕೊಟ್ಟಿತು. ಉತ್ತರಕ್ಕೆ ಸುಮಾರು ಉಡುಪಿಯವರೆಗೂ ಪೂರ್ವಕ್ಕೆ ಸುಬ್ರಹ್ಮಣ್ಯ ಕೊಡಗು ಜಿಲ್ಲೆಯ ವರೆಗೂ ವಿಸ್ತರಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗವೇ ತೆಂಕುತಿಟ್ಟಿನ ವಿಶಾಲಕ್ಷೇತ್ರ. ಇದರಿಂದ ಉತ್ತರಕ್ಕೆ ಕುಂದಾಪುರ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಈ ಪ್ರಾಂತಗಳ ಯಕ್ಷಗಾನ ಪದ್ಧತಿಯನ್ನು 'ಬಡಗುತಿಟ್ಟು' ಎಂದು ಕರೆಯುತ್ತಾರೆ.

ಯಕ್ಷಗಾನ ಕವಿಗಳಲ್ಲಿ ಸುಬ್ಬ ಎಂಬ ಹೆಸರಿನವರು ಇನ್ನಿಬ್ಬರಿದ್ದಾರೆ. ಸುಬ್ರಹ್ಮಣ್ಯ, ಸುಬ್ಬರಾಯ ಎಂದು ಕರೆಯಲ್ಪಡುವವರು ಮತ್ತೆ ಕೆಲವರಿದ್ದಾರೆ. ಹನುಮದ್ರಾಮಾಯಣ ವೆಂಬ ಹಳೆಗನ್ನಡ ಕಾವ್ಯವನ್ನೂ, ರುಕ್ಕಿಣೀ ಸ್ವಯಂವರ, ಪಾರಿಜಾತಗಳೆಂಬ ಎರಡು ಯಕ್ಷಗಾನ ಕೃತಿಗಳನ್ನೂ ರಚಿಸಿದ ಆಡುವಳ್ಳಿಯ ವೆಂಕಾರ್ಯನ ಮಗನಾದ ಸುಬ್ಬನು ಒಬ್ಬ, ರಾವಣೋದ್ಭವದ ಮತ್ತು ಶಂಬರಾಸುರ ಕಾಳಗದ (?) ಕರ್ತೃವಾದ (ದೈವಜ್ಞ ವಿಠಲ) ವಿಠಲ, ಗೌರಿಯರ ಪುತ್ರ ನಗರದ ಸುಬ್ಬನು ಮತ್ತೊಬ್ಬ, (ಈತನಿಗೆ ಅಪ್ಪಣ್ಣಿ ಜೋಯಿಸನೆಂದೂ ರೂಢಿಯ ಹೆಸರಿದ್ದಂತೆ ತಿಳಿಯುತ್ತದೆ), ಇವರಿಬ್ಬರೂ ತಮ್ಮ ಕೃತಿ ಗಳಲ್ಲಿ ತಮ್ಮ ಹೆಸರನ್ನೂ, ತಮ್ಮ ತಂದೆ, ತಾಯಿ, ಕುಲ, ಜಾತಿ, ಊರುಗಳ ಹೆಸರು ಗಳನ್ನೂ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಈ ಮೂವರು ಸುಬ್ಬರಲ್ಲಿ ಒಬ್ಬನನ್ನು ಮತ್ತೊಬ್ಬನೆಂದು ಭ್ರಮಿಸಲು ಏನೂ ಆಸ್ಪದವಿಲ್ಲ. ಈ ಮೂವರೂ ಬೇರೆ ಬೇರೆ ಇಷ್ಟದೇವರ್ಕಳನ್ನು ಸ್ತುತಿಸಿರುವುದಂತೂ ಅವರವರ ಕೃತಿಗಳಿಂದಲೇ ಸ್ಪಷ್ಟವಾಗಿದೆ. ಇವರ ರಚನೆಗಳು ಪ್ರತ್ಯೇಕ ಭಿನ್ನ ಶೈಲಿಯವೆಂಬುದೂ ವಿಮರ್ಶನಶಕ್ತಿಯುಳ್ಳವರೆಲ್ಲರೂ