ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೫೭

(ಅಡಿಲ್ಲ', 'ಅಂಡು ಕುಟ್ಟಿ'ಗಳೆಂದರೆ ಅದೊಂದು ಮಲೆಯಾಳಿ ಹಾಸ್ಯ (ಬೆಸ್ತರ ಹಾಸ್ಯ)ದ ವೇಷಗಳು, 'ಕುಟ್ಟಿ ಕುಟ್ಟಿ ಪೇಶಲೇ, ಅಂಡುಕುಟ್ಟಿ ಪೇಶಲೇ' ಎಂದು ಪದ್ಮ ಹಾಡಿಕೊಂಡು ಆ ವೇಷಗಳು ಪ್ರವೇಶಿಸುವುದು. ಗಂಡಹೆಂಡಿರ ಜಗಳಾಟ, ಆಗ ಮಕ್ಕಳ ಪೀಕಲಾಟ, 'ಅಡಿಕೊಲ್ಲಾ' ಎಂದರೆ 'ಹೊಡೆಯಬೇಡ' ಎಂದರ್ಥ.)
ಹಿಂದಕ್ಕೆ ನಮ್ಮ ಆಟದ ವೇಷಧಾರಿಗಳೆಲ್ಲ ಕೇರಳದಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ಬರುತ್ತಿದ್ದವರು. ಅಂದಿನ ಕುಂಬಳಮೇಳ, ಕೂಡ್ಲು ಮೇಳ, ಇಚಲಂಪಾಡಿ, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿದ್ದ ಕುಂಬಳೆ ನರಸಿಂಹ, ಅಯ್ಯಪ್ಪು, ಮಾಡಂಗಾಯಿ, ಕೋಲುಳಿ ಸುಬ್ಬ, ಕಣ್ಣ, ಮಾಧವ, ಅಚ್ಚಮ್ಮನ ಮಾಲಿಂಗ (ಬಣ್ಣದ ಮಾಲಿಂಗ), ಅಂಬು, ಕುಂಞಕಣ್ಣ, ಚಂದ್ರಗಿರಿ ದೊಡ್ಡ ಅಂಬು ಮುಂತಾದ ಕೀರ್ತಿಶೇಷ ವೇಷಧಾರಿ ಗಳಲ್ಲಿ ಹಲವರೂ ಕೇರಳದವರೇ ಆಗಿದ್ದರು, ಆಗಿದ್ದಾರೆ. ನಮ್ಮ ಮೇಳಗಳಲ್ಲಿ ಬಣ್ಣ ಬರೆಯುವುದಕ್ಕೆ, ಚುಟ್ಟಿ ಹಾಕುವುದಕ್ಕೆ ಮತ್ತು ಕಿರೀಟಾದಿ ಆಭರಣಗಳನ್ನು ತಯಾರಿಸಿ ಕೊಡುವುದಕ್ಕಾಗಿ ಕಥಕಳಿಯಲ್ಲಿ ಅನುಭವಸ್ಥರಾಗಿದ್ದ ಕೇರಳದ ತಜ್ಞರನ್ನೇ ನೇಮಿಸಿಕೊಳ್ಳ ಲಾಗುತ್ತಿತ್ತು. ಚುಟ್ಟಿ ಕುತ್ತುವ ವಿಧಾನವು ಉಂಟಾದ್ದೇ ಕಥಕಳಿಯಲ್ಲಿ. 'ಚುಟ್ಟಿ' ಎಂಬ ಮಲೆಯಾಳ ಭಾಷೆಯ ಹೆಸರೇ ಇದಕ್ಕೆ ಸಾಕ್ಷ್ಯವಾಗಿದೆ. ಕನ್ನಿಂಗಾಡು ಎಂಬಲ್ಲಿಯ ನಂಬೂದರಿಯು ಇದನ್ನು ಉಂಟುಮಾಡಿದವನೆಂದು ಪ್ರತೀತಿ ಇದೆ. ಈಗ ಕಥಕಳಿಯಲ್ಲಿ ಚುಟ್ಟಿ ಕುತ್ತುವ ಕ್ರಮಕ್ಕೂ, ಹಿಂದಿನ ಕ್ರಮಕ್ಕೂ ಬಹಳ ವ್ಯತ್ಯಾಸವಿತ್ತೆಂದೂ ಕಥಕಳಿಯ ಚರಿತ್ರೆಯಿಂದ ತಿಳಿಯುವುದು. ಪೂರ್ವದ ಕಥಕಳಿಯಲ್ಲಿ ವೆಟ್ಟತ್ತು ಸಂಪ್ರದಾಯ, ಕಟ್ಟಿಂಗಾಡು ಸಂಪ್ರದಾಯ, ಕಲ್ಲಡಿಕೊಟ್ಟನ್ ಸಂಪ್ರದಾಯ, ಕೊಟ್ಟಾಯಂ ಸಂಪ್ರದಾಯ ಎಂಬಂತೆ ನಾಲೈದು ತರದ ಪ್ರಾದೇಶಿಕ ಪ್ರವೃತ್ತಿಭೇದಗಳಿದ್ದವು. ಅವುಗಳು ಒಂದೊಂದ ರಲ್ಲಿಯೂ ವೇಷಗಳೂ, ನಾಟ್ಯಗಳೂ ಅಷ್ಟಿಷ್ಟು ಭಿನ್ನ ಕ್ರಮದಲ್ಲಿದ್ದವು. ನಮ್ಮ ತೆಂಕಮಟ್ಟಿನ ಯಕ್ಷಗಾನವು ಕಥಕಳಿಯ ಅಂದಿನ ಕೊಟ್ಟಾಯಂ ಸಂಪ್ರದಾಯದಿಂದ ರೂಪುಗೊಂಡಿತೆಂದು ತಿಳಿಯಬಹುದಾಗಿದೆ. ಈಗಿನ ಕಥಕಳಿಯೆಂದರೆ ಮೊದಲಿನ ಆ ವಿಶಿಷ್ಟ ಸಂಪ್ರದಾಯಗಳು ನಷ್ಟಪ್ರಾಯವಾದ ಮೇಲೆ ಅವೆಲ್ಲವುಗಳ ಅಂಶೋದ್ಧಾರದಿಂದ ಪುನರುಜ್ಜಿವನಗೊಳಿಸಿದ ಸಂಕೀರ್ಣ ಸ್ವರೂಪವಾಗಿದೆ. (ಕಥಕಳಿಯ ಅಂದಿನ ಪ್ರಾದೇಶಿಕ ಪ್ರವೃತ್ತಿಗಳ ಕುರಿತು, ಮೈಸೂರು ವಿಶ್ವವಿದ್ಯಾನಿಲಯದ 'ಜಾನಪದ'ವೆಂಬ ಅರ್ಧ ವಾರ್ಷಿಕ ಸಂ. ೨ ಸಂಚಿಕೆ ೨ರಲ್ಲಿರುವ ನನ್ನ ಲೇಖನವನ್ನು ನೋಡಬಹುದು.)
ಈ ವೇಷವಿಧಾನಗಳು ನಾಟ್ಯಶಾಸ್ತ್ರದ ಲಕ್ಷಣಕ್ಕೆ ಅದೆಷ್ಟು ಸಮರ್ಪಕವಾಗಿವೆ ಎಂಬುದನ್ನೂ ಒಂದಿಷ್ಟು ಪರಿಶೀಲಿಸಬಹುದು.
ನಮ್ಮ ಶೃಂಗಾರವೇಷಗಳು ವಾಸ್ತವಿಕ ದೃಷ್ಟಿಯಿಂದ ಸುಂದರವಾಗಿ ಕಾಣುವಂತಿಲ್ಲ. ನಾಲೈದು ಬಣ್ಣಗಳನ್ನು ಮುಖಮುಚ್ಚ ಬಳಿದುಕೊಂಡು, ಬಣ್ಣಗಳು ಸೇರುವ ಸಂದಿನ 'ಗುಡಿಗೆರೆ'ಗಳಲ್ಲಿ ಬಿಳಿ ಚುಕ್ಕೆಗಳನ್ನು ಹಾಕುತ್ತಾರೆ. ರಾಮ, ಲಕ್ಷ್ಮಣ, ಅರ್ಜುನ, ದೇವೇಂದ್ರ, ಕೀಚಕ ಇವೆಲ್ಲ ಶೃಂಗಾರವೇಷಗಳೇ. ಮುಖ್ಯವೇಷಗಳೆಂದೂ, ಕಟ್ಟುವೇಷ ಗಳೆಂದೂ ಕರೆಯುತ್ತಾರೆ. ಬಣ್ಣಗಳನ್ನು ಹಚ್ಚುವ ಸ್ಥಾನಭೇದಗಳಿಂದಲೂ, ಪ್ರತ್ಯೇಕ ಬಣ್ಣಗಳಿಂದ ಚಿತ್ರಿಸುವ ಆಕೃತಿವಿಶೇಷಗಳಿಂದಲೂ ಪ್ರತಿಯೊಂದು ವೇಷವೂ ತನ್ನದೇ ಆದ ವಿಶಿಷ್ಟ ರೂಪವನ್ನು ಪಡೆಯುವಂತೆ ಮಾಡುತ್ತಾರೆ. ಆಯಾ ಭೂಮಿಕೆಗಳ ಸ್ವಭಾವ ಗುಣಧರ್ಮಗಳು ಪ್ರೇಕ್ಷಕರ ಚಿತ್ತಭಿತ್ತಿಯಲ್ಲಿ ಸ್ಥಿರವಾಗಿ ನಿಲ್ಲುವಂತಾಗುವುದೇ ಈ ವರ್ಣಕ್ರಿಯೆಯ ವೈಶಿಷ್ಟ್ಯವಾಗಿದೆ. ಪಾತ್ರಗಳ ಸ್ವಾಭಾವಿಕವಾದ ಮುಖದ ಭಾಗವು