ಮಂಗಳವೇಡೆಯ ಅಗ್ನಿದಾಹ
೧೭೭
ಕಾಮೇಶ್ವರಿ ಮಂಚದಿಂದ ಇಳಿದು ಬಿಜ್ಜಳನ ವಸ್ತ್ರಗಳೊಡನೆ ಬೆರೆತು, ಬಾಗಿಲಿಂದ ಮಂಚದವರೆಗೆ ಅಸ್ತವ್ಯಸ್ತವಾಗಿ ಬಿದ್ದಿದ್ದ ತನ್ನ ಸೀರೆ ಕುಪ್ಪುಸ ಎದೆಕಟ್ಟು ಚಲ್ಲಣಗಳನ್ನು ಬೇರ್ಪಡಿಸಲು ಮೊದಲುಮಾಡಿದಳು. ಕೆದರಿದ ಮುಂಗುರುಳುಗಳೂ ಕಣ್ಣುಗಳ ಮೇಲೆ ಬಿದ್ದು ನಾಲ್ಕಾರುಸಾರಿ ತೊಂದರೆ ಕೊಟ್ಟವು. ಕೊನೆಗವಳು ತನ್ನ ವಸ್ತ್ರಗಳನ್ನು ಬೇರ್ಪಡಿಸಿ ಒಂದೊಂದಾಗಿ ಉಡಲು ಪ್ರಾರಂಭಿಸಿದಾಗ ಬಿಜ್ಜಳನು, "ಆಗಲೆ ಹೋಗುವೆಯ ರಾಣೀ?" ಎಂದನು..
"ಹೋಗದೆ ಮತ್ತೇನು ಮಾಡಲಿ? ನಿಮ್ಮ ಕಟುವಾಕ್ಯಗಳನ್ನು ಕೇಳಿ ಕಿವಿ ಬೇನೆಯಾಗಿದೆ ನನಗೆ. ಮಧ್ಯರಾತ್ರಿ ಕಳೆದಿರಬೇಕು. ನನ್ನ ವಾಸಗೃಹಕ್ಕೆ ಹೋಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ," -ಎಂದು ಬೇಸರದಿಂದ ನುಡಿದಳು ಕಾಮೇಶ್ವರಿ.
ಆಗ ಬಿಜ್ಜಳನಿಗೆ ಅರಿವಾಯಿತು. ಮೊದಲ ದಿನವೇ ಹೀಗಾದದ್ದು ಅನುಚಿತವೆಂದು.
ಕ್ಷಮಿಸು, ರಾಣಿ. ಸರ್ವಾಧಿಕಾರಿಯ ದರ್ಪದಿಂದ ನಿನ್ನೊಡನೆ ಮಾತಾಡಿ, ಗರುಡನಿಗೆ ಉಚಿತವಲ್ಲದ ರೀತಿಯಲ್ಲಿ ವರ್ತಿಸಿದೆ. ನಿನ್ನ ಮನಸ್ಸಿಗೆ ನೋವುಂಟು ಮಾಡಿದೆ." -ಎಂದು ದೈನ್ಯದಿಂದ ನುಡಿದನು ಅವನು.
"ನಿಮ್ಮ ಕಟಕಿ ಅಪವಾದಗಳಂತೆ ಈ ದೈನ್ಯದ ನುಡಿಗಳೂ ನನಗೆ ಅಪ್ರಿಯ. ಈಗ ಎರಡೂ ಬೇಡವಾಗಿದೆ ನನಗೆ."
- "ಹಾಗಾದರೆ ನೀನು ನನ್ನಿಂದ ಅಪೇಕ್ಷಿಸುವುದೇನು?"
"ನೀನು ಚಾಲುಕ್ಯ ರಾಜ್ಯದ ಅತ್ಯುನ್ನತ ಧರ್ಮಾಧಿಕಾರಿಯೆಂದು ಕೇಳಿದ್ದೇನೆ. ಶರಣರ ಮೇಲೆ ವರ್ಣಸಂಕರದ ಆಪಾದನೆ ಬಂದಾಗ ನೀವು ನಡೆಸಿದ ವಿಚಾರಣೆಯನ್ನು ಎಲ್ಲರೂ ಪ್ರಶಂಸಿಸುತ್ತಾರೆ. ನಾನು ಅಸತಿ, ಕುಲಟೆ ಎಂಬ ನಿಮ್ಮ ಆಪಾದನೆಯ ಬಗೆಗೆ ನನ್ನ ಸಮಾಧಾನವನ್ನು ಧರ್ಮಾಧಿಕಾರಿಯಂತೆ ಸಾವಧಾನದಿಂದ ಕೇಳಿ ತೀರ್ಪು ಕೊಡಿರಿ. ನಿಮ್ಮ ಆಪಾದನೆಗಳು ನಿಜವಾದರೆ ನೀವು ಹೇಳಿದ ಶಿಕ್ಷೆಗೆ ನಾನು ಗುರಿಯಾಗುತ್ತೇನೆ. ಆಪಾದನೆಗಳು ಸುಳ್ಳಾದರೆ....."
"ನಿನ್ನ ಇಚ್ಚೆ ಬಂದಂತೆ ನನಗೆ ಶಿಕ್ಷೆ ವಿಧಿಸಬಹುದು. ಈಗ ಹೇಳು, ರಾಣಿ. ನಿನ್ನ ಸಮಾಧಾನವೇನು?" -ಬಿಜ್ಜಳನು ನಮ್ರನಾಗಿ ನುಡಿದನು.
- ಆಗ ಕಾಮೇಶ್ವರಿ ಹೇಳಿದಳು:
"ಕರ್ಹಾಡದ ರಾಜಾಂತಃಪುರದಲ್ಲಿ ರಾಜಕನ್ಯೆಯಾಗಿ ನಾನು ಬೆಳೆದೆ. ಮಗುವಾಗಿದ್ದಾಗಲೆ ತಾಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ನನ್ನ ಪಾಲನೆ ಪೋಷಣೆಗೆ ಗೊತ್ತಾಗಿದ್ದ ಮನೆತನಸ್ಥ ದಾದಿ ರಹಸ್ಯದಲ್ಲಿ ನನ್ನ ತಂದೆಯ