ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ

ಮಲ್ಪೆ ಶಂಕರನಾರಾಯಣ ಸಾಮಗರು ಪ್ರಸಿದ್ಧ ವೇಷಧಾರಿ, ಸ್ವಾತಂತ್ರ್ಯಯೋಧ ಸಾಮಗರು ಯಕ್ಷಲೋಕದಲ್ಲಿ ತುಂಬು ಗೌರವಕ್ಕೆ ಪಾತ್ರರಾದ ವ್ಯಕ್ತಿ. ಅಸ್ಖಲಿತ ವಾಕ್‌ಪ್ರವಾಹ, ಪ್ರಬಲತರ್ಕ, ಪ್ರೌಢಭಾಷೆ, ರಚನಾಕೌಶಲಗಳಿಗೆ ಹೆಸರಾದ ಸಾಮಗರ ಜೀವನ ಯಕ್ಷಗಾನ ರಂಗದ ಇತಿಹಾಸದ ಒಂದು ಮುಖ್ಯ ಅಧ್ಯಾಯ. ಜೀವಿತ ಕಾಲದಲ್ಲಿ ದಂತಕತೆಗಳ ಜನಕರಾದ ಇವರು, ಯಕ್ಷಗಾನದ ಮಾತುಗಾರಿಕೆಗೆ ದೊಡ್ಡ ಗೌರವವನ್ನು ತಂದಿತ್ತ ಕಲಾವಿದ.

ಖ್ಯಾತ ವೇಷಧಾರಿ, ಹರಿದಾಸ, ಉಪನ್ಯಾಸಕಾರ ಶೇಣಿ ಗೋಪಾಲಕೃಷ್ಣ ಭಟ್ಟರು ನಮ್ಮ ಅತ್ಯಂತ ಮಹತ್ವದ ಸಮರ್ಥ ಅರ್ಥ ಧಾರಿ.ಬಹುಶಃ ತಾಳಮದ್ದಳೆ ರಂಗದ ಅತ್ಯಂತ ಶ್ರೇಷ್ಠ ಕಲಾವಿದ, ಅರ್ಥಗಾರಿಕೆಯ ಶಕಪುರುಷ. ಪ್ರಚಂಡತರ್ಕ, ಅತ್ಯಂತ ಆಕರ್ಷಕ ತೂಕದ ಕಂಠ ಭೇದಕ ವಿಮರ್ಶೆ, ನಿತ್ಯನೂತನ ಕಲ್ಪನೆ, ಆಕರ್ಷಕ ಮಂಡನಾಕ್ರಮ, ಅದ್ಭುತ ಪಾತ್ರ ನಿರ್ಮಾಣ ಸಾಮರ್ಥ್ಯದ ಇವರ ಅರ್ಥಗಾರಿಕೆ ಪ್ರತಿಭೆ, ಪಾಂಡಿತ್ಯ, ಕಲಾವಂತಿಕೆಯ ಪಾಕ. ಇವರ ಶೈಲಿ ಸರಳ, ವೇಗ ಆದರ್ಶ, ಸುಂದರ ಅಭಿವ್ಯಕ್ತಿ, ಸೂಕ್ಷ್ಮ ಭಾವಪ್ರಜ್ಞೆ, ಪ್ರಸಂಗದ ಹಿಡಿತ ಇವೆಲ್ಲ ಇವರಿಗೆ ಅತಿ ಸಹಜ. ಇವರೊಬ್ಬ ಮಹಾಕವಿ ಪ್ರತಿಭೆಯ ಮಾತುಗಾರ. ಕೆಲವೊಂದು ಅತಿಗಳನ್ನೂ, ವಿಕ್ಷಿಪ್ತತೆಗಳನ್ನೂ ಬಿಟ್ಟರೆ ತಾಳಮದ್ದಳೆ ಮಾಧ್ಯಮದ ಸಮಸ್ತ ಸಾಧ್ಯತೆಗಳು, ತುಡಿಯುವ ಸಾಮರ್ಥ್ಯದ ಕಲಾವಿದ ಶೇಣಿ.ಈ ಕಲೆ ಯನ್ನು ಲಕ್ಷಾಂತರ ಜನರಿಗೆ ಪ್ರಿಯವಾಗಿಸಿದ ವ್ಯಕ್ತಿ. ಇವರ ಜನಪ್ರಿಯತೆ ಅಸಾಧಾರಣ.

ಇನ್ನೋರ್ವ ಅಗ್ರಮಾನ್ಯ ಪ್ರತಿಭಾವಂತ ಅರ್ಥಧಾರಿ ಎಂದರೆ ವಾಗ್ಮಿ ಲೇಖಕ, ಕವಿ ಚೊಕ್ಕಾಡಿ (ದೇರಾಜೆ) ಸೀತಾರಾಮಯ್ಯ, ಅರ್ಥಗಾರಿಕೆಯ ಅಂತರಂಗಕ್ಕೆ ಕಾವ್ಯ - ನಾಟಕ ಲೋಕವನ್ನು ತುಂಬಬಲ್ಲ ದೇರಾಜೆ, ಹಾಸ್ಯ ಗಂಭೀರಾದಿ ಸಕಲ ಭಾವಗಳಿಗೂ ಹೆಸರಾದ ರಸಜ್ಞ, ನೂತನ ಪಾತ್ರಸೃಷಿ, ಚುಟುಕು ಮೊನಚು ಮಾತಿನ, ಹಲವು ಪದರಿನ ಧ್ವನಿರಮ್ಯತೆಯ ಇವರ ಮಾತುಗಾರಿಕೆ ಕೇಳುವುದು ಒಂದು ನೈಜ ಕಲಾನುಭವ, ಜೀವಂತ ಸೃಷ್ಟಿಶೀಲತೆಯ ದೇರಾಜೆ ಈ ರಂಗದ ಅತ್ಯುತ್ತಮ ಪ್ರತಿನಿಧಿ.
ಸಂಸ್ಕೃತ ವಿದ್ವಾಂಸ, ಲೇಖಕ, ಭಾಷಣಗಾರ ಪೆರ್ಲ ಕೃಷ್ಣ ಭಟ್ಟರು ತಮ್ಮ ಸರಳ, ಗಂಭೀರ, ತೂಕ ಬದ್ಧ ಮಾತುಗಾರಿಕೆಯಿಂದ ವ್ಯವಸ್ಥಿತ ಮಂಡನಾಕ್ರಮ ದಿಂದ ಈ ಕ್ಷೇತ್ರದಲ್ಲಿ ಹಿರಿಯ ಗೌರವಕ್ಕೆ ಪಾತ್ರರಾದ ಪ್ರಮುಖ ಕಲಾವಿದ. ಸುಂದರ ಪೌರಾಣಿಕ ಶೈಲಿ, ರಚನಾ ಕೌಶಲ, ಸಾಟಿಯಿಲ್ಲದ ಸಂವಾದ ಚಾತುರ್ಯ, ಭಾವಪರ ವಶತೆಗಳಿಗೆ ಹೆಸರಾದ ಖ್ಯಾತ ವೇಷಧಾರಿ, ಹರಿದಾಸ ಮಲ್ಪೆ ರಾಮದಾಸ ಸಾಮಗ ಇನ್ನೋರ್ವ ಮುಖ್ಯ ಅರ್ಥಗಾರ. ಕೆಲವೇ ವರ್ಷ ಅರ್ಥ ಹೇಳಿ ನಿವೃತ್ತರಾಗಿರುವ