ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ - ೨

ಪ್ರಸ್ತಾಪವಿಲ್ಲ. ಅಲ್ಲಿ ಶಲ್ಯನು ಕರ್ಣನ ಶರಸಂಧಾನದಲ್ಲಿ ದೋಷವನ್ನು ಹೇಳುತ್ತಾನೆ ಮತ್ತು ಗುರಿಯನ್ನು ಬದಲಾಯಿಸುವಂತೆ ಸಲಹೆ ನೀಡುತ್ತಾನೆ. ಮೂಲ ಭಾರತ ದಲ್ಲಿ ಸರ್ಪಾಸ್ತ್ರವು ಸ್ವಲ್ಪ ಬಗ್ಗಿ ಕೊಂಡಿತ್ತು, (ಅ೦ದರೆ ಬಾಣಸಂಧಾನದಲ್ಲೆ ಕರ್ಣನು ತಪ್ಪು ಮಾಡಿದ್ದನೆಂದು ಸ್ಪಷ್ಟವಾಗಿದೆ.)(ನೋಡಿ : ಎ ಆರ್ ಕೃಷ್ಣಶಾಸ್ತ್ರಿಗಳ ವಚನ ಭಾರತ : ಕರ್ಣಪರ್ವ) ಕುಮಾರವ್ಯಾಸ ಭಾರತದಲ್ಲಿ ಸರಳು ಮೇಲೆ ಬಗ್ಗಿದ ಮಾತಿಲ್ಲ. ಆದರೆ ಶಲ್ಯ “ಸಂಧಾನವೊಡಬಡದೆನ್ನ ಚಿತ್ರದಲಿ” ಎನ್ನು ತಾನೆ. ಮುಂದೆ ಬಾಣವು ಅರ್ಜುನನ ಕೊರಳಿಗೆ ತಾಗದೆ ಕಿರೀಟಕ್ಕೆ ತಾಗುವ ವಿಚಾರದಲ್ಲೂ, ಅದಕ್ಕೆ ಕೃಷ್ಣನು ರಥವನ್ನು ಐದು ಅಂಗುಲ ತಗ್ಗಿಸಿದುದೇ ಕಾರಣವೆಂಬುದರಲ್ಲೂ ಪ್ರಸಂಗ ಸಾಹಿತ್ಯ, ವ್ಯಾಸಭಾರತ, ಕುಮಾರವ್ಯಾಸಭಾರತ - ಈ ಮೂರರಲ್ಲೂ ಏಕ ವಾಕ್ಯತೆಯಿದೆ. (ನೋಡಿ : ಕರ್ಣಪರ್ವ, ಕರ್ಣಾರ್ಜುನ ಪ್ರಸಂಗಗಳು ಪಾವಂಜೆ ಗುರುರಾವ್‌ ಪ್ರಕಾಶಿತ; ಕುಮಾರವ್ಯಾಸಭಾರತ ಕರ್ಣಪರ್ವ ಸಂಧಿ 25, ಮೈಸೂರು ವಿ ವಿ ಪ್ರಸಾರಾಂಗ ಪ್ರಕಾಶಿತ 1974; ಎ ಆರ್ ಕೃ. : ವಚನಭಾರತ)
ಕೃಷ್ಣನ ಸಾರಥ್ಯದ ಚಾಕಚಕ್ಯದಿಂದ ರಥವು ತಗ್ಗಿ ಸರ್ಪಾಸ್ತ್ರವು ಅರ್ಜುನನ ಕಿರೀಟಕ್ಕೆ ತಗಲಿದ ವಿಚಾರ, ಮೂಲಭಾರತ, ಕುಮಾರವ್ಯಾಸ ಭಾರತಗಳಲ್ಲಿ ಬಂದಿದೆ, ಪ್ರಸಂಗದಲ್ಲೂ ಇದೆ. ಆದರೆ ಪೂರ್ವಭಾವಿಯಾಗಿ ಶಲ್ಯನ ಊಹೆಯಲ್ಲಿ ಈ ಮಾತು ಇರುವುದು ಪ್ರಸಂಗದಲ್ಲಿ ಮಾತ್ರ. ("...ನಳಿನಾಕ್ಷನಾತನ ರಥದೊಳಗಿರೆ ನಿನ್ನ ಗೆಲುವರೆ ಬಿಡುವನೇನೈ...”) ಈ ಮಾತು ಮುಂದಿನ ಘಟನೆಗೆ ಸಂಬಂಧಿಸಿಯೇ ಆಡಿದ ಮಾತು; ಶಲ್ಯನ ಮುನ್ನೋಟ ಅದು. ಹಾಗಾಗಿ ಶಲ್ಯನ ಮಾತಿನಲ್ಲಿ “ನಳಿ ನಾಕ್ಷನಾತನ ರಥದೊಳಗಿರೆ ನಿನ್ನ ಗೆಲುವರೆ ಬಿಡುವನೇನೈ” ಎಂಬ ಮಾತಿಗೆ ಹೆಚ್ಚಿನ ಮಹತ್ವ ಬರುತ್ತದೆ, ಬರಬೇಕು.
ಆದರೆ "ನೆಲೆಯರಿಯದೆ ಹೂಡಿದೆ ” ಎಂದು ಅಸ್ತ್ರ ಪ್ರಯೋಗದ ಕ್ರಮವನ್ನು ಶಲ್ಯನು ಆಕ್ಷೇಪಿಸುತ್ತಾನಷ್ಟೆ? ಪ್ರಯೋಗವೇ ತಪ್ಪಾದರೆ ಕೃಷ್ಣನ ಜಾಣ್ಮಯೇಕೆ? ಕೃಷ್ಣನ ಜಾಣ್ಮೆಯಿಂದ ಅರ್ಜುನ ಬದುಕಿಕೊಳ್ಳುತ್ತಾನೆ. ಅಲ್ಲವಾದರೆ ಸಾಯಲೇಬೇಕು ಎನ್ನುವುದಾದರೆ, ಕರ್ಣನ ಶರಸಂಧಾನದಲ್ಲಿ ದೋಷವೇನು ಎಂಬ ಪ್ರಶ್ನೆ ಬರುತ್ತದೆ.
ಇವೆರಡೂ ಸಂಗತಿಗಳನ್ನು ಸಮನ್ವಯ ಗೊಳಿಸುವುದೇ ಇದಕ್ಕಿರುವ ದಾರಿ. ಕರ್ಣನ ಬಾಣವಂತೂ ಪ್ರತ್ಯಸ್ತ್ರವಿಲ್ಲದ ಬಾಣ. ಅದನ್ನು ಕತ್ತರಿಸಲು ಸಾಧ್ಯವಿಲ್ಲ. ಗುರಿತಪ್ಪುವಂತೆ ಮಾಡಬೇಕು ಅಷ್ಟೆ. (ಇದು ಪ್ರಕರಣದ ಧ್ವನಿ) ಕೃಷ್ಣನಂತಹ ಸಾರಥಿ ಪ್ರತಿಕಕ್ಷಿಯಾಗಿರುವಾಗ, ಇಂತಹ ಬಾಣವನ್ನು ಕೊರಳಿಗೆ ಹಿಡಿಯುವುದು ಎಂದರೆ, ತಪ್ಪಿಸಿಕೊಳ್ಳಲು ಅವಕಾಶಮಾಡಿ ಕೊಟ್ಟ ಹಾಗೆಯೇ. ಅಂದರೆ ಸಾರಥಿಯ