ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೆಯ ದಾರಿ/ನೆರಳು

೧೦೯

ಆದರ ನೋಡು ನನ್ನ ಹಿಂದ ಏನೋ-ಯಾರೋ ಇದ್ಧಾಂಗ ಅನಿಸ್ತು."
"ಹಿಂದೇನಿರರ್ತದ ? ನೆರಳು ಇದ್ದೀತು."
"ಹಾಂಗಂತೀಯಾ?ಆದರ ಕತ್ತಲಿದ್ದಾಗನೂ ನೆರಳು ಹ್ಯಾಂಗ ಕಾಣಸ್ತದ?"
ಅವ್ವಾ, ಅದೆಲ್ಲಾ ನಿನ್ನ ಭ್ರಮಾ.ಇಷ್ಟಕ್ಕ ನನ್ನ ಕರದೇನು? ನಾ ಇನ್ನೂ
ಅಡಗೀ ಮಾಡಬೇಕು. ಹುಡುಗ್ರು ಕಾಲೇಜಿಗೆ ಹೋಗೋ ಹೊತ್ತಾತು."
"ನಿನಗ ನಿನ್ನ ಗಂಡಾ-ನಿನ್ನ ಮಕ್ಕಳು ಇವರದ ಚಿಂತಿ.ಮುದುಕಿ ತಾಯಿ
ಹೆದರಿಕೊಂಡು ಪ್ರಾಣಾ ಬಿಟ್ರೂ ಅಡ್ಡಿಯಿಲ್ಲ. ಹೋಗು ಹೋಗು.ಮುಪ್ಪು ಬರೂ
ತನಕ ಮನಷ್ಯಾ ಬದಕಿರಬಾರದವಾ ಮಾಲತೀ,ಅದರ ಸಾವು ನನ್ನ ಕೈಯ್ಯಾಗಿನ
ಮಾತ..... ಹಿಂದಕೊಮ್ಮೆ ನಾ ಸಾಯಬೇಕಂತ ಮನಸು ಮಾಡಿದ್ದೆ.ಆಗ ಸತ್ತಿದ್ರ ಈ
ಜಂಜಾಟ ತಪ್ತಿತ್ತು. ಆವಾಗ ಏನಾತು ಗೋತ್ತದ ಏನು ನಿನಗ-"
ಮಗಳು ಆಗಲೇ ಅಡಿಗೆ ಮನೆ ಸೇರಿದ್ದು ನೋಡಿ ಮುದುಕಿಗೆ ಮತ್ತಷ್ಟು
ಹೆಚ್ಚಾಯಿತು . ಅವಳ ವಟವಟ ಮತ್ತೂ ಜೋರಾಯಿತು.
ಅವ್ವ ಸಿಟ್ಟಾದದ್ದು ಮಾಲತಿಗೆ ಗೊತ್ತಿದೆ. ಆದರೆ ಹಾಗೆಂದು ಅವಳು ಅವ್ವನ
ಮುಂದೇ ಕೂತಿರಲು ಪುರುಸೊತ್ತಿಲ್ಲ. ಇನ್ನೊಂದು ಗಂಟೆಗೆಲ್ಲಾ ಇವರು ಆಫೀಸಿಗೆ
ಹೋಗುವ ಗಲಾಟೆ ; ಅಮ್ಮಾ, ಇನ್ನೂ ಆಗಿಲ್ಲವೇ? ಎಂದು ಕುಣಿಯುವ ಮಗ
ರಾಜ  ; 'ನಾನು ಹೊರಟೆ ಕಾಲೇಜಿಗೆ ಎಂದು ಊಟ ಮಾಡದೆಯೇ ಹೊರಟು ಬಿಡುವ
ಮಗಳು ಬೀನಾ. ಅವಳಿಗಂತೂ ಸ್ವಲ್ಪವೂ ವಿವೇಕವಿಲ್ಲ. ಮದುವೆಯಾಗಿದ್ದರೆ
ಅತ್ತೆಮನೆಯಲ್ಲಿ ಬಾಳಬೇಕಾಗಿದ್ದ ಹುಡುಗಿ. ಸಣ್ಣ ಮಗುವಿನಂತಾಡುತ್ತಾಳೆ.
ಅಜ್ಜಿಯೊಂದಿಗಂತೂ ಮಕ್ಕಳಿಗೆ ಒಂದು ಕ್ಷಣ ಬಗೆಹರಿಯುವುದಿಲ್ಲ. ಇವರೆಲ್ಲರನ್ನು
ಸಮಾಧಾನ ಮಾಡುವ ಹೊತ್ತಿಗೆ ಜೀವ ಬೇಸರವಾಗುತ್ತದೆ.
"ಏ ಮಾಲತೀ "
ಮುದುಕಿಯ ಕರೆಗೆ ಓಗೊಡುವ ಮನಸ್ಸಾಗಲಿಲ್ಲ ಮಾಲತಿಗೆ . ಅವ್ವನ ಹಿಂದಿನ
ಕಥೆ ಕೇಳುವ ಇಚ್ಛೆಯೂ ಇಲ್ಲ, ಕೇಳುತ್ತ ಕೂಡಲು ಸಮಯವೂ ಇಲ್ಲ , ಕೇಳಿದ್ದೇ ಕತೆ.
ಸಾವಿರ ಸಲ ಹೇಳಿದನ್ನೇ ಹೇಳುತ್ತ ಕೂಡುತ್ತಾಳೆ ಅವ್ವ . ಕೇಳುವವರು ನಿರುತ್ಸಾಹ
ತೋರಿಸಿದರೆ ವಿಪರೀತ ಸಿಟ್ಟು ಬರುತ್ತದೆ ಆಕೆಗೆ. ಅದೇ ಕತೆ-ನಲವತ್ತು ವರ್ಷಗಳ
ಹಿಂದೆ ಆಕೆ ಹೆಂಗಸರ್ಯಾರೂ ಕಲಿಯದ ಕಾಲದಲ್ಲಿ ಕಲಿತು ಶಾಲೆಯಲ್ಲಿ
ಮಾಸ್ತರಿಣಿಯಾದ ಸಾಹಸದ ಕತೆ ;ಬಹಳ ದಿನ ಮದುವೆಯನ್ನು ನಿರಾಕರಿಸಿ ನಂತರ
ಸೋದರಮಾವನನ್ನು ಮದುವೆಯಾದ ಕತೆ; ಮೊದಲ ಹೆರಿಗೆ ಬಹಳ ಕಷ್ಟವಾಗಿ
ಮಾಲತಿ ಹುಟ್ಟಿದ ಕತೆ ; ಮತ್ತು -