ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಪರಂತಪ ವಿಜಯ


ದಲೇ ನ್ಯಾಯ ನಿರ್ಣಯವಾಗುವುದಾಗಿಲ್ಲ. ಕಲಿಪ್ರಚುರವಾದ ಈ ಕಾಲವು ವ್ಯತ್ಯಸ್ತಸ್ಥಿತಿಯುಳ್ಳದಾದುದರಿಂದ, ಪಾಪಶೀಲರಿಗೆ ಉತ್ತಮ ಸ್ಥಿತಿಯನ್ನೂ ಸುಕೃತಿಗಳಿಗೆ ಅಧೋಗತಿಯನ್ನೂ ಉಂಟುಮಾಡುವುದು ಸ್ವಭಾವ ಸಿದ್ಧವಾಗಿದೆ. ಮಾಡತಕ್ಕುದೇನು?
ಸಮರಸಿಂಹ- ನ್ಯಾಯನಿರ್ಣಯಕ್ಕಾಗಿ ಈ ಯುದ್ಧವನ್ನು ಏರ್ಪಡಿಸಿದವನೇ ನೀನು. ಇದರಲ್ಲಿ ನಿರಾಕ್ಷೇಪವಾಗಿ ಧರ್ಮವ್ಯವಸ್ಥೆಯಾಗುವುದೆಂದು ನಿಷ್ಕರ್ಷಿಸಿದವನೂ ನೀನು, ಈಗ ಯುದ್ದದಿಂದ ನ್ಯಾಯನಿರ್ಣಯವಾಗುವುದಿಲ್ಲವೆಂದು ನೀನೇ ಹೇಳುತ್ತೀಯಾ? ಇಂಥ ಅಸಂಬದ್ಧ ಪ್ರಲಾಪಗಳಿಗೆ ಯಾರಿಂದ ತಾನೆ ಪ್ರತ್ಯುತ್ತರವನ್ನು ಕೊಡಲಾದೀತು? ನಿನ್ನ ಶತ್ರುವಿಗೆ ತಗುಲ ಬೇಕಾಗಿದ್ದ ನಿನ್ನ ಗುಂಡು, ನಿನ್ನ ಕಡೆಯವನಾದ ಸುಮಿತ್ರನಿಗೆ ತಗುಲಿ, ಅವನೇ ಸಾಯಬೇಕಾದರೆ, ನಿನ್ನ ಅಧರ್ಮವು ಇದರಿಂದಲೇ ಸ್ಪಷ್ಟವಾಗುವುದಲ್ಲವೆ? ಇದೆಲ್ಲ ಹಾಗಿರಲಿ; ಈಗ ಸುಮಿತ್ರನನ್ನು ಕೊಂದ ತಪ್ಪಿತಕ್ಕೆ ಗುರಿಯಾಗತಕ್ಕವರು ಯಾರು?
ಶಂಬರ - ಯುದ್ಧ ನಿರ್ಣಯಕ್ಕನುಸಾರವಾಗಿ ಪಂಚಾಯಿತರು ತೀರ್ಮಾನವನ್ನು ಕೊಡುವ ವಿಷಯದಲ್ಲಿ ಯಾವ ಅಡ್ಡಿಯೂ ಇಲ್ಲ. ಆ ವಿಷಯದಲ್ಲಿ ನಾನು ಬದ್ಧನಾಗಿಯೇ ಇರುತ್ತೇನೆ. ಸುಮಿತ್ರನನ್ನು ಕೊಲ್ಲುವ ವಿಷಯದಲ್ಲಿ ನಾನು ಮನಃಪೂರ್ವಕವಾಗಿ ಪ್ರವರ್ತಿಸಿದವನಲ್ಲ. ಆದುದರಿಂದ, ಆ ವಿಚಾರದಲ್ಲಿ ಮಾತ್ರ ನಾನು ತಪ್ಪಿತಸ್ಥನಾಗಲಾರೆನು.
ಪಂಚಾಯಿತರು - ಇದು ನಮ್ಮ ಪಂಚಾಯಿತರ ತೀರ್ಮಾನಕ್ಕೆ ಒಳ ಪಟ್ಟುದುದಲ್ಲ. ಆ ವಿಷಯವು ಹೇಗಾದರೂ ಇರಲಿ, ಈಗಲೂ ನೀನು ಪರಂತಪನಲ್ಲಿ ಶರಣಾಗತಿಯನ್ನು ಹೊಂದಿ ಅವನ ಮೇಲೆ ನೀನು ಹೊರಿಸಿರುವ ದೋಷಗಳೆಲ್ಲ ಅಸತ್ಯವಾದುವುಗಳೆಂದು ಒಪ್ಪಿಕೊ; ಅದರಿಂದ ನಿನಗೆ ಕ್ಷೇಮವುಂಟು. ಈ ವಿಷಯದಲ್ಲಿ ನಾವು ಅನುಮತಿಸಿರುತ್ತೇವೆ. ನಮ್ಮ ಮಾತನ್ನು ಕೇಳು.
ಶಂಬರ- ಮಹನೀಯರೇ! ನಿಮ್ಮ ಆಜ್ಞೆಯನ್ನು ಶಿರಸಾ ವಹಿಸಿದೆನು. ಅಯ್ಯಾ! ಪರಂತಪನೇ! ನಾನು ದುರಭಿಪ್ರಾಯದಿಂದ ಇದುವರೆಗೂ ನಿನ್ನ ಮೇಲೆ ದೋಷಾರೋಪಣೆಗಳನ್ನು ಮಾಡಿ ನಿನ್ನನ್ನು ಯುದ್ಧಕ್ಕೆ ಕರೆದೆನು.