ಈ ಪುಟವನ್ನು ಪ್ರಕಟಿಸಲಾಗಿದೆ
೧೮ / ಪ್ರಸ್ತುತ

ಮಾತ್ರವೇ ಸಾಲದು. ನೂತನ ಕೃತಿಗಳ ರಚನೆಯೂ ಆವಶ್ಯಕ. ಹೊಸ ರಚನೆಗಳಲ್ಲೂ ಇರುವ ವಸ್ತುವಿಗೇ ಒಂದಿಷ್ಟು ಒಪ್ಪ ನೀಡಿ, ಪರಿವರ್ತಿಸಿ ಹೊಸ ಅರ್ಥ ಲೆಳಸುವುದು ಒಂದು ಕ್ರಮ. ಹಾಗೆಯೇ ಹಳೆಯ ರಚನೆಯನ್ನು ಸೂಕ್ತವಾಗಿ ಸಂಯೋಜಿಸಿ, ಪ್ರಸ್ತುತಗೊಳಿಸುವ ಕೆಲಸದಲ್ಲೆ ಕಲಾವಿದನ ಮುಂದೆ ಅಪಾರ ಸಾಧ್ಯತೆಗಳಿವೆ. ಸಮುದ್ರಮಥನ, ದೇವಿಮಹಾತ್ಮಗಳಂತಹ ಕಥೆಗಳಿಗೆ ತೌಕಿಕ ಆಯಾಮ ಸಾಧ್ಯ. ಇವೆರಡೂ ಸುಧಾರಕ ಮಾರ್ಗಗಳಾದರೆ, ತೀರ ಭಿನ್ನವಾದ ರೀತಿಯಲ್ಲಿ ಪ್ರಾಚೀನ ಕಥಾನಕವನ್ನು ಬೇಕಾದಂತೆ ರಚಿಸುವುದು ಕ್ರಾಂತಿಕಾರಿ ಮಾರ್ಗವೆನ್ನಬಹುದು. ಇವೆರಡರಲ್ಲಿ ಯಾವ ದಾರಿಯಾದರೂ, ಗಮನಿಸಬೇಕಾದ ವಿಚಾರವೆಂದರೆ, ಯಾವದೇ ಕಥಾನಕಕ್ಕೂ, ಕೃತಿಗೂ ಎರಡು ರಚನೆಗಳು ಇವೆ. ಒಂದು ಸ್ಥೂಲವಾದ, ಮೇಲ್ನೋಟದ ರಚನೆ, ಇನ್ನೊಂದು ಅದರ ಒಳಗಿನ ರಚನೆ. ಈ ರಚನೆ ಕೊಡುವ ಧ್ವನಿಗಳು ಬಹಳ ಮುಖ್ಯವಾದುವುಗಳು.
ಒಂದೆರಡು ದೃಷ್ಟಾಂತಗಳಿಂದ ಈ ವಿಚಾರವನ್ನು ಪರಿಶೀಲಿಸಬಹುದು. 'ಜೈಮಿನಿ ಭಾರತ' (ಪಾಂಡವಾಶ್ವಮೇಧ)ದ ಕಥೆ ಮೇಲಿಂದ ಮೇಲೆ, ಒಂದು ಯಾಗದ, ಅದಕ್ಕಾಗಿ ನಡೆದ ದಿಗ್ವಿಜಯದ ಯುದ್ಧಗಳ ಕಥೆ. ಆದರೆ, ಅದರ ಒಳ ರಚನೆಯ ನಡೆಯನ್ನು ನೋಡಿದರೆ, ಅರ್ಜುನನೆಂಬ ಪಾತ್ರ (ಮನುಷ್ಯ ಮಾತ್ರನ ಪ್ರತಿನಿಧಿ - ನರ) ಒಂದು ದೀರ್ಘಪ್ರಯಾಣದ ಮೂಲಕ ಅನುಭವವನ್ನು ಗಳಿಸುತ್ತ ಹೋಗುವ ಕಥೆ ಅದು. ಅವನಿಗೆದುರಾಗುವ ಒಂದೊಂದು ಘಟನೆಯೂ, ಪಾತ್ರಗಳೂ ಭಿನ್ನ ಭಿನ್ನವಾದುವುಗಳು. ಚಂಡಿ, ನೀಲಧ್ವಜ, ಪ್ರಮೀಳೆ, ಸುಧನ್ವ, ಮಯೂರ ಧ್ವಜ, ಚಂದ್ರಸೇನ, ಬಕದಾಲಭ್ಯ- ಹೀಗೆ ಉತ್ತರೋತ್ತರವಾಗಿ ಪರಿಪಕ್ವತೆಯ ಜೀವನದರ್ಶನಗಳುಳ್ಳ ಪಾತ್ರಗಳ ಭೇಟಿ ಅರ್ಜುನನಿಗೆ ಜರಗುತ್ತದೆ. ಹೀಗೆ ಪರಿಭಾವಿಸಿದಾಗ (ಪ್ರಯಾಣ ಮತ್ತು ಶೋಧ: ಜೈಮಿನಿ ಭಾರತದ ಒಂದು ಅಧ್ಯಯನ: ಸಿ ಎನ್. ರಾಮಚಂದ್ರನ್, ಅಪ್ರಕಟಿತ ೧೯೮೭) ನಮಗಾಗುವ ಅನುಭವ ಪ್ರಸ್ತುತವಾದದ್ದು.
ತುಳುನಾಡಿನ ಜಾನಪದ ಕತೆಗಳಾದ ಕಲ್ಕುಡನ ಕತೆ, ಕೋಟಿ ಚೆನ್ನಯರ ಕತೆಗಳನ್ನು ನೋಡಿದರೆ ಕೂಡ ಇಂತಹ ಅಂಶಗಳು ಕಾಣಸಿಗುತ್ತವೆ. ಅವುಗಳಲ್ಲಿ ಚರಿತ್ರೆ, ದಂತಕತೆ, ಪುರಾಣ - ಎಲ್ಲ ಇವೆ. ಅವುಗಳಿಗೆ ಆ ಆ ಸ್ಥಾನವನ್ನಿತ್ತು, ಚರಿತ್ರೆಯ ಅಂಶಕ್ಕೆ ಒತ್ತು ನೀಡಿ ಚಿತ್ರಿಸಬೇಕಾದುದು ಅವಶ್ಯ. ಕೋಟಿ ಚೆನ್ನಯರ ಕತೆಯಲ್ಲಿ, ಅವರು ಅನ್ಯಾಯದ ವಿರುದ್ಧ ನಡೆಸಿದ ದಿಟ್ಟ ಪ್ರತಿಭಟನೆಗಳು, ಕೊನೆಗೆ ಮೋಸದಿಂದ ಅವರ ಕೊಲೆ - ಇವು ನಮಗೆ ಪ್ರಸ್ತುತ ಅಂಶಗಳು. ಉಳಿದ ದಂತ ಕಥಾತ್ಮಕ ವಿವರಣೆಗಳು ಗೌಣ. ಕಲ್ಕುಡನ ಕತೆಯಲ್ಲಿ ಕಲಾವಿದನೊಬ್ಬನ ಸಾಧನೆ, ಅದರ ಕೊನೆಗೆ ಅವನ ಕೈ ಕತ್ತರಿಸಲ್ಪಡುವ ಸನ್ನಿವೇಶ, ತಂದೆ-ಮಕ್ಕಳು ಒಬ್ಬರನ್ನೊಬ್ಬರು ಗುರುತಿಸಲಾರದೆ, ಮತ್ತೆ ಗುರುತಿಸುವ ರಸಾತ್ಮಕ ದೃಶ್ಯ - ಇವು