ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೯೩

ಕಾಲ ಯೋಚಿಸಿ ಬಹುಕಷ್ಟದಿಂದ ಕೊನೆಗೆ ನಾನು ಒಪ್ಪಲು ಮನಸ್ಸು ಮಾಡಿದೆ. ಅಂತರರಾಷ್ಟ್ರೀಯ ಬೃಹತ್ಸಮಸ್ಯೆಗಳ ದೃಷ್ಟಿಯೇ ಮುಖ್ಯ ಆ ರೀತಿ ನಾನು ಒಪ್ಪುವಂತೆ ಪ್ರೇರಿಸಿತು. ಫಾಸಿಸಂ ಮತ್ತು ನಾಜಿಸಂ ವಿರುದ್ಧ ಹೋರಾಟದಲ್ಲಿ ಗೌರವ ರೀತಿಯಿಂದ ಆದರೆ ನಾವು ಪೂರ್ಣ ಭಾಗವಹಿಸಬೇಕೆಂದೇ ನನ್ನ ಇಷ್ಟವಿತ್ತು.

ಆದರೆ ಎಲ್ಲಕ್ಕೂ ದೊಡ್ಡ ಕಷ್ಟ ನಮ್ಮೆದುರು ಇನ್ನೊಂದು ಇತ್ತು. ಅದು ಗಾಂಧೀಜಿಯ ವಿರೋಧ. ಅವರ ಅಹಿಂಸಾ ಮನೋಭಾವವೇ ಅದಕ್ಕೆ ಮುಖ್ಯ ಕಾರಣ. ಯುದ್ಧ ಪ್ರಯತ್ನದಲ್ಲಿ ಸಹಾಯಮಾಡುವುದಾಗಿ ನಾವು ಹಿಂದೆ ಹೇಳಿದಾಗ ಅವರು ವಿರೋಧಿಸಿರಲಿಲ್ಲ. ಪ್ರಾಯಶಃ ಅವರ ಮನಸ್ಸು ಅಸಾಧ್ಯ ತಲ್ಲಣಿಸಿರಬೇಕು. ಕಾಂಗ್ರೆಸ್ಸು ತನ್ನ ನೈತಿಕ ಬೆಂಬಲ ಮಾತ್ರ ಕೊಡಬಲ್ಲದೆಂದು ಅವರು ವೈಸರಾಯ್ಗೆ ಯುದ್ಧ ಆರಂಭವಾದಾಗಲೇ ತಿಳಿಸಿದ್ದರು. ಆದರೆ ಅನಂತರ ಮೇಲಿಂದ ಮೇಲೆ ಕಾಂಗ್ರೆಸ್ ಕೊಟ್ಟ ಹೇಳಿಕೆಗಳ ಉದ್ದೇಶ ಅಷ್ಟು ಮಾತ್ರ ಇರಲಿಲ್ಲ. ಕಾಂಗ್ರೆಸ್ಸು ಹಿಂಸಾತ್ಮಕ ಯುದ್ದದ ಯಾವ ಸಹಾಯದ ಜವಾಬ್ದಾರಿಯನ್ನೂ ವಹಿಸಿಕೊಳ್ಳಬಾರದೆಂದು ಸ್ಪಷ್ಟ ಹೇಳಿದರು. ಈ ತತ್ವಕ್ಕಾಗಿ ತಮ್ಮ ಸಹೋದ್ಯೋಗಿಗಳಿಂದ, ಕಾಂಗ್ರೆಸ್ಸಿನಿಂದ ದೂರ ನಿಂತರು. ಇಂದಿನ ಕಾಂಗ್ರೆಸ್ಸ ಅವರ ಶಿಶುವಾದ್ದರಿಂದ ಅವರನ್ನು ಬಿಟ್ಟು ಕೆಲಸಮಾಡಲು ನನಗೆ ಬಹಳ ಸಂಕಟವಾಯಿತು. ಆದರೂ ಯುದ್ದ ಸಮಯದಲ್ಲಿ ಅವರ ಅಸಹಕಾರ ನೀತಿಗೆ ಕಾಂಗ್ರೆಸ್‌ ಒಪ್ಪಲಿಲ್ಲ. ಬ್ರಿಟಿಷ್ ಸರಕಾರದೊಡನೆ ಹೇಗಾದರೂ ಒಪ್ಪಂದಕ್ಕೆ ಬರಬೇಕೆಂಬ ಕಾತರತೆಯಲ್ಲಿ ತನ್ನ ನೆಚ್ಚಿನ ನಾಯಕನಿಂದ ಸಹ ದೂರ ಸರಿಯಲು ನಿರ್ಧರಿಸಿತು.

ದೇಶದ ಪರಿಸ್ಥಿತಿ ಅನೇಕ ರೀತಿಯಿಂದ ಹದಗೆಟ್ಟಿತ್ತು. ರಾಜಕೀಯದಲ್ಲಂತೂ ಇದು ಸ್ಪಷ್ಟ ಕಾಣುತ್ತಿತ್ತು. ಯುದ್ಧ ಪರಿಸ್ಥಿತಿಯಿಂದ ಕೆಲವು ರೈತ ಕೂಲಿಗಾರರ ಆರ್ಥಿಕ ಪರಿಸ್ಥಿತಿಯು ಉತ್ತಮಗೊಂಡಿದ್ದರೂ ಬಹು ಸಂಖ್ಯಾಕರು ಕಷ್ಟದಲ್ಲಿ ನರಳುತ್ತಿದ್ದರು. ಲಾಭಬಡಕರು, ಯುದ್ಧ ಸರಬರಾಜಿನವರು, ಯುದ್ಧ ಕೆಲಸಕ್ಕೆಂದು ಬೊಗಸೆಗಟ್ಟಲೆ ಸಂಬಳ ಪಡೆಯುತ್ತಿದ್ದ ಅಧಿಕಾರಿಗಳು-ಅದರಲ್ಲೂ ಬ್ರಿಟಿಷರು-ಸುಖದಿಂದ ಇದ್ದರು. ಲಾಭ ಬಡಕತನ ಪ್ರೋತ್ಸಾಹಿಸಿದರೇನೇ ಯುದ್ದ ಪ್ರಯತ್ನ ಯಶಸ್ವಿಯಾಗಬಹುದೆಂದು ಅವರ ಅಭಿಪ್ರಾಯವಿದ್ದಂತೆ ತೋರುತ್ತದೆ. ಲಂಚಗುಳಿತನ ಮತ್ತು ಸ್ವಚ್ಚಾ ಪರಿವರ್ತನೆಗೆ ಮಿತಿಯೇ ಇರಲಿಲ್ಲ. ಸಾರ್ವಜನಿಕರ ಹತೋಟ ಯಾವುದೂ ಇರಲಿಲ್ಲ. ಸಾರ್ವಜನಿಕರ ಟೀಕೆಯು ಯುದ್ಧಪ್ರಯತ್ನಕ್ಕೇ ಅಡ್ಡಿ ಎಂದು ಅದು ಭಾರತದ ರಕ್ಷಣಾ ಶಾಸನದ ಪ್ರಕಾರ ಶಿಕ್ಷಾರ್ಹವಾಯಿತು. ಎಲ್ಲಿ ನೋಡಿದರೂ ಅಧೈರ್ಯವು ಎದ್ದು ಕಾಣುತ್ತಿತ್ತು.

ಈ ಎಲ್ಲ ವಿಷಯ ಗಮನಿಸಿ ಬ್ರಿಟಿಷ್ ಸರಕಾರದೊಡನೆ ಒಪ್ಪಂದಕ್ಕೆ ಬರಲು ಇನ್ನೊಮ್ಮೆ ಪ್ರಯತ್ನ ಮಾಡುವುದು ಅವಶ್ಯವೆಂದು ನಮಗೆ ತೋರಿತು. ಆದರೆ ಆ ಪ್ರಯತ್ನ ಫಲಕಾರಿಯಾಗುವುದೆ? ಆ ಆಶೆಯೇನೂ ಹೆಚ್ಚು ಇರಲಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ದೊರೆಯದ ನಿರಾತಂಕ ನಿರಂಕುಶಾಧಿಕಾರವು ಈಗ ಆಡಳಿತವರ್ಗಕ್ಕೆ ದೊರಕಿತ್ತು. ಅವರ ಮಾತಿಗೆ ಪ್ರತಿ ಹೇಳುವವರೇ ಇರಲಿಲ್ಲ. ತಮಗೆ ಇಷ್ಟ ಬಂದ ಯಾರನ್ನಾದರೂ ವಿಚಾರಣೆ ಮಾಡಿದ್ರೆ ಮಾಡದೆಯೋ ಸುಲಭವಾಗಿ ಸೆರೆಮನೆಗೆ ಕಳುಹಿಸಬಹುದಾಗಿತ್ತು. ಪ್ರಾಂತಗಳಲ್ಲಿ ಗೌರರುಗಳ ಅಧಿಕಾರಕ್ಕೆ ಅಂಕೆಯೇ ಇರಲಿಲ್ಲ. ಇದನ್ನೆಲ್ಲ ಬದಲಾಯಿಸಬೇಕಾದ ಅಸಾಧ್ಯ ಪ್ರಮೇಯವಾದರೂ ಏನು? ಈ ಸಾಮ್ರಾಜ್ಯ ವ್ಯೂಹದ ಕಲಶದಂತೆ ತನ್ನ ಉನ್ನತ ಪದವಿಗೆ ಯೋಗ್ಯವಾದ ರಾಜ ಠೀವಿ ಮತ್ತು ಮರ್ಯಾದೆಗಳಿಂದ ವೈಸರಾಯ್ ಲಾರ್ಡ್ ಲಿನ್ ಲಿತ್ ಗೌ ಇದ್ದ ಸ್ಥೂಲಕಾಯನೂ, ಜಡಮನಸ್ಸಿನವನೂ, ಆದರೆ ಜಗಬಂಡೆಯಂತೆ ಗೋರ್ಕಲ್ಲ ಮೇಲೆ ಮಳೆಗರೆದಂತೆ ಹಳೆಯಕಾಲದ ಬ್ರಿಟಿಷ್ ಬಂಡವಾಳಗಾರನ ಎಲ್ಲ ಗುಣಾವಗುಣಗಳಿಂದ ತುಂಬಿ ಈ ಸಮಸ್ಯೆಯ ಪರಿಹಾರಕ್ಕೆ ಮಾರ್ಗ ಹುಡುಕಲು ಆತನೇನೋ ನಿಜವಾದ ಪ್ರಮಾಣಿಕತೆಯಿಂದ ಪ್ರಯತ್ನ ಪಟ್ಟನು. ಆದರೆ ಆತನ ಬಂಧನಗಳು ಅನೇಕವಿದ್ದವು; ಅವನ ಮನಸ್ಸೆಲ್ಲ ಹಳೆಯ ಕೊರಕಲಿನಲ್ಲಿಯೇ ಇದ್ದು ಹೊಸ ದಾರಿ ಎಂದರೆ ಹಿಂಜರಿಯುತ್ತಿತ್ತು; ಹಳೆಯ ಕಾಲದ ಬ್ರಿಟಿಷ್ ಆಡಳಿತಗಾರರ ಸಂಪ್ರದಾಯ ರೀತಿಯಿಂದ ಆತನ ದೃಷ್ಟಿ ಮಂದವಾಗಿತ್ತು; ಸಿವಿಲ್ ಸರ್ವಿಸ್ ಅಧಿಕಾರಿಗಳು ಮತ್ತು ತನ್ನ ಸುತ್ತಲಿನ

28