ಈ ಪುಟವನ್ನು ಪರಿಶೀಲಿಸಲಾಗಿದೆ
ಮಿಂಚು 247
ಸೌದಾಮಿನಿ ಗೋದ್ರೆಜ್ ಕಪಾಟಿನ ಬಾಗಿಲು ತೆರೆದು, ಐನೂರು ಐನೂರು ರೂಪಾಯಿ ತೆಗೆದು ಅಂಗರಕ್ಷಕರಿಗೆ ಕೊಟ್ಟಳು. “ಭಕ್ಷೀಸ್. ಇವತ್ತಿನವರೆಗಿನ ಈ ತಿಂಗಳ ಸಂಬಳ ಆಫೀಸಿನಿಂದ ತಗೊಳ್ಳಿ.” ಬೋಲಾನಾಥ್ “ದಿಲ್ಲಿಯಲ್ಲಿ ನಮಗೆ ಕೆಲಸ?” ಎಂದು ಕೇಳಿದ. “ನಕುಲದೇವ್ ಆ ಏರ್ಪಾಡು ಮಾಡ್ತಾರೆ.” ಅವರು ಹೋದೊಡನೆ ಪರಶುರಾಮನಿಗೆ ಸೌದಾಮಿನಿ ಅಂದಳು : “ಅಲ್ಲಿ ಒಂದು ಪ್ಯಾಕೆಟಿದೆ, ತೆಗೆ.” ಪ್ಯಾಕೆಟಿನ ಮೇಲೆ ಐದು ಸಾವಿರ ಎಂದು ಬರೆದಿತ್ತು. “ಇನ್ನೊಂದು ಪ್ಯಾಕೆಟ್ ಇದೆಯಾ ನೋಡು.” "ಇದೆ.” “ತೆಗೆ ಮತ್ತೆ. ಮನೆಗೆ ತಗೊಂಡು ಹೋಗಿ ಕೊಡು. ಒಬ್ಬೊಬ್ಬರಿಗೆ ಒಂದೊಂದು, ಈಗಲೇ ಹೋಗು." ಕತ್ತಲಾದ ಬಳಿಕ ಮೇಲಲ್ಲವೇನೊ ಎಂಬಂತೆ ಪರಶುರಾಮ ಅನುಮಾನಿಸಿದ. “ಹೆದರಬೇಡೊ, ನಾನು ಕಷ್ಟ ಪಟ್ಟ ಸಂಪಾದಿಸಿದ್ದು, ಯಜಮಾನಿಯರಿಗೆ ಕೊಟ್ಟ ಬೇಗ್ಬಾ." ಪರಶುರಾಮ ಅಷ್ಟು ಮಾಡಿ ಬಂದ. ಗೋದ್ರೆಜ್ ಬಾಗಿಲನ್ನು ಮರೆ ಮಾಡಿತ್ತು. “ತೆರೆ, ಬೀಗ ಹಾಕಿಲ್ಲ. ಅಲ್ಲಿ ಚಿಲ್ಲರೆ_ಅಂದರೆ ಹತ್ತರ ನೋಟುಗಳು_ಇರಬೇಕು.” “ಸಿಗ್ತು.” “ಆ ಗೇಟ್ ಪೊಲೀಸರಿಗೆ ನೂರು ನೂರು ರೂಪಾಯಿ ಮಾತಾಜಿಯ ಇನಾಂ ಅಂತ ಹೇಳಿ ಕೊಡು. ಇಲ್ದೆ ಹೋದ್ರೆ ನಾಳೆ ಬೆಳಗ್ಗೆ ಹೊರಡುವಾಗ ಅಡ್ಡಕಟ್ಟಿ ಲಂಚ ಕೇಳಿದರೂ ಕೇಳಿದ್ರೆ. ಅವಸರ ಇಲ್ಲ. ಗೇಟಿಗೆ ಹೋಗಿ ಕೊಡು. ಆ ಮಾಲಿಗಳು-" “ಬಂದಿದ್ದಾರೆ.” “ಬರದೇ ಇರ್ತಾರ ? ಎಲ್ಲರಿಗೂ ಗೊತ್ತಾಗಿದೆಯಪ್ಪ. ಅವರಿಗೆ ಐವತ್ತೈವತ್ತು ರೂಪಾಯಿ ಕೊಡು. ಅಡುಗೆಯವರಿಗೆ ಕಸ ಗುಡಿಸುವ ಜವಾನರಿಗೆ ಎಲ್ಲರಿಗೂ ಅದೇ ಮೊತ್ತದ ಹಣ-ಹತ್ತರ ಐದೈದು ನೋಟು." “ಯಾರಾದರೂ ಉಳಿದರೇನೋ ಪರಶು ?" “ಯಾರೂ ಇಲ್ಲ, ಮಾತಾಜಿ." “ಇನ್ನೂ ಎರಡು ಸಾವಿರ ಕಪಾಟ್ನಲ್ಲಿದೆ. ಹೋದ ತಿಂಗಳ ನನ್ನ ಸಂಬಳದಲ್ಲಿ ಉಳಿದದ್ದು, ಮಾಜಿ ಮುಖ್ಯಮಂತ್ರಿ ಕಪಾಟಿನಲ್ಲಿ ಅಷ್ಟೂ-ಇಲ್ಲದಿದ್ದರೆ ಕಿಷ್ಕಿಂದೆಗೇ ಅವಮಾನ. ನಾಳೆಗೆ ಬೇಕಾಗುತ್ತೆ ಅಲ್ಲಿರಲಿ.”