ಈ ಪುಟವನ್ನು ಪ್ರಕಟಿಸಲಾಗಿದೆ

೨೬ / ವಾಗರ್ಥ

ತಾಳಮದ್ದಳೆಗೆ (ಅಂತೆಯೇ ಆಟಕ್ಕೆ) ಆಧಾರವಾಗಿ ಬಳಸುವ ಪ್ರಸಂಗವೆಂಬ ಕಾವ್ಯ- ಅದರ ಸ್ಥಾಯೀ ಅಂಶ ಎoದೆವಷ್ಟೆ. ಈ ಮಾತು ಕೂಡ ಅಂಶತಃ ನಿಜ ಅಷ್ಟೆ, ಏಕೆಂದರೆ ಒಂದು ಪ್ರಸಂಗದಲ್ಲೆ ಹಲವು ಒಳಪ್ರಸಂಗ (ಅಂದರೆ ಪ್ರತ್ಯೇಕ ಒಂದು ಪ್ರದರ್ಶನಕ್ಕೆ ಅರ್ಹವಾದ ಅಂಶ) ಇದೆ. ಉದಾಹರಣೆಗೆ 'ಕೃಷ್ಣ ಸಂಧಾನ'ವೆಂಬ ಪ್ರಸಿದ್ಧ ಪ್ರಸಂಗ ವೊಂದರಲ್ಲಿ (ದೇವಿದಾಸ ವಿರಚಿತವೆನ್ನಲಾದ ರಚನೆ) ಶ್ರೀಕೃಷ್ಣ ಸಾರಥ್ಯ, ಕೃಪ ನೀತಿ, ಸಂಜಯ ದೌತ್ಯ, ಭೀಮ ದ್ರೌಪದೀ ಪ್ರಕರಣ, ಕೃಷ್ಣ ದೌತ್ಯ, ಕರ್ಣಭೇದನ ಎಂಬ ಆರು ಪ್ರತ್ಯೇಕ ತಾಳಮದ್ದಳೆಗಳಿಗೆ ಅವಕಾಶವಿದೆ. ಹೀಗೆ- ಪ್ರತ್ಯೇಕ ಅಂಶಗಳನ್ನು ಆರಿಸಿ ಪ್ರದರ್ಶಿಸಿದಾಗ ಅವು ನೀಡುವ ಅರ್ಥವಂತಿಕೆ, ಮಾಡುವ ಪರಿಣಾಮ ಭಿನ್ನವಾಗುತ್ತದೆ. ಇದು ಒಂದು ಬಗೆಯ ಪಾಠವಿಚಾರ.

ಇನ್ನೊಂದು ನೆಲೆ- ಇನ್ನಷ್ಟು ಮಹತ್ವದ್ದು, ಯಾವುದೇ ತಾಳಮದ್ದಳೆ ಯಲ್ಲೂ ನಿಶ್ಚಿತಗೊಳಿಸಿದ ಪ್ರಸಂಗದ ಎಲ್ಲ ಪದ್ಯಗಳನ್ನು ಹಾಡುವ ಕ್ರಮವಿಲ್ಲ. (ಉದಾ : ಭೀಷ್ಮ ವಿಜಯ- ಹಲಸಿನಹಳ್ಳಿ ನರಸಿಂಹಶಾಸ್ತ್ರಿ- ಪ್ರಸಂಗದಲ್ಲಿ ೪೫೦ಕ್ಕೂ ಮಿಕ್ಕಿ ಪದ್ಯಗಳಿವೆ. ಪ್ರದರ್ಶನಕ್ಕೆ ಹಾಡುವುದು ಸುಮಾರು ೧೦೦-೧೨೦ ಪದ್ಯಗಳನ್ನು), ಇಲ್ಲಿ ಪ್ರಸಂಗ ಸಂಪಾದನ (editing) ಬಹಳ ಮುಖ್ಯ. ಸಾಂಪ್ರದಾಯಿಕ ಕ್ರಮದಂತೆ ಇದು ರಂಗ ದಲ್ಲಿ ನಡೆಯುತ್ತಿತ್ತು. ಭಾಗವತ ಅರ್ಥದಾರಿಗಳೊಳಗಿನ ತತ್‌ಕ್ಷಣದ ಹೊಂದಾಣಿಕೆಯಿಂದ, ಈಗ ಅದನ್ನು ಮೊದಲಾಗಿಯೇ ನಿರ್ಧರಿಸುವ ಪದ್ಧತಿ ಬಂದಿದೆ. ಪದ್ಯಗಳನ್ನು ಮಾತ್ರವಲ್ಲ; ಕೆಲವು ಪಾತ್ರಗಳನ್ನೂ ಬಿಡಬಹುದು; ಬಿಡುವುದುಂಟು. ಉದಾ: ಭೀಷ್ಮವಿಜಯದಲ್ಲಿ ವಿಚಿತ್ರವೀರ್ಯ, ಅಕೃತ್‌ವೃಣ, ನಂದಿ, ಗಂಗೆ, ಗಣಪತಿ, ಭೃಕುತಿ ಹೀಗೆ. ಅಂದರೆ, ಒಂದೊಂದು ಆರಿಸುವಿಕೆಯೇ ಒಂದೊಂದು ಪಠ್ಯವಾಗುತ್ತದೆ. ಇಂತಹ 'ಸಂಪಾದಿತ' ಪ್ರತಿ (ಅಂದರೆ ಆ ಆ ದಿನಕ್ಕೆ ಗುರುತುಮಾಡಿ ಕೊಂಡಷ್ಟು ಭಾಗ)ಯೇ ಸ್ವಯಂ ಒಂದು ಮಂಡನೆಯೂ, ಒಂದು ವಿಮರ್ಶೆಯೂ ಆಗುತ್ತದೆ. ಉದಾಹರಣೆಗೆ ಕೃಷ್ಣಸಂಧಾನ ಪ್ರಸಂಗದಲ್ಲಿ ವಿದುರ, ಭಾನುಮತಿ, ಧೃತರಾಷ್ಟ್ರ ಈ ಪಾತ್ರಗಳನ್ನು ಬಿಟ್ಟು ಅಳವಡಿಸಿದರೆ,, ಭಕ್ತಿ ಮತ್ತು ಕರುಣಾರಸಗಳಿಗೆ ಮಹತ್ವ ಬೇಡವೆಂಬ ಉದ್ದೇಶ ಇದೆ ಎಂದೇ ಅರ್ಥ. ಹಾಗೆಯೇ ಸಂಧಾನ ಭಾಗದಲ್ಲಿ-