ಈ ಪುಟವನ್ನು ಪ್ರಕಟಿಸಲಾಗಿದೆ


ತಾಳಮದ್ದಳೆಯ ಕ್ರಿಯಾತ್ಮಕತೆ



ತಾಳಮದ್ದಳೆಯೆಂಬುದು ಕನ್ನಡದ ಒಂದು ವಿಶಿಷ್ಟ ರಂಗಭೂಮಿ, ಪ್ರಾಯಃ ಅನ್ಯಭಾಷೆಗಳಲ್ಲಿ ಇಲ್ಲದಿರುವ ರಂಗಪ್ರಕಾರವಿದು. ಯಕ್ಷಗಾನ ರಂಗಭೂಮಿಯ ಒಂದು ಕವಲಾಗಿರುವ ಈ ರಂಗಪ್ರದರ್ಶನವು, ಯಕ್ಷಗಾನ ಪ್ರಸಂಗಗಳೆಂಬ ಗೇಯಕಾವ್ಯಗಳ ಪದ್ಯ-ಹಾಡುಗಾರಿಕೆಗಳನ್ನು ಆಧರಿಸಿ 'ಅರ್ಥದಾರಿ'ಗಳೆಂಬ ಮಾತುಗಾರ-ನಟರು ನಿರ್ಮಿಸುವ ಆಶು ನಾಟಕ, ಅಥವಾ ಸರಳೀಕರಿಸಿ ಹೇಳುವುದಾದರೆ, ಬಯಲಾಟದಿಂದ ನೃತ್ಯ, ವೇಷಗಳನ್ನು ಕಳಚಿದಾಗ ಸಿದ್ಧವಾಗುವ ರೂಪ. ಯಕ್ಷಗಾನ ಪ್ರಸಂಗ ಕಾವ್ಯ, ಅದರ ಹಿನ್ನೆಲೆ ಮತ್ತು ಪ್ರದರ್ಶನಾತ್ಮಕ ವಿನ್ಯಾಸವನ್ನು ಗಮನಿಸಿ, ಅದರ ನಾಟಕೀಯ, ಭಾವಾತ್ಮಕ, ಸಾಂಸ್ಕೃತಿಕ ಕ್ರಿಯಾತ್ಮಕತೆಯ ಕೆಲವು ಮಗ್ಗುಲುಗಳನ್ನು ಇಲ್ಲಿ ಪರಿಶೀಲಿಸಿದೆ. ಇಲ್ಲಿ ಕ್ರಿಯಾತ್ಮಕತೆ ಎನ್ನುವಾಗ ಗತಿಶೀಲತೆ, ಸೃಷ್ಟಿಶೀಲತೆ ಮತ್ತು ರಂಗಕ್ರಿಯೆ (action) ಎಂಬ ಅರ್ಥ ಗಳನ್ನು ಸಾಂದರ್ಭಿಕ ಅನ್ವಯದಲ್ಲಿ ಬಳಸಿದೆ.

ತಾಳಮದ್ದಳೆಯು ಪ್ರದರ್ಶಿತವಾಗುವಾಗ, ಅದಕ್ಕೆ ಕೇಂದ್ರವಾಗಿರು ವುದು ಪ್ರಸಂಗವೆಂಬ ಒಂದು ರಚನೆ,..ಹಿಮ್ಮೇಳ, ಅದನ್ನು ಅರ್ಥವಿಸಿ, ಅರ್ಥ ಹೇಳುವ ಕಲಾವಿದ, ನೋಡುವ, ಕೇಳುವ ಪ್ರೇಕ್ಷಕರು- ಇದಿಷ್ಟು ಪ್ರದರ್ಶನ ಸಂಕೀರ್ಣ.' ಕಲಾವಿದನು. ಈ ಪ್ರದರ್ಶನದಲ್ಲಿ ಕ್ರಿಯಾಶೀಲ ನಾಗಿರುವಾಗ ಅವನಿಗೆ ಒಂದು 'ಹಿನ್ನೆಲೆ' ಇದೆ. ಜತೆಗೊಂದು 'ಮುನ್ನೆಲೆ ಇದೆ. ಹಿನ್ನೆಲೆಯಾಗಿ ಪ್ರಸಂಗದ ಪದ್ಯಗಳು, ಆ ಪ್ರಸಂಗದ ಕಥೆಗೆ ಪ್ರೇರಕವಾದ ಕನ್ನಡ ಕಾವ್ಯಗಳು, ಅದರ ಮೂಲವಾಗಿರಬಹುದಾದ ಸಂಸ್ಕೃತ ಕಾವ್ಯಗಳು, ಜಾನಪದ ಮೂಲಗಳು ಮತ್ತು ರಂಗಪರಂಪರೆ- ಇಷ್ಟು ಇರುತ್ತವೆ. ಮುನ್ನೆಲೆಯಾಗಿ ಅವನ ಸಹಕಲಾವಿದರು, ಸಾಮಾಜಿಕ ಸಂದರ್ಭ, ಆ ಆ ದಿನದ ಪ್ರೇಕ್ಷಕರು, ಪ್ರದರ್ಶನದ ಕಾಲ, ಅವಧಿ, ಆ ದಿನದ ಸಾಂದರ್ಭಿಕ ಪ್ರೇರಣೆಗಳು ಮೊದಲಾದುವುಗಳಿವೆ. ಹೀಗೆ ಹಿನ್ನೆಲೆಯು ಹೆಚ್ಚು 'ಸ್ಥಿರ'ವೂ, ಮುನ್ನೆಲೆಯು 'ಚಲ'ವೂ ಆಗಿದ್ದು, ಈ ಮಧ್ಯೆ ಕಲಾವಿದನ ವೈಯಕ್ತಿಕ ಹಿನ್ನೆಲೆಯಾದ ಜಾತಿ, ವೃತ್ತಿ, ಅಧ್ಯಯನ,