೪೪
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
ರಾಮನಲ್ಲಿದ್ದ ಅತಿಪ್ರೀತಿಯ ಬಗ್ಗೆ ಲಕ್ಷಣನು ಕೌಸಲ್ಯೆಗೆ ವಿವರಿಸಿ ಈ ಕೆಳಗಿನಂತೆ ಹೇಳುತ್ತಾನೆ:
ಅನುರಕ್ತೋsಸ್ಮಿ ಭಾವೇನ ಭ್ರಾತರಂ ದೇವಿ ತತ್ತ್ವತಃ |
ಸತ್ಯೇನ ಧನುಷಾ ಚೈವ ದತ್ತೇನೇಷ್ಟೇನ ತೇ ಶಪೇ ॥೧೬॥
“ಹೇ ದೇವಿ! ನಾನು ಮನಃಪೂರ್ತಿಯಾಗಿ ನನ್ನ ಅಣ್ಣನನ್ನು ಪ್ರೀತಿಸುತ್ತೇನೆ. ಇದನ್ನು ನಾನು ಸತ್ಯ, ಧನುಷ್ಯ, ದಾನ, ಯಜ್ಞ ಯಾಗಗಳನ್ನು ಆಣೆ ಇಟ್ಟು ಹೇಳುತ್ತೇನೆ.”೨೫ ಈ ಎರಡೂ ಉದಾಹರಣೆಗಳಲ್ಲಿ ಅತ್ಯಂತ ಪ್ರಿಯರಾದ ವ್ಯಕ್ತಿಗಳ ಮತ್ತು ಪ್ರಿಯವಸ್ತುಗಳ ಉಲ್ಲೇಕವಿದೆ. ತಾಯಿ-ತಂದೆ, ಗುರುಗಳು, ಪತಿ-ಪತ್ನಿ, ಪುತ್ರ-ಪುತ್ರಿ, ಗೆಳೆಯ, ದೇವದೇವತೆಗಳು, ಭಕ್ತರು, ಧರ್ಮಗ್ರಂಥಗಳು, ಪ್ರಿಯವಾದ ವಸ್ತುಗಳು, ಉಪಜೀವಿಕೆಯ ಸಾಧನಗಳು, ಇವೆಲ್ಲವುಗಳನ್ನು ಉಲ್ಲೇಖಿಸಿರುವ ಶಪಥವು ಹೆಚ್ಚು ಪ್ರಭಾವಶಾಲಿ ಎನಿಸುತ್ತದೆ. ವಿಭೀಷಣನಿಗೆ ಆಶ್ವಾಸನೆಯನ್ನು ಕೊಡುವಾಗ ರಾಮನು ತನ್ನ ಮೂರು ಬಂಧುಗಳ ಆಣೆಯಿಟ್ಟು ಈ ರೀತಿ ಎಂದಿದ್ದಾನೆ:
ಅಹತ್ವಾ ರಾವಣಂ ಸಂಖ್ಯೇ ಸಪುತ್ರಜನಬಾಂಧವಮ್ |
ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈ ಭ್ರಾತೃಭಿಃ ಶಪೇ ॥೨೧॥
“ಪುತ್ರ ಬಾಂಧವರ ಸಹಿತ ರಾವಣನನ್ನು ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ; ಇದನ್ನು ನಾನು ನನ್ನ ಮೂರು ಬಂಧುಗಳ ಶಪಥವನ್ನಿಟ್ಟು ಹೇಳುತ್ತೇನೆ.”೨೬ ಸ್ವಂತದ ನುಡಿಯಲ್ಲಿಯ ಸತ್ಯತೆ, ಚಾರಿತ್ರ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಖಚಿತಪಡಿಸಲು ಸ್ವಂತಕ್ಕೆ ಈ ರೀತಿಯ ಶಪಥಗಳನ್ನು ಮಾಡುತ್ತಾರೆ. ನ್ಯಾಯದಾನದ ಸಮಯದಲ್ಲಿ ಶಪಥಕ್ಕೆ ಇಂದು ಕೂಡ ಮಹತ್ವವಿದೆ. ಧರ್ಮಗ್ರಂಥವನ್ನು ಮುಟ್ಟಿ “I speak the truth, the only truth, and nothing but the truth” ಎಂದು ಶಪಥಪ್ರಧಾನ, ಶಪಥಸ್ವೀಕಾರಗಳ ವಿಧಿ ನಡೆಯುತ್ತದೆ.
——————
- ೨೫. ಅಯೋಧ್ಯಾಕಾಂಡ, ೨೧.
- ೨೬. ಯುದ್ಧಕಾಂಡ, ೧೯.