ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೮ ವೈಶಾಖ “ಗಟ್ಟಿಯಾಗಿ ಅನ್ನಬ್ಯಾಡ ಕನೆ. ಊರು ಬುಟ್ಟು ನಾವು ಮಕ್ಕಳು ಮರಿ ಕಳ್ಕೊಂಡು ಹೋಗಬೇಕಾಯ್ತದೆ... ಆ ಫಜೀತಿ ಅನ್ನೋರು ಯಾರು?- ಸುಮ್ಮಕಿರು” ಎಂದು ಅವಳ ಬಾಯಿ ಮುಚಿಸಲು ಹವಣಿಸಿದ. ಜವನಿ, “ಇದೇನು ನಿಮ್ಮ ಹುಚ್ಚು?” ಎಂದು ಹಣೆ ಬಡಿದುಕೊಳ್ಳುತ್ತ “ಇಲಿ ಬೀಳಕ್ಕೆ ಸುರು ಆದರೆ, ನಮ್ಮಟ್ಟಿ ಒಂದರಲ್ಲೆ ಬಿದ್ದಾವ?- ಊರಿನಾಗೆ ಎಲ್ಲಾ ಕಡೆನೂ ಬೀಳವಪ್ಪ. ಇದ ಏಟು ಜನ ಅಂತ ಮುಚ್ಚಿಕಳಕ್ಕಾದದಾತು?” ಎಂದವಳು, ಮರಿಸೆಟ್ಟಿಯನ್ನು ಸಮೀಪಿಸಿ, “ನಿಮ್ಮ ಕಂಕುಳಲ್ಲಾಗಲೀ, ತೊಡೇಲಾಗಲಿ, ಏನಾರ ಗಂಟು ಎದ್ದಿದ್ದ ನೋಡಕನ್ನಿ, “ದನಿ ತಗ್ಗಿಸಿರ ಕೇಳಿದಳು. ಮರಿಸೆಟ್ಟಿ ಜವನಿ ಸೂಚಿಸಿದ ಎಡೆಗಳಲ್ಲಿ ಮುಟ್ಟಿನೋಡಿ, “ಸದ್ಯಕ್ಕೆ ಯಾ ತಾವೂದೆ ಗಂಟು ಕಾಡ್ತಾ ಇಲ್ಲ!” ಎಂದು ನಿಡಿದಾಗಿ ಉಸಿರು ಬಿಟ್ಟ. ಜವನಿ ಇನ್ನೂ ನಿದ್ರೆ ಮಾಡುತ್ತ ಮಲಗಿದ್ದ ಮಕ್ಕಳನ್ನು ಎಬ್ಬಿಸಿ, ಅವಕ್ಕೂ ಜ್ವರ ಬಂದಿಲ್ಲವೆಂಬುದನ್ನು ಖಾತರಿಪಡಿಸಿಕೊಂಡಳು. ಆದರೆ ತನ್ನ ಪತಿಗೆ “ಜ್ವರ ಈಗತಾನೆ ಸುರು ಆಗದೆ... ಮುಂಬೈ ಪಳಗಿನ ಗಂಟು ಕಾಣಿಸಿಗೃತ್ತದೊ, ಏನೋಯಾರು ಯೋಳೋವಂಗಿದ್ದು?... ಏನೋ ಆ ಬಿಸಿಲು ಮಾರಮ್ಮ ನೇ ಕಾಯಬೇಕು!...” ಎಂದು ಅರಸಿನ ಪಾವುಡೆಯಲ್ಲಿ ನಾಕಾಣೆಯನ್ನು ಆ ದೇವಿಗೆ ಕಾಣಿಕೆಯಾಗಿ ಕಟ್ಟಿಟ್ಟು, “ತಾಯಿ, ನಮ್ಮಟ್ಟಿ ಕಾಯಿ ಕವ್ವ” ಎಂದು ಬೇಡಿದಳು. ಆದರೆ ಎಣಿಸಿದ ಹಾಗೆ ಇಲಿಗಳು ಸತ್ತುಬಿದ್ದಿದ್ದು ಅವಳೊಬ್ಬಳ ಹಟ್ಟಿಯಲ್ಲೇ ಏನಲ್ಲ. ಊರಿನ ಇನ್ನೂ ಕೆಲವು ಮನೆಗಳಲ್ಲಿ ಏಳೆಂಟು ದಿನಗಳಿಂದಲೂ ಸತ್ತು ಬೀಳುತ್ತಲೇ ಇದ್ದವು. ಮೂರೊ ನಾಲ್ಕೂ ಮಂದಿ ಆಗಲೆ ಸತ್ತು, ಆ ಹೆಣಗಳನ್ನು ಮನೆಯವರು ಗೋಪ್ಯವಾಗಿ ಮಣ್ಣು ಮಾಡಿದ್ದರು. ಈ ಸಮಾಚಾರ ಒಳಗೇ ಗುಡುಗಾಡುತಿದ್ದ ಬಾವಿಗಳಲ್ಲಿ ಹೆಂಗಸರು ನೀರು ಸೇದುವಾಗ, ಕೆರೆ ಕಟ್ಟೆ, ಕೊಳಗಲ್ಲಿ ಬಟ್ಟೆ ಒಗೆಯುವಾಗ; ಗಂಡಸರು ಚಾವಡಿ, ಅಶ್ವತ್ಥಕಟ್ಟೆಗಳ ಮೇಲೆ ಕುಳಿತಾಗ ಸ್ಫೋಟಗೊಳ್ಳುತ್ತಿತ್ತು. ಭಯದಿಂದ ಅದರ ಬಗ್ಗೆ ಮಾತು ಸಿಡಿಸಿದವರು, ಮರುಗಳಿಗೆಯಲ್ಲಿ “ಅಯ್ಯೋ, ಊರು ಅದಮ್ಯಾಲೆ, ಕಾಯಿಲೆ ಕಸಾಲೆ ಬರತೋದೆ ಇಲ್ವಾ?- ಇದಕ್ಯಾಕೆ ಎದರಬೇಕು?” ಎಂದು ಸಮಾಧಾನ ತಂದುಕೊಳ್ಳುವರು. ಸಿವುನಿಗೆ ತನ್ನ ತಾಯಿ ಕಲ್ಯಾಣಿಯು ಸತ್ತದ್ದು ಪ್ಲೇಗಿನಿಂದಲೆ ಎಂಬುದು ಈಗ ಖಚಿತವಾಗಿತ್ತು. ಕಲ್ಯಾಣಿಯ ಕಂಕುಳಲ್ಲಿ ಎದ್ದಿದ್ದ ಗಂಟೇ ಅವಳ ನಂಬಿಕೆಗೆ