ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಹಳ್ಳಿಯ ಚಿತ್ರಗಳು

“ಆಭಾಸ, ಅಪಾಯಕರ, ಶುದ್ದ ಕಾಡುಮನುಷ್ಯ” ಎಂದು. ಆಭಾಸವೋ ಅಪಾಯಕರವೋ ಅವರು ಮಾಡಿದಷ್ಟು. ಗಾಡಿಯವನಿಗೆ ಎಚ್ಚರವಾಯಿತು. ಅವನು ಕೆಳಕ್ಕೆ ಇಳಿದು ಗಾಬರಿಯಿಂದ "ಏನು ಸ್ವಾಮಿ ಯಾತಕ್ಕೆ" ಎಂದನು. ಜೋಡಿದಾರರು ಮಾತನಾಡಲಿಲ್ಲ. ಹಳ್ಳಿಯವರೆಲ್ಲಾ ಪ್ರಭಾತದಲ್ಲಿ ಉಂಟಾದ ಈ ಮಂಗಳ ಧ್ವನಿಯನ್ನು ಕೇಳಿ, ಹೊರಕ್ಕೆ ಬಂದರು. ಮಹೋದರರಾಗಿ ಕಣ್ಣಿನಲ್ಲಿ ಕೆಂಡವನ್ನುಗುಳುತ್ತಿರುವ ಜೋಡಿದಾರರು, ಅವರ ಎದುರಿಗೆ ಮಿಟಮಿಟನೆ ಕಣ್ಣನ್ನು ಬಿಡುತ್ತಿದ್ದ ಗಾಡಿಯ ಆಳು. ಊರಿನ ಪಟೇಲನು ಬಂದು ಜೋಡಿದಾರರನ್ನು ಕುರಿತು 'ವಿಚಾರವೇನು ಬುದ್ದಿ' ಎಂದನು. ಜೋಡಿದಾರರ “ವಿಚಾರವೇನಯ್ಯ, ನಾನು ಹತ್ತು ರೂಪಾಯಿ ಕೊಟ್ಟು ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡುದು ಇವನು ಮಲಗುವುದಕ್ಕಾಗಿಯೇ” ಎಂದರು. ೧೪ ಮೈಲಿಗೆ ಹತ್ತು ರೂಪಾಯಿಗಳನ್ನು ಕೊಟ್ಟುದನ್ನು ಕೇಳಿ ಹಳ್ಳಿಯವರ ಸಹಾನುಭೂತಿಯೆಲ್ಲವೂ ಜೋಡಿದಾರರ ಕಡೆಗೆ ತಿರುಗಿತು. ಗಾಡಿಯವನದೇ ತಪ್ಪೆಂದು ಅವರೆಲ್ಲರೂ ಏಕವಾಕ್ಯದಿಂದ ಹೇಳಿಬಿಟ್ಟರು. ಆದರೆ ಜೋಡಿದಾರರು ಬಾಯಿ ಬಡದುಕೊಂಡುದರ ಅರ್ಥವು ಯಾರಿಗೂ ತಿಳಿಯಲಿಲ್ಲ. ನನಗೂ ತಿಳಿಯಲಿಲ್ಲ.

ಗಾಡಿಯವನಿಗೆ ಆದ ಈ ಅಪಮಾನವನ್ನು ಕಂಡು ಜೋಡಿದಾರರಿಗೆ ಅವನಲ್ಲಿ ಬಹಳ ಕರುಣೆಯುಂಟಾಯಿತು. ಅವನಿಗೆ ಅವಮಾನ ಮಾಡಬೇಕೆಂದು ಅವರಿಗೆ ಮನಸ್ಸಿರಲಿಲ್ಲ. ಆದರೆ ೯ ರೂಪಾಯಿ ಕೊಡುತ್ತೇನೆಂದು ಹೇಳಿದ ತನ್ನ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂಬ ಕೋಪ. ಒಂದು ರೂಪಾಯಿಗಾಗಿ ಅವರು ಹಿಂದೆಮುಂದೆ ನೋಡುವವರಾಗಿರಲಿಲ್ಲ. ಆದರೆ ಗಾಡಿಯವನು ತಮ್ಮ ಮಾತನ್ನು ತೆಗೆದುಹಾಕದೆ ಪ್ರಯಾಣ ಮುಗಿಸಿ ಹಿಂದಿರುಗಿದನಂತರ “ಸ್ವಾಮಿ ಏನಾದರೂ ಇನಾಂ ನಿಮ್ಮ ಹೆಸರಾಗಿ ಕೊಡಿ” ಎಂದು ಕೇಳಿದ್ದರೆ ಅವರು ಒಂದಲ್ಲ ಎರಡು ರೂಪಾಯಿಗಳನ್ನು ಕೊಟ್ಟುಬಿಡುತ್ತಿದ್ದರು. ತಾನು ಹೇಳಿದ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂದು ಅವರ ಮನಸ್ಸಿನಲ್ಲಿ ಅವಮಾನವು ಕುದಿಯುತ್ತಿದ್ದಿತು. ಸ್ವಭಾವದಿಂದ ಕೋಮಲರಾದ ಅವರಿಗೆ, ಗಾಡಿಯವನಿಗಾದ ಈ ಅವಮಾನವನ್ನು ಸಹಿಸುವುದು ಆಗಲಿಲ್ಲ. ಪಾಪ ಏನೋ ಪ್ರಾಣಿ