ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ಮುಗಿದು ಇನ್ನೊಂದು ಆರಂಭವಾಯಿತು. ಅದು ಆಕೆಯ ಮದುವೆ. ನಾಲ್ವತ್ತು ಮೈಲಿಗಳಾಚೆಯ ರಾಯನಹಳ್ಳಿಯ ಸದ್ಗೃಹಸ್ಥರೊಬ್ಬರು ಒಮ್ಮೆ ಬಂದು, ಆ ಎಳೆಯರ ವೃಂತ್ತಾಂತವನ್ನಯ ಪರಿಚಿತರಿಂದ ತಿಳಿದು, ಅಮ್ಮಿಯ ಜಾತಕವನ್ನು ಕೇಳಿ ಒಯ್ದರು. ಆಮೇಲೊಂದು ದಿನ ಅಣ್ಣ ರಾಮಕೃಷ್ಣ ಹೇಳಿದ:"ಅಮ್ಮಿ, ಆದಿನ ಬಂದಿದ್ದರಲ್ಲಾ, ಅವರು ನಿನ್ನನ್ನ ಸೊಸೆಯಾಗಿ ಕರಕೋತಾರಂತೆ."ಅವನ ಸ್ವರದಲ್ಲಿ ಸಂತೋಷದ ನಡುಕವಿತ್ತು: ದು:ಖದ ಆವೇಗವಿತ್ತು, ಆದರೆ ಅಮ್ಮಿ ಕಿಡಿಬೆಂಕಿಯಾಗಿ ಅತ್ತು ರಂಪಮಾಡಿದಳು."ಹೋಗಣ್ಣ, ನಾ ಒಲ್ಲೆ....ಊಂ....""ಹುಚ್ಚಿ,ಗಂಡ ಬರ್ತಾನೆ ಅಂದರೆ ಒ-ಲ್ಲೆ-ಅಂತಾಳೆ,""ಊಂ......ಹೂಂ......"ಮದುವೆ _ಅಮ್ಮಿಗೆ ಅದೇನೋ ಹೊಸ ವಿಷಯ, ಆ ವಿಷಯ ಯೋಚಿಸಿದಾಗ ಅವಳಿಗೆ ಒಂದು ರೀತಿಯ ಸಂತೋಷವಾಗಿತ್ತಿತ್ತು. "ಅಂತೂ ನನ್ನನ್ನೂ ಬಿಟ್ಟು ಗಂಡನ ಮನೆಗೆ ಹೋಗ್ತೀಯಲ್ಲವೇ!" ನಗೆ ಮಾತೆಂದು ರಾಮಕೃಷ್ಣ ಹೇಳಲು ಹೊರಟಿದ್ದ, ಆದರೆ ಆ ಅಗಲುವಿಕೆಯ ಸಾಧ್ಯತೆ ಅವನ ಕಣ್ಣೆದುರು ನಿಂತಾಗ, ಹೃದಯ ನಡುಗಿತು.ಅಣ್ಣನನ್ನು ಬಿಟ್ಟು ಹೋಗುವ ಪ್ರಮೇಯ ಅಮ್ಮಿ ಗೊಳೋ ಎಂದು ಅತ್ತಳು,ಆದರೆ ರಾಯನಹಳ್ಳಿಯ ಸದ್ಗೃಹಸ್ಥರು ಮತ್ತೊಮ್ಮೆ ಬಂದು ಮೃದುವಾಗಿ ಶಾಂತವಾಗಿ ಮಾತನಾಡಿದಾಗ, ಅಣ್ಣ ರಾಮಕೃಷ್ಣ ಸಂತೋಷದಿಂಧ , ಕಂಬನಿ ತುಂಬಿದ ಕಣ್ಣುಗಳಿಂದ,"ಆಗಲಿ ಆಗಲಿ"ಎಂದಾಗ,ಅಮ್ಮಿಯ ಮನಸ್ಸು ಮೆಲ್ಲಮೆಲ್ಲನೆ ಬದಲಾಯಿತು. ಜೀವನ ಹಳ್ಳಿಯ ಶಾನುಭೋಗರ ಆ ಎಳೆಯರ ಪರವಾಗಿ ಹಿರಿತನಸ ಜವಾಬ್ದಾರಿ ಹೊತ್ತರು, ಮಂಗಳವಾದ್ಯ... ಹಳ್ಳಿಯ ಮುತ್ತೈದೆಯರು ಕೈಯಲ್ಲಿ ಅಮ್ಮಿ ಅನುಭವಿಸಿದ ಸುಖಕರ ಸಂಕಟ...ನೋಡದ ತಂದೆಯ,ನೋಡಿಯೂ ನೆನಪಿಲ್ಲದ ತಾಯಿಯ ಸ್ಮರಣೆ...ತನ್ನನ್ನು ಆರು ವರ್ಷ ಸಾಕಿದ ಅಜ್ಜಿ.... ಅಣ್ಣ ರಾಮಕೃಷ್ಣ...ಇನ್ನೊಂದು ಕೊಠಡಿಯಲ್ಲಿ ಎಲ್ಲರ ಗಮನದ ಕೇಂದ್ರ ತಾನೆಂಬ ಅಭಿಮಾನದಿಂದ ಕುಳಿತಿದ್ದ ಆ ಹೊಸ ಹುಡುಗ- ಮದುವಣಿಗನ ದಿಬ್ಬಣ ಬಂದ ದಿನ ಶಾನುಭೋಗರ ಮಡದಿ–ಮಗಳು, ಗವಾಕ್ಷಿಯ ಎಡೆಯಿಂದ, ವರರಾಯನನ್ನು ಆಮ್ಮಿಗೆ ಕದ್ದು ತೋರಿಸಿದ್ದರು, ಗಾಡಿಯ ಪ್ರವಾಸದ ಬಳಲಿಕೆಯೂ ಆಗಿರಲಿಲ್ಲವೇನೊ ಅವನಿಗೆ..ಗೋದಿಗೆಂಪಾದ ಮೈಬಣ್ಣ...ತೋರಿಕೆಯ ಗಾಂಭೀರ್ಯ.. ಆದರೂ ಕುತೂಹಲದಿಂದ ಅತ್ತಿತ್ತ ಕಳ್ಳ ನೋಟ ಬೀರುತ್ತಿದ್ದ ಕಣ್ಣುಗಳು.... ಈ ಗುಣ ವಿಶೇಷಗಳೊಂದೂ ಅಮ್ಮಿಗೆ ಕಾಣಿಸಿರಲಿಲ್ಲ. ಹಾಗೆ ಬಣ್ಣಿಸಿ ಹೇಳಿದವರು ಶಾನುಭೋಗರ ಮನೆಯವರು. ಅಮ್ಮಿಯ ಕಣ್ಣಿಗೆ ಕಂಡುದು, ಅಣ್ಣನಿಗಿಂತ ಸ್ವಲ್ಪ ಹೆಚ್ಚು ಮೈತುಂಬಿಕೊಂಡು ಸುಂದರನಾಗಿ ತೋರಿದ ಹುಡುಗ: ಆಕೆಯ ಕಿವಿಗೆ ಬಿದ್ದುದು " ಮನ್ಮಥ ಕಣೇ ,ಮನ್ಮಥ !" ಎಂಬ ಪಿಸುಮಾತು. ಮದುವೆ ಮುಗಿದು ಮನ್ಮಥನೊಡನೆ ರತಿ ಹೊರಟು ನಿಂತಳು. "ಅಮ್ಮಿ, ನನ್ನನ್ನು ಮರೀಬೇಡ,ಅಮ್ಮಿ-ಅಮ್ಮಿ--"