ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೧
ಪ್ರೊಫೆಸರ್ ಈ ನಾರಾಯಣನ್ ನಾಯರ್. ಹೆಂಗಸರ ಜನಸಂದಣಿಯಿರುವ ಆ ಭಾಗದಲ್ಲಿ ಬಿಳಿಯ ಸೀರೆಯುಟ್ಟು ಸ್ವಯಂ ಸೇವಕರಿಗೆಲ್ಲ ನಿರ್ದೇಶನ ನೀಡುತ್ತಿರುವ ಆ ಸೋದರಿಯನ್ನ ಕಂಡಿರಾ? ಆಕೆಯೇ ಶ್ರೀದೇವಿಯಮ್ಮ, ಕುಂಞಂಬುವಿನ ಕೈಹಿಡಿದಾಕೆ. {gap}}ಉತ್ಸವಕ್ಕೋಸ್ಕರ ಹಾಕಿರುವ ಸಾಲು ಅಂಗಡಿಗಳಾಚೆ ಸಂಘದ ನೇತೃತ್ವದಲ್ಲಿ ಉಚಿತ ಪಾನೀಯದ ಉಸ್ತುವಾರಿ ನೋಡುತ್ತಿರುವ ಆ ಯುವಕ. ಆತನೇ ಅಬೂಬುಕರನ ತಮ್ಮ. ಎಷ್ಟೊಂದು ಚುರುಕಾಗಿದ್ದಾನೆ, ಅಲ್ಲವೆ? ಆತನ ಬಳಿಯಲ್ಲೇ ತಲೆಯ ಮೇಲೆ ಸೆರಗು ಹಾಯಿಸಿ ಊರುಗೋಲನ್ನೂರಿ ನಿಂತಿರುವ ಆಕೆಯೇ ಅಬೂಬಕರನ ತಾಯಿ....
ಬನ್ನಿರಿನ್ನು. ನೀವು ವೀರರ ಕುಟುಂಬಗಳ ಪರಿಚಯ ಮಾಡಿಕೊಂಡುದಾಯಿತು. ಭೋಜನದ ಕಾರ್ಯಕ್ರಮ ಮುಗಿಸೋಣ, ಹೀಗೆ ಬನ್ನಿ. ಹಬ್ಬದ ಅಡುಗೆ, ಭಕ್ಷಭೋಜ್ಯಗಳು. ಸಿಹಿ, ಸಾಗರದ ನದಿಯ ಮೀನು. ಈ ಉತ್ಸವಕ್ಕಾಗಿಯೇ ಸಾಕಿ ಬೆಳೆಸಿದ ಕೋಳಿಗಳು. ಸುತ್ತಮುತ್ತಲಿನ ಹಳ್ಳಿಗಳಿಂದೆಲ್ಲ ಕಾಣಿಕೆಯಾಗಿ ಬಂದ ಆಡುಗಳು. ಬಗೆಬಗೆಯ ತರಕಾರಿ. ಹಣ್ಣು ಹಂಪಲು, ನೀವು ಸಸ್ಯಾಹಾರಿಯೋ ಏನೋ! ಹೇಗೆ ಬೇಕೋ ಹಾಗೆ. ಬನ್ನಿ.... 'ಈ ದೃಶ್ಯ ನೋಡಿಯೇ ಹೊಟ್ಟೆ ತುಂಬಿತು'ಎಂದಿರಾ?ಹಾಗಾಗುತ್ತದೆ ಎಷ್ಟೋ ಸಾರೆ, ಆದರೆ ಇಲ್ಲಿ ಈ ದಿನ 'ಬೇಡ' ಎನ್ನುವ ಹಾಗೆಯೇ ಇಲ್ಲ. ಬಂದ ಅತಿಥಿಗಳು ಒಂದು ತುತ್ತು ಹೆಚ್ಚಾಗಿಯೇ ಉಣ್ಣಬೇಕು. ಇಲ್ಲದೆ ಹೋದರೆ ಊರಿಗೇ ಅವಮಾನ. * * * ಎಲ್ಲಿ ಕುಳುತುಕೊಳ್ಳೊಣ? ವೇದಿಕೆಯ ಬಳಿಗೆ ಹೋಗೋಣವೆ? ಇಲ್ಲಿಯೇ ದೂರದಲ್ಲಿ ಕುಳಿತು ತನ್ಮಯರಾಗೋಣವೆಂದೆ?ಹಾಗೆಯೇ ಆಗಲಿ. ಮಂಪರು ಬರುತ್ತಿದೆ, ಅಲ್ಲ? ಇನ್ನೆರಡೇ ನಿಮಿಷ. ಭಾಷಣ ಮುಗಿಯಿತು. ಅದೋ, ಘೋಷ: "ಇಂಕ್ಲಿಲಾಬ್ ಜಿಂದಾಬಾದ್!" "ಕ್ರಾಂತಿಗೆ ಜಯವಾಗಲಿ!" "ಕಯ್ಯೂರು ವೀರರು ಅಮರರಾಗಲಿ!"