ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಧರಿಸಿದ್ದ ಒಬ್ಬರು,ಸುತ್ತುವರಿದಿದ್ದ ಜನರು ನಡುವೆ ನಿಂತು,ಭಾಷಣ ಕೊಡುವುದನ್ನು ಆತ ಕಂಡಿದ್ದ.ಅದೇನೋ ತಮಾಷೆ ಇರಬಹುದೆಂದು ಬಾಗಿ ಇಣಿಕಿ ನೋಡಿದ್ದ ತಂದೆಗೂ ಮಗನಿಗೂ ನಿರಾಶೆಯಾಗಿತ್ತು. ಪಂಡಿತರೂ ಈಗ ಎದ್ದುನಿಂತು ಹಾಗೆಯೇ ಭಾಷಣ ಕೊಡುವರೇನೋ ಎಂದು ಚಿರುಕಂಡ ಕುತೂಹಲದಿಂದ ಇದಿರು ನೋಡಿದ.ಪಂಡಿತರು ಎದ್ದು ನಿಲ್ಲಲಿಲ್ಲ.ಕುಳಿತಲ್ಲೆ ಮಾತನಾಡಿದರು.ತೋಳು ಕೈ ಬೀಸಿ,ಮುಷ್ಟಿ;ಬಿಗಿದು,ಅಂಗವಿನ್ಯಾಸಗಳನ್ನು ಮಾಡಲಿಲ್ಲ.ಸರಳವಾಗಿ ಒಬ್ಬರೊಡನೊಬ್ಬರು ಸಂಭಾಷಣೆ ನಡೆಸುವಂತೆ, ನಡುನಡುವೆ ತಡೆದು ನಿಂತು ಯಾವುದಾದರೂ ಒಂದಂಶವನ್ನು ಹೆಚ್ಚಾಗಿ ವಿವರಿಸುತ್ತ, ಮಾತುಗಳನ್ನಾಡಿದರು. ಲೋಕ ಸೃಷ್ಟಿಯಾಗಿ, ಈ ಲೋಕದಲ್ಲಿ ಮನುಷ್ಯ ಹುಟ್ಟಿದ ಕಥೆ. ಮಾನವರು ಆರಂಭದಲ್ಲಿ ಬದುಕಿದ ರೀತಿ.... ಆಗಿನ ಸಮಾಜ.... ಬಳಿಕ ಸಮಾಜದಲ್ಲಿ ಉಂಟಾದ ಗುಂಪುಗಳು.... ಆ ಗುಂಪುಗಳೊಳಗೆ ಕದನ... ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡುದು.... ಬಲ ಉಳ್ಳವರು ಮತ್ತು ಬಲವಿಲ್ಲದವರು.... ಹಸಿದವರು ಮತ್ತು ಕಸಿದವರು... ಮಣ್ಣಿಗಾಗಿ ಹೋರಾಟ... ಮಾನವ ವಿಶೇಷ ಜ್ಞಾನವನ್ನು ಸಂಪಾದಿಸಿದ ಬಗೆ.... ಯಂತ್ರಗಳ ರಚನೆ... ವರ್ಗ ಸಂಘರ್ಷ...ಮುಂದುವರಿದ ದೇಶದ ಜನ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಲೋಕದ ನಾನಾ ಕಡೆಗೆ ಹೋದುದು... ಅಲ್ಲಿ ಆ ದೇಶಗಳನ್ನು ಪದಾಕ್ರಾಂತ ಮಾಡಿದುದು... ಭಾರತ ಪರತಂತ್ರವಾದ ಕರ್ಮಕಥೆ.... ಎಡೆಬಿಡದೆ ಇಲ್ಲಿ ನಡೆದ ಸುಲಿಗೆ... ಕಳೆದ ಶತಮಾನದ ಕೊನೆಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯಸಮರ.... ಜನತೆಯ ಸೋಲು.... ಮತ್ತೆ ಕ್ರಾಂತಿಯ ಕಿಡಿಗಳು.... ಈ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಜಗತ್ತಿನ ಆರರಲ್ಲೊಂದು ಭಾಗದಲ್ಲಿ ದುಡಿಯುವ ಕಾರ್ಮಿಕನೇ ಆಳುವ ಪ್ರಭುವಾದದ್ದು.... ವಿದೇಶೀಯ ಸುಲಿಗೆಗಾರರಿಗಿದಿರು ನಮ್ಮಲ್ಲೂ ಬೆಂಕಿ ಭುಗಿಲೆಂದುದು.... ರಾಷ್ಟ್ರೀಯ ಸಂಘಟನೆ.... ಜನತೆಯ ಮಹಾ ಹೋರಾಟಗಳು. ಹುಡುಗರಿಗೆ ಅದೆಲ್ಲವೂ ಅರ್ಥವಾಗಲಿಲ್ಲ.ಚಿರುಕಂಡ ಒಂದೊಂದು ಪದವನ್ನೂ ಆತುರದಿಂದ ಕೇಳಿದ. ಅರ್ಥವಾದುದು ಮನಸ್ಸಿಗೆ ಇಳಿಯಿತು. ಅರ್ಥವಾಗದುದು ನೆನಪಿನಲ್ಲಿ ಉಳಿಯಿತು.ಅಪ್ಪುವಿಗೆ ಹಾಗಲ್ಲ.ಆತನೆದುರು ಹರಿದುಹೋಗುತ್ತಿದ್ದುದೊಂದು ವಾಕ್ ಪ್ರವಾಹ.ಒಮ್ಮೊಮ್ಮೆ ಪ್ರಶಾಂತ ಹೊನಲು ಮತ್ತೆ ಒಮ್ಮೊಮ್ಮೆ ಧುಮುಧುಮಿಸುವ ಜಲರಾಶಿ-ಎಲ್ಲವೂ ತೇಜಸ್ವಿನಿ ನದಿಯ ಹಾಗೆ. ಆತನಿಗೆ ಸ್ಪಷ್ಟವಾದುದೊಂದೇ-ಜನರು ಕಷ್ಟದಲ್ಲಿದ್ದಾರೆ. ಜನರಿಗೆ