ಚಿರಸ್ಮರಣೆ ೮೯ ಸಾಗಿತು.ತ್ರಿಕರಪುರದ ಚಂದು, ಚಿರುಕಂಡನ ಕುಟುಂಬಕ್ಕೆ ಒದಗಿದ ದುರವಸ್ಥೆ, ಬಾಲ್ಯದ್ದೊಂದು ಕಹಿನೆನಪು, ತುಂಬ ತಿಳಿದವರಾದ ಮಾಸ್ತರು,ಅವರಿಗಿಂತಲೂ ಹೆಚ್ಚು ಬಲ್ಲ ಪಂಡಿತರು-ಪಂಡಿತರ ಗಂಭೀರ ಧ್ವನಿ :'ಈ ಮಣ್ಣು ಯಾರದು? ನಮ್ಮದು. ಇದು ನಮ್ಮ ತಾಯ್ನೆಲ.ಈ ದೇಶ ಯಾರದು? ನಮ್ಮದು.ಇದು ನಮ್ಮ ರಾಷ್ಟ್ರ.ಹೊಲ ಯಾರದು? ಉಳುವವನದು.ಉಳುವವನೇ ಹೊಲದ ಒಡೆಯ...ಹೌದೊ ಅಲ್ಲವೊ?'
ಹೌದು.ಸಂದೇಹವಿರಲಿಲ್ಲ. ಅಪ್ಪುವಿಗೆ ಅದೆಲ್ಲವೂ ತಿಳಿದಿತ್ತು.
ಆದರೆ ಚಿರುಕಂಡನ ತಂದೆ ಹೊಲ ಕಳೆದುಕೊಂಡಿದ್ದ.ನಾಳೆ ಆ ಸಂಸಾರವನ್ನು ಜಮೀನ್ದಾರರರು ಹೊಲ ಬಿಡಿಸಿ ಓಡಿಸಬಹುದು.ಚಿರುಕಂಡನ ತಾಯಿ ತಂದೆ ಮಗನೊಡನೆ ಭಿಕಾರಿಗಳಾಗಿ ಊರು ಬಿಡಬೇಕಾಗಿಬರಬಹುದು.ಕ್ರಾಂತಿಗೆ ಈಗತಾನೆ ಸೇರಿದ ಚಿರುಕಂಡನಿಗೇ ಹೀಗಾಗುವುದೆಂದರೆ?ಇದು ಸರಿಯೆ?ಇದುನ್ಯಾಯವೆ?
ಇದು ಸರಿಯಲ್ಲ-ನ್ಯಾಯವಲ್ಲ,ಎಂದು ರೋದಿಸುತ್ತ ಉತ್ತರ ಕೊಡುತ್ತಿತ್ತು
ಮನಸ್ಸು.ಆದರೆ ಆ ಉತ್ತರದ ಹಿಂದೆ ಅಸಹಾಯತೆ ಜೋಲುಮೋರೆ ಹಾಕಿ ಕುಳಿತಿತ್ತು.
....ಸೂರ್ಯ ಮುಳುಗಿ ಕತ್ತಲಾದಾಗ ಅಪ್ಪುಮನೆ ಸೇರಿದ.
ಆತನ ತಂದೆ ಇನ್ನೂ ಬಂದಿರಲಿಲ್ಲ.ಚಿಮಣಿ ದೀಪದೆದುರು ಮಂಡಿಯೂರಿ ನೆಲದ ಮೇಲೆ ಒರಗಿಕೊಂಡು ಅಪ್ಪುವಿನ ತಮ್ಮಶಾಲೆಯ ಪಾಠವನ್ನೋದುತ್ತಿದ್ದ. ಆತನಿಗೆ ಕೀಟಲೆ ಕೊಡುತ್ತಿದ್ದ,ಕಿರಿಯವನು-ಕುಟ್ಟಿ.
ತಮ್ಮನನ್ನು ಕುರಿತು ಅಪ್ಪುವೆಂದ: "ಮಾಸ್ತರು ಏನಾದರೂ ಕೇಳಿದರೇನೋ?"
ತಮ್ಮ, ಮುಖವೆತ್ತಿ ಅಣ್ಣನನ್ನೊಮ್ಮೆ ನೋಡಿ,ಮತ್ತೆ ಪುಸ್ತಕದಲ್ಲೆ ದೃಷ್ಟಿನೆಟ್ಟು ಹೇಳಿದ:
"ನಿನ್ನೆ ನಿನ್ನಣ್ಣ ಎಷ್ಟು ಹೊತ್ತಿಗೆ ಮನೆ ಸೇರಿದ ಅಂತ ಕೇಳಿದ್ರು." ಬೇರೇನನ್ನೂ ಮಾಸ್ತರು ಕೇಳುವ ಹಾಗಿರಲಿಲ್ಲ;ತಮ್ಮನಿಗೆ ಅವರೇನನ್ನೂ
ಹೇಳುವ ಹಾಗಿರಲಿಲ್ಲ.
ಅಪ್ಪುವಿನ ತಾಯಿ ಹೊರಗೆ ಅಂಗಳದಲ್ಲಿದ್ದ ನೀರೊಲೆಯ ಮಣ್ಣಿನ ಗುಡಾಣಕ್ಕೆ
ನೀರು ಸುರಿದು ಉರಿ ಮಾಡಿದಳು. ಅದು,ಹೊಲದಿಂದ ಮರಳುವ ಗಂಡಸಿನ ಸ್ನಾನಕ್ಕೆ ಸಿದ್ಧತೆ.