ಜಯದೇವ ನಕ್ಕು, ಪತ್ರಿಕೆಯನ್ನು ಮೇಜಿನ ಮೇಲಿರಿಸಿ, ಹೊರಕ್ಕಿಳಿದ. ಒಂದು ಊರಿನಿಂದ ಇನ್ನೊಂದು ಊರಿಗಿರುವ ಕಾಲದ ಆಂತರ. ಬೆಂಗಳೂರಲ್ಲಿ ನಿನ್ನೆ ಸಂಜೆ ಬಿಸಿಬಿಸಿ ಸುದ್ದಿಯಾಗಿದ್ದುದು ಈ ಊರಲ್ಲಿ ಈಗ ಬಿಸಿ ಸುದ್ದಿಯಾಗಲು ಇನ್ನೂ ತಡವಾಗಬಹುದು, ತನ್ನ ಜತೆಯಲ್ಲೇ ಆದೇ ಗಾಡಿಯಲ್ಲೇ ಆ ಪತ್ರಿಕೆಯೂ ಪ್ರವಾಸ ಮಾಡಿರಬೇಕು ಹಾಗಾದರೆ. ಈಗ ಈ ಬಸ್ಸಿನಲ್ಲೂ ಜತೆಯಲ್ಲಿರಬಹುದು, ಮುಂದಿನ ಊರುಗಳಿಗೆ ಹೊರಟ ಪತ್ರಿಕೆ. ಕಾಗದ ಪತ್ರಗಳೂ ಆಷ್ಟೇ... ಆ ರೀತಿ ಜಗತ್ತಿನ ವ್ಯವಹಾರಗಳು ಕೆಲವನ್ನು ನಿರೀಕ್ಷಿಸಿ ತಿಳಿದುಕೊಂಡ ಜಯದೇವನಿಗೆ, ಅಲ್ಲಿ ತಾನು ಒಂಟಿ ಎಂಬ ಭಾವನೆ ಹೊರಟು ಹೋಯಿತು.
ಬಸ್ಸು ಪೊಂ ಪೊಂ ಸದ್ದು ಮಾಡಿತೆಂದು ಜಯದೇವ ಲಗುಬಗೆಯಿಂದ ಅದರತ್ತ ಹೋದ. ಆದರೆ ಆ ಕರೆ, ಹೊರಡುವ ಲಕ್ಷಣವೇನೂ ಆಗಿರಲಿಲ್ಲ. ಮತ್ತೆ ಆಸೀನನಾದ ಜಯದೇವ ತನ್ನ ಸುತ್ತಮುತ್ತಲೂ ದೃಷ್ಟಿಯೋಡಿಸಿದ...ಮೊದಲ ಸೀಟಿನಲ್ಲಿ ಒಬ್ಬ ಯುವಕನೊಡನೆ ಭಾರೀ ಗಾತ್ರದ ಹಿರಿಯರೊಬ್ಬರು ಕುಳಿತಿದ್ದರು. ಜರಿಯಂಚಿನ ಪೇಟ, ಉಣ್ಣೆಯ ಕೋಟು.....ಯಾರೋ ಹಳ್ಳಿಗಾಡಿನ ಶ್ರೀಮಂತರಿರಬೇಕು... ಎರಡನೆಯ ಸಾಲು ಹೆಂಗಸರದು. ಮೊದಲ ಸೀಟಿನವರ ಕುಟುಂಬವಿರಬಹುದು. ಹಾಗೆಯೇ ಬೇರೆಯವರೂ ಕೂಡಾ, ಎರಡು ಮಕ್ಕಳು ಆಳುತ್ತಿದ್ದುವು, ಹೆಂಗಸರ ಗಿಲಿಗಿಲಿ ಮಾತುಕತೆ ನಡೆದಿತ್ತು, ತಲೆಯಿಂದಿಳಿದು ಸೀಟಿಗೂ ಸೀರೆಯ ಸೆರಗಿಗೂ ನಡುವೆ ಮರೆಯಾಗಿದ್ದ ಅದೊಂದು ಜಡೆ– ಎಷ್ಟು ಮಾಟವಾಗಿತ್ತು ! ನೋಡಬೇಕೆನಿಸುತಿತ್ತು ಮತ್ತೆ ಮತ್ತೆ. ಮುಡಿದಿದ್ದ ಸಂಪಗೆ ಹೂಗಳು ಬಾಡಿದ್ದರೂ ಪ್ರತಾಪ ತೋರಿಸುತ್ತಿದ್ದವು. ಆ ಜಡೆಯ ಒಡತಿಯ ಮುಖ ದರ್ಶನವಾದರಾದೀತೆಂದು ತೋರಿತು ಜಯದೇವನಿಗೆ.
ಒಮ್ಮೆ ಹಿಂದಕ್ಕೆ ತಿರುಗಿದಳು ಆ ಯುವತಿ. ಜಯದೇವನಿಗೆ ನಿರಾಸೆಯಾಯಿತು.
ಅಂತೂ ಬಸ್ಸು ಚಲಿಸಿತು.
ಬಸ್ಸು ಪಶ್ಚಿಮಕ್ಕೆ ಓಡಿದಂತೆ ಸೂರ್ಯ ಪೂರ್ವದಿಂದ ಅದನ್ನು ಬೆನ್ನಟ್ಟಿಕೊಂಡೇ ಬಂದ. ಆದರೆ ನೆಲ ಗಿಡ ಮರ, ಮುಂಗಾರು ಮಳೆಯ