ಈ ಪುಟವನ್ನು ಪ್ರಕಟಿಸಲಾಗಿದೆ

"ಹೂಂ ಜಯಣ್ಣ. ನೀವು ಇಲ್ಲಿಗ್ಬಂದ್ರೆ ನಮ್ಮಣ್ಣನೂ ಕಾದಂಬರಿ ಓದೋಕೆ ಕಲಿತ್ಕೋತಾನೆ."

ಸುನಂದಾ–ನಾಲ್ಕೈದು ವರ್ಷಗಳ ಹಿಂದೆ ತನಗೆ ಪರಿಚಯವಾದ ಪುಟ್ಟ ಹುಡುಗಿಯಲ್ಲ ಅವಳೀಗ...ವೇಣುವಿನಂತೆ ಆಕೆಯೂ ತನ್ನನ್ನು ಜಯಣ್ಣನೆಂದೇ ಕರೆಯುತಿದ್ದಳು. ಜಯಣ್ಣ ಎನ್ನುವ ಪದಕ್ಕೆ ವಿಶೇಷ ಅರ್ಥವೇನಾದರೂ ಇತ್ತೆ? ಚಂದ್ರಣ್ಣ, ಪುಟ್ಟಣ್ಣ, ರಾಜಣ್ಣರಿದ್ದ ಹಾಗೆ ತಾನೂ ಒಬ್ಬ ಅಣ್ಣ...ಆಕೆ ತನ್ನ ತಂಗಿಯಷ್ಟೇ ಯಾಕಾಗಬಾರದು? ಆವರೆ ಅದು ಹೇಗೆ ಸಾಧ್ಯ?... ಸುನಂದಾ...

ಅದರ ಬದಲು ಬೇರೇನನ್ನಾದರೂ ಯೋಚಿಸಲೆತ್ನಿಸಿದ ಜಯದೇವ. ಸಾಮಾನು ಹೇರಿಕೊಂಡು ಲಾರಿಯೊಂದು ಊರಮಾರ್ಗವಾಗಿ ಹಾದು ಹೋಯಿತು ಧೂಳೆಬ್ಬಿಸುತ್ತಾ...ಇಲ್ಲಿ ಪೌರಸಭೆ ಇದೆಯೋ ಇಲ್ಲವೋ. ಇರುವ ಒಂದೇ ಒಂದು ಮುಖ್ಯ ರಸ್ತೆಗೆ ಇಲ್ಲೇ ಅರ್ಧ ಫರ್ಲಾಂಗಿನಷ್ಟು ಉದ್ದಕ್ಕಾದರೂ ಡಾಮರು ಯಾಕೆ ಹಾಕಬಾರದು?... ಹುಡುಗಿಯರು... ವಿದ್ಯಾರ್ಥಿನಿಯರೂ ಇದ್ದಾರೆ ಈ ಶಾಲೆಯಲ್ಲಿ. ಸಹವಿದ್ಯಾಭ್ಯಾಸ ಇಂತಹ ಊರಲ್ಲಿರುವುದು ಒಂದು ರೀತಿಯ ಪ್ರಗತಿಯೇ ಸರಿ.

"ಮಿಸ್ಟರ್ ಜಯದೇವ್!"

ಸರಣಿಕಡಿದು ಯೋಚನೆಗಳು ಚೆಲ್ಲಾಪಿಲ್ಲಿಯಾದುವು. ಬೆಚ್ಚಿಬಿದ್ದು ಜಯದೇವ ತಿರುಗಿ ನೋಡಿದ. ರಂಗರಾಯರು ಮುಗುಳು ನಗುತ್ತ ಬಾಗಿಲಲ್ಲಿ ಸಿಂತಿದ್ದರು.

"ಏನು ಕಿಟಕಿ ಹತ್ತಿರ ನಿಂತು ಊರು ನೋಡ್ತಾ ಇದೀರಲ್ಲ? ಹೇಳಿ, ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ?"

ಅದು 'ಮೈಸೂರು ಮಲ್ಲಿಗೆ'ಯ ಒಂದು ಸಾಲು.. ಮುಖ್ಯೋಪಾಧ್ಯಾಯರ ಸಾಹಿತ್ಯಜ್ಞಾನವನ್ನೂ ರಸಿಕತೆಯನ್ನೂ ಕಂಡು ಜಯ್ತುದೇವನಿಗೆ ಸಂತೋಷವಾಯಿತು.

"ಯಾವುದು ಚೆಂದ ಅನ್ನೋದು ನೋಡುವ ದೃಷ್ಟಿ ಮೇಲಿದೆ ಸಾರ್."

"ಅದು ನಿಜ.... ಈಗ ಬನ್ನಿ, ಮನೆಗೆ ಹೋಗೋಣ."

ರಂಗರಾಯರ ಹಿಂದೆಯೆ ಇಬ್ಬರು ಹುಡುಗರಿದ್ದು, ಜಯದೇವನ ಸಾಮಾನುಗಳನ್ನು ಅವರು ಎತ್ತಿಕೊಂಡರು.