ಹಿರಿತನವನ್ನು ಎತ್ತಿ ತೋರಿಸಿದುವು. ಮಾತೃಪ್ರೇಮದ ಅನುಭವ ಆತನಿಗಿರಲಿಲ್ಲ ನಿಜ, ಅದರೆ ಮಾತೆ ದೈವೀ ಸ್ವರೂಪಳೆಂದು ಸಹಸ್ರಸಾರೆ ಆತ ಕೇಳಿದ್ದನಲ್ಲವೆ?
ಆದರ್ಶ ಮಹಿಳಾರತ್ನಗಳು....
ತನ್ನ ತರಗತಿಯಲ್ಲಿ, ತನ್ನನ್ನೆ ಬೆರಗುಗಣ್ಣುಗಳಿಂದ ನೋಡುತ್ತಿದ್ದ ವಿದ್ಯಾರ್ಥಿನಿಯರನ್ನೇ ಎಷ್ಟೋ ಬಾರಿ ದಿಟ್ಟಿಸಿ ಜಯದೇವ ಮಾತನಾಡಿದ.
"ನಮ್ಮದು ಪುಣ್ಯ ಭೂಮಿ. ಈ ತಾಯಿಯ ಬಸಿರಲ್ಲಿ ಒಳ್ಳೆಯ ಮಾನವರು ಹಲವರು ಜನಿಸಿದ್ದಾರೆ. ಆದರ್ಶಮಹಿಳಾರತ್ನಗಳು ನಮ್ಮ ಬದುಕನ್ನು ಬೆಳಗಿವೆ. ಹುಟ್ಟಿದವರೆಲ್ಲ ಮಹಾತೇಜಸ್ವಿಗಳಾಗೋದಿಲ್ಲ. ಅಥವಾ ಮಹಾತೇಜಸ್ವಿಗಳಾಗಿಯೇ ಯಾರೂ ಹುಟ್ಟೋದಿಲ್ಲ. ಎಲ್ಲರಲ್ಲೂ ಒಳ್ಳೆಯ ಗುಣಗಳಿರುತ್ತವೆ. ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ. ಹೆಚ್ಚು ಗುಣಗಳಿರುವವರು ಆದರ್ಶವ್ಯಕ್ತಿಗಳಾಗ್ತಾರೆ. ಜೀಜಾಬಾಯಿಯಂತಹ ವೀರಮಾತೆ ಆದರ್ಶ ಸ್ತ್ರೀರತ್ನ -ನಮ್ಮಲ್ಲೇ ಹುಟ್ಟಿ ಬರಲಾರಳೆಂದು ಹೇಗೆ ಹೇಳೋಣ? ಖಂದಿತ ಹುಟ್ಟಬಹುದು..."
ನಡುನಡುವೆ ತಾನೆ ಮಾತನಾಡುತ್ತಿರುವೆನೆ ಎಂದು ಜಯದೇವನಿಗೆ ಸಂದೇಹವಾಗುತಿತ್ತು. ಹಿಂದೆ ತಾನೆಲ್ಲೋ ಕೇಳಿದ್ದ ಎಲ್ಲೋ ಓದಿದ್ದ ಮಾತುಗಳೇ ತನ್ನ ನಾಲಿಗೆಯಿಂದ ಹೊರಬೀಳುತಿದ್ದಂತೆ ತೋರಿತು. ಮಾತನಾಡುತ್ತಲಿದ್ದಂತೆಯೇ ಮನಸ್ಸಿನಲ್ಲೇ ಆತ ಅಂದುಕೊಂಡ:
"ಇದೆಲ್ಲಾ ನನ್ನ ಸ್ವಂತದ ವಿಚಾರಗಳಲ್ಲದೇ ಇರಬಹುದು. ಆದರೆ ಇವು ಒಳ್ಳೆಯ ವಿಚಾರಗಳು. ಇಷ್ಟುಮಾತ್ರ ನಿಜ."
ಪಾಠದ ಅವಧಿ ಮುಗಿಯಿತೆಂದು ಘಂಟಿ ಬಾರಿಸಿತು. ಜಯದೇವನ್ಲೂ ತನ್ನ ಕಥನ-ಭಾಷಣದ ಕೊನೆಯನ್ನು ತಲಪಿದ್ದ. ಮಂತ್ರಮುಗ್ಧರಾಗಿ ಕುಳಿತಿದ್ದರು ಅ ಹುಡುಗ-ಹುಡುಗಿಯರೆಲ್ಲ.
"ಇವತ್ತಿಗಿಷ್ಟು. ಇನ್ನೊಂದು ದಿವಸ ವೀರಮಾತೆ ವಿಮಲಾ ಆರಂಭಿಸೋಣ."
ಸ್ವಾರಸ್ಯವಾದುದು ಸವಿಯಾದುದು ಇಷ್ಟಕ್ಕೇ ನಿಂತು ಹೋಯಿತಲಾ ಎಂದು ವಿದ್ಯಾರ್ಥಿಗಳು ಚಡಪಡಿಸಿದರು. ಅವರಲ್ಲಿ ಹೆಚ್ಚು ಕಡಿಮೆ ಎಲ್ಲರ