ಈ ಪುಟವನ್ನು ಪ್ರಕಟಿಸಲಾಗಿದೆ

ಹೊಗೆಯಿಂದ ಹೊರಗೆ

೪೩

"ಹಸಕೆ ಲಿಯೆ ಪಾಕಿಸ್ತಾನ,
ಲಢಕೆ ಲೇಂಗೆ ಹಿಂದುಸ್ತಾನ"

ಬಲೂಚರೆಜಿಮೆಂಟಿನ ನಾಲ್ಕರಷ್ಟು ಬೆಳೆದಿತ್ತು ಹೊರಗಿನ ಜನಸಮ್ಮರ್ದ. ಪ್ರತಿ ಡಬ್ಬಿಯಲ್ಲಿ ಕೆರಳಿದ ಜನಸಮೂಹ ಧಾವಿಸತೊಡಗಿತು. ಜಸವಂತಸಿಂಗ, ತಾಯಿ ತಂಗಿಯನ್ನು ಕರೆದುಕೊಂಡು ಹಿಂದಿನ ಬಾಗಿಲಿನಿಂದ ಇಳಿದು ಹೊರಬಿದ್ದ. ದಿಕ್ಕುಗಾಣದವರಂತೆ ಮೂರೂ ಜನ ಹತ್ತಿರವಿದ್ದ ಅಡವಿಯತ್ತ ಧಾವಿಸತೊಡಗಿದರು. ಹತ್ತಿರವೇ ಇದ್ದ ರೈಲಿನ ತಾರು ಕಂಬಕ್ಕೆ ಎಡವಿ ತಾಯಿ ಬಿದ್ದು ಬಿಟ್ಟಳು. ಮುಂದೆ ಓಡುತ್ತಿರುವ ಜಸವಂತನಿಗೆ ಅದು ಬೇಗ ಗೊತ್ತಾಗಲಿಲ್ಲ. ಗೊತ್ತಾದಾಗ ಹಿಂದೆ ಹೊರಳಬೇಕೆನ್ನುವಷ್ಟರಲ್ಲಿ ಜನ ಸಮ್ಮರ್ದ ಓಡುವದನ್ನು ನೋಡಿ ಹಾಗೇ ಮುಂದೆ ಓಡಿದ. ಆದರೆ ಅವನು ಅಡವಿಯಲ್ಲಿ ಬೇರೆ ದಿಕ್ಕನ್ನು ಹಿಡಿದು ಓಡಿದ, ರೂಪಕೌರ ತಂಗಿ ಮತ್ತೊಂದು ದಿಕ್ಕಿಗೆ ಓಡಿದಳು.

ಇಬ್ಬರೂ ಅಲ್ಲಿಂದ ಜೀವಸಹಿತ ಪಾರಾದರೇನೋ. ಆದರೆ ಇಬ್ಬರೂ ಬೇರ್ಪಡಿಸಲ್ಪಟ್ಟರು. ತಾಯಿಯ ಗತಿ ಏನೂ ತಿಳಿಯಲಿಲ್ಲ.


"..... ನಾನು ಅಲೆಅಲೆಯುತ್ತ ಈಗ ಈ ನಿರ್ವಾಸಿತರ ಕ್ಯಾಂಪಿಗೆ ಬಂದೆ. ನನ್ನ ತಂಗಿ ರೂಪಕೌರ ಎಲ್ಲಿಯೋ. ನನ್ನ ತಾಯಿಯಂತೂ ಈಗ ಇರುವದು ಸಾಧ್ಯವಿಲ್ಲಾ. ಆದರೆ ಉಳಿದಿರುವ ತಂಗಿಯ ಭೆಟ್ಟಿಯು ಆಗಲಿಲ್ಲವಲ್ಲಾ ಎಂದು ಮಿಡುಕುತ್ತಿದ್ದೇನೆ. ಅಯ್ಯೋ.....” ಜಸವಂತಸಿಂಗ ತನ್ನ ಕತೆ ಹೇಳುತ್ತಿರುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದ.

ಅವನ ಹೆಗಲ ಮೇಲೊಂದು ಕೈ ಸಾಂತ್ವನದಿಂದ ಆಡತೊಡಗಿತು. ಮ್ಯಾನೇಜರ ದಯಾಲನೂ ಬೆಚ್ಚಿ ಹಿಂದೆ ಹೊರಳಿ ನೋಡಿದ. ಅವನಿಗೂ ಆಶ್ಚರ್ಯವಾಯಿತು.

ರೆಡಿಯೋದ ಸ್ಟೇಶನ ಡಾಯರೆಕ್ಟರ ಗಂಭೀರ ಸಿಂಗ ತಮ್ಮ ಪತ್ನಿಯೊ೦ದಿಗೆ ಆಗಲೇ ಬಂದು ಹಿಂದೆ ನಿಂತು ಎಲ್ಲ ಕತೆಯನ್ನು ಕೇಳತೊಡಗಿದ್ದರು.