ಈ ಪುಟವನ್ನು ಪರಿಶೀಲಿಸಲಾಗಿದೆ

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನಿನ್ನೆ-ಎಂದು-ನಾಳೆಗಳನ್ನು ಬಂಧಿಸಿರುವ ಸೂತ್ರವನ್ನು ಗಮನಿಸಿ, ಕಥಾನಾಯಕ ಕಲ್ಯಾಣಸ್ವಾಮಿಯ ಪಾತ್ರವನ್ನೂ ಇತಿಹಾಸದಲ್ಲಿ ಉಲ್ಲೇಖವಿರುವ ಹಾಗೂ ಇಲ್ಲದ ಇತರ ಪಾತ್ರಗಳನ್ನೂ ನಾನು ಸೃಷ್ಟಿಸಿದ್ದೇನೆ. ಇಸಿಹಾಸದ ನಿರ್ಮಾತೃಗಳು ಜನರೇ ಎಂಬ ಸಾರ್ವಕಾಲಿಕಸತ್ಯವನ್ನು ಮರೆಯದೆ, ಈ ಕಾದಂಬರಿಯನ್ನು ರಚಿಸಿದ್ದೀನೆ.

  • * * *

'ಕಲ್ಯಾಣಪ್ಪ' ನನ್ನ ಹೃದಯ ಸ್ನೇಹಿತ. ಅದ್ಭುತವಾದ ತಮ್ಮ ವರ್ಣನಾವೈಖರಿಯಿಂದ, ಮಾತಿನ ಮೋಡಿಯಿಂದ, ಸಾಹಿತ್ಯ ಪ್ರತಿಭೆಯಿಂದ ಆ ಕಥೆಯನ್ನು ಇಪ್ಪತ್ತು ವರ್ಷಗಳಿಗೆ ಹಿಂದೆಯೇ ನನ್ನ ಮನಸ್ಸಿನ ಮೇಲೆ ಅಚ್ಚೊತ್ತಿದ್ದವರು, ಬಾಲ್ಯದ ನನ್ನ ಅಧ್ಯಾಪಕರಾದ ಶ್ರೀಯುತ ಬಿ. ಶಂಕರ ನಾರಾಯಣರಾಯರು. ಅವರು ಆಗ ಹೇಳಿದ ಕಥೆಯ ನಿರ್ದಿಷ್ಟ ಸ್ವರೂಪವಾಗಲೀ, ವಿವರವಾಗಲೀ ಈಗ ನನಗೆ ನೆನಪಿಲ್ಲ. ಆದರೆ ಆ ಪದಬ್ರಹ್ಮ ಸೃಷ್ಟಿಸಿದ ಕಲ್ಯಾಣಪ್ಪನ ಪಾತ್ರ ಮಾತ್ರ, ಅನಂತರ ಮನಃಪಟಲದ ಮೇಲೆ ಹಲವು ಸಹಸ್ರ ಪಾತ್ರಗಳು ಸುಳಿದರೂ, ಅಚ್ಚಳಿಯದೆ ನಿಂತಿದೆ. ನನ್ನ ಈ ಬರವಣಿಗೆಗೆ ಆ ಕಥೆಯೇ ಮೂಲ ಸ್ಫೂರ್ತಿ.

ಎಂದಾದರೂ ಆ ವಸ್ತುವನ್ನು ಬಳಸಿಕೊಂಡು ಬರೆಯಬೇಕೆಂದು ನಿರ್ಧರಿಸಿದ್ದರೂ, ನಾನು 'ಕಾದಂಬರಿಕಾರ' ಎನಿಸಿಕೊಂಡ ಬಳಿಕ ಆ ವಿಷಯದ ಕಡೆಗೆ ನನ್ನ ಲಕ್ಷ್ಯವನ್ನೆಳೆದವರು ಬಾಲ್ಯ ಸ್ನೇಹಿತರಾದ ಶ್ರೀ ಶ್ರೀನಿವಾಸ ಪ್ರಭು.

ಆದರೆ ಆಗಲೀ, ಸಾಹಿತಿ ಸನ್ಮಾತ್ರ ಶ್ರೀ ರಾ. ವೆಂ. ಶ್ರೀ 'ಕಲ್ಯಾಣ ಸ್ವಾಮಿ' ಎಂಬ ಕಾದಂಬರಿ ಬರೆಯುವರೆಂದು ಪ್ರಕಟವಾಗಿತ್ತು. ಅವರ ಕಲ್ಯಾಣಸ್ವಾಮಿ ನನ್ನ ಕಲ್ಯಾಣಪ್ಪನೇ ಎಂದು ತಿಳಿಯಲು ಹೆಚ್ಚು ಕಾಲ ಹಿಡಿಯಲ್ಲ. ರಾ. ವೆಂ. ಶ್ರೀ. ಸಾಮಾನ್ಯವಾಗಿ ಬರೆಹಗಾರರ ಜಾತಿಯಲ್ಲಿ ಕಾಣಸಿಗದ ಸೌಹಾರ್ದ ಭಾವದಿಂದ, "ನೀವು ಬರೆಯಿರಿ, ನಾನು ಪ್ರಕಟಿಸುವ ಏರ್ಪಾಟು ಮಾಡುತ್ತೇನೆ." ಎಂದರು. ವಸ್ತುವಿನ ಪ್ರಸ್ತಾಪ ಮಾಡಿದಾಗ ಕವಿ ಅಮ್ಮೆಂಬಳರು, ಶ್ರೀ ಬಿ. ಶಂಕರ