ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಳದಲ್ಲಿ ಕ್ಷೋಭೆಯ ಕಿಡಿ ಕವಲೊಡೆಯಿತು.ಒಂದು ಕ್ಷಣ ಅಲ್ಲಿ ನಿಂತು,ಯಾವ ದಿಕ್ಕಿಗೆ ತಿರುಗಬೇಕೆಂಬುದನ್ನು ಮಾಚಯ್ಯ ನೆನಪಿಗೆ ತಂದುಕೊಂಡ ಬಳಿಕ, ಅವರು ಮುಂದುವರಿದರು. ನಡೆಯುತಿದ್ದಂತೆ ಮಾಚಯ್ಯನೆಂದ: "ಪುಟ್ಟಬಸವರಾಜರ ತಾಯಿ ತುಂಬಾ ಕಷ್ಟ ಅನುಭವಿಸಿದ ಜೀವ.ಅವರು ಬಸಿರಲ್ಲಿದ್ದಾಗಲೇ......" ಅಸಕ್ತಿಯಿಂದ ರಾಮಗೌಡ ಆ ಕತೆಗೆ ಕಿವಿಗೊಟ್ಟ.ಆ ತಾಯಿಯ ವಿಷಯದಲ್ಲೂ ಮಗನ ವಿಷಯದಲ್ಲೂ ಆತನ ಗೌರವ ಹೆಚ್ಚಿತು. ಮಾಚಯ್ಯ ಮಾತು ನಿಲ್ಲಿಸಿ,'ಹೂಂ'ಗುಟ್ಟುವುದು ಅನಗತ್ಯವಾದಾಗ,ರಾಮಗೌದನೆಂದ: "ಇಲ್ಲಿಗೆ ಬಂದ್ಮೇಲಂತೂ ನಮ್ಮ ಕೆಲಸ ಗಂಡಾಗ್ತದೇಂತ ನನ್ನ ನಂಬಿಕೆ ಹೆಚ್ಚಿದೆ ಮಾಚಯ್ಯನವರೆ." "ಪುಟ್ಟಬಸವರಾಜರನ್ನು ಮೊದಲು ಭೇಟಿ ಮಾಡಿ.ಆಮೇಲೆ ಹೇಳಿ...." ಸ್ವಲ್ಪ ದೂರ ಮೌನವಾಗಿ ನಡೆದ ಬಳಿಕ ರಾಮಗೌಡ ಹೇಳಿದ: "ನಾನಾಗಲೀ ನಮ್ಮ ಜನರಾಗಲೀ ಈವರೆಗೆ ಯುದ್ಧ ಮಾಡಿದವರೇ ಅಲ್ಲ.ನಮಗೆ ಯುದ್ಧದ ಅಗತ್ಯ ಇದ್ದರಲ್ಲವೊ?ಹೊಲದಲ್ಲಿ ಬೇಸಾಯ ಮಾಡಿ ನಮ್ಮಷ್ಟಕ್ಕೆ ನಾವು ಇರುವವರು. ಆ ಸ್ವಾತಂತ್ರ್ಯಕ್ಕೆ ಸಂಚಕಾರ ಬಂದಾಗ ಹ್ಯಾಗೆ ಸುಮ್ಮನಿರೋಕಾಗ್ತದೆ ಹೇಳಿ? ಗೌಡರೆಲ್ಲಾ ಪುಕ್ಕಲು ಜನರೂಂತ ಆ ಕುಂಪಣಿಯವನು ಭಾವಿಸಿದ್ದಾನೋ ಏನೋ.ಅದು ಈಗ ಇತ್ಯರ್ಥವಾಗೇ ತೀರ್ರ್ಬೆಕು.ನಮ್ಮ ಗದ್ದೆಯಲ್ಲಿ ಬೆಳೆಯೋದು ನಮ್ಮ ಸೊತ್ತೇ.ಅದನ್ನು ಇನ್ನೊಬ್ಬರಿಗೆ ನಾವು ಯಾಕೆ ಕೊಟ್ಟೀವು......?" ರಾಮಗೌಡನ ಬಾಯಿಂದ ಆ ಮಾತುಗಳನ್ನು ಮಾಚಯ್ಯ ಹಿಂದೆಯೂ ಕೇಳಿದ್ದ. ಮಂತ್ರಶಕ್ತಿಯ ಪ್ರಯೋಗವಾದಂತೆ,ಕೇಳುವ ಜನರ ಮೇಲೆ ಆ ಪದಗಳ ಪ್ರಭಾವ ಬೀರುತಿದ್ದುವು.ಒಂದೇ ಸೂತ್ರದಿಂದ ಶ್ರೋತೃ ಗಳನ್ನೆಲ್ಲ ಬಿಗಿಯುವ ಸಾಮರ್ಥ್ಯವಿತ್ತು ಆತನ ವಾಕ್ ಸರಣಿಗೆ. ಸುಳ್ಯದಲ್ಲಿ ರಾಮಗೌಡ ಅಂದಿದ್ದ: 'ನಿಮಗೆ ಎಷ್ಟು ಜನ ಬೇಕು ಮಾಚಯ್ಯನವರೇ?ಸಾವಿರವೆ?