ಈ ಪುಟವನ್ನು ಪ್ರಕಟಿಸಲಾಗಿದೆ

ಅರಸನಿಗೆ ದೇಹದಲ್ಲಿದ್ದ ದೊಡ್ಡ ಜೀವವು ಮೇಲಕ್ಕೆ ಎದ್ದಂತಾಯಿತು. ಕಣ್ಣಲ್ಲಿ ಒಳಗಿನ ನೋವೆಲ್ಲ ಪ್ರತಿಫಲಿಸಿ ಎರಡು ತೊಟ್ಟಿನ ರೂಪವಾಗಿ ಉಕ್ಕಿತು. ಅದನ್ನು ಕಂಡು ಮಹರ್ಷಿಯು ನಕ್ಕು, “ಕೊನೆಯವರೆಗೂ ಇಲ್ಲಿರುವುದು ಸಾಧ್ಯವಿಲ್ಲವೆಂದು ಬಲ್ಲ ನೀನೂ ಹೀಗೆ ವ್ಯಥೆಪಟ್ಟರೆ, ಅದು ಅಭಿಮಾನದ ಗುರುತಾಯಿತೇ ಹೊರತು ವಿವೇಕದ ಲಕ್ಷಣವಾಗಲಿಲ್ಲ. ಜಗತ್ತೆಂದರೆ ಓಡುವ ನದಿಯೆಂಬುದನ್ನು ನಾವು ಮರೆಯಬಾರದು. ಬಂದುದನ್ನೆಲ್ಲ ಕಳುಹಿಸಿಕೊಟ್ಟು ಬರುವುದನ್ನು ಪ್ರತೀಕ್ಷಿಸುತ್ತಾ ನಿಂತಿರುವುದೇ ವಿವೇಕ. ಜಗತ್ತು ಗಳಿಗೆಗೊಂದು ಬಣ್ಣವಾಗದಿದ್ದರೆ ಇನ್ನು ಅದಕ್ಕೆ ಜಗತ್ತು ಎನ್ನುವದೇನು ? ಈ ಜಗತ್ ಎನ್ನುವ ಅರ್ಥವೇ ಅದಲ್ಲವೇ ? ಉದುರುವ ಎಲೆಗಳನ್ನು ಕಂಡವರಿಗೆ ಅದರ ಹಿಂದಿರುವ ಮರವನ್ನು ಕಂಡರೆ ಎಲೆ ಉದುರಿತು ಎಂಬ ದುಃಖವಿಲ್ಲದೆ ಹೊಸ ಎಲೆಯು ಹುಟ್ಟುವುದು ಎಂಬ ನಿರೀಕ್ಷೆಯು ಬಂದು ಆನಂದವಾಗುವುದು. ನಿನ್ನ ಅಭಿಮಾನವನ್ನು ಕಂಡು ನಾನು ಬಲ್ಲೆನೆಂಬ ಅಹಂಭಾವಕ್ಕೆ ವಶನಾಗದಿರುವುದರಿಂದ ನೀನು ವಜ್ರದ ವರ್ತಿಕೊಟ್ಟ ವಜ್ರದಂತಿರುವೆ. ಅರಸಾ, ನಿನಗೆ ನಾನೊಂದು ವರವನ್ನು ಕೊಡುವೆನು. ಕೇಳು” ಎಂದನು.

ಅರಸನು ವಿನಯದಿಂದ ಎದ್ದು ನಿಂತು “ಭಗವನ್, ತಾವು ಗಿಡದ ಸಾಮ್ಯವನ್ನು ತೋರಿಸಿ ಬಂದ ದುಃಖವೆಲ್ಲ ಆನಂದವಾಗುವ ವಿಧಾನವನ್ನು ಉಪದೇಶಿಸಿದಿರಿ. ಇದಕ್ಕಿಂತಲೂ ಇನ್ನು ಯಾವ ವರವನ್ನು ಕೇಳಲಿ ? ಆದರೂ ತಮ್ಮ ಅಪ್ಪಣೆಯೆಂದು ಕೇಳುವೆನು. ನನಗೆ ಯಾವಾಗಲೂ ಧರ್ಮದಲ್ಲಿ ಬುದ್ಧಿಯು ಸ್ಥಿರವಾಗಿರಲಿ” ಎಂದು ನಮಸ್ಕಾರ ಮಾಡಿದನು.

ಚ್ಯವನ ಮಹರ್ಷಿಯು ಸಂತುಷ್ಟನಾಗಿ “ಹಾಗೆಯೇ ಆಗಲಿ, ನಿನ್ನ ಬುದ್ಧಿಗೆ ಯಾವಾಗಲೂ ಧರ್ಮವು ಗೋಚರವಾಗುತ್ತಿರಲಿ. ಆದರೆ ಇತರರಿಗೆ ಹೇಳಬೇಕಾಗಿ ಬಂದಲ್ಲಿ ಅವರು ಕೇಳಿದಾಗ ಸಕಾರಣವಾಗಿ ಅವರ ಮನಸ್ಸಿಗೊಪ್ಪುವಂತೆ ವಿಶದವಾಗಿ ಹೇಳಬೇಕು. ಇಲ್ಲವಾದರೆ ಅದನ್ನು ಧರ್ಮದೇವನು ಒಪ್ಪುವುದಿಲ್ಲ. ಅದು ನೆನಪಿರಲಿ” ಎಂದು ಅನುಗ್ರಹ ಮಾಡಿದನು. ಆ ವೇಳೆಗೆ ವಾಲಗದ ಸದ್ದು ಆಗಿ, ಅದು ಮೃದಂಗದ ನಾದದೊಡನೆ ಸೇರಿ ಪರ್ಣಶಾಲೆಯವರೆಗೂ ಬಂದು ಬ್ರಹ್ಮರ್ಷಿ ರಾಜರ್ಷಿಗಳಿಬ್ಬರನ್ನೂ ಎಚ್ಚರಗೊಳಿಸಿತು. ಮಂಗಳವಾದ್ಯಶ್ರವಣದಿಂದ ಜಾಗ್ರತವಾದ ಲೋಕವಾಸನೆಯನ್ನು ಅನುಸರಿಸಿ ಅವರು ಮುಂದಿನ ಕಾರ್ಯಕ್ಕೆ ಸಿದ್ಧರಾದರು. ಋತ್ವಿಕ್ಪುರೋಹಿತರು ಬಂದು ಯಥಾವಿಹಿತವಾಗಿ ದರ್ಶನಮಾಡಿ ಇಬ್ಬರನ್ನೂ ಸಭಾಮಂಟಪಕ್ಕೆ ಕರೆದುಕೊಂಡು ಹೋದರು.