ಈ ಪುಟವನ್ನು ಪ್ರಕಟಿಸಲಾಗಿದೆ

೩.ಅನರ್ಥ ಬೀಜ

ಅಮರರಿಗೂ ಅಸುರರಿಗೂ ಅಲ್ಲಲ್ಲಿ ಕೈ ಕೈ ಸೇರುತ್ತಿದೆ. ಅಮರರ ಏಟು ಬಲವಾಗಿದ್ದರೂ ವಿಜಯವು ಅಸುರರ ಪಾಲಾಗುತ್ತಿದೆ. ಎಲ್ಲಿ ಯಾವ ಲೋಕಪಾಲನ ಮೇಲೆ ಅಸುರರು ಧಾಳಿಯಿಡಿಯುವರೋ ಎಂಬ ಸಂಶಯವು ಅಮರರಿಗೆ ತಾನೇ ತಾನಾಗುತ್ತಿದೆ.

ಅಸುರ ವಿಜಯದ ಸುದ್ದಿಗಳೂ ಅಮರೇಂದ್ರನಿಗೆ ಗುಚ್ಛ ಗುಚ್ಛವಾಗಿ ಬರುತ್ತಿವೆ. ಇದುವರೆಗೆ ರಾಕ್ಷಸರೆಂದರೆ ಲಕ್ಷ್ಯವಿಲ್ಲದೆ ಇದ್ದ ದೇವರಾಜನಿಗೆ ಈಗ ಏಕೋ ಹೆದರಿಕೆಯಾಗುತ್ತಿದೆ. ಸಮುದ್ರದ ಹೃದಯದಂತೆ ಗಂಭೀರವಾಗಿದ್ದ ಮನವು ಸಮುದ್ರದ ಮೇಲ್ಮೈಯಂತೆ ಕ್ಷುಬ್ಧವಾಗುತ್ತಿದೆ. ಈ ಸಲವೇನಾದರೂ ತನಗೂ ರಾಕ್ಷಸರಿಗೂ ಪ್ರತ್ಯಕ್ಷವಾಗಿ ಯುದ್ಧವಾದರೆ ತನ್ನ ಗತಿಯೇನಾದಿತೋ ಎಂದು ಹೆದರಿಕೆಯಾಗುತ್ತಿದೆ. ಈ ಸಂದಿಗ್ಧಸ್ಥಿತಿಯಲ್ಲಿಯೇ ಒದ್ದಾಡುತ್ತಿರುವುದೋ? ಅಥವಾ ಅದಕ್ಕೆ ಏನಾದರೂ ಪ್ರತೀಕಾರ ಮಾಡುವುದೋ?

ಒಂದು ದಿನ ಸುರೇಂದ್ರನು ಏಕಾಂತದಲ್ಲಿ ಶಚಿಯೊಡನೆ ಆಲೋಚಿಸಿದನು. “ಇಂದ್ರಾಣಿ, ನನ್ನ ಪ್ರಭಾವವು ಲೋಪವಾಯಿತೇನೋ ಎನ್ನಿಸುತ್ತಿದೆ. ನಾನು ಅಕಾರ್ಯಗಳನ್ನು ಮಾಡಲಿಲ್ಲ. ಆದರೂ ಏಕೋ ಏನೋ ಎದೆಯು ನಡುಗುತ್ತಿದೆ. ಶತ್ರುಗಳನ್ನು ಎದುರಿಸಲಾರೆನೆನ್ನುತ್ತಿದೆ. ಏನು ಮಾಡಿದರೆ ಇದು ಸರಿಹೋದೀತು.”

ಇಂದ್ರಾಣಿಯು ಗಂಡನ ಕಾಲು ಒತ್ತುತ್ತಾ ಹೇಳಿದಳು : “ದೇವ, ಆ ದಿನ ಧರ್ಮಾಚಾರ್ಯರು ಮರೆಯಾದರಲ್ಲ ಅಂದಿನಿಂದ ದೇವಲೋಕಕ್ಕೇ ಒಂದು ಮೋಹವು ಮುಚ್ಚಿದಂತಿದೆ. ನಾನೂ ಈ ವಿಚಾರವನ್ನು ನಿನ್ನ ಬಳಿ ಎತ್ತಬೇಕು ಎಂದಿದ್ದೆ. ಅಲ್ಲದೆ, ನಿನಗೆ ತಿಳಿದಂತೆ ಅಲ್ಲಲ್ಲಿ ನಡೆಯುತ್ತಿರುವ ಕಾಳಗಗಳಲ್ಲಿ ಅಮರರ ಪ್ರತಾಪವು ಹೆಚ್ಚಿದ್ದರೂ ವಿಜಯಮಾಲೆಯು ಅಸುರರಿಗೆ ತಪ್ಪಿದ್ದಲ್ಲ. ಅದರಿಂದ ನಮ್ಮಲ್ಲಿಯೇ ಏನೋ ಲೋಪವಿರಬೇಕು. ಆ ಲೋಪವು ಧರ್ಮಾಚಾರ್ಯರ ಅಭಾವದಿಂದ ಆಗಿರಬೇಕು ಎಂದು ನನಗನ್ನಿಸುತ್ತಿದೆ.”

“ನಿಜ. ಧರ್ಮಲೋಪವಾದರೆ ಏನೇನು ಅನರ್ಥಗಳಾಗುವುವು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅಲ್ಲದೆ, ನಾವು ಕೆಡಿಸಬೇಕೆಂದಿರುವ ಮಾನವರಿಗೆ