ಈ ಪುಟವನ್ನು ಪ್ರಕಟಿಸಲಾಗಿದೆ

ಸುರಾಚಾರ್ಯನು ಹೇಳಿದನು : “ದೇವತೆಗಳೆಲ್ಲರಿಗೂ ಅವರವರ ಕಾರ್ಯಗಳಿರುವುದರಿಂದ, ಅವರನ್ನು ಅವರ ಕಾರ್ಯದ ಜೊತೆಗೆ ಇನ್ನೊಬ್ಬರ ಕಾರ್ಯವನ್ನು ವಹಿಸಿಕೊಳ್ಳಿ ಎಂದು ಹೇಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೇಕವಾಗಿಯೇ ಬೇಕು ಎಂದು ನಾವೆಲ್ಲರೂ ಸಮಾರಂಭಕ್ಕೆ ಮುಂಚೆಯೇ ಗೊತ್ತು ಮಾಡಿಕೊಂಡಿದ್ದೇವೆ. ಅದರಿಂದ ನಮಗೆ ಇಷ್ಟವಿದ್ದರೂ ಇಷ್ಟವಿಲ್ಲದಿದ್ದರೂ ಈಗ ಸಾಧ್ಯವಿರುವುದು ಒಂದೇ. ಒಂದು ಪಕ್ಷ ಅದು ಮಧ್ಯಮಲೋಕದ ಚಕ್ರವರ್ತಿಯಾದ ನಹುಷನನ್ನು ಇಂದ್ರನನ್ನಾಗಿ ಆರಿಸಿಕೊಳ್ಳುವುದು. ಅದು ಸಭೆಗೆ ಸಮ್ಮತವಾದರೆ ಮುಂದಿನ ಮಾತು.”

ಪಿತೃಗಣ ಪ್ರತಿನಿಧಿಯು ಹೇಳಿದನು : “ನಮ್ಮ ಕನ್ಯೆಯನ್ನು ಆತನಿಗೆ ಕೊಟ್ಟು ನಾವು ಆತನನ್ನು ನಮಗೆ ಸಮನೆಂದು ಆಗಲೇ ಒಪ್ಪಿದ್ದೇವೆಯಾಗಿ, ಆತನನ್ನು ಇಂದ್ರನಾಗಿ ವರಿಸಲು ನಮ್ಮ ಆಕ್ಷೇಪಣೆಯಿಲ್ಲ.”

ಋಷಿಗಣದ ಪ್ರತಿನಿಧಿಯು ಹೇಳಿದನು : “ಆತನು ಭೃಗುವಂಶದ ಚ್ಯವನ ಶಿಷ್ಯನು. ಆತನನ್ನು ಇಂದ್ರನಾಗಿ ವರಿಸುವುದರಲ್ಲಿ ನಮ್ಮ ಆಕ್ಷೇಪಣೆಯೇನೂ ಇಲ್ಲ.”

ಸುರಾಚಾರ್ಯನು ಅಗ್ನಿವಾಯುಗಳ ಮುಖವನ್ನು ನೋಡಿದನು ; ‘ಆತನು ಬಹು ವಿಚಕ್ಷಣೆಯಿಂದ ರಾಜ್ಯವಾಳುತ್ತಿರುವನು. ಆತನು ದಾನಶೌಂಡನು. ನಿತ್ಯಾಗ್ನಿ ಹೋತ್ರಿಯು. ಆತನು ಒಪ್ಪಿದರೆ ಆಗಬಹುದು.”

“ಆತನು ಒಪ್ಪಿದರೆ ಎಂದರೇನು ?”

“ಹೌದು. ಈಗ ಈತನಿಗೆ ಏನು ಕಡಿಮೆಯಗಿದೆ ? ಆತನೀಗ ಮಧ್ಯಮ ಲೋಕದಲ್ಲಿದ್ದರೂ ಇಂದ್ರನಂತೆಯೇ ಇದ್ದಾನೆ. ಆತನು ಇಂದ್ರನಾಗುವುದರಿಂದ ಆತನಿಗೇನು ಹೆಚ್ಚುಗಾರಿಕೆ ಬಂದಂತಾಗುವುದು ?”

“ಆತನನ್ನು ಬಿಟ್ಟರೆ, ಇನ್ನು ಯಾರೂ ಇಲ್ಲವಾಗಿ, ಏನಾದರೂ ಮಾಡಿ ಆತನನ್ನು ಒಪ್ಪಿಸಬೇಕು.”

“ಎಷ್ಟಾಗಲಿ ಇಂದ್ರಪದವಿ. ಅದರಿಂದ ಒಪ್ಪದೆ ಏನು ?”

“ಒಂದು ವೇಳೆ ಜಾತವೇದನು ಶಂಕಿಸಿದಂತೆ ಆತನು ಇಂದ್ರನಾಗಲು ಒಪ್ಪದಿದ್ದರೆ, ಆತನಿಗೆ ವಿಶೇಷ ವರಗಳನ್ನು ಕೊಟ್ಟಾದರೂ ಒಪ್ಪಿಸಬೇಕು.”

‘ಅದೀಗ ಸರಿಯಾದ ಮಾತು.’

“ಸರಿ. ಇಂದಿನ ಕಾರ್ಯಕ್ರಮದಲ್ಲಿ ಒಂದು ಪ್ರಧಾನಾಂಶವು ಇತ್ಯರ್ಥವಾದ ಹಾಗಾಯಿತು. ಇನ್ನು ಮುಂದಿನ ಕಾರ್ಯ. ಆತನನ್ನು ಪ್ರಾರ್ಥಿಸಲು ಹೋಗುವವರು