ಈ ಪುಟವನ್ನು ಪ್ರಕಟಿಸಲಾಗಿದೆ

೩೩.ವಿಶ್ವಜಿದ್ಯಜ್ಞ

ನಹುಷೇಂದ್ರನು ದರ್ಶನಮಂದಿರದಲ್ಲಿ ದೇವಗುರುಗಳೋಡನೆ ಮಾತನಾಡುತ್ತಾ ಕುಳಿತಿದ್ದಾನೆ. ಅರಸನು ಕೇಳಿದನು : “ಅದೇನು, ನೀವು ದೇವತೆಗಳು ಸಪ್ತರ್ಷಿಗಳನ್ನು ಅಷ್ಟು ಗೌರವಿಸುವುದು?”

ದೇವಗುರುವು ಹೇಳಿದನು : “ಹಿಂದಿನದೊಂದು ಆಖ್ಯಾಯಿಕೆಯನ್ನು ಇಲ್ಲಿ ಹೇಳಲು ಅಪ್ಪಣೆಯಾಗಬೇಕು. ಹಿಂದೆ ಭೂಮಂಡಲದಲ್ಲಿ ಪ್ರತರ್ದನನೆಂಬ ಮಹಾರಾಜನಿದ್ದನು. ಆತನು ತನ್ನ ಶೌರ್ಯದಿಂದ ಸ್ವರ್ಗವನ್ನು ಗೆದ್ದನು. ಆಗ ಇಂದ್ರನು ಸುಪ್ರೀತನಾಗಿ `ನಿನಗೆ ವರವನ್ನು ಕೊಡುವೆನು, ಕೇಳು’ ಎಂದನು. ಶೌರ್ಯಗರ್ವಿತನಾದ ಆ ರಾಜನು “ನೀನು ಉತ್ತಮೋತ್ತಮವೆಂದುಕೊಂಡ ವರವನ್ನು ಕೊಡು” ಎಂದನು. ಆಗ ಇಂದ್ರನು ಆತನಿಗೆ ‘ಬ್ರಹ್ಮವಿದ್ಯೆಗಿಂತ ಉತ್ತಮವಾದ ವರವಿಲ್ಲ. ತೆಗೆದುಕೋ’ ಎಂದು ಬ್ರಹ್ಮವಿದ್ಯೆಯನ್ನು ಕೊಟ್ಟನು. ಮಿಕ್ಕವರು ಗುರುಮುಖದಿಂದ ಅಧ್ಯಯನ ಮಾಡಿ ತಿಳಿದುಕೊಂಡರೂ ಚಿತ್ರಾಗ್ನಿಯಂತೆ ಇರುವ ಬ್ರಹ್ಮವಿದ್ಯೆಯು ಸಪ್ತರ್ಷಿಗಳಲ್ಲಿ ಯಾವಾಗಲೂ ಜ್ವಾಲಾಮಾಲಾಸುಂದರವಾಗಿರುವುದು. ಇತರರಿಗೆ ಅಲಭ್ಯವಾದುದರಿಂದ ಖಿಲವೆನ್ನಿಸಿಕೊಂಡಿರುವ ವೇದಭಾಗವು ಅವರಿಗೆ ತಿಳಿದಿರುವುದು. ಇತರರು ತಪಸ್ಸಿನಿಂದಲೂ ಆರ್ಜಿಸಲಾರದ ಸ್ಥಿತಿಯು ಅವರಿಗೆ ಸಹಜವಾಗಿ ಸಿದ್ಧವಾಗಿರುವುದು. ಇದನ್ನು ಬಲ್ಲ ದೇವತೆಗಳು ಅವರನ್ನು ಗೌರವಿಸುವುದನ್ನು ಬಿಟ್ಟು ಇನ್ನೇನು ಮಾಡಬಲ್ಲರು?”

ನಹುಷನು ನ್ಯಾಯವೆಂಬಂತೆ ತಲೆದೂಗಿ ಹೇಳಿದನು : “ಇಂದ್ರನು ಅವರನ್ನು ಸಾಕ್ಷಾತ್ಕರಿಸಿಕೊಳ್ಳಲು ತಮ್ಮನ್ನು ಆಶ್ರಯಿಸಬೇಕಂತೆ?”

“ಅದು ಪದ್ಧತಿ. ದೇವಾಚಾರ್ಯನಿಗೆ ದೇವರಾಜನು ಸಲ್ಲಿಸುವ ಗೌರವ.”

“ಸರಿ. ನಾವೂ ಅದನ್ನು ಗೌರವಿಸೋಣ. ಅವರನ್ನು ಏನು ಕೇಳಬೇಕಾದರೂ ತಮ್ಮ ಮುಖವಾಗಿಯೇ ಕೇಳಬೇಕೋ?”

“ಇಲ್ಲ ಅಂತಹ ನಿಯಮವೇನೂ ಇಲ್ಲ. ಅಲ್ಲದೆ ತಾವು ಧರ್ಮಪರಾಯಣ ರಾದವರೆಂದು ತಮಗೆ ಎಲ್ಲೆಲ್ಲಿಯೂ ಸ್ವಾತಂತ್ರ್ಯವುಂಟು.”