ಈ ಪುಟವನ್ನು ಪ್ರಕಟಿಸಲಾಗಿದೆ

ಅರಸನು ಚಿತ್ರರಥನ ಕಡೆಗೆ ತಿರುಗಿದನು. “ಗಂಧರ್ವಪತಿ, ನೀನು ಸಕಲ ಸೈನ್ಯದೊಡನೆ, ಸಮರಾಂಗಣಕ್ಕೆ ನಡೆವಂತೆ, ವ್ಯೂಹಕ್ರಮದಿಂದ ಸನ್ನಾಹಮಾಡಿ ಕೊಂಡು ಈ ಮಹಾಪುರುಷರ ಜೊತೆಯಲ್ಲಿ ನಡೆಯತಕ್ಕದ್ದು. ದೇವರಾಜನ ಅಪ್ಪಣೆಯನ್ನು ಮಾನ್ಯ ಮಾಡದವರನ್ನು ಸರ್ವಥಾ ನಿಗ್ರಹಿಸತಕ್ಕದ್ದು.”

ಚಿತ್ರರಥನು ತನ್ನ ಜೀವಿತದ ಪರಮಪುರುಷಾರ್ಥವನ್ನು ಸಾಧಿಸುವವನಂತೆ, ಆನಂದದಿಂದ ಕೋಡಿಹರಿಯುತ್ತಿರುವ ಕಣ್ಣನ್ನು ಒರೆಸಿಕೊಳ್ಳುತ್ತ ನೆಲ ಮುಟ್ಟಿ ನಮಸ್ಕಾರ ಮಾಡಿ “ಅಪ್ಪಣೆ” ಎಂದನು.

ದೇವರಾಜನು ಗಂಭೀರನಾಗಿ ಕೈಮುಗಿದುಕೊಂಡು ಧ್ಯಾನಿಸಿದನು. ಇಂದ್ರಾಯುಧಗಳೆಲ್ಲವೂ ಎದುರಿಗೆ ಬಂದು ನಿಂತವು. ಅವುಗಳಿಗೆಲ್ಲಾ ಮಾನಸೋಪಚಾರ ಪೂಜೆಯನ್ನೊಪ್ಪಿಸಿ, “ಅಸ್ತ್ರಶ್ರೇಷ್ಠರೆ, ಅನುಜ್ಞೆಯನ್ನು ಕೊಡಿ. ನಿಮ್ಮ ದರ್ಶನಮಾತ್ರದಿಂದಲೇ ದೇವವೈರಿಗಳು ಹತತೇಜಸ್ಕರಾಗುವರು. ಇಂದು ನಾನು ತ್ರಿಲೋಕಾಧಿಪತಿಯಾಗಿ ತಮ್ಮನ್ನು ಪ್ರಾರ್ಥಿಸುವೆನು. ತಮ್ಮ ನಾಥನಾದ ಮಹೇಂದ್ರನನ್ನು ಯಾವುದೋ ಹತ್ಯೆಯು ಬಾಧಿಸುತ್ತಿರುವುದಂತೆ. ಚರಾಚರಗಳಿಗೆಲ್ಲ ನಾಥನಾದ ಮಹಾವಿಷ್ಣುವಿನ ಅಪ್ಪಣೆಯಿದು ಎಂದು ತಾವು ಇದನ್ನು ಪಾಲಿಸತಕ್ಕದ್ದು. ಆ ಮಹೇಂದ್ರನನ್ನು ಇಲ್ಲಿಗೆ ಕರೆತರಲು ಅಗ್ನಿವಾಯುಗಳು ಸಸೈನ್ಯರಾಗಿ ಹೊರಟಿರುವರು. ತಾವೆಲ್ಲರೂ ಅವರಿಗೆ ರಕ್ಷಣೆಯನ್ನು ಕೊಟ್ಟು ಆ ಮಹೇಂದ್ರನನ್ನು ಇಲ್ಲಿಗೆ ಕರೆತರಬೇಕು.”

ಆಯುಧಗಳೆಲ್ಲವೂ ಮಹೋತ್ಸಾಹದಿಂದ ಪ್ರಜ್ವಲಿಸುತ್ತಾ, “ದೇವರಾಜನ ಅಪ್ಪಣೆಯನ್ನು ಸರ್ವಥಾ ಪಾಲಿಸುವೆವು” ಎಂದು ಆಜ್ಞೆಯನ್ನು ಶಿರಸಾವಹಿಸಿ ನಡೆದುವು.

ದೇವಗುರುವು ಎಲ್ಲವನ್ನೂ ಕೇಳಿ ಆಶ್ಚರ್ಯಪಡುತ್ತ, “ಹೌದು, ಹೌದು. ಅಧಿಕಾರವಿರುವುದು ಹೆಚ್ಚಲ್ಲ. ಅದನ್ನು ವಿನಿಯೋಗಿಸುವ ಸಾಮಥರ್ಯ್‌ವೂ ಇರಬೇಕು” ಎಂದು ತಲೆದೂಗಿದನು. ಶುಕ್ರಾಚಾರ್ಯನು ‘ಭಲೆ, ಪ್ರಭುವೆಂದರೆ ಹೀಗಿರಬೇಕು. ನಮ್ಮ ಎದುರಿಗೆ ಆಜ್ಞೆಯನ್ನು ಮಾಡಿ, ನಾವು ಗುಪ್ತವಾಗಿಯಾಗಲಿ ಪ್ರಕಟವಾಗಿ ಯಾಗಲಿ ಅದನ್ನು ಪ್ರತಿಭಟಿಸದಂತೆ, ಅದಕ್ಕೆ ಅಡ್ಡಿಬರದಂತೆ, ಮಾಡಿಟ್ಟನಲ್ಲ ! ಭಲೆ ! ಈ ಪ್ರಭುವಿನ ಪ್ರತಾಪದ ಮುಂದೆ ಆ ಹತ್ಯೆಯು ಉಳಿಯುವುದೆಂತು ?’ ಎಂದು ತಲೆದೂಗಿದನು.

ಇಂದ್ರನು ಮತ್ತೆ ಪ್ರಹರಿಯನ್ನು ಕರೆದು ಅಪ್ಪಣೆ ಮಾಡಿದನು : “ಮಹೇಂದ್ರನು ಅಮರಾವತಿಯ ಬಾಗಿಲಿಗೆ ಬರುವ ವೇಳೆಗೆ, ಆತನಿಗೆ ಸಲ್ಲಬೇಕಾದ ಗೌರವಗಳೆಲ್ಲ