ಈ ಪುಟವನ್ನು ಪ್ರಕಟಿಸಲಾಗಿದೆ

ಆಚಾರ್ಯನು ನಡುವೆ ಬಾಯಿಹಾಕಿದನು. ಇಂದ್ರನು ಕೈಮುಗಿದುಕೊಂಡು ವಿನಯದಿಂದ ಹೇಳುತ್ತಿರುವುದು ಆತನಿಗೆ ಆಟವೆನ್ನಿಸಿತು. ತನಗೆ ಮೊದಲೇ ಬಂದಿದ್ದ ಕೋಪವನ್ನು ಪ್ರಕಟವಾಗಿ ಹೊರಚೆಲ್ಲುತ್ತ “ಅದೇ ಪ್ರಾರ್ಥನೆ ತಾನೇ ? ಸಾಧ್ಯವಿಲ್ಲ- ನೀವು ಬೇಕಾದುದು ಮಾಡಬಹುದು” ಎಂದು ಸೆಟೆದು ನುಡಿದನು.

ದೇವೇಂದ್ರನಿಗೂ ಆ ಕಾವು ಹತ್ತಿ ಕೋಪ ಬಂತು. ಆದರೂ ವಿನಯವನ್ನು ಬಿಡದೆ, “ಆಚಾರ್ಯ, ದೇವತೆಗಳು ತ್ರಿಲೋಕದ ರಕ್ಷಾಭಾರವನ್ನು ಹೊತ್ತಿರುವರು. ಅವರು ಆಚಾರ್ಯನೆಂದು ವರಿಸಿರುವವನು ಅಕಾರ್ಯವನ್ನು ಮಾಡಬಾರದು ಎಂದು ಕೋರುವರು. ಆ ಪ್ರಾರ್ಥನೆಯನ್ನು ಇನ್ನು ಯಾವ ರೀತಿಯಲ್ಲೂ ಸಲ್ಲಿಸಲು ಸಾಧ್ಯವಿಲ್ಲದಿದ್ದರೆ, ವರವೆಂದಾದರೂ ಅನುಗ್ರಹಿಸಬೇಕು ಎಂದು ಬಲವಂತ ಮಾಡಬೇಕು ಎಂದು ನನ್ನನ್ನು ನಿಯೋಜಿಸಿರುವರು” ಎಂದನು.

ಆಚಾರ್ಯನು ಇನ್ನೂ ಸೆಟೆದುಕೊಂಡು ಎದ್ದು ನಿಂತು, “ಇಂದ್ರನ ಈ ಭದ್ರಮುಷ್ಠಿ ಪ್ರದರ್ಶನವು ಯಾರ ಬಳಿ ? ನಾನಿತ್ತ ಭಿಕ್ಷೆಯಿಂದ ದೊಡ್ಡವರಾದ ದೇವತೆಗಳು ನನ್ನ ಮೇಲೆ ಅಧಿಕಾರ ಮಾಡುವುದನ್ನು ನಾನು ಸಹಿಸುವುದಿಲ್ಲ” ಎಂದು ಕಠೋರವಾಗಿ ನುಡಿದನು.

ಇಂದ್ರನು ಎದ್ದು ನಿಂತು, ಕೈಮುಗಿದುಕೊಂಡು, “ದೇವ, ದೇವತೆಗಳ ಪ್ರಾರ್ಥನೆಯನ್ನು ಸಲ್ಲಿಸದಿದ್ದರೆ ಅಪರಾಧವಾಗುವುದು....”

ವಿಶ್ವರೂಪನು ಮತ್ತೆ ಅರ್ಧದಲ್ಲಿ ನುಗ್ಗಿ ಮಾತಾಡುತ್ತ ವಿಕಟವಾಗಿ ನಗುತ್ತ “ಅಪರಾಧ ! ಅಪರಾಧ ! ಎಲ್ಲಿ ನಿನಗೆ ಶಕ್ತಿಯಿದ್ದರೆ ಅಪರಾಧಿ ಶಿಕ್ಷೆಯನ್ನು ವಿಧಿಸು, ನೋಡೋಣ” ಎಂದು ಎದೆಯನ್ನು ಬಾಚಿ ನಿಂತನು.

ಇಂದ್ರನು ಮತ್ತೆಯೂ ಹೇಳಿಕೊಂಡನು : “ಶಿಕ್ಷೆ ವಿಧಿಸಲು ಹಿಂತೆಗೆಯುವುದಾಗಿದ್ದರೆ, ಈ ಭುಜವು ತ್ರೈಲೋಕ್ಯಾಧಿಪತ್ಯದ ಭಾರವನ್ನು ವಹಿಸುತ್ತಿರಲಿಲ್ಲ. ಇದು ಶಿಕ್ಷೆಗೆ ಸ್ಥಾನವಾಗಬಾರದೆಂದು ಮತ್ತೆ ಬಿನ್ನವಿಸಿಕೊಳ್ಳುವೆನು.”

ವಿಶ್ವರೂಪನು ಮತ್ತೆ ಗಹಗಹಿಸಿ ನಗುತ್ತ ಹೇಳಿದನು. ಆ ವಿಕಟಾಟ್ಟಹಾಸದಲ್ಲಿ ತಿರಸ್ಕಾರವು ತಾನೇ ತಾನಾಗಿತ್ತು. “ಹೌದು, ಹೌದು, ನಿನಗೆ ನನ್ನನ್ನು ಶಿಕ್ಷಿಸುವ ಧೈರ್ಯವಿಲ್ಲ. ನನ್ನ ತೇಜಸ್ಸನ್ನು ಸಹಿಸಲಾರದೆ, ಆ ಪರಿಭವವನ್ನು ಪ್ರಕಾರಾಂತವಾಗಿ, ನಿನಗೆ ಗೌರವ ಬರುವಂತೆ ನುಡಿದ ಮಾತ್ರಕ್ಕೆ ಪರಾಭವವು ಪರಾಭವವೇ ಅಲ್ಲವೇನು? ಎಲ್ಲಿ ಇಂದ್ರ, ಶಪಥ ಮಾಡು ನಿನ್ನ ಕೈಲಾದರೆ ನನಗೆ ಶಿಕ್ಷೆಯನ್ನು ವಿಧಿಸು.”

ಇಂದ್ರನ ಕ್ಷಾತ್ರಭಾವವು ಆ ಆಹ್ವಾನವನ್ನು ಮನ್ನಿಸದಿರಲಾಗಲಿಲ್ಲ.