ಈ ಪುಟವನ್ನು ಪ್ರಕಟಿಸಲಾಗಿದೆ

“ಆಯಿತು, ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿಗಳು ಮರೆಯಾಗುವವಂತಲ್ಲ ಅದೇನು?

“ಅದರ ರಹಸ್ಯವಿದು. ಅವು ವರ ಕೊಡುವುವು. ಅದನ್ನು ಪಡೆದುಕೊಳ್ಳುವವರು ಧರ್ಮಿಷ್ಠರಾಗಿರಬೇಕು. ಹಾಗಿಲ್ಲದಿದ್ದರೆ ಅವುಗಳಲ್ಲಿರುವ ವಿಶೇಷಗುಣವು ಪ್ರಕಟವಾಗುವುದಿಲ್ಲ. ನೀನು ನಾನು ಹೇಳಿದಂತೆ ನಡೆದರೆ ಅವು ಬೇಕಾದುದನ್ನು ಕೊಡಬಲ್ಲವಾಗುವುವು.”

“ಸರಿ. ಹಾಗೆಯೇ ಆಗಬಹುದು. ನೀನು ಹೇಳಿದ ರಹಸ್ಯಕ್ಕೆ ಪ್ರತಿಯಾಗಿ ನಾನು ಒಂದು ರಹಸ್ಯವನ್ನು ಹೇಳುವೆನು ಕೇಳು. ವೃತ್ರನು ಸದೇಹನಾಗಿರುವಾಗ ನಿನ್ನ ಮಿತ್ರ. ವಿದೇಹನಾದರೆ ನಿನ್ನ ಮೃತ್ಯು. ಇದನ್ನು ವಿವರಿಸು ಎನ್ನಬೇಡ. ತಿಳಿದುಕೊಂಡಿರು. ಅಷ್ಟೇ !” ಎಂದನು.

ಶಚೀಪತಿಯು ಇಂದ್ರನಾದ ವೃತ್ರಾಸುರನಪ್ಪಣೆಯನ್ನು ಪಡೆದು ಹಿಂತಿರುಗಿದನು. ತಾನು ಶಚೀಪತಿಯಾಗಿರಲು ಅವನು ಒಪ್ಪಿಕೊಂಡುದರಿಂದ ಎಷ್ಟೋ ರಹಸ್ಯಗಳು ತನ್ನಲ್ಲಿಯೇ ಉಳಿಯಲು ಅನುಕೂಲವಾಯಿತೆಂದು ಆತನಿಗೆ ಒಂದು ಸಂತೋಷ. ಆದರೆ ವೃತ್ರನು ಹೇಳಿದ “ಸದೇಹನಾಗಿರುವಾಗ ಮಿತ್ರ, ವಿದೇಹನಾಗಿರುವಾಗ ಮೃತ್ಯು” ಎಂಬುದು ಮಾತ್ರ ಅರ್ಥವಾಗಲಿಲ್ಲ. ಅದನ್ನೇ ಚಿಂತಿಸುತ್ತಾ ಆತನು ಶಚೀದೇವಿಯ ಅರಮನೆಗೆ ಬಂದನು.

ನಾರಾಯಣನ ಅಪ್ಪಣೆಯಿಂದ ತಾನು ವೃತ್ರಾಸುರನಿಗೆ ಇಂದ್ರತ್ವವನ್ನು ಒಪ್ಪಿಸಿ, ಆತನ ಮಿತ್ರನಾದುದನ್ನೂ, ತಾನಿನ್ನು ಮುಂದೆ ಶಚೀಪತಿಯಾಗಿ ಮಾತ್ರ ಬಾಳುವುದನ್ನೂ ಆತನು ಶಚಿಗೆ ಹೇಳಿದನು. ಆಕೆಯು ಗಂಡನನ್ನು ತಬ್ಬಿಕೊಂಡು, “ಇಂದ್ರಪದವಿಯನ್ನು ಬಿಟ್ಟುಕೊಟ್ಟೆಯೆಂದು ನನಗೆ ದುಃಖವಿಲ್ಲ ನೀನು ಇಂದ್ರಾಣಿಯನ್ನೂ ಕೊಟ್ಟಿದ್ದರೆ ಆಗ ಯೋಚಿಸಬೇಕಾಗಿತ್ತು. ಶುಕ್ರಾಚಾರ್ಯನೂ ಆ ಗುಟ್ಟನ್ನರಿಯನು ಎಂದ ಮೇಲೆ, ಪಾಪಾ, ವೃತ್ರನಿಗೇನು ಗೊತ್ತು ?” ಎಂದು ಇಬ್ಬರೂ ಏಕಾಂತದಲ್ಲಿ ತಮ್ಮಷ್ಟಕ್ಕೆ ನಕ್ಕುಕೊಂಡರು.

* * * *