ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146

             ಅಕ್ಷ - ಅಕ್ಷರಗಣ

ನಡೆಯುತ್ತಿದ್ದ ಕಡೆಗಳಿಗೆಲ್ಲ ಅಕ್ವಿನಸ್ ಹೋಗಿ ಬಂದ. ನಾಲ್ಕನೆಯ ಅರ್ಬನ್, ಮೂರನೆಯ ಕ್ಲೆಮೆಂಟ್ ಮುಂತಾದ ಪೋಪರೂ ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕೆ ಇವನ ವಿದ್ವತ್ತಿನ ನೆರವು ಪಡೆಯುತ್ತಿದ್ದರು. ಇಂಥ ನೆರವು ನೀಡುವುದಕ್ಕೆಂದು ಲಯನ್ಸ್ ನಗರಕ್ಕೆ ಪ್ರಯಾಣ ಮಾಡುತ್ತಿದ್ದಾಗ ೧೨೭೪ರಲ್ಲಿ ಕಾಲವಾದ. ೧೩೨೩ರಲ್ಲಿ ಇವನನ್ನು ಸಂತನನ್ನಾಗಿ ಪರಿಗಣಿಸಲಾಯಿತು.

   ಅಕ್ಷ : ಭೂಮಿ ತನ್ನ ಅಕ್ಷದ ಮೇಲೆ ಬುಗುರಿಯಂತೆ ಆವರ್ತಿಸುತ್ತಿದೆ. ಅಕ್ಷ ಎಂದರೆ ಒಂದು ಸರಳರೇಖೆ; ಇದು ಆವರ್ತಿಸುತ್ತಿರುವ ವಸ್ತುವಿನ ದೃಷ್ಟಿಯಿಂದ ಇರುವಲ್ಲಿಯೇ ಆವರ್ತಿಸುವುದರಿಂದ ಅಕ್ಷದ ಸ್ಥಾನ ಸ್ಥಿರ; ವಸ್ತುವಿನ ಇರರ ಬಿಂದುಗಳೂ ಅಕ್ಷದ ಸುತ್ತಲೂ ಸ್ಥಿರದೂರಗಳಲ್ಲಿ ವೃತ್ತಪಥಗಳಲ್ಲಿ ಚಲಿಸುತ್ತವೆ.
   ಇನ್ನು ಬೀಜರೇಖಾಗಣಿತದಲ್ಲಿ ಅಕ್ಷ ಪದದ ಅರ್ಥ ಬೇರೆ. ದತ್ತವಸ್ತುವಿನ (ಅಥವಾ ಘನದ ಅಥವಾ ವಕ್ರರೇಖೆಯ) ಮೇಲಿರುವ ಬಿಂದುಗಳನ್ನು ಗುರುತಿಸಲು ಸಹಾಯಕವಾಗುವಂತೆ ಅನುಕೂಲವಾದ ಒಂದು ಮೂಲರೇಖೆಯನ್ನು ಆರಿಸುತ್ತೇವೆ. ಇದು ಒಂದು ಅಕ್ಷ. ಇದರ ಮೇಲೆ ಒಂದು ಸ್ಥಿರಬಿಂದುವನ್ನು ಗುರುತಿಸುತ್ತೇವೆ. ಇದು ಮೂಲಬಿಂದು. ಇಲ್ಲಿಂದ ಮುಂದೆ ಆಯಾ ನಿರ್ದೇಶಕ ವ್ಯವಸ್ಥೆಯ ಕ್ರಮವನ್ನುನುಸರಿಸಿ ಮೂಲಬಿಂದುವಿನ ಮೂಲಕ ಸಾಗುವ ಇತರ ಎಲ್ಲ ಅಕ್ಷರಗಳನ್ನು ಆರಿಸಬಹುದು. 

ಎರಡನೆಯ ಮಹಾಯುದ್ಧದ ಮೊದಲು ಇಟಲಿಯ ಮುಸೊಲೋನಿ ಜರ್ಮನಿಯ ಹಿಟ್ಲರನೊಡನೆ ಇದ್ದ ತನ್ನ ಅವಿಭಾಜ್ಯ ಮೈತ್ರಿಯನ್ನು ಕುರಿತು "....ಈಗ ನಾವು ಪರಿಶೀಲಿಸಬೇಕಾದ ಇನ್ನೊಂದು ವಾಸ್ತವಿಕಾಂಶ ರೋಮ್- ಬರ್ಲಿನ್ ಅಕ್ಷ ಎಂದು ಸಾಮಾನ್ಯವಾಗಿ ಪ್ರಚಲಿತವಾಗಿರುವ ಭಾವನೆ..." ಎಂದ (೧೯೩೭). ಹಿಟ್ಲರ್ ಮತ್ತು ಆತನ ಅನುಯಾಯಿಗಳನ್ನು ಕುರಿತು ಅಂದಿನಿಂದ ಅಕ್ಷರಾಷ್ಟ್ರಗಳು ಎಂಬ ಪದ ರೂಢಿಗೆ ಬಂದಿತು, (ಸಿ.ಎನ್.ಎಸ್)

    ಅಕ್ಷಪಾದ : ಕಾಲಿನಲ್ಲಿ ಕಣ್ಣುಳ್ಳ ಗೌತಮ ಋಷಿ. ನ್ಯಾಯಶಾಸ್ತ್ರದ ಮೂಲಪುರುಷ. ನ್ಯಾಯಸೂತ್ರಗಳನ್ನು ರಚಿಸಿದವ. ತನ್ನ ಮತವನ್ನು ದೂಷಿಸಿದ ವ್ಯಾಸನನ್ನು ಕಣ್ಣಿನಿಂದ ನೋಡುವುದಿಲ್ಲವೆಂದು ಶಪಥಮಾಡಿ ಕಾಲಾಂತರದಲ್ಲಿ ವಿವೇಕ ಮೂಡಿಬರಲು ಪ್ರತಿಜ್ಞಾಭಂಗವಾಗದಂತೆ ಕಾಲಿನಲ್ಲೇ ಹೊಸದಾಗಿ ಕಣ್ಣನ್ನು ಸೃಷ್ಟಿಸಿಕೊಂಡು ಅದರಿಂದ ವ್ಯಾಸನನ್ನು ನೋಡಿದವ.
    ಅಕ್ಷರಗಣ : ಮಾತ್ರಾಗಣ ಅಂಶಗಣಗಳಂತೆ ಅಕ್ಷರಗಣವೂ ಛಂದಸ್ಸಿನ ರಚನೆಯನ್ನು ಅಳೆಯುವ ಒಂದು ಮಾನ. ಸಂಸ್ಕೃತ ಲೌಕಿಕಛಂದಸ್ಸಿಗೆ ಸೇರಿದ ಅನೇಕಾನೇಕ ವೃತ್ತಗಳನ್ನು ಮೂರು ಮೂರು ಅಕ್ಷರಗಳಿಗೆ ಒಂದು ಗಣದಂತೆ ವಿಭಾಗಿಸಿ ಅಂಥ ಒಂದೊಂದು ಗಣದಲ್ಲಿನ ಲಘುಗುರುಗಳ ಲೆಕ್ಕಾಚಾರದಂತೆ ಅವಕ್ಕೆ ಬೇರೆ ಬೇರೆ ಹೆಸರಿಟ್ಟು ಆಯಾ ವೃತ್ತಾಜಾತಿಯನ್ನು ಗುರುತಿಸುತ್ತಾರೆ.
    ಸಂಸ್ಕೃತ ಲೌಕಿಕಛಂದಸ್ಸಿಗೆ ಸೇರಿದ ವರ್ಣವೃತ್ತಗಳು ನಾಲ್ಕು ಬಗೆಯಾದವು; ಸಮಚತುಷ್ಪದಿ, ಅರ್ಧಸಮಚತುಷ್ಪದಿ, ವಿಷಮಚತುಷ್ಪದಿ ಮತ್ತು ದಂಡಕ. ಇವುಗಳಲ್ಲಿ ವೃತ್ತಾಪಾದದ ಅಕ್ಷರಸಂಖ್ಯೆಯನ್ನು ಅನುಸರಿಸಿ, ಹ್ರಸ್ವ ದೀರ್ಘಾಕ್ಷರಗಳ ಬಗೆಬಗೆಯ ಗಣಿತ ಗುಣಿತಗಳಿಂದಾಗಿ, ಬಹುಸಂಖ್ಯೆಯ ವೃತ್ತಭೇದಗಳು ಹೊರಡುತ್ತವೆ. ಇಂಥ ವರ್ಣವೃತ್ತಗಳ ಸಾಧಾರಣ ಲಕ್ಷಣ ಹೀಗೆ; ನಾಲ್ಕು ಪಾದಗಳು; ಪ್ರತಿಪಾದದಲ್ಲಿಯೂ ನಿರ್ದಿಷ್ಟವಾದ ಅಕ್ಷರಸಂಖ್ಯೆ; ಆ ಅಕ್ಷರಗಳು ಲಘುವೊ ಗುರುವೊ ಆಗಿದ್ದು ನಿರ್ಧಿಷ್ಟವಾದ ಆ ಲಘುಗುರುಗಳ ವಿನ್ಯಾಸ. ಪ್ರತಿಯೊಂದು ವೃತ್ತಭೇದದಲ್ಲಿಯೂ ಈ ಸಾಮಾನ್ಯಲಕ್ಷಣವನ್ನು ಅನುಸರಿಸಿ ಅಕ್ಷರಸಂಖ್ಯೆಯಲ್ಲಿಯೂ ಲಘುಗುರುವಿನ್ಯಾಸದಲ್ಲಿಯೂ ವಿಶಿಷ್ಟಲಕ್ಷಣ ಗೋಚರಿಸುತ್ತದೆ. ಅದನ್ನು ಗುರುತಿಸುವುದಕ್ಕೆ ಅಕ್ಷರಗಣ ಅಥವಾ ವರ್ಣಗಣ ಎಂಬ ಗಣವಿಭಜನೆಯ ಕ್ರಮವನ್ನು ಅನುಸರಿಸಲಾಗುತ್ತ್ದದೆ. ಅಕ್ಷರಗಣ ಎನ್ನುವುದಕ್ಕಿಂತ ವರ್ಣಗಣ ಎಂಬ ಮಾತೆ ಹೆಚ್ಚು ರೂಢಿಯಾದುದು. 
   ಬೇರೆ ಬೇರೆ ವರ್ಣವೃತ್ತಗಳಲ್ಲಿ ಕಂಡುಬರುವ ಹ್ರಸ್ವ ದೀರ್ಘಾಕ್ಷರಗಳ ಸಂಖ್ಯೆಯನ್ನೂ ಅವುಗಳ ಸರಣಿಯನ್ನೂ ಕಂಡುಹಿಡಿದು ಗುರುತಿಟ್ಟುಕೊಳ್ಳಲು ಛಂದಶ್ಯಾಸ್ತ್ರಕಾರರು ನಡೆಸಿದ ಪ್ರಯತ್ನವೇ ಅಕ್ಷರ (ವರ್ಣ) ಗಣದ ಹುಟ್ಟಿಗೆ ಕಾರಣವಾಯಿತು. ಮೊದಮೊದಲು ಅನುಸರಿಸಿದ ಕೆಲವು ಪ್ರಸ್ತಾರವಿಧಾನಗಳಲ್ಲಿ ಅಷ್ಟು ಸೌಕರ್ಯವಾಗಲಿ ಲಯದ ಮೌಲಿಕ ಅಂಶಗಳನ್ನು ಪೂರ್ತಿಯಾಗಿ ಗುರುತಿಸುವ ಸೌಲಭ್ಯವಾಗಲಿ ಇಲ್ಲದೆ ಹೋದುದರಿಂದ, ಹೊಸದೊಂದು ಗಣನಾಂಗವನ್ನು ಕಲ್ಪಿಸಿಕೊಳ್ಳಲಾಯಿತು.
   ಪ್ರಾಚೀನ ಭಾರತದಲ್ಲಿ ಮೂರರ ಸಂಖ್ಯೆ ದೊಡ್ಡದರಲ್ಲಿ ಅತಿ ಚಿಕ್ಕದೂ ಚಿಕ್ಕದರಲ್ಲಿ ಅತಿ ದೊಡ್ಡದೂ ಆಗಿ ಗ್ರಹಿಸಲ್ಪಟ್ಟಿದ್ದಿತು. ಅದು ವೃದ್ಧಿಂಗತ ಸಂಕೀರ್ಣತೆಗೆ ಅತಿ ಚಿಕ್ಕ ಘಟಕವಾಗಿ ಅಂಗೀಕೃತವಾಗಿದ್ದಿತು. ಗುಣ(ತ್ರಯ), ಅವಸ್ಥಾ (ತ್ರಯ), ಕಾಲ (ತ್ರಯ), ಲೋಕ (ತ್ರಯ), ತ್ರಿ (ಸ್ಥಾಯಿ) - ಈ ಮೊದಲಾಗಿ ಹಲವು ಪರಿಸ್ಥಿತಿಗಳಲ್ಲಿ ಮೂರರ ಸಂಖ್ಯೆ ಮೇಲು ಕೆಳಗಿನ ಎಲ್ಲ ಸ್ಥಿತ್ಯಂತರಗಳನ್ನೂ ತೋರಿಸಲು ತಕ್ಕ ಅಡಕವಾದ ಸಂಖ್ಯೆಯಾಗಿದ್ದಿತು. ಪಾಣಿನಿಯ ಪ್ರಕಾರ ಬಹುತ್ವವನ್ನು ಸಂಘಟಿಸವ ಅತಿ ಚಿಕ್ಕ ಸಂಖ್ಯೆಯೆಂದರೆ ಮೂರು. ಆದ್ದರಿಂದ ಶಾಸ್ತ್ರನಿಯಮ ದೃಷ್ಟಿಯಿಂದಲೂ ಸೌಕರ್ಯದೃಷ್ಟಿಯಿಂದಲೂ ತ್ರಿಕವೆಂದು ಹೇಳಬಹುದಾದ ಮೂರಕ್ಷರಗಳ ಒಂದು ಹೊಸ ಗಣನಾಂಗ ಕಾಣಿಸಿಕೊಂಡಿತು. ಹೀಗೆಂಬುದು ವಿದ್ವಾಂಸರ ಗ್ರಹಿಕೆಯಾಗಿದೆ.
   ಹೀಗೆ ವೃತ್ತಪಾದವನ್ನು ಮೂರು ಮೂರು ಅಕ್ಷರಗಳಿಗೆ (ತ್ರಿಕಗಳಿಗೆ) ಒಂದೊಂದು ಗಣದಂತೆ ವಿಭಜಿಸುವ ಪದ್ಧತಿ ರೂಢಿಯಾಗಿದೆ. ಈ ಪದ್ಧತಿಯಲ್ಲಿ ವರ್ಣವೃತ್ತಗಳ ಬಗೆಬಗೆಯಾದ ಹ್ರಸ್ವದೀರ್ಘಾಕ್ಷರವಿನ್ಯಾಸಗಳ ಎಂಟು ವಿಭಿನ್ನ ರೀತಿಯ ಲಯಗಳನ್ನು (ವರ್ಣಾಮಾತ್ರಾವಿನ್ಯಾಸಗಳನ್ನು) ಗುರುತಿಸುವುದು ಸಾಧ್ಯ. ಮೂರು ಗುರುಗಳಿಂದ ಹಿಡಿದು ಮೂರು ಲಘುಗುರುಗಳವರೆಗೆ ಇದರ ವ್ಯಾಪ್ತಿಯಿದೆ. ಈ ವಿನ್ಯಾಸಗಳನ್ನು ವಿವಿಧಪ್ರಸ್ತಾರಕ್ರಮಗಳಲ್ಲಿ ಛಂದೋಗ್ರಂಥಗಳಲ್ಲಿ ಗುರುತಿಸಿದೆ. ಇವುಗಳಿಗೆ ಪೃಥಿವಿ, ಅಪ್ಪು, ತೇಜಸ್ಸು, ವಾಯು, ಆಕಾಶ, ಸೂರ್ಯ, ಚಂದ್ರ, ಸ್ವರ್ಗ - ಎಂಬವು ಸಂಕೇತಗಳು; ಮ-ಯ-ರ-ಸ-ತ-ಜ-ಭ-ನ ಎಂಬವು ಸಂಜ್ಞೆಗಳು. ಹೀಗೆಯೇ ಲಘು ಗುರುಗಳಿಗೆ ಹರಿ ಮತ್ತು ಹರ ಎಂಬವು ಸಂಕೇತಗಳು: ಲ-ಗ ಎಂಬವು ಸಂಜ್ಞೆಗಳು. ಸಂಕೇತಗಳಿಗೆ ಪರ್ಯಾಯವಾಚಕಗಳನ್ನು ಬಳಸುವುದು ಎಂಟು ವಿಧಗಳು; ಮಗಣ(---), ಯಗಣ(U-),ರಗಣ(-U-), ಸಗಣ(UU-) ತಗಣ(--U), ಜಗಣ(U-U), ಭಗಣ(-UU), ನಗಣ(UUU).
  ಸಂದರ್ಭಕ್ಕೆ ತಕ್ಕಂತೆ ಮಕಾರ ಮೊದಲಾದ ಎಂಟು ಸಂಜ್ಞೆಗಳಲ್ಲಿ ಅವಶ್ಯಕವಾದವನ್ನು ಅಡಕವಾಗಿ ಸೂಚಿಸುವುದರಿಂದಲೋ ಲಕ್ಷಣ - ಲಕ್ಷ್ಯ ವಿಧಾನದಲ್ಲಿ ಸೂತ್ರರೂಪವಾಗಿ ಹೆಣೆದಿರುವುದರಿಂದಲೋ ಛಂದೋಗ್ರಂಥಗಳಲ್ಲಿ ಆಯಾ ವರ್ಣವೃತ್ತಗಳ ಲಕ್ಶಣಗಳನ್ನು ವಿವರಿಸಿರುತ್ತದೆ. ಅವು ನಿರ್ದೇಶಿಸುವ ಗುರುಗಘುವಿನ್ಯಾಸಗಳನ್ನು ನೆನಪಿಟ್ಟುಕೊಳ್ಳಲು ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಛಂದಶ್ಯಾಸ್ತ್ರಕಾರರು ಕೆಲವು ನೆನಪಿನ ಪದ್ಯಗಳನ್ನು ಕಟ್ಟಿರುತ್ತಾರೆ. ಸಂಸ್ಕೃತದಲ್ಲಿ ರೂಢಿಯಾಗಿರುವ ಪದ್ಯಗಳಲಿ ಒಂದು ಶ್ಲೋಕ ಹೀಗಿದೆ:
      ಆದಿಮಧ್ಯಾವಸಾನೇಷ್ಟು ಯರತಾ ಯಾನ್ತಿ ಲಾಘುವಮ್||
      ಭಜಸಾ ಗೌರವಂ ಯಾಂತಿ ಮನೌತು ಗುರುಲಾಘವಮ್||
    ಕನ್ನಡದಲ್ಲಿ ಬಳಕೆಯಾಗಿರುವ ಒಂದು ಪದ್ಯ ಹೀಗಿದೆ:
      ಗುರು ಲಘು ಮೂರಿರೆ ಮನಗಣ
      ಗುರು ಲಘು ಮೊದಲಲ್ಲಿ ಬರಲು ಭಯಗಣಮಕ್ಕುಂ||
      ಗುರು ಲಘು ನಡುವಿರೆ ಜರಗಣ
      ಗುರು ಲಘು ಕಡೆಯಲ್ಲಿ ಬರಲು ಸತಗಣಮಕ್ಕುಂ||
  ಇವು ಮಾತ್ರವಲ್ಲದೆ, 'ಯಮಾತಾರಾಜಭಾನಸಲಗಂ' ಎಂಬ ಒಂದು ಸರಳ ಸೂತ್ರದಿಂದಲೂ ಗುರುಲಘುವಿನ್ಯಾಸಗಳನ್ನು ಗುರುತಿಸುವುದುಂಟು. ಇಲ್ಲಿ ಯಮಾತಾ (U-) ಮಾತಾರಾ(---)ಎಂದು ಮುಂತಾದ ತ್ರಿಕಗಳನ್ನು ವಿಂಗಡಿಸಿಕೊಂಡರೆ, ಮೊದಲನೆಯ ಅಕ್ಷರ ಗಣದ ಹೆಸರನ್ನು ಸೂಚಿಸುತ್ತದೆ. ಯಮಾತಾ ಯಗಣ, ಮಾತಾರಾ ಮಗಣ, ತಾರಾಜ ತಗಣ, ರಾಜಭಾ ರಗಣ, ಜಭಾನ ಜಗಣ, ಭಾನಸ ಭಗಣ, ನಸಲ ನಗಣ, ಸಲಗಂ ಸಗಣ - ಹೀಗೆ.
  ಈಗ, ವರ್ಣವೃತ್ತವೊಂದರಲ್ಲಿ ಅಕ್ಷರ (ವರ್ಣ) ಗಣಗಳನ್ನು ವಿಭಜಿಸಿ ವೃತ್ತ ಭೇದವಾವುದೆಂದು ತಿಳಿಯುವುದಕ್ಕೆ ಒಂದು ನಿದರ್ಶನವನ್ನು ಕೊಡಬಹುದು; ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ | - ಇದು ಸಮಚತುಷ್ಪದಿಯೊಂದರ ಮೊದಲನೆಯ ಪಾದ. ಇದನ್ನು ಪ್ರಸ್ತಾರಿಸಿದರೆ, ಎಂದರೆ ಇಲ್ಲಿಯ ಗುರುಲಘುವಿನ್ಯಾಸವನ್ನು ಗುರುತಿಸಿದರೆ, ಆಗ ಹೀಗಿರುತ್ತದೆ:
    UU -    -  - U - - U UUU UU -  -  U -
    ಜಲದೊಳ್  ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್

- U - - ಭೀಮಸೇನಂ