ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತದ ಎಲ್ಲ ಭಾಗಗಳಲ್ಲೂ ಪ್ರಸರಿಸಿದುದಲ್ಲದೆ ಪಶ್ಚಿಮ ದೇಶಗಳಿಗೂ ಹೋಗಿ ನೆಲೆಸಿದರು ಎಂಬುದಾಗಿ ಹಲವು ವಿದ್ವಾಂಸರು ವಾದಿಸಿದ್ದಾರೆ. ವೇದವಾಙ್ಮಯದಲ್ಲಿ ಒಂದು ಸಾರಿಯಾದರೂ ಆರ್ಯರು ತಮ್ಮ ಪರಕೀಯ ಮೂಲವನ್ನು ಹೇಳಿಲ್ಲವೆಂಬುದು ಈ ವಿದ್ವಾಂಸರ ವಾದದ ಮುಖ್ಯ ಆಧಾರ. ಆದರೆ ಈ ವಾದವನ್ನು ಬಹುಮಂದಿ ವಿದ್ವಾಂಸರು ತಿರಸ್ಕರಿಸಿದ್ದಾರೆ.ವೇದಗಳ ರಚನೆಯ ಕಾಲವನ್ನು ಪ್ರ.ಶ.ಪೂ.2000 ವರ್ಷಗಳ ಹಿಂದಕ್ಕೆ ಹಾಕಲು ಆಧಾರಗಳಿಲ್ಲ. ಅಲ್ಲದೆ ಸಿಂಧೂ ಸರಸ್ವತಿ ನಾಗರಿಕತೆ ಪ್ರ.ಶ.ಪೂ 2500 ವರ್ಷಗಳಿಗಿಂತ ಹಿಂದೆಯೇ ಉಚ್ಛ್ರಯ ಸ್ಥಿತಿಯಲ್ಲಿತ್ತು ಎಂಬ ಅಂಶವನ್ನು ಎಲ್ಲ ವಿದ್ವಾಂಸರೂ ಒಪ್ಪುತ್ತಾರೆ. ಸೈಂಧವ ಮತ್ತು ಆರ್ಯರ ನಾಗರಿಕತೆಗಳು ಭಿನ್ನ ಎಂಬುದು ಸರ್ವಿದಿತ. ಇವುಗಳಲ್ಲಿ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳೇ ಹೆಚ್ಚು ಮೂರ್ತಿಪೂಜೆ,ಬರೆವಣಿಗೆ, ನಗರೀಕರಣ, ವೈವಿಧ್ಯಮಯ ಮಾತೃದೇವತಾ ಮತ್ತು ಪಶುಪತಿಯ ಆರಾಧನೆ, ಪರದೇಶಗಳೊಡನಿದ್ದ ನಿಕಟ ವಾಣಿಜ್ಯಸಂಪರ್ಕ, ಕೈಗಾರಿಕೆ ಮತ್ತು ಕಲಾಸಂಪನ್ನತೆ ಇವುಗಳು ಸಿಂಧೂನದಿ ಬಯಲಿನ ಸಂಸ್ಕೃತಿಯ ಮಖ್ಯ ಲಕ್ಷಣಗಳು. ವೈದಿಕ ನಾಗರಿಕತೆಯಲ್ಲಿ ಈ ಅಂಶಗಳು ಕಾಣಬರುವುದಿಲ್ಲ. ಅಲ್ಲದೆ ಇಲ್ಲಿನ ಮೂಲನಿವಾಸಿಗಳು ಚಪ್ಪಟೆಯಾದ ಮೂಗುಳ್ಳ ಕಪ್ಪು ಬಣ‍್ಣದ ದಸ್ಯುಗಳೆಂದೂ (ದ್ರಾವಿಡ) ಅವರನ್ನು ಸೋಲಿಸಿ ದಕ್ಷಿಣಾಪಥದ ಕಡೆಗೆ ಓಡಿಸಿದುದಾಗಿಯೂ ತಮ್ಮ ಗ್ರಂಥಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಆರ್ಯರು ಪ್ರಪಂಚದ ಯಾವ ಭಾಗದಲ್ಲಿ ಮೂಲತಃ ವಾಸಿಸುತ್ತಿದ್ದರೆಂಬ ವಿಷಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಅವರು ಭಾರತಕ್ಕೆ ವಲಸೆ ಬಂದರೆಂಬ ಅಭಿಪ್ರಾಯವನ್ನು ಬಹುಮಂದಿ ವಿದ್ವಾಂಸರು ಅನುಮೋದಿಸಿದ್ದಾರೆ. ಆರ್ಯರು ವಲಸೆ ಬಂದು ಸಿಂಧೂ ಮತ್ತು ಗಂಗಾ ನದಿಗಳ ಬಯಲಿನಲ್ಲಿ ನೆಲೆಸಿದ ಪ್ರಾರಂಭದಲ್ಲಿ ಅವರು ಬೆಳೆಸಿದ ಸಂಸ್ಕೃಂತಿಯನ್ನು ತಿಳಿಯಲು ವೇದಗಳೂ ಅವಕ್ಕೆ ಸಂಬಂಧಿಸಿದ ಬ್ರಾಹ್ಮಣಗಳೂ ಅರಣ್ಯಕಗಳೂ ಉಪನಿಷತ್ತುಗಳೂ ಮತ್ತು ವೇದಾಂಗಗಳೇ ಮುಂತಾದ ಸಂಸ್ಕೃತಕಾವ್ಯಗಳೂ ಆಧಾರಗಳು. ವೇದ ಎಂದರೆ ಜ್ಞಾನ. ವೇದಗಳಲ್ಲಿ ಆರ್ಯರ ರಾಜಕೀಯ, ಸಾಮಾಜಿಕ ಮತ್ತು ಮತೀಯ ಜೀವನದ ಮುಖ್ಯಾಂಶಗಳ ಚಿತ್ರ ಅಡಕವಾಗಿದೆ. ಕಂದುಮಿಶ್ರಿತ ಬಣ್ಣ,ದೃಡಕಾಯ ಹಾಗೂ ನೀಳವಾದ ಮೂಗು-ಇವು ಅವರ ಮುಖ್ಯ ಲಕ್ಷಣಗಳು. ಅವರು ಸಣ್ಣಪುಟ್ಟ ಹಳ್ಳಿಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಕುಟುಂಬ ವ್ಯವಸ್ಥೆ ಆರ್ಯರ ರಾಜಕೀಯ ಮತ್ತು ಸಾಮಾಜಿಕ ಜೀವನದ ಅಡಿಗಲ್ಲು ರಕ್ತಸಂಬಧವನ್ನು ಹೊಂದಿದ್ದ ಅನೇಕ ಕುಟುಂಬಗಳ ಗುಂಪಿಗೆ ಒಬ್ಬ ಯಜಮಾನನಿರುತ್ತಿದ್ದ. ಅವರು ದಸ್ಯುಗಳೊಡನೆ ಹೋರಾಡಬೇಕಾಗಿತ್ತು. ಅನೇಕ ಸಲ ಅವರವರಲ್ಲೇ ಕಲಹಗಳಾಗುತ್ತಿದ್ದವು. ಯುದ‍್ಧದಲ್ಲಿ ಮುಖಂಡನೆ ಅವಶ್ಯಕತೆಯಿತ್ತು. ಆದ್ದರಿಂದ ಕೆಲವು ಹಳ್ಳಿಗಲ ಗುಂಪಿಗೆ ಒಬ್ಬೊಬ್ಬನೆ ಮುಖಂಡನಿರುತ್ತಿದ್ದ. ಕಾಲಕ್ರಮೇಣ ಮುಖಂಡರ ಪ್ರಭಾವ ಬೆಳೆದು ಅವರು ರಾಜರಾದರು. ಪ್ರಾರಂಭದಲ್ಲಿ ರಾಜ ಅಥವಾ ಮುಖಂಡನನ್ನು ಚುನಾಯಿಸುತ್ತಿದ್ದರು. ಈ ಪದ್ಧತಿ ಕೊನೆಗೊಂಡ ಮೇಲೆ ರಾಜತ್ವ ವಂಶಪಾರಂಪರ್ಯ ಪದ್ಧತಿಯಾಯಿತು. ಸಿಂಧೂ ಮತ್ತು ಗಂಗಾನದಿಗಳ ಫಲವತ್ತಾದ ಬಯಲಿನಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳುದಯಿಸಿದವು. ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ಹೊರಗಿನವರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು ರಾಜನ ಮುಖ್ಯಕರ್ತವ್ಯಗಳಾದುವು. ಆಡಳಿತದಲ್ಲಿ ರಾಜನ ಸಹಾಯಕ್ಕೆ ಪುರೋಹಿತ, ಸೇನಾನಿ ಮತ್ತು ಗ್ರಾಮವೃದ್ಧರಿರುತ್ತಿದ್ದರು. ಯುದ್ಧಕಾಲದಲ್ಲಿ ಯೋಧರು ಕತ್ತಿ,ಗುರಾಣಿ, ಶಿರಸ್ತ್ರಾಣ ಮತ್ತು ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು. ಪ್ರಜೆಗಳು ತಮ್ಮ ಉತ್ಪತ್ತಿಯ ಒಂದು ಭಾಗವನ್ನು ರಾಜನಿಗೆ ಸಲ್ಲಿಸುತ್ತಿದ್ದರು. ರಾಜ ನಿರಂಕುಶ ಪ್ರಭುವಾಗಿರಲಿಲ್ಲ. ಸಭಾ ಮತ್ತು ಸಮಿತಿ ಎಂಬ ಪ್ರಜಾಮುಖ್ಯರ ಎರಡು ಸಭೆಗಳಿರುತ್ತಿದ್ದುವು. ರಾಜ್ಯದ ಮುಖ್ಯ ಸಮಸ್ಯೆಗಳನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತಿತ್ತು.ಪ್ರ.ಶ.ಪೂ.1500 ರ ಅನಂತರ ರಾಜರು ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತ ಬಂದರು. ಸಣ‍್ಣ ಪುಟ್ಟ ರಾಜ್ಯಗಳಿಗೆ ಬದಲಾಗಿ ಕ್ರಮೇಣ ಸಾಮ್ರಾಜ್ಯಗಳು ತಲೆಯೆತ್ತತೊಡಗಿದ್ದುವು. ರಾಜರು ಅಶ್ವಮೇಧ, ರಾಜಸೂಯ ಮುಂತಾದ ಯಾಗಗಳನ್ನು ಆಚರಿಸುತ್ತಿದ್ದರು.

ಆರ್ಯಪಂಗಡ ಕುಟುಂಗಳಿಂದೊಡಗೂಡಿತ್ತು. ತಂದೆಗೆ ಕುಂಟುಂಬದ ಯಜಮಾನ ಸ್ಥಾನವೂ ತಾಯಿಗೆ ಗೌರವದ ಆದರೆ ಗೌಣಸ್ಥಾನವೂ ಇದ್ದುವು. ವ್ಯವಸಾಯ ಮತ್ತು ಪಶುಪಾಲನೆ ಮುಖ್ಯ ಕಸುಬಾಗಿತ್ತು. ಅವರಿಗೆ ನೇಗಿಲಿನ ಉಪಯೋಗ ತಿಳಿದಿತ್ತು. ಗೋಧಿ, ಬಾರ್ಲಿ, ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದರು. ದನಕರುಗಳೇ ಅವರ ಅತಿ ಮಹತ್ತ್ವದ ಪ್ರಾಣಿಗಳು. ಅವುಗಳೇ ಅವರ ಸಂಪತ್ತು. ಎಮ್ಮೆ, ಕುರಿ, ಮೇಕೆ,ಕುದುರೆ ಮತ್ತು ನಾಯಿ ಇವುಗಳು ಅವರ ಇತರ ಸಾಕುಪ್ರಾಣಿಗಳು. ಸಸ್ಯಾಹಾರ ಹಾಗೂ ಮಾಂಸಹಾರ ರೂಢಿಯಲ್ಲಿದ್ದುವು. ಅವರು ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನೂ ನಯ ಮಾಡಿದ ಚರ್ಮಗಳನ್ನೂ ತೊಡುತ್ತಿದ್ದರೆಂದು ತಿಳಿಯುತ್ತದೆ.ಚಿನ್ನ ಬೆಳ್ಳಿಯ ಒಡವೆಗಳನ್ನೂ ಧರಿಸುತ್ತಿದ್ದರು. ಸಂಭ್ರಮದ ದಿನಗಳಲ್ಲಿ ಸುರೆ ಹಾಗೂ ಸೋಮ ಎಂಬ ಮಾದಕ ಪಾನೀಯಗಳನ್ನು ಸೇವಿಸುತ್ತಿದ್ದರು. ನೊಲುವುದು,ನಗನಾಣ್ಯ ತಯಾತಿಕೆ, ಮನೆಕಟ್ಟುವುದು ಮತ್ತು ಲೋಹಗಳ ಕೆಲಸ-ಇವು ಇತರ ಉಪಕ ಕಸಬುಗಳಾಗಿದ್ದವು.ಕ್ರಮೇಣ ವ್ಯಾಪಾರ ಬೆಳೆಯಿತು. ಪ್ರಾರಂಭದಲ್ಲಿ ಹಸು ವಸ್ತುವಿನಿಮಯದ ಮಾನದಂಡವಾಗಿತ್ತು. ಅನಂತರ ನಿಷ್ಕ, ಕಾರ್ಷಪಣ ಮುಂತಾದ ಚಿನ್ನ ಬೆಳ್ಳಿಯ ನಾಣ್ಯಗಳು ಬಳಕೆಗೆ ಬಂದುವು.ಕುದುರೆ ಜೂಜು, ರಥ ಪಂದ್ಯ ಮತ್ತು ಬೇಟೆಯಾಡುವುದು-ಇವು ಆರ್ಯರ ಮುಖ್ಯ ವಿನೋದ ಮತ್ತು ಜೂಜಾಟದ ಮಾರ್ಗಗಳಾಗಿದ್ದುವು. ವೈದಿಕೆಯುಗದ ಅಂತ್ಯದ ವೇಳೆಗೆ ಜಾತಿಪದ‍್ಧತಿ ಆಚರಣೆಗೆ ಬಂತು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಾದುವು. ಕಸುಬು ಜಾತಿಗೆ ಆಧಾರವಾತ್ತು. ಕ್ರಮೇಣ ಜಾತಿಪದ್ಧತಿ ವಂಶಪರಂಪರಾನುಗತವಾಗುತ್ತ ಬಂತ್ತು. ಆರ್ಯರು ಸಚೇತನವೆಂದೆಣಿಸಿದ್ದ ಪ್ರಕೃತಿಯ ಅದ್ಭುತ ಶಕ್ತಿಗಳಾದ ಆಕಾಶ,ಸೂರ್ಯ,ಸಿಡಿಲು, ಮಿಂಚು, ಅಗ್ನಿ ಮುಂತಾದ ದೇವತೆಗಳನ್ನು ಆರಾಧಿಸುತ್ತಿದ್ದರು.ಆ ಶಕ್ತಿಗಳು ದಯಾಪೂರ್ಣವೆಂಬ ಭಾವನೆಯಿದ್ದು ,ಯಜ್ಞ ಯಾಗಾದಿಗಳಿಂದ ಅವುಗಳ ಕೃಪೆಯನ್ನುಗಳಿಸಬಹುದೆಂಬ ನಂಬಿಕೆಯಿತ್ತು. ಮೂರ್ತಿಪೂಜೆ ಆಚರಣೆಯಲ್ಲಿರಲಿಲ್ಲ. ದೇವತೆಗಳಿಗೆ ಬಲಿಯನ್ನು ಅಗ್ನಿಯ ಮುಖಾಂತರ ಅರ್ಪಿಸುತ್ತಿದ್ದರು. ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ವಿಧಿಗಳು ವಿಶದವಾಗಿ ರೂಪಿತವಾಗಿದ್ದುವು. ಕಾಲಕ್ರಮೇಣ ಅನೇಕ ದೇವ ದೇವತೆಗಳನ್ನು ಪೂಜಿಸುವ ಪದ್ಧತಿ ಪ್ರಾರಂಭವಾಯಿತು. ಆದರೂ ಸರ್ವಾಂತರ್ಯಾಮಿಯೂ ಸರ್ವಶಕ್ತನೂ ಆದ ಜಗನ್ನಿಯಾಮಕನೊಬ್ಬನೇ ಎಂಬ ಭಾವನೆ ಅವರಲ್ಲಿತ್ತು. ಶವಗಳನ್ನು ಸುಡುವ ಪದ್ಧತಿಯಿತ್ತು.ಸ್ವರ್ಗ ನರಕಗಳ ಕಲ್ಪನೆ ಪೂರ್ಣವಾಗಿ ಬೆಳೆದಿರಲ್ಲಿಲ್ಲ. ವೇದಯುಗದಿಂದ ಇತಿಹಾಸಯುಗಕ್ಕೆ ಮುಂದುವರಿದಂತೆ ಅನೇಕ ಮಾರ್ಪಟುಗಳಾದುವು. ಆರ್ಯರು ದಕ್ಷಿಣದಲ್ಲೂ ನೆಲೆಸಿದರು.ವರ್ಣಾಶ್ರಮಧರ್ಮಪದ್ಧತಿ ಅನೂಚಾನವಾಗಿ ಬೇರೂರಿತು. ಜನಸಂಖ್ಯೆ ವೃದ್ಧಿಸಿತು. ಸಂಪದ್ಭತಿತವಾದ ಪಟ್ಟಣಗಳೂ ಸಾಮ್ರಾಜ್ಯಗಳೂ ಬೆಳೆದುವು. ಸಾಹಿತ್ಯ, ವಿಜ್ಞಾನ ಮತ್ತು ಧಾರ್ಮಿಕ ಗ್ರಂಧಗಳ ನಿರ್ಮಾಣ ಮುಂದುವರಿಯಿತು. ಮೂರ್ತಿಪೂಜೆ ಆಚರಣೆಗೆ ಬಂತು.ಆರ್ಯ ದ್ರಾವಿಡ ಪದ್ಧತಿಗಳ ಸಮ್ಮಿಳನದಿಂದ ಹಿಂದೂ ಸಂಸ್ಕೃತಿ ಅಖಂಡವಾಗಿ ಬೆಳೆಯಲು ಪ್ರಾರಂಭಿಸಿತು. ಆರ್ಯ ಧರ್ಮ ಪ್ರಂಪಚದ ಅತಿ ಪ್ರಾಚೀನ ಧರ್ಮಗಳ ಪೈಕಿ ಒಂದು. ಆರ್ಯರ ಧರ್ಮವನ್ನು ತಿಳಿಯಲು ಋಗ್ವೇದ, ಜೆಂಡವೆಸ್ತ ಜನಪದ ಸಾಹಿತ್ಯ, ಪೌರಾಣಿಕ ಪರಂಪರೆ, ಪ್ರಾಚೇನ ಸಂಪ್ರದಾಯಗಳು, ಪ್ರಾಚೀನ ಭಾಷೆಗಳು ಇತ್ಯಾದಿ ಮುಖ್ಯ ಸಾಧನಗಳಾಗಿವೆ. ಆರ್ಯರು ನಾಗರಿಕರೂ ಸುಸಂಸ್ಕೃತರೂ ಆದ ಜನಾಂಗವಾಗಿದ್ದರು. ಅವರಿಗೆ ಜೀವ ಆತ್ಮ, ಜನ್ಮಾಂತರ,ಸ್ವರ್ಗ-ನರಕ,ಪುಣ್ಯ-ಪಾಪ,ಅದೃಷ್ಟ-ವಿಧಿ ಇವುಗಳ ಬಗೆಗೆ ನಿರ್ದಿಷ್ಟವಾದ ಕಲ್ಪನೆ ಮತ್ತು ನಂಬಿಕೆಗಳಿದ್ದುವು. ಸತ್ತವರನ್ನು ಹೂಳುವ ಇಲ್ಲವೇ ಸುಡುವ ಪದ್ಧತಿ ಇತ್ತು. ಆತ್ಮ ಅವಿನಾಶಿ ಎಂದು ನಂಬಿದ್ದರಿಂದ ಆತ್ಮನ ಮುಂದಿನ ಜೀವನಕ್ಕೆ ಸಹಾಯಕವಾಗಲಿ ಎಂಬ ನಂಬಿಕೆ ಅರಿಗಿದ್ದಿರಬೇಕು. ಆದ್ದರಿಂದ ಸತ್ತವನನ್ನುಉ ಹೂಳುವಾಗ ಆತನೊಂದಿಗೆ ಆತನಿಗೆ ಪ್ರಿಯವಾಗಿದ್ದ ವಸ್ತುಗಳನ್ನು ಇಡುತ್ತಿದ್ದರು. ದಹನ ಮಾಡಿದರೆ ಚಿತೆಯೊಂದಿಗೆ ಅವನ್ನು ಸೇರಿಸುತ್ತಿದ್ದರು;ಅಥವಾ ಚಿತಾಭಸ್ಮದೊಂದಿಗೆ ಇರಿಸುತ್ತಿದ್ದರು. ಅನೇಕ ಬಗೆಯ ವ್ರತ, ಹಬ್ಬಗಳನ್ನು ಆಚರಿಸುತ್ತಿದ್ದರು.ಸೂರ್ಯಚಂದ್ರರ ಆಧಾರದ ಮೇಲೆ ಕಾಲಗಣನೆ ಮಾಡುತ್ತಿದ್ದರು. ಅಗ್ನಿ ಮತ್ತು ವರುಣ ದೇವನ ಆರಾಧನೆಯನ್ನು ಮದುವೆ, ಅಗ್ನಿಷ್ಟೋಮಯಾಗ ಇತ್ಯಾದಿ ಅನೇಕ ಸಂದರ್ಭಗಳಲ್ಲಿ ಕಾಣಬಹುದಿತ್ತು.ಯಾವುದೇ ವ್ಯಕ್ತಿ ಅಪರಾಧಕ್ಕೆ ಹೊಣೆ ಹೊರುತ್ತಿರಲಿಲ್ಲ. ಅಕೃತ್ಯಕ್ಕೆ ಒಳಗಾದವನ ಕುಟುಂಬವೇ ಸೇಡು ತೀರಿಸುತ್ತಿತ್ತು. ಪಾಪಕೃತ್ಯ ಮಾಡಿದವರನ್ನು ಕಲ್ಲೇಟಿನಿಂದ ಶಕ್ಷಿಸುತ್ತಿದ್ದುದೂ ಉಂಟು. ಹಂದಿ,ಮೇಕೆ,ಹಸು,ಕುದುರೆ ಮೊದಲಾದ ಪ್ರಾಣಿಗಳ ಬಲಿಪೂಜೆ ಬಳಕೆಯಲ್ಲಿತ್ತು. ಪ್ರಾಣಿಬಲಿಯ ಜೊತೆ ನರಬಲಿಯೂ ನಡೆಯುತ್ತಿದ್ದುದು ಉಂಟು, ಆಣೆ ಇಡುವ, ಶಪಥ ಮಾಡುವ, ಕಣಿ ಕೇಳುವ, ಶುಭ ಶಕುನ-ಅಪಶಕುನಗಳ ಬಗ್ಗೆ ಅವರದೇ ಆದ ಪದ್ಧತಿ-ಪರಂಪರೆಗಳಿದ್ದುವು.ಆರ್ಯರು ಪಿತೃವರ್ಗದ ಆರಾಧಕರೂ ಪ್ರಕೃತಿಯ ಆರಾಧಕರೂ ಆಗಿದ್ದರು. ಮಂತ್ರ-ಮಾಟಮ ಆರಾಧನೆ-ಪೂಜೆ,ಜಪ-ತಪ ಮೊದಲಾದ ಕಾರ್ಯಗಳಿಗೆ ಪ್ರತ್ಯೇಕ ಪುರೋಹಿತವರ್ಗವಿತ್ತು.ಮದ್ಯಪಾನ, ಮಾಂಸಹಾರ ಮೊದಲಾದ ಆಹಾರ ಪದ್ದತಿಗಳೂ ಬಳಕೆಯಲ್ಲಿದ್ದುವು.ಆಕಾಶ,ಸೂರ್ಯ, ಚಂದ್ರ,ನಕ್ಷತ್ರಗಳ ಬಗ್ಗೆ ಪುರಾಣ ಕಲ್ಪನೆಗಳು ಬೆಳೆದಿದ್ದುವು. ಸಾಕಷ್ಟು ಲೈಂಗಿಕ ಸ್ವಾತಂತ್ರ್ಯ ಇರುತ್ತಿತ್ತು. ಸರ್ಪಪೂಜೆ,ಅಗ್ನಿಪೂಜೆ,ಆಕಾಶಪೂಜೆ,ವೃಕ್ಷಪೂಜೆಗಳೂ ಕಲ್ಲು,ಮರ,ಮಣ್ಣುಗಳಲ್ಲಿ ನಿರ್ಮಿಸಿದ ಮೂರ್ತಿಪೂಜೆಯೂ ಆರ್ಯಾರಲ್ಲಿತ್ತು. ಪೂಜಾಕಾಲದಲ್ಲಿ ನೃತ್ಯ ಸಂಗೀತಗಳು ಜರುಗುತ್ತಿದ್ದುವು. ಪ್ರಪಂಚದ ಅತಿ ಪ್ರಾಚೀನತಮ ಧರ್ಮಗಳಲ್ಲಿ ಒಂದಾದ ಆರ್ಯಾಧರ್ಮ ಶುದ್ಧವಾದರೂಪದಲ್ಲಿ ಅಲ್ಲವಾದರೂ ಮಿಶ್ರರೂಪದಲ್ಲಿ ಉಳಿದುಬಂದಿದೆ.ಆರ್ಯಾಧರ್ಮವನ್ನು ವಿಶೇಷವಾಗಿ ಹಿಂದೂ ಧರ್ಮದಲ್ಲಿ ಕಾಣಬಹುದು.ಇತ್ತೀಚೆಗೆ ಆರ್ಯಾ-ದ್ರಾವಿಡ ಸಂಸ್ಕೃತಿಯ ಬಗೆಗೆ ಸಾಕಷ್ಟು ಚರ್ಚೆ ನಡಿದಿದೆ ಆಸ್ಕೋಪರ್ಪ್ಪೆಲ ಎಂಬ ವಿದ್ವಾಂಸ ಈ ಕುರಿತು ಹೊಸ ಹೊಸ ವಿಚಾರಗಳನ್ನು ಹೊರಡಿಸಿದ್ದಾನೆ.