೧೧೨
ಯಶೋಧರ ಚರಿತೆ
ಸಂಕಲ್ಪಹಿಂಸೆಯೊಂದರೊ-
ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ-
ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್ 70
ಎಂದನುಡಿ ನೆರೆದ ಜೀವಕ-
ದಂಬಂಗಳ್ಗಭಯವೆಂಬ ಡಂಗುರದವೊಲೊ-
ಪ್ಪಂಬಡೆಯೆ ಮಾರಿದತ್ತನೃ-
ಪಂ ಬಿಲ್ಲುಂ ಬೆರಗುಮಾದನುದ್ವೇಗಪರಂ 71
ಆ ಚಂಡಮಾರಿ ಲೋಚನ
ಗೋ ಚರತನುವಾಗಿ ಕುವರನಂ ಬಂದಿಸಿ ನೀ-
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆರೆ ಕೇಳ್ವಿನೆಗಂ 72
_____
70. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮ ಜನ್ಮಾಂತರಗಳ ಈ ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು ಕೊಲ್ಲುತ್ತಾ ಇದ್ದೀಯಲ್ಲ! ನಿನಗೆ ನರಕದಿಂದ ವಿಮೋಚನೆಯುಂಟೆ?” 71. ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತ ರಾಜನಂತೂ ಉದ್ವೇಗಕ್ಕೆ ಗುರಿಯಾಗಿ ಬಹಳ ಬೆರಗಿನಿಂದಿದ್ದನು. 72. ಅದೇ ಸಮಯಕ್ಕೆ ಚಂಡಮಾರಿ ದೇವತೆಯೂ ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ