Pages   (key to Page Status)   


ಭವಿತನವ ಕಳೆದು ಭಕ್ತನಾದ ಬಳಿಕ ಮತ್ತೆ ಭಕ್ತಿಯ ಹೊಲಬ ಹೊದ್ದಲೊಲ್ಲದೆ
ಆಚಾರವನತಿಗಳೆದು ಅನ್ಯದೈವವ ಭಜಿಸಿ
ಅವರೆಂಜಲ ಭುಂಜಿಸಿ ನರಕಕ್ಕಿಳಿವ ಪಾತಕರು ತಾವು ಕೆಟ್ಟುದಲ್ಲದೆ; ಇತ್ತ ಮತ್ತೆ ಎತ್ತಲಾನೊಬ್ಬನು ಸತ್ಯಸದಾಚಾರವಿಡಿದು ಗುರುಲಿಂಗಜಂಗಮವನಾರಾಧಿಸಿ ಪ್ರಸಾದವ ಕೊಂಡು ಬದುಕುವೆನೆಂಬ ಭಕ್ತಿಯುಕ್ತನ ಅಂದಂದಿಗೆ ಜರೆದು
ನಿಮ್ಮ ತಂದೆತಾಯಿಗಳಿಗೆ ಬಳಿವಿಡಿದು ಬಂದ ಕುಲದೈವ ಮನೆದೈವವ ಬಿಟ್ಟು ಈ ಲಿಂಗಜಂಗಮದ ಪ್ರಸಾದ ಭಕ್ತಿಯುಕ್ತಿಗಳಲ್ಲಿ ಏನುಂಟೆಂದು ಕೆಡೆನುಡಿದು ಬಿಡಿಸಿ
ಆ ಅನ್ಯದೈವಂಗಳ ಹಿಡಿಸಿ ತಾ ಕೆಡುವ ಅಘೋರನರಕದೊಳಗೆ ಅವರನೂ ಒಡಗೂಡಿಕೊಂಡು ಮುಳುಗೇನೆಂಬ ಕಡುಸ್ವಾಮಿದ್ರೋಹಿನಾಯ ಹಿಡಿದು
ಮೂಗ ಕೊಯಿದು ನಡೆಸಿ ಕೆಡಹುವ ನಾಯಕನರಕದಲ್ಲಿ ಎನ್ನೊಡೆಯ ಕೂಡಲಚೆನ್ನಸಂಗಯ್ಯ.