ಮಹಾಕ್ಷತ್ರಿಯ/ಇಂದ್ರನಾಗುವವನನ್ನು ಹುಡುಕಿದುದು

==೨೪.ಇಂದ್ರನಾಗುವವನನ್ನು ಹುಡುಕಿದುದು==

ಸುರಾಚಾರ್ಯನ ಅರಮನೆಯಲ್ಲಿ ದೇವರ್ಷಿಪಿತೃಗಣಗಳಲ್ಲಿ ಮುಖ್ಯರಾದವರು ಸೇರಿದ್ದಾರೆ. ಇಂದ್ರನ ಸಿಂಹಾಸನವು ಶೂನ್ಯವಾಗಿದೆ. ಅದಕ್ಕೊಬ್ಬ ಅಧಿಕಾರಿಯಾದವನನ್ನು ಆರಿಸಬೇಕು. ಲೋಕಾಧಿಪತಿಗಳು ಯಾರೂ ಇಂದ್ರರಾಗುವಂತಿಲ್ಲ. ಹಾಗೆಯೇ ಪಾತಾಳ ಲೋಕದ ನಿವಾಸಿಗಳಲ್ಲಿ ಯಾರನ್ನೂ ದೇವತೆಗಳು ಒಪ್ಪುವುದಿಲ್ಲ. ಅದರಿಂದ ಯತ್ನವಿಲ್ಲದೆ ಮನುಷ್ಯಪ್ರಪಂಚದಿಂದಲೇ ಯಾರನ್ನಾದರೂ ಆರಿಸಬೇಕು. ಕ್ಷತ್ರಿಯನಾಗಿ, ಧರ್ಮಿಷ್ಠನಾಗಿ, ಇಂದ್ರಸಿಂಹಾಸನದಲ್ಲಿ ಕುಳಿತುಕೊಳ್ಳುವ ಸಾಮಥರ್ಯ್‌ವುಳ್ಳವನನ್ನೇ ಆರಿಸಬೇಕು.

ಆ ಸಭೆಗೆ ಋಷಿಗಳೂ ಪಿತೃಗಳೂ ಸುರಾಚಾರ್ಯನೇ ಅಧ್ಯಕ್ಷನಾಗಿರ ಬಹುದು ಎಂದರು. ಸುರಾಚಾರ್ಯನು ಅದರಂತೆ ಅಧ್ಯಕ್ಷನಾಗಿ ಸಭೆಯನ್ನು ಆರಂಭಿಸಿದನು.

ಪಿತೃಗಳ ಪ್ರತಿನಿಧಿಯು ಹೇಳಿದನು : “ನಮಗೆ ದೇವದಾನವರೆಂಬ ಭೇದವಿಲ್ಲ ಆದರೂ ದೇವತೆಗಳಲ್ಲಿ ಒಬ್ಬರಾದರೆ ಚೆನ್ನ.”

ಇನ್ನೊಬ್ಬರು ಹೇಳಿದರು : “ಇಲ್ಲ, ದೇವತೆಗಳಲ್ಲಿ ಯಾರೂ ಈ ಕಾರ್ಯವನ್ನು ಈಗ ವಹಿಸಿಕೊಳ್ಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೆಕವಾಗಿ ಒಬ್ಬರಿರಬೇಕು.”

ಅಗ್ನಿಯು ಎದ್ದು ಹೇಳಿದನು : “ಇಲ್ಲಿ ಹವಿರ್ಭಾಗದ ಪ್ರಶ್ನವಿದೆ. ದಾನವರು ಏನಿದ್ದರೂ ನೈಮಿತ್ತಿಕ ಹೋಮ ಮಾಡುವವರೇ ಹೊರತು, ನಿತ್ಯಯಾಗಗಳನ್ನು ಮಾಡುವವರಲ್ಲ. ಅದರಿಂದ ಅವರು ಹವಿರ್ದಾನವನ್ನು ಕೊಡುವುದಿಲ್ಲವಾಗಿ, ಅವರಿಗೆ ಹವಿಸ್ಸ್ವೀಕಾರಯೋಗ್ಯತೆಯೂ ಇಲ್ಲ. ಅದರಿಂದ, ಬರುವ ಇಂದ್ರನು, ಅಥವಾ ಇಂದ್ರನಾಗುವವನು ಹವಿರ್ಭೋಜನಾಧಿಕಾರವುಳ್ಳವನಾಗಬೇಕು. ಅದು ಯೋಚನೆಯಲ್ಲಿರಲಿ”.

ಋಷಿಗಣದ ಪ್ರತಿನಿಧಿಯು ಹೇಳಿದನು : “ದೇವತೆಗಳಲ್ಲಿ ಅಗ್ನಿ, ವಾಯು, ಇಂದ್ರರು ಜ್ಯೇಷ್ಠರು. ಅವರು ಯಕ್ಷದರ್ಶನದಿಂದ ಆ ಯೋಗ್ಯತೆಯನ್ನು ಪಡೆದವರು. ಇಂದ್ರನು ಇಲ್ಲದಾಗ ವಾಯುವು ಉತ್ತಮೋತ್ತಮನು. ಆತನಾಗಲಿ.”

ಸುರಾಚಾರ್ಯನು ಹೇಳಿದನು : “ದೇವತೆಗಳೆಲ್ಲರಿಗೂ ಅವರವರ ಕಾರ್ಯಗಳಿರುವುದರಿಂದ, ಅವರನ್ನು ಅವರ ಕಾರ್ಯದ ಜೊತೆಗೆ ಇನ್ನೊಬ್ಬರ ಕಾರ್ಯವನ್ನು ವಹಿಸಿಕೊಳ್ಳಿ ಎಂದು ಹೇಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೇಕವಾಗಿಯೇ ಬೇಕು ಎಂದು ನಾವೆಲ್ಲರೂ ಸಮಾರಂಭಕ್ಕೆ ಮುಂಚೆಯೇ ಗೊತ್ತು ಮಾಡಿಕೊಂಡಿದ್ದೇವೆ. ಅದರಿಂದ ನಮಗೆ ಇಷ್ಟವಿದ್ದರೂ ಇಷ್ಟವಿಲ್ಲದಿದ್ದರೂ ಈಗ ಸಾಧ್ಯವಿರುವುದು ಒಂದೇ. ಒಂದು ಪಕ್ಷ ಅದು ಮಧ್ಯಮಲೋಕದ ಚಕ್ರವರ್ತಿಯಾದ ನಹುಷನನ್ನು ಇಂದ್ರನನ್ನಾಗಿ ಆರಿಸಿಕೊಳ್ಳುವುದು. ಅದು ಸಭೆಗೆ ಸಮ್ಮತವಾದರೆ ಮುಂದಿನ ಮಾತು.”

ಪಿತೃಗಣ ಪ್ರತಿನಿಧಿಯು ಹೇಳಿದನು : “ನಮ್ಮ ಕನ್ಯೆಯನ್ನು ಆತನಿಗೆ ಕೊಟ್ಟು ನಾವು ಆತನನ್ನು ನಮಗೆ ಸಮನೆಂದು ಆಗಲೇ ಒಪ್ಪಿದ್ದೇವೆಯಾಗಿ, ಆತನನ್ನು ಇಂದ್ರನಾಗಿ ವರಿಸಲು ನಮ್ಮ ಆಕ್ಷೇಪಣೆಯಿಲ್ಲ.”

ಋಷಿಗಣದ ಪ್ರತಿನಿಧಿಯು ಹೇಳಿದನು : “ಆತನು ಭೃಗುವಂಶದ ಚ್ಯವನ ಶಿಷ್ಯನು. ಆತನನ್ನು ಇಂದ್ರನಾಗಿ ವರಿಸುವುದರಲ್ಲಿ ನಮ್ಮ ಆಕ್ಷೇಪಣೆಯೇನೂ ಇಲ್ಲ.”

ಸುರಾಚಾರ್ಯನು ಅಗ್ನಿವಾಯುಗಳ ಮುಖವನ್ನು ನೋಡಿದನು ; ‘ಆತನು ಬಹು ವಿಚಕ್ಷಣೆಯಿಂದ ರಾಜ್ಯವಾಳುತ್ತಿರುವನು. ಆತನು ದಾನಶೌಂಡನು. ನಿತ್ಯಾಗ್ನಿ ಹೋತ್ರಿಯು. ಆತನು ಒಪ್ಪಿದರೆ ಆಗಬಹುದು.”

“ಆತನು ಒಪ್ಪಿದರೆ ಎಂದರೇನು ?”

“ಹೌದು. ಈಗ ಈತನಿಗೆ ಏನು ಕಡಿಮೆಯಗಿದೆ ? ಆತನೀಗ ಮಧ್ಯಮ ಲೋಕದಲ್ಲಿದ್ದರೂ ಇಂದ್ರನಂತೆಯೇ ಇದ್ದಾನೆ. ಆತನು ಇಂದ್ರನಾಗುವುದರಿಂದ ಆತನಿಗೇನು ಹೆಚ್ಚುಗಾರಿಕೆ ಬಂದಂತಾಗುವುದು ?”

“ಆತನನ್ನು ಬಿಟ್ಟರೆ, ಇನ್ನು ಯಾರೂ ಇಲ್ಲವಾಗಿ, ಏನಾದರೂ ಮಾಡಿ ಆತನನ್ನು ಒಪ್ಪಿಸಬೇಕು.”

“ಎಷ್ಟಾಗಲಿ ಇಂದ್ರಪದವಿ. ಅದರಿಂದ ಒಪ್ಪದೆ ಏನು ?”

“ಒಂದು ವೇಳೆ ಜಾತವೇದನು ಶಂಕಿಸಿದಂತೆ ಆತನು ಇಂದ್ರನಾಗಲು ಒಪ್ಪದಿದ್ದರೆ, ಆತನಿಗೆ ವಿಶೇಷ ವರಗಳನ್ನು ಕೊಟ್ಟಾದರೂ ಒಪ್ಪಿಸಬೇಕು.”

‘ಅದೀಗ ಸರಿಯಾದ ಮಾತು.’

“ಸರಿ. ಇಂದಿನ ಕಾರ್ಯಕ್ರಮದಲ್ಲಿ ಒಂದು ಪ್ರಧಾನಾಂಶವು ಇತ್ಯರ್ಥವಾದ ಹಾಗಾಯಿತು. ಇನ್ನು ಮುಂದಿನ ಕಾರ್ಯ. ಆತನನ್ನು ಪ್ರಾರ್ಥಿಸಲು ಹೋಗುವವರು ಯಾರು ಯಾರು ? ಎಷ್ಟು ಜನ ? ಅದನ್ನು ಗೊತ್ತುಮಾಡಿ.”

ಅಷ್ಟುಹೊತ್ತು ಚರ್ಚೆಯಾಗಿ, ದೇವತೆಗಳ ಕಡೆ ಸುರಾಚಾರ್ಯನೂ, ಋಷಿ ಪಿತೃಗಣಗಳ ಪ್ರತಿನಿಧಿಗಳಾಗಿ ಈಗ ಪ್ರತಿನಿಧಿಗಳಾಗಿ ಬಂದಿರುವವರೇ ಹೋಗುವುದು ಎಂದು ಗೊತ್ತಾಯಿತು. ಜಾತವೇದನು ಅವರ ಜೊತೆಯಲ್ಲಿ ಹೋಗುವುದು ಎಂದು ತೀರ್ಮಾನವಾಯಿತು.

ಜಾತವೇದನು ಮತ್ತೆ ಎದ್ದು, “ಆತನಿಗೆ ಏನಾದರೂ ವಿಶೇಷ ವರಗಳನ್ನು ಕೊಡಬೇಕಾಗಿ ಬಂದರೆ, ಪ್ರತಿನಿಧಿಗಳಿಗೆ ಅಧಿಕಾರವಿರಬೇಕು. ಅದನ್ನು ಸಭೆಯು ಈಗಲೇ ಅಂಗೀಕರಿಸಬೇಕು. ಅದಿಲ್ಲದೆ, ಮತ್ತೆ ನಾವು ಋಷಿದೇವ ಪಿತೃಗಣಗಳನ್ನು ಹುಡುಕಿಕೊಂಡು ಲೋಕಲೋಕಗಳನ್ನು ಸುತ್ತುವಂತಿರಬಾರದು” ಎಂದನು.

ಎಲ್ಲರೂ ಆ ಮಾತನ್ನು ಅನುಮೋದಿಸಿದರು. ಹೀಗೆ, ವರಪ್ರದಾನ ಮಾಡುವ ವಿಶೇಷಾಧಿಕಾರವನ್ನು ಪಡೆದುಕೊಂಡು, ಪ್ರತಿನಿಧಿಗಳು ಸುರಾಚಾರ್ಯನ ನೇತೃತ್ವದಲ್ಲಿ ಜಾತವೇದನೊಡನೆ ಮಧ್ಯಮಲೋಕಪಾಲನಾದ ನಹುಷ ಚಕ್ರವರ್ತಿಯನ್ನು ಕಾಣಲು ಹೊರಟರು.

* * * *