ಕೇಶವ ದಾಸ

ಸು. 1555-1617: ಸಂಸ್ಕøತ ಕಾವ್ಯಮೀಮಾಂಸೆಯ ಪರಿಚಯವನ್ನು ಹಿಂದಿಯಲ್ಲಿ ಮೊದಲಿಗೆ ಮಾಡಿಕೊಟ್ಟ ವಿದ್ವಾಂಸ; ಕವಿ. ಸಂತಕವಿ ತುಳಸೀದಾಸನ ಸಮಕಾಲೀನ. ಸಂಸ್ಕøತ ಪಾಂಡಿತ್ಯಕ್ಕೆ ಹೆಸರಾಗಿದ್ದ ಸನಾಢ್ಯ ಬ್ರಾಹ್ಮಣ ಕುಲದಲ್ಲಿ ಈತ ಹುಟ್ಟಿದ. ವಾಸವಾಗಿದ್ದುದು ತುಂಗರಾಯ್ ಬಳಿ ಚೇತವಾ ನದಿಯ ದಡದಲ್ಲಿದ್ದ ಓಡಾಛಾ ನಗರದಲ್ಲಿ. ಮಹಾರಾಜ ಮಧುಕರಷಾಹನ ಪುತ್ರ ಮಹಾರಾಜ ಇಂದ್ರಜೀತಸಿಂಹ ಈತನ ಆಶ್ರಯದಾತ. ಈತನ ಹಿರಿಯರು ತಲೆಮಾರುಗಳಿಂದ ಆಸ್ಥಾನಪಂಡಿತರಾಗಿದ್ದವರು. ಹೀಗಾಗಿ ರಾಜನೀತಿ ಮತ್ತು ಆಸ್ಥಾನ ಕಾರ್ಯಚಟುವಟಿಕೆಗಳ ಅರಿವು ಈತನಿಗೆ ಅನುವಂಶಿಕವಾಗಿ ಲಭ್ಯವಾಗಿತ್ತು. ಕೇಶವದಾಸನನ್ನು ಹಿಂದಿಯಲ್ಲಿ ರೀತಿ ಸಂಪ್ರದಾಯದ ಪ್ರವರ್ತಕನೆಂದು ಪರಿಗಣಿಸಲಾಗಿದೆ.

ರಸಿಕಪ್ರಿಯ (1591); ಕವಿಪ್ರಿಯ(1601); ರಾಮಚಂದ್ರಿಕ (1601); ರತನಭಾವನಿ(1601); ವೀರಸಿಂಹ ದೇವಚರಿತ(1607); ಜಹಾಂಗೀರ ಜಸಚಂದ್ರಿಕ (1612); ಮತ್ತು ವಿಜ್ಞಾನ ಗೀತ (1601)- ಈ 7 ಕೃತಿಗಳು ಕೇಶವದಾಸನ ರಚನೆಗಳೆಂದು ಪಂಡಿತರು ತೀರ್ಮಾನಿಸಿದ್ದಾರೆ. ನಕಸಿಕವನ್ನು ಈತನ ಹೆಸರಿಗೇ ಆರೋಪಿಸಿದ್ದರೂ ಅದು ಈತನ ಅಣ್ಣ ಬಲಭದ್ರನ ರಚನೆಯೆಂದು ಬಹುಮಂದಿ ವಿದ್ವಾಂಸರ ಅಭಿಪ್ರಾಯ. ಛಂದಮಾಲಾ ಎಂಬ ಕೃತಿಯೂ ಈತನ ಹೆಸರಿನಲ್ಲಿದೆ. ರಸಿಕಪ್ರಿಯಾ ಕಾವ್ಯಮೀಮಾಂಸೆಗೆ ಸಂಬಂಧಿಸಿದ ಒಂದು ಪ್ರೌಢ ಗ್ರಂಥ. ಇದರಲ್ಲಿ ಕಾವ್ಯಪರಂಪರೆಗೆ ಅನುಸಾರವಾಗಿ ರಸ, ವೃತ್ತಿ, ಕಾವ್ಯದೋಷ ಮುಂತಾದುವುಗಳ ವರ್ಣನೆ ಮತ್ತು ಉದಾಹರಣೆಗಳು ಕಾಣದೊರೆಯುತ್ತವೆ. ಭರತನ ನಾಟ್ಯಶಾಸ್ತ್ರ, ವಾತ್ಸ್ಯಾಯನನ ಕಾಮಸೂತ್ರ ಮತ್ತು ರುದ್ರಭಟ್ಟನ ಶೃಂಗಾರತಿಲಕ ಕೃತಿಗಳ ಆಧಾರದ ಮೇಲೆ ಈ ಕೃತಿ ರಚಿತವಾಗಿದೆ. ಶೃಂಗಾರರಸವನ್ನು ಕುರಿತ ವಿವೇಚನೆ ಇಲ್ಲಿ ಗಮನಾರ್ಹವಾಗಿದೆ. ಈ ಬಗೆಗಿನ ಲಕ್ಷ್ಯಪದ್ಯಗಳಲ್ಲಿ ಕಾಣುವ ಕೃಷ್ಣನ ಚಿತ್ರವೂ ಬೇರೆಯ ಬಗೆಯದು. ಇಲ್ಲಿಯ ಕೃಷ್ಣ ಒಬ್ಬ ರಸಿಕ. ಹೀಗಾಗಿ ಈ ಕೃಷ್ಣ ಭಕ್ತಕವಿಗಳ ಕೃಷ್ಣನಿಗಿಂತ ಭಿನ್ನನಾಗಿದ್ದಾನೆ. ಇತರ ರಸಗಳ ಸಾಮಾನ್ಯ ನಿರೂಪಣೆಯೂ ಇದರಲ್ಲಿದೆ. ರಸದ ಅಂಗವಾಗಿಯೇ ನಾಯಿಕಾಭೇದಗಳನ್ನು ಕುರಿತು ಚರ್ಚಿಸಲಾಗಿದೆ. ಒಟ್ಟಿನಲ್ಲಿ ವಿಷಯಗಳ ಸಾಂಗೋಪಾಂಗ ವಿವೇಚನೆ ಇಲ್ಲಿ ಕಾಣುವುದಿಲ್ಲ. ಭಾಮಹ, ಉದ್ಭಟ ಮೊದಲಾದ ಕಾವ್ಯಮೀಮಾಂಸಕರನ್ನು ಅನುಸರಿಸಿ ಅಲಂಕಾರ ಶಬ್ದವನ್ನು ತುಂಬ ವ್ಯಾಪಕವಾದ ಅರ್ಥದಲ್ಲಿ-ಅಂದರೆ, ರಸ ರೀತಿಗಳನ್ನು ಒಳಗೊಳ್ಳುವಂತೆ ಬಳಸಲಾಗಿದೆ. ಇಲ್ಲಿಯ ಭಾಷೆ ಸರಳವಾಗಿದೆ. ಅಲಂಕಾರಗ್ರಂಥಗಳ ಇತಿಹಾಸದಲ್ಲಿ ಈ ಗ್ರಂಥಕ್ಕೆ ಐತಿಹಾಸಿಕ ಮಹತ್ವ ಮಾತ್ರ ದೊರೆಯಬಹುದಾದರೂ ಕೇಶವದಾಸನ ಕೃತಿಗಳಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ.

ಕವಿಪ್ರಿಯಾ ಕಾವ್ಯಶಿಕ್ಷಾಗ್ರಂಥ. ಬಹಳ ಹಿಂದೆಯೇ ಸಂಸ್ಕøತದಲ್ಲಿ ಈ ಬಗೆಯ ಕೃತಿಗಳು ರಚಿತವಾಗಿದ್ದುವು. ಕೇಶವಮಿಶ್ರನ ಅಲಂಕಾರಶೇಖರವನ್ನು ಆಧಾರವಾಗಿಟ್ಟುಕೊಂಡು, ಕಾವ್ಯಕಲ್ಪಲತಾವೃತ್ತಿ ಮತ್ತು ಕಾವ್ಯದರ್ಶ ಕೃತಿಗಳ ಕ್ರಮದಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ಮಹಾರಾಜ ಇಂದ್ರಜೀತಸಿಂಹನ ಗಣಿಕೆ ರಾಯ್ ಪ್ರವೀನ್ ಎಂಬುವವಳಿಗೆ ಕಾವ್ಯಮೀಮಾಂಸೆಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿಸಿದ ಗ್ರಂಥ ಇದು. ದಂಡಿ, ರುಯ್ಯಕ ಮುಂತಾದ ಅಲಂಕಾರವಾದಿಗಳ ಪಂಥವನ್ನೇ ಅನುಸರಿಸಿ ಕಾವ್ಯಮೀಮಾಂಸೆಯ ವಿವಿಧ ಅಂಗಗಳ-ಕವಿಕರ್ಮ, ಕಾವ್ಯೋದ್ದೇಶ, ಕಾವ್ಯದೋಷಗಳು, ಅಲಂಕಾರ, ರಸ, ವೃತ್ತಿ ಇತ್ಯಾದಿ- ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಕಾಣಬರುತ್ತದೆ. ಡಾ.ಬಡಥ್ವಾಲ್ ಈ ಕೃತಿಯ ಬಗ್ಗೆ ಹೇಳುತ್ತಾ ಈತ ಲೇಖನಿಯ ಮೂಲಕ ಮಾತ್ರ ಮಾತನಾಡುವ ಆಚಾರ್ಯನಾಗಿರಲಿಲ್ಲ. ತನ್ನ ಶಿಷ್ಯೆಯಾದ ರಾಯ್‍ಪ್ರವೀನಳನ್ನು ಪ್ರತಿನಿಧಿಯಾಗಿಸಿಕೊಂಡು ಕವಿಸಮುದಾಯಕ್ಕೇ ಕವಿತೆಯ ಬಾಹ್ಯರೂಪವನ್ನು ಕುರಿತ ಶಿಕ್ಷಣ ನೀಡುವ ಹೊಣೆಯನ್ನು ಹೊತ್ತವನಾಗಿದ್ದ-ಎಂದಿದ್ದಾರೆ.

ಸುರತಿಮಿಶ್ರ, ಸರದಾರ ಮತ್ತು ನಾರಾಯಣಕವಿಗಳು ಕವಿಪ್ರಿಯಾ ಮತ್ತು ರಸಿಕಪ್ರಿಯಾ ಗ್ರಂಥಗಳಿಗೆ ಟೀಕುಗಳನ್ನು ರಚಿಸಿದ್ದಾರೆ. ಈಚಿನ ವರ್ಷಗಳಲ್ಲಿ ಲಾಲಾಭಗವಾನ್‍ದೀನ್ ಮತ್ತು ಅವರ ಶಿಷ್ಯರು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಈ ಗ್ರಂಥಗಳಲ್ಲಿ ಕಾವ್ಯಮೀಮಾಂಸೆಯ ಎಲ್ಲ ಅಂಗಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದೇ ಕರ್ತೃವಿನ ವೈಶಿಷ್ಟ್ಯ.

ರಾಮಚಂದ್ರಿಕಾ ಈತನ ಮಹತ್ವಪೂರ್ಣ ಕೃತಿ. ಮಹರ್ಷಿ ವಾಲ್ಮೀಕಿ ಕನಸಿನಲ್ಲಿ ಕಾಣಿಸಿಕೊಂಡು ವ್ಯರ್ಥಕಾವ್ಯರಚನೆಯಲ್ಲಿ ತೊಡಗುವುದನ್ನು ಬಿಟ್ಟು ಸಾರ್ಥಕ ಕಾವ್ಯರಚನೆಯುತ್ತ ಗಮನ ಹರಿಸಬೇಕೆಂದು ಸೂಚನೆಯಿತ್ತ ಮೇರೆಗೆ ಈ ಕಾವ್ಯವನ್ನು ರಚಿಸಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಹೇಳಿಕೆ ಈತನ ಕಾವ್ಯಜೀವನದ ಸಂಕ್ಷಿಪ್ತ ವಿಮರ್ಶೆಯೂ ಆಗಿದೆಯೆಂದು ವಿದ್ವಾಂಸರ ಅಭಿಪ್ರಾಯ. ಈ ಕಾವ್ಯದಲ್ಲಿ ಮೂವತ್ತಾರು ಪ್ರಕಾಶ(ಅಧ್ಯಾಯ)ಗಳಿವೆ. ಶ್ರೀಛಂದಸ್ಸಿನಿಂದ ಹಿಡಿದು ಅನೇಕ ವರ್ಣ ಮತ್ತು ಮಾತ್ರಾಛಂದಸ್ಸುಗಳನ್ನು ಬಳಸಿ ಈ ಕಾವ್ಯವನ್ನು ರಚಿಸಲಾಗಿದೆ. ಛಂದಸ್ಸಿನ ಮೇಲಿನ ಪ್ರಭುತ್ವದ ಪ್ರದರ್ಶನಕ್ಕಾಗಿಯೇ ಕರ್ತೃ ಇಲ್ಲಿ ಕಾವ್ಯರಚನೆ ಮಾಡಿರುವಂತೆ ತೋರುತ್ತದೆ. ರಾಮಚಂದ್ರಿಕಾದ ವೈಶಿಷ್ಟ್ಯವೆಂದರೆ ಸ್ವಾರಸ್ಯ ಪೂರ್ಣ ಸಂವಾದಗಳು, ನಾಟಕೀಯ ಪ್ರಸಂಗಗಳು. ಇಂಥ ಪ್ರಸಂಗಗಳಲ್ಲಿ ಸರಸ ಸೂಕ್ತಿಗಳನ್ನು ತೇಲಿಬಿಡುವುದೂ ಉಂಟು. ಕವಿಯ ಪ್ರತ್ಯುತ್ಪನ್ನಮತಿಗೂ ಇವು ನಿದರ್ಶನಗಳಾಗಿವೆ. ಸುಮತಿ-ವಿಮತಿ, ರಾವಣ-ಬಾಣಾಸುರ, ಶ್ರೀರಾಮ-ಪರಶುರಾಮ, ರಾವಣ-ಅಂಗದ ಮೊದಲಾದವರ ಸಂವಾದಗಳು ತುಂಬ ರಮಣೀಯವಾಗಿವೆ. ಆದರೂ ಇವನ್ನು ಎಲ್ಲಿಂದಲೋ ತಂದು ಜೋಡಿಸಿದಂತಿದೆಯೇ ಹೊರತು ಸಹಜವಾಗಿ ಮೂಡಿಬಂದಂತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ರಾಮಜನ್ಮ ಮೊದಲಾದ ವಿವರಗಳೆಲ್ಲ ತುಂಬ ಸಂಕ್ಷೇಪವಾಗಿ ಬಂದಿವೆ. ರಾಮನಿಗೆ ವನವಾಸವನ್ನು ವಿಧಿಸುವ ದಶರಥ-ಕೈಕೇಯಿ ಸಂವಾದವನ್ನು ಏಳು ಪಂಕ್ತಿಗಳಲ್ಲಿ ಮುಗಿಸಲಾಗಿದೆ. ಆದರೆ, ಧನುರ್ಯಜ್ಞದ ವರ್ಣನೆ ಸಾಂಗೋಪಾಂಗವಾಗಿ ಬಂದಿದೆ. ಸ್ವಯಂವರ ಸಭೆಗೆ ಬಂದಿದ್ದ ರಾಜರ ವರ್ಣನೆಯನ್ನು ಮಿತಿಮೀರಿ ಬೆಳೆಸಲಾಗಿದೆ. ಆಸ್ಥಾನಜೀವನದ ನಿಕಟ ಪರಿಚಯವಿದ್ದುದೇ ಈ ವರ್ಣನೆಯ ವಿಸ್ತಾರಕ್ಕೂ ಸಹಜತೆಗೂ ಕಾರಣವಾಗಿರಬಹುದು. ಪೇಟೆ, ರಾಜಾಸ್ಥಾನದ ವೈಭವ, ನಗರಾಲಂಕರಣ, ವಿಶೇಷ ಸಂದರ್ಭಗಳಲ್ಲಿನ ಗಡಿಬಿಡಿ-ಮುಂತಾದವುಗಳ ಸಜೀವ ವರ್ಣನೆ ಇಲ್ಲಿ ಕಾಣಸಿಗುತ್ತದೆ. ಋತುವರ್ಣನೆ ಮತ್ತು ಪಾತ್ರಗಳ ನಖಶಿಖಾಂತ ವರ್ಣನೆಗಳೂ ಚೆನ್ನಾಗಿವೆ. ಆದರೆ, ಪಾತ್ರಗಳ ಪರಿಪೂರ್ಣ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸಲು ನೆರವಾಗುವಂಥ ಅನೇಕ ಪ್ರಸಂಗಗಳನ್ನು ನಿರ್ದಾಕ್ಷೀಣ್ಯವಾಗಿ ಕೈಬಿಡಲಾಗಿದೆ. ಅಲಂಕಾರಕೌಶಲ ಮತ್ತು ವಾಗ್ವಿಲಾಸಪ್ರದರ್ಶನಕ್ಕೆ ಅವಕಾಶಮಾಡಿಕೊಡುವಂಥ ಪ್ರಸಂಗಗಳ ಬಗ್ಗೆ ಕವಿ ವಿಶೇಷ ಆಸಕ್ತಿ ತೋರಿದ್ದಾನೆ. ಉದಾಹರಣೆಗೆ, ಸೀತೆಯ ಮುಖವನ್ನು ವರ್ಣಿಸಲು ಬಳಸಿರುವ ದಂಡಕ ಶ್ಲೇಷಾರ್ಥಗಳಿಂದ ಕೂಡಿದ್ದು, ದುಷ್ಕರವಾಗಿ ಪರಿಣಮಿಸಿದೆ. ಇದೇ ರೀತಿ ವಿವಿದಾರ್ಥಗಳನ್ನು ಕೊಡುವಂಥ ಅನೇಕ ಪದ್ಯಗಳನ್ನು ಕವಿ ಹೆಣೆದಿದ್ದಾನೆ. ಹೀಗಾಗಿ, ಕಠಿನಕಾವ್ಯಪ್ರೇತ ಎಂಬ ಪ್ರಥೆಗೂ ಕವಿ ಗುರಿಯಾಗಿದ್ದಾನೆ. ಈ ಕೃತಿಯ ರಚನೆಯ ಮೇಲೆ ಅನರ್ಘರಾಘವ, ಪ್ರಸನ್ನರಾಘವ, ಹನುಮನ್ನಾಟಕ ಮತ್ತು ನೈಷಧ ಗ್ರಂಥಗಳ ಪ್ರಭಾವ ಬಿದ್ದಿರುವುದನ್ನು ಕಾಣಬಹುದು. ಸಂಸ್ಕøತ ಕಾವ್ಯಗಳ ಅನೇಕ ಪ್ರಸಿದ್ಧ ಸೂಕ್ತಿಗಳನ್ನು ಭಾಷಾಂತರಿಸಿ ಅಲ್ಲಲ್ಲಿ ಬಳಸಿಕೊಳ್ಳಲಾಗಿದೆ. ತುಳಸೀದಾಸನಂತೆ ಈತ ಭಕ್ತಕವಿಯಲ್ಲ. ಇವನಲ್ಲಿ ಕಾಣುವುದು ಕೇವಲ ಪಾಂಡಿತ್ಯ ಪ್ರದರ್ಶನ, ಹೀಗಾಗಿ, ರಾಮಕಥೆಯಂಥ ವಸ್ತುವನ್ನು ಆಯ್ದುಕೊಂಡರೂ ಅದು ಪಾಂಡಿತ್ಯದ ಪ್ರದರ್ಶನ ರಂಗವಾಗಿ ಪರಿಣಮಿಸಿದೆ. ಆದ್ದರಿಂದಲೇ ಇದು ಮಹಾಕಾವ್ಯವಾಗದೆ ಪಂಡಿತರಿಗೆ ಮಾತ್ರ ಪ್ರಿಯವಾದ ಗ್ರಂಥವಾಗಿದೆ.

ರತನಬಾವನೀ ಮಧುಕರಶಾಹನ ಪುತ್ರ ತರನಸೇನನನ್ನು ಕುರಿತ ಪ್ರಶಂಸಾತ್ಮಕ ಕಾವ್ಯ. ಇದೇ ಬಗೆಯ ಮತ್ತೆರಡು ಪ್ರಶಂಸಾತ್ಮಕ ಕಾವ್ಯಗಳೆಂದರೆ ವೀರಸಿಂಹದೇವಚರಿತ ಮತ್ತು ಜಹಾಂಗೀರ ಜಸಚಂದ್ರಿಕಾ. ಮೊದಲನೆಯದರಲ್ಲಿ ಇಂದ್ರಜೀತಸಿಂಹನೂ ಎರಡನೆಯದರಲ್ಲಿ ಜಹಾಂಗೀರನೂ ಕೀರ್ತಿತರಾಗಿದ್ದಾರೆ.

ಪ್ರಬೋಧಚಂದ್ರೋದಯದ ಮಾದರಿಯಲ್ಲಿ ರಚಿತವಾಗಿರುವ ವಿಜ್ಞಾನಗೀತಾ ಒಂದು ಅನ್ಯಾಪದೇಶಿಕ ಕಾವ್ಯ. ಕವಿಯ ದಾರ್ಶಿನಿಕ ವಿಚಾರಗಳು ಇಲ್ಲಿ ಸಂಗ್ರಹಗೊಂಡಿವೆ. ಭಗವದ್ಗೀತೆಯ ಪ್ರಭಾವ ಇಲ್ಲಿ ಕಾಣಬರುತ್ತದೆ. (ಪಿ.ಜಿ.ಡಿ.)